Saturday, September 25, 2010

ಕೋಣೆಯ ಸೊಗಸಿಗೆ ಕಾಷ್ಠ ಕಲೆ


ಕಲಾವಿದನ ಕೈಗೆ ಕಸ ಸಿಕ್ಕರೂ ರಸವೆ. ಅವನಲ್ಲಿರುವ ಕಲೆಗಾರ ಕಸದಲ್ಲಿ ಅಡಗಿಕುಳಿತಿರುವ ರಸವನ್ನು ಹುಡುಕಿ ಮೇಲೆತ್ತುತ್ತಾನೆ. ಮಣ್ಣನ್ನು ಮೂರ್ತಿಗಳನ್ನಾಗಿಸಿ, ಶಿಲೆಯನ್ನು ಶಿಲ್ಪವನ್ನಾಗಿಸಿ, ಬಣ್ಣವನ್ನು ಚಿತ್ರವನ್ನಾಗಿಸಿ ಹೀಗೆ ನಾನಾ ವಿಧದಲ್ಲಿ ಜಡಕ್ಕೆ ಚೇತನ ತುಂಬುವ ಕೆಲಸ ಕಲಾವಿದನಿಂದಲ್ಲದೆ ಮತ್ಯಾರಿಂದನೂ ಸಾದ್ಯವಿಲ್ಲ. ಅಥವಾ ಅಂತಹ ಜನರಿಗೆ ಕಲಾವಿದರು ಎನ್ನಬಹುದು. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಗೋಟಗಾರು ಗಣಪತಣ್ಣ ಸೇರುತ್ತಾರೆ.
ಸಾಗರ ತಾಲ್ಲೂಕಿನ ಜೋಗ ಮಾರ್ಗದಲ್ಲಿ ಸಾಗರದಿಂದ ೧೨ ಕಿಲೋಮೀಟರ್ ದೂರದಲ್ಲಿ ಸಿಗುವ ಗೋಟಗಾರು ಎಂಬುದು ಕೇವಲ ಐದುಮನೆಗಳ ಪುಟ್ಟ ಹಳ್ಳಿ. ಅಲ್ಲಿನ ಕೃಷಿಕ ಗಣಪತಿಯವರಿಗೆ ತಮ್ಮ ತೋಟದ ಸುತ್ತಮುತ್ತ ಹಾಗೂ ಕಾಡಿನಲ್ಲಿ ಸಿಗುವ ಒಣಗಿದ ಮರಗಳಲ್ಲಿ ಅಡಗಿಕುಳಿತಿರುವ ಆಕಾರಗಳನ್ನು ಹೊರತೆಗೆಯುವುದು ಹವ್ಯಾಸ. ಜನಸಾಮಾನ್ಯರಿಗೆ ಮರದಬೊಡ್ಡೆಯಾಗಿ ಕಾಣಿಸುವ ಒಣಗಿದ ಮರಗಳು ಅವರಿಗೆ ವಿಶಿಷ್ಠ ವಿಶೇಷ ಆಕಾರಗಳಾಗಿ ಕಾಣಿಸುತ್ತವೆ. ಹಾಗಾಗಿ ಅವರ ಮನೆಯ ಪ್ರವೇಶದ್ವಾರದಲ್ಲಿಯೇ ನಂದಿಮರದಲ್ಲಿ ಅಡಗಿಕುಳಿತಿದ್ದ ಈಶ್ವರನ ವಾಹನ ನಂದಿಯಾಗಿ ಮನೆಗೆ ಬರುವ ಜನರನ್ನು ಸ್ವಾಗತಿಸುತ್ತಾ ಕುಳಿತಿದ್ದಾನೆ. ಕಾಡಿನಲ್ಲಿ ಸತ್ತು ಮಣ್ಣಾಗಿಹೋಗುತ್ತಿದ್ದ ಗಿಡದ ಬೇರುಗಳು, ಮತ್ತಿ, ಬೀಟೆ ಮುಂತಾದ ಹತ್ತು ಹಲವಾರು ಜಾತಿಗಳ ಮರದ ಬೊಡ್ಡೆಗಳು ವಿವಿಧ ಆಲಂಕಾರ ಪಡೆದು ಮನೆಯನ್ನು ಕಾಷ್ಠ ಶಿಲ್ಪಗಳ ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಕಾಡಿನಲ್ಲಿ ಸತ್ತುಹೋಗಿರುವ ಮರದ ಬೊಡ್ಡೆ ಆಕಾರಪಡೆದು ಕಾಸು ಖರ್ಚಿಲ್ಲದ ಮನೆಯಲ್ಲಿರುವ ಟಿಪಾಯಿಯ ರೂಪ ಪಡೆದು ಕುಳಿತಿದೆ. ಚಿಕ್ಕ ಚಿಕ್ಕ ಮಾನವನ ಆಕಾರಗಳಿಂದ ಹಿಡಿದು ನವಿಲು, ಹಾವು, ಗಿಳಿ, ಜಿಂಕೆ ಗಣಪತಿ ಮೂರ್ತಿ ಹೀಗೆ ಎಲ್ಲವೂ ಮರದ ಬೇರುನಾರಿನಿಂದಲೇ ರೂಪತಳೆದು ಇಲ್ಲಿ ಜೀವಕಳೆಪಡೆದುಕೊಂಡು ನಿಂತಿದೆ. ಎಂದೋ ಸತ್ತುಹೋಗಿ ಕಾಡಿನಲ್ಲಿ ಮಣ್ಣು ಸೇರುತ್ತಿದ್ದ ಮರದ ಬೊಡ್ಡೆಗಳ ಆಕಾರ ಗಣಪತಿಯವರ ಕೈಯಿಂದ ಜೀವ ತಳೆದು ಅವರಿಂದ ಅದು ಸಿಕ್ಕ ಕತೆಯನ್ನು ಸ್ವಾರಸ್ಯವಾಗಿ ಹೇಳಿಸಿಕೊಂಡು ಮುದನೀಡುತ್ತವೆ.
ಮಗ ಅರುಣ ಕೂಡ ಇಂತಹ ಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಹಾಗೂ ಸೊಸೆ ಸೌಮ್ಯ ಯಕ್ಷಗಾನ ಕಲಾವಿದೆಯಾಗಿರುವುದರಿಂದ ಅವರುಗಳ ಉತ್ತಮ ಸಹಕಾರ ಗೋಟಗಾರು ಗಣಪತಿಯವರಿಗೆ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಷ್ಠಶಿಲ್ಪ ಅತ್ಯುತ್ಸಾಹದಿಂದ ಮುಂದುವರೆದಿದೆ. ಜೋಗ ನೋಡಲು ಹೋದಾಗ ಒಮ್ಮೆ ನೀವೂ ಭೇಟಿ ನೀಡಿ ಆಸ್ವಾದಿಸಬಹುದು. ಗಣಪತಿಯವರ ಫೋನ್ ನಂ: ೦೮೧೮೩-೨೩೧೯೬೯
(ಲವಲವಿಕೆಯಲ್ಲಿ ಇಂದು ಪ್ರಕಟಿತ)

2 comments:

Dr.D.T.Krishna Murthy. said...

ಎಲೆಯ ಮರೆಯ ಕಾಯಿಯಂತಿರುವ ಇಂತಹ ಪ್ರತಿಭೆ ಉಳ್ಳವರ ಪರಿಚಯ ಮಾಡಿಸುತ್ತಿರುವುದಕ್ಕೆ ಅನಂತ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಡಾಕ್ಟರ ಕೃಷ್ಣಮೂರ್ತಿಯವರ ಅಭಿಪ್ರಾಯವೇ ನನ್ನದೂ ಸಹಾ...