Saturday, September 6, 2008

ಹುಡುಕ ಹೊರಟ ನಾನು ಹುಡಿಕಿಕೊಂಡ ಅಪ್ಪಯ್ಯ


ಹಾ ಆರಂಭದಲ್ಲಿಯೇ ಹೇಳುತ್ತೇನೆ. ಈಗ ನಾನು ಹೇಳ ಹೊರಟಿರುವುದು ಏನೇನೋ ಇದೆ. ಅದನ್ನೆಲ್ಲಾ ನಿಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳಬೇಕು, ಕಾರಣ ಅದು ನೀವೂ ಆಗಿರಬಹುದು. ನಾನೂ ಆಗಿರಬಹುದು.
ನನಗೆ ವಯಸ್ಸು ನಲವತ್ತೊಂದು, ಪಿಯುಸಿ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಹಿಂದಿ ಮಾತನಾಡಲು ಇಂಗ್ಲೀಷ್ ಓದಲು ಬರುತ್ತದೆ. ಮಲೆನಾಡಿನ ಹಳ್ಳಿಯ ಒಂಟಿಮನೆಯಲ್ಲಿ ವಾಸ. ವರ್ಷಕ್ಕೆ ಹತ್ತು ಕ್ವಿಂಟಾಲ್ ಅಡಿಕೆ ಬೆಳೆಯಲ್ಲಿ ಜೀವನ. ವೆನಿಲಾಕ್ಕೆ ಒಳ್ಳೆ ದರ ಬಂದಿದ್ದಾಗ ಕೊಂಡುಕೊಂಡ ಕಂಪ್ಯೂಟರ್,ತೊಂಬತ್ತೊಂದನೆ ಮಾಡಲ್ ಓಮ್ನಿ, ಓಲಂಪಸ್ ಕ್ಯಾಮೆರಾ, ವಾಷಿಂಗ್ ಮಷಿನ್, ಪ್ರಿಜ್, ಹೀಗೆ ಏನೇನೋ ಇದೆ. ಈಗ ವೆನಿಲಾ ವೈರಸ್ ಖಾಯಿಲೆಯಿಂದ ಸಂಪೂರ್ಣ ನಾಶವಾದ ನಂತರ ಅವೆಲ್ಲಾ ದಿನಕಳೆದಂತೆ ಮೂಲೆ ಸೇರುತ್ತಾ ಇದೆ. ಇರಲಿ ಅದೂ ಒಂದು ಕಾಲ. ಈಗ ನನ್ನ ಬುದ್ದಿಯ ಕತೆ ನೋಡೋಣ. ಹುಡುಕ ಹೊರಡುವುದು ಚಟ, ಸಿಗಲಿ ಸಿಗದಿರಲಿ ಅರ್ದಕ್ಕೆ ಕೈಬಿಡುವುದು ಕೆಟ್ಟ ಚಟ. ಇತ್ತ ದೇವರು ದಿಂಡಿರು ಎಂದು ಮಡಿ ಉಟ್ಟು ಕೂರುವುದರಲ್ಲಿ ಅರ್ಥ ಇಲ್ಲ ಅಂತ ಅನ್ನಿಸುತ್ತದೆ, ಅವೆಲ್ಲಾ ಸುಳ್ಳು ಅಂತ ಅನ್ನಿಸುತ್ತದೆ. ಆದರೆ ಸತ್ಯ ಯಾವುದು ಎಂದು ಗೊತ್ತಿಲ್ಲ. ಪ್ರತಿ ನಿತ್ಯ ಬೆಳಿಗೆ ಎದ್ದು ಮಿಂದು ಮಡಿಯನ್ನುಟ್ಟು ಅದೇ ನಾದಶಬ್ಧ ಮಹೀಂ ಗಂಟಾಂ ಸರ್ವ ವಿಘ್ನಾಪಹಾರೀಣೆ, ಪೂಜಯೇ ... ಎಂದು ಮಂತ್ರ ಹೇಳುತ್ತಾ ಗಂಧ ತೆಯ್ಯುತ್ತಾ ಮರದ ದೇವರ ಪೀಠಕ್ಕೆ ಅಲಂಕಾರ ಮಾಡುತ್ತಾ, ಕಪ್ಪಗಿರುವ ಕಲ್ಲನ್ನು ಸಾಲಿಗ್ರಾಮ ಎಂದುಕೊಂಡು ತಿಕ್ಕಿ ತಿಕ್ಕಿ ತೊಳೆದು ಆಕಳು ಹಾಲನ್ನು ಅಭಿಷೇಕ ಮಾಡಿ ತೆಯ್ದ ಗಂಧ ಹಚ್ಚಿ ಗಣಗಣ ಗಂಟೆ ಭಾರಿಸಿ ಕೊನೆಯದಾಗಿ ಶರೀರೆ ಜರ್ಜರೇಭೂತೆ ವ್ಯಾಧಿಗ್ರಸ್ತೆ ಕಲೇವರೆ ಔಷಧಿ ಜಾಹ್ನವಿತೋಯಂ.... ಮಂತ್ರ ಹೇಳಿ ಸುವಾಸನಾಭರಿತ ತೀರ್ಥವನ್ನು ತೆಗೆದುಕೊಂಡು ಪ್ರಸಾದ ಕಣ್ಣಿಗೊತ್ತಿಕೊಳ್ಳುವುದರಲ್ಲಿ ಏನಿದೆ..? ಇವೆಲ್ಲಾ ಮಾಡದೇ ಸಹಜವಾಗಿ ನಯವಿನಯ ಕರುಣೆ ಯನ್ನು ವ್ಯಕ್ತಪಡಿಸುತ್ತಾ ಮನೆಯವರೊಂದಿಗೆ ನಗುನಗುತ್ತಾ ನಾಲ್ಕು ಮಾತನಾಡಿ ಜನರಿಗೆ ನಮ್ಮ ಕೈಲಾದಷ್ಟು ಉಪಕಾರ ಮಾಡಬೇಕೆಂದು ತೀರ್ಮಾನಿಸುವ ಯಡವಟ್ಟು ಸ್ವಭಾವ ನನ್ನದು. ಹೀಗೆ ಉಪಕಾರ ಮಾಡಲು ಹೋಗಿ ಹಾದಿಯಮೇಲೆ... ಹೆಗಲಮೇಲೆ ಏರಿಸಿಕೊಂಡ ಕತೆಯೇ ಹಲವು. ನನ್ನ ಬಳಿ ದೇವರ ಕುರಿತಾದ ನೂರಾರು ಪ್ರಶ್ನೆಗಳಿವೆ. ದೇವರಪೂಜೆಯೇ ಜೀವನವಲ್ಲ, ಜೀವನದಲ್ಲಿ ದೇವರನ್ನು ಪೂಜಿಸಬೇಕು. ಕರ್ತವ್ಯವೇ ದೇವರು, ಗಣಪತಿಯೇ ದೇವರು ಎಂದಾಗಿದ್ದರೆ ಇದೇ ವಿಗ್ರಹವನ್ನು ಹಿಂದೂ ಧರ್ಮ ಗೊತ್ತಿಲ್ಲದ ದಕ್ಷಿಣ ಆಮೆರಿಕಾದ ವ್ಯಕ್ತಿಗೆ ತೋರಿಸಿದರೆ ಆತ ದಿಸ್ ಇಸ್ ಜಸ್ಟ್ ಲೈಕ್ ಎ ಎಲಿಫೆಂಟ್ ಅಂದುಬಿಡುತ್ತಾನೆ. ಆತ ಅಪ್ಪಿತಪ್ಪಿಯೂ ಓ ಮೈ ಗಾಡ್ ಎಂದು ಕೈಮುಗಿಯುವುದಿಲ್ಲ. ಕಾಪಾಡಪ್ಪಾ ವಿನಾಯಕ ಅನ್ನುವುದಿಲ್ಲ. ನಮ್ಮಂತಯೇ ಮನುಷ್ಯನಾದ ಮನುಷ್ಯನೇ ಹೀಗೆಂದಮೇಲೆ ನಮ್ಮ ಅಚ್ಚುಮೆಚ್ಚಿನ ಗಣಪ ಸರ್ವಾಂತರ್ಯಾಮಿಯಲ್ಲ ಎಂದಾಯಿತು. ಅಯ್ಯೋ ಅಮೆರಿಕಾದ ಕತೆ ಹಾಗಿರಲಿ ಚುಪುರು ಚುಪುರು ಗಡ್ಡದ ಪಾತ್ರೆಗೆ ಕಲಾಯಿ ಹಾಕುವ ಬುಡಾನ್ ಸಾಬಿ " ನಿಮ್ದೂಕಿ ಮೂರ್ತಿ ಪೂಜೆ ಮಾಡ್ತಾರೆ, ದೇವ್ರು ಹಂಗೆಲ್ಲಾ ಮೂರ್ತೀಲಿ ಇರ್ತಾರೆ ಅನ್ನೋದು ಸುಳ್ಳು, ನಮ್ದೂಕಿ ಅಲ್ಲಾನೇ ದೇವ್ರು" ಅಂತ ಹೇಳ್ತಾನೆ ಅಂದ್ಮೇಲೆ, ನಾವು ನಂಬಿದ ಕಾರಣಕ್ಕಾಗಿ ಆತ ದೇವರು ನಂಬದಿದ್ದರೆ ದೇವರು ಅಲ್ಲ ಅಂಬ ವಾದಕ್ಕೆ ಇಳಿಯುತ್ತೇನೆ. ಒಮ್ಮೆ ಒಬ್ಬ ಪುರೋಹಿತರ ಬಳಿ ವೃಥಾ ವಾದಕ್ಕೆ ಇಳಿದಿದ್ದೆ. ವಡೆಭಾಗದ ಮನೆಗಳಲ್ಲಿ ನಮಗೆ ಊಟಕ್ಕೆ ಆಗುವತನಕ ಕೆಲ್ಸ ಇರುವುದಿಲ್ಲ( ಇಲ್ಲಿ ನಮ್ಮ ಹಳ್ಳಿಗಳಲ್ಲಿ ಯಾವಾಗ ಕೆಲ್ಸ ಇದೆ ಅಂತ ನೀವು ಕೇಳಬಹುದು.. ಇರಲಿ ನೀವು ಹಾಗೆಲ್ಲ ತಲೆಹರಟೆ ಮಾಡುವುದಿಲ್ಲ ಅಂತ ನನಗೆ ಗೊತ್ತು) 'ಭಟ್ರೆ ಒಂದು ನೀವು ಸುಳ್ಳು ಇಲ್ಲ ವೇದ ಮಂತ್ರ ಸುಳ್ಳು". ಹೀಗೆ ಉದ್ಧಟತನದ ವಾಕ್ಯಕ್ಕೆ ಪುರೋಹಿತರು ಸ್ವಲ್ಪ ಕಂಗಾಲಾದರು. ಯಾಕೆ? ಎಂದರು. ನೋಡಿ ವೇದ ಮಂತ್ರ ಮಾತೃದೇವೋ ಭವ ಎನ್ನುತ್ತದೆ ನೀವು ಪುರೋಹಿತರುಗಳು ಮನೆಯಲ್ಲಿ ಅಮ್ಮನಿಗೆ ನಿಕ್ಕಾಲಾಣೆ ಗೌರವ ಕೊಡುವುದಿಲ್ಲ. ಹೆಂಡತಿಯ ಮಾತು ಕಟ್ಟಿಕೊಂಡು ಕುಣಿಯುತ್ತೀರಿ. ಹಾಗಂತ ವರ್ಷಾಂತದ ಮನೆಯಲ್ಲಿ ಶ್ರವಣರಾಗಿ ನಿಮ್ಮನ್ನು ಕರೆದಾಗ ಅಲ್ಲಿ ಭಾಷಣ ಮಾಡುತ್ತಾ ತಾಯಿಯನ್ನು ದೇವರಂತೆ ಕಾಣಬೇಕು ಎನ್ನುತ್ತೀರಿ. ಈಗ ಹೇಳಿ ಯಾವುದು ಸತ್ಯ. ನನ್ನ ಒಡ್ಡತನದ ಪ್ರಶ್ನೆಗೆ ಪುರೋಹಿತರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ತೋರ್ಪಡಿಸುವಂತಿಲ್ಲ. ಅವರೂ ಸ್ವತ: ಮನೆಯಲ್ಲಿ ಹಾಗೆಯೇ. ಅಂತೂ ಇಂತೂ ಅಳೆದು ಹೊಯ್ದು "ಇದಕ್ಕೆ ಇವತ್ತು ಬೇಡ ಇನ್ನೊಂದು ದಿನ ಉತ್ತರ ಕೊಡುತ್ತೇನೆ " ಎಂದರು. ನಾನು ಮರೆತೆ ಆದರೆ ಪಾಪ ಅವರು ಮರೆಯಲಿಲ್ಲ. ಮತ್ತೊಂದು ದಿನ ಒಬ್ಬರೇ ಸಿಕ್ಕಾಗ "ಅಪ್ಪಿ ವೇದ ಸುಳ್ಳಲ್ಲ ನಾವೇ ಸುಳ್ಳು. ಇತ್ತ ದರೆ ಅತ್ತ ಪುಲಿ ಹಾಗಾಗಿ ಆಚಾರ ಹೇಳಾಕೆ ಬಾನಾ ಉಣ್ಣಾಕೆ ಅಂತಾಗಿದೆ ನಮ್ಮ ಸ್ಥಿತಿ. ಪುಸ್ತಕದ ನೀತಿಯೇ ಬೇರೆ ವಾಸ್ತವ ವೇ ಬೇರೆ" ಎಂದು ಜಾರಿಕೊಂಡರು. ಇಂತಹ ಯಡವಟ್ಟು ಮಾರ್ಗವನ್ನು ಆಯ್ಕೆ ಮಾಡಿಕೊಂಡ ನಾನು ಗೊಂದಲದ ಗೂಡಾಗಿ ಹೋಗುತ್ತಾ ಇದ್ದೇನೆ ಅಂತ ಅನ್ನಿಸತೊಡಗಿತು. ಆವಾಗ ಆನಂದರಾಮ ಶಾಸ್ತ್ರಿಗಳು ಸಹಾಯಕ್ಕೆ ಬಂದರು. ಅವರು ನೂರಕ್ಕೆ ನೂರು ಯೋಗ್ಯತೆಯುಳ್ಳ ಜನ. ನಿತ್ಯ ಒಂದು ಗಂಟೆ ಅವರ ಸಹವಾಸ ಮಿಕ್ಕ ಸಮಯದಲ್ಲಿ ನಾನು ನಾನೇ....
ಆದರೆ ಅಪ್ಪಯ್ಯ ಹಾಗಲ್ಲ
ವಯಸ್ಸು ಎಂಬತ್ತು ನಿತ್ಯ ಮೂರು ತಾಸು ಪೂಜೆ ಯಾವ ಹಬ್ಬ ಹರಿದಿನ ಹೇಗೆ ಆಗಬೇಕೋ ಹಾಗೆಯೇ. ಒಂದಿಷ್ಟು ನಂಬಿಕೆಗಳು ಗಟ್ಟಿ. ಇಂದಿಗೋ ಜೀವನೋತ್ಸಾಹದ ಬುಗ್ಗೆ. ನಮ್ಮ ಪೆಜತ್ತಾಯರು ಬರೆದ ಕಾಗದದ ದೋಣಿ ಎಂಬ ಜೀವನಾನುಭವದ ಪುಸ್ತಕವನ್ನು ಮೂರೇ ದಿವಸದಲ್ಲಿ ಓದಿ ಮುಗಿಸುವ ಉತ್ಸಾಹ. ಯಾರಿಗೂ ಹೆದರಿದ ಆಸಾಮಿಯೇ ಅಲ್ಲ. ಹುಡುಕಾಟದಲ್ಲಿ ಸತ್ಯ ಸಿಕ್ಕಿದೆಯೋ ಇಲ್ಲವೋ ಎಂಬ ಗೊಂದಲ ಇಲ್ಲ ಸತ್ಯ ಸಿಕ್ಕಿದೆ, ದೇವರು ಇದ್ದಾನೆ ಎಂಬ ಮತ್ತು ಇವೆಲ್ಲಾ ಅವನದೇ ಆಟ ಎಂಬ ಅಚಲವಾದ ನಂಬಿಕೆ. ನಾನು ನಾನೇ.... (ಮುಂದುವರೆಯುತ್ತದೆ)
ಕೊನೆಯದಾಗಿ: ಶಾಸ್ತ್ರಿಗಳೇ ನಮ್ಮ ಸಿಂಧುವಿಗೆ ಗೊಂದಲ ಪುರದಿಂದ ಹೊರಗೆ ಬರಲು ದಾರಿ ತೋರಿಸಬೇಕಂತೆ ಎಂದು ಕೇಳಿದೆ. ಇದು ಆಗಾದ ಪ್ರಕೃತಿ ಒಮ್ಮೊಮ್ಮೆ ನಾವು ಏನನ್ನಾದರೂ ಸಾಧಿಸಬೇಕು ಅಂತ ಅನ್ನಿಸುತ್ತದೆ ಮತ್ತೊಮ್ಮೆ ಇಲ್ಲ ನನ್ನಿಂದ ಏನೂ ಆಗದು ಅಂತ ಅನ್ನಿಸುತ್ತದೆ. ಆದರೆ ಈ ಭೂಮಿಯ ಎಲ್ಲಾ ಜೀವಿಗಳಲ್ಲಿಯೂ ಮಾನವ ನಿರ್ಮಿತ ಜಗತ್ ಎಂಬ ವಾಕ್ಯಕ್ಕೆ ಮಹತ್ವ ಹೆಚ್ಚು. ಆದರೂ ಪ್ರಕೃತಿಯ ಕೂಸಾದ ಮಾನವ ಮರ ನೆಟ್ಟರೂ ಮರ ಕಡಿದರೂ, ಪ್ಲಾಸ್ಟಿಕ್ ಎಸೆದರೂ, ಎಸೆಯದಿದ್ದರೂ, ವಿದ್ಯುತ್ ಬಳಸಿದರೂ ಬಳಸದಿದ್ದರೂ, ಗಣಪತಿಯ ನಂಬಿದರೂ ನಂಬದಿದ್ದರೂ..ಆ ಆಗಾಧ ಶಕ್ತಿಯ ಪ್ರಕೃತಿಯ ಅಣತಿಯಂತೆಯೇ ಮಾಡಿರುವುದು ಹಾಗೂ ಮಾಡುವುದು ಅನಿವಾರ್ಯ. ಎಂದರು. ತೀರಾ ಅರ್ಥವಾಗದ ಉತ್ತರ ಅಂತ ನನಗನ್ನಿಸಿತು. ಒಮ್ಮೊಮ್ಮೆ ಹಾಗೆಯೇ ಅವರು ಎಂದು ಸುಮ್ಮನುಳಿದೆ.
ಕೆಳಗಿನ ಟಿಪ್ಸ್ ಓದಲು ಆಗದು ಎಂದರೆ ಅಷ್ಟೇ ಸಾಲನ್ನು ಸೆಲೆಕ್ಟ್ ಮಾಡಿ ಆವಾಗ ನೋಡಿ.
ಟಿಪ್ಸ್: ವಿಶಾಲ್ ಎಕ್ಸ್ ಪೋರ್ಟ್ ಎಂಬ ಪೆನ್ನಿ ಸ್ಟಾಕ್ ದರ ಕೇವಲ ಎರಡು ರೂಪಾಯಿಗಿಂತ ಕಡಿಮೆಯಂತೆ. ಇರಲಿ ಸಾವಿರ ರೂಪಾಯಿ ಹಾಕಿ ಒಂದೈನೂರು ಶೇರ್ ಕೊಳ್ಳಿ. ವರ್ಷ ಕಾಯಿರಿ ಹತ್ತು ರೂಪಾಯಿಗೆ ಹೋಯಿತಾ ನಿಮಗೆ ಬಂಪರ್ ಲಾಟರಿ ಕಂಪನಿ ಮುಳುಗಿತಾ ನೀವ್ ಲಾಟರಿಯಂತೂ ಅಲ್ಲ.

2 comments:

ವಿ.ರಾ.ಹೆ. said...

ನಾನಂತೂ ಈ ತರಹದ ಪ್ರಶ್ನೆಗಳನ್ನು ಕೇಳಿಕೊಳ್ಳುವುದನ್ನೇ ಬಿಟ್ಟು ಬಿಟ್ಟಿದ್ದೇನೆ.

Krupesh said...

Very valid questions. There is a lack of open environment to ask these kinds of questions and discuss before you get labeled. "veda sullu, athava neevu sullu" incident chennagitthu!