Thursday, January 3, 2013

ಇವರು ಇಂಜನಿಯರಿಂಗ್ "ರೈತ"

              
           ಬಹುಪಾಲು ಎಲ್ಲ ತಂದೆತಾಯಿಂದರ ಕನಸು ಮಕ್ಕಳು ಇಂಜನಿಯರ್ ಅಥವಾ ಡಾಕ್ಟರ್ ಆಗಬೇಕು, ಪಕ್ಕದ ಮನೆಯ ಹುಡುಗರು ಕೃಷಿಕರಾಗಬೇಕು ಎಂಬ ತತ್ವ. ಆದರೆ ತಾಳಗುಪ್ಪದ ಸಮೀಪದ ಶಿರೂರು ಆಳ್ಳಿಯ ಮೂಗೀಮನೆ ಸುಬ್ರಾಯ ಹಾಗೂ ಕನಕಲತ ದಂಪತಿಗಳು ೧೨ ವರ್ಷದ ಕೆಳಗೆ ಇಂಜನಿಯರ್ ಮಗ ಮನೆಗೆ ಬರುತ್ತಾನೆ ಮರಳಿ ಕೃಷಿಗೆ ತೊಡಗಿಸಿಕೊಳ್ಳುತ್ತಾನೆ ಎಂದರೆ ಸಂಭ್ರಮಿಸಿದರು. ಅದರ ಪ್ರತಿಫಲ ಕೃಷಿಕ ಪ್ರಪಂಚಕ್ಕೆ ಇಂಜನಿಯರ್ ಕೊಡುಗೆಯಾದಂತಾಯಿತು.
         ೧೯೯೧ ನೆ ಇಸವಿಯಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಮುಗಿಸಿದ ಗಣೇಶ್ ಎಂ ಎಸ್ ಆಯ್ದುಕೊಂಡಿದ್ದು ನೌಕರಿಯನ್ನಲ್ಲ ಕೈಗಾರಿಕೆಯನ್ನ. ಮೈಸೂರಿನಲ್ಲಿ ಇಂಜನಿಯರಿಂಗ್ ಇಂಡಸ್ಟ್ರಿ ಆರಂಭಿಸಿದರು. ಉದ್ಯಮ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಯಶಸ್ವಿಯೂ ಆದರು, ಆದರೆ ಮನಸ್ಸಿಗೆ ನೆಮ್ಮದಿ ಮಾತ್ರಾ ಸಿಕ್ಕಿರಲಿಲ್ಲ. ಮಲೆನಾಡಿನ ತುಡಿತ ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ೧೯೯೯ ನೇ ಇಸವಿಯಲ್ಲಿ ಇಂಜನಿಯರಿಂಗ್ ಉದ್ಯಮಕ್ಕೆ ವಿದಾಯ ಹೇಳಿ ಮರಳಿದರು ಮಣ್ಣಿಗೆ.
   ದೇಶ ಸುತ್ತಿ ಕೋಶ ಓದಿ ವಾಪಾಸು ಬಂದ ಇಂಜನಿಯರಿಂಗ್ ಪದವಿಧರ ಗಣೇಶ್ ಆರಂಭದಲ್ಲಿ ಕೃಷಿಗೆ ಒಗ್ಗಿಕೊಳ್ಳುವುದು ತುಸು ಕಷ್ಟ ಎನಿಸಿತು. ಕೃಷಿಯನ್ನು ಉದ್ಯಮದ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದ ಬಳಕೆಯಿಂದ ಮಾತ್ರಾ ಯಶಸ್ಸು ಎನಿಸಿ ಕೃಷಿ ಉದ್ಯಮ ಆರಂಭಿಸಿದರು.
ಬೇವಿನ ಹಿಂಡಿ ಉದ್ಯಮ: ತಮ್ಮ ಸ್ವಂತ ತೋಟದ ಬಳಕೆಗೆ ಗೊಬ್ಬರ ಅವಶ್ಯಕತೆ ಇತ್ತು ಅದರ ಜತೆ ಇತರೇ ಕೃಷಿಕರ ಅವಶ್ಯಕತೆಯನ್ನು ಪೂರೈಸುವ ಸಣ್ಣ ಪ್ರಮಾಣದ ಬೇವಿನ ಹಿಂಡಿ ಗೊಬ್ಬರ ಘಟಕ ಪ್ರಾರಂಭಿಸಿದರು. ಬಯಲು ಸೀಮೆಯಿಂದ ಬೇವಿನ ಬೀಜ ತರಿಸಿ ಅದನ್ನು ಹುಡಿಮಾಡಿ ಇತರೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ವಿತರಿಸಿದರು. ಇದರಿಂದಾಗಿ ಅವರ ತೋಟಕ್ಕೂ ಕಡಿಮೆ ವೆಚ್ಚದಲ್ಲಿ ಗೊಬ್ಬರ ದಕ್ಕಿತು. ಇಂತಹ ಸಣ್ಣ ಪ್ರಯತ್ನಗಳಿಂದಾಗಿ ಕೃಷಿಯನ್ನು ಲಾಭಕರ ಉದ್ಯಮವನ್ನಾಗಿಸಬಹುದೆಂದು ಗಣೇಶ್ ತೋರಿಸಿಕೊಟ್ಟಿದ್ದಾರೆ.


ನಾಟಿ ಯಂತ್ರ: ಒಮ್ಮೆ ಕೃಷಿ ಪ್ರವಾಸಕ್ಕೆಂದು ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಕೃಷಿಕರೊಬ್ಬರು ಭತ್ತದ ಸಸಿ ನಾಟಿಮಾಡಲು ಕೈಯಂತ್ರ ಬಳಸುತ್ತಿರುವುದನ್ನು ಗಣೇಶ್ ಗಮನಿಸಿದರು. ಆದರೆ ಆ ಯಂತ್ರ ಪರಿಪೂರ್ಣವಾಗಿರಲಿಲ್ಲ. ಒಂದು ಎಕರೆ ಭತ್ತದ ಸಸಿ ನಾಟಿ ಮಾಡುವಷ್ಟರಲ್ಲಿ ಯಂತ್ರ ದುರಸ್ತಿಕಾರ್ಯಕ್ಕೆ ಬರುತ್ತಿತ್ತು. ಗಣೇಶ್ ಆ ಯಂತ್ರದ ಮಾದರಿಯನ್ನು ಸುಧಾರಿಸಿ ಭತ್ತ ನಾಟಿ ಮಾಡುವ ಯಂತ್ರ ನಿರ್ಮಿಸಿದ್ದಾರೆ. ಲೀಲಾಜಾಲವಾಗಿ ಹತ್ತು ಎಕರೆ ನಾಟಿ ಮಾಡುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇಂತಹ ಹಲವು ಯಂತ್ರಗಳನ್ನು ತಾವೇ ತಯಾರಿಸಿ ಕೃಷಿಕರಿಗೆ ನೀಡಿದ್ದಾರೆ.
ಕೈಕೊಟ್ಟ ಉದ್ಯೋಗ ಖಾತ್ರಿ: ಕೂಲಿಜನರ ಸಹಾಯಕ್ಕೆಂದು ಬಂದ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎನ್ನಿವುದು ಗಣೇಶ್ ಅಭಿಮತ. ಕೂಲಿಕಾರರನ್ನು ಇನ್ನಷ್ಟು ಸೋಮಾರಿಯನ್ನಾಗಿಸಿ ಅತ್ತ ಖಾತ್ರಿಯೂ ಇಲ್ಲ ಇತ್ತ ಕೃಷಿ ಕಾರ್ಯುಗಳೂ ಇಲ್ಲದಂತಾಗಿದೆ. ಇದರ ದುಶ್ಪರಿಣಾಮ ಕೃಷಿಕರು ಎದುರಿಸುವಂತಾಗಿದೆ. ಆದರೆ ಕೃಷಿಕಾರ್ಮಿಕರ ಕೊರತೆಗೆ ಹೆದರದೆ ಗಣೇಶ್ ಯಂತ್ರಗಳ ಬಳಕೆಯನ್ನು ಅವಲಂಬಿಸಿದರು. ಗದ್ದೆ ಕೊಯ್ಲಿಗೆ ಯಂತ್ರವನ್ನು ಬಳಸಿ ಹಣ ಉಳಿಸಿದರು. ಇದರಿಂದಾಗಿ ಸ್ವಾವಲಂಬಿಯಾದೆ ಎನ್ನುತ್ಟಾರೆ.
ಭತ್ತದ ಆಸಕ್ತಿ: ಆರ್ಥಿಕ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೂ ಗಣೇಶ್ ರವರಿಗೆ ಭತ್ತದ ಮೇಲೆ ಅಪಾರ ಪ್ರೀತಿ. ಕೃಷಿಯಲ್ಲಿ ತೊಡಗಿಸಿಕೊಂಡ ಆರಂಭದಲ್ಲಿಯೇ ಮಲೆನಾಡಿನಲ್ಲಿ ಯಾರೂ ಬೆ:ಳೆಯದಿದ್ದ ಡೈಮಂಡ್ ಸೋನಾ ತಳಿಯ ಭತ್ತ ಬೆಳೆದು ಲಾಭ ಗಳಿಸಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ನುಡಿಯನ್ನು ಸುಳ್ಳು ಮಾಡಿದ್ದಾರೆ ಗಣೇಶ್. ೧೨ ಎಕರೆ ಗದ್ದೆಯಲ್ಲಿ ೧೬೦ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಭತ್ತದ ಬೆಳೆ ಬೈ ಹುಲ್ಲನ್ನೂ ಸೇರಿಸಿದರೆ ಶೇಕಡಾ ಮೂವತ್ತರಷ್ಟು ಲಾಭ ಮಾಡಬಹುದು ಎನ್ನುವುದು ಗಣೇಶ್ ಅಭಿಪ್ರಾಯ.
ಬಯೋ ಡೈಜೆಸ್ಟರ್: ಗೊಬ್ಬರ ಸಾಗಾಟ ತೋಟಕ್ಕೆ ಕಷ್ಟ ಹಾಗೂ ಹೆಚ್ಚಿನ ಕೂಲಿಯನ್ನು ಬೇಡುತ್ತದೆ ಎನ್ನುವುದು ಅರಿವಾದಾಗ ಮೊರೆಹೋಗಿದ್ದು ಬಯೋ ಡೈಜೆಸ್ಟರ್ ಘಟಕ. ತೋಟದ ಎಲ್ಲಾ ಗಿಡಗಳಿಗೆ ನೀರಿನ ಮೂಲಕ ಗೊಬ್ಬರ ಸೇರುವುದರಿಂದ ಅತ್ಯಂತ ಪರಿಣಾಮಕಾರಿ. ತಾನು ಕೃಷಿ ಆರಂಭಿಸಿದ ಸಮಯದಲ್ಲಿ ೨-೩ ಸಾವಿರ ದಷ್ಟು ಸಿಗುತ್ತಿದ್ದ ತೆಂಗಿನಕಾಯಿ ಈಗ ೧೨-೧೩ ಸಾವಿರಕ್ಕೇರಿದೆ ಎನ್ನುತ್ತಾರೆ.


ಕೈಮಗ್ಗ ಘಟಕ: ಹೆಗ್ಗೋಡಿನ ಚರಕದ ಮಾದರಿಯಲ್ಲಿ ಸಣ್ಣದಾದ ಕೈಮಗ್ಗದ ಘಟಕ ನಡೆಸುತ್ತಿರುವ ಗಣೇಶ್ ಅದು ಖುಷಿಗೆ ಎನ್ನುತ್ತಾರೆ. ಕೃಷಿಯ ಜತೆ ಖುಷಿಯೂ ಬೇಕು ಆರ್ಥಿಕವಾಗಿ ಮಗ್ಗಗಳು ಲಾಭದಾಯಕವಲ್ಲ ಆದರೆ ನಾಲ್ಕಾರು ಜನಕ್ಕೆ ಉದ್ಯೋಗ ನೀಡಿದ ಖುಷಿ ಹಾಗೂ ಅವಶ್ಯಕವಾದ ಬಟ್ಟೆಯನ್ನು ನಾವು ಸಮಾಜಕ್ಕೆ ನೀಡುತ್ತಿರುವ ನೆಮ್ಮದಿಗಾಗಿ ಚರಕದ ಸಹಯೋಗದೊಂದಿಗೆ ಕೈಮಗ್ಗದ ಘಟಕ ಸ್ಥಾಪಿಸಿದ್ದೇನೆ ಎನ್ನುತ್ತಾರೆ.
ಮಂಗಗಳ ಕಾಟಕ್ಕೆ ನಾಯಿಯೇ ಮದ್ದು: ಮಂಗಗಳು ಹೇರಳ ಅಡಿಕೆಚಿಗುರು ಕಾಯಿಗಳನ್ನು ತಿಂದು ಅಪಾರ ಹಾನಿ ಮಾಡುತ್ತಿದ್ದವು. ಕಾವಲಿಗೆ ಜನರನ್ನು ಇಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ, ಆಗ ಸಿಕ್ಕಿದ್ದು ಈ ಉಪಾಯ. ಹಾದಿಬದಿಯಲ್ಲಿರುವ ಹತ್ತೆಂಟು ಬೀದಿನಾಯಿಯನ್ನು ಸಾಕಿದ್ದಾರೆ. ಸಾಕುವ ಖರ್ಚೂ ಕಡಿಮೆ ಮಂಗಗಳ ಕಾಟದಿಂದಲೂ ಮುಕ್ತಿ ಎನ್ನುವುದು ಗಣೇಶರ ಅನುಭವದ ಮಾತುಗಳು.
ಅಮೆರಿಕಾದ ನಗರದಲ್ಲೋ ಜಪಾನ್ ನ ಏರ್ ಕಂಡೀಷನ್ ರೂಂ ನಲ್ಲೋ ಕುಳಿತು ಉದ್ಯೋಗ ಮಾಡಬಹುದಾಗಿದ್ದ ಗಣೇಶ್ ಸ್ವಂತ ಮಣ್ಣಿನ ಆಸಕ್ತಿಯಿಂದ ಉತ್ತಮ ಕೃಷಿಕರೆನಿಸಿಕೊಂಡು ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಮಾತಿಗೆ ಅರ್ಥವಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಕೃಷಿಯನ್ನೂ ಉದ್ಯಮವೆಂದು ಪರಿಗಣಿಸಿದರೆ ಅಷ್ಟೇ ಆಸ್ಥೆಯಿಂದ ಲೆಕ್ಕಾಚಾರಕ್ಕಿಳಿದು ಕೆಲಸ ಮಾಡಿ ತೊಡಗಿಸಿಕೊಂಡಲ್ಲಿ ಮಣ್ಣು ಕೈಬಿಡದು ಎನ್ನುವುದು ಗಣೇಶ್ ರ ಅನುಭವದಿಂದ ಬಂದ ಮಾತುಗಳು.
ಫೋನ್:  08183207625  -೦೮೧೮೩ ೨೦೭೬೨೫
ಮೊಬೈಲ್: 9449328304 -೯೪೪೯೩೨೮೩೦೪
(ವಿಜಯವಾಣಿಯಲ್ಲಿ ಪ್ರಕಟಿತ)

4 comments:

ವಿ.ರಾ.ಹೆ. said...

ಗ್ರೇಟ್

Anonymous said...

ಕೃಷಿತೋ ನಾಸ್ತಿ ದುರ್ಬಿಕ್ಷಾಂ....

RAMESHA HEGADE said...

ಬಹಳ ಖುಷಿಯಾಯ್ತು
ಇಂತಹ ಲೇಖನಗಳಿಂದಲೆ ನೀವು ನಮಗೆ ಇಷ್ಟ ಆಗೊದು
"ಕೇವಲ ದೂರದ ಪಟ್ಟಣದಲ್ಲಿ ಇರುವವರು ಮಾತ್ರ ಸಾದನೆ ಮಾಡಲು ಅರ್ಹರು ನಮ್ಮಂತಹ ಹಳ್ಳಿಗಳಲ್ಲಿ ಇರುವವರು ಏನುಪ್ರಯೋಜನ ಇಲ್ಲ" ಎಂಬಂತ ಭಾವನೆ ಇಂತ ಲೇಖನದಿಂದ ಕೆಲವರಿಗಾದರು ತಿಳಿಯಲಿ

Prakash Narasimhaiah said...

ಆತ್ಮೀಯರೇ,
ಗಣೇಶರಂತಹ ಯುವಕರು ಕೃಷಿಗೆ ಹೋಗಿದ್ದು ನಿಜಕ್ಕೂ ಪ್ರಶಂಸನೀಯ. ಅವರ ಸಾಧನೆಯನ್ನು ವಿವರವಾಗಿ ತಿಳಿಸುವ ಕೃಪೆ ಮಾಡಿದ ನಿಮಗೂ ಧನ್ಯವಾದಗಳು.
ಗಣೇಶ ರವರಂತಹ ಉತ್ಸಾಹಿ ಯುವಕರಿಗೆ ಸರಕಾರ ಮತ್ತು ಸಂಘಸಂಸ್ತೆಗಳು ಉತ್ತೇಜನ ನೀಡಿ ಹೆಚ್ಚು ಕೃಷಿಗೆ ಒತ್ತುನೀಡುವ ಕೆಲಸ ಮಾಡಬೇಕು. ನಿಮ್ಮ ಲೇಖನ ಇಂದಿನ ಯುವಕರಿಗೆ ತಿಳಿ ಹೇಳುವಂತಿದೆ. ಇಂತಹ ವಿಚಾರ ಹೆಚ್ಚು ಜನರನ್ನು ತಲಪಲಿ ಎಂದು ಆಶಿಸುವ.
ಪ್ರಕಾಶ್