Tuesday, August 21, 2012

ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

             "ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ, ಹಾರಿ ಹಾರ್ಯಾಡಿ ಮಣ್ಣ ತುಳಿದಾನ.." ಪ್ರಾಯಶಃ ಹೀಗೆಯೇ ಇರಬೇಕು ಒಂದು ಜನಪದ ಹಾಡಿದೆ. ತುಂಬಾ ಚೆನ್ನಾಗಿದೆ. ಅದರ ದನಿ ಒಳ್ಳೆಯ ಖುಷಿ ಕೊಡುತ್ತದೆ. ನನಗೆ ಅದರಲ್ಲಿ "ಮುಂಜಾನೆ" ಎಂಬ ಪದ ಇನ್ನಷ್ಟು ಖುಷಿ ಕೊಡುತ್ತದೆ. ಹೊಸ ದಿನದ ಆರಂಭದ ಕ್ಷಣವಾದ ಮುಂಜಾನೆಯಲ್ಲಿ ನಮಗೆ ಎಲ್ಲವೂ ಹೊಸ ಹೊಸತು. ರಾತ್ರಿ ಮಲಗಿ ಬೆಳಗ್ಗೆ ಏಳುವ ನಮ್ಮನ್ನೇ ನಾವು ಮರೆತು ಹೋಗಿದ್ದ ಆ ಆರೇಳು ತಾಸು ನಮ್ಮ ನಿಯಂತ್ರಣಕ್ಕೆ ಸಿಗದ ಕನಸುಗಳು, ನಮ್ಮ ದೇಹವನ್ನೇ ನಾವು ಮರೆತ ಗಳಿಗೆಗಳು ಏನಂತ ಹೇಗಂತ ತೀರಾ ತರ್ಕಕ್ಕೆ ಒಳಪಡಿಸದೆ ಕೇವಲ ಅನುಭವಕ್ಕಷ್ಟೆ ಆಲೋಚಿಸಿದರೆ ಇದ್ದಕ್ಕಿದ್ದಂತೆ ಚುಮು ಚುಮು ಬೆಳಗಿನಲ್ಲಿ ಪಟಕ್ಕನೆ ಎಚ್ಚರವಾದರೆ ಅದು ಮುಂಜಾನೆಯೇ ಆಗಿದ್ದರೆ, ನಿಮ್ಮ ಮಂಚದ ಪಕ್ಕದಲ್ಲಿ ಒಂದು ಕಿಟಕಿಯಿದ್ದರೆ, ಆ ಕಿಟಕಿಯಲ್ಲಿ ಕೆಂಬಣ್ಣದ ಸೂರ್ಯ ಇಣುಕಲು ಸಿದ್ಧವಾಗಿದ್ದರೆ, ಅದು ಸುಂದರ, ಕೇವಲ ಸುಂದರವೇನು ವರ್ಣಿಸಲಸದಳ. ಆದರೆ ಈ ಮುಂಜಾನೆಯನ್ನು ಅನುಭವಿಸಲು ನಿಮ್ಮ ರಾತ್ರಿಯೂ ಸುಂದರವಾಗಿರಬೇಕು, ಇನ್ನೇನು ನಿದ್ರೆಗೆ ಜಾರುವ ಕ್ಷಣಗಳು ನಿಮ್ಮ ನಿಯಂತ್ರಣದಲ್ಲಿರಬೇಕು. ಆ ನಿದ್ರೆಗೆ ಜಾರುವ ಕ್ಷಣಗಳು ಸುಂದರವಾಗಿರಬೇಕು ಎಂದಾದರೆ ಮುನ್ನಾ ದಿನದ ದಿನಚರಿ ನಿಮ್ಮ ಮನಸ್ಸಿಗೆ ಮಜ ಕೊಟ್ಟಿರಬೇಕು. ಮತ್ತೆ ಮಜ ಎಂದರೆ ಮೋಜಲ್ಲ ಅದು ಶಾಂತ ನೆಮ್ಮದಿ ಮುಂತಾದ ಪದಗಳಲ್ಲಿನ ನಿಮ್ಮ ಆತ್ಮ ತೃಪ್ತಿಯ ಮಜ.

           ಸರಿ ಮುನ್ನಾದಿನ ಯಾವ್ಯಾವುದೋ ಕಾರಣಕ್ಕೆ ಚಟಪಟ ಅಂತ ಮನಸ್ಸು ಅಂದಿದ್ದರೆ ಅಂದು ರಾತ್ರಿ ನಿಮ್ಮದೇಹ ನಿದ್ರೆಗೆ ಜಾರಿದ್ದರೂ ಮನಸ್ಸು ವಟವಟ ಅನ್ನುತ್ತಲಿರುತ್ತದೆ. ಈ ಪಟಪಟ ಸದ್ದು ರಾತ್ರಿ ಪೂರ್ತಿ ಕಾಡಿ ಮುಂಜಾನೆ ನಿಮಗೆ ಎಚ್ಚರವಾದಾಗ ಹೊಸತನವನ್ನು ಕಾಣಲು ಬಿಡುವುದಿಲ್ಲ. ಆವಾಗ ನವನವೀನ ಮುಂಜಾನೆಯ ಕ್ಷಣಗಳನ್ನು ಅನುಭವಿಸುವ ಮಜ ದಕ್ಕುವುದಿಲ್ಲ. ಆ ಮಜ ದಕ್ಕುವುದಿಲ್ಲ ಅಂದಾದ ಮೇಲೆ "ಮುಂಜಾನೆ" ಯು ಕಿರಿಕಿರಿಯಿಂದಲೆ ಆರಂಭ ಮತ್ತು ದಿನಪೂರ್ತಿ ಚಡಪಡಿಕೆ ಮತ್ತದೇ ರಾತ್ರಿ ಮತ್ತದೇ ಚಟಪಟ ಮನಸ್ಸಿನ ನಿದ್ರೆ ಮತ್ತದೇ ಕಿರಿಕಿರಿ ಮುಂಜಾನೆ. ಇಲ್ಲ ಅದು ಹಾಗಾಗಬಾರದು ದಿನನಿತ್ಯ ಹೊಸ ಮುಂಜಾನೆ ಹೊಸ ಸೂರ್ಯನ ಕಿರಣ ಹೊಸ ಮಜ ಆಗಬೇಕು ಅಂತಾದಲ್ಲಿ ಒಂದು ಸಣ್ಣ ಉಪಾಯವಿದೆ. ಅದನ್ನು ಹಲವರು ಹತ್ತುಬಾರಿ ನಿಮಗೆ ಹೇಳಿರಬಹುದು. ಆದರೂ ಮೊನ್ನೆ ನನೆಲ್ಲೋ ಓದಿದೆ ಅದನ್ನ ಇಲ್ಲಿ ಹೇಳಿಬಿಡುತ್ತೇನೆ. ಬೇಕಾದರೆ ಬಳಸಿಕೊಳ್ಳಿ ಬೇಡವಾದರೆ ಬಿಟ್ಟಾಕಿ.
             ನಮ್ಮ ಮಿದುಳಿಗೆ ಕೆಲಸವೆಂದರೆ ನೆನಪಿಟ್ಟುಕೊಳ್ಳುವುದು. ಅದು ನಮಗೆ ಬೇಕಾದ್ದರಿಲಿ ಬೇಡವಾದ್ದಿರಲಿ ನೆನಪಿಟ್ಟುಕೊಳ್ಳುತ್ತದೆ. ಭಯ ತರಿಸುವ ಧೈರ್ಯ ಕೊಡುವ ಎಲ್ಲಾ ಘಟನೆಗಳನ್ನು ಕಂಡಿದ್ದು ಕೇಳಿದ್ದರಲ್ಲಿ ಒಂದಿಷ್ಟು ಹೀಗೆ ನೆನಪಿಟ್ಟುಕೊಂಡು ಇದ್ದಕ್ಕಿದ್ದಂತೆ ದುತ್ತನೆ ನೆನಪಿಸುತ್ತದೆ. ಆ ನೆನಪಿನ ಶಕ್ತಿಯೇ ನಮಗೆ ಬಹು ಉಪಕಾರಿ ನಿಜ ಆದರೆ ಕೆಲವು ಬಾರಿ ಯಡವಟ್ಟುಕೊಡುತ್ತದೆ. ಆ ಯಡವಟ್ಟು ತಪ್ಪಿಸಲು ಸುಲಭ ಉಪಾಯವೆಂದರೆ ರಾತ್ರಿ ಮಲಗುವ ಮುನ್ನ ದೇಹವನ್ನು ದಣಿಸುವುದು. ತಕತಕ ಕುಣಿದರೂ ಸರಿಯೇ ಕಿಲೋಮೀಟರ್ ನಡೆದರೂ ಸರಿಯೇ ಒಟ್ಟಿನಲ್ಲಿ ದೇಹ ದಣಿಯಬೇಕು. ದೇಹ ದಣಿದ ಮರುಕ್ಷಣ ನಿದ್ರೆ ಆಳವಾಗಿ ಬರುತ್ತದೆ ಆವಾಗ ಮುಂಜಾನೆ ಸೂಪರ್. ಒಟ್ಟಿನಲ್ಲಿ ಮುಂಜಾನೆ ಸೂಪರ್ ಇರಬೇಕು ಎಂದಾದರೆ ಹೊಸತನದಿಂದ ಕೂಡಿರಬೇಕು ಎಂದಾದರೆ ಮುನ್ನಾದಿನ ಬಹುಮುಖ್ಯ. ಎಂಬಲ್ಲಿಗೆ ಜೀವನದಲ್ಲಿ ಎಲ್ಲಾ ದಿನಗಳು ಮುಖ್ಯ ಎಂದು ಹೊಸತಾಗಿ ಹೇಳಬೇಕಾಗಿಲ್ಲ ತಾನೆ?. ಆದರೆ ಈ ಜಂಜಡದಲ್ಲಿ ನಾವು ಎಲ್ಲಾ ದಿನಗಳನ್ನು ನಮಗೆ ಬೇಕಾದಂತೆ ಮಾಡಿಕೊಳ್ಳಲು ಆಗುವುದಿಲ್ಲ. ಅದು ಮಿಕ್ಕವರನ್ನೂ ಅವಲಂಬಿಸಿರುತ್ತದೆ. ಹಾಗಾಗಿ ಮಲಗುವ ಮುನ್ನ ನಮ್ಮನ್ನು ನಾವು ದಣಿಸಿಕೊಳ್ಳಬಹುದು. ಅದು ಸುಖ ನಿದ್ರೆಗೆ ಸುಲಭೋಪಾಯ, ಮತ್ತು ಶುಭ ಮುಂಜಾನೆಗೂ ಅದೇ ರಾಜಮಾರ್ಗ. ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

Photo:  SriakantaDatta Bangalore

2 comments:

Anonymous said...

hmmmmmm
Super Article+ soooooooooper photo

ದಿನಕರ ಮೊಗೇರ said...

so nice....refreshing.......