Wednesday, July 27, 2011

"ಹೆಲ್ತ್ ಎಂದರೆ ಆರೋಗ್ಯ".

"ನಂಜಿಗೆ ಕುಡಿಯುವುದು" ಅಂತ ನಮ್ಮ ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಅಮ್ಮನ ಹಳೇ ಪದ್ದತಿ. ಕಾಳಜೀರಿಗೆ ಎಂಬ ಜೀರಿಗೆ ತರಹದ ಘೋರಾ ಕಹಿಯ ದ್ರವ ಗಂಟಲಿಗೆ ಸುರುವಿಕೊಳ್ಳುತ್ತಿದಂತೆ ಒಮ್ಮೆ ಇಡೀ ಮೈಯೆಲ್ಲಾ ಜುಂಕರಿಸಿ ಕಹಿ ಆವರಿಸಿಕೊಳ್ಳುವ ತಾಕತ್ತಿನ ಔಷಧಿ ಅದು. ಬೆಳಗಾ ಮುಂಚೆ "ಏಳ್ರಾ..’ ಎಂದು ವರಾತ ಹಚ್ಚಿ ಎಬ್ಬಿಸಿ ಒಂದು ಲೋಟ ಹಠಕ್ಕೆ ಬಿದ್ದು ಕುಡಿಸಿದರೆ ವರ್ಷಪೂರ್ತಿ ಕಜ್ಜಿ ತುರಿಕೆ ಮುಂತಾದ ರಗಳೆಯಿಂದ ಮುಕ್ತಿ ಎಂಬುದು ಅದರ ಫಲ.
ಆನಂತರ ಕಾಲ ಸಂದಂತೆಲ್ಲಾ ಅಮ್ಮನೆಂಬ ಅಮ್ಮನೇ ಆಲೋಪತಿಗೆ ಮೊರೆಹೋದಮೇಲೆ ಕಾಳಜೀರಿಗೆ ಡಬ್ಬಿಯಲ್ಲಿಯೇ ಉಳಿಯತೊಡಗಿತು ಎನ್ನುವುದು ಬೇರೆಯದೇ ಕತೆಯಾಗುತ್ತದೆ ಬಿಡಿ. ಈಗ ಅದರ ಪ್ರಸ್ತಾಪ ಪ್ರಲಾಪ ಶುರುವಿಟ್ಟುಕೊಂಡು ನಾವು ನೀವು ಗೊಣಗಾಡುವುದು ಬೇಡ. ಸತ್ಯಕ್ಕೆ ತಲೆಮೇಲೆ ಹೊಡೆಯುವ ಮಾತೆಂದರೆ "ಹೆಲ್ತ್ ಎಂದರೆ ಆರೋಗ್ಯ". ಆರೋಗ್ಯ ಮತ್ತು ಸಂಪತ್ತು ಯಾರ ಬಳಿ ಇದೆಯೋ ಅದರ ಮಹತ್ವ ಇದ್ದವರಿಗೆ ಅರಿವಾಗುವುದಿಲ್ಲ. ಅವುಗಳ ಮಹತ್ವ ಮಹಿಮೆ ಅವು ಇಲ್ಲವಾದಾಗಲೇ ಎಂಬುದು ಎಲ್ಲರಿಗೂ ತಿಳಿದಿದ್ದರೂ ತಿಳಿಯದ ವಿಷಯ. ಈ ಆರೋಗ್ಯ ಎಂಬುದು ಚನ್ನಾಗಿರಬೇಕು ಎಂತಾದರೆ ಔಷಧಿಯಲ್ಲಲ್ಲ ಆಹಾರದಲ್ಲಿ ಎಂಬ ಸರ್ವೇ ಸಾಮಾನ್ಯವಾದ ವಿಷಯವನ್ನು ಬಹಳ ಜನ ಮರೆತು ಹೋದಂತಿದೆ ಎಂಬುದು ನನ್ನ ಅನುಭವವೇದ್ಯ ಮಾತು. ವಾತ ಪಿತ್ಥ ಕಫ ಎಂಬ ತತ್ವಾಧಾರಿತ ಆಯುರ್ವೇದ ಔಷಧಿ ಪದ್ದತಿ ಮೂಲವಾಗಿ ಆಹಾರವನ್ನ ಅವಲಂಬಿಸಿದೆ. ಇಂತಿಂತ ಖಾಯಿಲೆ ಬಂದಮೇಲೆ ಅಂತಂತದ್ದನ್ನು ತಿನ್ನದೇ ಪಥ್ಯ ಮಾಡಿ ಎನ್ನುತ್ತಾ ಹಾಗೆಯೇ ಎಂತೆಂತದ್ದನ್ನೋ ತಿನ್ನದೇ, ಸ್ವಲ್ಪವಾದರೂ ಅಡ್ಡಿಯಿಲ್ಲ ಸತ್ವಭರಿತವಾದದ್ದನ್ನು ತಿನ್ನಿ, ತನ್ಮೂಲಕ ಆರೋಗ್ಯದಿಂದ ನಳನಳಿಸಿ ಎನ್ನುತ್ತದೆ ಆಯುರ್ವೇದ. ಈ ಪದ್ದತಿಯಿದೆಯಲ್ಲಾ ಅದು ಪಕ್ಕಾ ನಮ್ಮ ನಾಲಿಗೆಯನ್ನೇ ಅವಲಂಬಿಸಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವಕ್ಕೆ ಹಲವಾರು ಬಾರಿ ಬಂದಿದೆ. ಯಾವಾಗಲೂ ವಟವಟ ಎನ್ನುವ ನಾಲಿಗೆ ದೇಹಕ್ಕೆ ಬೇಕಾಗುವ ಸತ್ವಗಳನ್ನೂ ಬಯಸುವ ಕೆಲಸ ಮಾಡುತ್ತದೆ. ಅದು ಇದ್ದಕ್ಕಿದ್ದಂತೆ ಹುಳಿ ಬೇಡುತ್ತದೆ, ಸಿಹಿ ಕೇಳುತ್ತದೆ, ಆಶ್ಚರ್ಯವೆಂದರೆ ಕಹಿಯನ್ನೂ ಕೂಡ (ಮೆಂತೆ ಉಕ್ಕರಿಕೆ) ಬಯಸುತ್ತದೆ. ಆದರೆ ನಾವುಗಳೆಂಬ ನಾವುಗಳು ಅದು ಬಯಸಿದ ಸಮಯದಲ್ಲಿ ತಿನ್ನುವುದಿಲ್ಲ, ಅಥವಾ ಬಯಸಿದಷ್ಟು ತಿನ್ನದೇ ಯಡ್ದಾದಿಡ್ಡಿ ಭಾರಿಸಿಬಿಡುತ್ತೇವೆ. ಆವಾಗ ಏರುಪೇರು, ಬಯಸಿದ ಸತ್ವ ನಿರಾಕರಿಸಿ ಯಡವಟ್ಟು ಮಾಡಿಕೊಳ್ಳುವ ಬಗೆ ಒಂದೆಡೆಯಾದರೆ ದೇಹದಿಂದ ಹೊರಹೋಗ ಬಯಸುವ ತ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಹೋಗಲು ಬಿಡದೆ ಅನಾರೋಗ್ಯ ತಂದುಕೊಂಡು ಬಿಡುತ್ತೇವೆ. ಅಂತೂ ಹೀಗೆಲ್ಲಾ ಇದೆ ನೋಡಿ ಸಮಾಚಾರ.
ನಂಗೆ ಇವೆಲ್ಲಾ ಯಾಕೆ ನೆನಪಾಯಿತೆಂದರೆ ಬೆಳಗ್ಗೆ ಗುಟುಕರಿಸಿದ ಕಾಳಜೀರಿಗೆಯ ರಸದ ಗಂಟಲ ಕಹಿ ಇನ್ನೂ ಆರಿಲ್ಲ.

2 comments:

ವಿ.ರಾ.ಹೆ. said...

ಈ ಕಾಳಜೀರಿಗೆ ಅಂದ್ರೆ ಏನು, ಎಲ್ಲಿ ಸಿಗುತ್ತದೆ, ಕಶಾಯ ಏಕೆ, ಹೇಗೆ ಮಾಡುವುದು, ಹೇಗೆ ಯಾವಾಗ ಎಷ್ಟು ಬಾರಿ ಕುಡಿಯುವುದು, ಏನುಪಯೋಗ, ಏನಪಾಯ ಮುಂತಾದ ವಿವರಗಳನ್ನು ತಿಳಿಸಬೇಕಾಗಿ ವಿನಂತಿ.

ಸಾಗರದಾಚೆಯ ಇಂಚರ said...

nange amma maaduttidda kashayagalu nenapige badavu

sannavaru iruvaaga eneno kashaya maadi kudisuttiddalu, novella maaya