Friday, December 5, 2008

ಅಪೂರ್ಣ ಕಥೆ ಪೂರ್ಣಗೊಳಿಸಿ

ಮಾಯೆ

" ವೆಂಕಟರಮಣ ಹೆಗಡೆ, ಎಂಥ ಚೆಂದದ ಹೆಸರು. ಆದರೆ ಎಲ್ಲ ಕರೆಯುವುದು ವೆಂಕಣ್ಣ.ವೆಂಕಿ, ವೆಂಕಾಟಿ. ಬೊಗಸೆ ಕಂಗಳ ಚೆಂದನೆಯ ಹುಡುಗಿ ಪಟಕ್ ಅಂತ ಟೋಪನ್ ತೆಗೆದು ಬೊಕ್ಕ ತಲೆಯಲ್ಲಿ ನಿಂತರೆ ಎಂಥಹಾ ಶಾಕ್ ಆಗುತ್ತೇ ಅಲ್ಲವೆ? ಹಾಗೆ ನನಗೆ ಹೀಗೆಲ್ಲಾ ವಿಚಿತ್ರವಾಗಿ ಕರೆದಕೂಡಲೆ ಅಂತಹದ್ದೇ ಆಘಾತವಾಗುತ್ತದೆ. ಆದರೆ ತಿರುಗಿ ಅನ್ನುವಂತಿಲ್ಲ ಅನ್ನದೇ ಬಿಡುವಂತಿಲ್ಲ." ಎಂದು ವೆಂಕಟರಮಣ ಹೆಗಡೆ ಅಪ್ಪಣ್ಣಯ್ಯನ ಬಳಿ ಅಲವತ್ತುಕೊಳ್ಳುತ್ತಿದ್ದ. ಅಪ್ಪಣ್ಣಯ್ಯ ವೆಂಕನ ಮಾತುಗಳಿಗೆ ಪ್ರತ್ಯುತ್ತರ ನೀಡದೆ ತನ್ನಷ್ಟಕ್ಕೆ " ಸೊಯಕ್ ಸೊಯಕ್" ಅಂತ ಹಂಡೆಯಿಂದ ಅಡಿಕೆ ತೋಡಿ ಬುಟ್ಟಿಗೆ ಸುರುವುದರಲ್ಲಿ ಮಗ್ನನಾಗಿದ್ದ. ಹಾಗಂತ ಅಪ್ಪಣ್ಣಯ್ಯನಿಗೆ ವೆಂಕನ ಮಾತು ಕೇಳಲಿಲ್ಲ ಅಂತೇನೂ ಅಲ್ಲ ಆದರೆ ಉತ್ತರ ಕೊಡುವ ಉತ್ಸಾಹದಲ್ಲಿ ಆತ ಇರಲಿಲ್ಲ. ಮಧ್ಯಾಹ್ನ ಕೊನೆಗೌಡ ಹೇಳಿದ ಸುದ್ದಿಯಿಂದ ಅನ್ಯಮನಸ್ಕನಾಗಿದ್ದ. ಆ ಸುದ್ಧಿಯಾದರೋ ಕೊನೆಗೌಡ ಅಪ್ಪಣ್ಣಯ್ಯನ ಬಳಿ ಹೇಳಿರಲಿಲ್ಲ. ಕೊನೆ ಹಿಡಿಯುವವನ ಬಳಿ ಹೇಳುತ್ತಿದ್ದಾಗ ಅಪ್ಪಣ್ಣಯ್ಯನ ಕಿವಿಗೆ ಆ ಸುದ್ಧಿ ಬಿದ್ದಿತ್ತು. "ಹೋಯ್ ವೆಂಕ ಅಂತ ಕರಿಯೋರಿಗೆ ಎಂತ ಹೇಳಿ ಹಾಗಂತ ಕರೆಯೋದನ್ನ ತಪ್ಪಿಸಲಿ, ಒಂದು ಉಪಾಯ ಹೇಳ ಮಾರಾಯ" ಮತ್ತೆ ವೆಂಕ ಮುಂದುವರೆಸಿದ. ಬಡಪೆಟ್ಟಿಗೆ ಇವನು ಬಿಡಲೊಲ್ಲ ಎಂದೆನಿಸಿ ಸಧ್ಯ ಇವನಿಂದ ತಪ್ಪಿಸಿಕೊಂಡರೆ ಸಾಕು ಎಂಬ ಇರಾದೆಯಿಂದ
" ಅಲ್ಲ ನಿಂಗೆ ವಯಸ್ಸು ನಲವತ್ತೈದು ಆತು ಇನ್ನೂ ಮದುವೆ ಚಿಂತೆ ಮಾಡದು ಬಿಟ್ಟು ಹೆಸರಿನ ಹಿಂದೆ ಬಿದ್ದೆಯಲ್ಲ, ಅದನ್ನ ಯೋಚಿಸು" ಎಂದು ವೆಂಕನ ಬುಡಕ್ಕೆ ಇಟ್ಟ ಅಪ್ಪಣ್ಣಯ್ಯ. ವೆಂಕನ ಕೊರೆತ ತಪ್ಪಿಸಿಕೊಳ್ಳಲು ಊರಲ್ಲಿ ಎಲ್ಲರೂ ಅನುಸರಿಸುತ್ತಿದ್ದ ಸುಲಭೋಪಾಯವನ್ನು ಅಪ್ಪಣ್ಣಯ್ಯ ಅನುಸರಿಸಿದ. ಮದುವೆ ವಿಷಯ ಬಂದ ತಕ್ಷಣ ದುರ್ದಾನ ತೆಗೆದುಕೊಂಡವರಂತೆ ಮಾಯವಾಗುತ್ತಿದ್ದ ವೆಂಕ ಇಂದು ಹಾಗೆ ಹೋಗಲಿಲ್ಲ." ಆಯ್ತು ಮದುವೆ ಆಗ್ತೇನೆ ಹೆಣ್ಣು ಹುಡುಕಿ ಕೊಡು, ಅತವಾ ನಾ ಕಂಡ ಹೆಣ್ಣಿನೊಡನೆ ಮದುವೆಯಾಗಲು ಸಹಾಯಮಾಡು" ಎಂದು ಹೇಳಿದ. ಅಪ್ಪಣ್ಣಯ್ಯನಿಗೆ ವೆಂಕಣ್ಣನ ವರ್ತನೆ ಅನಿರೀಕ್ಷಿತ. ಹಳ್ಳಿಯಲ್ಲಿದ್ದ ವಯಸ್ಸು ಚಿಮ್ಮೋ ಹುಡುಗರಿಗೆ ಮದುವೆ ಇಲ್ಲ ಇನ್ನು ನಲವತ್ತೈದರ ಗಡಿ ದಾಟಿದ ಇವನಿಗೆ ಎಲ್ಲಿಂದ ಹೆಣ್ಣುತರುವುದು ಅಂತ ಅಪ್ಪಣ್ಣಯ್ಯನಿಗೆ ಮನಸ್ಸಿನಲ್ಲಿಯೇ ಅನ್ನಿಸಿದರೂ ತಾನು ಯಾವುದೋ ಒಂದು ಹೆಣ್ಣ ಕಂಡಿದ್ದೇನೆ ಅಂತಾನಲ್ಲ ಅದು ಯಾರಿರಬಹುದು ಎಂಬ ಕುತೂಹಲ ಹುಟ್ಟಿತು. "ನೀ ಕಂಡ ಹೆಣ್ಣು ಯಾರ?" ಎಂಬ ಅಪ್ಪಣ್ನಯ್ಯನ ಪ್ರಶ್ನೆಗೆ "ನಾಳೆ ಹೇಳ್ತೇನೆ" ಎಂದು ಉತ್ತರಿಸಿ ವೆಂಕಟರಮಣ ಹೊರಟು ಹೋದ. ಆತ ಅತ್ತ ಹೋಗುತ್ತಿದ್ದಂತೆ ಅಪ್ಪಣ್ಣಯ್ಯನ ಮನಸ್ಸು ಮತ್ತೆ ಕೊನೆಗೌಡನ ಮಾತುಗಳನ್ನು ಮೆಲಕುಹಾಕತೊಡಗಿತು.
"ಹೋಯ್ ತಿಮ್ಮ ಒಂದು ವಿಷ್ಯ ಗೊತ್ತೈತನಾ ನಿಂಗೆ?"
"ಎಂತ್ರಾ ನೀವು ಕೊನೆ ಕೊಯ್ತಾ ಊರು ತಿರುಗೋರು ವಿಷಯ ನನಗೆಂತ ತಿಳಿತದೆ?"
"ಅದೇ ಬಾಗೀರಥಮ್ಮನ ಕಥೆಯಾ"
"ಯಂತು ಅಂತ ಬಿಡಿಸಿ"
"ಅವ್ರ ಗಂಡ ಹೋದ್ವರ್ಷೋದ್ರಲಾ. ಅದು ಸಹಜವಾಗಿ ಹೋಗಿದ್ದಲ್ಲಂತೆ ಬಾಗಿರಥಮ್ಮ ಮತ್ತೊಬ್ಬರ ಜತೆ ಸೇರಿಕೊಂಡು ಅವ್ರನ್ನ ಕೊಲೆ ಮಾಡಿದ್ದಂತೆ ಮಾರಾಯ"
" ಅದು ಹ್ಯಾಂಗೆ ನಿಮಗೆ ಗೊತ್ತಾತು?" ಮತ್ತೊಬ್ಬರು ಯಾರು?
"ಅದೆಲ್ಲಾ ನಿಂಗೆ ಬ್ಯಾಡ, ಸುದ್ಧಿಯಂತೂ ಸುಳ್ಳಲ್ಲ ನೋಡು ಸಧ್ಯ ವಿಷ್ಯ ಹೊರಗೆ ಬರ್ತದೆ. ಯಾರು ಅಂತ ಪೋಲೀಸರು ಬಂದು ಪಪ್ಪ ಹಾಕಿಕೊಂಡು ಹೋದ್ಮೇಲೆ ಗೊತ್ತಾಕ್ತದೆ"
ಅಪ್ಪಣ್ಣಯ್ಯನಿಗೆ ಮುಂದಿನ ವಿಚಾರ ಕೇಳಲು ಅಲ್ಲಿ ನಿಲ್ಲಲಾಗಲಿಲ್ಲ. ಕೊನೆಗೌಡ ಬೇಕಂತಲೇ ಆ ಸುದ್ಧಿ ಹೇಳಿದ್ದನಾ ಎಂಬ ಅನುಮಾನ ಕಾಡತೊಡಗಿತು. ಹೊಟ್ಟೆಯೊಳಗಿನಿಂದ ತರತರ ನಡುಗಿದಂತಾಗಿ ಮನೆಸೇರಿದ ಅಪ್ಪಣ್ಣಯ್ಯ. ಆ ಸುದ್ಧಿ ಕೇಳಿದಲ್ಲಿಂದ ಅಪ್ಪಣ್ಣಯ್ಯ ಮನುಷ್ಯನಾಗಿರಲಿಲ್ಲ. ಮಾಡುವ ಕೆಲಸಗಳೆಲ್ಲ ತನ್ನಷ್ಟಕ್ಕೆ ನಡೆಯುತ್ತಿತ್ತೇನೋ ಎಂಬಂತಿತ್ತು. ಈಗ ವೆಂಕಣ್ಣ ಬಂದು ಮದುವೆಯ ವಿಷಯ ಮುಗುಮ್ಮಾಗಿ ಹೇಳಿದಾಗ ವೆಂಕಣ್ಣ ಕಂಡ ಹುಡುಗಿ ಇವಳೇ ಇರಬಹುದಾ? ಎಂಬ ಅನುಮಾನ ಕಾಡತೊಡಗಿ ಇನ್ನಷ್ಟು ಅಧೀರನಾದ.
***
ಭಾಗೀರಥಿ ಮೂವತ್ತರ ಹರೆಯದ ಚೆಲುವೆ. ಅವಳನ್ನು ಈ ಹಳ್ಳಿಗಮಾರನಿಗೆ ಮದುವೆ ಮಾಡಿಕೊಟ್ಟದ್ದು ಆಕೆಯ ಗ್ರಹಚಾರ ಅಂತ ಊರಿನ ಹಲವಾರು ಗಂಡಸರ ಅಭಿಪ್ರಾಯ. ಅರ್ದ ಎಕರೆ ಅಡಿಕೆ ತೊಟ ಮಣ್ಣಿನಮನೆ ಬಾಯಿತುಂಬಾ ಕವಳ ಗುಜ್ಜುತ್ತಿದ್ದ ಸಾಂಬು ಅವಳ ಗಂಡನಾಗಲು ಅನರ್ಹ ಎಂದು ಊರವರು ತೀರ್ಮಾನಿಸಿದ್ದರು. ಆದರೆ ಭಾಗೀರಥಿ ಪಾಲಿಗೆ ಬಂದದ್ದು ಪಂಚಾಮೃತ ಎಂಬ ತತ್ವಕ್ಕೆ ಇಳಿದು ಚೆಂದವಾಗಿ ಪುಟ್ಟ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು. ಪ್ರೀತಿ ಪ್ರೇಮ ಅಮಾಯಕತೆ ಬಡತನವನ್ನೂ ನುಂಗಿ ಹಾಕಬಲ್ಲದು ಎಂಬ ತತ್ವ ಅವಳದ್ದು. ಆದರೆ ವಿಧಿಗೆ ಅದು ಇಷ್ಟವಿರಲಿಲ್ಲ. ಮದುವೆಯಾಗಿ ಗಂಡನಮನೆ ಸೇರಿದ ಒಂದು ವರ್ಷದಲ್ಲಿ ಸಾಂಬು ಇಹಲೋಕ ತ್ಯಜಿಸಿದ್ದ. ರಾತ್ರಿ ಮಲಗಿದ್ದವನು ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತ ಎಂದರು, ರಾತ್ರಿ ಮಣ್ಣಿನಗೋಡೆಯಿಂದ ಒಳಗೆ ಬಂದು ಸರ್ಪ ಕಚ್ಚಿದೆ ಎಂದರು ಕೆಲವರು ಅವನು ಮೊದಲಿನಿಂದಲೂ ಅನಾರೋಗ್ಯವಂತ ಎಂದರು ಹಲವರು. ಒಟ್ಟಾರೆ ಫಲಿತಾಂಶ ಭಾಗೀರಥಿಯ ಸುತ್ತ ಸುತ್ತುತ್ತಿತ್ತು. ಅಪ್ಪಣ್ಣಯ್ಯ ಭಾಗೀರಥಿಯ ದೂರದನೆಂಟನಾದ್ದರಿಂದ ಸಾಂಬುವಿಗೆ ಕೊಟ್ಟು ಮದುವೆಯಾದನಂತರ ಅಲ್ಲಿನ ಬಳಕೆ ಅಪ್ಪಣ್ಣಯ್ಯನಿಗೆ ಹೆಚ್ಚಿತ್ತು. ತೋಟಕ್ಕೆ ಹೋದಾಗಲೆಲ್ಲ ದಿನಕ್ಕೊಮ್ಮೆ ಸಾಂಬುವಿನ ಮನೆಗೆ ಹೋಗಿ ಕುಶಲ ವಿಚಾರಿಸಿ ಬರುವುದು ಅಪ್ಪಣ್ಣಯ್ಯನಿಗೆ ವಾಡಿಕೆಯಾಗಿತ್ತು ತಾಯಿಯ ವ ರೆಸೆ ಎಂದು ಭಾಗೀರಥಿ ಅಪ್ಪಣ್ನಯ್ಯನಿಗೆ ತುಸು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಳು. ಅಪ್ಪಣ್ಣಯ್ಯನಿಗೂ ಅದೇನೋ ಒಂಥರಾ ಕಾಳಜಿ. ಏನಾದರೂ ಒಂದು ನೆಪಮಾಡಿಕೊಂಡು ಸಾಂಬುವಿನ ಮನೆಗೆ ಹೋಗಿ ಬರುತ್ತಿದ್ದ. ಅಂತಹ ಒಂದು ದಿನದಲ್ಲಿ ಸಾಂಬು ಇಹಲೋಕ ತ್ಯಜಿಸಿದ. ಆನಂತರವೂ ಅಪ್ಪಣ್ಣಯ್ಯ ಭಾಗೀರಥಿ ಮನೆಯ ಆಸ್ಥೆಯನ್ನು ಮುಂದುವರೆಸಿದ್ದ. ಭಾಗೀರಥಿಯ ವೈಧವ್ಯಕ್ಕೆ ಮರುಗುತ್ತಿದ್ದ. ಆದರೆ ಈಗ ಕೊನೆಗೌಡನ ಬಾಯಲ್ಲಿ ಇಂತಹ ವಿಷಯಗಳು ಕೇಳಿಬಂದಮೇಲೆ ತಾನು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೆಯೇ ಇದಕ್ಕೊಂದು ಮಂಗಳ ಹಾಡಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿರಬೇಕೆಂಬ ತೀರ್ಮಾನಕ್ಕೆ ಬಂದ.
***
ಪ್ರಿಯ ಓದುಗರೆ ಕಥೆಯಂತಿರುವ ಈ ಕಥೆ ಇನ್ನೂ ಮುಕ್ತಾಯವಾಗಿಲ್ಲ. ಇದರ ಮುಕ್ತಾಯ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾಮೆಂಟ್ ನ ಜಾಗದಲ್ಲಿ ಕಥೆಗೊಂದು ಮುಕ್ತಾಯ ಕೊಡಿ ಉತ್ತಮ ಮುಕ್ತಾಯಕ್ಕೆ ಪುಸ್ತಕರೂಪದ ಬಹುಮಾನ ಗೆಲ್ಲಿ. ಹಾ ಮರೆಯಬೇಡಿ ಮುಕ್ತಾಯದ ಕೊನೆಯಲ್ಲಿ ನಿಮ್ಮ ಈ ಮೈಲ್ ವಿಳಾಸ ದಾಖಲಿಸಿ.

ಕತೆ ಮುಕ್ತಾಯಗೊಳಿಸಿದ ಪ್ರಜಾವಾಣಿ, ಮೂರ್ತಿ ಹಾಗೂ ಹರೀಶ್ ಗೆ ಧನ್ಯವಾದಗಳು. ಹರೀಶ ಮುಕ್ತಾಯವನ್ನು ಆಯ್ದುಕೊಳ್ಳಲಾಗಿದೆ.(ತೀರ್ಪುಗಾರರು: ವೇಣುಮಾಧವ)

ಬೆಳಿಗ್ಗೆಯಿಂದ ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತ ಮಲಗಿದ ಅಪ್ಪಣ್ಣಯ್ಯನಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಕೊನೆ ಗೌಡ ಹೇಳಿದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.***ಮರುದಿನ ಬೆಳಿಗ್ಗೆ ದೇವರ ಪೂಜೆ ಮುಗಿಸಿ ತೋಟಕ್ಕೆ ಹೊರಡುವ ಹೊತ್ತಿಗೆ ಸರಿಯಾಗಿ ವೆಂಕಣ್ಣ ಬಂದ. ಏನೂ ತಿಳಿಯದಂತೆ ನಟಿಸುತ್ತ ಅಪ್ಪಣ್ಣಯ್ಯ ವೆಂಕಣ್ಣನನ್ನು ಮಾತನಾಡಿಸಿದ: "ಈ ವರ್ಷ ಫಸಲು ಕಮ್ಮಿ ವೆಂಕಣ್ಣ". ವೆಂಕಣ್ಣ ಮತ್ತೆ ಹಳೇ ರಾಗ ತೆಗೆದ: "ನನ್ನ ಪೂರ್ತಿ ಹೆಸರು ವೆಂಕಟರಮಣ". ತಟಕ್ಕನೆ ಸರಿಯಾದ ಸಂದರ್ಭ ಎಂದು ಅಪ್ಪಣ್ಣಯ್ಯ ಅರಿತ."ಆಯ್ತು, ವೆಂಕಟರಮಣ. ಅಲ್ದೋ ವೆಂಕಟರಮಣ, ನಿನ್ನೆ ಯಾವ್ದೋ ಹೆಣ್ಣು ನೋಡಿದ್ದೀನಿ ಅಂದಿದ್ಯಲ್ಲ ಯಾರೋ ಅವಳು" ಎಂದು ಕೇಳಿದ. "ಓಹ್ ಅದಾ.. ನೀವು ಸಹಾಯ ಮಾಡ್ತೀರಿ ಅನ್ನೋದಾದ್ರೆ ಹೇಳ್ತೀನಿ""ಯಾರು ಅಂತಾನೇ ತಿಳೀದೇ ಹೇಗ್ ಹೇಳ್ಲಿ.. ಆದ್ರೂ ನನ್ ಕೈಲಿ ಆದ್ ಸಹಾಯ ಮಾಡ್ತೀನಿ, ಅದ್ಯಾರು ಹೇಳು""ಯಾರೂ ಅಲ್ಲ ನಿಮಗ್ಗೊತ್ತಿರೋಳೆಯ""ಯಾರೋ ಅದು? ಭಾಗೀರಥಿಯ?" ಬಾಯ್ತಪ್ಪಿ ಭಾಗೀರಥಿಯ ಹೆಸರು ಅಪ್ಪಣ್ಣಯ್ಯನ ಬಾಯಿಂದ ಹೊರಬಿದ್ದಿತ್ತು. ತನ್ನ ಅಜ್ಞಾನಕ್ಕೆ ತನ್ನನ್ನೇ ಹಳಿದುಕೊಂಡ ಅಪ್ಪಣ್ಣಯ್ಯ. ಆದರೆ ಅಪ್ಪಣ್ಣಯ್ಯನನ್ನು ಗಮನಿಸದ ವೆಂಕಣ್ಣ "ಅಯ್ಯೊ ಅವ್ಳಲ್ರಾ.. ತುದೀ ಮನೆ ವಿಶಾಲೂ..." ಎಂದ ತುಸು ನಾಚುತ್ತ. "ಅವಳಿಗೆ ವಯಸ್ಸು ಮೂವತ್ತೈದು ದಾಟ್ತಾ ಬಂತು... ನೀವೇನಾದ್ರೂ ಹೇಳಿರೆ ಆಗ್ಬಹುದೇನೋ".ವಿಶಾಲಾಕ್ಷಿಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ದಿನ ಮದುವೆ ಗಂಡಿಗೆ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದ. ಅದಾದ ಮೇಲೆ ಅಪಶಕುನ ಎಂದು ಯಾರೂ ಮದುವೆಯಾಗಲು ಮುಂದೆ ಬಂದಿರಲಿಲ್ಲ. ಗಂಡು ಹುಡುಕಿ ಹುಡುಕಿ ಸಾಕಾದ ಮೇಲೆ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಅಪ್ಪಣ್ಣಯ್ಯ ಈಗ ಇಬ್ಬಂದಿಯಲ್ಲಿ ಸಿಲುಕಿದ್ದ. "ಸರಿ ವೆಂಕಟರಮಣ, ಹಾಗಾದ್ರೆ ಯೋಚನೆ ಮಾಡ್ತೇನೆ" ಎಂದು ಅಪ್ಪಣ್ಣಯ್ಯ ತೋಟಕ್ಕೆ ಹೋದ.***ಮಧ್ಯಾಹ್ನದ ಹೊತ್ತಿಗೆ ಕೊನೆಗೌಡ ಹೇಳಿದಂತೆ ಭಾಗೀರಥಿಯ ಮನೆಗೆ ಪೊಲೀಸರಿಬ್ಬರು ಬಂದಿದ್ದರು. ಆಕೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಲು ಬಂದಿದ್ದರು. ಎರಡು ದಿನ ವಿಚಾರಣೆಯ ನಂತರ ನಿಜಾಂಶ ಹೊರಬಿತ್ತು. ಅಪ್ಪಣ್ಣಯ್ಯ ತಲ್ಲಣಿಸಿದ್ದ.***ಒಂದು ವರ್ಷ ಚೆನ್ನಾಗಿದ್ದ ಭಾಗೀರಥಿಯ ಸಂಸಾರದಲ್ಲಿ ವೆಂಕಣ್ಣ ಬಂದಿದ್ದ. ತನ್ನ ಗಂಡ ಸಾಂಬುವಿಗಿಂತ ನೋಡಲು ಸುಂದರನಾಗಿದ್ದ, ಬುದ್ಧಿವಂತನಾಗಿದ್ದ ವೆಂಕಣ್ಣನ ಕಡೆಗೆ ಭಾಗೀರಥಿ ಸಹಜವಾಗಿಯೇ ಆಕರ್ಷಿತಳಾಗಿದ್ದಳು. ವೆಂಕಣ್ಣನ ಮನಸ್ಸಿನಲ್ಲೂ ಆಕೆಯ ಬಗ್ಗೆ ಆಕರ್ಷಣೆ ಇತ್ತು. ಆದರೆ ಸಾಂಬು ಇದನ್ನೂ ಗಮನಿಸದಷ್ಟು ಮುಗ್ಧನಾಗಿದ್ದ. ಒಂದು ದಿನ ಭಾಗೀರಥಿ-ವೆಂಕಣ್ಣ ಸೇರಿ ಸಾಂಬುವನ್ನು ಹೇಗಾದರೂ ತಮ್ಮಿಬ್ಬರ ಮಧ್ಯದಿಂದ ಸರಿಸಬೇಕೆಂದು ನಿರ್ಧರಿಸಿದರು. ಆ ದುರ್ದಿನದಂದು ರಾತ್ರಿ ಮಲಗುವಾಗ ಭಾಗೀರಥಿ ಸಾಂಬುವಿಗೆ ಸ್ವಲ್ಪ ನಿದ್ದೆ ಗುಳಿಗೆ ಬೆರೆಸಿದ ಹಾಲು ಕೊಟ್ಟು ಮಲಗಿಸಿದಳು. ಆದರೆ ನಿದ್ದೆ ಗುಳಿಗೆಯಿಂದ ಕೊಂದರೆ ಅನುಮಾನ ಬರಬಹುದೆಂದು ಹಾವು ಕಚ್ಚಿ ಸತ್ತನೆಂಬಂತೆ ಮಾಡಿದ್ದರು. ಅದರಂತೆ ಹಾವು ಹಿಡಿಯುವುದು ಗೊತ್ತಿದ್ದ ವೆಂಕಣ್ಣ ಒಂದು ವಿಷದ ಹಾವನ್ನು ಹಿಡಿದು ರಾತ್ರಿ ಸಾಂಬುವಿನ ಮೈ ಮೇಲೆ ಬಿಟ್ಟಿದ್ದ. ಗಾಢ ನಿದ್ದೆಯಲ್ಲಿದ್ದ ಸಾಂಬುವಿಗೆ ಹಾವು ಬಿಟ್ಟಿದ್ದೂ ಗೊತ್ತಾಗಲಿಲ್ಲ, ಕಚ್ಚಿದ್ದೂ ಗೊತ್ತಾಗಲಿಲ್ಲ. ಬೆಳಗಾಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ. ಅದಾಗಿ ಸ್ವಲ್ಪ ದಿನದ ನಂತರ ಏನೋ ಜಗಳವಾಗಿ ವೆಂಕಣ್ಣ-ಭಾಗೀರಥಿ ದೂರವಾಗಿದ್ದರು.***ತನ್ನೊಂದಿಗೆ ಅಷ್ಟೊಂದು ಸಲಿಗೆಯಿಂದಿರುತ್ತಿದ್ದ ಭಾಗೀರಥಿ ಬಾಯ್ಬಿಟ್ಟ ವಿಷಯ ಮಾತ್ರ ಅಪ್ಪಣ್ಣಯ್ಯನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಜೊತೆ ಅಷ್ಟು ಸಲೀಸಾಗಿ ಹರಟುತ್ತಿದ್ದ ವೆಂಕಣ್ಣನೂ ಇದರಲ್ಲಿ ಶಾಮೀಲಾಗಿದ್ದನ್ನು ನಂಬಲಾಗಲಿಲ್ಲ.









3 comments:

prajavani said...

ಅಪ್ಪಣ್ಣಯ್ಯನ ಮನದಲ್ಲಿ ನಿರ್ಧಾರ ಗಟ್ಟಿಯಾಗಿತ್ತು. ಭಾಗೀರತಿಯ ಮನೆಗೆ ತೆರಳಿ " ನೋಡು ಹೀಗೆ ನೀನು ಒಂಟಿಯಾಗಿ ಬದುಕಿದರೆ ಸಮಾಜ ನಿತ್ಯ ಒಂದೊಂದು ಕತೆ ಕಟ್ಟುತ್ತದೆ ಹಾಗಾಗಿ ವೆಂಕಣ್ಣನನ್ನು ಮದುವೆಯಾಗು, ಅಲ್ಲಿಂದಾಚೆಗೆ ಗಾಳಿಸುದ್ದಿಗೂ ಕಡಿವಾಣ ಬೀಳುತ್ತದೆ "ಎಂದು ಹೇಳಿದ.
ಭಾಗೀರತಿ ಒಪ್ಪಿದಳು. ವೆಂಕಣ್ಣನೊಡನೆ ಭಾಗೀರತಿಯ ವಿವಾಹ ನೆರವೇರಿತು. ನಂತರ ದಿನಗಳಲ್ಲಿ ಭಾಗೀರತಿಯ ಮನೆಗೆ ಅಪ್ಪಣ್ಣಯ್ಯನ ಭೇಟಿ ನಿರಂತರವಾಗಿ ಮುಂದುವರೆದಿತ್ತು...!.
prajavani.kannada@gmail.com

Harisha - ಹರೀಶ said...

ಬೆಳಿಗ್ಗೆಯಿಂದ ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತ ಮಲಗಿದ ಅಪ್ಪಣ್ಣಯ್ಯನಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಕೊನೆ ಗೌಡ ಹೇಳಿದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.

***

ಮರುದಿನ ಬೆಳಿಗ್ಗೆ ದೇವರ ಪೂಜೆ ಮುಗಿಸಿ ತೋಟಕ್ಕೆ ಹೊರಡುವ ಹೊತ್ತಿಗೆ ಸರಿಯಾಗಿ ವೆಂಕಣ್ಣ ಬಂದ. ಏನೂ ತಿಳಿಯದಂತೆ ನಟಿಸುತ್ತ ಅಪ್ಪಣ್ಣಯ್ಯ ವೆಂಕಣ್ಣನನ್ನು ಮಾತನಾಡಿಸಿದ: "ಈ ವರ್ಷ ಫಸಲು ಕಮ್ಮಿ ವೆಂಕಣ್ಣ". ವೆಂಕಣ್ಣ ಮತ್ತೆ ಹಳೇ ರಾಗ ತೆಗೆದ: "ನನ್ನ ಪೂರ್ತಿ ಹೆಸರು ವೆಂಕಟರಮಣ". ತಟಕ್ಕನೆ ಸರಿಯಾದ ಸಂದರ್ಭ ಎಂದು ಅಪ್ಪಣ್ಣಯ್ಯ ಅರಿತ.

"ಆಯ್ತು, ವೆಂಕಟರಮಣ. ಅಲ್ದೋ ವೆಂಕಟರಮಣ, ನಿನ್ನೆ ಯಾವ್ದೋ ಹೆಣ್ಣು ನೋಡಿದ್ದೀನಿ ಅಂದಿದ್ಯಲ್ಲ ಯಾರೋ ಅವಳು" ಎಂದು ಕೇಳಿದ.
"ಓಹ್ ಅದಾ.. ನೀವು ಸಹಾಯ ಮಾಡ್ತೀರಿ ಅನ್ನೋದಾದ್ರೆ ಹೇಳ್ತೀನಿ"
"ಯಾರು ಅಂತಾನೇ ತಿಳೀದೇ ಹೇಗ್ ಹೇಳ್ಲಿ.. ಆದ್ರೂ ನನ್ ಕೈಲಿ ಆದ್ ಸಹಾಯ ಮಾಡ್ತೀನಿ, ಅದ್ಯಾರು ಹೇಳು"
"ಯಾರೂ ಅಲ್ಲ ನಿಮಗ್ಗೊತ್ತಿರೋಳೆಯ"
"ಯಾರೋ ಅದು? ಭಾಗೀರಥಿಯ?"

ಬಾಯ್ತಪ್ಪಿ ಭಾಗೀರಥಿಯ ಹೆಸರು ಅಪ್ಪಣ್ಣಯ್ಯನ ಬಾಯಿಂದ ಹೊರಬಿದ್ದಿತ್ತು. ತನ್ನ ಅಜ್ಞಾನಕ್ಕೆ ತನ್ನನ್ನೇ ಹಳಿದುಕೊಂಡ ಅಪ್ಪಣ್ಣಯ್ಯ. ಆದರೆ ಅಪ್ಪಣ್ಣಯ್ಯನನ್ನು ಗಮನಿಸದ ವೆಂಕಣ್ಣ "ಅಯ್ಯೊ ಅವ್ಳಲ್ರಾ.. ತುದೀ ಮನೆ ವಿಶಾಲೂ..." ಎಂದ ತುಸು ನಾಚುತ್ತ. "ಅವಳಿಗೆ ವಯಸ್ಸು ಮೂವತ್ತೈದು ದಾಟ್ತಾ ಬಂತು... ನೀವೇನಾದ್ರೂ ಹೇಳಿರೆ ಆಗ್ಬಹುದೇನೋ".

ವಿಶಾಲಾಕ್ಷಿಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ದಿನ ಮದುವೆ ಗಂಡಿಗೆ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದ. ಅದಾದ ಮೇಲೆ ಅಪಶಕುನ ಎಂದು ಯಾರೂ ಮದುವೆಯಾಗಲು ಮುಂದೆ ಬಂದಿರಲಿಲ್ಲ. ಗಂಡು ಹುಡುಕಿ ಹುಡುಕಿ ಸಾಕಾದ ಮೇಲೆ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಅಪ್ಪಣ್ಣಯ್ಯ ಈಗ ಇಬ್ಬಂದಿಯಲ್ಲಿ ಸಿಲುಕಿದ್ದ. "ಸರಿ ವೆಂಕಟರಮಣ, ಹಾಗಾದ್ರೆ ಯೋಚನೆ ಮಾಡ್ತೇನೆ" ಎಂದು ಅಪ್ಪಣ್ಣಯ್ಯ ತೋಟಕ್ಕೆ ಹೋದ.

***

ಮಧ್ಯಾಹ್ನದ ಹೊತ್ತಿಗೆ ಕೊನೆಗೌಡ ಹೇಳಿದಂತೆ ಭಾಗೀರಥಿಯ ಮನೆಗೆ ಪೊಲೀಸರಿಬ್ಬರು ಬಂದಿದ್ದರು. ಆಕೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಲು ಬಂದಿದ್ದರು. ಎರಡು ದಿನ ವಿಚಾರಣೆಯ ನಂತರ ನಿಜಾಂಶ ಹೊರಬಿತ್ತು. ಅಪ್ಪಣ್ಣಯ್ಯ ತಲ್ಲಣಿಸಿದ್ದ.

***

ಒಂದು ವರ್ಷ ಚೆನ್ನಾಗಿದ್ದ ಭಾಗೀರಥಿಯ ಸಂಸಾರದಲ್ಲಿ ವೆಂಕಣ್ಣ ಬಂದಿದ್ದ. ತನ್ನ ಗಂಡ ಸಾಂಬುವಿಗಿಂತ ನೋಡಲು ಸುಂದರನಾಗಿದ್ದ, ಬುದ್ಧಿವಂತನಾಗಿದ್ದ ವೆಂಕಣ್ಣನ ಕಡೆಗೆ ಭಾಗೀರಥಿ ಸಹಜವಾಗಿಯೇ ಆಕರ್ಷಿತಳಾಗಿದ್ದಳು. ವೆಂಕಣ್ಣನ ಮನಸ್ಸಿನಲ್ಲೂ ಆಕೆಯ ಬಗ್ಗೆ ಆಕರ್ಷಣೆ ಇತ್ತು. ಆದರೆ ಸಾಂಬು ಇದನ್ನೂ ಗಮನಿಸದಷ್ಟು ಮುಗ್ಧನಾಗಿದ್ದ. ಒಂದು ದಿನ ಭಾಗೀರಥಿ-ವೆಂಕಣ್ಣ ಸೇರಿ ಸಾಂಬುವನ್ನು ಹೇಗಾದರೂ ತಮ್ಮಿಬ್ಬರ ಮಧ್ಯದಿಂದ ಸರಿಸಬೇಕೆಂದು ನಿರ್ಧರಿಸಿದರು. ಆ ದುರ್ದಿನದಂದು ರಾತ್ರಿ ಮಲಗುವಾಗ ಭಾಗೀರಥಿ ಸಾಂಬುವಿಗೆ ಸ್ವಲ್ಪ ನಿದ್ದೆ ಗುಳಿಗೆ ಬೆರೆಸಿದ ಹಾಲು ಕೊಟ್ಟು ಮಲಗಿಸಿದಳು. ಆದರೆ ನಿದ್ದೆ ಗುಳಿಗೆಯಿಂದ ಕೊಂದರೆ ಅನುಮಾನ ಬರಬಹುದೆಂದು ಹಾವು ಕಚ್ಚಿ ಸತ್ತನೆಂಬಂತೆ ಮಾಡಿದ್ದರು. ಅದರಂತೆ ಹಾವು ಹಿಡಿಯುವುದು ಗೊತ್ತಿದ್ದ ವೆಂಕಣ್ಣ ಒಂದು ವಿಷದ ಹಾವನ್ನು ಹಿಡಿದು ರಾತ್ರಿ ಸಾಂಬುವಿನ ಮೈ ಮೇಲೆ ಬಿಟ್ಟಿದ್ದ. ಗಾಢ ನಿದ್ದೆಯಲ್ಲಿದ್ದ ಸಾಂಬುವಿಗೆ ಹಾವು ಬಿಟ್ಟಿದ್ದೂ ಗೊತ್ತಾಗಲಿಲ್ಲ, ಕಚ್ಚಿದ್ದೂ ಗೊತ್ತಾಗಲಿಲ್ಲ. ಬೆಳಗಾಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ. ಅದಾಗಿ ಸ್ವಲ್ಪ ದಿನದ ನಂತರ ಏನೋ ಜಗಳವಾಗಿ ವೆಂಕಣ್ಣ-ಭಾಗೀರಥಿ ದೂರವಾಗಿದ್ದರು.

***

ತನ್ನೊಂದಿಗೆ ಅಷ್ಟೊಂದು ಸಲಿಗೆಯಿಂದಿರುತ್ತಿದ್ದ ಭಾಗೀರಥಿ ಬಾಯ್ಬಿಟ್ಟ ವಿಷಯ ಮಾತ್ರ ಅಪ್ಪಣ್ಣಯ್ಯನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಜೊತೆ ಅಷ್ಟು ಸಲೀಸಾಗಿ ಹರಟುತ್ತಿದ್ದ ವೆಂಕಣ್ಣನೂ ಇದರಲ್ಲಿ ಶಾಮೀಲಾಗಿದ್ದನ್ನು ನಂಬಲಾಗಲಿಲ್ಲ.

ಮೂರ್ತಿ ಹೊಸಬಾಳೆ. said...

ಕೊನೆಗೌಡ ಹೇಳಿದ ಮಾತುಗಳು,ಅಡಿಕೆ ಒಲೆಯ ಧಗೆ, ಸಾಗರ ತಂಬಾಕಿನ ಕವಳದ ಸೊಕ್ಕು, ಎಲ್ಲ ಸೇರಿ ಅಪ್ಪಯ್ಯಣ್ಣನ ಮೈ ಬೆವೆತು ಹೋಯಿತು.ಅಷ್ಟರಲ್ಲಿ ಪಕ್ಕದ ಮನೆ ಪ್ರಭಾವತಿ ಅಪ್ಪಯ್ಯಣ್ನನ ಹೆಂಡತಿಯ ಬಳಿ ಸಕ್ಕರೆ ಕಡ ಕೊಳ್ಳಲು ಬಂದವಳು ಮಾತಿನ ಭರದಲ್ಲಿ "ಶಾನುಬೋಗರ ಮನೆಗೆ ಇವತ್ತು ಇಬ್ರು ಪೋಲೀಸ್ ನವ್ರು ಬೈಂದ್ವಡ ಎಂತಕ್ಕೆ ಗೊತ್ತಾತನೆ?" ಎಂಬ ಕುತೂಹಲದ ಪ್ರಶ್ನೆ ಇತ್ತು ಮನೆ ಕಡೆಗೆ ಹೊರಟಳು.ಅದನ್ನು ಕೇಳಿದ ಅಪ್ಪಯ್ಯಣ್ಣ ಕಣ್ಣು ಕತ್ತಲೆ ಕಟ್ಟೀದಂತಾಗಿ ಕೆಳಗೆ ಬಿದ್ದವ ಮೇಲೇಳಲೇ ಇಲ್ಲ. ಮನೆಯವರೆಲ್ಲ ಬಂದು ನೋಡುವಷ್ಟರ ಹೊತ್ತಿಗೆ ಅವನ ಕೈಕಾಲು ತಣ್ಣಗಾಗಿದ್ದವು.ಒಟ್ಟಿನಲ್ಲಿ ಅಪ್ಪಯ್ಯಣ್ಣ ನ ಗ್ರಹಚಾರಕ್ಕೆ ಅಸೆ ಪಟ್ಟ ಭಾಗೀರತಿಯೂ ದಕ್ಕಲಿಲ್ಲ,ಕೊನೆ ಕ್ಷನದಲ್ಲಿ ಮನೆಯವರು ಬಾಯಿಗೆಬಿಟ್ಟ ಭಾಗೀರಥಿಯೂ ಗಂಟಲಲ್ಲಿ ಇಳಿಯಲಿಲ್ಲ.