Thursday, September 11, 2008

ಯಶಸ್ಸಿನ ಹಿಂದಿನ ಕೈಗಳು

ಖತ್ರಿನಾ ಕೈಪ್ ಬಿಪಾಶಾ ಬಸು ಸಾಯಿಫ್ ಆಲಿ ಖಾನ್ ಸೂಪರ್ ಹಾಡಿಗೆ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾರೆ . ಪ್ರೇಕ್ಷಕರಿಗೆ ಖುಷಿಯೋ ಖುಷಿ. ವಿಶ್ವೇಶ್ವರ ಭಟ್, ನಾಗೇಶ ಹೆಗಡೆ, ಕುಲದೀಪ್ ನಯ್ಯರ್, ಶ್ರೀವತ್ಸ ಜೋಷಿ, ಹಾಲ್ದೋಡ್ದೇರಿ, ಪ್ರತಾಪ್ ಸಿಂಹ ಚೆಂದಾಗಿ ಅಂಕಣ ಬರೆಯುತ್ತಾರೆ ಓದುಗರಿಗೆ ಖುಷಿಯೋ ಖುಷಿ. ಸುದೀಪ್ ಉಪೇಂದ್ರ ಜಗ್ಗೇಶ್ ರಮ್ಯಾ ರಮೇಶ್ ದೊಡ್ಡಣ್ಣ ಪರದೆಯ ಮೇಲೆ ಸೂಪರ್ ಡೈಲಾಗ್ ಹೊಡೆಯುತ್ತಾರೆ ವೀಕ್ಷಕ ಖುಷಿಯೋ ಖುಷಿ. ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಬೆಳ್ಳನೆಯ ರೈಸ್ ಕೆಂಪನೆಯ ಸಾಂಬಾರ್ ವಾವ್ ಊಟಕ್ಕೆ ಕುಳಿತವನ ಬಾಯಲ್ಲಿ ಹೋಟೆಲ್ಲಿನ ಗುಣಗಾನ. ಈ ಟಿವಿ ಯ ಸವಿ ರುಚಿಯ ಕಾರ್ಯಕ್ರಮದಲ್ಲಿ ಗೃಹಿಣಿ ಚಂದಾಗಿ ಡ್ರೆಸ್ ಮಾಡಿಕೊಂಡು ಆಶೀರ್ವಾದ ಗೋದಿ ಹಿಟ್ಟು....! ಬಳಸಿ ಕಾಶ್ಮೀರಿ ಪಲಾವ್ ಮಾಡುವುದರ ಬಗ್ಗೆ ಹೇಳುತ್ತಿದ್ದಾಳೆ. ನಿರೂಪಕಿ ಧನ್ಯವಾದಗಳ ಸುರಿಮಳೆಯನ್ನು ಅರ್ಪಿಸುತ್ತಿದ್ದಾಳೆ. ಸಂಜೆ ಮುಂದೆ ಬೇಕರಿಯ ಬಾಗಿಲಲ್ಲಿ ನಿಂತು ವಾವ್ ಎಂಥಾ ಬಾದಾಮಿ ಹಾಲು ಕೊಡ್ತಾನೆ ಇವನು ಎನ್ನುತ್ತಲೋ, ಅಥವಾ ಟಿವಿ ನೈನ್ ನ ರಂಗನಾಥ್ ಭಾರದ್ವಾಜ್ "ಈಗೇನೋ ದೊಂಬಿ ಕಡಿಮೆಯಾಗಿದೆ ಸಾಯಂಕಾಲ ಮತ್ತೆ ಜಾಸ್ತಿಯಾಗಬಹುದಾ ಅಂತ? " ಎಂದು ಕೋಮುಗಲಭೆಯ ನಡುವೆ ಕ್ಯಾಮೆರಾ ಇಟ್ಟುಕೊಂಡು ಕುಳಿತ ವರದಿಗಾರನ ಬಳಿ ಸ್ಟೈಲಾಗಿ. ಪ್ರೇಕ್ಷಕ ರಂಗನಾಥ್ ಕೇಳುವ ಪ್ರಶ್ನೆಗೆ ಖುಷಿಯೋ ಖುಷಿ , ವರಾತ ವನ್ನು ಹೇಳಲು ಒಂದು ಬ್ಲಾಗ್ ನೋಡಿದಕೂಡಲೆ ವಾಹ್ ಪರವಾಗಿಲ್ಲ ಎನ್ನುವ ಓದುಗರು ಖುಷ್ ಇರಲಿ ಇವೆಲ್ಲಾ ಮುಂಚೂಣಿಯಲ್ಲಿ ನಿಂತವರ ಕತೆಯಾಯಿತು.
ಒಂದು ಸಾರಿಯಾದರೂ ನಾವು ಖತ್ರಿನಾ ಹಿಂದೆ ಅವಳಿಗಿಂತ ಚೆಂದಾಗಿ ನರ್ತಿಸುವ ಸಹನರ್ತಿಕಿಯರ ಬಗ್ಗೆಯೋ, ಅಂಕಣಕಾರರ ಬರಹಗಳನ್ನು ತಲುಪಿಸುವ ಪೇಪರ್ ಬಾಯ್ ಬಗ್ಗೆಯೋ, ವಾಚಕರ ವಾಣಿಯಲ್ಲಿ ಸೀಮಿತ ಜಾಗದಲ್ಲಿ ಸೂಪರ್ ಅಂಕಣಕಾರರಿಗಿಂತ ಚೆನ್ನಾಗಿ ಬರೆಯುವ ಅನಾಮಿಕ ಬರಹಗಾರನ ಬಗ್ಗೆಯೋ, ಜಗ್ಗೇಶ್ ನ ಸೂಪರ್ ಡೈಲಾಗ್ ಬರೆದವನ ಬಗ್ಗೆಯೋ, ಮೊಳಕಾಲುದ್ದ ಕೆಸರಿನಲ್ಲಿ ಮುಳುಗಿಕೊಂಡು ಬೆಳ್ಳನೆಯ ಅಕ್ಕಿ ಬೆಳೆದ ಭತ್ತದ ರೈತನ ಬಗ್ಗೆಯೋ. ಕಾಶ್ಮೀರಿ ಪಲಾವ್ ಗೆ ಸಕಲ ಸಾಂಬಾರು ಒದಗಿಸಿದ ತೋಟಗಾರಿಕಾ ಕೃಷಿಕನ ಬಗ್ಗೆಯೋ, ಬೇಕರಿಯವನ ಬಾದಾಮಿ ಹಾಲಿಗೆ ಗಬ್ಬು ನಾಥದ ಸಗಣಿ ಮೈಗೆ ಹಚ್ಚಿಕೊಂಡು ಹಾಲು ಪೂರೈಸುತ್ತಿರುವ ಗೌಳಿಯ ಬಗ್ಗೆಯೂ ಅಥವಾ ಗಲಭೆಯ ನಡುವೆ ಕ್ಯಾಮೆರಾ ಇಟ್ಟುಕೊಂಡು ಎಡಗೈಲಿ ಜೀವ ಹಿಡಿದುಕೊಂಡಿರುವ ವರದಿಗಾರನಬಗ್ಗೆಯೋ , ಅಥವಾ ಬ್ಲಾಗ್ ಓದಿ ಅದಕ್ಕಿಂತ ಚೆನ್ನಾಗಿ ಎರಡು ಸಾಲಿನಲ್ಲಿ ಶ್ರದ್ಧೆಯಿಂದ ಕಾಮೆಂಟ್ ಬರೆದು ಪೋಸ್ಟ್ ಮಾಡುತ್ತಾರಲ್ಲ ಅವರ ಬಗ್ಗೆ ನಾವು ಯೋಚಿಸುವುದೇ ಇಲ್ಲ.
ಮುಂಚೂಣಿಯಲ್ಲಿ ನಿಂತವರ ಗುಣಗಾನ ಅವರಿಗೆ ಎಲ್ಲ ಸಲ್ಲುತ್ತದೆ. ಆದರೆ ನಿಜವಾದ ವ್ಯಕ್ತಿಗಳು ಅವರ ಹಿಂದಿರುವವರು. ಹಾಗಂತ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಮುಂದೆ ತರುವುದು ಅಸಾದ್ಯದ ಮಾತು ಎನ್ನುವುದಂತೂ ನೂರಕ್ಕೆ ನೂರು ಸತ್ಯದ ಮಾತು. ಆದರೆ ಮುಂದಿದ್ದವರೇ ಸತ್ಯ ಅಂತ ತಿಳಿದುಕೊಂಡು ಬಿಡುವುದು ಅಷ್ಟೇ ತಪ್ಪಿನ ಮಾತು. ವಾಸ್ತವವೆಂದರೆ ದೊಡ್ದವರು ಯಾರು ಗೊತ್ತಾ..? ಅಜ್ಞಾತ ವ್ಯಕ್ತಿಗಳು ಅವರು ಸರ್ವಜ್ಞನಂತೆ. ಯಾರು ನೋಡಲಿ ಬಿಡಲಿ ಯಾರು ಕೇಳಲಿ ಬಿಡಲಿ ತಮ್ಮ ಪಾಡಿಗೆ ತಾವು ಭತ್ತ ಬೆಳೆಯುತ್ತಲೋ ಬಟ್ಟೆ ನೆಯ್ಯುತ್ತಲೋ ಅವರ ಜೀವನ ಮುಗಿದಿರುತ್ತದೆ. ಮುಂಚೂಣಿಯಲ್ಲಿರುವವರು ಅವರ ಸಾರವನ್ನು ಬಸಿದುಕೊಂಡು ತಮ್ಮ ಲೇಬಲ್ ಅಂಟಿಸಿಕೊಂಡಿರುತ್ತಾರೆ. ಅದೊಂದು ಯೋಗಾವಳಿ ಅಥವಾ ಅವಕಾಶ. ಆ ಅವಕಾಶ ಎಲ್ಲರಿಗೂ ಹುಡುಕಿಕೊಂಡು ಬರುವುದಿಲ್ಲ. ಹುಡಿಕಿ ಹೊರಟವರಿಗೆ ಕೆಲವೊಮ್ಮೆ ದಕ್ಕುತ್ತದೆ ಹಲವೊಮ್ಮೆ ದಕ್ಕದು. ಆದರೆ ಹಠ ಬಿದ್ದರೆ ಒಂದಲ್ಲಾ ಒಂದು ದಿನ ಸಾದ್ಯ.

3 comments:

ವಿ.ರಾ.ಹೆ. said...

ಹ್ಮ್.. ಇದುವೇ ಜೀವನ..

ಯಜ್ಞೇಶ್ (yajnesh) said...

ರಾಘಣ್ಣ,

ಬಹಳ ದಿನಗಳ ನಂತ ಬ್ಲಾಗನ್ನು ನೋಡ್ತಾಯಿದ್ದಿ. ತುಂಬಾ ಸುಂದರವಾದ ಲೇಖನಗಳು ಬೈಂದು.

ಈ ಲೇಖನ ತುಂಬಾ ಚೆನ್ನಾಗಿದ್ದು. ತಾಜ್ ಮಹಲ್ ಕಟ್ಟಿದ್ದು ಯಾರು ಅಂದರೆ ಯಾರಿಗೂ ವರ್ಷಗಟ್ಟಲೇ ಕೆಲಸ ಮಾಡಿದವರ ನೆನಪಾಗುವುದಿಲ್ಲ. ಅದನ್ನು ಕಟ್ಟಿಸಿದವನ ನೆನಪಾಗತ್ತೆ.

ಇದುವೇ ಜೀವನ!

Unknown said...

adu nijave...yaavaagalu paradhe mele ippa janakke prashasthi puraskaara jaasthi..parade hinde patta nijavaagi shrama pattavarige yanthu ille...'baddha'chanaagiddu idu