Wednesday, October 20, 2010

ಅಂತೂ ಇಂತೂ ಬಂತು "ಕಟ್ಟು ಕತೆಯ ಕಟ್ಟು

ಕತೆಗಳು ಏಕೆ ಹುಟ್ಟಿಕೊಂಡವು? ಹೇಗೆ ಸೃಷ್ಟಿಯಾಯಿತು? ಯಾಕಾಗಿ ಬರೆಯಬೇಕು? ಯಾಕಾಗಿ ಓದಬೇಕು? ಎಂಬಂತಹ ಪ್ರಶ್ನೆಗಳ ಉತ್ತರ ನನ್ನ ಬಳಿಯಲ್ಲಿ ಇಲ್ಲ. ಮನುಷ್ಯ ಸಮಾಜೀವಿಯಾದ್ದರಿಂದ ಅವನು ವರ್ತಮಾನದ ವಾಸ್ತವಕ್ಕಿಂತ ಕಲ್ಪನೆಗಳಿಗೆ ಹೆಚ್ಚು ಮಾನ್ಯತೆ ನೀಡುವುದರಿಂದ, ತನ್ನ ನೋವನ್ನು ಹೇಳಿ ಮರೆಯಬಹುದು ಅಂದುಕೊಂಡಿರುವುದರಿಂದ, ತಾನು ಪಟ್ಟ ಸಂತೋಷ ಹಂಚಿ ಸುಖಿಸುವುದರಿಂದ, ಕಂಡ ಘಟನೆ, ಅನುಭವಿಸಿದ ನೋವು ನಲಿವು, ಹೀಗೆ ಏನೇನೆಲ್ಲಾವುಗಳನ್ನು ಹಂಚಿಕೊಂಡಾಗ ಅದೇನೋ ಒಂಥರಾ ಆನಂದದ ಭಾವನೆ ಆಳದಲ್ಲಿ ಮೂಡುವುದರಿಂದ ಆತ ಕತೆ ಹೇಳುವುದನ್ನು ರೂಢಿಸಿಕೊಂಡ, ಹೇಳುವ ಕತೆಯ ವಿಸ್ತಾರ ಪ್ರಸಾರದ ವೇಗ ದೂರ ಕಡಿಮೆ ಅನ್ನಿಸಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡ . ಹೀಗೆ ಏನೇನೆಲ್ಲಾ ವ್ಯಾಖ್ಯಾನ ನೀಡಬಹುದು ಕತೆಗಳ ಬಗ್ಗೆ. ಅದು ಅವರವರ ಬುದ್ದಿಮತ್ತೆಗನುಗುಣವಾಗಿರುತ್ತದೆ. ನನಗೆ ಅವೆಲ್ಲಾ ತಿಳಿಯದು.
ಕತೆಗಳಿಗೆ ಆಳ ಇದೆ ಉದ್ದ ಇದೆ ಅಗಲ ಇದೆ. ಕತೆಯನ್ನು ಬರೆದವನ ದೃಷ್ಟಿಯಿಂದ ಓದಬಹುದು, ಓದುಗನ ದೃಷ್ಟಿಯಿಂದ ನೋಡಬಹುದು, ಬರೆಯುವವನ ಓದುವವನ ವಯಸ್ಸು ಕಾಲಗಳಿಂದಲೂ ಅಳೆಯಬಹುದು. ಬರಹಗಾರ ಪಕ್ವವಾಗಿದ್ದರೆ ಎರಡು ಶಬ್ಧಗಳ ನಡುವೆ ಸದ್ದನ್ನು ಮೂಡಿಸಬಲ್ಲ. ಓದುಗ ಪರಿಪಕ್ವನಾಗಿದ್ದರೆ ಅದನ್ನು ಅರ್ಥೈಸಿಕೊಳ್ಳಬಲ್ಲ. ಕತೆಗಾರನ ವೈಯಕ್ತಿಕ ಜೀವನದಿಂದಲೂ ಕತೆಗಳನ್ನು ಪರಿಚಯಮಾಡಿಕೊಳ್ಳಬಹುದು. ಎಂತೆಲ್ಲಾ ವಿಮರ್ಶಕರು ಹೇಳುತ್ತಾರೆ. ನನಗೆ ಅವೆಲ್ಲಾ ಅರ್ಥವಾಗದು.
ಕತೆಯ ಅಂತ್ಯವನ್ನು ಓದುಗನೇ ಊಹಿಸಿಕೊಳ್ಳಲಿ ಅಂತ ಬಿಡಬಹುದು. ಅಥವಾ ಬರಹಗಾರನೇ ಅಂತ್ಯ ನೀಡಬಹುದು. ನೀಡಿದ ಅಂತ್ಯ ಅಂತ್ಯವಾಗದೆಯೂ ಇರಬಹುದು, ಮತ್ತೆ ಅಲ್ಲಿಂದ ಆರಂಭ ಅಂತಲೂ ಅನ್ನಿಸಬಹುದು. ಹಾಗಾಗಿ ಕತೆಗಳ ವಿಷಯದಲ್ಲಿ ಆರಂಭ ಗೊತ್ತಿಲ್ಲ ಅಂತ್ಯ ಎಂಬುದು ಇಲ್ಲ. ಅಷ್ಟಾದಮೇಲೆ ನನಗೆ ಅದರ ಗೊಡವೆ ಬೇಡ.
ನಾನೂ ಒಂದಿಷ್ಟು ಬರೆದೆ, ಕಂಡಿದ್ದು, ಕೇಳಿದ್ದು, ನೋಡಿದ್ದೂ ಹಾಗೂ ನನ್ನದೇ ಆದ ಕೈಕರ್ಚಿನದು. ಬರೆದದ್ದು ಹಾಗೆ ಇಡುವುದು ಬೇಡ ಅಂತ ಅನ್ನಿಸಿ ಪತ್ರಿಕೆಗೆ ಕಳುಹಿಸಿದೆ. ಪ್ರಕಟವಾದಾಗ ಮಾತ್ರ ಮತ್ತೆ ಮತ್ತೆ ಓದಿ ಸಂಭ್ರಮಿಸಿದೆ. ನಂತರ ಮತ್ತೆ ಮತ್ತೆ ಬರೆದೆ. ಮತ್ತೆ ಮತ್ತೆ ಓದಿದೆ. ಹೀಗೆ ನಾನು ಬರೆಯಲು ಪ್ರಕಟವಾಗಲು ಸಹಕರಿಸಿದ ಜನರ ಸಂಖ್ಯೆ ಅಪಾರ. ಹೊತ್ತು ಹೆತ್ತವರು, ಒಡಹುಟ್ಟಿದವರು, ಜತೆಗೆ ಬೆಳೆದವರು, ನನ್ನನ್ನು ಸಹಿಸಿಕೊಂಡವರು,ಜೀವನ ಹಂಚಿಕೊಂಡವರು, ಅನ್ನ ಔಷಧಿ ಬಟ್ಟೆ ಬೆಳೆದು ನೆಯ್ದು ನೀಡಿದವರು, ಕಾರಣರು ಕಾರಣೀಕರ್ತರು ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಒಟ್ಟಿನಲ್ಲಿ ಸಮಷ್ಠಿಯ ಸಮಾಜದ ಋಣ ತೀರಿಸಲಾಗದ್ದು, ಅವೆಲ್ಲಾ ಸಹಕಾರದಿಂದ ನಾನು ಒಂದಿಷ್ಟು ದಾಖಲಿಸಿ ಅವುಗಳನ್ನ ಕತೆಯಾಗಿಸಿ ಸಂಕಲನವನ್ನಾಗಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಕತೆಗಳು ಚೆನ್ನಾಗಿದೆ ಎಂದರೂ, ಚೆನ್ನಾಗಿಲ್ಲ ಎಂದರೂ ನನಗೆ ಸಂತೋಷವೇ, ಕಾರಣ ಓದಿದ ನಂತರ ಹೇಳುವ ಅಭಿಪ್ರಾಯಗಳು ಅವು. ನನ್ನ ಕತೆಗಳನ್ನು ಓದಿದ ನಂತರ ಹೇಳುವ ಅಭಿಪ್ರಾಯಗಳು ಓದುಗನ ಮನಸ್ಥಿತಿಯನ್ನೂ ಅವಲಂಬಿಸಿರುತ್ತದೆಯಾದರಿಂದ ನೀವು ಓದುವುದಷ್ಟೆ ನನಗೆ ಮುಖ್ಯ. ಅಭಿಪ್ರಾಯ ಹೇಗಿದ್ದರೂ ನನಗದು ಆನಂದವೇ.
ನೆಟ್ ಮುಂದೆ ಕುಳಿತ ಒಂದು ದಿನ ಚಾಟ್ ನಲ್ಲಿ "ನೀನೇಕೆ ಒಂದು ಕಾದಂಬರಿ ಬರೆಯಬಾರದು? ಎಂಬ ಪ್ರಶ್ನೆ ಟೈಪಿಸಿ ಅದಕ್ಕೆ " ಅಯ್ಯೋ ಬರೆಯುವುದು ದೊಡ್ಡದಲ್ಲ ಆದರೆ ಮುದ್ರಿಸುವುದು ಕಷ್ಟ, ಈಗ ನೋಡು ಕಥಾಸಂಕಲನ ಮುದ್ರಿಸಲಾಗದೇ ಒದ್ದಾಡುತ್ತಿದ್ದೇನೆ" ಎಂದಾಗ ಸುಮ್ಮನೇ ಕೇಳಿದ ಮಾತಾಗದೆ "ನಾನಷ್ಟು ಕೊಡುತ್ತೇನೆ" ಎಂದ ನನ್ನ ಅಕ್ಕನ ಮಗಳು ನವ್ಯಾಳಿಗೆ ಹಾಗೂ ಕಳೆದ ಹತ್ತು ವರ್ಷದಿಂದ ನಾ ಬರೆದ ಎಲ್ಲಾ ಕತೆಗಳನ್ನು ಜತನವಾಗಿ ಕಾಪಿಟ್ಟು, ವ್ಯವಹಾರದ ವಿಷಯ ಬದಿಗಿಟ್ಟು, ತನ್ನದೇ ಕತೆಯ ಕಟ್ಟು ಎಂಬಂತೆ ಮುದ್ರಿಸಿಕೊಟ್ಟ ವೇಣುಮಾಧವನಿಗೆ, "ಬೇಲಿ" ಎಂಬ ಕತೆ ಕನ್ನಡ ಪ್ರಭದಲ್ಲಿ ಪ್ರಕಟವಾದ ಮಾರನೇ ದಿವಸ ಕಾಡಿನ ಒಳಗೆ ಇರುವ ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದು ನೀವು ನಿಮ್ಮ ಕತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ ಎಂದು ಹುರಿದುಂಬಿಸಿ ನನಗಿಂತ ಚೆನ್ನಾಗಿ ನಾ ಬರೆದ ಕತೆಗಳನ್ನು ನೆನಪಿಟ್ಟುಕೊಂಡು ಅರ್ಥೈಸಿದ ಜೋಗದ ಸರ್ಕಾರಿ ಕಾಲೇಜಿನ ಗ್ರಂಥಪಾಲಕರಾದ ದೂರಪ್ಪನವರಿಗೆ, ನಾನು ಆಭಾರಿ ಎಂದಷ್ಟೇ ಹೇಳಿದರೆ ಕಡಿಮೆ. ಆಂತರ್ಯದ ಧನ್ಯವಾದ ಅವರುಗಳಿಗೆ. ಚಿತ್ರ ಬಿಡಿಸಿಕೊಟ್ಟ ಮಾಹಬಲೇಶ್ವರ ಸಾಲೇಕೊಪ್ಪ ಹಾಗೂ ಜಿ ಎಂ ಹೆಗಡೆ ಬೊಮ್ನಳ್ಳಿ ಅವರಿಗೆ ವಂದನೆಗಳು. ನಿತ್ಯದ ದಿವಸಗಳಲ್ಲಿ ಅವರಿಗೆ ತಿಳಿಯದಂತೆ ನನ್ನನ್ನು ಕತೆ ಬರೆಯಲು ಪ್ರೇರೇಪಿಸಿದ ಡೈರಿಕಟ್ಟೆಯ ಸಹವರ್ತಿಗಳಿಗೆ ನಮಸ್ಕಾರಗಳು. "ಕಟ್ಟು ಕತೆಯ ಕಟ್ಟು ಎಂಬ ಕಥಾಸಂಕಲನ ಬಗ್ಗೆ ಬ್ಲಾಗ್ ನಲ್ಲಿ ಹಾಗೂ ಸಂಪದದಲ್ಲಿ ಬರೆದಾಗ "ಯಾವಾಗ ಬಿಡುಗಡೆ ? ನನಗೊಂದು ಪ್ರತಿ ಇರಲಿ" ಎಂದ ಎಲ್ಲ ಆತ್ಮೀಯರಿಗೆ ಧನ್ಯವಾದಗಳು, ಮುನ್ನುಡಿ ಬರೆದುಕೊಡುತ್ತೀರಾ? ಎಂದಾಕ್ಷಣ ತಮ್ಮ ಎಲ್ಲಾ ಖಾಯಿಲೆ ನೋವುಗಳನ್ನು ಬದಿಗಿಟ್ಟು ಒಂದೇ ಗುಟುಕಿನಲ್ಲಿ ಎಲ್ಲಾ ಕತೆಗಳನ್ನು ಓದಿ ಮುನ್ನುಡಿ ಬರೆದುಕೊಟ್ಟ ಸುಳಿಮನೆಯ ಕೇಸರಿ ಪೆಜತ್ತಾಯರಿಗೂ ಹಾಗೂ ಬೆನ್ನುಡಿ ಬರೆದ ರಾಧಾಕೃಷ್ಣ ಭಡ್ತಿಯವರಿಗೂ ಹಾಗೂ ನನ್ನ ಭಾವಚಿತ್ರ ತೆಗೆದುಕೊಟ್ಟ ಪಾಲಚಂದ್ರರವರಿಗೂ ಪ್ರಣಾಮಗಳು. ಗಣಪತಿ ಪ್ರಿಂಟಿಗ್ ಪ್ರೆಸ್ ನ ಮಾಲಿಕರಾದ ಎಚ್ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಗಳಿಗೆ ತ್ಯಾಂಕ್ಸ್. ಪ್ರತ್ಯಕ್ಷ ಪರೋಕ್ಷ ಸಹಕರಿಸಿದ ಎಲ್ಲರಿಗೂ ಅನಂತಾನಂತವಂದನೆ.
ದೀಪಾವಳಿಯ ದಿನ ಸಂಜೆ ಆರೂವರೆಗೆ ತಲವಾಟಾ ಶಾಲಾ ಆವರಣದಲ್ಲಿ "ಕಟ್ಟು ಕತೆಯ ಕಟ್ಟು" ಕಥಾಸಂಕಲನದ ಬಿಡುಗಡೆಯ ಸಮಾರಂಭ. ಬನ್ನಿ ಒಂದಿಷ್ಟು ಖುಷಿ ಹಂಚಿಕೊಳ್ಳೋಣ.

10 comments:

nagarathna rajarama said...

khushiyatu. nammellara hrudaya poorvaka aasheervadagalu.

ಸುಮ said...

congrats Raghanna.

ಚುಕ್ಕಿಚಿತ್ತಾರ said...

''ಕಟ್ಟು ಕತೆಯ ಕಟ್ಟು'' ಬಿಡುಗಡೆಗೆ ಹಾರ್ಧಿಕ ಶುಭಾಶಯಗಳು.

ಆ ”ಕಟ್ಟಿನ” ಬಗ್ಗೆ ಬರೆದದ್ದು ಒಳ್ಳೇ ಹೋಳಿಗೆ ಕಟ್ಟಿನ೦ತೆಯೇ ಇದೆ.....!!

ಮನಮುಕ್ತಾ said...

ಶುಭಾಶಯಗಳು.

Ranjita said...

Nimma katu kateya bidugade samarambhakke shubhashayagalu

ವನಿತಾ / Vanitha said...

Shubhaashayagalu:)

Mahesh said...

ಶುಭವಾಗಲಿ

ಶಾಂತಲಾ ಭಂಡಿ (ಸನ್ನಿಧಿ) said...

Congrats Raghanna,
oorige bandaaga pustaka tagandu Odti.

ಸೀತಾರಾಮ. ಕೆ. / SITARAM.K said...

ತಮ್ಮ ಪುಸ್ತಕ ಹೊರ ಬರುತ್ತಿರುವದು ಸಂತಸದ ವಿಷಯ. ಕನ್ನಡ ಸಾಹಿತ್ಯವನ್ನ ತಮ್ಮ ಕಥಾಸಂಕಲನ ಶ್ರೀಮಂತವಾಗಿಸುವದರಲ್ಲಿ ಸಂಶಯವಿಲ್ಲ.
ಸಮಾರಂಭಕ್ಕೆ ಶುಭಾಶಯಗಳು.
ಅಂಚೆ ಮುಖಾಂತರ ತಮ್ಮ ಹಸ್ತಾಕ್ಷರದ ಪ್ರತಿಯನ್ನು ಪಡೆಯಲು ವ್ಯವಸ್ಥೆ ಮಾಡಿ ಮತ್ತು ಜೊತೆಗೆ ಹಣ ಸಲ್ಲಿಸಲು ತಮ್ಮ ಬ್ಯಾಂಕ ವಿವರ ನೀಡಿ.
ಶುಭವಾಗಲಿ.

Ramya said...

nange 5 copy please!!!

All the best!