Monday, June 22, 2009

ಹುಯ್ಯೋ ಹುಯ್ಯೋ ಮಳೆರಾಯ


ಬಾಳೆ ತೋಟಕೆ ನೀರಿಲ್ಲ ಅನ್ನೋದು ಹಳ್ಳಿಯ ಹಳೇ ಹಾಡು. ಈಗ ಹುಯ್ಯೋ ಹುಯ್ಯೋ ಮಳೆರಾಯ ಲಿಂಗನಮಕ್ಕಿ ಡ್ಯಾಮಿಗೆ ನೀರಿಲ್ಲ ಅಂತ ಬದಲಾಯಿಸಬೇಕಿದೆ. ಈ ವರ್ಷ ಅದೇಕೋ ಗೊತ್ತಿಲ್ಲ ನಮ್ಮ ಮಲೆನಾಡಿನಲ್ಲಿ ಮಳೆಗಾಲ ಇನ್ನೂ ಶುರುವಾಗಿಲ್ಲ. ಜೂನ್ ಎಂದರೆ ಜಿರ್ರೋ ಎಂದು ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಸುರಿಯಬೇಕಾಗಿದ್ದ ಮಳೆ ಮುಗುಮ್ಮಾಗಿ ಮಲಗಿದೆ. ಕಳೆದ ವರ್ಷ ಇಷ್ಟೊತ್ತಿಗೆ ಲಿಂಗನಮಕ್ಕಿ ಡ್ಯಾಮ್ ಭಾಗಶ: ತುಂಬಿ ಹೋಗಿತ್ತು. ಜುಲೈ ಅಂತ್ಯದಲ್ಲಿ ಡ್ಯಾಮಿಂದ ಯರ್ರಾಬಿರ್ರಿ ನೀರು ಬಿಟ್ಟಿದ್ದರು. ಈ ವರ್ಷ ಡ್ಯಾಂ ಖಾಲಿ ಖಾಲಿ.
ಹೊನ್ನೆಮರಡು ಹಿನ್ನೀರಿಗೆ ಹೋಗಿ ನಿಂತರೆ ನೂರಾರು ಬೋಳು ಮರಗಳು ಸಾಲುಸಾಲಾಗಿ ಕಾಣಿಸುತ್ತವೆ. ನಡುಗುಡ್ಡೆಗಳು ಎಣಿಸಲಾರದಷ್ಟು ಇದೆ. ಅವೆಲ್ಲಾ ವರುಣನ ಅವಕೃಪೆಗೆ ಒಳಗಾದ್ದರಿಂದ ನೀರಿಲ್ಲದೆ ನಗ್ನ ನೃತ್ಯ.
ಆಣೆಕಟ್ಟಿನಲ್ಲಿ ಇನ್ನುಹೆಚ್ಚೆಂದರೆ ಹತ್ತು ದಿವಸಕ್ಕಾಗುವಷ್ಟು ನೀರು ಇದೆ. ಆಮೇಲೆ ಕರೆಂಟ್ ಕತೆ ದೇವರೇ ಬಲ್ಲ. ಅಂಬೋದು ನೆಗೇಟೀವ್ ವಾಕ್ಯ ಅಂತ ಅನ್ನಿಸಿದರೂ ಸತ್ಯದ ಮಾತು.
ಆದರೂ ಏನೋ ಒಂದು ಆಗುತ್ತದೆ ಮತ್ತೇನೋ ಸಂಭವಿಸುತ್ತದೆ ಕಡಿದು ಗುಡ್ಡೆ ಹಾಕಬೇಕು ಎನ್ನುವ ಅದಮ್ಯ ಉತ್ಸಾಹದಲ್ಲಿ ನಮ್ಮೆಲ್ಲರ ದಿನಗಳು ಕಡಿಮೆಯಾಗುತ್ತಿವೆ.
ಆದರೂ ಮಳೆ ಇಲ್ಲದಕುರಿತು ಒಂದಿಷ್ಟು ಮಾತುಗಳು ಹೊರ ಬೀಳುತ್ತವ್. ಅವು ಯಾರ್ಯಾರು ಆಡಿದ್ದು ಅಂತ ತಳಕು ಹಾಕಿಕೊಳ್ಳುವ ಕೆಲಸ ನಿಮಗೆ ಬಿಟ್ಟದ್ದು.
"ಕಾಲ ಕೆಟ್ಟೊತು.. ಈಗಿನ ಕಾಲದವು ಪೂಜೆ ಪುನಸ್ಕಾರ ಬಿಟ್ಟಿದ್ದ, ಹಂಗಾಗಿ ಹಿಂಗೆಲ್ಲ ಆಗ್ದೆ ಮಣ್ಣು ಹೊಯ್ಕ್ಯತ್ತ ಮತೆ"
ನಮ್ಮ ಕಾಲದಲ್ಲಿ ಸುಭೀಕ್ಷ ಇತ್ತಪ ಅನಾಚಾರ ಅತ್ಯಾಚಾರ ಹೆಚ್ಚಾಗಿದ್ದಕ್ಕಾಗಿ ಮಳೆ ಬೆಳೆ ಹೀಗೆ
"ಮಳೆಯ ಈ ಅವತಾರಕ್ಕೆ ಅತಿಯಾದ ಕಾಡು ನಾಶ ಕಾರಣ"
ಮಳೆ ಇಲ್ಲದ್ದಕ್ಕೆ ಅಕೆಶಿಯಾ ಬೆಳಸಿದ್ದೆ ಕಾರಣ
ನೀಲಗಿರಿ ಬೆಳಸಿದ್ದೆ ಕಾರಣ
ಹುಡುಗ್ರು ಸಂಧ್ಯಾವಂದನೆ ಬಿಟ್ಟಿದ್ದೆ ಮಳೆ ಹೀಗಾಗಲು ಕಾರಣ
ಇವಕ್ಕೆಲ್ಲ ಬಿಜೆಪಿ ಯ ಆಪರೇಷನ್ ಕಮಲವೇ ಕಾರಣ ಹಾಗಾಗಿ ಯಡಯೂರಪ್ಪ ರಾಜಿನಾಮೆ ಕೊಡಬೇಕು
ಮಳೆ ಹೀಗಾಗಲು ಐವತ್ತು ವರ್ಷದಿಂದ ಆಳಿದ ಕಾಂಗ್ರೆಸ್ ದುರಾಡಳಿತವೇ ಕಾರಣ
ಶುಕ್ರ ವಕ್ರನಾದ್ದರಿಂದ ಮಳೆ ಕಡಿಮೆಯಾಗಿದೆ ನೆಟ್ಟಗಾದಮೇಲೆ ಎಲ್ಲಾ ಸರಿಯಾಗುತ್ತದೆ
ರಾಹು ಗುರುವಿನ ಮೇಲೆ ವಕ್ರನಾಗಿದ್ದಾನೆ ಅದು ನಿಜವಾದ ಕಾರಣ
ಬಳ್ಳಾರಿಯಲ್ಲಿ ಗಣಿ ದೊರೆಗಳು ಇದಕ್ಕೆ ನೇರ ಹೊಣೆ
ಮದುವೆ ಸಾಂಗೋಪಸಾಂಗವಾಗಿ ನಡೆಯಲಿ ಎಂದು ಹರಕೆ ಹೇಳಿಕೊಂಡದ್ದೇ ಮಳೆ ಇಲ್ಲದ್ದಕ್ಕೆ ಕಾರಣ
ಪ್ರಕೃತಿಯ ಮೇಲೆ ಮನುಷ್ಯನ ಅತಿಯಾದ ಹಲ್ಲೆ ಇದಕ್ಕೆ ಮೂಲ
ಹೀಗೆ ತಮ್ಮನ್ನೊಂದು ಬಿಟ್ಟು ಮಿಕ್ಕೆಲ್ಲವರೂ ಕಾರಣ ಎಂಬಂತಹ ಹೇಳಿಕೆಯೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹೇಳಿಕೆ ಮುಗಿಸೋಣ.
ಒಟ್ಟಿನಲ್ಲಿ "ಅಯ್ಯೋ ಮಳೆಯ ರಭಸಲ್ಲಿ ನಾವು ಕೊಚ್ಚಿ ಹೋಗುತ್ತಿದ್ದೇವೆ" ಎಂದು ಬರೆಯಬೇಕಾಗಿದ್ದ ಜಾಗದಲ್ಲಿ "ಹುಯ್ಯೋ...." ಅಂತ ಬರೆಯಬೇಕಾಗಿದ್ದು ತೀರಾ ಖುಷಿಯಲ್ಲದ ಸಂಗತಿ ಅನ್ನುವುದಂತೂ ಸತ್ಯ.

2 comments:

shivu.k said...

ಸರ್,

ಅಲ್ಲಿನ್ನು ಮಳೆಯಾಗಿಲ್ಲವೆಂದರೇ...ಬಹುಶಃ ನಮ್ಮ ಬ್ಲಾಗಿಗರ ಭಯಂಕರ ಬ್ಲಾಗಿಂಗ್ ಕಾರಣವಿರಬಹುದೇ...!

Unknown said...

ha ha ha matte aste