Tuesday, January 22, 2013

ಬೆಕ್ಕು ಕೊಂಡು ಹೋಯಿತಲ್ಲ.....


ಸಂಜು ಹದಿಹರೆಯದ ಹುಡುಗ. ತಾಳಗುಪ್ಪದ ಎಸ್.ಸಿ ಕಾಲೋನಿ ನಿವಾಸಿ. ಪಾರಿವಾಳ ಸಾಕುವುದು ಆತನ ಹವ್ಯಾಸ, ಖುಷಿಗಾಗಿ ಒಂದು ಜೊತೆ ಪಾರಿವಾಳಗಳನ್ನು ಕಳೆದ ವರ್ಷ ಮನೆಗೆ ತಂದು ಗೂಡು ಮಾಡಿ ಸಾಕಲಾರಂಬಿಸಿದ್ದು ಇಂದು ಸಣ್ಣ ಪ್ರಮಾಣದ ಆದಾಯಕ್ಕೂ ಕಾರಣವಾಗಿದೆ. ಆಸಕ್ತಿದಾರರು ಸಂಜುವಿನ ಬಳಿ ಬಂದು ಪಾರಿವಾಳಗಳ ಜೋಡಿಯನ್ನು ಹಣ ಕೊಟ್ಟು ಒಯ್ಯುತ್ತಾರೆ. ಜೋಡಿಯೊಂದಕ್ಕೆ ನಾಲ್ಕು ನೂರರಿಂದ ಆರು ನೂರು ರೂಪಾಯಿಗಳ ವರೆಗೆ ಬಿಕರಿಯಾಗುತ್ತವೆ, ಆದಾಯದ ಜತೆಗೆ ಸಾಕಾಣಿಕೆ ಖುಷಿಯೂ ಸಿಗುತ್ತದೆ ಎನ್ನುವ ಸಂಜು, ದೊಡ್ಡ ಪ್ರಮಾಣದಲ್ಲಿ ಪಾರಿವಾಳ ಸಾಕುವ ಇಂಗಿತ ಹೊಂದಿದ್ದಾನೆ. ಪಾರಿವಾಳ ಪ್ರದರ್ಶನ ಸ್ಪರ್ಧೆಯೂ ವರ್ಷದಲ್ಲಿ ಮೂರ್ನಾಲ್ಕು ಬಾರಿ ಸಿಗುವುದರಿಂದ ಅದೂ ಕೂಡ ಹೆಮ್ಮೆಯ ವಿಷಯ ಎನ್ನುವುದು ಸಂಜುವಿನ ಅಭಿಪ್ರಾಯ.

ಸಂಜು ಪತ್ರಿಕೆಗೆ ಫೋಸ್ ಕೊಡಲು ಅಂಗಳದಲ್ಲಿ ಪಾರಿವಾಳಕ್ಕೆ ಅಕ್ಕಿ ಹಾಕಿ ಕುಳಿತಿದ್ದ. ನಾನು ಸಂಭ್ರಮದಿಂದ ಫೋಟೋ ತೆಗೆದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅನಾಹುತವೊಂದು ನಡದೇ ಹೋಯಿತು. ಕಳ್ಳ ಬೆಕ್ಕೊಂದು ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಡಿಯಿಂದ ತೂರಿ ಬಂದು ಪಾರಿವಾಳವೊಂದರ ಮೇಲೆ ಧಾಳಿ ಮಾಡಿ ಹಿಡಿದುಕೊಂಡು ಹೊರಟೇ ಹೋಯಿತು. ಸುತ್ತಮುತ್ತಲಿದ್ದ ಜನರೆಲ್ಲಾ ಬೆಕ್ಕಿನ ಬಾಯಿಗೆ ಸಿಕ್ಕ ಪಾರಿವಾಳ ರಕ್ಷಿಸಲು ಬೆಕ್ಕಿನ ಹಿಂದೆ ಓಡಿದರಾದರೂ ಪ್ರಯೋಜನ ವಾಗಲಿಲ್ಲ. ಕಳ್ಳ ಬೆಕ್ಕು ಪಾಪದ ಪಾರಿವಾಳವನ್ನು ಬಲಿತೆಗೆದುಕೊಂಡೇ ಬಿಟ್ಟಿತು. ನಾನು ಕೂಡ ಬೇಸರದಿಂದ ಮನೆಗೆ ಬಂದು ತೆಗೆದ ಒಂದೊಂದೇ ಫೊಟೋ ನೊಡುತ್ತಾ ಸಾಗಿದಂತೆ. ಕಳ್ಳ ಬೆಕ್ಕಿನ ಕೆಲಸ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಸಿಕ್ಕಿಬಿಟ್ಟಿತ್ತು ಅಕಸ್ಮಾತ್ತಾಗಿ. ಸಂಜುವಿನ ಪಾರಿವಾಳ ಸಾಕಾಣಿಕೆ ವರದಿ ಮಾಡಲು ಹೋಗಿ ಪಾರಿವಾಳವೊಂದನ್ನು ಬಲಿಕೊಟ್ಟ ವಿಷಾದದ ಜತೆಗೆ ಕಳ್ಳ ಬೆಕ್ಕಿನ ರಕ್ಕಸತನವನ್ನು ಸೆರೆಹಿಡಿದಂತಾಗಿತ್ತು.

Thursday, January 17, 2013

ಜೇನು ಮಾಸ್ಟರ್ ಮಂಜಪ್ಪ


ಕೃಷಿಕರ ವೃತ್ತಿಯಲ್ಲಿ ಅತ್ಯಂತ ಸವಾಲಿನ ಹಾಗೂ ಅಷ್ಟೇ ಉತ್ಸಾಹದಾಯಕ ಕೃಷಿ ಎಂದರೆ ಜೇನು ಕೃಷಿ. ಜೇನು ಸಾಕಾಣಿಕೆ ಜೇಬು ತುಂಬುವ ಭರವಸೆಯನ್ನು ನೀಡುವುದಿಲ್ಲ. ಅತ್ಯಂತ ತಾಳ್ಮೆ ಹಾಗೂ ಬಹು ಸಮಯವನ್ನು ಬೇಡುವ ಜೇನು ಕೃಷಿ ತೊಡಗಿಸಿಕೊಂಡಲ್ಲಿ ಆತ್ಮಾನಂದವನ್ನು ನೀಡಬಲ್ಲದು. ಇಂತಹ ಅಪರೂಪದ ಕೃಷಿಯಾದ ಜೇನು ಸಾಕಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿಯೂ ಯಶಸ್ವಿಯಾಗಿದ್ದಾರೆ ಸಾಗರ ತಾಲ್ಲುಕಿನ ತಾಳಗುಪ್ಪ ಹೋಬಳಿಯ ಖಂಡಿಕಾ ಗ್ರಾಮದ ಕೃಷಿಕ ಮಂಜಪ್ಪ ಕೆ ಎಲ್.
ಇವರು ಒಂದೆಕೆರೆ ಅಡಿಕೆ ತೋಟದ ಮಾಲೀಕರು, ಜತೆಯಲ್ಲಿ ಅಂಚೆ ಇಲಾಖೆಯ ಖಂಡಿಕಾ ಗ್ರಾಮದ ಪೋಸ್ಟ್ ಮಾಸ್ಟರ್. ಬಹು ಹಿಂದಿನಿಂದ ಮನೆಯಲ್ಲಿ ಸಹೋದರ ನಟರಾಜ ಒಂದೆರಡು ಜೇನು ಪೆಟ್ಟಿಗೆ ಇಟ್ಟು ಸಾಕಾಣಿಕೆ ಮಾಡುತ್ತಿದ್ದರು. ಇವರಿಗೆ ೨೦೦೦ ನೇ ಇಸವಿಯಲ್ಲಿ ಜೇನು ಕೃಷಿಯನ್ನು ಕೊಂಚ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಸೆ ಬಂತು. ಆಗ ಕಪ್ಪು ತುಡುವೆ ಜೇನನ್ನು ಎಲ್ಲರೂ ಸಾಕುತ್ತಿದ್ದರು. ವೈರಸ್ ಖಾಯಿಲೆಯಿಂದಾಗಿ ಅವುಗಳು ಪೆಟ್ಟಿಗೆಯಲ್ಲಿ ನಿಲ್ಲದೆ ಸಾಕಾಣಿಕೆ ತುಂಬ ಕಷ್ಟದಾಯಕವಾಗುತ್ತಿತ್ತು. ಆಗ ಅವರ ಗಮನ ಸೆಳೆದದ್ದು ಸಿರಸಿಯ ಮಸಿಗದ್ದೆ ಧರ್ಮೇಂದ್ರ ಹೆಗಡೆ ಸಾಕುತ್ತಿದ್ದ ಅರಿಶಿನ ತುಡುವೆ ಜೇನು. ಸಿರಸಿಗೆ ತೆರಳಿ ಎರಡು ಪೆಟ್ಟಿಗೆ ಜೇನು ಹುಳು ತಂದು ಸಾಕಾಣಿಕೆ ಆರಂಬಿಸಿದ ಮಂಜಪ್ಪ ಅಲ್ಲಿಂದೀಚೆಗೆ ನಿರಂತರವಾಗಿ ಬೆಳೆಯುತ್ತಾ ಸಾಗಿದ್ದಾರೆ.
ಸೊಪ್ಪಿನ ಬೆಟ್ಟದಲ್ಲೂ ಆದಾಯ: ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟದ ಮೇಲ್ಗಡೆ ಸೊಪ್ಪಿನ ಬೆಟ್ಟ ಮುಫತ್ತಾಗಿ ದೊರೆಯುತ್ತದೆ. ಅಲ್ಲಿನ ಸೊಪ್ಪು ದರಲೆಗಳನ್ನು ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತದೆ. ಆದರೆ ಅಲ್ಲಿ ಯಾವುದೇ ಬೆಳೆಗಳನ್ನು ಬೆಳೆಯುವಂತಿಲ್ಲ. ಹಾಗಾಗಿ ಎಲ್ಲಾ ಅಡಿಕೆ ತೋಟದ ಮಾಲೀಕರ ಸೊಪ್ಪಿನ ಬೆಟ್ಟಗಳು ಆದಾಯದ ವಿಷಯದಲ್ಲಿ ನಿರುಪಯುಕ್ತ. ಆದರೆ ಮಂಜಪ್ಪನವರು ಮಾತ್ರಾ ಹೊಸ ಆಲೋಚನೆಯ ಹೊಳವನ್ನು ಹಿಡಿದು ಸಾಗಿದರು. ಇವರು ಮನೆಯ ಪಕ್ಕದ ಸೊಪ್ಪಿನ ಬೆಟ್ಟವನ್ನು ಜೇನು ಸಾಕಾಣಿಕೆಗೆ ಆಯ್ದುಕೊಂಡಿದ್ದಾರೆ. ಕಾಡು ಜಾತಿಯ ಮರಗಳಿರುವ ಸೊಪ್ಪಿನ ಬೆಟ್ಟದ ತುಂಬೆಲ್ಲಾ ಜೇನಿನ ಝೇಂಕಾರ. ಇದರಿಂದಾಗಿ ಜೇನುಗಳ ಆಹಾರ ಸಂಗ್ರಹಣೆ ಸುಲಭವಾಗುವುದರ ಜತೆ ಇಳುವರಿಯೂ ತುಂಬಾ ಹೆಚ್ಚಾಗಿದೆ.
ಜೇನು ಡೈರಿ: ಕೃಷಿಕರು ತಮ್ಮ ಕೈಂಕರ್ಯ ಗಲ ಮಾಹಿತಿಗಳನ್ನು ದಾಖಲಿಸುವುದನ್ನು ಅಭ್ಯಾಸ ಮಾಡಿದರೆ ಅದ್ಭುತ ಯಶಸ್ಸು ಕಾಣಬಹುದು ಎನ್ನುವುದು ಮಂಜಪ್ಪ ಸ್ವತಹ ಕಂಡುಕೊಂಡ ಮಾರ್ಗ. ೨೦೦೦ ನೇ ಇಸವಿಯಿಂದ ಜೇನಿನ ಹಾಗೂ ಜೇನು ಸಾಕಾಣಿಕೆಯ ಸಂಪೂರ್ಣ ಮಾಹಿತಿಯನ್ನಿ ಇವರು ದಾಖಲಿಸಿ ಇಟ್ಟಿದ್ದಾರೆ. ಜೇನು ರಾಣಿ ಹುಟ್ಟಿದ ದಿನಾಂಕದಿಂದ ಹಿಡಿದು ಜೇನು ಗೂಡು ಹಿಸ್ಸೆ ಮಾಡಿಸಿದ ತನಕ ಹಾಗೂ ಜೇನು ತುಪ್ಪ ಯಾವ್ಯಾವ ಪೆಟ್ಟಿಗೆಯಲ್ಲಿ ಎಷ್ಟು ಇಳುವರಿ ಎಂಬ ಮಾಹಿತಿಯನ್ನು ದಾಖಲಿಸುವುದರ ಮುಖಾಂತರ ಇವರು ಯಶಸ್ಸುಗಳಿಸಿದ್ದಾರೆ. ದಾಖಲೆ ಇಟ್ಟಲ್ಲಿ ನಾವು ಯಡವಿದ್ದು ಎಲ್ಲಿ ಎಂಬುದಕ್ಕೆ ಉತ್ತರ ಸಿಗುತ್ತದೆ ತನ್ಮೂಲಕ ನಾವು ತಿದ್ದಿಕೊಳ್ಳ ಬಹುದು ಜತೆಗೆ ಇಂತಹ ದಾಖಲೆಗಳು ಮುಂದಿನ ಪೀಳಿಗೆ ಜೇನು ಕೃಷಿಗೆ ತೊಡಗಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎನ್ನುತ್ತಾರೆ.
ಅಧಿಕ ಇಳುವರಿ: ಸಾಮಾನ್ಯವಾಗಿ ಮಲೆನಾಡಿನಲ್ಲಿ ಒಂದೆರಡು ಜೇನು ಗೂಡನ್ನು ಇರಿಸಿಕೊಳ್ಳುವ ಕೃಷಿಕರು ಪೆಟ್ಟಿಗೆಯೊಂದರಿಂದ ವರ್ಷವೊಂದಕ್ಕೆ ಮೂರ್ನಾಲ್ಕು ಕೆಜಿ ಜೇನುತುಪ್ಪದ ಇಳುವರಿ ಪಡೆಯುತ್ತಾರೆ. ಆದರೆ ಮಂಜಪ್ಪನವರು ೨೦೧೧-೧೨ ನೇ ಸಾಲಿನಲ್ಲಿ ಒಟ್ಟೂ ಹದಿನಾಲ್ಕು ಪೆಟ್ಟಿಗೆಯಿಂದ ಒಂದೂ ಮುಕ್ಕಾಲು ಕ್ವಿಂಟಾಲ್ ತುಪ್ಪ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಕೃತಕ ಹಿಸ್ಸೆ: ಜೇನು ಕುಟುಂಬಗಳನ್ನು ಪೆಟ್ಟಿಗೆಯಿಂದ ಓಡಿ ಹೋಗದಂತೆ ರಕ್ಷಿಸಿಕೊಳ್ಳುವುದು ಜೇನು ಸಾಕಾಣಿಕೆಯಲ್ಲಿ ಅತ್ಯಂತ ಮಹತ್ವ ಪೂರ್ಣ ಘಟ್ಟ. ಪ್ರತೀ ವರ್ಷ ಹೊಸ ರಾಣಿಮೊಟ್ಟೆಯೊಡೆದು ಹಿಸ್ಸೆ ಮಾಡಿಕೊಂಡು ಹಾರಿ ಹೂಗುವ ಜೇನು ಗುಂಪನ್ನು ತಡೆಹಿಡಿದುಕೊಳ್ಳಲು ಯಶಸ್ವಿಯಾದರೆ ಜೇನು ಕೃಷಿಕ ಅರ್ದ ಗೆದ್ದಂತೆ. ಇದಕ್ಕಾಗಿ ಮಂಜಪ್ಪ ಆಯ್ದುಕೊಂಡಿದ್ದು ಕೃತಕ ಹಿಸ್ಸೆ ತಂತ್ರ. ಜೇನು ರಾಣಿಮೊಟ್ಟೆಯನ್ನು ಇಟ್ಟ ಕೂಡಲೇ ಅವರು ಮತ್ತೊಂದು ಪೆಟ್ಟಿಗೆಗೆ ಅರ್ದ ತಂಡವನ್ನು ಹಾಕಿ ಎರಡು ಮಾಡುತ್ತಾರೆ. ತಮಗೆ ಹೆಚ್ಚಾಗಿರುವ ಜೇನು ಗೂಡನ್ನು ಆಸಕ್ತ ರೈತರಿಗೆ ಪ್ರತೀ ವರ್ಷ ಮಾರಾಟ ಮಾಡುತ್ತಾರೆ. ಇದರಿಂದಾಗಿ ವಾರ್ಷಿಕವಾಗಿ ಒಂದಿಷ್ಟು ಆದಾಯದ ಜತೆಗೆ ಜೇನುಗೂಡನ್ನು ಉಳಿಸಿಕೊಂಡಂತಾಗುತ್ತದೆ.
ಉತ್ತಮ ಮಾರುಕಟ್ಟೆ: ಪ್ರತೀ ವರ್ಷ ಒಂದೂವರೆ ಕ್ವಿಂಟಾಲ್ ನಿಂದ ಹಿಡಿದು ಎರಡು ಕ್ವಿಂಟಾಲ್ ಜೇನು ತುಪ್ಪ ತೆಗೆಯುವ ಮಂಜಪ್ಪನವರಿಗೆ ಇಲ್ಲಿಯವರೆಗೆ ಮಾರುಕಟ್ಟೆಯ ಸಮಸ್ಯೆ ಎದುರಾಗಿಲ್ಲ. ಶುದ್ಧ ಪೆಟ್ಟಿಗೆಯಲ್ಲಿನ ತುಪ್ಪ ದೊರಕುವುದರಿಂದ ಮಾರ್ಚ್ ತಿಂಗಳಿನಲ್ಲಿ ತುಪ್ಪ ತೆಗೆಯಲಾರಂಬಿಸುತ್ತಿದ್ದಂತೆ ಸ್ಥಳೀಯ ಗಿರಾಕಿಗಳು ಬಂದು ತೆಗೆದುಕೊಂಡು ಹೋಗುತ್ತಾರೆ. ಕೆಜಿಯೊಂದಕ್ಕೆ ೨೫೦ ರೂಪಾಯಿ ದರದಲ್ಲಿ ಬಿಕರಿಯಾಗುವ ಜೇನು ತುಪ್ಪದಿಂದ ವಾರ್ಷಿಕವಾಗಿ ಸುಮಾರು ೫೦ ಸಾವಿರ ರೂಪಾಯಿಗಳ ಆದಾಯ ಹೊಂದಿದ್ದಾರೆ.
ವೃತ್ತಿಯಲ್ಲಿ ಅಂಚೆ ಇಲಾಖೆಯ ನೌಕರನಾಗಿ ಅಡಿಕೆ ತೋಟದ ಕೃಷಿಕನಾಗಿ ಹವ್ಯಾಸಕ್ಕಾಗಿ ಜೇನಿನಲ್ಲಿ ತೊಡಗಿಸಿ ನಂತರ ಆದಾಯದಲ್ಲಿಯೂ ಯಶಸ್ವಿಯಾದ ಮಂಜಪ್ಪನರು ಪತ್ನಿ ಪ್ರಭಾರ ಸಹಕಾರ ವನ್ನೂ ನೆನೆಯುತ್ತಾರೆ. ೨೨ ಪೆಟ್ಟಿಗೆ ಜೇನು ಹೊಂದಿ ಯಶಸ್ಸು ಗಳಿಸಿರುವ ಕೃಷಿಕ ಮಂಜಪ್ಪ ಹಲವು ರೈತರಿಗೆ ಮಾದರಿಯಾಗಿದ್ದಾರೆ.

ಫೋನ್: ೦೮೧೮೩೨೯೬೭೨೫ 08183296725
ಮೊ ;೯೪೮೦೦೧೮೪೬೧ 9480018461
Posted by Picasa

Saturday, January 5, 2013

ನಮ್ಮೂರ ಲಗಾನ್

             
    ನನಗೆ ಕ್ರಿಕೆಟ್ ಎಂದರೆ ಅಷ್ಟಕ್ಕಷ್ಟೆ. ಹಾಗಾಗಲು ಸ್ಪಷ್ಟ ಕಾರಣ ಅಂತ ಏನೂ ಇಲ್ಲ. ಒಂದಿಷ್ಟು ಸಣ್ಣ ಪುಟ್ಟ ಕಾರಣ ಹುಡುಕಿ ಹೇಳಬೇಕು ಅಂತಾದರೆ ಮೊದಲನೆಯದು ನನಗೆ ಅಲ್ಲಿ ಒಂದೇ ತರಹ ಬಟ್ಟೆ ಧರಿಸಿ ಆಡುವ ಹನ್ನೊಂದು ಜನರ ಮುಖ ಪರಿಚಯ ನೆನಪಿರುವುದಿಲ್ಲ, ಎರಡನೆಯದಾಗಿ ಸ್ಪಿನ್, ಗೂಗ್ಲಿ, ಬೌನ್ಸರ್ ಇಂತಿಪ್ಪ ಹತ್ತು ಹಲವು ನನಗೆ ಗೊಂದಲ, ಮೂರನೆಯದಾಗಿ ಅವನು ಹೀಗೆ ಆಡಿದ್ದರೆ ಇನ್ನಷ್ಟು ಹೊತ್ತು ನಿಲ್ಲಬಹುದಿತ್ತು ಎಂಬ ವಿಮರ್ಶೆ ಖಂಡಿತಾ ಒಗ್ಗದು, ನಾಲ್ಕನೆಯದಾಗಿ ಅದೊಂತರಹ ಏಕತಾನತೆ ಕಾಡತೊಡಗಿ ಆಟದ ಕೊನೆಯ ರೋಮಾಂಚಕ ಐದು ನಿಮಿಷ ಮಾತ್ರಾ ನೋಡಿದರೆ ಸಾಕು ಎಂಬ ಭಾವನೆ ಮೂಡಿ ಮೊದಲು ಆಟ ನೋಡದೆ ಅಂತಿಮ ಕ್ಷಣಕ್ಕೆ ಟಿವಿ ಹಾಕಿದರೆ ಆಟ ಮುಗಿದು ನಂತರ ಅದ್ಯಾರೋ ಕೊರೆಯುವುದಷ್ಟೇ ನನ್ನ ಪಾಲಿಗೆ ಉಳಿಯುವಂತಾಗಿ ಬಿಡುತ್ತದೆ. ಒಟ್ಟಿನಲ್ಲಿ ನನಗೆ ಒಗ್ಗಲಿಲ್ಲ ಬಿಟ್ಟಾಕಿ. ಈಗ ವಿಷಯಕ್ಕೆ ಬರುತ್ತೇನೆ
          ಲಗಾನ್ ಚೆನ್ನಾಗಿದೆ ಅಂತ ಬಹಳ ಜನ ಹೇಳಿದ್ದರು. ನಾನು ನೋಡಲಿಲ್ಲ, ಹಳ್ಳಿಯ ಹುಡುಗರ ಕ್ರಿಕೆಟ್ ಕಹಾನಿ ಎಂಬ ವಿಷಯ ನಿಮ್ಮಂತಹ ಜನರ ಮೂಲಕ ತಿಳಿದಿದೆ ಅಷ್ಟೆ. ನಮ್ಮೂರಿನ ಹಳ್ಳಿ ಹುಡುಗರು ಕೂಲಿ ಕೆಲಸ ಮುಗಿಸಿದ ನಂತರ ಪ್ರತಿ ನಿತ್ಯ ಸಂಜೆ ಅವರದ್ದೇ ಆದ ಟೀಂ ಕಟ್ಟಿಕೊಂಡು ಆಡುತ್ತಿರುತ್ತಾರೆ. ನಾನು ನಿತ್ಯ ಅವರ ಮಜವನ್ನು ನೋಡಿ ಅನುಭವಿಸುತ್ತೇನೆ.ವಾರದ ಹಿಂದೆ ಸಂಜೆ ಹುಡುಗರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅದೇನೋ ಚರ್ಚೆ ನಡೆಯುತ್ತಿತ್ತು. ಕಾರು ನಿಲ್ಲಿಸಿದೆ. ತಾಳಗುಪ್ಪದಲ್ಲಿ ಟೂರ್ನ್ ಮೆಂಟ್ ಇದೆ ಆದರೆ ಪ್ರವೇಶ ಶುಲ್ಕ ಸಾವಿರ ರೂಪಾಯಿ, ಆಡಬೇಕು ದುಡ್ಡಿಲ್ಲ ಎನ್ನುವುದು ಅವರ ಚರ್ಚೆಯ ವಿಷಯ. ಅಲ್ಲೊಂದು ಸಣ್ಣ ಬೆಸರದ ಸಂಗತಿ ಎಂದರೆ ಅವರಿಗೆ ಟೂರ್ನ್ ಮೆಂಟ್ ಗೆ ಹೋಗುವ ಆಸೆ ಆದರೆ ಪ್ರವೇಶ ಶುಲ್ಕ ದ ಸಮಸ್ಯೆ. ನಾನು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಂಡೆ. ಹುಡುಗರು ಖುಷ್ ಆಗಿ ಹುರ್ರೇ ಎಂದರು. ನಾನು ಬುರ್ ಎಂದು ಕಾರು ಓಡಿಸಿ ಕೊಂಡು ಮನೆಗೆ ಹೋದೆ.
           ಒಂದೆರಡು ದಿವಸ ಕಳೆದಿತ್ತು ಹನ್ನೆರಡು ಟೀಂ ಗಳಲ್ಲಿ ಹತ್ತನ್ನು ಸೋಲಿಸಿ ನಮ್ಮ ಹುಡುಗರು ಸೆಮಿ ಫೈನಲ್ ಗೆ ಬಂದು ಬಿಟ್ಟಿದ್ದರು. ಅವರಿಗೆ ಅದೆಷ್ಟು ಆನಂದ ಅಂದರೆ ಇಲ್ಲಿ ಅಕ್ಷರದಲ್ಲಿ ಮೂಡಿಸಲಾಗದು ಬಿಡಿ. ಪೈನಲ್ ದಿವಸವೂ ಬಂತು. ನಾನು ಮರತೆ ಬಿಟ್ಟಿದ್ದೆ. ಸಂಜೆ ಒಂದು ದಂಡು ಜನರೊಂದಿಗೆ ಕಪ್ ಹಿಡಿದು ನಮ್ಮ ಮನೆಗೆ ಬಂದರು ಲಗಾನ್ ಹುಡುಗರು. ನಾನು ಅರೆಕ್ಷಣ ರೋಮಾಂಚಿತನಾದೆ. ಒಂದು ಕೆಜಿ ಸಿಹಿ, ಪಟಾಕಿ ಅಯ್ಯೋ ಅವರ ಸಂಭ್ರಮ ಹೇಳತೀರದು. ಅವರ ಸಂಭ್ರಮ ನೋಡಿ ನನ್ನ ಸಂಬ್ರಮಮದ ಕತೆಯೂ ಅಷ್ಟೆ. ಹುಡುಗರು ಗೆದ್ದ ಮೊತ್ತ ಹನ್ನೊಂದು ಸಾವಿರ ನಗದು. ಅಂತೂ ಒಳ್ಳೆ ಮಜ ಕೊಟ್ಟರು ನಮ್ಮೂರ ಹುಡುಗರು.
                   ನಾನಂತೂ ಭಗವಂತನನ್ನು ಹೀಗೆ ಪ್ರಾರ್ಥಿಸುತ್ತಿದ್ದೇನೆ. "ಇಲ್ಲಿ ಒಳ್ಳೆಯ ಕೆಲಸ ಬಹಳ ಆಗುವುದಿದೆ, ಅದು ನನ್ನ ಮೂಲಕ ಆಗಲಿ" ಎಂಬ ಸ್ವಾರ್ಥ ಪೂರಿತವಾಗಿ. ಫಲಿಸಿದೆ ಬಹಳಷ್ಟು ಫಲಿಸಿದೆ. ಅದರ ಫಲಾನುಭವಿಗಳಲ್ಲಿ ನಮ್ಮೂರ ಈ ಹುಡುಗರು ಎಷ್ಟನೆಯವರು ಎಂದು ಕರಾರುವಕ್ಕಾಗಿ ಹೇಳಬಾರದು, ಕಾರಣ ನನ್ನಲ್ಲಿ ಅಹಂಕಾರ ಮೂಡಿಬಿಡಬಹುದು.

Friday, January 4, 2013

ಗೊತ್ತಿಲ್ಲ ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ.

                ಅಲ್ಲಿ ನಿಲ್ಲಲ್ಲು ಸಾದ್ಯವಾದರೆ ಅದು ಪರಮ ಸುಖ. ಅಲ್ಲಿ ಎಂಬುದಕ್ಕೆ ಸಮರ್ಪಕವಾದ ಉತ್ತರ ನಿಮಗೆ ನೀವೆ ಕಂಡುಕೊಳ್ಳಬೇಕು. ಅದು ಪಕ್ಕಾ ನಿಮ್ಮ ಮಿದುಳಿನ ಶಕ್ತಿಯನ್ನು ಅವಲಂಬಿಸಿದೆ. ಸುಲಭ ಉದಾಹರಣೆಯ ಮೂಲಕ ಹೇಳಬೇಕೆಂದರೆ ಇತ್ತೀಚೆಗೆ ಸುದ್ದಿಯಾಗುತ್ತಿರುವ  ಅತ್ಯಾಚಾರದ ವಿಷಯ. ಅತ್ಯಾಚಾರ ವಿರೋಧಿಸಿ ಚಿಂತಿಸುವ ಗುಂಪು ದೊಡ್ಡದಿದೆ ನಿಜ ಆದರೆ ವಿಚಿತ್ರ ಗೊತ್ತಾ ...?  ಆ ಅತ್ಯಾಚಾರದ ಪರವೂ ಒಂದು ಗುಂಪು ಇರುತ್ತದೆ. ಅದು ಸಣ್ಣದಿರಬಹುದು. ಆದರೂ ಇರುತ್ತದೆ. ವಿಷಯ ಎಂಬುದು ಗುಂಪಿನ ಬಹುಮತಕ್ಕೆ ಸಂಬಂದಪಟ್ಟಿದ್ದಲ್ಲವಾದ್ದರಿಂದ  ಇರುವಿಕೆಯಂತೂ ಸತ್ಯ. ಈಗ ಯೋಚಿಸಿ ಅಲ್ಲಿನ ಪರವೂ ಕೂಡ ವಿಷಯಕ್ಕೆ ವಿರೋಧವೇ, ವಿರೋಧವೂ ಕೂಡ ವಿಷಯಕ್ಕೆ ಪರವೇ. ತರ್ಕದ ಮೂಲಕ ಹೇಗಾದರೂ ಸಮರ್ಥಿಸಬಹುದು. ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಿನ ಕ್ಷಣಗಳಲ್ಲಿ ಏನು ನಡೆಯಿತು ಎನ್ನುವುದರ ಮೇಲೆ ಘಟನೆ ನಿಂತಿರುತ್ತದೆಯಾದ್ದರಿಂದ ಅದು ಹೇಗೂ ತಿರುವು  ಪಡೆದುಕೊಳ್ಳಬಹುದು. ಅಲ್ಲಿನ ವ್ಯಕ್ತಿಗಳು  ಮತ್ತು ಅವರೊಡನೆ ನಿಮ್ಮ ನಮ್ಮ ವೈಯಕ್ತಿಕ ಸಂಬಂಧ ಯಾವ ಮಟ್ಟದ್ದು ಎನ್ನುವುದರ ಮೇಲೆ ಘಟನೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ.
            ಅತ್ಯಾಚಾರಿಯು ಹತ್ತಿರದ ಕರುಳ ಸಂಬಂಧಿಯಾದರೆ ಅದಕ್ಕೊಂದು ತಿರುವು, ಅತ್ಯಾಚಾರಕ್ಕೆ ಈಡಾದವರು ಕರುಳ ಸಂಬಂದಿಯಾದರೆ ಅದಕ್ಕೊಂದು ತಿರುವು. ಈ ವಿಷಯಗಳ ನಡುವೆ ಸತ್ಯವೊಂದು ಸುಮ್ಮನೆ ನಗುತ್ತಾ ಕುಳಿತಿರುತ್ತದೆ. ಅದು ತಿಳಿಯುವುದು ಬಹು ಅಪರೂಪದ ಜನಕ್ಕೆ. ಆ ಅಪರೂಪದ ಜನ ನೀವಾಗಬೇಕು ಎಂತಾದರೆ ಆ "ಅಲ್ಲಿ" ನಿಲ್ಲುವುದನ್ನು ಕಲಿಯಬೇಕು. ಈಗ ನಿಮಗೆ ಅರ್ಥವಾಗಿರಬೇಕು ಆ ಅಲ್ಲಿ ಎಂದರೆ  "ನಡುವೆ" ಎಂದು. ಹೌದು ಆಕಸ್ಮಿಕದ ಘಟನೆಯನ್ನು ಪೂರ್ವಯೋಜಿತ ಅಂತಲೂ ಪೂರ್ವಯೋಜಿತ ಘಟನೆಯನ್ನು ಆಕಸ್ಮಿಕ ಅಂತಲೂ ಬಲಾಬಲದ ಮೇಲೆ ತಿರುಚಿದ ಉದಾಹರಣೆ ಸಾಕಷ್ಟಿದೆ. ಅದು ತಿಳಿಯುವುದು ನಡುವೆ ನಿಂತಾಗಲೇ. ಇಡೀ ಜೀವನವನ್ನು ನಡುವೆ ನಿಂತು ಅರ್ಥ ಮಾಡಿಕೊಳ್ಳ ತೊಡಗಿದರೆ ಅದರಂತಹ ಸುಖ ಮತ್ತೊಂದಿಲ್ಲ. ನಡುವೆ ನಿಲ್ಲುವ  ಶೈಲಿಯ ಇನ್ನೂ ಸುಲಭದ ವ್ಯಾಖ್ಯೆ ಎಂದರೆ ದೇವರು ಇದ್ದಾನೆ ಎನ್ನುವವರಿಗೂ ಇಲ್ಲ ಎನ್ನುವವರಿಗೂ ಗುಲಗುಂಜಿ ವ್ಯತ್ಯಾಸ ಇಲ್ಲ. ಎಲ್ಲಾ ಗೊತ್ತಿದ್ದೂ...  "ಗೊತ್ತಿಲ್ಲ" ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ. ದಲೈಲಾಮ "ನನಗೆ ಗೊತ್ತಿಲ್ಲ" ಎಂಬ ಮಾತಿನಿಂದಲೇ ಉತ್ತರ ಕೊಡಲು ಆರಂಭಿಸುತ್ತಾರೆ. ಹಾಗಾಗಿ ಅವರ ವ್ಯಕ್ತಿತ್ವ  ಜಗತ್ತಿಗೆ ಮತ್ತು ಸತ್ಯ ದರ್ಶನದ ವಿಷಯದಲ್ಲಿ   "ಶಾಂತಿ, ಶಾಂತಿ, ಶಾಂತಿ"

Thursday, January 3, 2013

ಇವರು ಇಂಜನಿಯರಿಂಗ್ "ರೈತ"

              
           ಬಹುಪಾಲು ಎಲ್ಲ ತಂದೆತಾಯಿಂದರ ಕನಸು ಮಕ್ಕಳು ಇಂಜನಿಯರ್ ಅಥವಾ ಡಾಕ್ಟರ್ ಆಗಬೇಕು, ಪಕ್ಕದ ಮನೆಯ ಹುಡುಗರು ಕೃಷಿಕರಾಗಬೇಕು ಎಂಬ ತತ್ವ. ಆದರೆ ತಾಳಗುಪ್ಪದ ಸಮೀಪದ ಶಿರೂರು ಆಳ್ಳಿಯ ಮೂಗೀಮನೆ ಸುಬ್ರಾಯ ಹಾಗೂ ಕನಕಲತ ದಂಪತಿಗಳು ೧೨ ವರ್ಷದ ಕೆಳಗೆ ಇಂಜನಿಯರ್ ಮಗ ಮನೆಗೆ ಬರುತ್ತಾನೆ ಮರಳಿ ಕೃಷಿಗೆ ತೊಡಗಿಸಿಕೊಳ್ಳುತ್ತಾನೆ ಎಂದರೆ ಸಂಭ್ರಮಿಸಿದರು. ಅದರ ಪ್ರತಿಫಲ ಕೃಷಿಕ ಪ್ರಪಂಚಕ್ಕೆ ಇಂಜನಿಯರ್ ಕೊಡುಗೆಯಾದಂತಾಯಿತು.
         ೧೯೯೧ ನೆ ಇಸವಿಯಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಮುಗಿಸಿದ ಗಣೇಶ್ ಎಂ ಎಸ್ ಆಯ್ದುಕೊಂಡಿದ್ದು ನೌಕರಿಯನ್ನಲ್ಲ ಕೈಗಾರಿಕೆಯನ್ನ. ಮೈಸೂರಿನಲ್ಲಿ ಇಂಜನಿಯರಿಂಗ್ ಇಂಡಸ್ಟ್ರಿ ಆರಂಭಿಸಿದರು. ಉದ್ಯಮ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಯಶಸ್ವಿಯೂ ಆದರು, ಆದರೆ ಮನಸ್ಸಿಗೆ ನೆಮ್ಮದಿ ಮಾತ್ರಾ ಸಿಕ್ಕಿರಲಿಲ್ಲ. ಮಲೆನಾಡಿನ ತುಡಿತ ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ೧೯೯೯ ನೇ ಇಸವಿಯಲ್ಲಿ ಇಂಜನಿಯರಿಂಗ್ ಉದ್ಯಮಕ್ಕೆ ವಿದಾಯ ಹೇಳಿ ಮರಳಿದರು ಮಣ್ಣಿಗೆ.
   ದೇಶ ಸುತ್ತಿ ಕೋಶ ಓದಿ ವಾಪಾಸು ಬಂದ ಇಂಜನಿಯರಿಂಗ್ ಪದವಿಧರ ಗಣೇಶ್ ಆರಂಭದಲ್ಲಿ ಕೃಷಿಗೆ ಒಗ್ಗಿಕೊಳ್ಳುವುದು ತುಸು ಕಷ್ಟ ಎನಿಸಿತು. ಕೃಷಿಯನ್ನು ಉದ್ಯಮದ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದ ಬಳಕೆಯಿಂದ ಮಾತ್ರಾ ಯಶಸ್ಸು ಎನಿಸಿ ಕೃಷಿ ಉದ್ಯಮ ಆರಂಭಿಸಿದರು.
ಬೇವಿನ ಹಿಂಡಿ ಉದ್ಯಮ: ತಮ್ಮ ಸ್ವಂತ ತೋಟದ ಬಳಕೆಗೆ ಗೊಬ್ಬರ ಅವಶ್ಯಕತೆ ಇತ್ತು ಅದರ ಜತೆ ಇತರೇ ಕೃಷಿಕರ ಅವಶ್ಯಕತೆಯನ್ನು ಪೂರೈಸುವ ಸಣ್ಣ ಪ್ರಮಾಣದ ಬೇವಿನ ಹಿಂಡಿ ಗೊಬ್ಬರ ಘಟಕ ಪ್ರಾರಂಭಿಸಿದರು. ಬಯಲು ಸೀಮೆಯಿಂದ ಬೇವಿನ ಬೀಜ ತರಿಸಿ ಅದನ್ನು ಹುಡಿಮಾಡಿ ಇತರೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ವಿತರಿಸಿದರು. ಇದರಿಂದಾಗಿ ಅವರ ತೋಟಕ್ಕೂ ಕಡಿಮೆ ವೆಚ್ಚದಲ್ಲಿ ಗೊಬ್ಬರ ದಕ್ಕಿತು. ಇಂತಹ ಸಣ್ಣ ಪ್ರಯತ್ನಗಳಿಂದಾಗಿ ಕೃಷಿಯನ್ನು ಲಾಭಕರ ಉದ್ಯಮವನ್ನಾಗಿಸಬಹುದೆಂದು ಗಣೇಶ್ ತೋರಿಸಿಕೊಟ್ಟಿದ್ದಾರೆ.


ನಾಟಿ ಯಂತ್ರ: ಒಮ್ಮೆ ಕೃಷಿ ಪ್ರವಾಸಕ್ಕೆಂದು ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಕೃಷಿಕರೊಬ್ಬರು ಭತ್ತದ ಸಸಿ ನಾಟಿಮಾಡಲು ಕೈಯಂತ್ರ ಬಳಸುತ್ತಿರುವುದನ್ನು ಗಣೇಶ್ ಗಮನಿಸಿದರು. ಆದರೆ ಆ ಯಂತ್ರ ಪರಿಪೂರ್ಣವಾಗಿರಲಿಲ್ಲ. ಒಂದು ಎಕರೆ ಭತ್ತದ ಸಸಿ ನಾಟಿ ಮಾಡುವಷ್ಟರಲ್ಲಿ ಯಂತ್ರ ದುರಸ್ತಿಕಾರ್ಯಕ್ಕೆ ಬರುತ್ತಿತ್ತು. ಗಣೇಶ್ ಆ ಯಂತ್ರದ ಮಾದರಿಯನ್ನು ಸುಧಾರಿಸಿ ಭತ್ತ ನಾಟಿ ಮಾಡುವ ಯಂತ್ರ ನಿರ್ಮಿಸಿದ್ದಾರೆ. ಲೀಲಾಜಾಲವಾಗಿ ಹತ್ತು ಎಕರೆ ನಾಟಿ ಮಾಡುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇಂತಹ ಹಲವು ಯಂತ್ರಗಳನ್ನು ತಾವೇ ತಯಾರಿಸಿ ಕೃಷಿಕರಿಗೆ ನೀಡಿದ್ದಾರೆ.
ಕೈಕೊಟ್ಟ ಉದ್ಯೋಗ ಖಾತ್ರಿ: ಕೂಲಿಜನರ ಸಹಾಯಕ್ಕೆಂದು ಬಂದ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎನ್ನಿವುದು ಗಣೇಶ್ ಅಭಿಮತ. ಕೂಲಿಕಾರರನ್ನು ಇನ್ನಷ್ಟು ಸೋಮಾರಿಯನ್ನಾಗಿಸಿ ಅತ್ತ ಖಾತ್ರಿಯೂ ಇಲ್ಲ ಇತ್ತ ಕೃಷಿ ಕಾರ್ಯುಗಳೂ ಇಲ್ಲದಂತಾಗಿದೆ. ಇದರ ದುಶ್ಪರಿಣಾಮ ಕೃಷಿಕರು ಎದುರಿಸುವಂತಾಗಿದೆ. ಆದರೆ ಕೃಷಿಕಾರ್ಮಿಕರ ಕೊರತೆಗೆ ಹೆದರದೆ ಗಣೇಶ್ ಯಂತ್ರಗಳ ಬಳಕೆಯನ್ನು ಅವಲಂಬಿಸಿದರು. ಗದ್ದೆ ಕೊಯ್ಲಿಗೆ ಯಂತ್ರವನ್ನು ಬಳಸಿ ಹಣ ಉಳಿಸಿದರು. ಇದರಿಂದಾಗಿ ಸ್ವಾವಲಂಬಿಯಾದೆ ಎನ್ನುತ್ಟಾರೆ.
ಭತ್ತದ ಆಸಕ್ತಿ: ಆರ್ಥಿಕ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೂ ಗಣೇಶ್ ರವರಿಗೆ ಭತ್ತದ ಮೇಲೆ ಅಪಾರ ಪ್ರೀತಿ. ಕೃಷಿಯಲ್ಲಿ ತೊಡಗಿಸಿಕೊಂಡ ಆರಂಭದಲ್ಲಿಯೇ ಮಲೆನಾಡಿನಲ್ಲಿ ಯಾರೂ ಬೆ:ಳೆಯದಿದ್ದ ಡೈಮಂಡ್ ಸೋನಾ ತಳಿಯ ಭತ್ತ ಬೆಳೆದು ಲಾಭ ಗಳಿಸಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ನುಡಿಯನ್ನು ಸುಳ್ಳು ಮಾಡಿದ್ದಾರೆ ಗಣೇಶ್. ೧೨ ಎಕರೆ ಗದ್ದೆಯಲ್ಲಿ ೧೬೦ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಭತ್ತದ ಬೆಳೆ ಬೈ ಹುಲ್ಲನ್ನೂ ಸೇರಿಸಿದರೆ ಶೇಕಡಾ ಮೂವತ್ತರಷ್ಟು ಲಾಭ ಮಾಡಬಹುದು ಎನ್ನುವುದು ಗಣೇಶ್ ಅಭಿಪ್ರಾಯ.
ಬಯೋ ಡೈಜೆಸ್ಟರ್: ಗೊಬ್ಬರ ಸಾಗಾಟ ತೋಟಕ್ಕೆ ಕಷ್ಟ ಹಾಗೂ ಹೆಚ್ಚಿನ ಕೂಲಿಯನ್ನು ಬೇಡುತ್ತದೆ ಎನ್ನುವುದು ಅರಿವಾದಾಗ ಮೊರೆಹೋಗಿದ್ದು ಬಯೋ ಡೈಜೆಸ್ಟರ್ ಘಟಕ. ತೋಟದ ಎಲ್ಲಾ ಗಿಡಗಳಿಗೆ ನೀರಿನ ಮೂಲಕ ಗೊಬ್ಬರ ಸೇರುವುದರಿಂದ ಅತ್ಯಂತ ಪರಿಣಾಮಕಾರಿ. ತಾನು ಕೃಷಿ ಆರಂಭಿಸಿದ ಸಮಯದಲ್ಲಿ ೨-೩ ಸಾವಿರ ದಷ್ಟು ಸಿಗುತ್ತಿದ್ದ ತೆಂಗಿನಕಾಯಿ ಈಗ ೧೨-೧೩ ಸಾವಿರಕ್ಕೇರಿದೆ ಎನ್ನುತ್ತಾರೆ.


ಕೈಮಗ್ಗ ಘಟಕ: ಹೆಗ್ಗೋಡಿನ ಚರಕದ ಮಾದರಿಯಲ್ಲಿ ಸಣ್ಣದಾದ ಕೈಮಗ್ಗದ ಘಟಕ ನಡೆಸುತ್ತಿರುವ ಗಣೇಶ್ ಅದು ಖುಷಿಗೆ ಎನ್ನುತ್ತಾರೆ. ಕೃಷಿಯ ಜತೆ ಖುಷಿಯೂ ಬೇಕು ಆರ್ಥಿಕವಾಗಿ ಮಗ್ಗಗಳು ಲಾಭದಾಯಕವಲ್ಲ ಆದರೆ ನಾಲ್ಕಾರು ಜನಕ್ಕೆ ಉದ್ಯೋಗ ನೀಡಿದ ಖುಷಿ ಹಾಗೂ ಅವಶ್ಯಕವಾದ ಬಟ್ಟೆಯನ್ನು ನಾವು ಸಮಾಜಕ್ಕೆ ನೀಡುತ್ತಿರುವ ನೆಮ್ಮದಿಗಾಗಿ ಚರಕದ ಸಹಯೋಗದೊಂದಿಗೆ ಕೈಮಗ್ಗದ ಘಟಕ ಸ್ಥಾಪಿಸಿದ್ದೇನೆ ಎನ್ನುತ್ತಾರೆ.
ಮಂಗಗಳ ಕಾಟಕ್ಕೆ ನಾಯಿಯೇ ಮದ್ದು: ಮಂಗಗಳು ಹೇರಳ ಅಡಿಕೆಚಿಗುರು ಕಾಯಿಗಳನ್ನು ತಿಂದು ಅಪಾರ ಹಾನಿ ಮಾಡುತ್ತಿದ್ದವು. ಕಾವಲಿಗೆ ಜನರನ್ನು ಇಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ, ಆಗ ಸಿಕ್ಕಿದ್ದು ಈ ಉಪಾಯ. ಹಾದಿಬದಿಯಲ್ಲಿರುವ ಹತ್ತೆಂಟು ಬೀದಿನಾಯಿಯನ್ನು ಸಾಕಿದ್ದಾರೆ. ಸಾಕುವ ಖರ್ಚೂ ಕಡಿಮೆ ಮಂಗಗಳ ಕಾಟದಿಂದಲೂ ಮುಕ್ತಿ ಎನ್ನುವುದು ಗಣೇಶರ ಅನುಭವದ ಮಾತುಗಳು.
ಅಮೆರಿಕಾದ ನಗರದಲ್ಲೋ ಜಪಾನ್ ನ ಏರ್ ಕಂಡೀಷನ್ ರೂಂ ನಲ್ಲೋ ಕುಳಿತು ಉದ್ಯೋಗ ಮಾಡಬಹುದಾಗಿದ್ದ ಗಣೇಶ್ ಸ್ವಂತ ಮಣ್ಣಿನ ಆಸಕ್ತಿಯಿಂದ ಉತ್ತಮ ಕೃಷಿಕರೆನಿಸಿಕೊಂಡು ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಮಾತಿಗೆ ಅರ್ಥವಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಕೃಷಿಯನ್ನೂ ಉದ್ಯಮವೆಂದು ಪರಿಗಣಿಸಿದರೆ ಅಷ್ಟೇ ಆಸ್ಥೆಯಿಂದ ಲೆಕ್ಕಾಚಾರಕ್ಕಿಳಿದು ಕೆಲಸ ಮಾಡಿ ತೊಡಗಿಸಿಕೊಂಡಲ್ಲಿ ಮಣ್ಣು ಕೈಬಿಡದು ಎನ್ನುವುದು ಗಣೇಶ್ ರ ಅನುಭವದಿಂದ ಬಂದ ಮಾತುಗಳು.
ಫೋನ್:  08183207625  -೦೮೧೮೩ ೨೦೭೬೨೫
ಮೊಬೈಲ್: 9449328304 -೯೪೪೯೩೨೮೩೦೪
(ವಿಜಯವಾಣಿಯಲ್ಲಿ ಪ್ರಕಟಿತ)

Saturday, December 22, 2012

ಮಲ್ಲು ಎಂಬ ಜಾತಿಯಲ್ಲದ ಜಾತಿ ನಾಯಿ

ಅತ್ತ ಜಾತಿಯದೇ ಅಲ್ಲ ಹಾಗಂತ ಕಂತ್ರಿಯಂತೂ ಅಲ್ಲವೇ ಅಲ್ಲ ಎಂಬಂಥಹ ಜಾತಿಗೆ ಸೇರಿದ್ದು ನಮ್ಮ ಮನೆಯ ನಾಯಿ ಮಲ್ಲು. ಅಯ್ಯ ಅದೇಂತಾ ಹೆಸರು ಮಲ್ಲು ಅಂತ ನಾಯಿಯದು ಅಂತ ನಿಮಗೆ ಅನ್ನಿಸಬಹುದು. ನಮ್ಮ ಮನೆಯಲ್ಲಿ ನಾವು ಎಲ್ಲಿಂದ ಯಾರ ಮನೆಯಿಂದ ಪ್ರಾಣಿಗಳನ್ನು ತಂದಿರುತ್ತೇವೆ ಎನ್ನುವುದರ ಮೇಲೆ ಅದರ ಹೆಸರು ನಿಕ್ಕಿಯಾಗುವ ಸಂಪ್ರದಾಯ ಲಾಗಾಯ್ತಿನಿಂದಲೂ. ಮಲ್ಲಕ್ಕಿ ಶ್ರೀಪಾದಣ್ಣನ ಮನೆಯಿಂದ ತಂದಂತಹ ನಾಯಿ ಇದಾದ್ದರಿಂದ ಶ್ರೀಪಾದ ಎಂದು ಹೆಸರಿಟ್ಟರೆ ಒದೆ ತಿನ್ನಬೇಕಾದೀತೆಂದು ಮಲ್ಲಕ್ಕಿ ಹೆಸರನ್ನು ಕತ್ತರಿಸಿ ಮಲ್ಲು ಎಂದು ನಾಮಕರಣ ಮಾಡಲಾಗಿದೆ. ಇಂತಿಪ್ಪ ಈ ನಮ್ಮ ಮಲ್ಲು ಈಸ ರೈಸ್ ಗಿರಾಕಿ. ಬಹುಶಃ ಒರಿಜಿನಲ್ ಈಸ ಕೂಡ ಇಷ್ಟು ರೈಸ್ ಆಗುವುದನ್ನು ನಾನು ನೊಡಿಲ್ಲ( ಈಸ ಪದ ಗೊತ್ತಿಲ್ಲದಿದ್ದರೆ ನನ್ನ ಯಾವುದೋ ಹಿಂದಿನ ಬ್ಲಾಗ್ ಓದಬೇಕು, ಇರಲಿ ಈಸ ಎಂದರೆ ಮುದ್ದು ಅಂತ) ನಮ್ಮ ಮಲ್ಲು ಮನುಷ್ಯರೊಡನೆ ಸ್ನೇಹಜೀವಿ, ಜಾನುವಾರು ಪ್ರಾಣಿಗಳನ್ನು ಕಂಡರೆ ಆಗದು. ವಾರಕ್ಕೊಂದೆರಡು ಹಾವುಗಳನ್ನು ಇದು ಸಾಯಿಸಿಬಿಡುತ್ತದೆ. ಒಂಥರಾ ಬೆಸರದ ಸಂಗತಿಯಾದರೂ ಅದು ಬಿಡದು ತನ್ನ ಚಟವನ್ನು ನಾವು ಬಿಡಲಾರೆವು ಮಲ್ಲುವನ್ನು. ಈಗ ಇದ್ದಕ್ಕಿದಂತೆ ಮಲ್ಲುವಿನ ಕುರಿತು ಯಾಕೆ ಬರೆದೆ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮಲ್ಲುವಿಗೆ ತನ್ನ ಮುಖವನ್ನು ನಿಮಗೆ ತೊರಿಸುವ ಅದೃಷ್ಟ ಮಜ ಮಾಡ್ಲಿ ಬಿಡಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

ಯಾರು ಎಷ್ಟೇ ಹಾರಾಡಿದರೂ  ಕೂಗಾಡಿದರೂ ಒಂದಲ್ಲ ಒಮ್ದು ದಿನ ಈ ದೇಹವನ್ನು ಬಿಡಲೇಬೇಕು. ಗೊತ್ತಿಲ್ಲದ ಗುರಿಯಿಲ್ಲದ ಪಯಣ ಅದು. ಹುಟ್ಟಿನ ಮೊದಲು ಸತ್ತ ನಂತರ ದ ವ್ಯವಹಾರಗಳು ಏನು ಎತ್ತ ಎಂಬುದು ಎಲ್ಲವೂ ಕಾಲ್ಪನಿಕವೇ. ಶಾಸ್ತ್ರ ಪುರಾಣ ಏನೇ ಹೇಳಲಿ ಅದು ಮತ್ತೆ ಮನುಷ್ಯ ಸೃಷ್ಟಿಯೇ. ಮತ್ತು ನಂಬಿಕೆಯ ಅಧಾರದ ಮೇಲೆ ನಿಂತಿದೆ. ಬಿಡಿ ಅವುಗಳನ್ನೆಲ್ಲಾ ಅದರ ಪಾಡಿಗೆ ಬಿಟ್ಟು ನಾವೂ ಒಂದು ಸುಲಭ ಉಪಾಯದ ಮೂಲಕ ಡೆತ್ ಅನುಭವ ಪಡೆದುಕೊಳ್ಲೋಣ. ಹೀಗೊಂದು ಸುಲಭ ನಂಬಿಕೆಯ ವ್ಯಾಯಾಮ ನಿಮಗೆ ನಿಮ್ಮಲ್ಲಿ ಅಡಗಿರುವ ಜೀವ ಭಯ, ಟೆನ್ಷನ್, ಖಾಯಿಲೆ ಭಯ ಹೀಗೆ ಎನೆಲ್ಲಾ ಕಪೋಲಕಲ್ಪಿತಗಳು ಇರುತ್ತವೆಯೋ ಅವನ್ನೆಲ್ಲಾ ಓಡಿಸಿ ವಾಸ್ತವಗಳನ್ನು ಮಾತ್ರಾ ನಿಮ್ಮ ಮಿದುಳು ಯೋಚಿಸುವಂತೆ ಮಾಡುತ್ತದೆ. ಅಷ್ಟಾದ ಮೇಲೆ ದಿನಪೂರ್ತಿ ಜಿಂಗಲಾಲ.
ನಿಮಗೀಗ ನಡು ವಯಸ್ಸು ಅಂತಿಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಒಂದೆರಡು ಸಾವಿನ ಮನೆಯನ್ನು ನೋಡಿರುತ್ತಿರಿ. ಅವೆಲ್ಲಾ ನೆನಪಿರುತ್ತದೆ. ಈಗ ಅದನ್ನು ನೀವು ಒಮ್ಮೆ ಅನುಭವಿಸಿ.  ಆರಾಮವಗಿ ಅಂಗಾತ ಮಲಗಿ. ಆಳವಾದ ಉಸಿರೆಳೆದುಕೊಳ್ಳಿ. ಕಾಲಿನ ಕೊಟ್ಟ ಕೊನೆಯ ಬೆರಳನ್ನು ನೆನಪಿಸಿಕೊಳ್ಳಿ. ನಂತರ ಪಕ್ಕದ್ದು ಆಮೇಲೆ ಅಂಗಾಲು ನಂತರ ಕಾಲು ಹಾಗೆಯೇ ಮೇಲೆ ತೊಡೆ ನಂತರ .....  .... ಮತ್ತೆ ಹೊಟ್ಟೆ ಹೃದಯ ಕುತ್ತಿಗೆ ಮಿದುಳಿನೆಲ್ಲಾ ನಿಮ್ಮ ಮನಸ್ಸನ್ನು ಸುತ್ಟಾಡಿಸಿ ಕುಂಕುಮ ಪಾಯಿಂಟ್( ಮೂಗಿನ ಮೇಲೆ) ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅಲ್ಲಿಗೆ ನಿಮ್ಮ ಮನಸ್ಸು ಬಂತು ಅಂತಾದರೆ ದೇಹವನ್ನು ಮರೆತಿರುತ್ತದೆ. ಮರೆತಿಲ್ಲದಿದ್ದರೂ ಪರವಾಗಿಲ್ಲ ಒತ್ತಾಯಪೂರ್ವಕವಾಗಿ ನೆನಪಿಸಿಕೊಳ್ಳಬೇಡಿ. ನೆನಪಿಸಿಕೊಂಡರೂ ಪರವಾಗಿಲ್ಲ ಯಾವುದು ನೆನಪಾಯಿತೋ ಮತ್ತೆ ಅಲ್ಲಿಂದ ಮುಂದುವರೆಸಿ ಅಂತಿಮವಾಗಿ ಕುಂಕುಮ ಪಾಯಿಂಟ್ ಗೆ ಬಂದಮೇಲೆ ಕಲ್ಪಿಸಿಕೊಳ್ಳಿ "ನನ್ನ ದೇಹ ಸಾವನ್ನು ಹೊಂದಿದೆ" ನಂತರ ನಿಮ್ಮ ಸಾವು ನಿಮ್ಮ ಹತ್ತಿರವಿದ್ದವರಿಗೆ ತಿಳಿದಂತೆ ಅದರ ಪರಿಣಾಮ ನಿಮ್ಮ ಮಿದುಳಿಗೆ ತೋಚಿದಂತೆ ಕಲ್ಪಿಸುತ್ತಾ ಸಾಗಿ. ನಿಮ್ಮ ದೇಹದ ಪಯಣ ಚಿತಾಗಾರದವರೆಗೂ ಸಾಗಲಿ ಅಲ್ಲಿ ಭಸ್ಮವಾಗಲಿ. ಇವೆಲ್ಲಾ ಅನುಭವ ಕಲ್ಪನೆಗಳ ಮೇಲಷ್ತೇ ಸಾಗುವುದರಿಂದ ನಿಮ್ಮ  ಮಿದುಳು ತಮಾಷೆಯಾಗಿ ಒಂದು ಆಟದಂತೆ ಇವನ್ನೆಲ್ಲಾ ಗ್ರಹಿಸುತ್ತದೆ. ಸರಿ ಸುಮಾರು ಅರ್ದ ಗಂಟೆಯ ನಂತರ ಕಣ್ಣು ಬಿಡಿ. ನಿಮ್ಮ ಮನಸ್ಸು ಉಲ್ಲಾಸದತ್ತ ಸಾಗುತ್ತದೆ. ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ತನ್ನಷ್ಟಕ್ಕೆ ಗೋಚರಿಸುತ್ತದೆ.
ಇಂತಿ ನಿಮ್ಮ -  ಶಾಸ್ರ ತಿಳಿಯದ ಶಾಸ್ತ್ರಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -