Wednesday, September 11, 2013

ಯೋಜನಾಬದ್ಧ ಕೃಷಿಯಿಂದ ಸಮೃದ್ಧಿ

ಕಷ್ಟನಷ್ಟ ಎಲ್ಲಾ ಉದ್ಯೋಗದಲ್ಲಿಯೂ ಸರ್ವೇಸಾಮಾನ್ಯ ಆದರೆ ಇಷ್ಟವಿದ್ದರೆ ಅದರ ಜತೆ ತಾಳ್ಮೆ ಹಾಗೂ ಕೈಗೆತ್ತಿಕೊಳ್ಳುವ ಯೋಜನೆ ಗಳು ಸಮರ್ಪಕವಾಗಿದ್ದರೆ ಎಂತಹಾ ಉದ್ಯೋಗದಲ್ಲಿಯೂ ಯಶಸ್ಸು ಸಾದ್ಯ, ಬೇರೆಲ್ಲಾ ಉದ್ಯೋಗಕ್ಕೆ ಹೋಲಿಸಿದಲ್ಲಿ ಕೃಷಿಕ್ಷೇತ್ರ ಯಶಸ್ಸಿನ ಜತೆ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಬೋನಸ್ ಎಂಬುದಕ್ಕೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಕಾನ್ಲೆ ಬಾಬು ಸ್ಕರಿಯಾಚನ್ ಉದಾಹರಣೆಯಾಗಿ ನಿಲ್ಲುತ್ತಾರೆ. ಕಾನ್ಲೆ ರೈಲ್ವೆ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ಬಾಬುರವರ ಸಮೃದ್ಧ ಕೃಷಿಕ್ಷೇತ್ರ ಕಾಣಿಸುತ್ತದೆ. ಕೇರಳ ಮೂಲದ ಬಾಬು ಸ್ಕರಿಯಾಚನ್ ೨೮ ವರ್ಷದ ಹಿಂದೆ ತಂದೆಯ ಜತೆ ಕೇರಳದ ಕ್ಯಾಲಿಕಟ್ ನಿಂದ ಸಾಗರ ತಾಲ್ಲೂಕಿನ ಕಾನ್ಲೆ ಗ್ರಾಮಕ್ಕೆ ಬಂದು ೬೦ ಎಕರೆ ಕೃಷಿ ಬರಡು ಭೂಮಿ ಖರೀದಿಸಿದರು. ಅಲ್ಲಿಂದ ತಮ್ಮ ಬದುಕನ್ನು ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಬಾಬು ಒಂದೊಂದೇ ಮೆಟ್ಟಿಲೇರುತ್ತಾ ಚಿಕ್ಕ ಸಂಸಾರ ದೊಡ್ಡ ಕೃಷಿ ಕ್ಷೇತ್ರ ಎಂಬ ನೀತಿ ಪಾಲಿಸಿ ಯಶಸ್ಸಿನ ಜತೆ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಖರೀದಿಸಿದ್ದ ಜಮೀನು ಬಾಬುರವರ ಪಾಲಿಗೆ ಬಂದಿದ್ದು ೩೦ ಎಕರೆ. ವಿವಿಧ ಬೆಳೆಗಳಲ್ಲಿ ನಂಬಿಕೆ ಇಟ್ಟಿರುವ ಬಾಬು ಕೃಷಿ ಆರಂಬಿಸಿದ್ದು ಅನಾನಸ್ ಬೆಳೆಯ ಮುಖಾಂತರ. ಅನಾನಸ್ ಜತೆಗೆ ರಬ್ಬರ್ ಬೆಳೆಸಿದರು. ಅನಾನಸ್ ಆದಾಯದಲ್ಲಿ ರಬ್ಬರ್ ತೋಟ ಉಚಿತವಾಗಿ ಇಳುವರಿ ನೀಡಲಾರಂಬಿಸಿತು. ೧೧ ಎಕರೆ ರಬ್ಬರ್, ೮ ಎಕರೆ ತೆಂಗು ೮ ಎಕರೆ ಬಾಳೆ ೩ ಎಕರೆ ಅಡಿಕೆ ಹೀಗೆ ಒಂದು ಕೃಷಿಯ ಲಾಭ ಮತ್ತೊಂದಕ್ಕೆ ತೊಡಗಿಸಿ ೩೦ ಎಕರೆ ಕೃಷಿ ಕ್ಷೇತ್ರ ನಳನಳಿಸುವಂತೆ ಮಾಡಿದ್ದಾರೆ ಬಾಬು. ಅಂತರ ಬೆಳೆ : ಏಕಬೆಳೆ ಕೃಷಿಕರ ಧೈರ್ಯವನ್ನು ಕುಗ್ಗಿಸುತ್ತದೆ, ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಚಲವಾಗಿ ನಂಬಿರುವ ಬಾಬು, ಬೆಳೆಯ ನಡುವೆ ಅಂತರಬೆಳೆ ಬೆಳೆದು ಹೆಚ್ಚಿನ ಲಾಭಗಳಿಸಿದ್ದಾರೆ. ಮಲೆನಾಡಿನಲ್ಲಿ ತೆಂಗು ಬೆಳೆ ಸಮರ್ಪಕವಾಗಿ ಬಾರದು, ತೆಂಗು ಬೆಳೆ ಸಮುದ್ರ ತೀರದಲ್ಲಿ ಎಂಬ ಎಂಬ ನಂಬಿಕೆಯನ್ನು ಬಾಬುರವರು ಹುಸಿಯಾಗಿದ್ದಾರೆ. ತೆಂಗಿನ ಮರ ಉತ್ತಮ ಫಸಲು ನೀಡಲು ಮರದಿಂದ ಮರಕ್ಕೆ ೩೦ ಅಡಿ ಅಂತರ ಕಾಪಾಡಿಕೊಂಡು ನಾಟಿ ಮಾಡಬೇಕು ಹಾಗೂ ಗರಿಷ್ಟ ೨ ಅಡಿ ಹೊಂಡ ತೆಗೆದು ಗಿಡ ನೆಡಬೇಕು, ಬೆಳೆದ ಗಿಡದ ಗರಿಗಳು ಮತ್ತೊಂದು ಗಿಡದ ಗರಿಗೆ ತಾಕದಂತೆ ಇರಬೇಕು ಆವಾಗ ತೆಂಗು ಮಲೆನಾಡಿನಲ್ಲಿ ಲಾಭದಾಯಕ ಎನ್ನುವುದು ಇವರ ಅಭಿಪ್ರಾಯ. ಪ್ರತಿಯೊಂದು ತೆಂಗಿನ ಮರದಿಂದ ೪೦೦ ರಿಂದ ೫೦೦ ತೆಂಗಿನಕಾಯಿ ವರ್ಷವೊಂದಕ್ಕೆ ಪಡೆಯುತ್ತಾರೆ. ಆದರೆ ದರದ ವಿಚಾರದಲ್ಲಿ ತೆಂಗು ಮೂವತ್ತು ವರ್ಷಗಳ ಹಿಂದೆ ಇದೆ, ಆದರೂ ಲಾಭದಾಯಕ, ಕಾಳುಮೆಣಸಿನ ಬಳ್ಳಿ ಪ್ರತೀ ತೆಂಗಿನ ಮರಕ್ಕೆ ಹಚ್ಚಿದರೆ ಲಾಭ ದುಪ್ಪಟ್ಟು. ಅಡಿಕೆಗೂ ಇದೇ ರೀತಿ ೯ ಅಡಿ ಅಂತರ ಇರಬೇಕು, ಹೆಚ್ಚು ಗಿಡ ಕಡಿಮೆ ಫಸಲು ನೀತಿಗಿಂತಲೂ ಕಡಿಮೆ ಗಿಡ ಕಡಿಮೆ ಕೆಲ ಹೆಚ್ಚು ಫಸಲು ಜತೆಗೆ ಹೆಚ್ಚು ಲಾಭ, ಗೊಬ್ಬರ ಹಾಗೂ ನೀರಿನ ಪೂರೈಕೆ ಅತಿಯಾಗಬಾರದು ಮಿತವಾಗಿರಬೇಕು ಎನ್ನುವುದು ಇವರ ಅಭಿಮತ. ರಬ್ಬರ್ ಪರಿಣಿತಿ: ರಬ್ಬರ್ ಬೆಳೆಯಲ್ಲಿ ವಿವಿಧ ರೀತಿಯ ಪ್ರಯೋಗಗಲನ್ನು ನಡೆಸಿ ಬಾಬು ಯಶಸ್ಸು ಕಂಡಿದ್ದಾರೆ. ರಬ್ಬರ್ ಮಂಡಳಿ ನಿಗದಿಪಡಿಸುವ ಅಂತರದಲ್ಲಿ ಗಿದಗಳನ್ನು ನಾಟಿ ಮಾಡಿದರೆ ಸಬ್ಸಿಡಿ ಸಿಗುತ್ತದೆ. ೧೫ ಅಡಿ ಅಂತರ ಮಂಡಳಿಯದು. ಬಾಬು ಕೊಂಚ ಬುದ್ಧಿವಂತಿಕೆ ಉಪಯೋಗಿಸಿ ರಬ್ಬರ್ ತೋಟದ ಕೊನೆಯೆ ಸಾಲಿನಲ್ಲಿ ಕೇವಲ ೫ ಅಡಿ ಅಂತರಕ್ಕೆ ಗಿಡ ನಾಟಿ ಮಾಡಿ ತೋಟದೊಳಗೆ ರಬ್ಬರ್ ಮಂಡಳಿ ನಿಗದಿಪಡಿಸಿದ ಅಂತರದ ನಾಟಿ ಮಾಡಿದ್ದಾರೆ. ಐದು ಅಡಿ ಅಂತರದಲ್ಲಿ ನಾಟಿ ಮಾಡಿದ ರಬ್ಬರ್ ಗಿದಗಳು ಉತ್ತಮ ಗಾತ್ರದಲ್ಲಿ ಬೆಳೆದಿದ್ದು ಅಧಿಕ ಲಾಭವನ್ನು ತರುತ್ತದೆ ಎನ್ನುವುದು ಬಾಬುರವರ ಅನುಭವ. ಬಾಳೆ ಬೆಳೆ: ಬಾಬುರವರು ತೆಂಗಿನತೋಟದ ನಡುವೆ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ. ನೇಂದ್ರ, ಪಚ್ಚಬಾಳೆ, ಪುಟ್ಟಬಾಳೆ ಹಾಗೂ ಸೇಲಂ ಬಾಳೆಗಳನ್ನು ಬೆಳೆಯುವ ಬಾಬು ಬಾಳೆಯೊಂದರಿಂದಲೇ ವರ್ಷಕ್ಕೆ ೩ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತೆಂಗಿನ ತೋಟದ ನಡುವೆ ಹಿಟಾಚಿಯಿಂದ ಚರಂಡಿ ತೆಗೆಯಿಸಿ ಬಾಳೆ ನಾಟಿ ಮಾಡುವ ಬಾಬು ಐದು ಕೂಳೆ ಬಾಳೆ ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ದಡ್ಡಿ ಗೊಬ್ಬರ, ಸಾವಯವ ಗೊಬ್ಬರದ ಜತೆ ಕೊಂಚಮಟ್ಟಿಗಿನ ರಾಸಾಯನಿಕವನ್ನು ವೈಜ್ಞಾನಿಕ ಪದ್ದತಿಯಲ್ಲಿ ಬಳಸಿದಲ್ಲಿ ಕೃಷಿ ಕ್ಷೇತ್ರ ಫಲವತ್ತತೆಯಾಗಿರುತ್ತದೆ ಎನ್ನುತ್ತಾರೆ. ಕೃಷಿ ಸಲಹೆ: ಮಲೆನಾಡಿನಲ್ಲಿ ಕೇರಳದಿಂದ ರಬ್ಬರ್ ಬೆಳೆ ಬಹಳ ಹಿಂದೆಯೇ ಕರೆತಂದ ಕೀರ್ತಿ ಬಾಬುರವರದ್ದು. ಸುತ್ತಮುತ್ತಲಿನ ನೂರಾರು ಕೃಷಿಕರಿಗೆ ಇವರು ರಬ್ಬರ್ ಕೃಷಿ ಬಗ್ಗೆ ಅವರ ಜಾಗಕ್ಕೆ ಹೋಗಿ ನಾಟಿ, ರಬ್ಬರ್ ಟ್ಯಾಪಿಂಗ್, ಮತ್ತು ರಬ್ಬರ್ ಬೆಳೆಯ ಬಗ್ಗೆ ಮಾಹಿತಿ ನೀಡಿ ರೈತರನ್ನು ರಬ್ಬರ್ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಇವರು ಇದನ್ನೆಲ್ಲಾ ಉಚಿತವಾಗಿ ಕೇವಲ ಆಸಕ್ತಿಗಾಗಿ ಮಾಡಿದ್ದಾರೆ. ಮಿನಿ ಗಾರ್ಡನ್: ಬಾಬು ರವರ ಪತ್ನಿ ಮಿನಿಬಾಬು ರವರದು ಹೂ ಕೃಷಿ. ಮನೆಯ ಸುತ್ತಮುತ್ತಲಿನ ಇಂಚಿಂಛು ಜಾಗವೂ ಅಂಥೋರಿಯಂ, ಪಾಪಸ್ ಕಳ್ಳಿ , ಗುಲಾಬಿ, ಕಾಗದಾಳಿ ಮುಂತಾದ ಆಕರ್ಷಕ ಹೂವುಗಳಿಂದ ಮನಮೋಹಕವಾಗಿದೆ. ಹೂವಿನ ಕೃಷಿಯಲ್ಲಿ ತೊಡಗಿಸಿ ಕೊಂಡಿರುವ ಮಿನಿಬಾಬು ಕೃಷಿಯಲ್ಲಿಯೂ ಯಜಮಾನರಿಗೆ ಸಾಥ್ ನೀಡುತ್ತಾರೆ. ಇಲ್ಲಿ ಎಲ್ಲವೂ ಇದೆ: ಸರ್ವ ಋತು ಹಲಸಿನಿಂದ ಹಿಡಿದು, ನಿಂಬೆ, ಪೇರಳೆ, ಬಿಳೀ ಕೆಸ, ಹೀಗೆ ಎಲ್ಲಾ ಜಾತಿಯ ಹಣ್ಣು ಹಂಪಲು ಇವರ ಕ್ಷೇತ್ರದಲ್ಲಿ ಲಭ್ಯ. ೩ ಎಕರೆ ಪ್ರದೇಶಲ್ಲಿನ ತೆಂಗಿನ ನಡುವೆ ಅಂತರ ಬೆಳೆಯಾಗಿರುವ ೧೨೦ ಸಪೋಟ ಗಿಡಗಳು ಇವರಿಗೆ ಆದಾಯದ ಮೂಲವೂ ಹೌದು. ಪಕ್ಷಿಪ್ರೀತಿ: ನಮ್ಮ ರಾಷ್ಟ್ರ ಪಕ್ಷಿ ಇಲ್ಲಿ ಹತ್ತಿರದಿಂದ ನೋಡಲು ಸಿಗುತ್ತದೆ. "ವಿವಿ" ಎಂಬ ಹೆಸರಿನ ನವಿಲು ಈ ಮನೆಯ ಸುತ್ತಮುತ್ತ ಓಡಾಡುತ್ತಲಿರುತ್ತದೆ. ಮನೆಗೆ ಬರುವ ಅತಿಥಿಗಳ ಹಿಂದೆ ಮುಂದೆ ಸುತ್ತಾಡುವ ವಿವಿ ಅತಿಥಿಗಳು ಟಾಟಾ ಹೇಳುವವರೆಗೂ ಅವರ ಹಿಂದೆಯೇ ಓಡಾಡುತ್ತಾ ಇರುತ್ತದೆ. ಅಕ್ಕರೆಯಿಂದ ಮನೆಯ ಗಿರಿರಾಜ ಕೋಳಿಗಳ ಜತೆ ಇರುವ ನವಿಲು ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ. ಕೇರಳದಲ್ಲಿ ಕೃಷಿ ಕೊಂಚ ಸುಲs ಅಲ್ಲಿ ನೀರಿನ ಸಮಸ್ಯೆ ಕಡಿಮೆ, ಜಾನುವಾರು ಕಾಟವಿಲ್ಲ, ಎಲ್ಲರೂ ಅವರವರ ದನಗಳನ್ನು ಅವರೇ ನೊಡಿಕೊಳ್ಳುತ್ತಾರೆ, ಜತೆಗೆ ಅಲ್ಲಿನ ಕೃಷಿಕರು ಧನಾತ್ಮಕ ಯೋಚನೆಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಟೊ ಓಡಿಸುವುದರಿಂದ ಹಿಡಿದು ಬಸ್ ಮಾಲಿಕರವರೆಗೂ, ಸಣ್ಣ ಅಂಗಡಿಯಿಂದ ಹಿಡಿದು ದೊಡ್ದ ಫ್ಯಾಕ್ಟರಿಯವರೆಗೂ ಕಷ್ಟ ನಷ್ಟಗಳು ಇದ್ದೇ ಇರುತ್ತವೆ, ಅವನ್ನೆ ಹಿಡಿದುಕೊಂಡು ಕೊರಗುತ್ತಾ ಕೈಕಟ್ಟಿ ಕುಳಿತರೆ ಎಲ್ಲಿಯೂ ಯಶಸ್ಸು ಸಿಗುವುದಿಲ್ಲ, ನಾವು ೨೮ ವರ್ಷದ ಹಿಂದೆ ೪ ಸಾವಿರ ಎಕರೆಗೆ ಕೊಂಡಿದ್ದ ಜಮೀನು ನಮ್ಮ ಬೆವರಿನ ಫಲವಾಗಿ ಇಂದು ಎಕರೆಗೆ ೨೦ ಲಕ್ಷ ರೂಪಾಯಿ ಆಗಿದೆ. ಈ ಮಧ್ಯೆ ನಮ್ಮ ಜೀವನ ನಡೆದಿದೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಹಬ್ಬ ಹರಿದಿನ ಎಲ್ಲವೂ ನಮಗೆ ಕೃಷಿಯಿಂದಲೇ ಆಗಿದೆ ಹಾಗಾಗಿ ಇಲ್ಲಿ ನಾನು ನೆಮ್ಮದಿ ಕಂಡಿದ್ದೇನೆ, ಪತ್ನಿ ಪುತ್ರಿ ಯ ಜತೆ ಕಾಲ ಕಳೆಯುವುದಕ್ಕೂ ಸಮಯ ಸಿಕ್ಕಿದೆ, ಸವಾಲುಗಳು ಎಲ್ಲಾ ಕ್ಷೇತ್ರದಲ್ಲಿಯೂ ಇದೆ ಹಾಗೆಯೇ ಇಲ್ಲಿಯೂ ಇದೆ, ನಮ್ಮ ಜಾಣತನದಿಂದ ಅದನ್ನು ಎದುರಿಸಬೇಕು, ಇಲ್ಲಿ ಸೋಮಾರಿತನ ಸಲ್ಲದು ಹಾಗೂ ಆಕಳು ಹಿಂಡಿ, ಕೊಟ್ಟಿಗೆಯ ಸಗಣಿ ತೆಗೆಯುವುದರಿಂದ ಪ್ರಾರಂಭಿಸಿ ತೋಟದ ಮಣ್ಣು ಕೆಲಸವೂ ಕೃಷಿಕನಿಗೆ ಗೊತ್ತಿರಬೇಕು ಮತ್ತು ಮಾಡಲು ಸಿದ್ಧವಿರಬೇಕು ಆವಾಗ ಕೃಷಿ ಕಾರ್ಮಿಕರು ನಮ್ಮೊಟ್ಟಿಗೆ ಸಹಕರಿಸುತ್ತಾರೆ, ಎನ್ನುತ್ತಾರೆ ಬಾಬು ಸ್ಕರಿಯಾಚನ್. ಕೃಷಿಕ್ಷೇತ್ರ ಅತ್ಯಂತ ಉತ್ತಮವಾಗಿದ್ದು ಆದರೆ ಯೋಜನೆ ಯೋಚನೆ ಸಮರ್ಪಕವಾಗಿರಬೇಕು ಎನ್ನುವುದಕ್ಕೆ ಕಾನ್ಲೆ ಬಾಬುರವರು ಸಾಕ್ಷಿ. ಪ್ರಕೃತಿಯ ಹಸಿರನ ನಡುವೆ ಸುಂದರವಾದ ಪುಟ್ಟಮನೆ, ಸುತ್ತಮುತ್ತ ಓಡಾಡುವ ನವಿಲು, ಆಕಳಿನ ಕೂಗು, ಬಣ್ಣಬಣ್ಣದ ಹೂವುಗಳು, ಮೈ ತಬ್ಬುವ ನಾಯಿ, ಕೇಳಿದಷ್ಟೂ ಮಾಹಿತಿ ನಿಡುವ ಬಾಬು ದಂಪತಿಗಳು ಎಂತಹವರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ನಾವು ಹೀಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಮೂಡುತ್ತದೆ. ಬಾಬು ಸ್ಕರಿಯಾಚನ್ ಮೊಬೈಲ್ : ೯೬೩೨೬೦೬೧೬೫ ಹಾಗೂ ಮಿನಿಬಾಬು: ೯೪೪೮೯೪೩೯೦೮

1 comment:

Next Step Web Solution said...

I’ve learn a few just right stuff here. Definitely value bookmarking for revisiting. I surprise how so much effort you set to make any such excellent informative website.
Industrial Training Provider