Tuesday, March 9, 2010

ಬಿಟ್ಟೆನೆಂದರೂ "ಬಿಡದೀ" ಮಾಯೆ

ಹೂವು ಅರಳುತ್ತದೆ ಪರಾಗ ರೇಣು ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ಅದು ವಂಶಾಭಿವೃದ್ಧಿಗಾಗಿ, ಜೇನು ದುಂಬಿಗಳು ಝೇಂಕಾರದೊಂದಿಗೆ ಹೂವಿನ ಬಳಿ ತಮ್ಮ ಆಹಾರಕ್ಕಾಗಿ ಕುಳಿತು ಪರಾಗಸ್ಪರ್ಶ ಮಾಡುತ್ತವೆ. ಆಗ ಅಲ್ಲೊಂದು ಸಂಭ್ರಮ ಸಂತಸ ಏರ್ಪಡುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸೃಷ್ಟಿ ಕ್ರಿಯೆಯಂತೂ ನಡದೇ ಬಿಡುತ್ತದೆ. ಹೂವು ಕಾಯಾಗುವ ಎಲ್ಲ ಕಾರ್ಯಗಳಿಗೂ ಅಲ್ಲಿಂದಲೇ ಪ್ರಾರಂಭ. ಇಷ್ಟಾದರೂ ಅದು ಕಾಮ ಪ್ರೇಮ ಅಂತ ನಮಗೆ ಅನ್ನಿಸುವುದಿಲ್ಲ. ಡಾಣಾ ಡಂಗುರವಾಗಿ ನಡೆಯುವ ಈ ಕ್ರಿಯೆ ಅತ್ಯಂತ ಸಹಜ. ಅದರ ಮೇಲೆ ಕವನ ಕಟ್ಟಬಹುದು ಕಾವ್ಯ ಹುಟ್ಟ ಬಹುದು.
ಜೇನಿನ ರಾಣಿ ಗಂಡು ನೊಣದೊಂದಿಗೆ ಮಿಲನಕ್ಕಾಗಿ ಮೇಲಕ್ಕೇರುತ್ತದೆ. ಸಂಭ್ರಮಿಸುತ್ತದೆ ಗಂಡು ನೊಣ ಮಿಲನದ ನಂತರ ಸಾಯುತ್ತದೆ. ರಾಣಿ ಗೂಡಿಗೆ ಬಂದು ಕೆಲದಿನಗಳ ನಂತರ ಮೊಟ್ಟೆಯಿಡಲು ಆರಂಭಿಸುತ್ತದೆ. ಆದರೆ ಆರಂಭದ ದಿನಗಳ ಮೇಲೆ ಸಾಕಷ್ಟು ಕಾವ್ಯ ಹುಟ್ಟುತ್ತದೆ. ಅದು ಅಸಹ್ಯವಲ್ಲ. ಅಶ್ಲೀಲವಲ್ಲ, ಕಾಮದ ವಾಸನೆಯ ಲವಲೇಶವೂ ಅಲ್ಲಿಲ್ಲ . ಅದು ಅತೀವ ಸಹಜ.
ಆರಾಮವಾಗಿ ಹಾಲುಕೊಡುತಿದ್ದ ಆಕಳು ಕೊಟ್ಟಿಗೆಯಲ್ಲಿ ಕೂಗತೊಡಗುತ್ತದೆ. "ದನ ಹೀಟಿಗೆ ಬೈಂದು ಕಾಣ್ತು" ಮನೆಯಾತ ಸ್ವಲ್ಪ ಲಘು ದನಿಯಲ್ಲಿ ಹೇಳುತ್ತಾನೆ. ಹೀಟು ಎಂದರೆ ಆಕಳು ಹೋರಿಯನ್ನು ಬಯಸುತ್ತಿದೆ ಎಂಬ ಅರ್ಥವಾದ್ದರಿಂದ ಸಣ್ಣ ಮಕ್ಕಳಿರುವ ಮನೆಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ ಎಂಬರ್ಥದಲ್ಲಿ ಅಲ್ಲೇ ಸಣ್ಣಮಟ್ಟದ ತಗ್ಗಿದ ದನಿ. ಆನಂತರ ಒಂಥರಾ ಮುಗುಳುನಗೆಯ ಕಾರ್ಯದಲ್ಲಿ ಆಕಳಿಗೆ ಹೋರಿಯ ಬಳಿ ಸೇರಿಸುವ ಕೆಲಸ ನಡೆಯುತ್ತದೆ.
ದಾರಿ ಬದಿಯಲ್ಲಿ ಶ್ವಾನ ತಿಂಗಳಲ್ಲಿ ನಾಯಿಗಳು ಮಿಲನಕ್ಕೆ ತೊಡಗಿಕೊಂಡಾಗಲೂ ದಾರಿ ಹೋಕರು ಸ್ವಲ್ಪ ಅದೇಕೋ ನಾಚಿಕೊಳ್ಳುತ್ತಾರೆ. ಆದರೂ ಅದು ಒಂಥರಾ ಪ್ರಕೃತಿ ಸಹಜ ಎಂಬ ಭಾವ ತಳೆದು ದಾಟಿಹೋಗುತ್ತಾರೆ. ಆದರೂ ಇಲ್ಲೂ ಕೂಡ ಕೇವಲ ಕಾಮದ್ದೇ ವಾಸನೆ ಇಲ್ಲ ಗುಸು ಗುಸು ಸುದ್ಧಿಯಿಲ್ಲ. ಸಾರ್ವಜನಿಕವಾಗಿ ಹೀಗೆ ಹೀಗೆ ಅಂತ ಹೇಳಬಹುದು. ಅದೇನು ತೀರಾ ಅಶ್ಲೀಲವಲ್ಲ ಬಿಡಿ.
ಗಿಡ ಮರಗಳ ಕ್ರಿಮಿ ಕೀಟಗಳ ಮಟ್ಟ ಮನುಷ್ಯನಿಗೆ ಕಾವ್ಯವಾದರೆ, ಪ್ರಾಣಿಗಳ ಹಂತದ ಸೃಷ್ಟಿಕ್ರಿಯೆ ಸ್ವಲ್ಪ ಕಸಿವಿಸಿ. ಇನ್ನು ಮನುಷ್ಯನದ್ದೇ ಆದರೆ ಮುಗಿದೇ ಹೋಯಿತು. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಕ್ರಿಯೆ. ಹಾಗೆ ಹೀಗೆ ಅದಕ್ಕೊಂದು ಚೌಕಟ್ಟು ಅದನ್ನ ಮೀರಿದರೆ ಗಾಸಿಪ್ಪು , ಗಲಾಟೆ ಮಾನ,ಮರ್ಯಾದೆ ಅಯ್ಯಯ್ಯೋ... ಹೀಗೆ ಸಾವಿರಾರು. ಇರಲಿ "ಆಲ್ ಇಸ್ ವೆಲ್"., ಮುಂದೆ ನೋಡೋಣ.
ಪ್ರಕೃತಿ ವಂಶಾಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಸಹಜ ಮನುಷ್ಯರೆಲ್ಲರೂ ಪ್ರಕೃತಿಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಎಲ್ಲರಂತೆ ಅಲ್ಲ ಎಂದು ತೊರಿಸಿಕೊಳ್ಳಬೇಕು ಎಂದು ಹೊರಟ ಪ್ರತೀ ಮನುಷ್ಯನ ಮೊದಲ ಆದ್ಯತೆ ಈ ಪ್ರಕೃತಿ ಸಹಜವಾಗಿದ್ದಕ್ಕೆ ವಿರೋಧವಾಗಿ ಹೊರಡುವುದು. ಎಲ್ಲ ಮನುಷ್ಯರಂತೆ ನಾನಲ್ಲ ಎಂದು ತೊರಿಸಿಕೊಳ್ಳಲು ಹೊರನೋಟಕ್ಕೆ ಸುಲಭದಾರಿ ಈ ಕಾಮ. ಕಾಮಮುಕ್ತ ಎಂದು ತೊರಿಸಿಕೊಳ್ಳಲೊಂದು ಕಾವಿ. ದಿನವಿಡಿ ಕಾಮದ ಯೋಚನೆಯಿಂದ ದೂರವಿರಲು ಅನುಸರಿಸುವ ಮಾರ್ಗ ನೂರಾರು. ಬಹುಪಾಲು ದಿನದ ಸಮಯ ಇದಕ್ಕೇ ವ್ಯರ್ಥ. ನಿಯಮಿತ ಆಹಾರ ತುಳಸೀ ಮಣಿ ಉಪ್ಪುಕಾರ ಊಹ್ಞೂ ... ಅಪ್ಪಾ ಪಾಪ ಅನ್ನದೇ ವಿಧಿಯಿಲ್ಲ. ಪ್ರಕೃತಿಯೋ ನಿಮಿಷ ನಿಮಿಷಕ್ಕೂ ತನ್ನ ನಿಯಮದಿಂದ ವಿರುದ್ಧ ಹೊರಟ ಮನುಷ್ಯನನ್ನು ಮಟ್ಟ ಹಾಕಲು ಹೊಸ ಹೊಸ ವಿಧಾನ ಹುಡುಕುತ್ತಿರುತ್ತದೆ. ನಿಜದಲ್ಲಿ ಆಗದ್ದನ್ನು ಸ್ವಪ್ನದಲ್ಲಾದರೂ ಆಗಿಸಿಬಿಡುತ್ತದೆ. ಹೀಗೆ ನಿಜ ಸ್ವಪ್ನ ನಿಜ ಸ್ವಪ್ನ ಎಂದು ಹೊಳ್ಯಾಡಿ ಹೊರಳಾಡಿ ಯಾವುದೋ ದುರ್ಬಲ ಸಂದರ್ಭದಲ್ಲಿ ಕೇಳಿಗೆ ಎಳೆದೇ ಬಿಡುತ್ತದೆ. ಆವಾಗ ಇದಕ್ಕೇ ಕಾಯುತ್ತಿರುವ ಮಿಕ್ಕ ಮನುಷ್ಯರದ್ದು ಹೊಯ್ಲಾಲೆಯೋ ಹೊಯ್ಲಾಲೆ.
ಹಿಂದೆಯೂ ನೂರಾರು ಸನ್ಯಾಸಿಗಳು ಹತ್ತಾರು ವರ್ಷ ಹಠ ಹೊತ್ತು ಕಾಮದಿಂದ ದೂರವಿರಲಾರದೇ ಎನೇನೊ ಮಾಡಿದ್ದಿದೆ. ಆದರೆ ಆವಾಗ ಅವರ ಅದೃಷ್ಟ "ಹಿಡನ್ ಕ್ಯಾಮೆರಾ" ಇರದ್ದರಿಂದ ಹತ್ತಿರದ ಒಂದೆರಡು ಜನರಿಗಷ್ಟೇ ತಿಳಿದು ಮುಚ್ಚಿ ಮಾರನೇ ದಿನದಿಂದ ಮತ್ತೇ ಆಶೀರ್ವಚನದಲ್ಲಿ ಜೀವನ ಪಾವನವಾಗಿದೆ. ಆದರೆ ಕಾಲ ಈಗಿನದು ಹಾಗಲ್ಲ ಏನೇನೋ ಮಾಡಿಬಿಡುತ್ತಾರೆ ತಂತ್ರಜ್ಞಾನ ಬಳಸಿ. ದುರಂತ ಎಂದರೆ ಬಹಳಷ್ಟು ತಂತ್ರಜ್ಞಾನ ಬಳಕೆಯಾಗುವುದು ಇಂತಹ ಬೇಡದ ಕೆಲಸಗಳಿಗೆ. ಇರಲಿ ಅವೆಲ್ಲಾ ಆಗುವುದೇ ಹೀಗೆ ಆದರೆ ನಾವು ಗಮನಿಸಬೇಕಾದ್ದು ಬೇರೆಯೇ ಇದೆ.
ಕಾಮವನ್ನು ಗೆಲ್ಲಲು ಹೊರಟ ಸನ್ಯಾಸಿ ಎಲ್ಲೋ ಒಂಚೂರು ಯಡವಿದ್ದಿರಬಹುದು,ಆದರೆ ತಾನು ಎಲ್ಲರಿಗಿಂತ ಭಿನ್ನ ಎಂದು ತೊರಿಸಿಕೊಡಲು ಹಠಕ್ಕೆ ಇಳಿದು ಜಪ ತಪ ಅಂತ ಮುಳುಗಿ ಧ್ಯಾನ,ಪೀಠ ಎಂದು ಸೃಷ್ಟಿಸಿಕೊಂಡು ನೀತಿ ನಿಯಮ ಅಂತ ಪಾಲಿಸಿಕೊಂಡು ನೂರಾರು ಶ್ರೀಮಂತರಿಗೆ ಸಮಾಧಾನ ಕೊಟ್ಟು ಅವರಿಂದ ಹಣ ಪಡೆದು ಒಂದಿಷ್ಟು ವಿದ್ಯಾದಾನ ಮತ್ತೊಂದಿಷ್ಟು ಆರೋಗ್ಯ ಸೇವೆ ಮಗದೊಂದು ಗೋಪಾಲನೆ ಹೀಗೆ ಎನೇನೋ ಒಬ್ಬ ಸಹಜ ಮನುಷ್ಯ ಮಾಡಲಾಗದ್ದನ್ನು ಸಾಧಿಸಿರುತ್ತಾನಲ್ಲ ಅದರತ್ತ ನಮ್ಮ ನೋಟ ಹರಿಯಬೇಕು. ಅಲ್ಲಿ ಸಾರ್ಥಕತೆ ಕಾಣಬೇಕು. ನಾವು ನೀವೂ ಕೇವಲ ಟೀಕೆ ಮಾಡುತ್ತಾ "ಅಯ್ಯೋ ಈ ಸನ್ಯಾಸಿಗಳ ಕತೆ ಇಷ್ಟೆಯಾ" ಅಂತ ಹೇಳುತ್ತಾ ಕಳೆದುಹೋಗಬಹುದು ಆದರೆ ಈ ಸಮಯದಲ್ಲೂ ಮತೋರ್ವ ವ್ಯಕ್ತಿ ಕಾಮವನ್ನು ಜಯಿಸಲು ಒಳ್ಳೆಯ ಕೆಲಸದ ದಾರಿ ಹಿಡಿದಿರುತ್ತಾನೆ ಎಂಬುದು ಸತ್ಯ.
ಏನಾದರೂ ಒಂದಿಷ್ಟು ಒಳ್ಳೆಯ ಸಾರ್ವಜನಿಕ ಕೆಲಸಗಳು ಇಲ್ಲಿಯವರೆಗೆ ಆಗಿದ್ದಿದ್ದರೆ ತನ್ನಷ್ಟಕೆ ತನ್ನ ಹೆಂಡತಿ ಮಕ್ಕಳೊಡನೆ ಬದುಕಿ ಕೊಂಡ ಬ್ಯಾಂಕ್ ಬ್ಯಾಲೆನ್ಸ ಏರಿಸಿಕೊಂಡ ಮನುಷ್ಯನಿಂದಲ್ಲ. ಏನಾದರೂ ಮಾಡಬೇಕೆಂದು ದಾರಿ ಹಿಡಿದ ಜನರಿಂದಲೇ ಸ್ವಲ್ಪ ಮಟ್ಟಿಗೆ ಆಗಿರುವುದು. ಹಾಗೆಲ್ಲ ಸಾವಿರಾರು ಜನರ ನಾಯಕತ್ವ ವಹಿಸಿಕೊಂಡಾಗ ಎಲ್ಲೋ ಸ್ವಲ್ಪ ಯಡವಟ್ಟು ಆಗುತ್ತದೆ ಎಂದು ಪಾಮರರು ಮಾತನಾಡಿಕೊಳ್ಳುತ್ತಾರೆ. ಅದು ಕಾಮಕ್ಕೆ ಸಂಬಂದಿಸಿದ್ದಾರೆ ಸಿಕ್ಕಾಪಟ್ಟೆ ವಿಷಯ. ಆದರೆ ವಾಸ್ತವ ವೆಂದರೆ ಕಾಮದ್ದು ಪ್ರಕೃತಿ ಸಹಜ ವಿಷಯ ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ. ಅತ್ಯಾಚಾರ ಕೊಲೆ ಮುಂತಾದವು ಮಾನವೀಯತೆ ಅಲ್ಲ. ಸೃಷ್ಟಿ ಕ್ರಿಯೆ ಸೃಷ್ಟಿಯಾಗಲೀ ಬಿಡಲಿ ಸಂಭ್ರಮದ್ದು. ಅದರ ನಂತರ ಮನುಷ್ಯ ನಿರುಂಬಳನಾಗುತ್ತಾನೆ. ತಲೆಯೊಳಗೆ ಕೊರೆಯುತ್ತಿದ ಹುಳ ಆಚೆ ಬಂದಿರುತ್ತದೆ. ಹೊಸ ಹೊಸ ಕೆಲಸ ಗಳು ಹೊಸ ಹೊಸ ಯೋಚನೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಅಲ್ಲಿ ತೊಡಗಿ ಆಚೆ ಬಂದವ ಯಾವ ಕೆಲಸದಲ್ಲಿ ತೊಡಗುತ್ತಾನೆ ಮತ್ತೆಷ್ಟು ಮೇಲಕ್ಕೇರುತ್ತಾನೆ ಎಂಬುದು ಬಹಳ ಮುಖ್ಯ. ಹಾಗೆ ವಿವಾದಕ್ಕೆ ಸಿಕ್ಕಿಕೊಂಡವರು ತಮ್ಮನ್ನು ಸಮರ್ಥಿಸಿಕೊಳ್ಳಲು ಹೆಣಗಾಡತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟರೆ ಆ ಮನುಷ್ಯನಿಂದ ಹೊರಡಬಹುದಾಗಿದ್ದ ಅದ್ಬುತ ವಿಷಯ ವಿಚಾರಗಳು ಕಾಮದ ಗುಂಡಿಯೊಳಗೆ ಹೂತು ಹೋಗಿಬಿಡುತ್ತವೆ. ಪಾಮರ ಕಳೆದುಕೊಳ್ಳುವುದು ಹೀಗೆ ಪಂಡಿತ ಉಳಿಸಿಕೊಳ್ಳಲಾಗದೆ ಹೋಗುವುದೂ ಹಿಗೆಯೇ. ಇದೇ ಪ್ರಕೃ ತಿಯನ್ನು ಗೆಲ್ಲುತ್ತೇನೆ ಎಂದು ಹೊರಟ ಹುಲುಮಾನವನ್ನು ಪ್ರಕೃತಿಯೇ ಬಡಿದು ಹೈರಾಣ ಮಾಡುವ ಪರಿ.

7 comments:

ಸುಮ said...

ಕಾಮ ಪ್ರಕೃತಿ ಸಹಜ . ನಾಗರೀಕರೆನಿಸಿಕೊಂಡ ಮಾನವರಲ್ಲಿ ಅದು ಆರೋಗ್ಯಕರವಾಗಿರಬೇಕು .ಅದಕ್ಕೆಂದೇ ಮದುವೆಯೆಂಬ ಅದ್ಭ್ಹುತ ವ್ಯವಸ್ಥೆಯನ್ನು ನಮ್ಮ ಸಮಾಜ ಕಲ್ಪಿಸಿದೆ .ಅದನ್ನು ಮೀರುತ್ತೇನೆಂದು ಹೊರಡುವುದು , ಮೀರಲಾರದೆ ಹೀಗೆ ತೆರೆಮರೆಯಲ್ಲಿ ಆಟ ಆಡುವುದು ತಪ್ಪು . ಅವನೆಷ್ಟೇ ಒಳ್ಳೆಯ ಕೆಲಸಕಾರ್ಯ ಮಾಡಿದರೂ ನೈತಿಕವಾಗಿ ಸರಿಯಿಲ್ಲದಿದ್ದಾಗ ಗೌರವ ಸಿಗುವುದಿಲ್ಲ ಅಲ್ಲವೆ?

ವಿ.ರಾ.ಹೆ. said...

>>ಏನಾದರೂ ಒಂದಿಷ್ಟು ಒಳ್ಳೆಯ ಸಾರ್ವಜನಿಕ ಕೆಲಸಗಳು ಇಲ್ಲಿಯವರೆಗೆ ಆಗಿದ್ದಿದ್ದರೆ ತನ್ನಷ್ಟಕೆ ತನ್ನ ಹೆಂಡತಿ ಮಕ್ಕಳೊಡನೆ ಬದುಕಿ ಕೊಂಡ ಬ್ಯಾಂಕ್ ಬ್ಯಾಲೆನ್ಸ ಏರಿಸಿಕೊಂಡ ಮನುಷ್ಯನಿಂದಲ್ಲ.>>

CORRECT .

ಮೋಹನ್ ತಲಕಾಲುಕೊಪ್ಪ said...

Why should one win over kama? It is not possible at all. For sometime one may be able to control it but can not win against. Because it is natural and instinct behaviour.

However, then the question arises why one assumes Sanyasatva? If you look at the whole process scientifically, it is something to do with evolution of genetic systems in living beings. There is a process called " Inclusive fitness" which is prevalent in plants, animals and birds and ofcourse in human beings. This process, simply put " an indivdual will sacrifice itself in the interest of the whole community ( survival of its own genes through other members of the community)" . In case of human beings, it is sanyasi(true sanyasi; controls kama and but never wins over) who sacrific his own reproduction for the well-being of his community. But sometimes, this may not completely takes place because of the inability of the person to regulate his carnal desires.


Finally, I do not agree that one should assume Sanyasatva (as written in the blog) to achieve many things in life. Even after marriage, if you have the will, you can still achieve and do good things to the society. In fact, as someone righlty pointed out, marriage is for the right way of expression of Kama and you are mentally free to do as many things as possible( since your bodily desires are met, you are free).

Dr. Mohan Talakalukoppa

Ashok Uchangi said...

ಕಾಮ ಕಾವಿಗಿಂತ ಗಾಢವಾದರೆ ಸನ್ಯಾಸತ್ವ ತ್ಯಜಿಸಿ ಬಂದರೆ ಮಠಗಳ ಬಗ್ಗೆ ಗೌರವ ಹೆಚ್ಚುತ್ತದೆ.ಹಿಂದೆ ಒಬ್ಬ ನಿಜ,ನಿಷ್ಠಾವಂತ ಸ್ವಾಮಿಗಳು ಹೀಗೆ ಮಾಡಿದ್ದರು.

ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ...ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ...ನೀವು ಬನ್ನಿ....ನಿಮ್ಮ ಸ್ನೇಹಿತರನ್ನೂ ಕರೆತನ್ನಿ...!!!!
ಅಶೋಕ ಉಚ್ಚಂಗಿ
http://mysoremallige01.blogspot.com

ಮೃತ್ಯುಂಜಯ ಹೊಸಮನೆ said...

ದೇವಸ್ಥಾನಕ್ಕೆ ಹೋಗುವ,ಹೋಗದಿರುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಮ್ಮೆ ಹೊಕ್ಕರೆ ಮಾತ್ರ ಅಲ್ಲಿಯ ನಿಯಮಗಳ ಪಾಲನೆ ಅಗತ್ಯ. ಇದು ಎಲ್ಲ ವ್ಯವಸ್ಥೆಗೂ ಅನ್ವಯಿಸುವ ಮಾತು. ನಾಲ್ಕು ಆಶ್ರಮಗಳಲ್ಲಿ ಮೊದಲನೆಯ ಬ್ರಹ್ಮಚರ್ಯದಿಂದ ನೇರವಾಗಿ ಸನ್ಯಾಸವನ್ನು ಸ್ವೀಕರಿಸಬಹುದು. ಆದರೆ ಆಗ ಗೃಹಸ್ಥಾಶ್ರಮದ ಸುಖ(?),ಹಕ್ಕುಗಳನ್ನು ಬಯಸುವಂತಿಲ್ಲ. ಈಗಿನ ಕೆಲವು(ಬಹಳಷ್ಟು?) ಸನ್ಯಾಸಿಗಳಿಗೆ ಗೃಹಸ್ಥಾಶ್ರಮದ ಸುಖ ಬೇಕು; ಸನ್ಯಾಸತ್ವದ ಗೌರವ ಬೇಕು. ಈ ದ್ವಂದ್ವ ಯಾಕೆ? ಮತ್ತೆ ಸನ್ಯಾಸಿಗಳು ಸಮಾಜದಿಂದ ಹಣ ಸಂಗ್ರಹಿಸಿ ಸಮಾಜದ ಒಳ್ಳಿತಿಗಾಗಿ ವಿನಿಯೋಗಿಸಿದರೆ ಕಾಮಕ್ಕೆ ಸಂಬಂಧಿಸಿರುವ ಅವರ ದೌರ್ಬಲ್ಯವನ್ನು ಗಮನಿಸಬೇಕಾಗಿಲ್ಲ ಎಂಬುದು ಒಪ್ಪಿತವಾಗುವ ಮಾತಲ್ಲ. ಅವರ ಸನ್ಯಾಸತ್ವದ ಕಾರಣದಿಂದಲೇ ಭಕ್ತರು ದಾನ ಮಾಡುವುದಲ್ಲವಾ?

Anonymous said...

sari tappu annuva vishayada bagge no comment, ekendare idaralli eradoo ide..

adare nanage arta agade iro vishya andre bahupalu janagalu swamiji bali hoguvudu avaru maduava pavadakke matra, avara dhyana,chintane, sandeshagalu yavudoo talege hoguvude illa, kshana matradalli samasye mayavagabeku anno nireekse.
sariyada tiluvalike illade moudyavagi follow mado janagale echhettukolli, neevu aradisabekagidu vyaktiyannalla, tatvagalanuu. bekiddare innarda gante jasti dyana madi olleyadaguttade.

ದೀಪಸ್ಮಿತಾ said...

ಸತ್ಯವಾದ ಬರವಣಿಗೆ. ಪ್ರಕೃತಿಯನ್ನು ವಿರೋಧಿಸಿ ಬದುಕುವುದು ಅರ್ಥವಿಲ್ಲ. ಹಾಗೆಂದು ಎಲ್ಲವನ್ನೂ ತ್ಯಾಗ ಮಾಡಲೇಬೇಕೆಂದಿದ್ದರೆ ಅದಕ್ಕೆ ಸರಿಯಾದ ಮನೋ ನಿಗ್ರಹ ಇರಬೇಕು. ಒಳಗೊಂದು ಹೊರಗೊಂದು ಎಂಬ ಬದುಕು ಎಲ್ಲರಿಗೂ ಮೋಸ ಮಾಡಿದಂತೆ. ಅಷ್ಟಕ್ಕೂ ಧಾರ್ಮಿಕ ಮುಖಂಡರು ಸಂಸಾರಸ್ಥರು ಆಗಿರಬಾರದು ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಋಷಿಮುನಿಗಳೆಲ್ಲ ಪತ್ನಿ ಮಕ್ಕಳ ಜೊತೆ ಇದ್ದೇ ಧರ್ಮವನ್ನು ಸಮಾಜವನ್ನು ಮುನ್ನಡೆಸಲಿಲ್ಲವೆ? ಎಲ್ಲರೂ ಗೌರವಿಸುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಂಸಾರಸ್ಥರು