Tuesday, November 6, 2012

ಸಿಕ್ಕಿತೊಂದು ನವಿಲು ಮರಿ

ನವಿಲು ಎಂದಾಕ್ಷಣ ನಾಟ್ಯದ ನೆನಪು ಸಹಜ. ರಾಷ್ಟ್ರಪಕ್ಷಿ ನವಿಲಿನ ಕುರಿತು ವರ್ಣಿಸಿದ ಕವಿಗಳು ಹಲವಾರು. "ಗುಡುಗುಡು ಶಬ್ಧವು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತೆ..? ಎಂದು ಕವಿಯೊಬ್ಬ ಮಯೂರ ನರ್ತಿಸಲು ಪ್ರಕೃತಿಯ ಗುಡುಗು ಸಿಡಿಲುಗಳೇ ಬೇಕು ಎಂಬ ಅರ್ಥದಲ್ಲಿ ವರ್‍ಣಿಸಿ ನವಿಲಿನ ಮಟ್ಟ ಹೆಚ್ಚಿಸಿದ್ದಾನೆ. ಹೀಗೆ ಹತ್ತು ಹಲವು ಹೆಗ್ಗಳಿಕೆಯನ್ನು ಗಮನಿಸಿ ನಾವು ಅದನ್ನು ರಾಷ್ಟ್ರಪಕ್ಷಿಯನ್ನಾಗಿಸಿ ಯಾಗಿದೆ. ಖೇದಕರ ಸಂಗತಿಯೆಂದರೆ ಕದ್ದುಬೇಟೆಯಾಡುವವರ ಈ ಚಂದದ ಪಕ್ಷಿ ನಿರಂತರ ಬಲಿಯಾಗುತ್ತಲೇ ಇವೆ. ಗರಿಯಿರುವ ಗಂಡು ನವಿಲಿಗೆ ಕಳ್ಳರು ಗುಂಡು ಹಾಕುವುದಿಲ್ಲ ಕಾರಣ, ಅದರ ಗರಿಗಳನ್ನು ಮುಚ್ಚಿಹಾಕುವುದು ಸ್ವಲ್ಪ ಕಷ್ಟಕರ ಕೆಲಸ, ಆದರೆ ಕೋಳಿಯಂತಿರುವ ಹೆಣ್ಣು ನವಿಲನ್ನು ರಾತ್ರಿ ಕದ್ದು ಬೇಟೆಯಾಡುತ್ತಾರೆ. ಇದರಿಂದಾಗಿ ಹೆಣ್ಣು ನವಿಲಿನ ಸಂತತಿ ನಿಧಾನಗತಿಯಲ್ಲಿ ಕ್ಷೀಣಿಸುತ್ತಿದೆ. ಆದರೂ ಪ್ರಕೃತಿ ಮಾನವನ ಹಲ್ಲೆಯನ್ನೂ ತಪ್ಪಿಸಿ ನವಿಲಿನ ಸಂತತಿಯನ್ನು ಕಾಪಾಡುತ್ತಿದೆ.


ನವೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ನವಿಲು ಮೊಟ್ಟೆಗಳು ಒಡೆದು ಮರಿ ಆಚೆಬರುತ್ತವೆ. ತಾಯಿ ಮೊಟ್ಟೆಗಳನ್ನು ಜತನವಾಗಿ ಕಾಪಾಡಿಕೊಂಡು ಬರುತ್ತವೆ. ಮರಿಹೊರಬಂದ ನಂತರ ತನ್ನೊಂದಿಗೆ ಕರೆದುಕೊಂಡು ಹೋಗುತ್ತವೆ. ಆದರೆ ಮೊಟ್ಟೆಗಳನ್ನು ಒಂದೆಡೆ ಇಟ್ಟು ಆಹಾರಕ್ಕಾಗಿ ಹೊರಗೆ ಹೋದ ತಾಯಿ ಅಕಸ್ಮಾತ್ ಕಳ್ಳಬೇಟೆಗಾರರ ಗುಂಡಿಗೆ ಬಲಿಯಾದಾಗ ಮೊಟ್ಟೆಯಿಂದ ಹೊರಬಂದ ಮರಿಗಳ ಪಾಡು ತುಸು ಕಷ್ಟಕರ. ಈ ನವಿಲು ಮರಿಯ ಸ್ಥಿತಿಯೂ ಹಾಗೆಯೇ ಆಗಿದೆ. ತಾಳಗುಪ್ಪ ಸಮೀಪ ಹಿರೇಮನೆ ಅಸಳ್ಳೆ ಕೃಷ್ಣಮೂರ್ತಿ ಎಂಬುವವರ ತೋಟದಲ್ಲಿ ಮೊಟ್ಟೆಯಿಟ್ಟು ಆಹಾರವನ್ನರಸಲು ಹೋದ ಹೆಣ್ಣು ನವಿಲು ವಾಪಾಸ್ ಬರಲೇ ಇಲ್ಲ. ತೋಟಕ್ಕೆ ಹೋದ ಕೃಷ್ಣಮೂರ್ತಿಯವರ ಕಣ್ಣಿಗೆ ಬಿದ್ದ ಈ ಅನಾಥಮರಿಗಳನ್ನು ಅಲ್ಲಿಯೇ ಬಿಟ್ಟು ಹಾವುಗಳಿಗೆ ಆಹಾರವಾಗುವುದನ್ನು ತಪ್ಪಿಸುವ ಮನಸ್ಸು ಮಾಡಿದರು. ನವಿಲು ಮರಿಯನ್ನು ಜತನವಾಗಿ ತಂದು ರಶ್ಮಿಯ ಮನೆಗೆ ಕೊಟ್ಟರು. ಅಲ್ಲಿ ಈಗ ನವಿಲು ಸುರಕ್ಷಿತವಾಗಿ ಬೆಳೆಯುತ್ತಿದೆ. ದೊಡ್ಡದಾದಮೇಲೆ, ತನ್ನ ಆಹಾರ ತಾನು ಹುಡುಕಿಕೊಳ್ಳುವಷ್ಟು ಬೆಳೆದಮೇಲೆ ಕಾಡಿಗೆ ಬಿಡಬೇಕು ಎನ್ನುತ್ತಾರೆ ರಶ್ಮಿಯ ತಂದೆ ರಾಮಕೃಷ್ಣ. ಆದರೆ ಸದ್ಯಕ್ಕಂತೂ "ಅನಾಥ ಮಗುವಾದೆ" ಎನ್ನುತ್ತಿದೆ ನಮ್ಮ ರಾಷ್ಟ್ರಪಕ್ಷಿ. ಆದರೂ ಬೆಚ್ಚಗಿದೆ ಎನ್ನುವುದು ಸಮಾಧಾನಕರ.

No comments: