Friday, January 2, 2009

ನಾನು ನಿನ್ನ ಕೊಡೆ ಕದ್ದಿಲ್ಲ

ಹೀಗೆ ಬರೆಯುತ್ತಾ ಬರೆಯುತ್ತಾ ನಾನು ಒಂದು ದಿನ ಇಲ್ಲವಾಗುತ್ತೇನೆ. ಹಾಗೆ ಓದುತ್ತಾ ಓದುತ್ತಾ ನೀವು ಕೂಡ ಅಷ್ಟೆ. ಆದರೆ ಬರಹಗಳು ಉಳಿಯುತ್ತವೆ. ಭಾಷೆಗಳು ಉಳಿಯುತ್ತವೋ ಇಲ್ಲವೋ ಗೊತ್ತಿಲ್ಲ. ಒಂದಾನೊಂದು ಕಾಲಕ್ಕೆ ಭಾಷೆಯಾಗಿದ್ದ ಕನ್ನಡ ಈಗ ಹಳೆಗನ್ನಡ ಎಂಬ ಹೆಸರು ಪಡೆದು ನಮಗೆ ನಿಮಗೆ ಅರ್ಥವಾಗದಂತಾಗಿದೆ. ಹಾಗೆಯೇ ಈಗ ನಾನು ಬರೆದದ್ದು ನೀವು ಓದಿದ್ದು ಮುಂದೊಂದು ದಿನ ಯಾರಿಗೂ ಅರ್ಥವಾಗದಿರಬಹುದು. ಅಥವಾ ನಾವು ಬರೆದ ರೀತಿಯಲ್ಲಿ ಅರ್ಥವಾಗದಿರಬಹುದು. ಹೀಗೊಂದು ವಾಕ್ಯವಿದೆ "ನಾನು ನಿನ್ನ ಕೊಡೆ ಕದ್ದಿಲ್ಲ". ಈ ವಾಕ್ಯದ ಮಜ ಹೇಗಿದೆ ಎಂದರೆ ವಾಕ್ಯದ ಒಂದೊಂದು ಶಬ್ಧವನ್ನು ಒತ್ತಿ ಹೇಳಿದಾಗ ಒಂದೊಂದು ಅರ್ಥವನ್ನು ನಿಡುತ್ತದೆ. "ನಾನು ನಿನ್ನ ಕೊಡೆ ಕದ್ದಿಲ್ಲ" ಎಂದು ನಿನ್ನ ಶಬ್ಧವನ್ನು ಒತ್ತಿ ಹೇಳಿದಾಗ ನಿನ್ನ ಕೊಡೆ ಕದ್ದಿಲ್ಲ ಬೇರೆಯವರ ಕೊಡೆ ಕದ್ದಿದ್ದೇನೆ ಎಂಬ ಅರ್ಥವನ್ನು ಕೊಡೆ ಶಭ್ಧವನ್ನು ಮಾತ್ರ ಒತ್ತಿ ಹೇಳಿದಾಗ ಕೊಡೆ ಕದ್ದಿಲ್ಲ ಬೇರೆ ಏನನ್ನೋ ಕದ್ದಿದ್ದೇನೆ ಎಂದು ಹಾಗೂ ಕದ್ದಿಲ್ಲ ಎಂಬ ಶಬ್ಧವನ್ನು ಒತ್ತಿ ಹೇಳಿದಾಗ ನಾನು ಕದ್ದಿಲ್ಲ ತೆಗೆದುಕೊಂಡು ಹೋಗಿದ್ಡೇನೆ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಸಹಜವಾಗಿದ್ದ ಒಂದು ವಾಕ್ಯ ಆಡುವಾಗಿನ ವ್ಯತ್ಯಾಸದಿಂದ ಮೂಲವಾದ ಅರ್ಥಕ್ಕೆ ತದ್ವಿರುದ್ದವಾದ ಅರ್ಥವನ್ನು ನೀಡಿಬಿಡುತ್ತದೆ. ವರ್ತಮಾನದಲ್ಲಿಯೇ ಬರಹಗಳು ಇಷ್ಟೊಂದು ಅವಾಂತರ ತಂಡಿಡಬಲ್ಲದಾದರೆ ನೂರಾರು ವರ್ಷದ ನಂತರ ದುರಂತವನ್ನೇ ಸೃಷ್ಟಿಸಬಿಡಬಲ್ಲದು ಭಾಷೆ. ಈಗಿನ ಕನ್ನಡದಲ್ಲಿ ನೂರಾರು ಆಂಗ್ಲ ಪದಗಳು ತುಂಬಿ ತುಳುಕಾಡುತ್ತಿವೆ. ಮುಂದೊಂದು ದಿನ ಅವೇ ಕನ್ನಡವಾಗುತ್ತವೆ. ಹಾಗಂತ ಈ ಭಾಷೆಯ ಸಮಸ್ಯೆ ಕೇವಲ ಕನ್ನಡಕ್ಕೆ ಅಂತೇನೂ ಅಲ್ಲ ಇಂಗ್ಲೀಷ್ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗೂ ಇದೇ ಸಮಸ್ಯೆ.
ಅಣುಸ್ಥಾವರದ ಹಾರುಬೂದಿಯನ್ನು ಹೂತಿಡುವಾಗ ಇದೇ ಸಮಸ್ಯೆ ಎದುರಾಯಿತಂತೆ. ಆ ಅಣುಸ್ಥಾವರ ಬೂದಿ ಸಾವಿರ ವರ್ಷಗಳ ಕಾಲ ವಿಕಿರಣವನ್ನು ಸೂಸುತ್ತಿರುತ್ತದೆಯಂತೆ. ಹಾಗಾಗಿ ಅದನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅದರ ಸಂಪರ್ಕ ಮನುಷ್ಯನಿಗೆ ಅಥವಾ ಯಾವುದೇ ಪ್ರಾಣಿಗಳಿ ಬಂದಲ್ಲಿ ರೋಗರುಜಿನ ಕಟ್ಟಿಟ್ಟ ಬುತ್ತಿ. ಸಾವಿರ ವರ್ಷಗಳ ಕಾಲ ಅಪಾಯವನ್ನು ಕಂಕುಳಿನಲ್ಲಿ ಇಟ್ಟುಕೊಂಡು ಕಾಪಾಡುವುದೂ ಒಂದು ಕಷ್ಟಕಾರಕ ಕೆಲಸವೆ. ಬೂದಿಯನ್ನಿಟ್ಟ ಜಾಗದಲ್ಲಿ ಡೇಂಜರ್ ಎಂದು ಬರೆದ ಬೋರ್ಡ್ ಇಡಬೇಕು. ಸರಿ ಓದುವನಿಗೆ ಇಂಗ್ಲೀಷ್ ಬರದಿದ್ದರೆ ಎಂಬ ಚಿಂತೆ. ಆಯಿತು ಜಗತ್ತಿನ ಎಲ್ಲಾ ಭಾಷೆಯಲ್ಲಿಯೂ ಹಾಗೆ ಬರೆದಿಡಬೇಕು. ಅದು ಸರಿ ಆದರೆ ಅಕ್ಷರ ಓದಲು ಬಾರದಿದ್ದವನಿಗೆ ಎಂಬ ಚಿಂತೆ. ಓದಲು ಬಾರದಿದ್ದವನಿಗೆ ಅಂತ ಮಾನವನ ತಲೆಬುರುಡೆ ಪಕ್ಕಕ್ಕೆರಡು ಎಲುಬಿನ ಚಿತ್ರ ಬಿಡಿಸಿಟ್ಟರೆ ಆತ ಆಪಾಯ ಎಂದು ಅರ್ಥೈಸಿಕೊಳ್ಳುತ್ತಾನೆ. ಸರಿ ಈ ಭಾಷೆ ಈ ಚಿಹ್ನೆ ಗಳೆಲ್ಲಾ ಈಗ ಸರಿ ಇನ್ನು ಮುನ್ನೂರು ವರ್ಷದಲ್ಲಿ ಯಾವ ಬದಲಾವಣೆ ಆಗುತ್ತದೆ ಅಂತ ಯಾರು ಬಲ್ಲರು?. ತಲೆಬುರುಡೆಯೇ ದೇವರಾದರೆ.?. ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ. "ಓಹೋ ಇದು ದೇವರ ಆವಾಸಸ್ಥಾನ " ಎಂದು ಯಾರಾದರೂ ಪೂಜೆ ಶುರುವಿಟ್ಟುಕೊಂಡರೆ ಅಣುಬೂದಿಯನ್ನು ಭಸ್ಮ ಅಂತ ತಿಳಿದು ಲೇಪಿಸಿಕೊಂಡರೆ? . ಭಾಷೆಯೂ ಹಾಗೆ ಡೇಂಜರ್ ಅಥವಾ ಅಪಾಯ ಎನ್ನುವುದು ಬದಲಾದರೆ. ಅಂತಿಮವಾಗಿ ಅಮೆರಿಕಾದ ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದರಂತೆ. ಪ್ರತೀ ಇಪ್ಪತ್ತದು ವರ್ಷಕ್ಕೊಮ್ಮೆ ಅಲ್ಲಿನ ನಾಮಫಲಕವನ್ನು ಹೊಸದಾಗಿ ಬರೆಯಬೇಕು. ಆಗ ಈ ಬೂದಿಯ ಅಪಾಯ ನಿರಂತರವಾಗಿ ಅರಿವಿಗೆ ಬರುತ್ತದೆ. ಅಮೆರಿಕಾದಲ್ಲಾದರೆ ಸರಿ ನಮ್ಮಂತಹ ದೇಶದಲ್ಲಿ ಹತ್ತು ವರ್ಷದ ಪ್ಲಾನ್ ನಮ್ಮಲ್ಲಿಲ್ಲ ಇನ್ನು ಸಾವಿರ ವರ್ಷದ ಕಥೆ ಆಮೇಲಿನದು.
ಅಯ್ಯೋ ಈಗಿನದು ಈಗ ಮುಂದಿನದು ಯಾರಿಗೆ ಗೊತ್ತು ಅಂದಿರಾ..? ಯೆಸ್ ನಿಮ್ಮಂತೆ ನಾನು. ಹ್ಯಾವ್ ಯೆ ನೈಸ್(ಖೇಣೀ ನೈಸ್ ಅಲ್ಲ) ಡೆ

Tuesday, December 30, 2008

ಅಪ್ಪಯ್ಯಾ..ಅಪ್ಪಯ್ಯಾ.. ಆನು ಟೂರಿಗೆ ಹೋಕ್ತಿ..

ಅಂತ ಏಳನೆ ಕ್ಲಾಸಿನಲ್ಲಿ ಓದುತ್ತಿರುವ ಮಗ ವರಾತ ಶುರು ಹಚ್ಚಿದ. ಏಕಮಾತ್ರ ಒಬ್ಬನೇ ಒಬ್ಬ(!!!!) ಮಗನನ್ನು ಶಾಲೆಯ ಟೂರಿಗೆ ಕಳುಹಿಸುವುದೆಂದರೆ ಅದೇನೋ ಆತಂಕ ಮನೆಯವಳಿಗೆ. ನನಗೂ ಆತಂಕ ಇಲ್ಲವೆಂದಲ್ಲ ಆದರೂ ಅವಳಷ್ಟಿಲ್ಲ. ನನ್ನ ಆತಂಕದ ಕಾರಣ ಇಲ್ಲಿಂದ ಚಿತ್ರದುರ್ಗ ಸರಿ ಸುಮಾರು ಇನ್ನೂರಾ ಐವತ್ತು ಕಿಲೋಮೀಟರ್ ದೂರ. ಹೋಗಿ ಬರುವುದು ಒಂದೇ ದಿನದಲ್ಲಿ. ಸುಸ್ತಾಗುತ್ತಲ್ಲ ಎಂಬುದು. ಆದರೂ ಅವನ ಆರಂಬಿಕ ಉತ್ಸಾಹಕ್ಕೆ "ಟೂರು ಗೀರು ಎಲ್ಲಾ ಬ್ಯಾಡ ಸುಮ್ನಿರು" ಎಂದು ತಣ್ಣೀರೆರಚಿದೆ. (ನನ್ನ ಅಪ್ಪಯ್ಯನೂ ಹೀಗೆ ಮಾಡುತ್ತಿದ್ದ ನನಗೆ) ನನ್ನೆದುರು ಸುಮ್ಮನಾದ ಮಗ ದೊಡ್ಡಪ್ಪನ ಮನೆಗೆ ಹೋದ. ಸಂಜೆ ದೊಡ್ಡಪ್ಪನ " ಹೋಗ್ಬರ್ಲಾ ಹುಡುಗ್ರು ಟೂರಿಗೆ ಹೋಪ್ದು ಅಂದ್ರೆ ಖುಷಿಯಪಾ ಪಾಪ" ಎಂಬ ವಶೀಲಿಬಾಜಿಯೊಂದಿಗೆ ವಾಪಾಸು ಬಂದ. ಆದರೂ ನಾನು ಬಗ್ಗಲಿಲ್ಲ. ಮಾರನೇ ದಿನ ಅವನ ಮಂಜುಮಾವನ ವಶೀಲಿ ಸಿಕ್ಕಾಪಟ್ಟೆ ಬಿಗಿಯಾಗಿದ್ದರಿಂದ ಹಾಗೂ ಮಗನ ಕಡೆ ಪಾರ್ಟಿ ದೊಡ್ದದಾದ್ದರಿಂದ ಟೂರಿಗೆ ತಾತ್ವಿಕ ಒಪ್ಪಿಗೆ ಕೊಟ್ಟೆ. ಮಗ ದಿಲ್ ಕುಷ್.
ಇವಿಷ್ಟು ಟೂರಿಗೆ ಇನ್ನೂ ಹದಿನೈದು ದಿವಸ ಇರುವಾಗಲೇ ಮುಗಿದ ಮಾತುಕತೆ. ಈ ಮಾತುಕತೆ ಮುಗಿದ ಮಾರನೇ ದಿನ ಅಡಿಗೆ ಮನೆಯಲ್ಲಿ ದಡಾರನೆ ಬಿದ್ದು ಮಳ್ಳಂಡೆಯನ್ನು ಬುರುಬುರು ಉಬ್ಬಿಸಿಕೊಂಡು ಕೂತ ಮಗರಾಯ. ಸರಿ ಡಾ. ಪ್ರಸನ್ನರಲ್ಲಿಗೆ ಕರೆದುಕೊಂಡು ಹೋಗಿ ಅದಕ್ಕೊಂದು ರಿಮೂವಬಲ್ ಬ್ಯಾಂಡೇಜ್ ಸುತ್ತಿಸಿ ಸಾವಿರ ರೂಪಾಯಿ ತೆತ್ತು ಮನೆಯತ್ತ ಮಗನನ್ನು ಕರೆದುಕೊಂಡು ಹೊರಟೆ. ಆವಾಗ " ಅಪ್ಪಯ್ಯಾ ಡಾಕ್ಟ್ರಿಗೆ ಎಷ್ಟು ಖರ್ಚಾತು..?" ಎಂದ. " ಸಾವಿರ ರೂಪಾಯಿ" ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದವ ನಂತರ " ನಿಂಗೆ ಸುಮ್ನೆ ದುಡ್ಡು ದಂಡ ಮಾಡ್ಸಿ ಬಿಟ್ಟಿ ಹಂಗಾಗಿ ಟೂರಿಗೆ ಆನು ಹೋಕ್ತ್ನಲ್ಲೆ ಅದರ ದುಡ್ಡು ನಿಂಗೆ ಉಳತ್ತು ತಗ" ಎಂದ. ಇರ್ಲಿ ಬಿಡು ಅಂತ ಸುಮ್ಮನುಳಿದೆ.
ಕಾಲಿಗೆ ಬ್ಯಾಂಡೇಜ್ ಸುತ್ತಿದ್ದರಿಂದ ಮಡಚಲು ಆಗುತ್ತಿರಲಿಲ್ಲ. ಹಾಗಾಗಿ ಸ್ಕೂಲಿಗೆ ದಿನಾಲೂ ಬೈಕಿನಲ್ಲಿ ಬಿಟ್ಟು ಬರುವುದು ಹಾಗೂ ಸಂಜೆ ಕರೆದುಕೊಂಡು ಬರುವುದು ನಿತ್ಯದ ಕಾಯಕವಾಯಿತು. ಏತನ್ಮಧ್ಯೆ ಸ್ಕೂಲಿನ ಚಿತ್ರದುರ್ಗದ ಟೂರು ಹತ್ತಿರ ಬರುತ್ತಿತ್ತು. ಪ್ರಾಯಶ: ನಿತ್ಯ ಕ್ಲಾಸಿನಲ್ಲಿ ಟೂರಿನದ್ದೇ ಮಾತುಕತೆ ನಡೆಯುತ್ತಿತ್ತು . ಹಾಗಾಗಿ ಸಂಜೆ ಮನೆಗೆ ಬರುವಾಗ ಮಗರಾಯನಿಗೆ ಟುರಿನದೇ ಕತೆ " ಅಪ್ಪಯ್ಯ ಚಿತ್ರದುರ್ಗ ಅಂದ್ರೆ ಬಯಲು ಸೀಮೆ ಸಿಕ್ಕಾಪಟ್ಟೆ ಬಿಸಿಲು, ಅಲ್ಲಿಗೆ ಹೋಪ್ದು ಎಷ್ಟು ತ್ರಾಸು, ಆನು ಹೋಪದು ಇಲ್ಲೆ ಅರಾಮಾತು ಯಂಗೆ" ಅಂತಲೋ ಅಥವಾ " ಅಪ್ಪಯ್ಯಾ ಬೆಳಗಿನ ಜಾವ ಐದು ಗಂಟೆಗೆ ಹೊರಡಕಡ, ರಾತ್ರಿ ವಾಪಾಸು ಸ್ಕೂಲಿಗೆ ಬಂದು ಉಳಿಯಕಡ, ಆನು ಹೋಪದು ಇಲ್ಲೆ ಅರಾಮಾತು ಯಂಗೆ " ಹೀಗೆ ಒಂಥರಾ ಹೋಗಲಾರೆನಲ್ಲ ಎಂಬುದನ್ನು ಒಳ್ಳೆಯದೇ ಆತು ಎಂದು ತನ್ನಷ್ಟಕ್ಕೆ ಸಮಾಧಾನದ ಕಾರಣದೊಂದಿಗೆ ನಿತ್ಯ ಸುದ್ದಿ ಹೇಳಲು ಶುರು ಮಾಡಿದ. ಅಲ್ಲಿಗೆ ನನಗೆ ಅವನ ಟೂರಿನ ಗುಂಗು ಮನವರಿಕೆಯಾಗತೊಡಗಿತು. ಆದರೆ ಡಾಕ್ಟರ್ ಇಪ್ಪತ್ತು ದಿವಸ ಬ್ಯಾಂಡೇಜ್ ಬಿಚ್ಚುವಂತಿಲ್ಲ ಎಂದಿದ್ದರು.ಅದಕ್ಕೊಂದು ಉಪಾಯ ಟೂರಿಗೆ ಇನ್ನು ಮೂರು ದಿನ ಬಾಕಿ ಇದೆ ಎನ್ನುವಾಗ ಶುರುವಾಯಿತು.
ಬೆಳಿಗ್ಗೆ ಸ್ನಾನ ಮಾಡಲು ಬ್ಯಾಂಡೇಜ್ ಬಿಚ್ಚಿದಾಗ " ಅರೆ ಒಂಚೂರು ನೋವೇ ಇಲ್ಲೆ" ಎಂದು ದಡಬಡ ಬಚ್ಚಲು ಮನೆಯಿಂದ ನಡೆದುಕೊಂಡು ಬಂದು ಹೇಳಿದ. ಪಟಪಟ ಮಡಚಿದ. ಆದರೆ ಬಡ್ಡಿಮಗಂದು ಕಾಲು ಸ್ವಲ್ಪ ನೋಯುತ್ತಿತ್ತು ಎಂಬುದು ಮುಖದಲ್ಲಿ ಗೊತ್ತಾಗುತ್ತಿತ್ತು. ಆದರೂ ಹಲ್ಲುಕಚ್ಚಿ ಸಹಿಸಿಕೊಂಡ. ಅಂತೂ ಹಾಗೂ ಹೀಗೂ ಮಾಡಿ ಟೂರಿಗೆ ಹೋಗುವುದು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಸೈಕಲ್ ಹೊಡೆದು ತಾನು ಪರ್ ಫೆಕ್ಟ್ ಎಂದು ರುಜುವಾತು ಪಡಿಸಿ " ಅಪ್ಪಯ್ಯಾ ಬಿಸಿಲು ಜೋರಾದ್ರೆ ಹೆಂಗಿರ್ತು ಅಂತ ಗೊತ್ತಾಪ್ಲೆ ಬಯಲು ಸೀಮೆಗೆ ಹೋಯಕು ಅಲ್ದಾ..? ಬೆಳಿಗಿನ ಜಾವ ಎದ್ದು ಹೋಪ್ಲೆ ಲಾಯ್ಕಿರ್ತು ಅಲ್ದಾ?. ರಾತ್ರಿ ಸ್ಕೂಲಲ್ಲೇ ಉಳ್ಕಂಬದು ಎಂದ್ರೆ ಒಂಥರಾ ಮಜಾ ಅಲ್ದಾ?" ಎನ್ನುವ ಪ್ರಶ್ನೆಗಳ ಮೂಲಕ ತಾನು ಟೂರಿಗೆ ಹೋಗುವೆ ಅನ್ನುವ ವಿಚಾರ ಮನದಟ್ಟು ಮಾಡಿದ.
ಹೊರಡುವ ಮುನ್ನಾದಿನ ರಾತ್ರಿ ನಿದ್ರೆಯೇ ಇಲ್ಲ. ಅಮ್ಮ " ನಾಲ್ಕು ಗಂಟೆ ಆತಾ" ಎಂದು ಹನ್ನೆರಡೂವರೆಯಿಂದಲೇ ಶುರು ಹಚ್ಚಿ ಕೊನೆಗೂ ಮೂರೂವರೆಗೆ ಎದ್ದು ಸ್ನಾನ ಸಂದ್ಯಾವಂದನೆ ಪೂರೈಸಿ ತಾನೆ ಬಟ್ಟೆ ಹುಡುಕಿ ಹಾಕಿಕೊಂಡ ( ದಿನನಿತ್ಯ ಇವಕ್ಕೆಲ್ಲಾ ತಾಯಿ ಮಗನ ಮಧ್ಯೆ ಒಂದು ದೊಡ್ಡ ಯುದ್ಧವೇ ನಡೆಯುತ್ತಿತ್ತು) "ಸರ್ ಕ್ಯಾಮೆರಾ ತರಲು ಹೇಳಿದ್ದಾರೆ ಎಂದು ಅದನ್ನು ತೆಗೆದುಕೊಂಡು ಖರ್ಚಿಗೆ ಅಂತ ಇನ್ನೂರು ಇಸಕೊಂಡು ಟಾ ಟಾ ಹೇಳಿದ.
ಮತ್ತೆ ಯಥಾಪ್ರಕಾರ ಚಿತ್ರದುರ್ಗಕ್ಕೆ ಟೂರಿಗೆ ಹೋಗಿ ಬಂದ. ಅದು ಮಕ್ಕಳೆಂದರೆ ಹಾಗೆ ಮತ್ತು ಅಪ್ಪಯ್ಯನೆಂದರೆ ಹೀಗೆ ಹಾಗೂ ಯಾವತ್ತೂ ಯಾವಕಾಲಕ್ಕೂ ಹಾಗೆ ಹೀಗೆ. ನಾನೂ ಮೂವತ್ತು ವರ್ಷಗಳ ಹಿಂದೆ ಹೀಗೆ ಟೂರಿಗೆ ಬೇಡ ಅಂದಾಗ ಅಂದಿದ್ದೆಲ್ಲ ನೆನಪಾಯಿತು . ಕಾಲ ಚಕ್ರವೇ ಉರುಳು ಉರುಳುರುಳು. ಅದೆಷ್ಟು ಬೇಗ ನಾನು ಹೀಗೆಯೇ ಟೂರಿಗೆ ಹೋಗಿದ್ದ ನೆನಪು ಹಸಿರಿರುವಾಗಲೇ ನನ್ನ ಮಗನೂ ಹೀಗೊಂದು ಟೂರಿಗೆ ಹೋಗಿ ಬರುವ ಸಮಯ ಬಂತು. ಅಲ್ಲಿಗೆ ನನಗೆ.......?
ಹಾ ಮರೆತೆ ಅದೇ ಸೂರ್ಯ ಅದೇ ಭೂಮಿ ಅದೇ ನೀರು ಅದೇ ಗಾಳಿ ಅಂತ ಹೊರನೋಟಕ್ಕೆ ಅನಿಸಿದರೂ ಎಲ್ಲವೂ ಬೇರೆಯದೇ. ಹೋದ ವರ್ಷ ನಗು ನಗುತ್ತಾ ಇದ್ದವರು ಇಂದು ಅಳುತ್ತಿರಬಹುದು ಹೋದ ವರ್ಷ ಅಳುತ್ತಾ ಇದ್ದವರು ಇಂದು ನಗುತ್ತಾ ಇರಬಹುದು ನಗು ಅಳು ಎಲ್ಲಾ ಆರಂಭವೂ ಅಲ್ಲ ಅಂತ್ಯವೂ ಅಲ್ಲ. ಮತ್ತೆ ಮತ್ತೆ ಹುಟ್ಟುತ್ತವೆ ಸಾಯುತ್ತವೆ ಬದಲಾಗುತ್ತವೆ. ಈ ನಡುವೆ ಮತ್ತೊಂದು ವರ್ಷ ಬಂದಿದೆ. ನನಗೆ ನಿಮಗೆ ಹರ್ಷ ತರಲಿ, ಕಷ್ಟ ಎದುರಿಸುವ ಶಕ್ತಿ ಬರಲಿ.

ಬಾಯಿಗೆ ಬಂದಿತು ಹೃದಯಾ....!


ನೋಡಿ ಈ ಹುಡುಗನಿಗೆ ಹೆದರಿಕೆಯೂ ಇಲ್ಲ ಹೇಸಿಕೆಯೂ ಇಲ್ಲ. ಕುರಿಯೆಂಬ ಕುರಿಯ ಹೃದಯವನ್ನು ಬಾಯಿಗಿಟ್ಟುಕೊಂಡು ಪೀಪಿ ಊದುತ್ತಿದ್ದಾನೆ. ನಮ್ಮೂರ ಬಸ್ಟ್ಯಾಂಡ್ ಗೆ ನಡೆದು ಹೋಗುತ್ತಿದ್ದೆ. ಕೂಲಿಕಾರ್ಮಿಕರು ಕೆರೆಯ ಬಳಿ ಹೊಳೆ ಹಬ್ಬದ ಸಮಾರಂಭಕ್ಕೆ ಸೇರಿದ್ದರು. ಒಂದಿಷ್ಟು ಜನ ಕುರಿಯ ಚರ್ಮ ಸುಲಿಯುತ್ತಿದ್ದರು ಮತ್ತೊಂದಿಷ್ಟುಜನ ಕುರಿಮಾಂಸ ಪಾಲು ಹಾಕುತ್ತಿದ್ದರು. ದೊಡ್ಡವರು ಅತ್ತ ಪಾಲು ಹಾಕುತ್ತಿದ್ದಾಗ ಈತ ಹೃದಯವನ್ನೇ ಎತ್ತಿಕೊಂಡು ಬಂದು ರಸ್ತೆಬದಿಯಲ್ಲಿ ಆಟವಾಡುತ್ತಿದ್ದ. ಹೃದಯ ಬಾಯಿಗೆ ಬಂದ ಹಾಗೆ ಆಯಿತು ಎಂದು ನಾವೆಲ್ಲ ಆವಾಗ ಈವಾಗ ಆಡಿಕೊಳ್ಳುತ್ತೇವಲ್ಲ ಅದು ಹೀಗೆಯೇ ಇರಬೇಕು...!?. ಹುಡುಗ ಹೃದಯಕ್ಕೆ ರಕ್ತ ಪೂರೈಸುವ ನಾಳವನ್ನು ಊದುವ ಪರಿ ನೋಡಿದರೆ ಮತ್ತೆ ಸಂಚಲನ ಉಂಟುಮಾಡಿ ಕುರಿಯನ್ನು ಬದುಕಿಸುತ್ತಾನೇನೋ ಎಂಬಂತಿದೆ. ನನಗೆ ಪೋಟೋ ತೆಗೆಯಲು ಒಮ್ಮೆ ಮುಜುಗರವಾದರೂ ನಂತರ ನಿಮ್ಮಗಳ ನೆನಪಾಗಿ ಗಟ್ಟಿ ಮನಸ್ಸಿನಿಂದ ಚಕ ಚಕ ಪೋಟೋ ತೆಗೆದೆ. ನಿಮಗೆ ಇಂತಹ ದೃಶ್ಯ ಸಿಕ್ಕುವುದು ಅಸಾದ್ಯ. ಈ ಮನುಷ್ಯನೆಂಬ ಮನುಷ್ಯನಿಗೆ ಹೀಗೆ ನೂರಾರು ಜೀವಿಗಳು ಚೆಲ್ಲಾಟದ ವಸ್ತು ಅವುಕ್ಕೋ ಪ್ರಾಣ ಹೋದರೂ ಪ್ರಾಣಸಂಕಟ. ಏನೇ ಇರಲಿ ಅವರವರ ಭಾವಕ್ಕೆ ಅವರವರ ಭಕುತಿಗೆ....ಅಲ್ವಾ..? ನೂರು ಪುಟದಲ್ಲಿ ಹೇಳಲಾಗದ್ದು ಒಂದು ಪಟ(ಚಿತ್ರ)ದಲ್ಲಿ ಹೇಳಬಹುದಂತೆ. ಇದಕ್ಕೆ ಇಷ್ಟು ಹೆಚ್ಚಾಯಿತು. ಇನ್ನು ಮುಂದಿನದು ನಿಮಗೆ ಬಿಟ್ಟದ್ದು....
ವಿಸೂ: ಪಟದಲ್ಲಿ ಇರುವುದು ಹೃದಯ ಅಲ್ಲ ಶ್ವಾಸಕೋಶ ಅಂತ ನಮ್ಮ ವಿಕಾಸ್ ತಿದ್ದಿದ್ದಾರೆ. ಇದ್ದರೂ ಇರಬೈದು ನಂಗೆ ಇನ್ನೂ ದೇಹದ ಹೊರಗಿನದ್ಡೇ ಸಂಪೂರ್ಣ ಗೊತ್ತಿಲ್ಲ ಒಳಗಿನದ್ದು ಆಮೆಲಾಯಿತು. ಬಾಯಿಗೆ ಬಂದಿತು ಶ್ವಾಸಕೋಶ ಎಂದು ಓದಿಕೊಳ್ಳಿ

Sunday, December 28, 2008

ಎರಡು ಬ್ಲಾಗ್ ಗಳು

"ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ..." ಹೀಗೆ ಶಾಂತಲಾ ಭಂಡಿಯವರ ನಕ್ಕುಬಿಡಿ ಒಮ್ಮೆ ಬರಹ ನೆನಪು ಕನಸುಗಳ ನಡುವೆ ಎಂಬ ಬ್ಲಾಗ್ ಮುಖಾಂತರ ತಲುಪುತ್ತದೆ http://shantalabhandi.blogspot.com/). ಊರಿಂದ ವಾಪಾಸು ಹೊರಟಾಗ, ಕೊಟ್ಟ ಮನೆಯಲ್ಲಿ ನಡೆಯುವ ಸಣ್ಣ ಘಟನೆಯನ್ನು ನಮ್ಮ ಕಣ್ಣಮುಂದೆ ಬಿಚ್ಚಿಡುವಲ್ಲಿ ಶಾಂತಲಭಂಡಿ ಯಶಸ್ಸು ಸಾಧಿಸುತ್ತಾರೆ. ಬರಹದ ಆರಂಭದಲ್ಲಿ ನಮಗೆ ಶಾಂತಲಾ ಭಂಡಿ ಯಾಗಿದ್ದವರು ಬರಹದ ಮುಕ್ತಾಯದಲ್ಲಿ ನಮಗೆ ಗೊತ್ತಿಲ್ಲದಂತೆ ತನ್ನದೇ ಕಥೆ ಹೇಳುತ್ತಾ ನಮ್ಮ ನಿಮ್ಮ ಅಕ್ಕತಂಗಿಯರಂತೆ ಅನಿಸಿ ಶಾಂತಲಕ್ಕ ಆಗಿಬಿಡುತ್ತಾರೆ. ಅವರೆಲ್ಲೋ ನಾವೆಲ್ಲೋ ಎನ್ನುವ ಸಂಬಂಧ ಬ್ಲಾಗ್ ಮೂಲಕ ನಮಗೆ ಅವರಿಗೆ ಗೊತ್ತಿಲ್ಲದಂತೆ ಒಂದು ಸುಮಧುರ ಬಾಂಧವ್ಯ ಹುಟ್ಟಿಕೊಂಡಿರುತ್ತದೆ. ಇದಕ್ಕೆ ಬರಹಗಳು ಎನ್ನುವುದು. ಓದಿನ ಆರಂಭದಲ್ಲಿ ಅಪರಿಚಿತರು ಓದಿದನಂತರ ಅಪರಿಚಿತರಾದರೂ ಅದು ಹೇಗೋ ಪರಿಚಿತರು. ಹೀಗೆ ಎಲ್ಲಿಯದೋ ಕಥೆಯನ್ನು ಯಾರಿಗೋ ತಲುಪಿಸುವ ಬ್ಲಾಗ್ ಗೆ ಜೈ ಅನ್ನೋಣ.
ಇದು ತೀರ್ಪು ಅಂದ್ಕೊಬೇಡಿ, ಚಪ್ಪಾಳೆ ಅನ್ನಿ, ಹಸ್ತಲಾಘವ ಅನ್ನಿ, 'ಗೋ-ಪರಾಕ್' ಅನ್ನಿ ಅಥವಾ 'ಭೇಷ್' ಎಂಬ ಹೆಸರಿನಲ್ಲಿ ಬೆನ್ನಿಗೊಂದು ಮೆದುಬಾರು ಅಂದುಕೊಳ್ಳಿ. ಉತ್ತಮ, ನಂಬಲಸಾಧ್ಯ ಕೆಲಸ ಮಾಡುತ್ತಿದ್ದೀರಿ. ನಿಮ್ಮೊಳಗೊಬ್ಬ ಇಷ್ಟೊಂದು ಚಟುವಟಿಕೆಯ, ಚಲನಶೀಲ, ರಂಜನೀಯ, ಜೀವಪರ, ರೈತಪರ, ಸಹೃದಯೀ ಶ್ರಮಿಕ ಉದಯಶಂಕರ್ ಇದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ನಾನು ಪ್ರಜಾವಾಣಿಯಲ್ಲಿದ್ದಾಗ ದಿನಾ ಮೆಲ್ಲಗೆ ಬಂದು 'ಇಂದಿನ ಈದಿನ' ವನ್ನು ತೋರಿಸಿ ಹೋಗುತ್ತಿದ್ದ ದೊಗಲೆ ಅಂಗಿಯೊಳಗಿನ ಉದಯಶಂಕರ್ ಬೇರೆಯೇ ಇರಬಹುದೆ?
ನಿಮ್ಮ ಬ್ಲಾಗ್ ನಿತ್ಯ ನೂತನವಾಗಿದೆ, ಸುಂದರವಾಗಿದೆ, ಸಮೃದ್ಧವಾಗಿದೆ. ಹೀಗೆಯೇ ಸುದೀರ್ಘ ಸುಮಂಗಲಿಯಾಗಿರಲಿ ಎಂದು ಹಾರೈಸುತ್ತೇನೆ.
ಅಂತ
ನಾಗೇಶ್ ಹೆಗಡೆಯವರು ಬ್ಲಾಗ್ ಗೆ ಹಾರೈಸಿದ್ದಾರೆ ಎಂದಮೇಲೆ ಆ ಬ್ಲಾಗ್ ಬಗ್ಗೆ ನಾವು ಹೇಳುವುದು ಇನ್ನೇನು ಉಳಿದಿದೆ..!?. ಅದು ನೆತ್ರಕೆರೆ ಉದಯಶಂಕರ್ ರವರ ಬರಪ್ಪೂರ ಮಾಹಿತಿಯ (http://paryaya.blogspot.com/) ಬ್ಲಾಗ್. ಅಲ್ಲಿ ಏನುಂಟು ಏನಿಲ್ಲ?, ಇಂದಿನ ಇತಿಹಾಸ ಎಂಬ ಬರವಣಿಗೆಯ ಮೂಲಕ ನಮಗೆ ಪ್ರಪಂಚ ತೋರಿಸುತ್ತಾರೆ ನೆತ್ರಕೆರೆ. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ನೆತ್ರಕೆರೆ ತಾವು ಕೆಲಸ ಮಾಡುವ ಪ್ರಜಾವಾಣಿಯಷ್ಟೇ ತಮ್ಮ ಬ್ಲಾಗನ್ನೂ ಒಪ್ಪ ಓರಣವಾಗಿದ್ದಾರೆ. ಬ್ಲಾಗ್ ನ ಬದಿಯಲ್ಲಿ ಮಾಹಿತಿ ಮಾಹಿತಿ ಮಾಹಿತಿ ಕ್ರಿಕೆಟ್ ನಿಂದ ಶೇರ್ ಸೂಚ್ಯಂಕದ ವರೆಗೂ ಹರಿದು ಹೊಳೆಯಾಗಿದೆ.
ಹೀಗೆ ತಮ್ಮದೇ ವಿಷಯವನ್ನು ತಮ್ಮದೇ ಘಟನೆಯನ್ನು ಬೇರೆಯದೇ ವಿಷಯವನ್ನು ಬೇರೆಯದೇ ಮಾಹಿತಿಯನ್ನು ಶ್ರದ್ದೆಯಿಂದ ಯಾವ ಪ್ರತಿಪಲಾಪೇಕ್ಷೆ ಇಲ್ಲದೆ ಅಪ್ಲೋಡ್ ಮಾಡುವ ಬ್ಲಾಗಿಗಳಿಗೆ ಒಂದು ತ್ಯಾಂಕ್ಸ್ ಸಲಾಮ್. ಮತ್ತೆ ಮುಂದಿನವಾರದವ್ ಬೇಟೆಗೆ ಯಾರು ಸಿಗುತ್ತಾರೋ ನೋಡೋಣ. ಅಲ್ಲಿಯವರೆಗೆ ಟೆಕ್ ಕೇರ್. -ಕೆ.ಆರ್.ಶರ್ಮಾ.ತಲವಾಟ

Thursday, December 25, 2008

ಬಿಗ್ನೋನಿಯಾ ಎಂಬ ಮಾಂತ್ರಿಕ ಹೂವು






ಹೂವುಗಳ ಅಂದಕ್ಕೆ ಅದರ ಪರಿಮಳಕ್ಕೆ ಮನಸೋಲದವರಿಲ್ಲ. ಸಹಸ್ರಾರು ಜಾತಿಯ ಹೂವುಗಳ ನೂರಾರು ತರಹದ ಅದರ ಪರಿಮಳ ಆಹಾ ಸೂಪರ್. ಕಣ್ಣಿಗೆ ಚಂದದ ಜತೆ ಪರಿಮಳ ಸೂಸುವ ಮಲ್ಲಿಗೆ ಜಾಜಿ ಸಂಪಿಗೆ ಗುಲಾಬಿ ಮುಂತಾದವುಗಳಾದರೆ ಡಬ್ಬಲ್ ಪ್ರಾಫಿಟ್. ಪರಿಮಳಯುಕ್ತ ಮಲ್ಲಿಗೆ ಮುಂತಾದ ಹೂವುಗಳು ಶೃಂಗಾರ ರಸಕ್ಕೂ ಸೈ. ಹೀರೋಯಿನ್ ಗೆ ಒಂದೇ ಒಂದು ಮಲ್ಲಿಗೆ ದಂಡೆ ಮುಡಿಸಿದರೆ ಅಲ್ಲಿಯೇ ಪಟಾಯಿಸಿಕೊಳ್ಳಬಹುದು ಎಂಬುದು ಸಿನೆಮಾದವರ ನಂಬಿಕೆ. ಅದೇನು ತೀರಾ ಸುಳ್ಳಲ್ಲ ಮಲ್ಲಿಗೆ ಜಾಜಿ ಮುಂತಾದ ಹೂವುಗಳಿಗೆ ಮನಸ್ಸನ್ನು ಶೃಂಗಾರಕ್ಕೊಯ್ಯುವ ತಾಕತ್ತಿದೆ.
ಇನ್ನು ಪರಿಮಳ ರಹಿತ ಆದರೆ ನೊಡಲು ಸುಂದರವಾದ ಹೂವುಗಳೂ ನೂರಾರು ಇವೆ. ದಾಸವಾಳ ಮುಂತಾದವುಗಳು ಆ ವರ್ಗಕ್ಕೆ ಸೇರುತ್ತವೆ. ಅವು ಹೂವನ್ನು ಯಾಕೆಬಿಡುತ್ತವೆ ಎನ್ನುವುದೂ ಇಲ್ಲಿಯವರೆಗೆ ಗೊತ್ತಿಲ್ಲ. ಕಾರಣ ಹಲವು ಜಾತಿ ತನ್ನ ಬೀಜದ ಮೂಲಕ ವಂಶಾಭಿವೃದ್ಧಿಗಾಗಿ ದುಂಬಿಯನ್ನು ಆಕರ್ಷಿಸಲು ಹೂವುಬಿಡುತ್ತವೆ. ತನ್ಮೂಲಕ ಕಾಯಿ ಫಲಿತಗೊಳ್ಳುತ್ತವೆ. ಆದರೆ ದಾಸವಾಳ ಗುಲಾಬಿ ಮಲ್ಲಿಗೆ ಮುಂತಾದವುಗಳು ಕಾಯಿಇಡುವುದೇ ಇಲ್ಲ. ಗೆಲ್ಲಿನ ಮೂಲಕವಷ್ಟೇ ವಂಶಾಭಿವೃದ್ಧಿ. ಹಾಗಾದರೆ ಅವು ಹೂವು ಬಿಡುತ್ತವೇಕೆ?. ನಾಗೇಶ ಹೆಗಡೆಯವರನ್ನೇ ಕೇಳಬೇಕು. ಮನುಷ್ಯನ ಜಾತಿಯಲ್ಲಿ ಗಂಡು ಎಂಬುದಿದೆ ಅದು ಹೆಣ್ಣಿಗಾಗಿ ಹಪಹಪಿಸುತ್ತಿರುತ್ತದೆ ತಾನು ಅರಳಿ ಅವನ ಕೈಗೆ ಸಿಕ್ಕಿ ಅವನಮೂಲಕ ಅವಳ ಮುಡಿಸೇರಿ ಒಂದೇ ಒಂದು ಡ್ಯುಯೆಟ್ ಹಾಡುವಂತಾಗಲಿ ಎಂದು ಯಾವ ಹೂವು ಬಿಟ್ಟಿರಲಿಕ್ಕಿಲ್ಲ. ಸರಿ ಹಾಗಾದರೆ ಹೂವು ಬಿಟ್ಟಿದ್ದ್ಯಾಕೆ?. ಸುಮ್ಮನೆ ಅರಳಿ ಮುದುಡುವುದ್ಯಾಕೆ? ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗದು. ಆದರೂ ಒಂದಾನೊಂದು ಕಾಲದಲ್ಲಿ ಅವು ಕಾಯಾಗುತ್ತಿದ್ದವು ಕಾಲಾನಂತರ ಪ್ರಕೃತಿಯಲ್ಲಿನ ಏರುಪೇರು ಅವುಕ್ಕೆ ಕಾಯಾಗುವ ಸಂದರ್ಭವನ್ನು ತಪ್ಪಿಸಿತು. ಆದರೆ ಗಿಡಗಳ ಯೋಚನಾ ಕೋಶಕ್ಕೆ ಅವು ರವಾನೆಯಾಗಿಲ್ಲ. ಅವುಕ್ಕೆ ಅದು ತಿಳಿಯದೆ ಇನ್ನೂ ಹೂ ಬಿಡುತ್ತಲೇ ಇವೆ ಅಂತ. ಇರಲಿ ಯಾವ ಕಾರಣಕ್ಕಾದರೂ ಹೂ ಬಿಡಲಿ ನಾವಂತೂ ಅದರಿಂದ ಮಜ ತೆಗೆದುಕೊಳ್ಳೋಣ.
ಇಂತಹ ಕಾಯಾಗದ ಆದರೆ ಚಂದನೆಯ ಗೊಂಚಲು ಗೊಂಚಲು ಹೂ ಬಿಡುವ ವರ್ಗಕ್ಕೆ ಈ ಬಿಗ್ನೋನಿಯಾ ಸೇರುತ್ತದೆ. ದಕ್ಷಿಣ ಅಮೇರಿಕಾ ಇದರ ಮೂಲ. ಅಲ್ಲಿ ಕಾಡಿನಲ್ಲಿ ಕಾಲಾಬಾಷ್ ಮರಗಳಿಗೆ ಇವು ಸುತ್ತಿ ಬೆಳೆಯುತ್ತಂತೆ. ಇದರ ವಂಶ ಫಿಗ್ವರ್ಟ್ ಅಂತೆ. ಹೂ ಅರಳಿದಾಗ ಇಡೀ ಕಾಡು ಸುಂದರವಾಗಿ ಕಾಣಿಸುತ್ತದೆಯಂತೆ. ಅದ್ಯಾರೋ ಪುಣ್ಯಾತ್ಮರು ಒಂದೆರಡು ಗೆಲ್ಲನ್ನು ನಮ್ಮ ಮಲೆನಾಡಿಗೆ ತಂದರಿರಬೇಕು. ಹಾಗಾಗಿ ಜನವರಿಯಿಂದ ಏಪ್ರಿಲ್ ವರೆಗೆ ಹಲವಾರು ಮನೆಯ ಹೊರಗೆ ಬಿಗ್ನೋನಿಯಾ ನೋಡುಗರನ್ನು ಸೆಳೆಯುತ್ತದೆ. ಇದು ಸಿಹಿಯಾದ ಮಕರಂದವನ್ನು ಹೊಂದಿದ್ದು ಆದರೆ ಕಹಳೆಯಾಕಾರದ ಪಕಳೆಯನ್ನು ಹೊಂದಿರುವುದರಿಂದ ಪರಾಗಸ್ಪರ್ಷವಾಗಲಾರದು. ಅಷ್ಟುದ್ದ ಕೊಕ್ಕಿನ ಹಕ್ಕಿಗಳು ನಮ್ಮಲ್ಲಿ ಇಲ್ಲ. ಈ ಹೂವಿನ ತವರೂರು ದಕ್ಷಿಣ ಅಮೆರಿಕಾದಲ್ಲಿ ಕಾಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಒಂದೇ ಒಂದು ಗೆಲ್ಲು ಮನೆಯೆದುರು ನೆಟ್ಟರೆ ಕಣ್ಣಿಗೆ ಹಬ್ಬವಂತೂ ಖಂಡಿತ. ನೀವೂ ಪ್ರಯತ್ನಿಸಿ. ಹ್ಯಾಪಿ ಕ್ರಿಸ್ ಮಸ್

Monday, December 22, 2008

ದೇವರೆಂಬ ದೇವರು

ನಿಜವಾಗಿಯೂ ದೇವರು ಎಂಬುವವನು ಆಕಾಶದಲ್ಲಿ ಇರಬೇಕಿತ್ತು. ಆತ ಪಾಪ ಪುಣ್ಯಗಳನ್ನು ಗುಣಿಸಿ ಭಾಗಿಸಿ ಟೋಟಲ್ ನೀಡಬೇಕಿತ್ತು. ಅಂತ ನನಗೆ ಬಹಳ ಸಾರಿ ಅನ್ನಿಸುತ್ತದೆ. ಸ್ವರ್ಗ ನರಕ ದೇವರು ದೇವತೆಗಳು ರಾಕ್ಷಸರು ಮುಂತಾದ ಕಲ್ಪನೆ ವಾಸ್ತವವಾಗಿದ್ದರೆ ಅದರ ಮಜವೇ ಬೇರಿತ್ತು ಅಂತ ಬಹುಪಾಲು ಜನರಿಗೆ ಅನ್ನಿಸದೇ ಇರದು. ಈಗ ನಾವು ಕೇವಲ ಜೀವನಕ್ಕಾಗಿ, ಸೋಲು ಗೆಲುವಿಗಾಗಿ ದೇವರೆಂಬ ದೇವರಿಗೆ ನೂರಾರು ತರಹದ ಕಲ್ಪನೆಯನ್ನಿಟ್ಟುಕೊಂಡು ಆನಂತರ ಒಳ್ಳಯದೇ ಆಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಒದ್ದಾಡುವುದಕ್ಕಿಂತ ಹಾಗೊಂದು ಸತ್ಯ ಇದ್ದಿದ್ದರೆ ಆಹಾ ಏನು ಮಜಾ ಏನು ಮೋಜು. ಘಟೋತ್ಕಚ ಸಿನೆಮಾದಲ್ಲಿ ಶ್ರೀ ಕೃಷ್ಣ ಪ್ರತ್ಯಕ್ಷನಾದಂತೆ ನಮ್ಮೆದುರು ಆಕಾಶದಲ್ಲಿ ಗಿರಿಗಿರಿ ಚಕ್ರ ತಿರುಗಿಸುತ್ತಾ ಮುಗಳ್ನಗುತ್ತಾ " ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ವರವನ್ನು ಕೇಳಿಕೋ" ಎಂದು ಹೇಳುವಂತಿದ್ದರೆ, ಆಹಾ ಅದರ ಮಜ ಹೇಗೆ ವರ್ಣಿಸಲಿ?. ಈಗ ನಾವು ಸಿನೆಮಾದಲ್ಲಷ್ಟೇ ನೋಡಿ ಹಾಗೆ ಕಲ್ಪಿಸಿಕೊಳ್ಳಬೇಕಿದೆ. ಅಂದು ಹಿರಣ್ಯ ಮತ್ತು ಪ್ರಹ್ಲಾದರ ಮಧ್ಯೆಯ ಗಲಾಟೆಯಲ್ಲಿ ಡಣಾರ್ ಎಂದು ಪ್ರತ್ಯಕ್ಷನಾಗಿ ಅಪ್ಪನನ್ನು ಮುಕ್ತಿಗೊಳಿಸಿದಂತೆ ಇಂದು "ದೇವಾ....." ಎಂದು ಕೈಮುಗಿದು ಭಕ್ತಿಯ ರಸದಲ್ಲಿ ಒಂದು ಹಾಡು ಒಗೆದಿದ್ದರೆ ದಣ್ ದಣಾ ದಣ್ ಎಂದು ಮೇಲಿಂದ ಇಳಿದು ಬರುವಂತಿದ್ದರೆ. ಆಹಾ ಬಿಡಿ ಬಿಡಿ ರೇ ಪ್ರಪಂಚದ ಮಾತುಗಳನ್ನು ಎಷ್ಟು ಹೇಳಿದರೂ ಅಷ್ಟೆ. ಇಲ್ಲ ಆವಾಗಿನಷ್ಟೇ ಭಕ್ತಿಯಿಂದ ಪ್ರಾರ್ಥಿಸಿದರೆ ಇಂದೂ ದೇವರು ಪ್ರತ್ಯಕ್ಷನಾಗುತ್ತಾನೆ ಅಂತ ಪರಮ ಭಕ್ತಿಯ ಜನರು ಹೇಳಬಹುದು. ಇಲ್ಲ ಕಣ್ರಿ ಈಗ ಹತ್ತು ವರ್ಷದ ಹಿಂದೆ ಸೊರಬದ ಹತ್ತಿರ ಒಬ್ಬಾತ ಇಸ್ಪೀಟಿನಲ್ಲಿ ಸೋತು ಸುಣ್ಣವಾಗಿ ದೇವಸ್ಥಾನಕ್ಕೆ ಬಂದು "ಹೇ ಈಶ್ವರಾ... ತಂದೆ.. ನನಗೆ ಒಂದಿಷ್ಟು ಹಣ ಕೊಡೋ " ಎಂದು ವಿವಿಧ ಭಂಗಿಯಲ್ಲಿ ಬೆಳಗಿನವರೆಗೂ ಬೇಡಿ ಕೊನೆಗೂ ಈಶ್ವರ ಯಾವ ರೂಪದಲ್ಲಿಯೂ ಪ್ರತ್ಯಕ್ಷವಾಗದಾಗ ಅಲ್ಲಿಯೇ ದೇವಸ್ಥಾನದ ತೊಲೆಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದ. ದೇವರು ಪ್ರತ್ಯಕ್ಷನಾಗಲೇ ಇಲ್ಲ. ಮೊನ್ನೆ ಮೊನ್ನೆ ಟಿವಿಯಲ್ಲಿ ನೀವು ನೋಡಿರಬಹುದು ಒಬ್ಭಾತ ಬೇಡರ ಕಣ್ಣಪ್ಪನಂತೆ ತನ್ನ ಕಣ್ಣನ್ನೇ ತಾನು ಕಿತ್ತು ದೇವರಿಗೆ ಅರ್ಪಿಸಿದ್ದ . ಆದರೂ ದೇವರು ಇಳಿದು ಬರಲಿಲ್ಲ, ಟಿವಿ೯ ನವರು ಬಂದು "ಹೀಗೂ....ಉಂಟೇ..." ಎನ್ನುತ್ತಾ ಕೈಕುಣಿಸಿದರಷ್ಟೇ. ಆವತ್ತು ಕಣ್ಣಪ್ಪನಿಗಾದರೆ ಒಂದು ನೀತಿ ಇವತ್ತು ಈ ಭಕ್ತನಿಗಾದರೆ ಇನ್ನೊಂದು ನೀತಿ....!. ಇವೆಲ್ಲಾ ಘಟನೆಗಳು ನಡೆದಮೇಲೆ ನನಗೆ ನಿಚ್ಚಳ, ಅವತ್ತಿನ ಕಾಲದಲ್ಲಿ ಕರೆದೆ ಹಾಗೆ ಕರೆದರೂ ದೇವರು ಭುವಿಗೆ ಬರುವುದಿಲ್ಲ ಕಾರಣ ಆತ ಇಲ್ಲ.. ಆದರೂ ಆತ ಇರಬೇಕಿತ್ತು.....! ಅಂತ ನನಗೆ ದಿನನಿತ್ಯ ಮೂರ್ನಾಲ್ಕು ಗಂಟೆಗಳ ಕಾಲ ಪೂಜೆ ಮಾಡುವವರನ್ನು ನೋಡುವಾಗೆಲ್ಲಾ ಹಾಗೆ ಅನ್ನಿಸುತ್ತದೆ. ಆದರೇನು ಮಾಡುವುದು. ಎಲ್ಲಾ ನಮ್ಮ ಕೈ ಯಲ್ಲಿ ಇಲ್ಲವಲ್ಲ.

Sunday, December 21, 2008

ಎರಡು ಬ್ಲಾಗ್ ಗಳು

ಬಾಳೆಹೊಳೆ ಪೆಜತ್ತಾಯರು ನನ್ನ ಬ್ಲಾಗ್ ಬರಹ ಪಬ್ಲಿಶ್ ಆದಾಗಲೆಲ್ಲಾ ಫೋನ್ ಮಾಡಿ ಸರಿತಪ್ಪುಗಳ ಕುರಿತು ವಿಮರ್ಶೆ ಮಾಡುತ್ತಾರೆ. ಅಲ್ಲಿಯೇ ಕಾಮೆಂಟ್ ಮಾಡಲು ನನಗೆ ಆಗದು ಹಾಗಾಗಿ ಪೋನ್ ಮಾಡುವುದು ಎಂಬುದು ಅವರ ಆಂಬೋಣ. ಹೀಗೆ ಅವರು ಪೋನ್ ಮಾಡಿದಾಗಲೆಲ್ಲಾ ನಾನು ಒಳಗೊಳಗೆ ಖುಷಿಯಾಗಿಬಿಡುತ್ತೇನೆ.ಇರಲಿ ಅದು ಹಾಗೆಯೇ ನಮ್ಮದೊಂದು ಬರಹ ಮತ್ತೊಬ್ಬರಿಗೆ ಇಷ್ಟವಾಯಿತು ಅಂದರೆ ಎಲ್ಲ ಬರಹಗಾರರ ಕಥೆಯೂ ಹಾಗೆಯೇ. ಅರವತ್ತೆರಡರ ಹರೆಯದಲ್ಲಿ ಅವರ ಓದುವಾಸಕ್ತಿ ಹಾಗೂ ಜೀವನೋತ್ಸಾಹ ನಾನು ಪ್ರತೀ ಕ್ಷಣಕ್ಕೂ ಬಸಿದುಕೊಳ್ಳಲು ಕಾತರಿಸುತ್ತೇನೆ.
ಇಂದು ಬ್ಲಾಗ್ ಲೋಕ ಬಹು ವಿಸ್ತಾರವಾದ ಒಳಹರಿವನ್ನು ಹೊಂದಿದೆ.ಇಂದು ಶ್ರದ್ಧೆಯಿಂದ ಆರ್ಥಿಕ ಪ್ರತಿಫಲಾಪೇಕ್ಷೆ ಇಲ್ಲದೆ ನಿಗದಿತ ಸಮಯಕ್ಕೆ ಬ್ಲಾಗ್ ಅಪ್ಲೋಡ್ ಮಾಡುವ ನೂರಾರು ಬರಹಗಾರರು ಇದ್ದಾರೆ. ಹಾಗೆಯೇ ಪುರುಸೊತ್ತು ಇದ್ದಾಗ ಬರೆಯೋಣ ಅನ್ನುವವರು ಇದ್ದಾರೆ ಜತೆಯಲಿ ನನ್ನದೂ ಒಂದು ಬ್ಲಾಗ್ ಎಂದು ಓಪನ್ ಮಾಡಿ ಮೊದಲ ಬರಹ ಬರೆದು ಕೈಬಿಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದು ನಾವೇ ಪ್ರಕಟಿಸುವ ನಮ್ಮದೇ ಪತ್ರಿಕೆ ಅಂತ ಅನ್ನಿಸಿದ್ದನ್ನೆಲ್ಲಾ ಬರೆಯುವವರೂ ಇದ್ದಾರೆ ಹೀಗೆ ಹತ್ತು ಹಲವು ತರಹ.
ಇವೆಲ್ಲದರ ನಡುವೆ ಸೂಪರ್ರಾಗಿ ಬರೆಯುವ ಮಂದಿಗೇನೂ ಕೊರತೆಯಿಲ್ಲ. ಸುಶ್ರುತನ "ಮೋಡ ಕವಿದ ವಾತಾವರಣ"(http://hisushrutha.blogspot.com/2008/11/blog-post_27.html ) ದ ಕೊನೆಯ ಸಾಲೊಂದು ಹೀಗಿದೆ ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ. ಮುಂಬೈ ಧಾಳಿಯ ಸಮಯದಲ್ಲಿ ಬರೆದ ಆ ಬರಹ ಅದೆಷ್ಟು ಶ್ರದ್ದೆಯಿಂದ ಬರೆದದ್ದೆಂದರೆ ನಿಜವಾಗಿಯೂ ಅದರ ಭಾವಾರ್ಥ ತುಂಬಾ ಆಳವಾಗಿದೆ. ಇಂತಹ ಕೃತ್ಯ ನಡೆದಾಗ ಜನಸಾಮಾನ್ಯ ಹೇಗೆ ಪಟ್ಟಂಗ ಹೊಡೆದು ಬಾಯಿಮಾತಿನಲ್ಲಿ ಸಿಟ್ಟುತೀರಿಸಿಕೊಳ್ಳುತ್ತಾನೆ ನಂತರ ತಾನು ಏನಾದರೂ ಮಾಡಬೇಕೆಂಬ ಸಮಯದಲ್ಲಿ ಹೇಗೆ ಜಾರಿಕೊಳ್ಳುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ನಿರೂಪಿಸಿಬಿಡುತ್ತಾರೆ ನಮ್ಮ ಸುಶ್ರುತ. ಇಂತಹ ಒಳಾರ್ಥದ ಬರಹಗಳಿಗಾಗಿ ನಾವು ಬ್ಲಾಗ್ ಲೋಕಕ್ಕೆ ಧನ್ಯವಾದ ಹೇಳಲೇ ಬೇಕು. ಕಾರಣ ಇಂತಹ ಬರಹಗಳನ್ನು ಯಾವ ಪತ್ರಿಕೆಗಳೂ ಪ್ರಕಟಿಸುತ್ತಿರಲಿಲ್ಲ. ಆದರೆ ಬ್ಲಾಗ್ ಗಳಲ್ಲಿ ಬರಹದ ಆಸಕ್ತಿ ಇರುವವರಿಗೆ ಮುಕ್ತ ಅವಕಾಶ.
ಹಾಗೆಯೇ ನಮ್ಮ ಹೊಸಮನೆ (http://mruthyu.blogspot.com/2008/12/blog-post_18.html ) ಬ್ಲಾಗ್. ಹದಿನೈದು ದಿನಕ್ಕೊಮ್ಮೆ ಹೊರಹೊಮ್ಮುವ ಮೃತ್ಯುಂಜಯ ಅವರ ಬರಹಗಳು. ಅವು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಇರುವೆಯ ಇರುವಿಕೆಯೆ ಕುರಿತು ಆರಂಬಿಸುತ್ತಾ ಮೆಲ್ಲಗೆ ಬರಹಗಾರರ ಒಣ ಹಮ್ಮನ್ನು ಚುಚ್ಚುತ್ತಾರೆ . ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಎನ್ನುವ ಸಾಲುಗಳಲ್ಲಿನ ಒಳಾರ್ಥ ಹಲವಾರು ಲೇಖಕ ಮಹಾಶಯರುಗಳ ಗುಟ್ಟನ್ನು ಬಿಚ್ಚಿಟ್ಟು ಬಿಡುತ್ತದೆ. ಸುಮ್ಮನೆ ಹೆಸರು ಬರಲಿ ಎಂದು ಬರೆಯುವ ಬರಹಗಳ ಬಗ್ಗೆ ನವಿರಾಗಿ ಟೀಕಿಸುತ್ತದೆ. ನಂತರ ಇರುವೆಯ ಮೂಲಕ ನಮ್ಮ ಇರುವಿಕೆಯನ್ನು ಹುಡುಕಿಕೊಳ್ಳುವ ಆ ಬರಹ ಒಮ್ಮೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಹುಶ: ಬ್ಲಾಗ್ ಎಂಬುದೊಂದು ಇರದಿದ್ದರೆ ಇಂತಹ ಬರಹ ನಮಗೆ ಓದಲು ಸಿಗುತ್ತಿರಲಿಲ್ಲವೇನೋ..?. ಎನಿ ವೆ ಥ್ಯಾಂಕ್ಸ್ ಬ್ಲಾಗ್ಸ್ ಎಂಡ್ ಬ್ಲಾಗರ್ಸ್
ಮುಂದಿನವಾರ ಮತ್ತೆ ಒಂದಿಷ್ಟು ಬ್ಲಾಗ್ ಗಳ ಒಳಗೆ ಇಣುಕಿ ನೋಡೋಣ. ಇಲ್ಲಿಯವರೆಗೆ ಓದುತ್ತಾ ಬಂದಿರುವ ನಿಮಗೂ ಹ್ಯಾಪಿ ವೀಕೆಂಡ್