Friday, May 22, 2009

ಕಬೂತರ್ . ಬಾ... ಬಾ....ಬಾ..




ಬೆಕ್ಕು ನಾಯಿ ದನ ಜೇನು ಹಲವರು ಸಾಕುತ್ತಾರೆ. ಇವುಗಳನ್ನು ಸಾಕುವಲ್ಲಿ ನಮ್ಮ ಸ್ವಾರ್ಥವಿದೆ. ಇಲಿ ಹೆಗ್ಗಣ ವರ್ಲೆ ಜಿರ್ಲೆ ಅವಾಗಿಯೇ ನಮ್ಮೊಂದಿಗೆ ಇರುತ್ತವೆ. ನಮಗೆ ಬೇಡದಿದ್ದರೂ ನಮ್ಮ ಅತಿಥಿಗಳು. ಆದರೆ ಗಿಳಿ ಪಾರಿವಾಳ ನವಿಲು ಗಳನ್ನು ಸಾಕುವವರು ಕಡಿಮೆ. ಆದರೆ ಒಮ್ಮೆ ಆ ಪಕ್ಷಿಗಳ ಒಡನಾಟ ಶುರುವಾಯಿತೆಂದರೆ ನಂತರ ಬಿಡುವುದು ಕಷ್ಟ. ನೋಡಲು ಮುದ್ದು ಹಾಗೂ ಒಡನಾಟ ಖುಷ್ ಕೊಡುತ್ತದೆ.
ಇಪ್ಪತ್ತೈದು ವರ್ಷದ ಹಿಂದೆ ತಾಳಗುಪ್ಪದಲ್ಲಿ ಜೂಜನ ಹಿಟ್ಟಿನ ಮಿಲ್ಲಿನಲ್ಲಿ ಒಂದು ಗಿಳಿಯನ್ನು ಸಾಕಿದ್ದರು. ಅದು ಮುದ್ದಾಗಿ ಒಂದಿಷ್ಟು ಮಾತುಗಳನ್ನಾಡುತ್ತಿತ್ತು. ಕನ್ನಡಿಯನ್ನು ಅದಕ್ಕೆ ತೊರಿಸಿದರೆ ತನ್ನದೇ ಪ್ರತಿಬಿಂಬವನ್ನು ನೋಡಿ, ಕೋಣ್ತು..?(ಯಾರೂ..?) ಎನ್ನುತ್ತಿತ್ತು. ಪಕ್ಕಾ ಕಿರಿಸ್ತಾನರ ಮನೆಯ ಗಿಳಿಯಾದರೂ "ರಾಮಾ" ರಾಮಾ' ಎನ್ನುತ್ತಿತ್ತು. ಕಾಲಾನಂತರ ಅದರ ಆಯುಷ್ಯ ಮುಗಿಯಿತು.
ಕಳೆದ ವರ್ಷ ಹೊಸಬಾಳೆಯಲ್ಲಿ ದಾರಿ ಪಕ್ಕದ ಶೆಟ್ಟಿ ಬಿದಾರದಲ್ಲಿ ಒಂದುಮನೆಯಲ್ಲಿ ಗಿಳಿ ಕಂಡೆ. ಹತ್ತಿರ ಹೋಗಿ ಇಣುಕಿದೆ. ಮನೆಯಾತನಿಗೆ ಖುಷ್ ಆಯಿತು. ಬನ್ನಿ ಸ್ವಾಮಿ ಅಂದ ಗಿಳಿಯೂ ಒಂದಿಷ್ಟು ಮಾತುಗಳನ್ನು ಉಲಿಯಿತು. ಮೊನ್ನೆ ಮತ್ತೆ ಹೋದಾಗ ಹಣುಕಿದೆ. ಆ ಜಾಗದವನಿಗೂ ಮನೆಯವರಿಗೂ ಕಿರಿಕ್ ಆಗಿ ಆ ಮನೆಯನ್ನು ಕೆಡವಿದ್ದರು. ಮನೆಯೇ ಇಲ್ಲದ ಮೇಲೆ ಗಿಳಿ ಎಲ್ಲಿ?
ಆರೆಂಟು ತಿಂಗಳ ಹಿಂದೆ ಕೆರೇಕೈ ಪ್ರಶಾಂತನಿಗೆ ಪಾರಿವಾಳ ಸಾಕುವ ತಲುಬು ಬಂದಿತ್ತು. ಕೊಟ ಕೊಟ ಕೆತ್ತುವ ಕೃಷ್ಟಾಚಾರಿ ಹಿಡಿದು ಒಂದು ಬೋನ್ ತಯಾರಿಸಿದ. ಬೈಕ್ ಕುಂಡೆಗೆ ಹಾಕಿಕೊಂಡು ಪಡವಗೊಡಿಗೆ ಹೋಗಿ ಜೊತೆಗೆ ಇನ್ನೂರು ರೂಪಾಯಿ ಪೀಕಿ ಎರಡು ಜೊತೆ ಅಚ್ಚ ಬಿಳಿಯ ಪಾರಿವಾಳ ತಂದ "ರಾಗಣ್ಣ ಪಾರಿವಾಳ ತೈಂದಿ ಗೂಡೀಗೆ ಬಿಡ್ತಿ ಈಗ ಬತ್ಯಾ..?" ಅಂದ. ತಡಬಡ ಮಾಡಲಿಲ್ಲ ಬೈಕನ್ನೇರಿದೆ.
ಪ್ರಶಾಂತ ಆಗಲೇ ಚೀಲದಿಂದ ಪಾರಿವಾಳ ತೆಗೆದು ಅದರ ರಕ್ಕೆಗೆ ಗಮ್ ಟೇಪ್ ಅಂಟಿಸುತ್ತಿದ್ದ. ನಾನೂ ಜತೆಗೂಡಿದೆ. ಪಾರಿವಾಳ ಮುಟ್ಟಿದೆ ಆಹಾ ಎಂತಹ ಮುದ್ದಾದ ಪಕ್ಷಿ ಅಂತ ಅನ್ನಿಸಿತು. ಹೊಸ ಗೂಡಿಗೆ ಪಾರಿವಾಳ ಬಿಡುವಾಗ ಹಾರಿ ಹೋಗದಂತೆ ಒಂದೆರಡು ವಾರಗಳ ಮಟ್ಟಿಗೆ ಗಮ್ ಟೇಪ್ ಹಚ್ಚಿಡಬೇಕೆಂದು ಪಾರಿವಾಳ ಕೊಟ್ಟವನು ಹೇಳಿದ್ದನಂತೆ. ಹಾಗಾಗಿ ಟೇಪ್ ಹಚ್ಚಿ ಗೂಡಿನ ಬಳಿ ಬಿಟ್ಟ. ಒಂದೆರಡು ಕ್ಷಣ ನಾಲ್ಕೂ ಪಾರಿವಾಳಗಳು ಅತ್ತಿತ್ತ ಓಡಾಡಿದವು. ಮತ್ತೆ ಅವುಕ್ಕೆ ಏನನಿಸಿತೋ ಗಮ್ ಟೇಪ್ ಇದ್ದಂತಯೇ ಪಟಪಟ ಹಾರಿ ಪಕ್ಕ ದ ಮನೆಯ ಮಾಡಿನಲ್ಲಿಕುಳಿತುಕೊಂಡವು. ಒಂದು ಪಾರಿವಾಳಕ್ಕೆ ಸರಿಯಾಗಿ ಹಾರಲಾಗಲಿಲ್ಲ. ರಸ್ತೆಯ ಮೇಲೆ ಬಿತ್ತು. ಪ್ರಶಾಂತ ಅದನ್ನು ಎತ್ತಿಕೊಳ್ಳಲು ಓಡುವ ಹೊತ್ತಿಗೆ ಅದೆಲ್ಲಿತ್ತೋ ಬೀದಿನಾಯಿ ಅದನ್ನು ಆಹುತಿ ತೆಗೆದುಕೊಂಡೇ ಬಿಟ್ಟಿತು. ನಮ್ಮ ಕೂಗಾಟ ಹಾರಾಟ ಚೀರಾಟ ಲೆಕ್ಕಿಸದೆ ನಾಯಿ ರೈಟ್. ಮತ್ತೆ ಮೂರು ಪಾರಿವಾಳಗಳು ಮೂರು ದಿಕ್ಕಿಗೆ ಹಾರಿ ಹೋದವು. " ಇಲ್ಲೆ ಅವು ಸಾಯಂಕಲ ವಾಪಾಸ್ ಬತ್ವಡ ಪಾರಿವಾಳ ಕೊಟ್ಟವ ಹೇಳಿದ್ದ" ಎಂದ. ಇಂದಿನವರೆಗೂ ಸಾಯಂಕಾಲ ಬರಲೇ ಇಲ್ಲ. ಕೆಲವರು ಹೇಳಿದರು ಅವು ವಾಪಾಸು ತಂದಲ್ಲಿಗೆ ಹೋದವು ಎಂದು. ನಿಜವಾಗಿಯೂ ಅಲ್ಲಿಗೇ ಹೋದವೋ ಅಥವಾ ಗಿಡುಗನ ಪಾಲಾದವೋ ಗೊತ್ತಾಗಲೇ ಇಲ್ಲ. ಆದರೆ ಬಹಳ ಅಂದರೆ ಬಹಳ ಮುದ್ದಾಗಿತ್ತು.
ಈಗ ನನಗೆ ಅದೊಂದು ಅವತಾರ ಮಾಡಿಬಿಡುವ ಮನಸ್ಸಾಗಿದೆ. ಮನಮನೆಯ ಪಾಂಚುವಿಗೆ ಒಂದು ಜೋಡಿ ಕೊಡಲು ಹೇಳಿದ್ದೇನೆ. ಮಳೆಗಾಲ ಮುಗಿಯುವವರೆಗೆ ಕಾಯಬೇಕು. ನಾನು ಪಾರಿವಾಳ ಹಾಗೂ ಗಿಳಿ ತಂದಮೇಲೆ ಹೇಳುತ್ತೇನೆ. ಆವಾಗ ಬನ್ನಿ ಮಜ ಇರುತ್ತೆ ಅಥವಾ ಮಜ ಇದ್ದರೂ ಇರಬಹುದು..!.

3 comments:

Anonymous said...

ಕಾಯುತ್ತಿರುವೆ ಆ ಸುದಿನ

ಮನಸು said...

tumba chennagide nimma blog, estondu hannina bagge tilisideeri.. ella postgalu chennagive munduvarisi

sharath m sharma said...

super blog raghu kakka adre muru parivala harogalle ondu bekku tintu