Thursday, June 23, 2011

ಹೀಗೆಲ್ಲಾ ಇತ್ತು..........

ನಮಗೆ ಮಳೆಯ ಚಳಿ ಅಡರಿಕೊಂಡು ಆಗಲೇ ಹತ್ತಿರ ತಿಂಗಳಿಗೆ ಬಂದಾಯ್ತು. ಜನರ ಲೆಕ್ಕಾಚಾರ ಯಾವ್ಯಾವ ಮಳೆ ಎಷ್ಟೆಷ್ಟು ಎಂಬುದರತ್ತ ಹರಿಯುತ್ತಿದ್ದರೆ ನನಗೆ ಹಳೆಕಾಲದ ಕಂಬಳಿ, ಹೊಡಚಲು, ಹಲಸಿನ ಬೀಜದ ಸೊಂಯ್ ಸೊಂಯ್ ಸದ್ದು ನೆನಪಾಗಿಹೋಯ್ತು.
ಜಡಿಮಳೆಯನ್ನು ಹೆದರಿಸಲು ಮಲೆನಾಡಿಗರು ಆಯ್ದುಕೊಂಡದ್ದು ಕಂಬಳಿ. ಕುರಿಯನ್ನು ಬೆಚ್ಚಗಿಟ್ಟ ರೋಮಗಳು ಅಲ್ಲಿ ತಮ್ಮ ಡ್ಯೂಟಿ ಪೂರೈಸಿ ಮನುಷ್ಯನ ಕೈಗೆ ಸಿಕ್ಕಿ ಹೈರಾಣಾಗಿ ಅವನ ರಕ್ಷಿಸಲು ಕಂಬಳಿಯಾಗಿ ಜಡಿಮಳೆಗಾಲಕ್ಕೆ ಸರಿಯಾಗಿ ಮಲೆನಾಡ ಬಾಗಿಲಬಡಿದು ಮಳೆಯ ರಕ್ಷಣೆ ಬಯಸುವವನ ಮಂಡೆಯನ್ನೇರುತ್ತದೆ. ಅದೇನೋ ತನ್ನ ಜನ್ಮದಲ್ಲಿಯೇ ಕಾಣದ ಇಂತಹ ಮಳೆಹನಿಗಳಿಗೆ ಕಂಬಳಿಯ ರೊಣೆಗಳೂ ಕೂಡ ಹೈರಾಣಾಗಿಬಿಡುತ್ತವೆ ಆವಾಗ ಹೊಡಚಲು ಎದ್ದುಕೂರುತ್ತದೆ.
ಸಾಮಾನ್ಯವಾಗಿ ಮನೆಯ ಹಿಂಬಾಗಿಲಿನ ಸಮೀಪ ನೆಲದಲ್ಲಿ ಒಂದು ಹೊಂಡ ಅದರ ಮಧ್ಯೆ ನಿಗಿನಿಗಿ ಬೆಂಕಿ ಸುತ್ತಲೂ ಜನ ನಾಲ್ಕಡಿ ಮೇಲೆ ಅಡ್ಡಕೋಲು ಕಟ್ಟಿ ಅದರಲ್ಲಿ ಮತ್ತೆ ನಾಳೆಯ ಮಳೆಗೆ ಮೈಯೊಡ್ಡಲು ತಯಾರಾಗುತ್ತಿರುವ ಕಂಬಳಿ. ಅದರಿಂದ ಹೊಡಚಲ ಮೇಲೆ ನಿಧಾನ ಬೀಳುವ ಒಂದೊಂದೇ ಹನಿ ನೀರು. ಅದರಿಂದಾಗಿ ಉಂಟಾಗುವ ಚೊಂಯ್ ಸದ್ದು. ಇದರ ನಡುವೆ ಮತ್ತೊಂದು ಕೆಲಸ ಸದ್ದಿಲ್ಲದೆ ಸಾಗುತ್ತಿರುತ್ತದೆ ಅದೇ ಹಲಸಿನ ಬೀಜ.
ಮೇ ಅಂತ್ಯದಲ್ಲಿ ಹಲಸಿನ ಹಣ್ಣು ತಿಂದು ಉಳಿದ ಅದರ ಬೀಜವನ್ನು ಕೆಮ್ಮಣ್ಣಿನಲ್ಲಿ ಕಲಸಿ ಇಟ್ಟಿರುತ್ತಾರೆ. ಈ ಹೊಡಚಲು ಶುರುವಾದಾಗ ಅಲ್ಲಿ ಹಲಸಿನ ಬೀಜವನ್ನು ಪಿನ್ ನಲ್ಲಿ ಒಂದು ತೂತು ಹೊಡೆದು ಸುಡುವ ಕಾರ್ಯಕ್ರಮ ಇರುತ್ತದೆ. ಅಲ್ಲೊಂದು ಇಲ್ಲೊಂದು ಬೀಜ ತೂತು ಮಾಡದೇ ಮರೆತಿದ್ದು ಡಬ್ ಎಂದು ಸದ್ದು ಮಾಡಿ ಸುತ್ತಲೂ ಕೂತವರ ಮಡಿಲಿಗೆ ಕೆಂಡವನ್ನು ಎರಚುವ ತಾಕತ್ತಿನ ಮಿನಿ ಬಾಂಬ್ ಆಗಿ ಕೆಲಸಮಾಡಿಬಿಡುತ್ತದೆ. ಹೀಗೆಲ್ಲಾ ಇತ್ತು ಹಳೆ ಕತೆಗಳು- ಮತ್ತೆ ನೆನಪಿದೆ ಎಂದಾದಮೇಲೆ ಅನುಷ್ಠಾನಕ್ಕೆ ತರಬಹುದು ಬಿಡಿ. ಇದೇನು ಅಂತಹಾ ಕಷ್ಟದ್ದಲ್ಲ, ಆದರೂ ನೆನಪುಗಳು ಹಾಗೂ ಕನಸುಗಳು ಮಾತ್ರಾ ಮಧುರ.....ಏನಂತೀರಿ..?

3 comments:

Gowtham said...

ನನಗೆ ಕಡೆಯ ಬಾರಿ ಕಂಬಳಿ ಕೊಪ್ಪೆ ಹೊದ್ದುಕೊಂಡಿದ್ದು ಯಾವಾಗ ಎಂಬ ನೆನಪೇ ಇಲ್ಲ. :-(

Bharatheesha P said...

halasina bijavannu heegu process madtare anta ide modalu keliddu. adrallu adakke pin ninda tutu hodeyo part antu hosade hosadu. sadya nim mane kadege bandre antaha bijagalu siktava?

bharatheesha

Shwetha Holla said...

superb....mane nenapu agothe....