Monday, July 19, 2010

ಭತ್ತವ ಬಿತ್ತಿ ಚಿತ್ರವ ಬೆಳೆದು


ಜಪಾನ್ ಎಂಬ ದೇಶದ ಹೆಸರು ಕೇಳಿದ ತಕ್ಷಣ ನೆನಪು ಮೂಡುವುದು ತಂತ್ರಜ್ಞಾನದ್ದು. ಎರಡನೇ ಮಹಾಯುದ್ದಕಾಲದಲ್ಲಿ ನಡೆದ ಧಾಳಿಯ ತೀವ್ರತೆ ಎಷ್ಟಿತ್ತೆಂದರೆ ಜಪಾನ್ ಇನ್ನು ಶತಮಾನಗಳ ಕಾಲ ಮುಂದೆಬಾರದು ಎನ್ನುವಂತಿತ್ತು. ಆದರೆ ಪ್ರಪಂಚದ ನಿರೀಕ್ಷೆ ಹುಸಿಯಾಯಿತು ಕೆಲ ದಶಕಗಳಲ್ಲಿ ಜಪಾನ್ ಮೈ ಕೊಡವಿಕೊಂಡು ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ವಿರಾಜಮಾನವಾಯಿತು. ಅಷ್ಟೊಂದು ವೇಗದಲ್ಲಿ ಜಪಾನ್ ಪುಟಿದೇಳಲು ಕಾರಣ ಅಲ್ಲಿಯ ಜನರ ಆತ್ಮಸ್ಥೈರ್ಯ ಬುದ್ಧಿಮತ್ತೆ ಎಂಬುದು ನಿಜವಾದರೂ ಅವರು ತೊಡಗಿಕೊಳ್ಳುವ ಪರಿ ಅಂತಹದ್ದು ಎನ್ನುವುದು ಸತ್ಯ. ಮಾಡುವ ಕೆಲಸ ಯಾವುದಾದರೂ ಆಗಲಿ ಅಲ್ಲಿನ ತನ್ಮಯತೆ, ವಿಶಿಷ್ಠ ದೃಷ್ಟಿಕೋನ ಜಪಾನ್ ನ್ನು ಮೇಲಕ್ಕೇರಿಸಿದೆ. ಅದಕ್ಕೊಂದು ಉದಾಹರಣೆ ಈ ಚಿತ್ರಗಳು.
ಭತ್ತವ ಬಿತ್ತಿ ಅಕ್ಕಿಯ ರೂಪದ ಪ್ರತಿಫಲವನ್ನು ಎಲ್ಲಾ ದೇಶಗಳಲ್ಲಿಯೂ ಪಡೆಯುತ್ತಾರೆ. ಆದರೆ ಭತ್ತದ ಸಸಿಯಮೂಲಕ ತಮ್ಮ ಕಲೆಯನ್ನು ಅನಾವರಣಗೊಳಿಸುವ ಕೆಲಸ ಒಲಿದದ್ದು ಜಪಾನಿಯರಿಗೆ ಮಾತ್ರಾ. ವಿವಿಧ ಬಣ್ಣದ ವಿವಿಧ ಜಾತಿಯ ಭತ್ತವನ್ನು ಬಳಸಿ ತಮ್ಮ ಬೃಹತ್ ಹೊಲದಲ್ಲಿ ಭತ್ತದ ಸಸಿಗಳ ಮೂಲಕ ಚಿತ್ರಗಳನ್ನು ಹರಡಿಬಿಡುತ್ತಾರೆ ಜಪಾನ್ ರೈತರು. ಸಸಿಗಳು ಬೆಳೆದ ನಂತರ ರೈತರು ಬಯಸಿದ್ದ ಚಿತ್ರಗಳಾಗಿ ಅವು ಮಾರ್ಪಡುತ್ತವೆ. ನೆಪೋಲಿಯನ್‌ನ ಭಾವಚಿತ್ರ, ಕುದುರೆ ಸವಾರನ ಚಿತ್ರ ಮುಂತಾದವುಗಳನ್ನು ಭತ್ತದ ಸಸಿಗಳ ಮೂಲಕ ನಿರ್ಮಿಸಿದ ಜಪಾನ್ ನ ಇಂಕಾದೇತ್, ಯೊನೆಜೇವಾ, ಮುಂತಾದ ಊರಿನ ಪ್ರಮುಖ ಆಕರ್ಷಣೆ ಈ ಚಿತ್ರಗಳದ್ದು. ಇಲ್ಲಿ ಕೃತಕ ಬಣ್ಣಗಳ ಬಳಕೆಯಿಲ್ಲ. ಎಲ್ಲವೂ ಪ್ರಕೃತಿಯ ಕೊಡುಗೆಯೇ. ವಿವಿಧ ತಳಿಗಳ ಭತ್ತದ ತಳಿಗಳನ್ನು ಈ ಚಿತ್ರಗಳಿಗಾಗಿಯೇ ಕಾಪಾಡಿಕೊಂಡು ಬರಲಾಗುತ್ತಿದೆ. ಭತ್ತ ಬಿತ್ತಿದ ನಂತರ ಸುಮಾರು ಒಂದೆರಡು ತಿಂಗಳುಗಳ ಅಂದರೆ ಅಗಸ್ಟ್ ಸಪ್ಟೆಂಬರ್ ಗಳಲ್ಲಿ ಆಕಾಶದಿಂದ ಅಥವಾ ಎತ್ತರದ ಪ್ರದೇಶದಿಂದ ಅದ್ಬುತವಾಗಿ ಕಾಣುವ ಈಚಿತ್ರವನ್ನು ನೋಡಲು ಪ್ರತೀ ವರ್ಷ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.
೧೯೯೩ ರಲ್ಲಿ ಹೀಗೆ ಭತ್ತದ ಗದ್ದೆಗಲಲ್ಲಿ ಸಣ್ಣ ಪ್ರಮಾಣದಲ್ಲಿ ಸಹಜವಾದ ಚಿತ್ರ ಬಿಡಿಸುವ ಕಲೆ ರೈತರ ಖುಷಿಗಾಗಿ ಆರಂಭವಾಯಿತು. ನಂತರದ ದಿನಗಳಲ್ಲಿ ತಂತ್ರಂಜ್ಞರ ಹೆಚ್ಚಿನ ಆಸಕ್ತಿಯಿಂದಾಗಿ ಇದರ ವ್ಯಾಪ್ತಿ ವಿಸ್ತರಿಸುತ್ತಾ ಸಾಗಿತು. ೨೦೦೫ ರ ನಂತರವಂತೂ ಭತ್ತದ ಗದ್ದೆಯ ಈ ಕಲೆ ಜಪಾನ್ ದೇಶದ ಹಲವೆಡೆ ಆವರಿಸಿತು. ಇದರ ಸಿದ್ಧತೆಗಾಗಿ ಹಳ್ಳಿಗಳಲ್ಲಿ ಜನ ಸಭೆ ಸೇರಿ ತೀರ್ಮಾನ ಕಗೊಳ್ಳುವಮಟ್ಟಿಗೆ ಬೆಳೆದು ನಿಂತಿತು. ಭೂಮಾಲಿಕರು ಹಾಗೂ ಈ ತರಹ ಚಿತ್ರಬಿಡಿಸುವ ಕಲಾವಿದರ ನಡುವೆ ಒಪ್ಪಂದಗಳು ಏರ್ಪಟ್ಟು ವಿವಿಧ ಬಗೆಯ ಚಿತ್ರಗಳು ಗದ್ದೆಗಳಲ್ಲಿ ಮೂಡತೊಡಗಿದವು. ತನ್ಮೂಲಕ ರೈತರಿಗೆ ಪ್ರವಾಸಿಗರಿಂದ ಉಪ ಆದಾಯವೊಂದು ಬರುವಂತಾಯಿತು. ಮಾಡುವ ಕೆಲಸದಲ್ಲಿ ವೈವಿಧ್ಯವನ್ನು ಗುರುತಿಸುವ ಮನಸ್ಥಿತಿಯಿದ್ದರೆ ಏನನ್ನೂ ಸಾಧಿಸಿ ಫಲ ಕಾಣಬಹುದು ಎನ್ನುವುದಕ್ಕೆ ಜಪಾನ್ ರೈತರ ಈ ಭತ್ತದ ಗದ್ದೆಗಳು ಸಾಕ್ಷಿಯಾಗಿನಿಂತಿವೆ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

2 comments:

ಪ್ರಗತಿ ಹೆಗಡೆ said...

ಸಖತ್ ಆಗಿದೆ ಸರ್...
ತಲೆ ಇದ್ರೆ ಕಲೆ ಮೂಡಿಸಬಹುದು ಅನ್ನೋದಕ್ಕೆ ಚೆಂದದ ಉದಾಹರಣೆ...

ಸೀತಾರಾಮ. ಕೆ. / SITARAM.K said...

nice information.
Really the great struggle of Japanese to come back in bigway after 2nd world war