Tuesday, July 7, 2009

ಅನ್ನದಾತೋ ಸುಖೀ ಭವ


ವರುಣ ತಡವಾಗಿಬಂದ ಹಾಗಾಗಿ ನಮ್ಮೂರ ಧೀರೆಯರು ಈ ವರ್ಷ ತಡವಾಗಿ ಕೆಸರಿಗೆ ಇಳಿದಿದ್ದಾರೆ. ಕೈಕೆಸರಾದರೆ ಬಾಯಿ ಮೊಸರಂತೆ ಎಂಬ ಗಾದೆ ಸತ್ಯ ಇರಬಹುದು. ಆದರೆ ಇವರಿಗೆ ಅದು ಅನ್ವಯ ಆಗೋದು ಯಾವಾಗ ಅಂಬ ಪ್ರಶ್ನೆ ನನಗೆ ಯಾವಾಗಲೂ ಕಾಡುತ್ತಿರುತ್ತದೆ. ವೈಟ್ ಕಾಲರ್ ಜನ ಎಂಬ ಮನುಷ್ಯರಿಗೆ ಮೊಸರುಣಿಸಲು ಜೀವಮಾನಪೂರ್ತಿ ಕೈಕೆಸರು ಮಾಡಿಕೊಳ್ಳುವ ಈ ರೈತರುಗಳು ಮಹಾನ್ ಎಂಬುದು ನನ್ನ ವೈಯಕ್ತಿಕ ಅಭಿಮತ. ಬಹುಪಾಲು ಜನರು ಒಂದೇ ಒಂದು ಹನಿ ಕಾಲಿನ ಮೇಲೆ ಬಿದ್ದರೂ ಡೆಟ್ಟಾಲ್ ಹಾಕಿ ಗಂಟೆಗಟ್ಟಲೆ ತೊಳೆದು ಅದೇನೋ ಮಹಾನ್ ರೋಗ ಬಂದುಬಿಟ್ಟಿತೇನೋ ಎಂದು ಹಲುಬುವ ಮಂದಿಯ ಹೊಟ್ಟೆ ತಂಪಾಗಿರಿಸಲು ಇವರು ಕೆಸರಿನಲ್ಲಿ ವರ್ಷಾನುಗಟ್ಟಲೆಯಿಂದ ಮುಳುಗೇಳುತ್ತಿದ್ದಾರೆ. ದೇಶದ ಆಹಾರ ಕಣಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಕಾಲವಾಗುತ್ತಿದ್ದಾರೆ. ಅವರುಗಳಿಗೆ ನಮ್ಮ ಶುಭ ಹಾರೈಕೆ ಬೇಕು. ನಾವಿಲ್ಲದಿದ್ದರೆ ಅವರು ಇರಬಲ್ಲರು ಆದರೆ ಅವರಿಲ್ಲದಿದ್ದರೆ ನಮ್ಮನ್ನು ಊಹಿಸಿಕೊಳ್ಳಲ್ಲೂ ಸಾದ್ಯವಾಗದು.
ಅನ್ನದಾತೋ ಸುಖೀ ಭವ. ಅಂತ ಒಂದು ಸಣ್ಣ ಹಾರೈಕೆಯನ್ನಾದರೂ ಹಾಕುವ ತಾಳ್ಮೆ ಸಮಯ ನಮ್ಮದಾಗಲಿ.

2 comments:

Sushrutha Dodderi said...

ಫೋಟೋ ಚಂದಿದ್ದು.

ಮೃತ್ಯುಂಜಯ ಹೊಸಮನೆ said...

ನಾವಿಲ್ಲದಿದ್ದರೆ ಅವರಿರಬಲ್ಲರು,ಅವರಿರದಿದ್ದರೆ ನಮ್ಮನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನೀನು ಹೇಳುವುದು ನೂರಕ್ಕೆ ನೂರು ಸರಿ. ಆದರಿದು ಯಾರಿಗೆ ಗೊತ್ತು? ತಿಂಗಳಿಗೆ ಲಕ್ಷ ಸಂಬಳ ಪಡೆವ ಸರಕಾರಿನೌಕರರು ಒಂದು ತಿಂಗಳು ನಾಲ್ಕು ದಿನ ಸಂಬಳ ತಡೆದು ಕೊಡ್ತೇವೆ ಅಂದ್ರೆ ಮುಷ್ಕರ ಹೂಡ್ತಾರೆ. ಕೂಡಲೇ ನಮ್ಮ ಸರಕಾರ ಅವರ ಬೇಡಿಕೆ ಈಡೇರಿಸುತ್ತೆ. ಆದರೆ ಒಂದು ವರ್ಷದ ಬೆಳೆಯೇ ಬಾರದ ರೈತನ ಬಗ್ಗೆ ಗಮನವೇ ಕೊಡಲ್ಲ. ಇಷ್ಟಾದರೂ ರೈತ ಗೊಣಗದೆ ತನ್ನ ಕಾಯಕ ಮಾಡುತ್ತಾನಲ್ಲ, ಯಾಕಿರಬಹುದು? ಬಹುಶಃ ಅದು ಅವನಿಗೆ ಬದುಕೇ ಆಗಿದೆ;ಸರಕಾರಿ ನೌಕರರಿಗೆ ಅವರ ನೌಕರಿ ಅವರ ಬದುಕಲ್ಲ. ರೈತನಿಗೆ ದುಡಿಮೆ ಚರ್ಮದ ಹಾಗೆ, ಉಳಿದವರಿಗೆ ಉಟ್ಟ ಬಟ್ಟೆಯ ಹಾಗೆ.