Saturday, August 14, 2010

ಮನೆಯೇ ವಸ್ತು ಸಂಗ್ರಹಾಲಯ


ಧರ್ಮಸ್ಥಳಕ್ಕೋ ಅಥವಾ ಮೈಸೂರಿಗೋ ಪ್ರವಾಸಕ್ಕೆ ಹೋದವರು ಒಮ್ಮೆ ವಸ್ತು ಸಂಗ್ರಹಾಲಯಕ್ಕೆ ಹೋಗದೇ ಬರಲಾರರು. ಒಂದುಕಾಲದಲ್ಲಿ ಮನುಷ್ಯ ಬಳಸುತ್ತಿದ್ದ ವಸ್ತುಗಳ ಒಪ್ಪಓರಣ ಜೋಡಣಯೇ ಅಲ್ಲಿನ ಪ್ರಮುಖ ಆಕರ್ಷಣೆ. ಈ ಸಂಗ್ರಹಗಳು ಬಹಳ ಪುರಾತನವಾದುದರಿಂದ ಅವುಗಳ ಮಹತ್ವ ಜಾಸ್ತಿ. ವಸ್ತುಗಳು ಹಳೆಯದಾದಂತೆಲ್ಲ ಮಹತ್ವ ಪಡೆಯುತ್ತಾ ಸಾಗುತ್ತದೆ. ಆದರೆ ಹಾಗೆ ಮಹತ್ವ ಪಡೆದುಕೊಳ್ಳಲು ಅವುಗಳನ್ನು ಕಾಪಿಡಬೇಕು.ಹಾಗೆ ಕಾಪಿಟ್ಟದ್ದನ್ನು ಅಂದವಾಗಿ ಒಪ್ಪಓರಣ ಮಾಡುತ್ತಾ ಇರಬೇಕು. ಆಗ ಅದು ಸಂಗ್ರಹಾಲಯ ಎಂದೆನಿಸಿಕೊಳ್ಳುತ್ತದೆ. ಅವೆಲ್ಲ ದೊಡ್ಡಮಟ್ಟದ ಸಂಗ್ರಹಾಲಯದ ಕತೆಯಾಯಿತು, ಹೀಗೆ ಹಳೆಯದಾದ ವಸ್ತುಗಳನ್ನು ಬಳಕೆಯಿಲ್ಲದೆ ಮೂಲೆಗೆಸೆದ ಹಳೆಯ ಅಮೂಲ್ಯ ವಸ್ತುಗಳನ್ನು ಅಚ್ಚುಕಟ್ಟಾಗಿ ಕಾಪಿಟ್ಟು, ಕೃಷಿಕ ವೃತ್ತಿಯ ಜತೆಯಲ್ಲಿಯೇ ತಮ್ಮ ಮನೆಯಲ್ಲಿ ಒಂದು ಪುಟ್ಟ ಹಳೆಯ ವಸ್ತು ಸಂಗ್ರಹಾಲಯ ಮಾಡಿದ ಹಳ್ಳಿ ಹೈದನ ಆಸಕ್ತಿಯ ನೋಟ ಇದು.
ಸಾಗರ ತಾಲ್ಲೂಕಿನ ತಲವಾಟ ನಲವತ್ತು ಮನೆಗಳ ಪುಟ್ಟ ಹಳ್ಳಿ. ಅಡಿಕೆ ಕೃಷಿ ಅಲ್ಲಿನ ಜನರ ಜೀವನಾಧಾರ. ಕೃಷಿಯ ಜತೆಯಲ್ಲಿ ಈ ಪುಟ್ಟ ಸಂಗ್ರಹಾಲಯವನ್ನು ನಡೆಸುತ್ತಿರುವ ವ್ಯಕ್ತಿ ಗುಂಡೂಮನೆ ಜಯಕೃಷ್ಣ. ಜಕ್ಕಣ್ಣ ಎಂದೇ ಪರಿಚಿತರಾಗಿರುವ ಇವರಿಗೆ ಪುರಾತನ ವಸ್ತುಗಳನ್ನು ಕಾಪಿಡುವ ಹವ್ಯಾಸ. ಅವರ ಹವ್ಯಾಸಕ್ಕೆ ಹಲವಾರು ಜನರು ತಮ್ಮ ಮನೆಯ ಅಟ್ಟದ ಮೂಲೆಯಲ್ಲಿ ಬಿದ್ದಿರುವ ವಸ್ತುಗಳನ್ನು ನೀಡಿದ್ದಾರೆ. ಜಯಕೃಷ್ಣ ಅವುಗಳನ್ನು ಅಲ್ಪ ಸ್ವಲ್ಪ ದುರಸ್ತಿ ಮಾಡಿಸಿ ಸುಸ್ಥಿಯಲ್ಲಿ ತಮ್ಮ ಮನೆಯ ಅಟ್ಟದಲ್ಲಿ ಜೋಡಿಸುತ್ತಾರೆ. ಅವರ ಈ ಪುಟ್ಟ ಸಂಗ್ರಹಾಲಯದಲ್ಲಿ ನೂರು ವರ್ಷ ಹಳೆಯದಾದ ಲಾಟೀನು, ಇನ್ನೂ ಹಳೆಯ ಇತಿಹಾಸವಿರುವ ದೀಪದ ಕಂಬ, ಐವತ್ತು ವರ್ಷದ ಹಳೆಯದಾದ ಕ್ಯಾಮೆರಾ, ಸ್ವಾತಂತ್ರ್ಯ ಪೂರ್ವದ ನಾಣ್ಯಗಳು, ತಾಳೇಗರಿ ಗ್ರಂಥಗಳು, ಮರದ ಒತ್ತು ಯಂತ್ರ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಕೃಷಿ ಉಪಕರಣಗಳಿಂದ ಪ್ರಾರಂಭವಾಗಿ ಕೃಷಿಕ ಬಳಸುತ್ತಿದ್ದ ಹಲವು ವಸ್ತುಗಳು ಇಲ್ಲಿವೆ. ನಿರುಪಯೋಗಿ ವಸ್ತುಗಳನ್ನು ಎಸೆದು ಕಸದಿಂದ ತುಂಬಿರುತ್ತಿದ್ದ ಮನೆಯ ಮಹಡಿ ಈಗ ಅದೇ ನಿರುಪಯೋಗಿ ವಸ್ತುಗಳನ್ನು ಒಪ್ಪ ಓರಣವಾಗಿಟ್ಟದ್ದರಿಂದ ವಸ್ತುಸಂಗ್ರಹದ ಕೋಣೆಯಾಗಿದೆ. ಮುಂದಿನ ತಲೆಮಾರಿನವರಿಗೆ ಹಿಂದಿನ ವಸ್ತುಗಳ ಪರಿಚಯಿಸುವ ಜಾಗವಾಗಿದೆ.
ಸ್ವಂತ ಹವ್ಯಾಸಕ್ಕೆಂದು ಶುರುಮಾಡಿದ ಸಂಗ್ರಹಾಲಯಕ್ಕೆ ಈಗ ಆಪ್ತರು,ಪರಿಚಯಸ್ತರು ಭೇಟಿ ನೀಡುವುದರ ಜತೆಗೆ ಅಪರೂಪಕ್ಕೊಮ್ಮೆ ಜೋಗ ನೋಡಲು ಬಂದ ಪ್ರವಾಸಿಗಳು ಬಂದು "ವಾವ್" ಎನ್ನುವುದುಂಟು, ಕೃಷಿಯ ಜತೆ ಇಂಥಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಭಾಹ್ಯ ಪ್ರಪಂಚದ ಪರಿಚಯದ ಜತೆ ಕೃಷಿಕನ ವ್ಯಾಪ್ತಿಯ ವಿಸ್ತಾರವೂ ಆಗುತ್ತದೆ ಎನ್ನುವುದು ಜಯಕೃಷ್ಣರವರ ಮಾತು. ಐದು ವರ್ಷಗಳ ಹಿಂದೆ ಮನೆಯಲ್ಲಿಯೇ ಇದ್ದ ನಾಲ್ಕು ವಸ್ತುಗಳಿಂದ ಪ್ರಾರಂಭವಾದ ಸಂಗ್ರಹಾಲಯ ಇಂದು ೧೪೫ ಹಳೆಯ ವಸ್ತುಗಳನ್ನು ಹೊಂದಿದೆ ಜತೆಯಲ್ಲಿ ಈ ಹವ್ಯಾಸದಿಂದಾಗಿ ಅಷ್ಟೇ ಪ್ರಮಾಣದ ಹೊಸ ಮಿತ್ರರನ್ನೂ ಗಳಿಸಿದ್ದೇನೆ ಎನ್ನುತ್ತಾರೆ ಜಕ್ಕಣ್ಣ. ಜೋಗಕ್ಕೆ ಹೋದಾಗ ಒಮ್ಮೆ ಭೇಟಿ ನೀವೂ ಕೊಡಬಹುದು.

ಜಯಕೃಷ್ಣರವರ ವಿಳಾಸ:

ಜಿ.ಎಸ್.ಜಯಕೃಷ್ನ
ಅಂ: ತಲವಾಟ
ಸಾಗರ -ಶಿವಮೊಗ್ಗ 577421 ಫೋ: 08183207361 ಈ ಮೈಲ್: ulimane@gmail.com

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

1 comment:

ಸೀತಾರಾಮ. ಕೆ. / SITARAM.K said...

nice info. Jayakrishna's effort to be appreciated.