Saturday, July 9, 2011

ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.....



ಚಂದ್ರ ಮೂಡಿಬಂದ .... ಹೀಗೆ ಮುಂದುವರೆಯುತ್ತದೆ ಆ ಚಂದದ ಹಾಡು. ಹಾಗೆ ಸೂರ್ಯನ ಜತೆ ಜಾರಿಹೋಗುತ್ತಿರುವ ಅದೆಷ್ಟೋ ದಿವಸಗಳನ್ನು ನಾವು ನೀವು ನೋಡುತ್ತಾ ಇದ್ದೇವೆ. ಸೂರ್ಯನಿಗೂ ನಮ್ಮನ್ನು ನೋಡಿ ನಗು ಬಂದಿರಬೇಕು. "ಅಲ್ಲಾ ನಾನೂ ನಿತ್ಯ ನೊಡ್ತಾ ಇದೀನಿ, ಆವಾಗಿನಿಂದ ಆ ಐಡಿಯಾ, ಈ ಐಡಿಯಾ ಅಂತ ಕೊಚ್ತಾನೆ ಇದಾರೆ, ಈ ನನ್ ಮಕ್ಳು, ಏನೂ ಮಾಡಾಕಾಗಿಲ್ಲ, ಇನ್ನೇನು ಅಕಾ ಇಕಾ ಅಂದ್ರೆ ಬದುಕಿನಿಂದಲೇ ಜಾರಿಹೋಗೋ ದಿವಸ ಬಂತು... ಛೇ ಪಾಪ" ಅಂತ. ಅನ್ಲಿಬಿಡಿ ನಾವು ಅದ್ಕೆಲ್ಲಾ ತಲೆ ಕೆಡಿಸಿಕೊಂಡು ಸುಮ್ನೆ ಇರೋಕಾಗುತ್ತಾ? ಎಂಬ ಒಂದು ಸ್ವಗತದ ಪ್ರಶ್ನೆ ಹಾಕಿಕೊಂಡು ಮುನ್ನುಗ್ಗೋಣ.

ಈ ಮಳೆಗಾಲ ಅಂತಂದ್ರೆ ನನಗೆ ಅಕ್ಷರ ಕುಟ್ಟೋ ಉಮ್ಮೇದು. ಕಪ್ಪು ಬಿಳುಪು ಕೂದಲಿನ ಬುಡದಲ್ಲಿ ಬಿಸಿಬಿಸಿ ಆದಂತಾಗಿ "ಬರಿ ಬರಿ" ಅನ್ನೋಕೆ ಶುರುಮಾಡುತ್ತೆ. ಹಾಗೆ ಒಳಗಿನಿಂದ ಒತ್ತಡವೇನೋ ಬರುತ್ತೆ ಆದರೆ ಬರ್ಯೋದು ಏನನ್ನ?, ಸರಸರನೆ ಒಳಗಿನಿಂದ ಐಡಿಯಾ ಬಂದು ಅಕ್ಷರ ರೂಪ ತಾಳಿ ತಕತೈ ತಕತೈ ಅಂತ ಲಾಗ ಹಾಕಿ ನಾಟ್ಯ ಮಾಡಲು ನಂದೇನು ಬ್ರಹ್ಮಾಂಡದ ತಲೆಯಾ?, ಹಾಗಾಗಿ ನನ್ನ ಮಟ್ಟದಲ್ಲಿ ಒಂದಿಷ್ಟು ಏನನ್ನಾದರೂ ಕುಟ್ಟಬೇಕು, ಕತೆ ಕಟ್ಟಬೇಕು. ಕಾದಂಬರಿ ಗೀಚಬೇಕು. ಆ...ಅದೇನೋ "ಹ ಹ ಹ " ಎಂಬ ಸದ್ದು ಕೇಳಿತಪ್ಪ ನನಗೆ. ಓಹೋ ಅದು ನೀವು ನಕ್ಕ ಸದ್ದು ಬಿಡಿ ಗೊತ್ತಾಯ್ತು. ನಾನು ಕಾದಂಬರಿ ಗೀಚಬೇಕು ಅಂತ ಬರೆದದ್ದು ಓದಿ ನೀವು ಗಿಟಿಗಿಟಿ ಅಂದಿರಿ ಅಂದಾಯ್ತು. ಅದು ಹಾಗಲ್ಲ ಇರಲಿ ಪ್ರಾಸಕ್ಕೆ ಅಂತ ಹಾಗೆ ಬರೆದೆ.

ಮೊನ್ನೆ ಹರಿಶ್ಚಂದ್ರ ಭಟ್ರು ಬೆಂಗಳೂರಿನಿಂದ ಫೋನ್ ಮಾಡಿದ್ದರು. "ಶ್ರೀಗಳ ಹತ್ತಿರ ಯಾವುದೋ ವಿಷಯ ಕುರಿತು ಮಾತನಾಡುತ್ತಿದ್ದಾಗ ಸಂಸ್ಥಾನ ನನ್ನ ಬಳಿ"....."ಎಂಬ ಆ ಪುಸ್ತಕ ಓದಿದ್ದೀರಾ ಅಂತ ಕೇಳಿದರು. ನಾನು ಇಲ್ಲ ಎಂದೆ, ಅವರು ಓದಿ ಅಂದರು, ನಾನೂ ಇರಲಿ ಎಂದು ನೀವು ".........."ಎಂಬ ಈ ಪುಸ್ತಕ ಓದಿದ್ದೀರಾ ಎಂದೆ, ಅವರು ಇಲ್ಲ ಎಂದರು ನಾನು ಖಂಡಿತಾ ಓದಿ ಎಂದೆ. ತಂದುಕೊಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಹಾಗಾಗಿ ಶ್ರೀಗಳಿಗೆ ಪುಸ್ತಕ ತಲುಪಿಸುತ್ತೀರಾ? ಎಂದರು. ಹರಿಶ್ಚಂದ್ರ ಭಟ್ಟರ ಮಾತನ್ನು ಕೇಳಿ ವಿಜಯಶ್ರೀಯ ಮಾತಿನಂತೆ ನಾನು ಫ್ಯಾನ್ ರಕ್ಕೆಗಳಿಗೆ ಹತ್ತಿರವಾದೆ.(ಅರ್ಥಾತ್ ಉಬ್ಬಿ ಹೋದೆ....!). ಹಾಗಾಗಲು ಮುಖ್ಯ ಕಾರಣ ನಿಮಗೆ ಈಗ ಅರ್ಥವಾಗಿರಬೇಕು. ಅವರು ಹೇಳಿದ "ಈ ಪುಸ್ತಕ" ಎಂದರೆ ನನ್ನ "ಒಂದು ಜೇನಿನ ಹಿಂದೆ". ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎಂದೆಲ್ಲಾ ನನಗೆ ಆಯಿತು ಅಂತ ಅಂದುಕೊಂಡಿರಾ..? ತೀರಾ ಹಾಗಲ್ಲದಿದ್ದರೂ ಒಂಥರಾ ಖುಷ್ ಆಗಿದ್ದು ನಿಜ. ನಿಮ್ಮ ಬಳಿ ಸುಳ್ಳು ಹೇಳಿ ಯಾವ ಪಾಪಕ್ಕೆ ಹೋಗಲಿ. ಅಂತೂ ಗುರುಗಳಿಗೆ ಪುಸ್ತಕ ತಲುಪಿಸಿದೆ ಬಿಡಿ. ಇಷ್ಟೆಲ್ಲಾ ಪೀಠಿಕೆಯ ಕತೆಯಾಯಿತು ಇನ್ನು ನೇರವಾಗಿ ನಾನು ಹೇಳಬೇಕಾಗಿದ್ದ ವಿಷಯ ಹೇಳಿ ಮುಗಿಸುತ್ತೇನೆ.


ಕಳೆದ ದೀಪಾವಳಿಯಲ್ಲಿ "ಕಟ್ಟು ಕತೆಯ ಕಟ್ಟು" ಬಿಡುಗಡೆಯಾಗಿ ಕಟ್ಟುಗಟ್ಟಲೆ ಅಟ್ಟದಲ್ಲಿ ಕುಳಿತಿದೆ. ಬಹಳಷ್ಟು ಜನ ಕೇಳಿದ್ದಾರೆ ತಲುಪಿಸಲಾಗಲಿಲ್ಲ, ಬಹಳಷ್ಟು ಜನ ಕೇಳಲಿಲ್ಲ ತಲುಪಿಸಿದ್ದೇನೆ. ಹಾಗಾಗಿ ಏನೋ ಒಂದು ಆಗಿದೆ. ಒಂದು ಜೇನಿನ ಹಿಂದೆ ಮೂರು ವರ್ಷದಲ್ಲಿ ಪೂರ್ಣ ಖಾಲಿ. ಹಾಗಾಗಿ ಈಗ ಮೂರನೇ ಪುಸ್ತಕ "ಮನೆ ಕಟ್ಟಿ ನೋಡು..." ಬರೆದು ಬಿಸಾಕೋಣ ಅನ್ನುವ ತಲುಬು ಬಂದಿದೆ. ಅಯ್ಯಾ ಅದೆಂತಾ "ಮನೆ ಕಟ್ಟದೆಲ್ಲಾ ಪುಸ್ತಕ ಬರೀತೆ ಮಾರಾಯ ಮಳ್ಳು ಹಂಗೆ" ಅಂತ ವಿಶ್ವಾಸಿಕರೊಬ್ಬರು ಕೇಳಿದರು. ನೋಡಬೇಕು ಏನು ಬರೆಯಬೇಕು ಅಂತ ಅಂದೆ ಅಷ್ಟೆ. ಅಷ್ಟರಲ್ಲಿ ಮನಸ್ಸಿನ ಮೂಲೆಯಲ್ಲಿ "ಏಯ್ ಮಂಕೆ, ಮನೆ ಕಟ್ಟಿ ನೋಡು ಮುಂದಿನ ವರ್ಷಕ್ಕೆ ಇರಲಿ, ಈ ವರ್ಷ ಆವತ್ತು ಯೋಚಿಸಿದ್ದೆಯೆಲ್ಲಾ "ಆರ್. ಶರ್ಮಾಸ್ ಆರ್ಟಿಕಲ್ಸ್" ಅಂತ ಅಂದರೆ ಇಲ್ಲಿಯವರೆಗೆ ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲಾ ಲೇಖನಗಳನ್ನು ಕಲರ್ ಕಲರ್ ಫೋಟೋದಲ್ಲಿ ಮುದ್ರಿಸಿ, ಪುಸ್ತಕ ಮಾಡು" ಅಂತಲೂ ಅನ್ನುತ್ತಿದೆ. ಮತ್ತೊಂದು ಮನಸ್ಸು, "ಬ್ಲಾಗ್ ಬರಹಗಳು" ಅಂತ ಮುಖಪುಟದಲ್ಲಿ ಜಡಿದು ಬಿಡುಗಡೆ ಮಾಡು, ಹಾಗೆ ಮಾಡುವುದರಿಂದ ಪ್ರಕಟಿತ ಲೇಖನಗಳ ಜತೆಗೆ ಬ್ಲಾಗಿನ ಬರಹವೂ ಮುದ್ರಣ ಕಂಡು ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ ಫ್ರೇಮಸ್...! ಅಗಬಹುದು ಅಂತ ಅನ್ನುತ್ತಿದೆ.

"ಕಟ್ಟು ಕತೆಯ ಕಟ್ಟಿಗೆ ನವ್ಯಾ ಹಣ ಕೊಟ್ಟಿದ್ದಳು, ಈ ಬಾರಿ ನಾನು ಕೊಡುತ್ತೇನೆ ಅಂತ ನನ್ನ ಅಕೌಂಟ್ ನಂಬರ್ ತನ್ನ ಬ್ಯಾಲೆನ್ಸ್ ಪಳಪಳನೆ ಮಿಂಚಿಸುತ್ತಾ ಕಣ್ಣು ಕುಕ್ಕುತ್ತಿದೆ. ನನ್ನವಳು ನಾನೊಂದು ಕಿವಿಗೆ ಜೋತಾಡಿಸುವ ಸೆಟ್ ಮಾಡಿಸಬೇಕು ಅಂತಿದ್ದಾಳೆ. ಏನು ಮಾಡಬೇಕೋ ಸರಿಯಾಗಿ ತಿಳಿಯುತ್ತಿಲ್ಲ,

ಸೂರ್ಯ ಇದೆಲ್ಲದರ ನಡುವೆ ನಿತ್ಯ ಜಾರಿಹೋಗುತ್ತಿದ್ದಾನೆ. ಅವನಿಂದ ನಳನಳಿಸುತ್ತಿರುವ ಮರಗಿಡಗಳು "ರಾಗು ಬೇಕಾದರೆ ಬ್ಲಾಗ್ ಕುಟ್ಟು, ಪುಸ್ತಕ ಮಾತ್ರಾ ಮುದ್ರಿಸಬೇಡ, ಪೇಪರ್ ಫ್ಯಾಕ್ಟರಿಯವರು ನಮ್ಮ ಸಂತತಿಯನ್ನೇ ಉಳಿಸುತ್ತಿಲ್ಲಾ "ಅಂತ ರೋಧಿಸುವಂತೆ ಭಾಸವಾಗುತ್ತಿದೆ. ನೋಡೋಣ "ಚಂದ್ರ ಮೂಡಿ ಬಂದ" ನಂತರ.... ಸ್ಟಾರ್ ಹೇಗಿದೆ ಅಂತ.



2 comments:

ಮೃತ್ಯುಂಜಯ ಹೊಸಮನೆ said...

ಒಂದು ಕೆಲಸ ಮಾಡು.ಪುಸ್ತಕ ಅಚ್ಚು ಹಾಕಿಸುವಾಗ ಎರಡು ಪುಸ್ತಕ ಪುಟ್ಟ ಗಾತ್ರದ್ದು ಮಾಡಿಸು. ಅದನ್ನು ನಿನ್ನವಳಿಗೆ ಕಿವಿಗೆ ನೇತು ಹಾಕಿಕೊಳ್ಳಲು ಹೇಳು.ಪುಸ್ತಕ ಪ್ರಕಟವಾದ ಹಾಗೂ ಆಯಿತು,ಕಿವಿಗೆ ನೇತು ಹಾಕಿಕೊಳ್ಳಲು ಕೊಟ್ಟ ಹಾಗೂ ಆಯಿತು.ಈ ಸಲಹೆ ನಾನು ಕೊಟ್ಟದ್ದು ಎಂದು ಕವಿತಾಳಿಗೆ ಮಾತ್ರ ಹೇಳಬೇಡ!

ವಿ.ರಾ.ಹೆ. said...

ನೀವ್ ಯಾವುದಾದ್ರೂ ಅಚ್ಚು ಹಾಕಿಸಿ, ಎಲ್ಲಾದನ್ನೂ ಅಚ್ಚು ಹಾಕಿಸಿ.. ನಾನಂತೂ ತಗೊಳ್ಳುವೆ, ಓದುವೆ.

(ಕಟ್ಟು ಕತೆಯ ಕಟ್ಟೇ ಇನ್ನೂ ತಗಂಡಿಲ್ಲ ಇಂವ ಅನ್ಕಬೇಡಿ, ಜೇನು ಕೂಡ ಬೇಕು ;))