Thursday, May 7, 2009

ಚಿನ್ನ ಚಿನ್ನ ಆಸೈ



ಕಳೆದ ಶುಕ್ರವಾರ ಒಂದು ಜೋಡಿ ನಮ್ಮ ಹೋಂ ಸ್ಟೆ ಗೆ ಬಂದಿದ್ದರು. ಬೆಂಗಳೂರಿನ ಜಗನ್ನಾತ್ ಹಾಗೂ ಚೈತ್ರಾ ದಂಪತಿಗಳು ಎರಡು ದಿನ ಉಳಿದರು. ನಮ್ಮದು ಹೇಳಿಕೇಳಿ ಪರಿಸರ ಪ್ರೇಮಿ ಹೋಂ ಸ್ಟೆ. ಸಣ್ಣ ಸಣ್ಣ ಸಂಗತಿಗಳನ್ನು ಪ್ರಕೃತಿಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಇಕೋಟೂರಿಸಂ ಗೆ ಮೊರೆಹೋದವರು ನಾವು. ಹಾಗಾಗಿ ನಮ್ಮಲ್ಲಿ ಬರುವ ಪ್ರವಾಸಿಗರು ಕಾಡುಪ್ರಿಯರು-ಹಕ್ಕಿಗಳ ಕಲರವ ಕೇಳುವವರು-ನೀರಿನ ಜುಳು ಜುಳು ಆಲಿಸುವವರು ಆಗಿರುತ್ತಾರೆ. ಅಂಥಹ ಆಸಕ್ತರ ಒಡನಾಟ ನಮಗೂ ಉಮೇದು ಹೆಚ್ಚಿಸುತ್ತದೆ. ಅವರನ್ನು ಕರೆದುಕೊಂಡು ಕಲ್ಲುಸಂಕ ತೊರಿಸಿಕೊಂಡು (ಡಿಟೈಲ್ ಫೋಟೋಕ್ಕೆ http://recipesforthelife.blogspot.com/ ನೋಡಿ) ಜೋಗಿನಮಠ ಕಾಡಿಗೆ ಹೋದೆ. ಬೆತ್ತ ನಿಷಣಿ(ದಾಲ್ಚಿನ್ನಿಯ ಕಾಡು ವೆರೈಟಿ) ಕಾಡು ಮೆಣಸು, ಕೋಕಂ(ಮುರುಗಲು) ಚದುರಂಗ, ಮುಳ್ಳಣ್ಣು ಹೀಗೆ ಹತ್ತಾರು ಕಾಡುಫಲಗಳನ್ನು ತಿನ್ನುತ್ತಾ ಸಾಗಿತು ನಮ್ಮ ಕಾಡುಪಯಣ. ಹಾಗೆ ಹೋಗುತ್ತಿರುವಾಗ ನನ್ನ ಬಾಲ್ಯಕ್ಕೆ ಜಾರಿದೆ.

ಬೇಸಿಗೆ ರಜವೆಂದರೆ ನಮಗೆ ಹೀಗೆ ಕಾಡುಸುತ್ತುವುದು ಮುಖ್ಯ ಕಾಯಕ. ಆಗ ಈಗಿನಂತೆ ಬೇಸಿಗೆ ಶಿಬಿರ ಇರಲಿಲ್ಲ. ಬೆಳಿಗೆ ಮನೆಯಲ್ಲಿ ತಿಂಡಿತಿಂದು ಗುಡ್ಡ ಹತ್ತಿದರೆ ಹಲಗೆ ಹಣ್ಣು-ಬಿಕ್ಕೆಹಣ್ಣು-ಕೌಳಿ ಹಣ್ಣು- ಮುಂತಾದ ಹಲವಾರು ಜಾತಿಯ ನಾನಾ ರುಚಿಯ ಹಣ್ಣುಗಳನ್ನು ತಿಂದು ಮಟಮಟ ಮಧ್ಯಾಹ್ನ ಮನೆ ಸೇರುವುದು ಎರಡು ತಿಂಗಳ ನಿತ್ಯ ಕಾಯಕ. ಅದು ಮನೆಯಲ್ಲಿ ಇರಲಿ ಅಥವಾ ನೆಂಟರ ಮನೆಗೆ ಹೋಗಲಿ (ನಾವು ಹೋಗುವ ಅಥವಾ ನಮಗಿದ್ದ ನೆಂಟರ ಮನೆ ಹಳ್ಳಿಯದ್ದೇ) ಇದೇ ಮಾಮೂಲು ಕಾಯಕ. ಹಾಗಿದ್ದ ಒಂದು ದಿನ ಗುಡ್ಡ ಹತ್ತಿ ಕಾಡು ಸೇರಿತು ನಮ್ಮ ತಂಡ. ನಮ್ಮ ತಂಡ ಅಂದರೆ ಅದು ತೀರಾ ದೊಡ್ಡದಲ್ಲ ಮೂರೇ ಮೂರು ಜನ. ಹಾಗೆ ಹೊರಟ ಮೂರು ಜನರ ತಂಡದಲ್ಲಿ ಒಬ್ಬಾತನಿಗೆ ಅದೇನು ಐಡಿಯಾ ಬಂದಿತ್ತೋ ಏನೋ ಬಕಣ(ಜೇಬು)ದಲ್ಲಿ ಮನೆಯಿಂದ ಬೆಂಕಿಪೆಟ್ಟಿಗೆ ಇಟ್ಟುಕೊಂಡು ಬಂದಿದ್ದ. ಮಧ್ಯಾಹ್ನ ಹನ್ನೊಂದರ ಸುಮಾರಿಗೆ ಜೇಬಿನಿಂದ ಹಗೂರ ಬೆಂಕಿಪೆಟ್ಟಿಗೆ ತೆಗೆದ ಆತ ಈಗ ನಾವು ಇಲ್ಲೇ ಗೇರು ಬೀಜ ಸುಟ್ಟು ತಿನ್ನೋಣವಾ? ಎಂದ. ನಮಗಿಬ್ಬರಿಗೆ ಅದು ಅಚ್ಚರಿ. ಹೇಗೆ ಬೆಂಕಿ ಮಾಡುವುದು? ತಗಡು ಎಲ್ಲಿ? ಮುಂತಾದ ಪ್ರಶ್ನೆ ಹುಟ್ಟಿತು. ಅದಕ್ಕೆ ಅವನೇ ತಾನೇ ತಗಡು ಬೇಡ ಒಂದಿಷ್ಟು ಜಾಗ ಚೊಕ್ಕ ಮಾಡಿಕೊಳ್ಳೋಣ ಅಲ್ಲಿ ಗೇರುಬೀಜ ಹರಡೋಣ ಬೆಂಕಿಪೊಟ್ಟಣ್ನ ಹೇಗೂ ಇದೆ ಬೆಂಕಿ ಹಚ್ಚೋಣ ಎಂದ. ಸರಿ ಅವನ ಯಜಮಾನಿಕೆಯಲ್ಲಿ ಎರಡು ಕಲ್ಲು ಹುಡುಕಿ ಅದರ ನಡುವೆ ಜಾಗ ಮಾಡಿ ಇಟ್ಟು ನಮ್ಮ ಜೇಬಿನಲ್ಲಿ ಸಂಗ್ರಹವಾಗಿದ್ದ ಗೇರುಬೀಜ ಹರಡಿ ಬೆಂಕಿ ಕಡ್ಡಿ ಗೀರಿಯಾಯಿತು. ಇಲ್ಲ ಅದೇನು ಪೆಟ್ರೋಲೇ ಬಗ್ಗಂತ ಹತ್ತಲು?. ನಮ್ಮಲ್ಲಿದ್ದ ಬೆಂಕಿಕಡ್ಡಿ ಸಂಗ್ರಹ ಕಡಿಮೆಯಾಗುತ್ತಾ ಬಂತೇ ಹೊರತು ಬೆಂಕಿ ಹತ್ತಲಿಲ್ಲ. ಅಂತಿಮವಾಗಿ ಆತ ಒಣಗಿದ ಕರಡ ಕಿತ್ತು ತಂದು ಗುಡ್ಡೆ ಹಾಕಿ ಅದರ ರಾಶಿಗೆ ಬೆಂಕಿ ಇಟ್ಟು ಅದರ ಮೇಲೆ ಗೇರುಬೀಜ ಹಾಕಿದ. ಬೆಂಕಿಯ ಮೇಲೆ ಗೇರುಬೀಜ ಬಿದ್ದ ಕೆಲವೇ ಕ್ಷಣಗಳಲ್ಲಿ ಟಸ್ ಪುಸ್ ಅಂತ ಗೇರೆಣ್ಣೆ ಬೀಜದಿಂದ ಹಾರತೊಡಗಿತು. ಗೇರೆಣ್ಣೆಯ ಜತೆ ಬೆಂಕಿಯೂ ಅತ್ತ ಇತ್ತ ಹಾರಿತು. ಇನ್ನೇನು ನಾವು ಬೆಂಕಿ ಆರಿಸಿ ಗೇರುಬೀಜ ಬಾಚಿಕೊಳ್ಳಬೇಕು ಅನ್ನುವಷ್ಟರಲ್ಲಿ ಕರಡ(ಒಣ ಹುಲ್ಲು) ಕ್ಕೆ ಬೆಂಕಿ ವ್ಯಾಪಿಸಿತು. ನಾವು ನೋಡನೋಡುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬೆಂಕಿ ಕಾಡ್ಗಿಚ್ಚಾಗಿ ರುದ್ರ ನರ್ತನ ಪ್ರಾರಂಬಿಸಿತು. ನಾವು ಮೂವರು ದಿಕ್ಕು ತೋಚದೆ ಅಲ್ಲಿಂದ ಓಡು.
ಮಾರನೇ ದಿವಸ ದೊಡ್ಡವರು "ಯಾರೋ ದಾರಿಹೋಕರು ಬೀಡಿ ಸೇದಿ ಗುಡ್ಡಕ್ಕೆ ಬೆಂಕಿ ಹಾಕಿದಾರೆ" ಅಂತ ಹೇಳುತ್ತಿದ್ದರು. ನಾವು ಮಾತ್ರಾ ಗಪ್ ಚುಪ್....!.
ಅಂದು ಹಾಗೆ ಗುಡ್ಡ ಕಾಡು ಸುತ್ತಿದ್ದು ಇಂದು ಅಲ್ಪ ಸ್ವಲ್ಪ ಉಪಯೋಗಕ್ಕೆ ಬರುತ್ತಿದೆ. ಸವಿ ಸವಿ ನೆನಪು ಅಂದು ಗಾಬರಿ ಮೂಡಿಸಿದ್ದರೂ ಇಂದು ಹಂಚಿಕೊಳ್ಳಲು ಚಂದ. ಹಳೆ ನೆನಪಿಗೆ ಜಾರುತ್ತಾ ಹೊಸ ದಂಪತಿಗಳಿಗೆ ಕಾಡಿನ ಒಂದೊಂದೆ ಗಿಡಗಳ ಪರಿಚಯ ಮಾಡಿಕೊಡುತ್ತಾ ಸಾಗಿದೆ. ಅವರು ಅಚ್ಚರಿಯಿಂದ ವೌವ್ ವಾಹ್ ಹೌದಾ ಎಂದಾಗ ನಾನೂ ಪುಳಕಿತನಾಗುತ್ತಿದ್ದೆ.
ಎರಡು ದಿನ ಅವರೂ ಪರಿಸರದ ಕಲರವ ಅನುಭವಿಸಿ ಗೂಡು ಸೇರಿದರು. ನಾನು ಮತ್ತೊಂದು ಪ್ರಕೃತಿ ಪ್ರೇಮಿಗಳ ನಿರೀಕ್ಷೆಯಲ್ಲಿ ಕಾಯಕದಲ್ಲಿ ತೊಡಗಿಕೊಂಡೆ

3 comments:

ಮೂರ್ತಿ ಹೊಸಬಾಳೆ. said...

HAHAHA
OLLEYA ANUBHAVA !!!!! AA NIMMA JOTEGAARARA HESARANNA HELIDDARE INNOO SWAARASYA VAAGIRUTTITTEENOO.

PARAANJAPE K.N. said...

ಸ್ವಾರಸ್ಯಕರವಾಗಿದೆ ನಿಮ್ಮ ಅನುಭವ, ನನಗೂ ಒಮ್ಮೆ ನಿಮ್ಮಲ್ಲಿಗೆ ಬರಬೇಕೆನಿಸಿದೆ.

Govinda Nelyaru said...

ಗುಡ್ಡಕ್ಕೆ ಬೆಂಕಿ ನಮ್ಮಲ್ಲೂ ಹಾಕಿದ್ದರಂತೆ. ಆಮೇಲೆ ಮಂಗಳಾರತಿಯೂ ನಡೆಯಿತಂತೆ.

ನಿಮ್ಮ ಹೋಮ್ ಸ್ಟೇ ಯಶಸ್ವಿಯಾಗುತ್ತಿರುವುದು ಸಂತಸ ತಂದಿದೆ. ಇದರಿಂದಾಗಿ ಹಳ್ಳಿಯಲ್ಲಿ ಉಳಿಯುವ ನಮ್ಮ ಮೌಲ್ಯವೂ ಏರುವುದು.