Wednesday, August 29, 2012

ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

ಇದೊಂದು ಚಿತ್ರ ನೋಡಿದಾಗ ನಿಮಗಿರಲಿ ನನಗೂ ಕಣ್ಣೀರ ಕೋಡಿ ಹರಿದಿಲ್ಲ ನಿಜ ಆದರೆ ಛೆ ಅನ್ನುವಷ್ಟು ಬೇಸರವಾಗುತ್ತದೆ. ೧೮ ರ ಹರೆಯದ ಈ ಯುವಕ ಅತಿವೇಗದ ಬೈಕ್ ಡ್ರೈವ್ ಮಾಡಿ ಬಸ್ಸಿನಡಿಗೆ ಸಿಕ್ಕು ಕಳೆದ ಕೆಲ ದಿವಸದ ಹಿಂದೆ ದೇಹ ತ್ಯಜಿಸಿದ. ಆತನ ಮನೆಯವರ ರೋಧನ ಮುಗಿಲುಮುಟ್ಟುತ್ತಿತ್ತು. ನಾನು ರಿಪೋರ್ಟ್ ಮಾಡಲು ಹೋಗಿದ್ದೆ. ಆಗಸ್ಟ್ ಹದಿನೈದರ ಬೆಳಿಗ್ಗೆ ಎಂಟೂವರೆ ಗಂಟೆಗೆ ಪೋಲೀಸ್ ಕಾನಸ್ಟೇಬಲ್ ಲೋಕೇಶ್ ಹೀಗೊಂದು ಅಪಘಾತವಾಗಿದೆ ತಲವಾಟದ ಬಳಿ ಎಂದಾಗ "ಮಕ್ಕಳ ಪ್ರಭಾತ್ ಪೇರಿ" ಫೋಟೋ ತೆಗೆಯುತ್ತಿದ್ದವನು ಪಟಕ್ಕನೆ ಓಡಿದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅಂಬುಲೆನ್ಸ್ ಬಂದು ಹಿಂಬದಿ ಕುಳಿತಿದ್ದವನನ್ನು ಹೇರಿಕೊಂಡು ಹೋಗಿತ್ತು. ಈತ ಇಹಲೋಕ ಯಾತ್ರೆ ಮುಗಿಸಿದ್ದ ಕಾರಣ ಅಲ್ಲಿಯೇ ಇದ್ದ. ಅದಾಗಲೇ ಜನಜಂಗುಳಿ ಸೇರಿತ್ತು. ಅಪ್ಪ ದುಬೈ ಲಿ ಇದ್ದವರಂತೆ ಮಗ ಸುಖವಾಗಿರಲಿ ಎಂದು ಹೊಸ ಬೈಕ್ ಕೊಡಿಸಿದ್ದರು ಹೊಚ್ಚ ಹೊಸ ಬೈಕ್ ಮಗನನ್ನೇ ಬಲಿತೆಗೆದುಕೊಂಡಿತ್ತು. ಇರಲಿ ಅವೆಲ್ಲಾ ಆಮೇಲಿನ ತರ್ಕದ ಕತೆಯಾಯಿತು. ವಾಸ್ತವಕ್ಕೆ ಬರೋಣ.

ಮಳೆಗಾಲದ ದಿನಗಳಲ್ಲಿ ವಾರಕ್ಕೆ ಕನಿಷ್ಟವೆಂದರೂ ೩-೪ ಇಂತಹ ಘಟನೆಗಳು ನನ್ನನ್ನು ರಸ್ತೆಗಿಳಿಸುತ್ತವೆ. ಅಲ್ಲಿ ಹೋಗಿ ಫೋಟೋ ತೆಗೆದು ನ್ಯೂಸ್ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅಂಬುಲೆನ್ಸ್ ಗೆ ಫೋನ್ ಮಾಡುವುದು, ಪೋಲೀಸ್ ಗೆ ಹೆಲ್ಪ ಮಾಡುವುದು ಮುಂತಾದ ಕೆಲಸಗಳು ಇರುತ್ತವೆ. ಅವುಗಳಲ್ಲಿ ಮಹಜರ್ ಗೆ ಸೈನ್ ಹಾಕುವುದು ಪ್ರಮುಖ ಅಂಗ. ಮೊನ್ನೆ ಈ ಅಪಘಾತ ನಡೆದಾಗ ಗಂಟೆ ೧೨ ಆದರೂ ಮೃತ ದೇಹವನ್ನು ಮನೆಯವರಿಗೆ ಬಿಟ್ಟುಕೊಡಲು ಪೋಲೀಸರಿಗೆ ಆಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ಮಹಜರ್ ಗೆ ಲೋಕಲ್ ಮೂವರು ಸಹಿ ಹಾಕಬೇಕು. ಆದರೆ ಅಲ್ಲಿ ಯಾರೂ ಸಹಿ ಹಾಕಲು ಒಪ್ಪುವುದಿಲ್ಲ. ಹಾಗೆ ಜನರು ಹೆದರಲು ಪ್ರಮುಖ ಕಾರಣ ಕೋರ್ಟು ಕಛೇರಿ ತಂಟೆ ನಮಗೆ ಯಾಕೆ? ಅಂಬುದಷ್ಟೇ ಕಾಳಜಿ. ಅಯ್ಯೋ ಅಮ್ಮಾ ಎಂಬ ಗೋಳಾಟದ ನಡುವೆ ಈ ಕಾನೂನು ಪ್ರಕ್ರಿಯೆ ನಡೆಯದೆಯೇ ದೇಹ ಅಲ್ಲಿಂದ ಶಿಫ್ಟ್ ಮಾಡುವಂತಿಲ್ಲ. ಅಂತೂ ಇಂತು ಎರಡು ಜನ ಮಹಜರ್ ಗೆ ಸಹಿ ಹಾಕಲು ಒಪ್ಪಿಸುವಲ್ಲಿ ಪೋಲೀಸರು ಹೈರಾಣಾಗಿದ್ದರು, ಮೂರನೆಯವನಾಗಿ ನಾನು ಯಥಾಪ್ರಕಾರ ಸೈನ್ ಜಡಿದೆ. ಪಟಕ್ಕನೆ ಕೆಲಸ ಮುಗಿಯಿತು.
ಆತ್ಮ ತ್ಯಜಿಸಿದ ದೇಹ ಒಂದೆಡೆ, ರೋಧನ ಮತ್ತೊಂದೆಡೆ, ಕಾನೂನು ಪ್ರಕ್ರಿಯೆ ಮಗದೊಂದೆಡೆ. ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

2 comments:

ದಿನಕರ ಮೊಗೇರ said...

ನಿಮ್ಮ ಕಾಳಜಿ ಕಾಣಿಸುತ್ತಿದೆ ಬರಹದಲ್ಲಿ..... ಸರಕಾರ ಈಗ ಅದಕ್ಕೊಂದು ಕಾನೂನು ತಂದಿದೆ ಎಂದು ಕೇಳಿದ್ದೆ... ಸಾರ್ವಜನಿಕರ ಸಹಿ ಅವಸ್ಯಕತೆ ಇಲ್ಲ ಎಂದು...ಹೌದಾ...?

Unknown said...

ದಿನಕರ ರವರೆ ಸರಕಾರದ ಕಾನೂನು ಇನ್ನೂ ಸ್ತೇಷನ್ ತಲುಪಿಲ್ಲ ಅಂತ ಅನ್ನಿಸುತ್ತೆ. ನಾನೂ ಓದಿದ್ದೆ ಕೇಳಿದ್ದೆ. ಆದರೆ ಮಹಜರ್ ತಡೆ ಯಥಾಪ್ರಕಾರ ಮುಂದುವರೆದಿದೆ.

ಧನ್ಯವಾದ