Monday, March 16, 2009

"ಎಲ್ಲಾರು ಮಾಡುವುದು.....!" (???????)

. ಮಗದೂರು ಈಶ್ವರ ದೇವಸ್ಥಾನದ ಗಂಟೆಯ ಶಬ್ದ ಇಂಪಾಗಿ ಡಣ್...ಡಣ್...ಡಣ್ ಎಂದು ಕೇಳಿಸಿತು. ಯಾರೋ ಈಶ್ವರನ ಭಕ್ತರು ಗಂಟೆ ಭಾರಿಸಿ ಗಿರಕಿ ಹೊಡೆಯುತ್ತಿದ್ದರು. ದೇವಸ್ಥಾನದ ಪಕ್ಕದ ಅಂಗಡಿ ಕಟ್ಟೆ ಆ ಶಬ್ದ ಕೇಳಿಸದಷ್ಟು ಗಹನವಾದ ವಿಚಾರದಲ್ಲಿ ಮುಳುಗಿತ್ತು. "ಕಡ್ನಮನೆ ರಾಘುವಿನ "ಚಿಟ್ಟೆ" ಪೇಪರ್ರು ಬಂದಾಗ್ನಿಂದ ಊರೇ ಹಾಳಾಗೋತು" ಎಂದು ಬೇಲಿಮನೆ ತಿರುಪತಿ ಮಗದೂರು ಅಂಗಡಿ ಕಟ್ಟೆಯ ಮೇಲೆ ಕುಳಿತು ಎಡಗೈಲಿ ಪೇಪರ್ ಹಿಡಿದುಕೊಂಡು ಬೀಡಿಯನ್ನು ನೆಲಕ್ಕೆ ತಿಕ್ಕಿ ನುರಿಯುತ್ತಾ ಹೇಳಿದ. ಹಾಗಂತ ತಿರುಪತಿಗೆ ಚಿಟ್ಟೆ ಪೇಪರ್‌ಬಗ್ಗೆ ಕೆಟ್ಟದಾಗಿ ಹೇಳಬೇಕು ಅಂದೇನು ಇರಲಿಲ್ಲ. ಅದೇ ದಿನ ಬೆಳಿಗ್ಗೆ ಕಡ್ನಮನೆ ರಾಘು ಹತ್ತಿರ "ಬಾಳ ಚೆನ್ನಾಗಿ ಬರದೀದೀಯ ಇನ್ಮೇಲಾದ್ರೂ ನಮ್ಮೂರು ಉದ್ಧಾರವಾಗುತ್ತೋ ನೋಡ್ಬೇಕು" ಅಂತ ಅಂದಿದ್ದ. ಆದರೆ ಈಗ ಆ ವಿಷಯ ಅಂಗಡಿಯ ಒಳಗೆ ಇದ್ದ ಜಯಣ್ಣನ ಪಟಾಲಂಗೆ ಕೇಳಸಲಿ ಎಂದು ಹಾಗು ತನ್ನ ಬಗ್ಗೆ ಜಯಣ್ಣನ ಪಟಾಲಂಗೆ ಒಳ್ಳೆ ಅಭಿಪ್ರಾಯ ಮೂಡಲಿ ಎಂದು ಹಾಗೆ ಹೇಳಿದ್ದ. ಆದರೆ ಜಯಣ್ಣನ ಪಟಾಲಂ "ಇವತ್ತು ಸಾಯಂಕಾಲ ಎಲ್ಲಿ ಕುತ್ಕೊಂಡು ಎಣ್ಣೆ ಹಾಕಬೇಕು" ಎಂಬ ಗಹನವಾದ ಚರ್ಚೆಯಲ್ಲಿ ಮುಳುಗಿದ್ದ ಕಾರಣ ಅಂಗಡಿಯ ಹೊರಗಡೆ ತಿರುಪತಿ ಹೇಳಿದ ಮಾತು ಕೇಳಿಸಲಿಲ್ಲ. ಹಾಗಾಗಿ ತಿರುಪತಿ ಅಲ್ಲಿಂದ ಎದ್ದು ಅಂಗಡಿಯ ಬಾಗಿಲಿಗೆ ಒರಗಿ ನಿಂತು ಮತ್ತೆ "ಅಲ್ಲಾ ಚಿಟ್ಟೆ ಪೇಪರ್ ಬಂದ್ಮೇಲೆ ನಮ್ಮ ಊರೇ ಹಾಳಾಗೋತು" ಎಂದು ಪುನರುಚ್ಛರಿಸಿದ. "ಯಾಕೋ ಹಾಗೆ ಹೇಳ್ತಾ ಇದೀಯಾ, ಎಂತ ಇದೆಯಾ ಅದ್ರಲ್ಲಿ ಊರು ಹಾಳ್ಮಾಡೊ ಸಮಾಚಾರ ?' ಅಂಗಡಿಯ ಒಳಗಡೆ ಖಾಲಿ ಹತ್ತಿ ಹಿಂಡಿ ಚೀಲದ ಮೇಲೆ ಕುಳಿತ ಜಯಣ್ಣ ಕೇಳಿದ."ನೀನೆ ನೋಡು." ಎಂದು ತಿರುಪತಿ ಚಿಟ್ಟೆ ಪತ್ರಿಕೆ ಮುಂದೆ ಹಿಡಿದ." ಅಂತ ದರಿದ್ರ ಪೇಪರ್ ಓದೋಕೆ ನಮಗೇನು ತಲೆ ಕೆಟ್ಟಿಲ್ಲ,ಅವೆಲ್ಲಾ ನಿಮ್ಮಂಥೋರಿಗೆ ಸರಿ, ಎಂತ ಇದೆ ಅಂತ ಹೇಳು ಸಾಕು" ಜಯಣ್ಣನ ಬಲಗೈ ಶಾಮು ಹೇಳಿದ" ಅವೆಲ್ಲಾ ನಮ್ಮಂಥೋರಿಗೆ ಅಂತಾದಮೇಲೆ ಬ್ಯಾಡ ಬಿಡು ಓದ್ದಿದ್ರೆ ನಂಗೇನು " ಎನುತ್ತಾ ತಿರುಪತಿ ಹೊರಟ. "ಏಯ್ ಬಾರಾ ಮಾರಾಯ, ಶಾಮು ತಮಾಷೆಗೆ ಹಾಗಂದ, ಅದಕ್ಕೆಂತ ಸಿಟ್ಟು ನಿಂದು. ಅಯ್ಯೋ ನಿನ್ನ" ಎಂದು ಜಯಣ್ಣ ಕರೆದಮೇಲೆ"ಏನೋ ನಿನ್ಮೇಲೆ ವಿಶ್ವಾಸ ಇಟ್ಟು ಬರ್‍ತಾ ಇದೇನೆ, ಶಾಮು ಪೇಪರ್ ಬೈಯ್ದಿದ್ರೆ ನನಗೆ ಬೇಜಾರಾಗ್ತಿರಲಿಲ್ಲ ಅದರ ಅದರ ಜತೆ ನಿಮ್ಮಂಥೋರಿಗೆ ಅಂತ ನನ್ನನ್ನೂ ಸೇರಿಸ್ತಾನೆ. ಯಾರಿಗೆ ಬೇಜಾರಾಗಲ್ಲ ಹೇಳು?" ಎಂದು ಪ್ರಶ್ನಿಸಿದ ತಿರುಪತಿ. ಜಯಣ್ಣ ಚಿಟ್ಟೆ ಪೇಪರ್ ತಿರುಪತಿಯಿಂದ ಇಸಿದುಕೊಂಡ. ಕಳೆದ ಒಂದೂವರೆ ವರ್ಷದಿಂದ ಚಿಟ್ಟೆ ವಾರಪತ್ರಿಕೆ ಊರಿನಿಂದ ಹೊರಡುತ್ತದೆ ಅದರಲ್ಲಿ ದೇವಸ್ಥಾನದ ಸುದ್ದಿ ಬರುತ್ತದೆ, ತನ್ನ ಹೆಸರು ಪರೋಕ್ಷವಾಗಿ ಬರುತ್ತದೆ ಅದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಶಾಮು ಹೇಳಿದಾಗ ಪ್ರಜಾಪ್ರಭುತ್ವದಲ್ಲಿ ಪತ್ರಿಕೆಯೂ ಇರಬೇಕು, ನಿನಗೆ ಇಷ್ಟ ಇಲ್ಲದಿದ್ದರೆ ನೋಡಬೇಡ ಅಂತ ಜಯಣ್ಣ ಹೇಳಿದ್ದನೇ ಹೊರತು ಪತ್ರಿಕೆ ಓದಿರಲಿಲ್ಲ. ಈಗ ಅದೆಂತದೋ ಊರು ಹಾಳು ಮಾಡುವ ಸುದ್ದಿ ಎಂದು ತಿರುಪತಿ ಹೇಳಿದಾಗ ಕುತೂಹಲದಿಂದ ನೋಡಿದ. ಜಯಣ್ಣನಿಗೆ ಪೇಪರ್ ಓದಲು ಕೊಟ್ಟ ತಿರುಪತಿ ನಿನ್ನೆ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ "ಈ ವಿಷಯದ ಬಗ್ಗೆ ಏನೇನೋ ಹೇಳ್ತಾ ಇದ್ರು, ನೀವು ಹಾಗೆಲ್ಲಾ ಮಾಡಿದ್ರೆ ನಾನು ಸುಮ್ನಿರಲ್ಲ ಅಂದೆ. ಇವೆಲ್ಲಾ ಊರು ಹಾಳ್ಮೋಡೊ ಕೆಲಸ ಮಾಡ್ಬೇಡಿ ಅಂತ ಹೇಳ್ದೆ. ನನ್ನ ತೀರ್ಮಾನ ಊರು ಚೆನ್ನಾಗಿರ್ಬೇಕು ಅಂತ ಒಟ್ಟಿನಲ್ಲಿ ಊರಿಗೆ ಒಳ್ಳೆದಾಗೋ ಕೆಲ್ಸ ಯಾರ್ ಮಾಡಿದ್ರು ಸರೀನೆ" ಎಂದ. "ಈಶ್ವರ ದೇವಸ್ಥಾನದ ಕರ್ಮಕಾಂಡ: ನಾಲ್ಕು ವರ್ಷದಿಂದ ದೇವಸ್ಥಾನದಲ್ಲಿ ಸರ್ವ ಸದಸ್ಯರ ಸಭೆಯೇ ಇಲ್ಲ-ಪ್ರಜಾಪ್ರಭುತ್ವವಾದಿಗಳಿಂದ ಸರ್ವಾಧಿಕಾರ " ಎಂಬ ಸುದ್ದಿ ಪ್ರಕಟವಾಗಿತ್ತು. ಒಂದೇ ಪುಟದ ಪತ್ರಿಕೆಯಾದ್ದರಿಂದ ಬಹಳಷ್ಟು ಜಾಗ ಹೆಡ್‌ಲೈನ್‌ಗೆ ತುಂಬಿತ್ತು. ಸುದ್ದಿಯೇನು ತೀರಾ ಜಾಳಾಗಿರಲಿಲ್ಲ. ಅದರಲ್ಲಿ ಜಯಣ್ಣನ ಶಿಷ್ಯರ ಪರಾಕ್ರಮಗಳು ಇತ್ತು.

****** ಮಗದೂರು ಜೋಗಜಲಪಾತಕ್ಕೆ ಹೋಗುವ ಬಿ.ಎಚ್.ರಸ್ತೆಯ ಪಕ್ಕದಲ್ಲಿರುವ ಎಪ್ಪತ್ತುಮನೆಗಳ ಸಣ್ಣಹಳ್ಳಿ. ಊರಿನ ಸಮಸ್ತ ಜಾತಿಯ ಜನರಿಗೂ ಒಂದು ಈಶ್ವರ ದೇವಸ್ಥಾನ. ದೇವರು ದೇವಸ್ಥಾನ ಇರುವುದು ಊರಿನಲ್ಲಿ ಜಗಳ ತಂದಿಡುವುದಕ್ಕೆ ಎಂಬ ಮಾತನ್ನು ನಿಜಗೊಳಿಸಲೆಂಬಂತೆ ಊರಿನ ಎಲ್ಲಾ ವೈಯಕ್ತಿಕ ಜಗಳವನ್ನೂ ಅಲ್ಲಿ ತಂದು ಕೆಲವರು ತೀರಿಸಿಕೊಳ್ಳುತ್ತಿದ್ದರು. ದೇವಸ್ಥಾನದ ಕಟ್ಟಡ ಶಿಥಿಲಗೊಂಡಿದ್ದರಿಂದ ಕೆಲವರು ಆಸ್ತಿಕರು ಕಟ್ಟಡ ಕಟ್ಟಲು ಮುಂದಾದರು. ಆವಾಗ ದೇವರಲ್ಲಿ ನಂಬಿಕೆಯೇ ಇರದ ಜಯಣ್ಣ ಹಾಗು ಶಾಮು ಸಣ್ಣದಾದ ಒಂದು ಗುಂಪಿನೊಂದಿಗೆ ಮರ್ಯಾದಸ್ಥ ಆಸ್ತಿಕರ ಮೇಲೆ ಕಾನೂನು,ಪ್ರಜಾಪ್ರಭುತ್ವ ಅಂದೆಲ್ಲಾ ಜನರಲ್ ಬಾಡಿ ಮೀಟಿಂಗನಲ್ಲಿ ತರಲೆ ತೆಗೆದು ಗೋಳು ಹೊಯ್ದುಕೊಳ್ಳುತ್ತಿದ್ದರು. ಜಯಣ್ಣ ಭ್ರಷ್ಟಾಚಾರ , ಅವ್ಯವಹಾರ, ದುರ್ಬಳಕೆ ಮುಂತಾದ ನಾನಾತರಹದ ಶಬ್ದ ಬಳಸಿ ಮೂರು ತಾಸು ಭಾಷಣ ಬಿಗಿದು ರಾಜಿನಾಮೆ ಕೊಡಿ ಎನ್ನುತ್ತಿದ್ದ. ಆದರೆ ಈ ಜಗಳದ ನಡುವೆಯೇ ಕೆಲವರು ಮನೆಕೆಲಸ ಬಿಟ್ಟು ಯಾರ ವಿರೋಧವನ್ನೂ ಲೆಕ್ಕಿಸದೆ ಹತ್ತಾರು ವರ್ಷಗಳು ಕಷ್ಟಪಟ್ಟು ಕಂಡಕಂಡಲ್ಲಿ ದೇಣಿಗೆ ಎತ್ತಿ ವ್ಯವಸ್ಥಿತ ರೀತಿಯಲ್ಲಿ ಕಟ್ಟಡ ನಿರ್ಮಿಸಿಬಿಟ್ಟರು. ರಾಜಿನಾಮೆ ಕೊಡಿ ಎನ್ನುವ ಜಯಣ್ಣನ ಪಟಾಲಂನ ವರಾತಕ್ಕೆ "ದಿನಾಲೂ ಮನೆ ಕೆಲ್ಸ ಬಿಟ್ಟು ಇಲ್ಲಿ ಜೀವ ತೇಯ್ದದ್ದಕ್ಕೆ ಒಂದು ಬೆಲೆ ಬೇಡ್ವಾ, ನಾವೇನು ನಮ್ಮ ಮನೆ ಉದ್ದಾರಕ್ಕಾಗಿ ಈ ಕೆಲ್ಸ ಮಾಡ್ತಾ ಇದೀವಾ ಏನೋ ಊರಿಗೆ ಒಳ್ಳೇದಾಗ್ಲಿ ಅಂತ ಮಾಡ್ತಾ ಇದೀವಿ" ಅಂತ ಊರಿನ ಸಾತ್ವಿಕ ಕಮಿಟಿಯವರು ಹೇಳುತ್ತಾ ಆಡಳಿತದಲ್ಲಿ ಮುಂದುವರೆದಿದ್ದರು. ಅದಾಗಿ ಸ್ವಲ್ಪ ದಿವಸದಲ್ಲಿ ಜಯಣ್ಣನ ದೋಸ್ತ್‌ಶಾಮು ೩ ವರ್ಷಗಳ ಕಾಲ ಊರು ಬಿಟ್ಟ. ಆವಾಗ ಒಂಟಿಯಾದ ಜಯಣ್ಣ ಸ್ವಲ್ಪ ವರ್ಷ ಸುಮ್ಮನುಳಿದ. ಹಾಗಂತ ಸ್ವಭಾವತಃ ಜಯಣ್ಣ ಒಳ್ಳೆಯವನೆ, ಊರಿನಲ್ಲಿ ವೈರಿಯೇ ಸತ್ತರೂ ಶತ್ರು ಎಂದು ನೋಡದೆ ಹೆಣ ಹೊರಲು ಹೋಗುತ್ತಿದ್ದ. ಆದರೆ ಬದುಕಿದ್ದಾಗ ತಕರಾರು ಎಬ್ಬಿಸಿಪ್ರಾಣ ಹಿಂಡುತ್ತಿದ್ದ. ಅವನ ಒಂದೇ ದೌರ್ಬಲ್ಯ ಎಂದರೆ ಯಾರಾದರೂ ಕೊಲೆ ಮಾಡಿ ಬಂದು ಅವನ ಬಳಿ ಮೊದಲು ಹೇಳಿದರೆ ಅದೇ ಸರಿ ಎಂದು ಅವರ ಪರ ನಿಂತುಬಿಡುತ್ತಿದ್ದ. ಆ ದೌರ್ಬಲ್ಯವನ್ನು ಶಾಮುನಂತವರು ಉಪಯೋಗಿಸಿಕೊಳ್ಳುತ್ತಿದ್ದರು. ಊರುಬಿಟ್ಟಿದ್ದ ಶಾಮು ೩ ವರ್ಷದ ನಂತರ ಮತ್ತೆ ಊರಿಗೆ ವಾಪಾಸು ಬಂದ ಮೇಲೆ ಮಾಡಲು ಬೇರೆ ಕೆಲಸ ಇಲ್ಲದ್ದರಿಂದ ಕಟ್ಟಿದ ದೇವಸ್ಥಾನದ ಕಟ್ಟಡ ಬೀಳುತ್ತದೆ,ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ ಎಂದು ಕ್ಯಾತೆ ತೆಗೆದ. ಅದಕ್ಕೆ ಜಯಣ್ಣ ಬೆನ್ನೆಲುಬಾಗಿ ನಿಂತ. ಕಟ್ಟಡ ಬೀಳದು ಎಂದು ಗೊತ್ತಿದ್ದರೂ ಜಯಣ್ಣ ಯಾವುದೋ ಇಂಜನಿಯರ್ ಹಿಡಿದು ಅವರನ್ನು ಹೆದರಿಸಿ ಕಟ್ಟಡಬೀಳುತ್ತದೆ ಎಂದು ಸರ್ಟಿಫಿಕೇಟ್ ಕೊಡಿಸಿ ದೇವಸ್ಥಾನದ ಸಾರ್ವಜನಿಕ ಸಭೆಯಲ್ಲಿ ಅವಿರತ ಭಾಷಣ ಮಾಡಿ ತನ್ನ ಶಿಷ್ಯರ ಸುಪರ್ತಿಗೆ ದೇವಸ್ಥಾನದ ಆಡಳಿತ ಕೊಡಿಸಿದ್ದ. ನಂತರ ತನಗೆ ದೇವರಲ್ಲಿ ನಂಬಿಕೆ ಇಲ್ಲವೆಂದು ತಾನು ತನ್ನ ಪಾಡಿಗೆ ಇದ್ದ. ರಸ್ತೆ ಪಕ್ಕದ ದೇವಸ್ಥಾನವಾದ್ದರಿಂದ ಕಾಣಿಕೆ ಡಬ್ಬಿ ಬೇಗನೆ ತುಂಬುತ್ತಿತ್ತು. ಜಯಣ್ಣನ ಶಿಷ್ಯಕೋಟಿಗೆ ಸರ್ವ ಸದಸ್ಯರ ಸಭೆಯಲ್ಲಿ ತಮ್ಮ ಪರ ವಾದ ಮಾಡಿ ಗೆಲ್ಲಿಸಲು ಪುಗಸಟ್ಟೆ ಅಸಾಮಿ ಸಿಕ್ಕಿದರಿಂದ ಆಡಳಿತ ಸಿಗುವವರೆಗೂ ತಾವು ಪ್ರಜಾಪ್ರಭುತ್ವದ ತುಂಡು, ನ್ಯಾಯ ನೀತಿ ನಮ್ಮ ಧರ್ಮ,ದೇವಸ್ಥಾನದ ಕಟ್ಟಡ ಬೀಳುತ್ತದೆ ಎನ್ನುತ್ತಿದ್ದವರು ಅಧಿಕಾರ ಸಿಕ್ಕಮೇಲೆ ಕಾಣಿಕೆ ಡಬ್ಬಿಯ ಮಹಿಮೆ ಅರಿವಾಗಿ ಅವರೇ ಶಿಥಿಲವಾಗಿದೆ ಎಂದು ವಾದಿಸುತ್ತಿದ್ದ ದೇವಸ್ಥಾನ ಗಟ್ಟಿಯಿದೆ ಎನ್ನತೊಡಗಿದ್ದರು. ವರ್ಷಕ್ಕೊಮ್ಮೆ ಸಾರ್ವಜನಿಕ ಸಭೆ ಕರೆಯುವುದನ್ನೂ ಕೈ ಬಿಟ್ಟು ಮಜ ಉಢಾಯಿಸತೊಡಗಿದರು. ರಸ್ತೆ ಪಕ್ಕದ ದೇವಸ್ಥಾನವಾದ್ದರಿಂದ ಕಲ್ಯಾಣ ಮಂಟಪ ಮುಂತಾದವುಗಳನ್ನು ಕಟ್ಟಿಸಿ ಊರಿನ ಪ್ರಗತಿಗೆ ದಾರಿಯಾಗಬಹುದಾಗಿದ್ದ ಉತ್ತಮ ಅವಕಾಶವನ್ನು ಹಾಳು ಮಾಡಿತ್ತು ಆಡಳಿತ ಸಮಿತಿ. ಇವೆಲ್ಲವನ್ನೂ ಸಮೀಕರಿಸಿದ ವರದಿ ಚಿಟ್ಟೆ ಪತ್ರಿಕೆಯಲ್ಲಿ ಬಂದಿತ್ತು. ಎಲ್ಲಾ ಘಟನೆಯನ್ನು ತನ್ನ ಮೂಗಿನ ನೇರಕ್ಕೆ ನೋಡಿ ತೀರ್ಮಾನ ತೆಗೆದುಕೊಂಡಿದ್ದ ಜಯಣ್ಣನಿಗೆ ಮತ್ತೊಂದು ಮುಖದ ವರದಿ ನೋಡಿ ಇರಿಸುಮುರಿಸಾಗಿತ್ತು. ಪತ್ರಿಕೆ ಓದಿದ ಜಯಣ್ಣ ಯಾರು ಏನ್ಬೇಕಾದ್ರೂ ಅಂದ್ಕೊಳ್ಳಿ ನಾನು ಮಾತ್ರ ಊರಿಗೆ ಒಳ್ಳೆದಾಗ್ಲಿ ಅಂತ ಎಲ್ಲವನ್ನೂ ಮಾಡಿದ್ದೇನೆ ಹೊರತು ನನ್ನ ಸ್ವಾರ್ಥಕ್ಕಾಗಿ ಇಲ್ಲ ಎಂದು ಹೇಳಿದ.

*********

"ಜಯಣ್ಣನ ಪಟಾಲಂನ ಸುದ್ದಿ ಹೀಗೆ ಬರೆದಿದ್ದು ಸರೀ ಆಯಿತು, " ಮಹಾಬಲ ಬಾಯಲ್ಲಿದ್ದ ವಿಮಲ್ ಗುಟ್ಕಾ ಪೂ... ಎಂದು ಸೊಸೈಟಿ ಕಟ್ಟೆ ಕೆಳಗೆ ಉಗಿದು ಹೇಳಿದ. ಹಾಗಂತ ಚಿಟ್ಟೆ ಪತ್ರಿಕೆಯಲ್ಲಿ ಬಂದಿರುವ ಲೇಖನ ಸರಿಯಾಗಿದೆ ಅಂತ ಅವನದೇನು ಅಭಿಪ್ರಾಯವಾಗಿರಲಿಲ್ಲ. ಮಧ್ಯಾಹ್ನ ಜಯಣ್ಣನ ಹತ್ತಿರ "ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ ಬರೀತಾರೆ, ನಾನು ನೋಡಿದ್ನಲ್ಲ.... ಅವ್ರಿಗೆ ಯಾವಾಗ್ಲೂ ನಿನ್ನ ಸುದ್ದಿ ಬಿಟ್ರೆ ಬೇರೆ ವಿಚಾರಾನೆ ಇಲ್ಲ, ನಾನಂತೂ ಆ ಕಡೆ ಹೋಗೋದನ್ನ ಬಿಟ್ಟೀದೀನಿ" ಎಂದಿದ್ದ. ಆದರೆ ಈಗ ಸೊಸೈಟಿ ಒಳಗಡೆ ಕುಳಿತಿದ್ದ ರಾಘು ಮತ್ತವನ ಪಟಾಲಂಗಳಿಗೆ ಕೇಳಿಸಲಿ ಮತ್ತು ತನ್ನ ಬಗ್ಗೆ ರಾಘು ಪಟಾಲಂಗೆ ಒಳ್ಳೆ ಅಭಿಪ್ರಾಯ ಮೂಡಲಿ ಎಂದು ಹಾಗೆ ಹೇಳಿದ್ದ. ಆದರೆ ರಾಘು ಪಟಾಲಂ ಚಿಟ್ಟೆ ಪತ್ರಿಕೆಯನ್ನು ನಿಲ್ಲಿಸಿಬಿಡುವ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರಿಂದ ಅವರಿಗೆ ಕೇಳಿಸಲಿಲ್ಲ. ಹಾಗಾಗಿ ಮಹಾಬಲ ಒಳಗಡೆ ಬಂದು "ಇಂಥ ಲೇಖನ ಬರದ್ರೆ ಪತ್ರಿಕೆ ಓದೋ ಹಂಗೆ ಇರ್ತದೆ, ಅದೇನೋ ವೇದಾಂತ ಇದ್ರೆ ಅದರಲ್ಲಿ ಏನಿದೆ ಅಂತ ಓದ್ಬೇಕು, ಈಗ ಅವ್ರ ಮುಕ್ಳೀಲಿ ಉರಿ ಬಿದ್ದಿರುತ್ತೆ ,ಬರ್‍ಯೋಕೆ ಮುಂಚೆ ನನ್ನ ಕೇಳಿದ್ರೆ ಇನ್ನಷ್ಟು ಮಾಹಿತಿ ಕೊಡ್ತಿದ್ದೆ" ಎಂದು ಹೇಳಿದ"ಇನ್ನಷ್ಟು ಮಾಹಿತಿ ನಮಗೆ ಗೊತ್ತಿಲ್ದೇ ಇರೋದು ಎಂಥಾ?" ರಾಘು ಕೇಳಿದ"ಅವರ ಎಲ್ಲಾ ಹುಳುಕು ನನ್ನತ್ರ ಇದೆ" ಸಸ್ಪೆನ್ಸ್ ಇರಲಿ ಎಂದು ನಿಂತಲ್ಲೆ ಗಿರಕಿ ಹೊಡೆದು ಹೇಳಿದ ಮಹಾಬಲ"ಇವನಿಗೆ ಗೊತ್ತಿರುತ್ತೆ ಮಣ್ಣು, ಸುಮ್ನೆ ಬೊಗಳೆ ಬಿಡ್ತಾನೆ,ಇಲ್ಲಿ ಎಲ್ಲಾರ ಮುಂದೆ ಸ್ಕೋಪ್ ತಗೊಳ್ಳೋಕೆ ಸ್ಟೈಲ್" ರಾಘುನ ಬಲಗೈ ಜಗದೀಶ ಹೇಳಿದ."ಹಾಗಾದ್ರೆ ಬ್ಯಾಡ ಬಿಡು ನಮ್ದು ಎಲ್ಲಾ ಬೊಗಳೆ ಅಂತಾದ್ಮೆಲೆ ಯಾಕಪ್ಪಾ" ಎನ್ನುತ್ತಾ ಮಹಾಬಲ ಹೊರಟ"ಏಯ್ ಬಾರಾ ಮಾರಾಯ, ಜಗದೀಶ ತಮಾಷೆಗೆ ಹಂಗಂದ, ಅದಕ್ಕೆಂತ ಸಿಟ್ಟು ನಿಂದು. ಅಯ್ಯೋ ನಿನ್ನ" ಎಂದು ರಾಘು ಕರೆದಮೇಲೆ"ಏನೋ ನಿನ್ಮೇಲೆ ವಿಶ್ವಾಸ ಇಟ್ಟು ಬರ್‍ತಾ ಇದೇನೆ, ಜಗದೀಶ ಕೇವಲ ಅವ್ರನ್ನ ಬೈಯ್ದಿದ್ರೆ ನನಗೆ ಬೇಜಾರಾಗ್ತಿರಲಿಲ್ಲ ಅದರ ಅದರ ಜತೆ ಬೊಗಳೆ,ಸ್ಟೈಲ್ ಅಂತ ನನ್ನನ್ನೂ ಸೇರಿಸ್ತಾನೆ. ಯಾರಿಗೆ ಬೇಜಾರಾಗಲ್ಲ ಹೇಳು?" ಎಂದು ಪ್ರಶ್ನಿಸಿದ ಮಹಾಬಲ ನಂತರ ದೇವಸ್ಥಾನದಲ್ಲಿ ಶೌಚಾಲಯದ ಕಟ್ಟಡದಲ್ಲಿ ನಡೆದ ಅವ್ಯವಹಾರ, ನಿತ್ಯ ಪೂಜೆಗೆ ತೆಂಗಿನ ಕಾಯಿ ಒಡೆಯದೇ ಇರುವುದು, ಕಮಿಟಿಯವರೆ ದೇವಸ್ಥಾನಕ್ಕೆ ಬಣ್ಣ ಹೊಡೆದು ಆಳಿನ ಲೆಕ್ಕ ಬರೆದು ದುಡ್ಡು ತಿಂದಿರುವುದು, ಮುಂತಾದ ಮಾಹಿತಿಯನ್ನು ಹೇಳಿ. ಇದೆಲ್ಲಾ ಹೊರಗೆ ಹಾಕಲೇಬೇಕು ಅಂತ ಹೇಳ್ತಾ ಇದೀನಿ, ಒಟ್ಟಿನಲ್ಲಿ ಊರಿಗೆ ಒಳ್ಳೆದಾಗೋ ಕೆಲ್ಸ ಯಾರ್ ಮಾಡಿದ್ರು ಸರೀನೆ ಎಂದ.

********

ಕೃಷಿಕರ ಊರಿನಲ್ಲಿ ದೇವಸ್ಥಾನದ ತಂಟೆಯೇ ಬೇಡ ಎಂದು ತಮ್ಮ ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಹುಟ್ಟಿದ್ದ ಸಂಸ್ಥೆಯೇ ಚೇತನ ಕೃಷಿ ವಾಹಿನಿ. ಮಗದೂರು ದೇವಸ್ಥಾನದ ರಗಳೆಯಿಂದ ಬೇಸೆತ್ತು ಊರಿನಲ್ಲಿ ತರ್ಲೆ ಸ್ವಭಾವದ ಜನರನ್ನು ಹೊರತುಪಡಿಸಿ ಇಪ್ಪತ್ತೈದು ಜನ ಕಟ್ಟಿಕೊಂಡ ಸಂಸ್ಥೆ. ಮುರ್‍ನಾಲ್ಕು ವರ್ಷ ಅತ್ಯುತ್ತಮವಾಗಿ ಕೃಷಿಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿ ಯಶಸ್ವಿಯಾಗಿತ್ತು. ಕೃಷಿಯಲ್ಲಿ ಎಲ್ಲವುದನ್ನೂ ತಾವೇ ಅನುಷ್ಠಾನ ಮಾಡಬೇಕಾದ್ದರಿಂದ ಪಾರ್‍ಟಿ ಪಂಗಡಗಳಿಗೆ ಅವಕಾಶ ಇಲ್ಲದ್ದರಿಂದ ಆರಂಭದಲ್ಲಿ ಇದು ಚೆನ್ನಾಗಿ ಕಾಣಿಸಿತಾದರು ಮೂರ್ನಾಲ್ಕು ವರ್ಷಗಳ ನಂತರ ಜನರಲ್ ಬಾಡಿ ಗಲಾಟೆಯಿಲ್ಲದ ಪ್ರಯುಕ್ತ ಇಪ್ಪತ್ತೈದು ಜನರಲ್ಲಿ ಕೆಲವರಿಗೆ ಬೇಸರ ಬಂತು. ಅವರು ಅದರಿಂದ ದೂರವುಳಿದರು. ಹಾಗಾಗಿ ಅಂತಿಮವಾಗಿ ಹದಿನೈದು ಜನ ಸದಸ್ಯರ ಬಲಕ್ಕೆ ಬಂದು ನಿಂತಿತ್ತು. ಹತ್ತು ಹಲವು ಉತ್ತಮ ಯೋಜನೆಗಳಿದ್ದ ವಾಹಿನಿಯ ಕಾರ್ಯಕ್ರಮಗಳು ಜನರಿಗೆ ತಲುಪಲು ಉತ್ತಮಮಾರ್ಗ ಪತ್ರಿಕೆ ಎಂದು ಕೆಲವರು ಸಲಹೆಯನ್ನಿತ್ತು ಚಿಟ್ಟೆ ಪತ್ರಿಕೆಯನ್ನು ಶುರುಮಾಡಿದ್ದರು. ಚಿಟ್ಟೆ ವಾರ ಪತ್ರಿಕೆ ಕೃಷಿ ವಿಚಾರಗಳು, ಊರಿನಲ್ಲಿನ ಸಾಧಕರು, ಒಂಚೂರು ಆಧ್ಯಾತ್ಮ ಮತ್ತೆ ವೇದಾಂತವನ್ನು ಹೊತ್ತು ಭಾನುವಾರ ಹೊರಗೆ ಬರುತ್ತಿತ್ತು ಚಿಟ್ಟೆ ಪತ್ರಿಕೆ ಮುದ್ರಣವಾಗುವುದೇ ೧೦೦ ಪ್ರತಿ, ಅದೂ ಪುಕ್ಕಟೆ. ಅದರ ಸಂಪಾದಕ ರಾಘು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹೇಳಲು, ತಮ್ಮ ವಾಹಿನಿಯ ಯೋಜನೆಯ ಮಾಹಿತಿಯನ್ನು ತಿಳಿಸಲು ಚಿಟ್ಟೆಪತ್ರಿಕೆ ಪ್ರಾರಂಭವಾಗಿತ್ತಾದರೂ ವಾಸ್ತವವಾಗಿ ಅದಕ್ಕೆ ಲೇಖನ ಬರೆಯುವವರೇ ಗತಿ ಇರಲಿಲ್ಲ. ಕೆಲವು ಲೇಖನವನ್ನು "ರಾ" ಎಂಬ ಹೆಸರಿನಲ್ಲಿ ಮತ್ತೆ ಕೆಲವು ಲೇಖನವನ್ನು ರಾಗ್ ಎಂಬ ಹೆಸರಿನಲ್ಲಿ ಬರೆದು ಬಹಳಷ್ಟು ಜನರು ಪತ್ರಿಕೆಗೆ ಬರೆಯುತ್ತಾರೆ ಎಂಬುದನ್ನು ಬಿಂಬಿಸಲು ಸಂಪಾದಕ ರಾಘು ಪ್ರಯತ್ನಿಸುತ್ತಿದ್ದ. ಆದರೆ ಹಳ್ಳಿಯ ಮಂದಿ ಬಹಳ ಬುದ್ದಿವಂತರು ಅವನ ಎದುರು ವಾ...... ವಾರೇವಾ ಎಂದು ಹೇಳಿ ಹಿಂದಿನಿಂದ "ಅದೇನೋ ಮಾಡ್ತೀನಿ ಇದೇನೋ ಕಡಿತೀನಿ ಅಂತ ಊರಿಂದ ಊರಿಗೆ ಅಲೆದು ಕೊನೆಯಲ್ಲಿ ಪತ್ರಿಕೆ ಶುರುಮಾಡಿದ" ಅಂತ ಹತ್ತು ಜನ ಸೇರಿ ಶುರು ಮಾಡಿದ್ದ ಪತ್ರಿಕೆಯನ್ನು ಅವನ ತಲೆಗೆ ಕಟ್ಟಿ ಜನರು ಆಡಿಕೊಳ್ಳುತ್ತಿದ್ದರು. ಜನ ಹಾಗೆಂದಾಗಲೆಲ್ಲ ತನ್ನ ಯೋಗ್ಯತೆ ಅವರಿಗೆ ತಿಳಿಯದು ಬಿಡು ಅದಕ್ಕೆಲ್ಲಾ ಪತ್ರಿಕೆಯ ಸಂಪಾದಕೀಯದ ಮೂಲಕ ಉತ್ತರ ಕೊಡುತ್ತೇನೆ ಎಂದು ಸಮಾಧಾನ ಮಾಡಿಕೊಂಡು ಮುನ್ನುಗ್ಗುವ ಧೈರ್ಯ ತೋರಿದ್ದ. ಹಾಗಂತ ರಾಘು ಸ್ವಭಾವತಹ ಒಳ್ಳೆಯವನೆ, ಯಾರು ಯಾವುದಕ್ಕಾಗಿ ತನ್ನನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿಯದೆ ಕೈಯಲ್ಲಿದ್ದ ಹಣವನ್ನೆಲ್ಲಾ ಸಾರ್ವಜನಿಕ ಕೆಲಸಕ್ಕೆ ಖಾಲಿ ಮಾಡಿಕೊಂಡುಬಿಡುತ್ತಿದ್ದ. ತನ್ನಿಂದ ಸಹಾಯ ತೆಗೆದುಕೊಂಡವರೆ ಹಿಂದಿನಿಂದ ಏನೇನೋ ಹೇಳಿದಾಗ ಪಾಟೀಲಪುಟ್ಟಪ್ಪ, ಶ್ಯಾಮರಾಯರು,ರವಿಬೆಳಗೆರೆ ಮುಂತಾದವರಿಗೂ ಆರಂಭದಲ್ಲಿ ಜನ ಹೀಗೆ ಹೇಳುತ್ತಿದ್ದರು ಎಂಬರ್ಥದ ಸಂಪಾದಕೀಯ ಬರೆದು "ಯಾರೂ ತಲೆ ಎತ್ತಬಾರ್ದು ಹಂಗೆ ಉತ್ರ ಕೊಟ್ಟೆ ನೋಡು" ಎನ್ನುತ್ತಿದ್ದ. ಪತ್ರಿಕೆಯ ಸಂಪಾದಕ ಮುದ್ರಕ ವಿತರಕ ಎಂಬ ಎಲ್ಲಾ ಹುದ್ದೆಯನ್ನು ಒಬ್ಬನೇ ನಿರ್ವಹಿಸುವ ಕಷ್ಟ ಅವನಿಗೆ ತಿಳಿದಿತ್ತಾದರೂ ಜನರಿಗೆ ಅದು ತಿಳಿಯುತ್ತಿರಲಿಲ್ಲ. ಅವನಿಗೆ ಚಿಟ್ಟೆಯಲ್ಲಿ ಕೃಷಿಕರಿಗೆ ಉಪಯೋಗವಾಗುವ ವಿಷಯಗಳನ್ನು ಮಾತ್ರ ಪ್ರಕಟಿಸುವ ಇರಾದೆ ಇತ್ತು.ಆದರೆ ಅಂಥ ವಿಷಯಗಳನ್ನು ಒಂದು ವರ್ಷಗಳಕಾಲ ನಿರಂತರವಾಗಿ ನೀಡುತ್ತಾ ಬಂದಿದ್ದರೂ ಯಾರೂ ಕ್ಯಾರೆ? ಎಂದಿರಲಿಲ್ಲ. ಹಾಗಾಗಿ ಚಿಟ್ಟೆ ಪತ್ರಿಕೆಯನ್ನು ಏನಕೇನ ಪ್ರಕಾರೇಣ ಪ್ರಸಿದ್ಧಮಾಡಬೇಕು ಎಂದರೆ ಜನಸಾಮಾನ್ಯರು ಬಯಸುವುದನ್ನು ನೀಡಬೇಕು ಎಂಬ ಸ್ವಯಂ ನಿರ್ಣಯ ತೆಗೆದುಕೊಂಡು "ಈಶ್ವರ ದೇವಸ್ಥಾನದ ಕರ್ಮಕಾಂಡ" ಎಂದು ಹಾಯ್ ಬೆಂಗಳೂರಿನಲ್ಲಿ ಬರುವ ಹೆಡ್ಡಿಂಗು ಭಟ್ಟಿ ಇಳಿಸಿ ಪ್ರಕಟಿಸಿದ್ದ. ಆದರೆ ರಾಘು ಮಾತ್ರ ಊರಿಗೆ ಒಳ್ಳೇದಾಗ್ಲಿ ಅಂತ ಇಂಥಹ ಹಗರಣ ಹೊರಗೆ ಹಾಕ್ತಾ ಇದ್ದೇನೆ ಹೊರತು ಇದರಲ್ಲಿ ನನ್ನ ಸ್ವಾರ್ಥವೇನೂ ಇಲ್ಲ ಅಂತ ಹೇಳುತ್ತಿದ್ದ.******** "ಮಹಾರಾಜಾಯ ವಿದ್ಮಹೇ ವಕ್ರ ತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್" ಅರ್ಚಕರು ಈಶ್ವರ ಲಿಂಗದ ಮುಂದೆ ನಿಂತು ದೊಡ್ಡ ಸ್ವರದಿಂದ ಮಂತ್ರ ಹೇಳುತ್ತಿದ್ದರು ಆದರೆ ಮನಸ್ಸು ಮಾತ್ರ ಚಿಟ್ಟೆ ಪತ್ರಿಕೆಯಲ್ಲಿ ಬಂದ ಸುದ್ದಿಯ ಬೆನ್ನು ಹಿಡಿದಿತ್ತು. ಎಂಥಾ ಚೆನ್ನಾಗಿ ಬರೆದಿದಾನೆ ಕಮಿಟಿಯವರು ಮಾಡಿದ ಅನ್ಯಾಯ ತನ್ನೊಬ್ಬನಿಗೆ ಅಂತ ಅಂದುಕೊಂಡಿದ್ದೆ,ಇವರ್‍ನ ಹೀಗೆ ಬಿಟ್ರೆ ಊರಿಗೆ ಊರನ್ನೇ ಕೊಳ್ಳೆ ಹೊಡಿತಾರೆ. ಪ್ರತಿನಿತ್ಯ ನನ್ನನ್ನು ಹಿಂಸೆ ನೀಡಿ ದೇವಸ್ಥಾನದ ಪೂಜೆಯನ್ನು ಬಿಡಿಸಬೇಕು ಅಂತ ಮಸಲತ್ತು ಕಡೀತಾರಲ್ಲ.ಈಗ ಸರೀ ಆಯಿತು.. ತಾನೇನು ಸಂಬ್ಳ ಐದು ಸಾವಿರ ಕೊಡಿ ಅಂತ ಕೇಳಿದ್ನಾ, ಒಂದು ಸಾವಿರ ರೂಪಾಯಿ ಸಂಬ್ಳದಲ್ಲಿ ಜೀವನ ಮಾಡೋಕಾಗಲ್ಲ ಇನ್ನು ಐನೂರು ರೂಪಾಯಿ ಜಾಸ್ತಿ ಮಾಡಿ ಅಂತ ಅಷ್ಟೇ ಕೇಳಿದ್ದು. ಸಂಬ್ಳ ಜಾಸ್ತಿ ಮಾಡದಿದ್ರೂ ಪರ್ವಾಗಿಲ್ಲ ಆರತಿ ಬಟ್ಟಲಿಗೆ ಭಕ್ತರು ಹಾಕೋ ದುಡ್ಡನ್ನಾದ್ರೂ ನನಗೆ ಕೊಡಿ ಅಂತ ಕೇಳಿದ್ರೆ ಅದನ್ನೂ ಕಾಣಿಕೆ ಡಬ್ಬಿಗೆ ಹಾಕ್ಬೇಕು ಅಂತಾರಲ್ಲ. ತಾನು ಹೀಗೆಲ್ಲಾ ಕೇಳಿದ್ದಕ್ಕೆ ರಾತ್ರಿ ತಾನು ದೇವಸ್ಥಾನಕ್ಕೆ ಬೀಗ ಹಾಕ್ಲಿಲ್ಲ ಅಂತ ಸುಳ್ಳು ಹೇಳಿ ತನ್ನ ಮೇಲೆ ಗೂಬೇ ಕೂರ್ಸೋಕೆ ನೋಡಿದ್ರಲ್ಲ. ಆವಾಗ ನನ್ನ ರಕ್ಷಣೆ ಮಾಡಿದ್ದು ತನ್ನ ಮನೆ ಕುಲದೇವರಾದ ದೊಡ್ಡಗಣಪತಿಯೇ ಹೊರತು ಈ ಈಶ್ವರ ಅಲ್ಲ. ತಾನು ದಿನನಿತ್ಯ ಈಶ್ವರನ ತಲೆ ಮೇಲೆ ನೀರು ಹೊಯ್ತಿದ್ದ ಲೆಕ್ಕನೇನಾದ್ರು ಅವನು ಇಟ್ಕೋಂಡಿದ್ರೆ ನನಗೆ ಸಂಬ್ಳ ಜಾಸ್ತಿ ಮಾಡೊ ಬುದ್ದಿ ಕಮಿಟಿಯವರಿಗೆ ಕೊಡ್ತಿದ್ದ. ಏ ಈಶ್ವರಾ ಅದಕ್ಕೆ ನಾನು ಗಣಪತಿ ಮಂತ್ರ ಹೇಳುತ್ತಿದ್ದೇನೆ" ಎಂದುಕೊಳ್ಳುತ್ತಾ ತಿರುಗುವಷ್ಟರಲ್ಲಿ ಹೊಚ್ಚ ಹೊಸ ಮಾರುತಿ ಕಾರನ್ನು ಖರೀದಿಸಿ ಈಶ್ವರ ದೇವಸ್ಥಾನಕ್ಕೆ ಪೂಜೆಗೆ ತಂದಿದ್ದ ಭಕ್ತರೊಬ್ಬರು ಕೈ ಮುಗಿದು ನಿಂತಿದ್ದರು. ಭಕ್ತರು ಕಾರಿನ ಪೂಜೆ ಮುಗಿಸಿ ನೂರರ ನೋಟು ನೀಡುತ್ತಾ " ಭಟ್ರೆ ಆಗ್ಲೆ ನೀವು ಗಣಪತಿ ಮಂತ್ರ ಹೇಳ್ತಿದ್ರಿ ಅದ್ಯಾಕೆ ಈಶ್ವರ ದೇವಸ್ಥಾನದಲ್ಲಿ ಈಶ್ವರನ ಮಂತ್ರ ಹೇಳ್ಬೇಕಿತ್ತಲ್ಲ" ಎಂದಾಗ ಸಮಸ್ತ ಲೋಕ ಕಲ್ಯಾಣಕ್ಕಾಗಿ ತಾನು ಪ್ರಾರ್ಥಿಸುತ್ತಿದ್ದೆ ಹಾಗಾಗಿ ಆವಾಗ ಆ ದೇವರ ಮಂತ್ರ ಈ ದೇವರ ಮಂತ್ರ ಎಂದು ಬೇಧಭಾವ ಎಣಿಸದೇ ಎಲ್ಲಾ ಮಂತ್ರಾನೂ ಹೇಳ್ಬೇಕು ಒಟ್ಟಿನಲ್ಲಿ ಊರಿಗೆ ಒಳ್ಳೆದಾದ್ರೆ ಆಯಿತು ಎಂದು ಹೇಳಿದರು.

*********

ಮಗದೂರು ದೇವಸ್ಥಾನದ ಸುದ್ದಿ ಚಿಟ್ಟೆ ಪತ್ರಿಕೆಯಲ್ಲಿ ಬಂದ ಮಾರನೇ ದಿನ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಸಾರ್ವಜನಿಕರೂ ದೇವಸ್ಥಾನದಲ್ಲಿ ವಾರ್ಷಿಕ ರುದ್ರ ಹೋಮದ ಪ್ರಯುಕ್ತ ಸೇರಿದ್ದರು. ಒಂದಿಷ್ಟು ಹೆಂಗಸರು ಶ್ರದ್ಧೆಯಿಂದ ತೆಂಗಿನ ಕಾಯಿ ತುರಿಯುತ್ತಿದ್ದರು. ಮತ್ತೊಂದಿಷ್ಟು ಜನ ಅನ್ನ ಸಂತರ್ಪಣೆಯ ತಯಾರಿ ನಡೆಸುತ್ತಿದ್ದರು. ಆವಾಗ ದೇವಸ್ಥಾನದ ಆಫೀಸಿನಲ್ಲಿ ಆಡಳಿತ ಮಂಡಳಿಯ ಕೆಲ ಸದಸ್ಯರು " ಈ ರಗಳೆ ನಮಗ್ಯಾಕೆ ನಾಳೆ ಜನರಲ್ ಬಾಡಿ ಕರೆದು ಬಿಡೋಣ" ಅಂತ ಹೇಳಿದರು. ಅದಕ್ಕೆ ಕಮಿಟಿ ಅಧ್ಯಕ್ಷ ಗಜಾನನ "ನೀವು ಸುಮ್ನಿದ್ಬಿಡಿ ಅಂತ ಜಯಣ್ಣ ಹೇಳಿದಾನೆ, ಅವನು ಕೋರ್ಟಿನಲ್ಲಿ ಕೇಸು ಹಾಕ್ತೀನಿ ಅಂತ ಮೇಲಿನಮನೆ ಮಹಾಬಲನ ಹತ್ರ ಸುಮ್ನೆ ಹೇಳ್ತಾನಂತೆ. ಮಹಾಬಲನ ಹ್ಯಾಗೂ ಅಲ್ಲಿ ಹೇಳ್ತಾನೆ, ಸುಮ್ನೆ ಉಗುರಿನಲ್ಲಿ ಹೋಗೋ ಕೆಲ್ಸಕ್ಕೆ ಕೊಡಲಿ ತಗೊಳ್ಳದು ಬ್ಯಾಡ ಎಂದಿದ್ದಾನೆ. ಮತ್ತೆ ಈಗ ಜನರಲ್ ಬಾಡಿ ಕರೆದ್ರೆ ಚಿಟ್ಟೆ ಪೇಪರ್‍ನಲ್ಲಿ ಬರೆದಿದ್ದಕ್ಕೆ ಕರೆದ್ರು ಅಂತ ರಾಘು ಮೆರಿತಾನೆ, ನಾವು ಇಂಥಾ ಸಾಚಾ ಲೆಕ್ಕಾಚಾರ ಇಟ್ರೂ ಹಾಗೆಲ್ಲಾ ಬರ್‍ದಿದಾನೆ, ಅದೇನು ಕಿಸಿತಾನೋ ನೋಡೋಣ. ಇಲ್ಲಿ ಎಲ್ಲಾದ್ರೂ ಬಂದ್ರೆ ವಾಚಾಮಗೋಚರ ಉಗಿಬೇಕು. ದಿನಾಲೂ ಮನೆ ಕೆಲ್ಸ ಬಿಟ್ಟು ಇಲ್ಲಿ ಜೀವ ತೇಯ್ದದಕ್ಕೆ ಒಂದು ಬೆಲೆ ಬೇಡ್ವಾ, ನಾವೇನು ನಮ್ಮ ಮನೆ ಉದ್ದಾರಕ್ಕಾಗಿ ಈ ಕೆಲ್ಸ ಮಾಡ್ತಾ ಇದೀವಾ ಏನೋ ಊರಿಗೆ ಒಳ್ಳೇದಾಗ್ಲಿ ಅಂತ ಮಾಡ್ತಾ ಇದೀವಿ " ಎಂದು ಹೇಳಿದ.

*********

ತಾನು ಬರೆದ ಸುದ್ದಿಯಿಂದ ದೇವಸ್ಥಾನದ ಮೇಲೆ ಭಾರಿ ಪರಿಣಾಮವಾಗಿರಬಹುದೆಂದು ಊಹಿಸಿ ರಾಘು ದೇವಸ್ಥಾನಕ್ಕೆ ಹೋದ. ಅಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ರುದ್ರ ಹೋಮಕ್ಕೆ ನೂರಾರು ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಮೂರ್ನಾಲ್ಕು ಪುರೋಹಿತರುಗಳು ಬಣ್ಣ ಬಣ್ಣದ ಮಡಿಯನ್ನುಟ್ಟು ಹೋಮದ ತಯಾರಿ ಆರಂಬಿಸಿದ್ದರು. ಕಮಿಟಿಯ ಕೆಲ ಸದಸ್ಯರು ಇವನನ್ನು ಕಂಡು ಬಾ ಬಾ ಎಂದು ಒಳಗೆ ಕರೆದು ಚಾ ಕೊಟ್ಟರು. ರುದ್ರ ಹೋಮಕ್ಕೆ ಆಗಮಿಸಿದ ಪುರೋಹಿತರು ತಯಾರಿ ನಡೆಸುತ್ತಾ,ನಿನ್ನೆ, ಮೊನ್ನೆ,ಮತ್ತು ಆಚೆ ಮೊನ್ನೆ ಎಲ್ಲೆಲ್ಲಿ ಎಷ್ಟು ದಕ್ಷಿಣೆ ಸಿಕ್ಕಿತು ಎನ್ನುವ ಹಾಗು ಇವತ್ತು ಕನಿಷ್ಟ ಐದು ನೂರು ರೂಪಾಯಿ ಗಿಟ್ಟಿಸಿಕೊಳ್ಳುವುದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಚಿಟ್ಟೆ ಪತ್ರಿಕೆಯ ಸಂಪಾದಕನ ಬಗ್ಗೆ ಆಕ್ರೋಶದಿಂದ ಮಾತನಾಡುತ್ತಿದ್ದರು. ವಾಸ್ತವವಾಗಿ ಅವರ ಅಂತರಂಗದಲ್ಲಿ ಹಾಗೆ ಇರಲಿಲ್ಲ. ಆದರೆ ಕಾರ್ಯಾಲಯದಲ್ಲಿರುವ ಕಮಿಟಿ ಸದಸ್ಯರು ತಮ್ಮ ಮಾತನ್ನು ಕೇಳಿಸಿಕೊಳ್ಳಲಿ ಎಂಬ ಇರಾದೆ ಅವರದಾಗಿತ್ತು. ಅಷ್ಟರಲ್ಲಿ ರಾಘು ಅಲ್ಲಿಗೆ ಬಂದ "ಓ ಸಂಪಾದಕರು ಬನ್ನಿ ಬನ್ನಿ" ಎಂದು ಪುರೋಹಿತರೊಬ್ಬರು ಹೇಳಿದರು."ರುದ್ರ ಹೋಮ ಜೋರಾಗಿದೆಯಾ? ರಾಘು ಕೇಳಿದ."ಸುಮಾರಾಗಿ ಇದೆಯಪ್ಪಾ ಇದರಲ್ಲಿ ನಮ್ದೇನು ಎಲ್ಲಾ ಊರಿನ ಒಳ್ಳೆಯದಕ್ಕೆ" ಎಂದರು ಪುರೋಹಿತರು. ಭಕ್ತರೆಲ್ಲಾ ಶ್ರದ್ಧೆಯಿಂದ ಭಾವಪರವಶರಾಗಿ ಕೈಮುಗಿದು ನಿಂತು "ನನಗೆ ಒಳ್ಳೆಯದನ್ನು ಮಾಡು ತಂದೆ" ಎಂದು ಕೇಳಿಕೊಳ್ಳುತ್ತಿದ್ದರು. ಮುಂದಿನವಾರದ ಚಿಟ್ಟೆ ಪತ್ರಿಕೆಯ ಸಂಪಾದಕೀಯದಲ್ಲಿ "ಹಸಿದ ಹುಲಿಗಳು ಹಾಗು ಅಮಾಯಕ ಭಕ್ತರು" ಎಂಬ ವಿಚಾರವಾಗಿ ರಾಘುವಿನ ದೃಷ್ಟಿಯಲ್ಲಿ ಮಾರ್ಮಿಕವಾಗಿ ಬರೆಯಲಾಗಿತ್ತು. ಜಯಣ್ಣ ಮತ್ತು ಶಾಮು ಹೊಸತಾಗಿ ಗುರುಮಠದ ವಿಷಯದಲ್ಲಿ ತಕರಾರು ಎತ್ತಲು ತಯಾರಿ ನಡೆಸಿದ್ದರು. ಊರಿನ ಉಳಿದ ಆಸ್ತಿಕ ನಾಗರೀಕರು "ಈ ನಾಸ್ತಿಕ ಮುಂಡೇವಕ್ಕೆ ಈಶ್ವರ ಈ ತರಹ ಬುದ್ದಿ ಕೊಟ್ಟು ತನ್ನ ಸೇವೆ ಮಾಡಿಸ್ಕೋತಾ ಇದಾನಲ್ಲ" ಅಂತ ಆಡಿಕೊಳ್ಳುತ್ತಿದ್ದರು. ಆಡಳಿತ ಕಮಿಟಿಯವರು ಚಿಟ್ಟೆ ಪತ್ರಿಕೆಯನ್ನು ಆಡಿಕೊಳ್ಳುತ್ತಾ ಕಾಣಿಕೆ ಡಬ್ಬಿಯ ದುಡ್ಡು ಎಣಿಸುವುದರಲ್ಲಿ ಮಗ್ನರಾಗಿದ್ದರು.ಅರ್ಚಕರು ಯಾವುದಕ್ಕೂ ಒಳ್ಳೆಯದು ಎಂದು ದೂರದ ಭಕ್ತರು ಬಂದಾಗ ಅವರ ಬಳಿ ನಿಮ್ಮೂರಿನ ದೇವಸ್ಥಾನದಲ್ಲಿ ಪೂಜೆಗೆ ಜನ ಇದಾರಾ. ಎಂದು ಕೇಳುತ್ತಿದ್ದರು. ಉಳಿದ ಪುರೋಹಿತರು ಸರ್ವೇ ಜನಾಹ ಸುಖಿನೋ ಭವಂತು, ಲೋಕಕಲ್ಯಾಣಾರ್ಥೆ, ಆತ್ಮ ಪ್ರೀತ್ಯರ್ಥೆ ,ಯತ್ ಕಿಂಚಿತ್ ..." ಮಂತ್ರ ಹೇಳಿ ನೂರು ರುಪಾಯಿ ದಕ್ಷಿಣೆ ಇಡು ಎನ್ನುತ್ತಿದ್ದರು. ಹಾಗೂ ಎಲ್ಲರೂ ನಾವು ಮಾಡುತ್ತಿರುವುದು ಸ್ವಾರ್ಥಕ್ಕೆ ಅಲ್ಲ ಊರಿನ ಒಳ್ಳೆಯದಕ್ಕೆ ಎಂದು ಹೇಳುತ್ತಿದ್ದರು. ಮಹಾಬಲ ಮತ್ತು ತಿರುಪತಿ "ಒಟ್ಟಿನಲ್ಲಿ ಊರಿಗೆ ಒಳ್ಳೆದಾದರೆ ಆಯಿತು ಯಾರು ಮಾಡಿದ್ರೂ ಸೈ" ಎಂದು ಎಲ್ಲರ ಬಳಿಯೂ ಒಳ್ಳೆಯಯವರಾಗುವ ಪ್ರಯತ್ನ ಮುಂದುವರೆಸಿದ್ದರು. ಈಶ್ವರ ದೇವಸ್ಥಾನದ ಗಂಟೆ ಮಾತ್ರ ಭಕ್ತರ ಕೈಯಿಂದ ಬಲವಾಗಿ ಏಟು ತಿಂದರೂ ಅವರು ಗಿರಕಿ ಹೊಡೆದು ಮುಗಿಸುವವರೆಗೂ ಲಯಬದ್ಧವಾದ ನೀನಾದವನ್ನು ಸುಶ್ರಾವ್ಯವಾಗಿ ಮೊಳಗಿಸುತ್ತಿತ್ತು. ಆದರೆ ಗಂಟೆ ಮಾತ್ರ ನಾನು ಊರಿಗೆ ಒಳ್ಳೆಯದಾಗಲಿ ಅಂತ ಕಷ್ಟಪಡ್ತಾ ಇದೀನಿ ಅಂತ ಅನ್ಕೊಂಡಿರಲಿಲ್ಲ. ಆದರೂ ಗಂಟೆಯ ನಾದದಿಂದ ಊರಿಗೆ ಒಳ್ಳೆಯದಾಗುತ್ತಿತ್ತು.

********************************************-೯೩೪೨೨೫೩೨೪೦

No comments: