Tuesday, February 16, 2010

ಆ ತುದಿ ಈ ತುದಿ ಮತ್ತು ನಾನು

ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ ಎಂಬ ಕಣ್ಣಿಗೆ ಕಾಣುವ ಪ್ರಕ್ರಿಯೆಯ ಜತೆಗೆ ಕಾಣದ , ಆದರೆ ಲೆಕ್ಕಕ್ಕೆ ಮಾತ್ರಾ ಸಿಗುವ ಕಾಲ ಎಂಬುದು ತನ್ನಷ್ಟಕ್ಕೆ ಓಡುತ್ತಿರುತ್ತದೆ. ನಾವು ಹೇಗಿದ್ದರೂ ಕಾಲನಿಗೆ ನಿಶ್ಚಿಂತೆ. ಓದುವವರು ಓದುತ್ತಾರೆ, ನಿದ್ರೆ ಮಾಡುವವರು ನಿದ್ರೆ, ದುಡಿಯುವವರು ದುಡಿಮೆ, ಹೀಗೆ ಏನೆಲ್ಲಾ ಮಾಡುತ್ತಿರಲಿ ಕಾಲನಿಗೆ ಅವೆಲ್ಲಾ ನಗಣ್ಯ. ಸಾವಿರ ಸಾವಿರ ನೆನಪುಗಳ ಮೂಟೆಯೊಂದಿಗೆ ಒಂದು ದಿನ ನಾವೂ ಕಾಲವಾಗುತ್ತೇವೆ. ಹೀಗೆಲ್ಲಾ ಬ್ಲಾಗ್ ಬರೆಯದೇ ನನ್ನ ನಿಮ್ಮ ಅಜ್ಜ ಅಜ್ಜಿಗಳೆಂಬ ಸಹಸ್ರಾರು ಕಾಲದ ಯಂತ್ರಗಳನ್ನು ಅವರುಗಳ ನೆನಪುಗಳನ್ನು ಕಾಲನೆಂಬ ಕಾಲ ನುಂಗಿ ಹಾಕಿ ಮುನ್ನುಗ್ಗುತ್ತಿದ್ದಾನೆ. ಅಂತ್ಯವೆಲ್ಲೋ..? ಆರಂಭವಂತೂ ಆಗಿದೆ.

ನನ್ನ ಬಾಲ್ಯ ಪಕ್ಕಾ ಆಸ್ತಿಕ ಮನೆಯಲ್ಲಿ. ನನ್ನಪ್ಪ ಮೂಢನಂಬಿಕೆಗಳಿಂದ ದೂರ ಹಾಗಂತ ಸಹ್ಯವಾಗುವ ಆಚರಣೆಗೆ ಅಂಟಿಕೊಂಡವ. ನನಗೆ ಓದನ್ನು ಬೆನ್ನು ಹತ್ತಲಾಗಲಿಲ್ಲ. ಆಬ್ಸೆಂಟ್ ಮೈಂಡ್ ಈಸ್ ಡೆವಿಲ್ ವರ್ಕ್ ಶಾಪ್ ಎನ್ನುವಂತೆ ದೇವರು ಜೀವನದ ಬಹುಪಾಲು ಸಮಯನ್ನು ಕಿತ್ತುಕೊಂಡ ವಿಷಯವಾಯಿತು. ಇದ್ದಾನೋ ಇಲ್ಲವೋ ಇದ್ದರೆ ಎಲ್ಲಿ ಹೇಗೆ? ಯಾಕಾಗಿ? ಹೀಗೆ ಪ್ರಶ್ನೆಗಳು ವರಲೆಯ ಹುತ್ತದಂತೆ ಏರುತ್ತಾ ಸಾಗುತಿದ್ದವು. ಪುಸ್ತಕ ಓದುವುದು ಓದಿಗಿಂತ ಮೊದಲು ಅದೇನೋ ಒಂದು ಅದ್ಭುತ ಉತ್ತರ ಸಿಗುವ ಆಸೆ ಓದಿದ ನಂತರ ಓಹ್ ಇದು ಇಷ್ಟೇನಾ..? ಎಂಬ ನಿರಾಸೆ. ದೇವರ ಅಸ್ತಿತ್ವವನ್ನು ನಂಬುವ ಜನರ ಬೆನ್ನು ಹತ್ತಿ ಆನಂತರ ಅವರ ತೀರಾ ಸಾಮಿಪ್ಯ ಸಾದ್ಯವಾದಾಗ ಅವರೂ ಗೊಂದಲದಲ್ಲಿದ್ದಾರೆ ಎಂಬುದು ಅರಿವಾಗಿ ಅವರೂ ದೇವರ ನಂಬಿದ್ದು ಹಣ ಗಳಿಸಲೋ ಅಥವಾ ಭಯಕ್ಕೋ ಎನ್ನುವ ವಿಷಯ ತಿಳಿದು ಹಿಂದಿರುಗಿ ನಂತರ ದೇವರ ಅಸ್ತಿತ್ವವನ್ನು ನಂಬದವರಿಗೆ ಹತ್ತಿರವಾಗಿ ಅವರ ಸಾಮಿಪ್ಯ ಸನಿಹವಾದಾಗ ಅವರೂ ಕೇವಲ ಗೊತ್ತಿಲ್ಲದೆ ಹಾಗೆಲ್ಲಾ ಮಾಡುತ್ತಿರುವ ವಿಷಯ ತಿಳಿದು ಅವರೂ ಆಸ್ತಿಕತನ ವಿರೋಧಿಸುವ ಮಟ್ಟಿಗಷ್ಟೇ ನಾಸ್ತಿಕರು ಎಂಬುದು ತಿಳಿದು ವಾಪಾಸಾಗಿದ್ದಿದೆ. ಇರಲಿ ಹಾಗೆಲ್ಲಾ ಆಗುವುದೂ ಒಂದು ಅದೃಷ್ಟವೇ ಅಂದುಕೊಂಡು ಬಿಡೋಣ.
ನಂಬಿ ಕೆಟ್ಟವರಿಲ್ಲವೋ ಎಂಬುದೇ ಒಳ್ಳೆಯ ವೇದಾಂತ . ನಂಬದಿದ್ದರೂ ಕೆಡುವುದಿಲ್ಲವೋ ಎಂಬುದೂ ಕೂಡ ಒಳ್ಳೆಯ ಸಿದ್ಧಾಂತ.
ಬಹುಪಾಲು ಮನುಷ್ಯರ ಮೆದುಳು ಬೆಳೆಯುವುದು ಅವರ ವ್ಯಕ್ತಿತ್ವ ರೂಪುಗೊಳ್ಳುವುದು ಅವರಿದ್ದ ಪರಿಸರದ ಮೇಲೆಯೇ ಅವಲಂಬಿತವಾಗಿರುತ್ತದೆ. ದಿನ ನಿತ್ಯ ಕಾಣುವ ಕೇಳುವ ವಿಷಯಗಳನ್ನು ಕ್ರೂಢಿಕರೀಸಿ ಒಂದು ಅಭಿಪ್ರಾಯಕ್ಕೆ ಬಂದು ತಾನು ಬೆಳೆಯುತ್ತಾನೆ ಮನುಷ್ಯ. ಅವನಿಗೆ ಅವನಿದ್ದ ಅವಸ್ಥೆಯೆ ಒಳ್ಳೆಯದು ಅಂತ ಅನ್ನಿಸತೊಡಗುತ್ತದೆ. ಅದಕ್ಕೆ ಸಮರ್ಥನೆಗೆ ಇಳಿಯುತ್ತಾನೆ. ಯಾವುದೋ ಹಂತದಲ್ಲಿ ಅದು ಬೇಸರವಾದ ಅಪರೂಪದ ವ್ಯಕ್ತಿಗಳು ಹೊಸದನ್ನು ಹುಡುಕತೊಡಗುತ್ತಾರೆ. ಸಿಕ್ಕ ಹೊಸದೆಲ್ಲವೂ ಆರಂಭದಲ್ಲಿ ಅದ್ಭುತ ಅಂತ ಅನ್ನಿಸಿ ನಿಧಾನ ಕೇವಲವಾಗತೊಡಗುತ್ತವೆ. ಪಟ್ಟಣದಲ್ಲಿದ್ದ ವರಿಗೆ ಹರಿಯುವ ನದಿಯ ಜುಳು ಜುಳು ನಿನಾದ ಹಳ್ಳಿಯಲ್ಲಿದ್ದವರಿಗೆ ಆಕಾಶದೆತ್ತರದ ಕಟ್ಟಡಗಳು ಅದ್ಭುತವನ್ನು ತೆರೆದಿಡುತ್ತವೆ. ಆದರೆ ಯಾರು ಇದ್ದ ಅವಸ್ಥೆಯನ್ನು ನಿರಂತರ ಅನುಭವಿಸಿ ಏಕತಾನತೆಯನ್ನು ರೂಢಿಸಿಕೊಳ್ಳುತ್ತಾರೋ ಅವರು ಶಾಂತ ಬದುಕು ಸಾಗಿಸುತ್ತಾರೆ. ಇಲ್ಲದಿದ್ದಲ್ಲಿ ಯಾವುದೇ ಅವಸ್ಥೆ ಇದ್ದರೂ ಅದು ನರಕವೇ....
ನಿತ್ಯ ಹುಟ್ಟುವ ಸೂರ್ಯ ಹಳೆಯದಾದರೂ ಅದರಿಂದ ಹೊರಡುವ ಇಂದಿನ ಬಣ್ಣ ಹೊಸತು, ಹರಿಯುವ ನದಿಯ ಪಾತ್ರ ಹಳೆಯದಾದರೂ ನೀರಿನ ಜುಳು ಜುಳು ಶಬ್ಧ ಹೊಸತು, ಕಟ್ಟಡ ಹಳೆಯದಾದರೂ ಅದರ ಮುಂದೆ ಏಳುವ ಹೊಗರು ಹೊಸತು , ಅಂತೆಲ್ಲಾ ಅನ್ನಿಸ ತೊಡಗಿದರೆ ವಾವ್ ಅನ್ನುವುದು ಪ್ರತಿಕ್ಷಣದ ಶಬ್ಧ. (ಪುರುಸೊತ್ತು ಇದ್ದಾಗ ಮುಂದುವರೆಯುತ್ತದೆ)
ಕೊನೆಯದಾಗಿ: ಅಪ್ಪನೆಂಬ ಅಪ್ಪ ಅಮ್ಮನ ಅಣತಿಯಂತೆ ಅಜ್ಜನಿಗೆ ನಪ್ಪಿಹೋದ ಬಟ್ಟಲಲ್ಲಿ ಜಗುಲಿಯ ಮೂಲೆಯಲ್ಲಿ ಅನ್ನ ಇಟ್ಟದ್ದನ್ನು ಮೊಮ್ಮಗ ಕಂಡ. ಅಜ್ಜನ ಕಣ್ಣಲ್ಲಿ ಧಾರಾಕಾರ ನೀರಿಳಿಯತೊಡಗಿತು. ಮೊಮ್ಮಗ ಅಜ್ಜನ ಬಳಿ ಹೋಗಿ ಕಣ್ಣೀರು ವರೆಸಿ " ಅಜ್ಜಾ ಅಪ್ಪ ಹೀಗೆ ಮಾಡಿದಕ್ಕೆ ಬೇಸರವಾಯಿತಾ?" ಎಂದು ಕೇಳಿದ. ಅದಕ್ಕೆ ಅಜ್ಜ ಹೇಳಿದ " ಇಲ್ಲ ಮಗೂ ನಿನ್ನ ಅಜ್ಜಿಯ ಮಾತು ಕೇಳಿ ನಾನೂ ನನ್ನ ಅಪ್ಪನಿಗೆ ಹೀಗೆ ಮಾಡಿದ್ದು ನೆನಪಾಯಿತು" ಅಂದ.

2 comments:

Ramya said...

Guruuuuuuuuuuuu

ille agle ille Artha madkyamble yenta helli start madide yento helli mugside :(

Mostly ashtu intellectual thoughts nange ilyena!!!

Mruthyu said...

manassu maaDidare inthadannu neenu bareeballe! good..good..