Friday, June 12, 2009

ಅದೊಂದು ಗುಟ್ಟು

ಅರ್ಥವಾಯಿತೆಂದರೆ ಜೀವನ "ಜಿಂಗಲಾಲ" ಅಂತ ಅರ್ಥ. ಅವನು ಹಾಗೆ ಇವಳು ಹೀಗೆ ಅದು ಸರಿ ಇಲ್ಲ ಇದು ಉದ್ದ ಮತ್ತೊಂದು ಗಿಡ್ದ ಮಗದೊಂದು ಉದ್ದ ಎಂಬಂತಹ ಗೊಣಗಾಟದ ಮೂಲ. ಆ ಮೂಲ ಎಲ್ಲಿದೆ ? ಎಂಬ ಗುಟ್ಟು ಅರ್ಥವಾಯಿತೆಂದರೆ ತನ್ಮೂಲಕ ನಿತ್ಯ ಬಯಸುತ್ತಿರುವ ಶಾಂತಿ ಎಂಬುದು ಮನಸ್ಸಿಗೆ ದೊರಕಿತು ಎಂದರೆ ಅವರ ಜೀವನ ಜಿಂಗಲಾಲ. ಅದನ್ನು ಅರ್ಥಮಾಡಿಸಿಕೊಡಲು ಸಂತರು ದಾರ್ಶನಿಕರು ಬಾಬಾಗಳು ಕೂಪಿಟ್ಟುಕೊಂಡು ಲಾಗಾಯ್ತಿನಿಂದ ಕುಂತಿರುತ್ತಾರೆ. ಇಂದೂ ಹಾಗೆಯೇ ಮುಂದೂ ಹಾಗೆಯೇ. ಒಬ್ಬರು ಮೂರ್ತಿ ಪೂಜೆ ಮಾಡಿರಿ ಎಂದರು ಮತ್ತೊಬ್ಬರು ಮೂರ್ತಿ ಪೂಜೆ ಅವಶ್ಯಕತೆ ಇಲ್ಲ ಎಂದರು ಮಗದೊಬ್ಬರು ಹತ್ತಾರು ಮೂರ್ತಿ ಮಡಗಿ ಎಂದರು ಹೀಗೆ ನಾನಾ ಅವತಾರ ಎತ್ತಿದರು. ಎಲ್ಲವೂ ಇರುವುದ ಬಿಟ್ಟು ಇರದುದರೆಡೆಗೆ ತುಡಿವ ಜೀವನ ತೋರಿಸುವವರೆ. ಇರಲಿ ಅದು ಅವರವ ನಂಬಿಕೆಗೆ ಬಿಟ್ಟ ವಿಚಾರ. ನಾವು ಗುಟ್ಟಿನ ಬಗ್ಗೆ ನೋಡೋಣ.
ಮೊನ್ನೆ ನಾನು ಹೊಸತಾಗಿ ಕೊಂಡ ಮಾರುತಿ ೮೦೦ ನಲ್ಲಿ ಲಹರಿಯಲ್ಲಿ ಡ್ರೈವ್ ಮಾಡಿಕೊಂಡು ಬರುತ್ತಾ ಇದ್ದೆ. ಅಷ್ಟೊತ್ತಿಗೆ ಮೊಬೈಲ್ ರಿಂಗಣಿಸಿತು. ಗಮನ ಅತ್ತ ಹರಿಯಿತು. ನೇರವಾದ ರಸ್ತೆಯಾಗಿದ್ದರಿಂದ ಮೊಬೈಲ್ ಯಾರಿದ್ದಿರಬಹುದೆಂದು ನೋಡುತ್ತಾ ಸಾಗಿದೆ. ಹಿಂದಿನಿಂದ ಒಂದು ಕೆ ಎಸ್ ಆರ್ ಟಿಸಿ ಬಸ್ಸು ಬರುತ್ತಿತ್ತು. ನನ್ನ ಗಮನಕ್ಕೆ ಬರಲಿಲ್ಲ. ಆತ ಸ್ವಲ್ಪ ದೂರ ನನ್ನ ಹಿಂದೆಯೇ ಬಂದ. ಅವನಿಗೆ ಹಾರನ್ ಇರಲಿಲ್ಲವೆಂದೆನಿಸುತ್ತದೆ ಹಾಗಾಗಿ ಬಜಾಯಿಸಲಿಲ್ಲ. ಇರಲಿ ಅದು ಅವನ ತಪ್ಪಲ್ಲ ಬಿಡಿ. ನನಗೆ ಬಸ್ಸಿನ ಸದ್ದು ಕೇಳಿ ಎಡಬದಿಗೆ ಹೊರಳಿದೆ. ನನ್ನನ್ನು ದಾಟಿಕೊಂಡ ಹೋದ ಬಸ್ಸು ರಸ್ತೆಗೆ ಪೂರ್ಣ ಅಡ್ದವಾಗಿ ನಿಂತಿತು. ಇದೇನಪ್ಪಾ ಅಂತ ನಾನೂ ಅದರ ಹಿಂದೆ ಕಾರು ನಿಲ್ಲಿಸಿದೆ. ಆತ ಯಾಕೆ ಹಾಗೆ ನಿಲ್ಲಿಸಿದ್ದು ಅಂತ ನನಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಬೈಕ್ ಸವಾರನೊಬ್ಬ ಬಂದವ ನನ್ನ ಬಳಿ" ನೀವು ಅವನಿಗೆ ಸೈಡ್ ಕೊಡಲಿಲ್ಲವಂತೆ ಹಾಗಾಗಿ ಆತ ಹಾಗೆ ನಿಲ್ಲಿಸಿದ್ದಾನೆ" ಎಂದ ಓಹೋ ಹೀಗೋ ಸಮಾಚಾರ ಅಂತ ನಾನೂ ಸುಮ್ಮನೆ ನಿಲ್ಲಿಸಿಕೊಂಡೆ. ಡ್ರೈವರ್ ಇಳಿದುಬಂದ. ಹರೆಯದವ ಆತ ಬಹುಶಃ ಅಷ್ಟೇ ಕೆಲಸಕ್ಕೆ ಸೇರಿದ್ದಿರಬೇಕು ಬಹಳ ಉಮ್ಮೇದಿನಲ್ಲಿದ್ದ. ಕಾರಿನ ಬಳಿ ಬಂದವನು ಲಾಟ್ ಪೂಟ್ ಅಂತ ಕೂಗಲು ಶುರುಮಾಡಿದ. ನನಗೆ ಧಾವಂತ ಇರಲಿಲ್ಲ. ನಾನು ಒಂದೂ ಮಾತಾಡಲಿಲ್ಲ ಅವನ ಬಳಿ ಮಾತನಾಡುವ ಅಗತ್ಯವೂ ಇರಲಿಲ್ಲ ಅವಶ್ಯಕತೆಯೂ ಇರಲಿಲ್ಲ ಮತ್ತು ಮಾತನಾಡಿ ಪ್ರಯೋಜನವೂ ಇರಲಿಲ್ಲ. ಆತ ಒಬ್ಬನೇ ಏನೇನೋ ಕೂಗುತ್ತಿದ್ದ ನನ್ನ ತಲೆಯೊಳಗೆ ಅದು ಹೋಗುತ್ತಿರಲಿಲ್ಲ ನಾನು ಗದ್ದೆಯಲ್ಲಿ ಗದ್ದೆ ಹೂಟಿ ಮಾಡುತ್ತಿದ್ದ ರೈತನೊಬ್ಬನ ಕೆಲಸವನ್ನು ನೋಡತೊಡಗಿದ್ದೆ. ನನ್ನ ಈ ವರ್ತನೆ ಆತನಿಗೆ ಅನಿರೀಕ್ಷಿತ ಆಗಿದ್ದಿರಬೇಕು. ಪಾಪ ಅವನ ಕೂಗಿಗೆ ಪ್ರತಿಕ್ರಿಯೆ ಬಾರದ್ದರಿಂದ ಒಂಥರಾ ಮರ್ಯಾದೆ ಹೋದವನಂತೆ ಆಡತೊಡಗಿದ. ನಾನು ಏನೂ ನಡದೇ ಇಲ್ಲವೇನೋ ಏಂಬಂತೆ ನಿಧಾನ ಕಾರು ಓಡಿಸಿಕೊಂಡು ಮುನ್ನಡೆದೆ. ಆತ ತಬ್ಬಿಬ್ಬಾಗಿ ತಬ್ಬಿಬ್ಬಾಗಿ ನೋಡುತ್ತಲೇ ಇದ್ದ. ಗೋಣಗಾಟ ಕೂಗಾಟ ಮುಂದುವರೆದಿತ್ತೋ ಏನೋ ನನಗೇ ಕೇಳಿಸಲಿಲ್ಲ.
ಇಷ್ಟೆಲ್ಲಾ ಓದಿದರಲ್ಲ ನಾನು ಆರಂಭದಲ್ಲಿ ಹೇಳಿದೆನಲ್ಲ "ಗುಟ್ಟು" ಅಂತ , ಅದು ಇಲ್ಲಿಯೇ ಇದೆ. ಪತ್ತೆಮಾಡಿಕೊಂಡು ಅನುಷ್ಠಾನಕ್ಕೆ ತಂದೀರಾದರೇ ನಿಮ್ಮ ಲೈಫೂ "ಜಿಂಗಲಾಲ".

5 comments:

shivu.k said...

ಇದು ನಿಜಕ್ಕೂ ""ಜಿಂಗಲಾಲ". ಆನುಭವ.

ಶಾಂತಲಾ ಭಂಡಿ (ಸನ್ನಿಧಿ) said...

ಕಣ್ ಮುಚ್ಚಿ ಬಿಡುವುದರೊಳಗೆ ಜಗತ್ತು ಬದಲಾಗುವುದೂ ಇಲ್ಲ, ಬದಲಾಯಿಸಲು ಯಾರಿಂದಲೂ ಸಾಧ್ಯವೂ ಇಲ್ಲ. ಇದ್ದುದನ್ನು ಇದ್ದ ಹಾಗೆಯೇ, ಬಂದುದನ್ನು ಬಂದ ಹಾಗೆಯೇ ಸ್ವೀಕರಿಸುತ್ತ ಸಾಗಬೇಕಷ್ಟೇ. ನಿಜ.
ಆದರೆ...
ಮತ್ತೊಬ್ಬರನ್ನು ಅಲಕ್ಷಿಸಿ ಅವಮಾನಿಸುವುದು ‘ಜಿಂಗಲಾಲ’ವೇ?
ಆ ಡ್ರೈವರನಿಗೆ ಉತ್ತರಿಸದ್ದು ನಿಮ್ಮ ಸಹನೆಯನ್ನು ನೀವು ಪರೀಕ್ಷಿಸಿಕೊಂಡ ರೀತಿಯೆಂಬುದು ಅವನಿಗೆ ಗೊತ್ತಾದರೆ ಸರಿ, ಇಲ್ಲವಾದರೆ? ನಿಮ್ಮ ಗುಟ್ಟು ನಿಮ್ಮೊಳಗೇ ಉಳಿಯುತ್ತದೆ.
ಜಗಳವಾಡದಿದ್ದರೂ ಸುಮ್ಮನೆ ಪ್ರೀತಿಯಿಂದ ಒಂದು ಮಾತನ್ನಾಡಿದ್ದಿದ್ದರೆ?
ಆಯಾಮಟ್ಟದ ಜನರಿಗೆ ಅರ್ಥವಾಗುವ ಹಾಗೆ ಮಾತನಾಡುವುದು ನಮಗೆ ಬಿಟ್ಟ ವಿಷಯ. ನಿಜ.
ಆದರೆ...
ಮೌನವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಎಲ್ಲರೊಳಗೂ ಇರಬೇಕಲ್ಲ? ಮೌನಕ್ಕಿಂತ ಮಾತಿಗೇ ಹೆಚ್ಚು ಬೆಲೆಕೊಡುವ ಜನರೇ ಹೆಚ್ಚಿದ್ದಾರೆ ಪ್ರಪಂಚದಲ್ಲಿ. ಮೌನಕ್ಕಿರುವ ಸಾವಿರ ಅರ್ಥವನ್ನು ಹುಡುಕಿಕೊಳ್ಳುವಷ್ಟು ಸಮಯ ಮತ್ತು ಸಂಯಮ ಎರಡೂ ಜನರಲ್ಲಿ ಇಲ್ಲ ಎಂಬುದೂ ನಿಜವಷ್ಟೇ. ಎಲ್ಲ ಜನರೊಂದಿಗೂ ಒಂದೇ ರೀತಿಯ ವರ್ತನೆ ‘ಜಿಂಗಲಾಲ’ವಲ್ಲ. ಲೇಖನಕ್ಕಿಂತ ಉದ್ದ ಪ್ರತಿಕ್ರಿಯೆಯಾದೀತು. ಇನ್ನು ಮೌನವಾಗುತ್ತೇನೆ.

Unknown said...

ಶಾಂತಲಾ

ಅಲಕ್ಷ್ಯ ಅವಮಾನ ಅಲ್ಲ. ಹಾಗೆ ತಿಳ್ಕಂಡರೆ ಒಮ್ಮೊಮ್ಮೆ ಲಕ್ಶ್ಯವೂ ಅವಮಾನ ಆಗ್ತು.
ಪ್ರಪಂಚ ಬದಲಾವಣೆ ಮುಂತಾದ್ದು ಬಯಸದು ನಮ್ಮ ಡ್ಯೂಟಿ ಅಲ್ಲ.
ಆದರೂ ನಿಂಗೂ ಗುಟ್ಟು ಅರ್ಥ ಆಕ್ತಾ ಇದ್ದು ಅನ್ಕಂಡಿ.

ತ್ಯಾಂಕ್ಸ್ ಒಳ್ಳೆ ಕಾಮೆಂಟಿಗೆ

Unknown said...

ಧನ್ಯವಾದಗಳು ಶಿವು

ಬಾಲು said...

gingalaala baraha, navu galu idannu yathavath anusarisutta iddeve.
jeevana ondu reethiya gingaa laala aagide! :)