Saturday, February 6, 2010

ಮಿಟುಕಲಿಲ್ಲ ಮಿಸುಕಾಡಲಿಲ್ಲ


ಬದುಕಿನ ಘಟ್ಟಗಳಲ್ಲಿ ಒಬ್ಬೊಬ್ಬರದು ಒಂದೊಂದು ಸೇವೆ. ಸೃಷ್ಟಿ-ಸ್ಥಿತಿ-ಲಯ ಅಂತ ವಿಭಾಗ . ಒಂದಿಷ್ಟು ಜನ ಬೆಳೆಯುತ್ತಾರೆ, ಮತ್ತೊಂದಿಷ್ಟು ಜನ ಬೆಳೆಸುತ್ತಾರೆ ಮಗದೊಂದಿಷ್ಟು ಜನ ಮುಗಿಸುತ್ತಾರೆ. ಹಾಗಾಗಿ ಇದು ಹೆಚ್ಚು ಇದು ಕಡಿಮೆ ಎಂಬುದಿಲ್ಲ. ಎಲ್ಲವೂ ಎಲ್ಲರೂ ಸಮಾನರು. ಹುಟ್ಟಿಗೆ ಕಾರಣಕರರ್ತನೂ ಸಾವಿನ ಪೋಷಕನೂ ಎಲ್ಲರೂ ಬೇಕು. ಆದರೆ ಯಾವುದು ಎಲ್ಲಿ? ಯಾರು? ಮುಂತಾದ ಬಗೆಹರಿಸಲಾರದ ಗೊಂದಲ ಬಂದಾಗ " ತೇನವಿನಾ ತೃಣಮಪಿ ನಚಲತಿ" ಅಂತ ನಂಬಬೇಕು. ಒಮ್ಮೆ ಹಾಗೆ ನಂಬಿದಿರೋ ಅಲ್ಲಿಂದ ಪ್ರತೀ ಹಂತಕ್ಕೂ ಹಾಗೆಯೇ ಮುಂದುವರೆಯಬೇಕು. ನಂಬಿದ ನಂಬಿಕೆಯಲ್ಲಿ ಅನುಮಾನಗಳಿದ್ದರೆ ಎಲ್ಲವೋ ಆಯೋಮಯ. ಪರಿಪೂರ್ಣವಾದ ನಂಬಿಕೆಗೆ ಪಾತ್ರರಾದಿರೋ ಅಲ್ಲಿಗೆ ಜಗತ್ತು ಗೆದ್ದ ಭಾವನೆ ಬೆಳೆಯುತ್ತದೆ. ಯಾರೋ ಬುದ್ಧಿವಂತರು ಹೊಸೆದ ಕತೆಯೊಂದು ಅದ್ಬುತ ಸಾರಾಂಶವನ್ನು ಹೀಗೆ ಹೇಳುತ್ತದೆ.
ಯಥಾಪ್ರಕಾರ ಒಂದೂರು. ಆದರೆ ಮುಂದೆ ಇಲ್ಲಿ ರಾಜನ ಬದಲು ಸನ್ಯಾಸಿ. ಆತ ತನ್ನಪಾಡಿಗೆ ತಾನು ಜಪತಪ ಮಾಡುತ್ತಾ ಒಂಟಿ(!) ಜೀವನ ನಡೆಸುತ್ತಿದ್ದ. ಹೀಗೆ ಕಾಲ ಕಳೆಯುತ್ತಿರಬೇಕಾದರೆ ಆ ಊರಿನ ಸ್ಪುರದ್ರೂಪಿ ಯುವತಿಯಿಂದ ಸಮಸ್ಯೆಯೊಂದು ಬಂತು. ವಿವಾಹಪೂರ್ವದಲ್ಲಿ ಆಕೆ ಗರ್ಭವತಿಯಾಗಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.( ಮಾಲಾ ಡಿ ಇಲ್ಲದ ಕಾಲದ ಕತೆ ಇದು...!) . ಹಳ್ಳಿ ಹೈಕಳಿಂದ ಹಿಡಿದು ಬೊಚ್ಚು ಬಾಯಿಯವರೆಗೆ ಸುದ್ದಿಯೋ ಸುದ್ದಿ. ಸರಿ ಅಷ್ಟೆಲ್ಲಾ ಸುದ್ದಿಯಾದ ಮೇಲೆ ಪಂಚಾಯಿತಿ ಸೇರಲೇಬೇಕಲ್ಲ.! ಅದೂ ಸೇರಿತು. ಆಕೆಗೆ ಕೇಳಿದ "ಯಾರಮ್ಮ ನಿನ್ನ ಈ ಅವಸ್ಥೆಗೆ ಕಾರಣ?" ಅಂತ ಗಡಸು ದನಿಯಲ್ಲಿ ಕೇಳಿದರು ಪಂಚಾಯ್ತಿದಾರರು. ಆಕೆಯೋ ಮುಸಿಮುಸಿ ಅಳುತ್ತಾ ಸನ್ಯಾಸಿಯತ್ತ ಕೈತೋರಿಸಿಬಿಟ್ಟಳು. ಒಮ್ಮೆಲೆ ಇಡೀ ಊರೇ ಸ್ಥಬ್ಧ. ಮರುಕ್ಷಣ ಮುಸಿಮುಸಿ ಪಿಸುಪಿಸು ಡೈಲಾಗ್ ಉದರತೊಡಗಿತು. ಕಳ್ಳ ಸನ್ಯಾಸಿ- ಹಲ್ಕಟ್ ಸನ್ಯಾಸಿ- ಮೋಸಗಾರ- ವೃಥಾ ನಾವು ಇವನ್ನ ನಂಬಿದೆವಲ್ಲ, ಮುಂತಾಗಿ. ಸನ್ಯಾಸಿಗೆ ಇವೆಲ್ಲ ಮಾತುಗಳು ಕೇಳಿಸಿದವು. ಆದರೆ ಆತ ಒಂದಿನಿತೂ ಮಿಟುಕಲಿಲ್ಲ ಮಿಸುಕಾಡಲಿಲ್ಲ. ( ಗೌರಿ ಲಂಕೇಶ್,ರವಿ ಬೆಳಗೆರೆ, ಟಿ ವಿ ನೈನ್ , ಮುಂತಾದಂತಹ ಇಂಥಹ ಬೇಡದ ವಿಷಯಗಳಿಗೆ ಬಣ್ಣ ಹಚ್ಚಿ ರಾಯಲ್ ಬದುಕು ಸಾಗಿಸಬಹುದು ಎಂಬ ತಿಳುವಳಿಕೆ ಜನ ಇರದಿದ್ದ ಕಾಲ ಅದು) ಪಂಚಾಯ್ತಿಯ ಮುಖಂಡರೂ ಗುಸುಗುಸು ಪಿಸಪಿಸ ಮಾಡಿ ನಂತರ ಒಂದು ತೀರ್ಮಾನ ನೀಡಿದರು. ಕೆಟ್ಟ (ನಿಜವಾಗಲೂ ಸೃಷ್ಟಿ ಒಳ್ಳೆಯ ಕೆಲಸ ಅಂತ ಎಲ್ಲರೂ ಅಂದುಕೊಂಡಿದ್ದಾರೆ) ಕೆಲಸ ಮಾಡಿದ ಸನ್ಯಾಸಿಗೆ ಇನ್ನು ಮುಂದೆ ಊರಿನಲ್ಲಿ ಯಾರೂ ಅನ್ನ ಆಹಾರ ನೀಡಬಾರದು, ಮತ್ತು ಈ ಮಗುವಿನ ಜನ್ಮಕ್ಕೆ ಕಾರಣನಾದ ಆತನೆ ಇದರ ಪಾಲನೆ ಪೋಷಣೆ ಮಾಡಬೇಕು( ಯಾರೋ ಸಿಕ್ಕಾಪಟ್ಟೆ ಬುದ್ದಿ ಓಡಿಸುವ ಪಂಚಾಯ್ತಿದಾರರು ನೋಡಿ, ಸ್ಪುರದ್ರೂಪಿ ಯುವತಿ ಸನ್ಯಾಸಿಯೊಡನೆ ಬಾಳಬೇಕು ಅನ್ನಲಿಲ್ಲ.! ಆಕೆ ಖಾಲಿ ಇರಬೇಕು...!) ಎಂಬ ತೀರ್ಪನ್ನಿತ್ತರು. ಸನ್ಯಾಸಿ ಆಗಲೂ ವಿಚಲಿತನಾಗದೆ ಮುಗಳ್ನಗುತ್ತಾ ಇದ್ದ. ಮುಖದಲ್ಲಿ ಮಂದಹಾಸವಿತ್ತು. ಯುವತಿ ಮಗುವನ್ನು ಸನ್ಯಾಸಿಯ ಬಳಿ ಬಿಟ್ಟು ಹೊರಟಳು. ಪಂಚಾಯ್ತಿ ಬರ್ಕಾಸ್ತಾಯಿತು. ಜನ ಸನ್ಯಾಸಿಗೆ ತಲೆಗೊಂದರಂತೆ ಮಾತನಾಡಿದರು. ಆದರೆ ಸನ್ಯಾಸಿ ಏನೂ ನಡದೇ ಇಲ್ಲವೆಂಬಂತೆ ಗೊಂಬೆಯಂತಿದ್ದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು "ಛಿ ಕಳ್ಳ" ಎಂದು ಮುದ್ದಿಸತೊಡಗಿದ. ಜನರು ಇನ್ನಷ್ಟು ಅನ್ನಲು ಶುರುಮಾಡಿದರು. "ನೋಡಾ ಮಗು ಅವನಲ್ಲದಿದ್ದರೆ ಹೀಗೆ ಮುದ್ದಾಡುತಿದ್ದನಾ...? ಕಳ್ಳ ಕೊರಮ ಪಟಿಂಗ ಹೋಗಿ ಹೋಗಿ ನಾವು ಇವನಿಗೆ ಪೂಜೆ ಮಾಡಿದೆವಲ್ಲ." ಮುಂತಾಗಿ. ಸನ್ಯಾಸಿ ಯಥಾಪ್ರಕಾರ ನಿರುಮ್ಮಳನಾಗಿದ್ದ. ಸಮಯದ ನಂತರ ಮಗು ಹಸಿವೆಯಾಗಿ ಅಳಲು ಶುರುಮಾಡಿತು. ಸನ್ಯಾಸಿಗೆ ಈಗ ಸಮಸ್ಯೆ. ಆಹಾರ ಅವನ ಬಳಿ ಇಲ್ಲ ಊರವರು ನೀಡರು. ಆಗ ಸನ್ಯಾಸಿ ಮಗುವನ್ನೆತ್ತಿಕೊಂಡು ಊರ ಮೇಲೆ ಆಹಾರ ನೋಡೋಣ ಎಂದು ಹೊರಟ." ಮಗು ಹಸಿವೆಯಿಂದ ಅಳುತ್ತಿದೆ ಏನಾದರೂ ಕೊಡಿ ಅದಕ್ಕೆ " ಎಂದು ಕೇಳಿದ. ಊರಿನವರು ದಢಾರನೆ ಬಾಗಿಲು ಹಾಕಿಕೊಂಡರು. ಅಂತಿಮವಾಗಿ ಸನ್ಯಾಸಿ ಸ್ಪುರದ್ರೂಪಿ ಯುವತಿಯ ಮನೆಬಾಗಿಲಿಗೆ ಬಂದ ಮತ್ತು "ನನಗಲ್ಲ ಹಸುಗೂಸಿಗೆ ಬಿಕ್ಷೆ ನೀಡಿ" ಎಂದ. ಯಾರಿಗೂ ಏನನ್ನಿಸದಿದರೂ ಎದೆಯಲ್ಲಿ ಹಾಲೆಂಬ ಸತ್ಯವನ್ನು ಬಚ್ಚಿಟ್ಟುಕೊಂಡ ಯುವತಿಗೆ ತಡೆದುಕೊಳ್ಳಲಾಗಲಿಲ್ಲ. ಆಕೆಯ ತಾಯ್ತನ ಬಡಿದೆಬ್ಬಿಸಿತು. ಆಕೆ ಓಡೋಡಿ ಬಂದು " ಸ್ವಾಮಿ ನಾನು ಮಹಾಪರಾಧ ಮಾಡಿದ್ದೇನೆ, ಈ ಮಗುವಿನ ಕಾರಣಕರ್ತರು ನೀವಲ್ಲ, ಅದೇ ...... ಆ ಯುವಕ, ಆದರೆ ಅವನ ಹೆಸರನ್ನು ಹೇಳಿದರೆ ಅವನನ್ನು ಕೊಂದೇಬಿಡುತ್ತಾರೆ ಹಾಗಾಗಿ ನಾನು ಸುಳ್ಳು ಹೇಳಿದೆ, ನೀವು ನನ್ನ ಕಣ್ಣು ತೆರೆಸಿದಿರಿ " ಎಂದು ಹೇಳಿ ಮಗುವನ್ನು ಕಸಿದುಕೊಂಡು ಹಾಲುಣಿಸಿದಳು. ಆಗಲೂ ಸನ್ಯಾಸಿ ಮುಗುಳ್ನಕ್ಕ. ಸುದ್ದಿ ತಿಳಿದ ಊರಿಗೆ ಊರೇ ಅಲ್ಲಿ ಸೇರಿತು. ಸನ್ಯಾಸಿಯ ಮೇಲೆ ವೃಥಾ ಅಪರಾಧ ಹೊರೆಸಿದ್ದಕ್ಕೆ ನೊಂದಿತು ಮತ್ತು ಕ್ಷಮೆ ಕೇಳಿತು. ಸನ್ಯಾಸಿಗೆ "ದೇವರಂತವರು ನೀವು, ಪೂಜನೀಯರು ನೀವು, ಅಂತ ಉಘೇ ಉಘೇ ಅನ್ನತೊಡಗಿತು.
ಆದರೆ ಸನ್ಯಾಸಿ ಈಗಲೂ ಮಿಟುಕಲಿಲ್ಲ ಮಿಸುಕಾಡಲಿಲ್ಲ.
ಊರಿನ ಮುಖಂಡನೊಬ್ಬ ಸನ್ಯಾಸಿಯ ಬಳಿ ಬಂದು ಪಾದಕ್ಕೆರಗಿ " ಅಯ್ಯಾ ಮಹಾತ್ಮ ಆಕೆ ನಿಮ್ಮ ಮೇಲೆ ಅಪವಾದ ಹೊರೆಸಿದಾಗ ನೀವು ಅಲ್ಲಗಳೆಯಬಹುದಿತ್ತು, ಜನರೆಲ್ಲಾ ನಿಮ್ಮನ್ನು ಏನೇನೋ ಅನ್ನುವಂತಾಯಿತು ಕ್ಷಮಿಸಿ" ಎಂದರು.
ಆಗ ಸನ್ಯಾಸಿ " ಆಗಲೂ ನೀವು ಏನೇನೋ ಅಂದಾಗ ನಾನು ಅದಲ್ಲ ಈಗಲೂ ನೀವು ಏನೇನೋ ಅಂದಾಗ ನಾನು ಇದಲ್ಲ, ತೇನವಿನಾ ತೃಣಮಪಿ ನಚಲತಿ ಎಂದು ಭಗವಂತನನ್ನು ನಂಬಿದವನು ನಾನು, ಹೀಗೆಲ್ಲಾ ಆಗಿದ್ದು ಅವನಿಂದಲೇ ತಾನೆ? ಹಾಗಾಗಿ ಬೇಸರವೂ ಇಲ್ಲ ಸಂತೋಷವೂ ಸಲ್ಲ " ಎಂದು ಆಶ್ರಮದತ್ತ ನಡೆದ.
ಸರಿ ಈಗ ಕತೆ ಕೇಳಿಯಾಯಿತಲ್ಲ ವಿಷಯಕ್ಕೆ ಬರೋಣ. ಆ ಸನ್ಯಾಸಿಯ ಮಟ್ಟ ಪಾಮರರಿಗೆ ತಲುಪುವುದು ಕಷ್ಟ. ಆದರೆ ಈ ತರಹದ ಕಥೆ ಕೇಳಿದರೆ ಸ್ವಲ್ಪಮಟ್ಟಿಗೆ ನಾವು ಗುಡ್ಡವಾಗಬಹುದು. ಅದೋ ಮೇಲಿನ ಚಿತ್ರದಲ್ಲಿ ಒಂದು ಬರೊಬ್ಬರಿ ಚಂದದ ಬೆಟ್ಟವಿದೆ ಅದೆರೆದುರು ನಿಂತು " ಆಹಾ ನೀನೆಷ್ಟು ಸುಂದರ " ಅಂತ ಕೂಗಿ ಸುಮ್ಮನಾಗಿ. ಮತ್ತದೇ ಕೇಳುತ್ತದೆ. "ನೀನು ಕಚಡಾ.." ಎಂದು ಕೂಗಿ ಮತ್ತದೇ........... ಎಂಬಲ್ಲಿಗೆ ಬೆಟ್ಟವಾಗಿ ನೀವು ಇಡೀ ಜೀವನವೇ ಜಿಂಗಲಾಲ...
ತ್ಯಾಂಕ್ ಯು ಓದಿದ್ದಕ್ಕೆ.

2 comments:

Clipped.in - Explore Indian blogs said...

:-)

Sushrutha Dodderi said...

ನೈಸ್! :-)

ಇಷ್ಟ ಆತು- ಬರಹದಲ್ಲಿನ ಚಿತ್ರ, ಕತೆ, ಕೀಟಲೆ, ಶೈಲಿ ಮತ್ತು ಸಂದೇಶದ ಎತ್ತರ.

ಥ್ಯಾಂಕ್ಯೂ, ಬರೆದದ್ದಕ್ಕೆ. :-)