Tuesday, August 31, 2010

ಒಂದು ಜೇನಿನ ಹಿಂದೆ


ಪುಸ್ತಕ ತಂದ ಆಸೆ
ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ತಲೆಬರಹ ಹೊತ್ತ ಪುಸ್ತಕ ನನಗೆ ಓದಲು ಸಿಗುವಾಗ ಜೋರು ಮಳೆಗಾಲ. ಕಾಗೆಯೂ ಹಾರಾಡಲಾರದಷ್ಟು ಮಳೆ ಸುರಿಯುತ್ತಿದ್ದ ಒಂದುದಿನ ಮಾಡಲು ಯಾವ ಕೆಲಸವೂ ಇಲ್ಲದ್ದರಿಂದ ಹಳೆಯ ಟ್ರಂಕು ಹುಡುಕುತ್ತಿದ್ದೆ. ಹಳೆ ಕಸ್ತೂರಿ, ತುಷಾರ, ಮಯೂರಗಳ ನಡುವೆ ಆ ಪುಸ್ತಕ ಸಿಕ್ಕಿತು. ಅದು ಪ್ರಾಯಶಃ ನನ್ನ ಅಪ್ಪಯ್ಯ ಪ್ರಾಯದ ಕಾಲದಲ್ಲಿ ಕೊಂಡುತಂದ ಪುಸ್ತಕ ಇದ್ದಿರಬೇಕು. ಅರ್ಧ ಮುಖಪುಟ ಹರಿದುಹೋಗಿ ಮಾಸಲು ಬಣ್ಣ ತಲುಪಿತ್ತು. ಆದರೂ ಮುಖಪುಟದಲ್ಲಿನ ಸ್ವಾವಲಂಬನೆಯ ಬದುಕು ಎನ್ನುವ ಶೀರ್ಷಿಕೆ ನನಗೆ ಆ ಪುಸ್ತಕದ ಮೇಲೆ ಕುತೂಹಲ ಇಮ್ಮಡಿಸುವಂತೆ ಮಾಡಿತ್ತು. ಸಾಮಾನ್ಯವಾಗಿ ಕೃಷಿಕರ ಜೀವನದಲ್ಲಿ ಹಣದ ವಿಚಾರದಲ್ಲಿ ಪರಾವಲಂಬಿ ಬದುಕೆ ಹೆಚ್ಚು. ಬೆಳೆ ಕೈಗೆ ಬಂದಾಗ ಹಣದ ವಹಿವಾಟು ಜೋರಾಗಿ ನಡೆದು ನಂತರ ಮುಂದಿನ ಬೆಳೆ ಕೈಗೆ ಸಿಗುವವರೆಗೂ ಆಮೆಗತಿಯಲ್ಲಿ ಸಾಗುವ ವಹಿವಾಟಿನ ಕಾರಣದಿಂದ ಬಹಳಷ್ಟು ಕೃಷಿಕರು ಇಂತಹ ಶಬ್ದಗಳಿಗೆ ಮರುಳಾಗುತ್ತಾರೆ. ನಾನೂ ಅದಕ್ಕೆ ಹೊರತಾಗಿರಲಿಲ್ಲ. ಹಣ ಸಿಕ್ಕ ಕೂಡಲೇ ಕಣ್ಣಿಗೆ ಕಂಡ ವಸ್ತುಗಳನ್ನು ಖರೀದಿಸಿ ಕೈ ಬರಿದಾಗಿಸಿಕೊಳ್ಳುವ ನನ್ನಂತಹ ಸ್ವಭಾವದವರನ್ನು ಶೀರ್ಷಿಕೆ ಇನ್ನಷ್ಟು ಬೇಗನೆ ಸೆಳೆಯುತ್ತಿತ್ತು. ಹಾಗಾಗಿ ಜೇನುತುಪ್ಪ ಮಾರಾಟಮಾಡಿ ಬರುವ ಹಣದಿಂದ ಬೇಕಾಗಿದ್ದನ್ನು ಮಾಡಬಹುದು ಎಂಬ ಆಸೆ ಇನ್ನಷ್ಟು ಹೆಚ್ಚಿನ ಆಸಕ್ತಿಗೆ ಕಾರಣವಾಗಿತ್ತು. ನಿರಂತರ ಆದಾಯ ಬರುತ್ತದೆ ಎಂದರೆ ಯಾರಿಗೆ ಆಸೆ ಇರುವುದಿಲ್ಲ?. ಹಾಗಾಗಿ ಹಠಕ್ಕೆ ಬಿದ್ದು ಪುಸ್ತಕ ಓದತೊಡಗಿದೆ. ಪುಸ್ತಕ ಓದುತ್ತಾ ಹೋದಂತೆ ಜೇನಿನ ಪ್ರಪಂಚದ ಒಂದೊಂದೇ ಮಜಲು ಅರ್ಥವಾಗುತ್ತಾ ಹೋಯಿತು. ಜೇನುಹುಳದ ಜಾತಿ, ಅದರ ಸ್ವಭಾವ, ತುಪ್ಪಮಾಡುವ ಸಮಯ, ಜೇನುಗೂಡನ್ನು ಪತ್ತೆ ಮಾಡುವ ವಿಧಾನ, ಕಾಡಿನ ಪೊಟರೆಯಿಂದ ಮರದಪೆಟ್ಟಿಗೆಗೆ ಜೇನನ್ನು ಸೇರಿಸುವ ರೀತಿ ಹೀಗೆ ಒಂದೊಂದನ್ನೂ ಸವಿವರವಾಗಿ ಪುಸ್ತಕದಲ್ಲಿ ಹೇಳಲಾಗಿತ್ತು. ಮಧ್ಯದಲ್ಲಿ ಕೆಲವು ಪುಟಗಳು ಹರಿದು ಹೋಗಿತ್ತಾದರೂ ಆದರ ಹಿಂದಿನ ಹಾಗು ಮುಂದಿನ ಪುಟಗಳ ಆಧಾರದ ಮೇಲೆ ವಿಷಯವನ್ನು ತೂಗಿಸಿಕೊಂಡು ಅರ್ಥಮಾಡಿಕೊಳ್ಳಬಹುದಿತ್ತು.
ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ಪುಸ್ತಕ ನನಗೆ ಎಷ್ಟರ ಮಟ್ಟಿಗೆ ಹುಚ್ಚು ಹಚ್ಚಿತ್ತು ಎಂದರೆ ನಾನು ಹತ್ತೆಂಟು ಪೆಟ್ಟಿಗೆಯಲ್ಲಿ ಜೇನು ಸಾಕಿದಂತೆ, ಡಬ್ಬಗಟ್ಟಲೆ ತುಪ್ಪ ತೆಗೆದು ಮಾರಾಟಮಾಡಿದಂತೆ, ಕೈತುಂಬಾ ಹಣ ಎಣಿಸಿದಂತೆ ಕನಸು ಕಾಣುತ್ತಿದ್ದೆ. ಕೆಲವು ರಾತ್ರಿ ಜೇನು.. ಜೇನು.. ಎಂದು ದೊಡ್ಡದಾಗಿ ನಿದ್ರೆಯಲ್ಲಿ ಕೂಗಿದ್ದೂ ಇತ್ತು. ಆದರೆ ಕನಸು ತಕ್ಷಣ ನನಸಾಗುವುದು ಸುಲಭವಾಗಿರಲಿಲ್ಲ. ಘೋರಾಕಾರದ ಮಳೆಗಾಲದ ಕಾರಣ ಜೇನು ಹಿಡಿಯಲು ಇದು ಸರಿಯಾದ ಸಮಯವಲ್ಲ ಎಂದು ಪುಸ್ತಕದಲ್ಲಿ ಇದ್ದದ್ದರಿಂದ ತತ್‌ಕ್ಷಣದಿಂದ ಪೆಟ್ಟಿಗೆಯಲ್ಲಿ ಜೇನು ಸಾಕುವ ನನ್ನ ಆಸೆಯನ್ನು ತಡೆಹಿಡಿಯಬೇಕಾಗಿತ್ತು. ಆಸೆ ತಡೆಹಿಡಿಯುವುದೆಂದರೆ ಸುಲಭದ ಮಾತಲ್ಲ. ಆಸೆಯೇ ಆಗದಿದ್ದಲ್ಲಿ ಅದರ ಪ್ರಶ್ನೆ ಬೇರೆ, ಆದರೆ ಈಗಾಗಲೆ ಆಸೆ ಹುಟ್ಟಿದ್ದರಿಂದ ಕುಳಿತಲ್ಲಿ ನಿಂತಲ್ಲಿ ಜೇನು ಕಾಡತೊಡಗಿತು. ಪುಸ್ತಕದಲ್ಲಿ ಮಳೆಗಾಲದಲ್ಲಿ ಜೇನುಗೂಡನ್ನು ಪತ್ತೆ ಮಾಡಲಾಗದ ಕಾರಣದಿಂದ ಪೆಟ್ಟಿಗೆಗೆ ಕೂಡುವುದಕ್ಕೆ ಸೂಕ್ತ ಸಮಯವಲ್ಲ ಎಂದಿರಬಹುದು, ಅಕಸ್ಮಾತ್ ಕಾಡಿನಲ್ಲಿ ಜೇನುಗೂಡು ಪತ್ತೆಯಾದರೆ ತೊಂದರೆಯೇನು ಇಲ್ಲವಲ್ಲ ಎಂಬ ಆಲೋಚನೆಯಿಂದಾಗಿ ಮನಸ್ಸಿನ ಮೂಲೆಯಲ್ಲಿ ಜೇನನ್ನು ಪೆಟ್ಟಿಗೆಯಲ್ಲಿ ಕೂಡುವ ಸಣ್ಣ ಆಸೆಯೊಂದು ಚಿಗುರಿತು.
* * * * *
ಚೆನ್ನ
ಸಂಪಳ್ಳಿಯ ಚೆನ್ನ ಕಾಡು ಉತ್ಪನ್ನವನ್ನು ಆಧರಿಸಿ ಜೀವನ ನಡೆಸುತ್ತಿದ್ದ. ಅವುಗಳಲ್ಲಿ ಅವನಿಗೆ ಜೇನುತುಪ್ಪ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತಿತ್ತು. ಚೆನ್ನ ಎನ್ನುವ ಹೆಸರನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಆತ ನೋಡಲು ಬಹಳ ಸುಂದರವಾಗಿರಬಹುದೆಂಬ ಕಲ್ಪನೆ ಸಹಜ. ಆದರೆ ಅವನ ಹೆಸರಿಗೂ ದೇಹದ ರೂಪಕ್ಕೂ ಹೋಲಿಕೆಯೇ ಇರಲಿಲ್ಲ. ಚೆನ್ನ ಗಡಿಬಿಡಿಯಲ್ಲಿ ನಿರ್ಮಿಸಿದ ಮಣ್ಣಿನಬೊಂಬೆಯಂತಿದ್ದ. ನೋಡಲು ಕುರೂಪಿಯ ಜತೆ ಸ್ವಲ್ಪ ಸೋಂಬೇರಿ. ಹಾಗಾಗಿ ಇಡೀ ಕೇರಿಯಲ್ಲಿ ಕೂಲಿ ಕೆಲಸ ಮಾಡದೆ ಜೀವನ ಸಾಗಿಸುತ್ತಿರುವ ಏಕೈಕ ವ್ಯಕ್ತಿ. ಅಪರೂಪಕ್ಕೊಮ್ಮೆ ಒಂದವೈತ್ತು ರೂಪಾಯಿ ಇದ್ರೆ ಕೊಡ್ರಿ, ನಾಡಿದ್ದು ಸೋಮಾರ ವಾಪಾಸು ಕೊಡ್ತೀನಿ ಎಂದು ಇಸಿದುಕೊಂಡು ವಾಪಾಸು ಕೊಡುವುದನ್ನು ಮರೆಯುತ್ತಿದ್ದ. ಹಾಗಂತ ಅವನು ಮರೆಗುಳಿಯೇನಲ್ಲ. ಅದು ಉದ್ದೇಶಪೂರ್ವಕ ಮರೆವು. ಅಕಸ್ಮಾತ್ ದುಡ್ಡು ಕೊಟ್ಟವರು ಚೆನ್ನ ಕೊಡಬೇಕಾದ ದುಡ್ಡಿನ ನೆನಪು ಮಾಡಿದರೆ, ಬಾಯಿಂದ ಸೊರ್ ಎಂದು ಗಾಳಿಯನ್ನು ಒಳಗೆಳೆದುಕೊಂಡು ವಿಚಿತ್ರ ಶಬ್ದ ಹೊರಡಿಸುತ್ತಾ ತೋ ಹೌದಲ್ರಿ, ನಂಗೆ ಮರ‍್ತೆ ಹೋಗಿತ್ತು. ಯಾವ್ದೋ ದುಡ್ಡು ಬರದೈತಿ ನಾಡಿದ್ದು ಕೊಡ್ತೀನಿ ಎನ್ನುವ ಹೊಚ್ಚಹೊಸ ಸುಳ್ಳು ಹೇಳುತ್ತಿದ್ದ. ಈ ಮೂರು ಗುಣಗಳನ್ನು ಹೊರತುಪಡಿಸಿದರೆ ಚೆನ್ನ ಮಿಕ್ಕೆಲ್ಲರಿಗಿಂತ ಸಾಚಾ. ಇತರರಂತೆ ಸಾರಾಯಿ, ಬೀಡಿ ಮುಂತಾದ ಯಾವ ದುಶ್ಚಟವೂ ಇಲ್ಲದ ಜನ. ಹಾಗಾಗಿ ಖರ್ಚಿಗೆ ಅಂತ ಹೆಚ್ಚಿಗೆ ಕಾಸು ಅವನಿಗೆ ಬೇಕಾಗುತ್ತಿರಲಿಲ್ಲ. ವರ್ಷಪೂರ್ತಿ ಕಾಡು ಉತ್ಪನ್ನವೇ ಅವನ ಮಟ್ಟದ ಜೀವನಕ್ಕೆ ಸಾಕಾಗುತ್ತಿತ್ತು. ಯಾವ ಯಾವ ಕಾಲದಲ್ಲಿ ಯಾವ ಜಾತಿಯ ಕಾಡು ಉತ್ಪನ್ನ ಸಿಗುತ್ತದೆ ಮತ್ತು ಅವುಗಳನ್ನು ಯಾರು ಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, ಕೊಳ್ಳುವವರು ಯಾವ ರೀತಿ ಮೋಸಮಾಡುತ್ತಾರೆ ಎನ್ನುವುದರವರೆಗೂ ಆತ ಪಳಗಿದ್ದ. ಜೇನುತುಪ್ಪ, ಉಪ್ಪಾಕೆ ಹಣ್ಣು, ವಾಟೆಕಾಯಿ, ಅಪ್ಪೆಮಿಡಿ, ಕಳಲೆಗಳನ್ನು ಸಂಗ್ರಹಿಸಿ, ಹವ್ಯಕಬ್ರಾಹ್ಮಣರೇ ಹೆಚ್ಚಾಗಿರುವ ಊರಿನಲ್ಲಿ ವ್ಯಾಪಾರಮಾಡಿ ಕೊಂಚ ಹಣ ಸಂಪಾದಿಸುತ್ತಿದ್ದ. ಮಿಕ್ಕಂತೆ, ಅಂಟುವಾಳಕಾಯಿ, ಸೀಗೆಕಾಯಿ, ಮುಂತಾದವುಗಳನ್ನು ತಾಳಗುಪ್ಪದ ಕಾಳಪ್ಪಶೆಟ್ರಿಗೆ ಮಾರುತ್ತಿದ್ದ. ಹಾಗೆ ಸಂಪಾದಿಸಿದ ಹಣದಲ್ಲಿ ಅರ್ಧವನ್ನು ಕುಮುಟಾಭಟ್ಟರ ಅಂಗಡಿಯಲ್ಲಿ ಕಾಮತ್ ಚೌಚೌ ತಿಂದು ಖಾಲಿ ಮಾಡಿದರೆ ಇನ್ನರ್ಧವನ್ನು ಮನೆಗೆ ಕೊಡುತ್ತಿದ್ದ. ಚೆನ್ನನ ಹೆಂಡತಿ ಮಗ ಇಬ್ಬರೂ ಕೂಲಿಗೆ ಹೋಗುತ್ತಿದ್ದುದರಿಂದ ಸಂಸಾರದ ಜವಾಬ್ದಾರಿಯಿಂದಲೂ ಅವನು ನುಣುಚಿಕೊಂಡಿದ್ದ. ಹಾಗಾಗಿ ಅವರಿಬ್ಬರ ಸಂಪಾದನೆಯಿಂದ ಸಾಮಾನ್ಯಮಟ್ಟದ ಜೀವನಕ್ಕೆ ತೊಂದರೆ ಇರಲಿಲ್ಲ.
ಚೆನ್ನನನ್ನು ಜತೆಯಲ್ಲಿ ಇಟ್ಟುಕೊಂಡರೆ ನನ್ನ ಜೇನು ಸಾಕಾಣಿಕಾ ಕೆಲಸಕ್ಕೆ ಸಹಾಯವಾದೀತೆಂದು ಅವನನ್ನು ಹುಡುಕುತ್ತಾ ಸಂಪಳ್ಳಿಗೆ ಹೊರಡಲನುವಾದೆ. ಬೆಳಿಗ್ಗೆ ಮುಂಚೆ ಹೋದರೆ ಮಾತ್ರ ಅವನು ಮನೆಯಲ್ಲಿ ಸಿಕ್ಕುತ್ತಾನೆ, ಇಲ್ಲದಿದ್ದರೆ ಆತ ಮತ್ತೆ ಸಿಗುವುದು ಸಾಯಂಕಾಲವೇ, ಹಾಗಾಗಿ ಬೇಗನೆ ಹೊರಟೆ.

ಹಿಡಿಯೋರು
ಮಲೆನಾಡಿನ ಕಾಡಿನಲ್ಲಿರುವ ಮಣ್ಣಿನಹುತ್ತದಲ್ಲಿ ಗೂಡುಮಾಡಿಕೊಂಡಿರುವ ಜೇನು ಮಳೆಗಾಲಕ್ಕೆ ಸ್ವಲ್ಪ ಮುಂಚೆ ಸಂಸಾರ ಸಮೇತ ಜಾಗ ಖಾಲಿಮಾಡಿಬಿಡುತ್ತವೆ. ಇಪ್ಪತ್ತು ಇಪ್ಪತ್ತೈದು ಕಿಲೋಮೀಟರ್ ದೂರದ ಮಳೆ ಸ್ವಲ್ಪ ಕಡಿಮೆಯಿರುವ ಅರೆಮಲೆನಾಡಿಗೆ ತಾತ್ಕಾಲಿಕ ವಲಸೆ ಹೋಗಿರುತ್ತವೆ. ಮಲೆನಾಡಿನ ಅತಿಯಾದ ಮಳೆ ಅವುಗಳಿಗೆ ಆಹಾರದ ಕೊರತೆಯನ್ನು ತಂದಿಡುವುದರ ಜೊತೆಗೆ ಮಣ್ಣಿನ ಗೂಡಿನೊಳಗೆ ನೀರು ನುಗ್ಗುವುದರಿಂದ ಅವುಗಳಿಗೆ ಮಳೆಗಾಲ ಅಸುರಕ್ಷಿತ. ಮತ್ತೆ ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ತಂಡೋಪತಂಡವಾಗಿ ಮಲೆನಾಡ ಕಾಡಿಗೆ ಬಂದು ಸೇರುತ್ತವೆ. ಆದರೆ ಅಪರೂಪಕ್ಕೆ ಮರದಪೊಟರೆಯನ್ನು ಆಶ್ರಯಿಸಿರುವ ಜೇನು ಮಳೆಗಾಲದಲ್ಲಿಯೂ ಮಲೆನಾಡ ಕಾಡಿನಲ್ಲಿಯೇ ಉಳಿದಿರುತ್ತದೆ. ಅವುಗಳನ್ನು ಪತ್ತೆ ಮಾಡಿ ಪೆಟ್ಟಿಗೆ ತುಂಬುವ ಯೋಜನೆ ನನ್ನದಾಗಿತ್ತು. ಆದರೆ ಮಳೆಗಾಲದಲ್ಲಿ ಜೇನನ್ನು ಪತ್ತೆ ಮಾಡುವುದಕ್ಕೆ ತುಂಬಾ ಅನುಭವಸ್ಥರೇ ಆಗಿರಬೇಕು. ಕಾರಣ ಯಾವಾಗಲೂ ಮೋಡ ಮುಸುಕಿದ ವಾತಾವರಣದಿಂದ ಜೇನು ಹುಳುಗಳ ಹಾರಾಟವನ್ನು ಪತ್ತೆ ಮಾಡುವುದು ಕಷ್ಟಕರ.
ತುಡುವೆಜೇನನ್ನು ಹಿಡಿಯುವವರು ಎರಡು ಬಗೆಯವರು. ಒಂದನೆಯವರೆಂದರೆ ಜೇನಿನ ತುಪ್ಪ ಮತ್ತು ತತ್ತಿಯನ್ನು ಮಾತ್ರ ಬಯಸುವವರು, ಎರಡನೆಯವರೆಂದರೆ, ಜೇನು ಹುಳುಗಳನ್ನು ಹಿಡಿದು ತಂದು ಪೆಟ್ಟಿಗೆಯೊಳಗೆ ಸಾಕುವವರು.
ತುಪ್ಪಕ್ಕಾಗಿ ಜೇನು ಹಿಡಿಯುವವರು ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮನೆಬಿಡುತ್ತಾರೆ. ಅದು ಜೇನುಹುಳುಗಳು ಸಾಲುಸಾಲಾಗಿ ಹೂವಿನ ಮಕರಂದ ಹೀರಲು ಹೊರಗಡೆ ಬರುವ ಸಮಯ. ಮಕರಂದ ಕುಡಿದ ಜೇನು ವಾಪಾಸು ಯಾವ ಮಾರ್ಗದಲ್ಲಿ ಸಾಗುತ್ತದೆ ಎನ್ನುವುದನ್ನು ಬಿಸಿಲಿಗೆ ಎದುರಾಗಿ ನಿಂತುಕೊಂಡು, ಹಣೆಯಮೇಲೆ ಕೈಯನ್ನು ಅಡ್ಡಹಿಡಿದು,ಕಣ್ಣನ್ನು ಕಿರಿದಾಗಿಸಿ ನೋಡುತ್ತಾ ನಿಲ್ಲುತ್ತಾರೆ. ಅತಿ ಹೆಚ್ಚು ಜೇನುಹುಳುಗಳ ಹಾರಾಟ ಯಾವ ಮಾರ್ಗದಲ್ಲಿ ಸಾಗಿದೆ ಎನ್ನುವುದನ್ನು ಅನುಸರಿಸಿ ಅತ್ತ ಕಡೆ ಹೊರಡುತ್ತಾರೆ. ಹೀಗೆ ಹೊರಟ ಅರ್ಧಗಂಟೆಯೊಳಗೆ ಒಂದು ಜೇನು ಗೂಡುಪತ್ತೆ ಮಾಡುತ್ತಾರೆ. ತಕ್ಷಣ ಕಾರ್ಯಾಚರಣೆ ಶುರುಮಾಡಿ ಗೂಡಿಗೆ ಹೊಗೆ ಹಾಕಿ ಹುಳ ಓಡಿಸಿ ಕಿತ್ತುಬಿಡುತ್ತಾರೆ. ಹೋದ ಒಂದೆರಡು ತಾಸಿನೊಳಗೆ ಕೈತುಂಬಾ ಜೇನುರೊಟ್ಟಿನೊಂದಿಗೆ ವಾಪಾಸು ಮನೆಗೆ ಬಂದುಬಿಡುತ್ತಾರೆ.
ಪೆಟ್ಟಿಗೆಗೆ ಜೇನನ್ನು ಕೂಡಿಸುವವರು ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಜೇನು ಹುಡುಕಲು ಹೊರಡುತ್ತಾರೆ. ಜೇನು ಪತ್ತೆ ಮಾಡುವ ವಿಧಾನ ಒಂದೇ ಆದರೂ, ನಂತರ ಪೆಟ್ಟಿಗೆಗೆ ಜೇನನ್ನು ಕೂಡಲು ಸ್ವಲ್ಪ ಹೆಚ್ಚಿನ ಸಮಯ ತಗಲುತ್ತದೆ. ಒಮ್ಮೊಮ್ಮೆ ಸಾಯಂಕಾಲದವರೆಗೂ ಕಾರ್ಯಾಚರಣೆ ನಡೆಸಬೇಕಾದ ಸಂದರ್ಭ ಇರುತ್ತದೆ. ಅಕಸ್ಮಾತ್ ಬೇಗನೆ ಪೆಟ್ಟಿಗೆಯೊಳಗೆ ಎಲ್ಲಾ ಜೇನುಹುಳುಗಳು ಬಂದರೂ ಆಹಾರಕ್ಕೆ ಹೋದ ಜೇನುಗಳು ಬರುವವರೆಗೆ ಪೆಟ್ಟಿಗೆಯನ್ನು ಅಲ್ಲಿಯೇ ಇಟ್ಟು ಕತ್ತಲೆಯಾದಮೇಲೆ ಮನೆಗೆ ತರುತ್ತಾರೆ. ಜೇನುಗೂಡನ್ನು ಪತ್ತೆ ಮಾಡುವ ವಿಚಾರದಲ್ಲಿ ಜೇನು ಸಾಕುವವರಿಗಿಂತ ತುಪ್ಪಕ್ಕಾಗಿ ಜೇನು ಕೀಳುವವರೇ ಹೆಚ್ಚು ಪಳಗಿರುತ್ತಾರೆ.
ಕಾರಣ, ಜೇನು ಸಾಕುವವರು ವರ್ಷದಲ್ಲಿ ಹೆಚ್ಚೆಂದರೆ ಒಂದೆರಡು ಗೂಡು ಪತ್ತೆ ಮಾಡುತ್ತಾರಷ್ಟೆ. ಆದರೆ ತುಪ್ಪಕ್ಕಾಗಿ ಜೇನು ಹುಡುಕುವವರು ವರ್ಷಕ್ಕೆ ಕನಿಷ್ಟವೆಂದರೂ ಇಪ್ಪತ್ತು ಜೇನುಗೂಡು ಪತ್ತೆ ಮಾಡಿರುತ್ತಾರೆ. ಒಮ್ಮೊಮ್ಮೆ ಎರಡೂ ತರಹದ ಜನರು ಒಂದಾಗಿ ಹೊರಟು, ತುಪ್ಪ ಒಬ್ಬರಿಗೆ ಜೇನುಹುಳುಗಳು ಮತ್ತೊಬ್ಬರಿಗೆ ಎಂದು ಪಾಲು ಮಾಡಿಕೊಳ್ಳುವುದೂ ಇದೆ.
ಸಂಪಳ್ಳಿಯ ಚೆನ್ನ ಜೇನುಗೂಡು ಪತ್ತೆ ಮಾಡುವುದರಲ್ಲಿ ನಮ್ಮ ಭಾಗದಲ್ಲಿ ಎತ್ತಿದ ಕೈ. ಚೆನ್ನ ತುಡುವೆ ಜೇನುತುಪ್ಪವನ್ನು ಮಾರಾಟಮಾಡಿ, ಅದರಲ್ಲಿ ಬರುವ ಹಣದಿಂದ ಎರಡು ತಿಂಗಳು ಆರಾಮಾಗಿ ಇರುತ್ತಿದ್ದ. ಆದರೆ ಅವನಿಗೆ ಜೇನನ್ನು ಪೆಟ್ಟಿಗೆಯೊಳಗೆ ಕೂಡುವ ವಿಚಾರ ಗೊತ್ತಿರಲಿಲ್ಲ. ಮತ್ತು ಅದರಲ್ಲಿ ಅವನಿಗೆ ಆಸಕ್ತಿಯೂ ಇರಲಿಲ್ಲ. ಮರದ ಪೆಟ್ಟಿಗೆಯನ್ನು ಹಣಕೊಟ್ಟು ತಂದು ಕಬ್ಬಿಣದ ಸ್ಟ್ಯಾಂಡ್ ಮಾಡಿಸಿ, ಜೇನು ಕೂಡಿಸಿ, ಜೇನುಹುಳ ತಿನ್ನಲು ಬರುವ ಓತಿ, ಜೇನುಹಕ್ಕಿ, ಬಂಡಾರು ಬಡ್ಚಿಗೆಯಿಂದ ಅವನ್ನು ರಕ್ಷಿಸಿ ತುಪ್ಪ ತೆಗೆಯುವುದರ ಬದಲು ಸುಮ್ಮನೆ ಕಾಡಲ್ಲಿ ಅಡ್ಡಾಡುತ್ತಾ ಅಲ್ಲಿ ಸಿದ್ಧವಾಗಿರುವ ಜೇನುತುಪ್ಪ ತಂದು ಮಾರಾಟ ಮಾಡುವುದೇ ಅವನಿಗೆ ಸುಲಭವಾಗಿತ್ತು. ಆದರೆ ವಾಸ್ತವವಾಗಿ ಅವನು ಸ್ವಲ್ಪ ಯೋಚಿಸಿದ್ದರೆ ಇನ್ನೂ ಬಹಳಷ್ಟು ಹೆಚ್ಚು ಹಣಗಳಿಸಿ ಯಶಸ್ವಿ ಜೇನು ಸಾಕಾಣಿಕಾದಾರನಾಗಬಹುದಿತ್ತು.
ಜೇನುತುಪ್ಪದ ಬೆಲೆಯ ವಿಚಾರದಲ್ಲಿ ಕಾಡಿನಿಂದ ಕಿತ್ತು ತಂದ ಜೇನುತುಪ್ಪಕ್ಕಿಂತ ಸಾಕಿದ ಪೆಟ್ಟಿಗೆಯಿಂದ ತೆಗೆದ ತುಪ್ಪಕ್ಕೆ ಎರಡುಪಟ್ಟು ಬೆಲೆ ಹೆಚ್ಚು. ಕಾರಣ, ಕಾಡಿನ ಜೇನನ್ನು ಹಿಡಿದು ತತ್ತಿಯನ್ನು ಕೈಯಿಂದ ಹಿಂಡಿ ತುಪ್ಪವನ್ನು ತೆಗೆಯುತ್ತಾರೆ. ಕೈಯಿಂದ ತುಪ್ಪವನ್ನು ಹಿಂಡುವಾಗ ತತ್ತಿಯೊಳಗಿನ ಮರಿಗಳೂ ಸೇರಿಬಿಟ್ಟಿರುತ್ತವೆ. ಹಾಗಾಗಿ ಆ ತುಪ್ಪ ಶುದ್ಧವಾಗಿರುವುದಿಲ್ಲ. ಅದೇ ಸಾಕಿದ ಜೇನಿನಲ್ಲಿ ಸಣ್ಣದಾದ ತುಪ್ಪ ತೆಗೆಯುವ ಯಂತ್ರದ ಮುಖಾಂತರ ತೆಗೆಯುವುದರಿಂದ ಉತ್ತಮ ತುಪ್ಪ ಸಿಗುತ್ತದೆ ಮತ್ತು ಅದು ಹುಳಿಬರುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತದೆ. ಆದರೆ ಅದು ಸ್ವಲ್ಪ ಜಾಸ್ತಿ ಕೆಲಸವನ್ನು ಬೇಡುತ್ತದೆ. ಚೆನ್ನನಿಗೆ ಜಾಸ್ತಿ ಕೆಲಸ ಎಂದರೆ ಆಗುತ್ತಿರಲಿಲ್ಲ. ಬೇಗನೆ ಕೆಲಸ ಮುಗಿಯಬೇಕು ಮತ್ತು ಸಿಕ್ಕಷ್ಟು ದುಡ್ಡು ಸಾಕು ಎನ್ನುವ ತತ್ವ ಅವನದು. ಹಾಗಾಗಿ ನಾನು ಜೇನುಗೂಡು ಪತ್ತೆ ಮಾಡುವ ಮಟ್ಟಿಗೆ ಅವನನ್ನು ಆಶ್ರಯಿಸಬಹುದಿತ್ತು. ಅದರ ಹೊರತಾಗಿ ಪುಸ್ತಕದಲ್ಲಿ ಓದಿದಂತೆ ಜೇನುಸಾಕಾಣಿಕಾದಾರನ ಪಟ್ಟಿಗೆ ಅವನ ಹೆಸರನ್ನು ಸೇರಿಸುವಂತಿರಲಿಲ್ಲ. ಜೇನುಗೂಡನ್ನು ಪತ್ತೆ ಮಾಡಿ ಪೆಟ್ಟಿಗೆಯೊಳಗೆ ಸೇರಿಸಿದ ನಂತರದ ಸಾಹಸಗಳಿಗೆ ನಾನು ಬೇರೆಯವರನ್ನೋ ಅಥವಾ ಸ್ವಾವಲಂಬನೆಗೆ ಜೇನುಕೃಷಿ ಪುಸ್ತಕವನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು. ಆದರೆ ಅದು ನಂತರದ್ದು, ಪ್ರಸ್ತುತ ಚೆನ್ನನ ಸಹಾಯದ ಅಗತ್ಯ ನನಗೆ ಇತ್ತು.
ನಿತ್ಯಸತ್ಯ

ಚೆನ್ನನ ಮನೆ ಸಮೀಪಿಸುತ್ತಿರುವಂತೆ ದೊಡ್ಡದಾಗಿ ಮಾತುಗಳು ಕೇಳಲಾರಂಭಿಸಿತು. ಸಂಪಳ್ಳಿಯ ಕೇರಿಯಲ್ಲಿ ಯುದ್ದ ಘೋಷಣೆಯಾಗಿತ್ತು. ಸಾಮಾನ್ಯವಾಗಿ ವಾರಕ್ಕೊಂದು ಯುದ್ದ ಅಲ್ಲಿ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಸಾಯಂಕಾಲ ಶುರುವಾದ ಜಗಳ ರಾತ್ರಿ ಹನ್ನೆರಡು ಘಂಟೆಯವರೆಗೆ ನಡೆದು, ನಿದ್ರೆಯ ಕಾರಣಕ್ಕಾಗಿ ಕದನವಿರಾಮ ಘೋಷಣೆಯಾಗಿ ಮತ್ತೆ ಬೆಳಿಗ್ಗೆ ಅದರ ಎರಡನೇ ಕಂತು ಕೆಲಸಕ್ಕೆ ಹೊರಡುವ ತನಕ ಮುಂದುವರೆಯುತ್ತಿರುತ್ತದೆ. ಅದು ರಾಜಿಯಾಗುವುದು ಸಾಯಂಕಾಲ. ರಾಜಿಯಾದ ವಾರದ ನಂತರ ಕದನ ಮತ್ತೆ ಶುರುವಾಗುವುದು ಸರ್ವೇಸಾಮಾನ್ಯ. ಆದರೆ ವ್ಯಕ್ತಿಗಳು ಬದಲಾಗುತ್ತಿರುತ್ತಾರೆ. ಅದಕ್ಕೆ ಸುತ್ತಮುತ್ತಲಿನವರು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಕಂಡೂಕಾಣದಂತೆ ಅವರವರ ಕೆಲಸಗಳಿಗೆ ಹೋಗುತ್ತಲಿರುತ್ತಾರೆ. ಆದರೆ ನನಗೆ ಚೆನ್ನನನ್ನು ಕಾಣುವುದು ಅನಿವಾರ್ಯವಾಗಿತ್ತಾದ್ದರಿಂದ ಅಲ್ಲಿಯೇ ನಿಂತೆ.
ನಾನು ಸಾವ್ರ ಜನ್ರ ಜತೆ ಮಲಗ್ತೀನಿ ನಿಂಗೇನಾ ಹೆಣ್ಣು ದನಿಯ ಆರ್ಭಟ ಕೇಳುತ್ತಿತ್ತು.
ಸಾವ್ರ ಏನು ಹತ್ತಸಾವ್ರ ಜನ್ರ ಜತೆ ಹೋಗು ನಂಗೇನು ಚೆನ್ನನ ಉತ್ತರ ಅದಕ್ಕೆ.
ಏ ಹಲ್ಕಟ್ ಸೂಳೆಮಗನೆ ಅಷ್ಟಿದ್ದವ ನನ್ನ ಹಿಂದೆ ಇವ್ಳು ಯಾರ್ಜೊತೆ ಹೊಗ್ತಾಳೆ ಅಂತ ನೋಡಾಕೆ ಮೂರ‍್ಮನೆ ಕಾನ್ತನಕ ಬಂದಿದ್ದೆ
ಲೌಡಿ, ನಾಲ್ಗೆ ಬಿಗಿ ಹಿಡ್ದು ಮಾತಾಡು ನಾನು ಉಪ್ಪಾಕೆ ಹಣ್ಣು ಕೊಯ್ಯಾಕೆ ಹೋಗಿದ್ದೆ, ನಿನ್ನ ಮಿಂಡನ್ನ ಕಟ್ಗೆಂಡು ನಂಗೇನಾಗ್ಬೇಕು
ಬೋಳಿಮಗನೆ ಉಪ್ಪಾಕೆ ಹಣ್ಣಿನ ಮರ ಮೂರ‍್ಮನೆ ಕಾನಾಗೆ ಶಾಸ್ತ್ರಕ್ಕಾದ್ರೂ ಐತನಾ? ಅತ್ವಾ ನೀನು ಅಕೇಶಿಯಾ ಮರ‍್ದಾಗೆ ಉಪ್ಪಾಕೆ ಹಣ್ಣು ಕೊಯ್ತೀಯಾ?
ಓ....ಹೋ... ಹೋ...ಹೋ ಹೌದೌದು, ನೀನು ಹಗಲಿಡೀ ಮೂರ‍್ಮನೆ ಕಾನಾಗೆ ಅಂಗಾತ ಮಲ್ಕ್ಯಂಡು ಮ್ಯಾಲೆ ನೊಡ್ತಾ ಇರ್ತೀಯಾ, ಹಂಗಾಗಿ ನಿಂಗೆ ಇಡೀ ಕಾನಾಗೆ ಇರೋ ಮರದ ಜಾತ್ಯೆಲ್ಲಾ ಗೊತ್ತು.... ವ್ಯಂಗ್ಯವಾಡಿದ ಚೆನ್ನ.
ನನಗೆ ಅಲ್ಲಿ ನಿಲ್ಲಲೂ ಆಗದು, ಹಾಗಂತ ಚೆನ್ನನನ್ನು ಕಾಣದೆ ವಾಪಾಸು ಹೋಗಲು ಜೇನಿನ ಹುಚ್ಚು ಬಿಡದು, ಸ್ವಲ್ಪ ಹೊತ್ತು ಕುಮಟಾಭಟ್ರ ಅಂಗಡಿಕಟ್ಟೆಯ ಮೇಲೆ ಕುಳಿತು, ಜಗಳ ನಿಂತಮೇಲೆ ಬಂದರಾಯಿತು ಎಂದು ತಿರುಗಿದೆ. ನಾನು ಹೊರಟಿದ್ದು ಚೆನ್ನನ ಹೆಂಡತಿ ಸುಬ್ಬಿಗೆ ಕಾಣಿಸಿರಬೇಕು, ಅವಳು -
ಅಲ್ಲಿ ಭಟ್ರು ನಿಂತ್ಕಂಡು ಕಾಯ್ತಿದಾರೆ ಹೋಗ್ರಿ, ಆ ರಂಡೆಗಂತೂ ಮಾನಮರ‍್ವಾದಿ ಇಲ್ಲ, ನಿಮ್ಗೂ ಬೇರೆ ಕೆಲ್ಸ ಇಲ್ಲ, ಬೆಳ್ಗೆ ಬೆಳ್ಗೆ ಹೋಗಿ ಹೋಗಿ ಆ ನಾಯಿಬಾಯಿಗೆ ಕೋಲು ಹಾಕ್ತಾ ಕುಂತೀರಿ ಎಂದು ಚೆನ್ನನ ಬಳಿ ಹೇಳಿದಳು. ಚೆನ್ನ ಏಕಪಕ್ಷೀಯ ಕದನ ವಿರಾಮ ಘೋಷಿಸಿ ನನ್ನ ಬಳಿ ಬಂದು,
ಯಂತ್ರೀ....ರಾಗಣ್ಣ ಬೆಳಿಗ್ಗೆ ಮುಂಚೆ ಈ ಕಡಿಗೆ ಹೊಂಟ್ರಲಾ ಎಂದ.
ಕಾಡಲ್ಲಿ ಎಲ್ಲಾದ್ರು ಜೇನು ಕಂಡಿದ್ದೀಯಾ? ಎಂದು ಚೆನ್ನನನ್ನು ಕೇಳಿದೆ.
ಈ ಘೋರಾಕಾರದ ಮಳೇಗಾಲ್ದಲ್ಲಿ ಎಂಥಾ ಜೇನ್ರಿ, ಅವು ಊರ‍್ಬಿಟ್ಟು ಆಗ್ಲೆ ಎರ‍್ಡು ತಿಂಗ್ಳಾತು
ಅದು ನಂಗೂ ಗೊತ್ತಿದೆ, ಆದ್ರೆ ಅಪರೂಪಕ್ಕೊಂದು ಮರದ ಪೊಟರೆಯಲ್ಲಿ ಇರ‍್ತಾವಂತಲ್ಲ. ಅದ್ನೇನಾದ್ರೂ ಕಂಡಿದ್ರೆ ಹೇಳು, ನಾನು ಅದನ್ನ ಹಿಡಿದು ಪೆಟ್ಟಿಗೆ ಕೂಡಬೇಕಾಗಿದೆ
ಅಯ್ಯೋ.. ಈ ಮಳೆಗಾಲ್ದಲ್ಲಿ ಜೇನು ಹಿಡ್ದು ಪೆಟ್ಗೆ ಕೂಡಾಕೆ ಬರದಿಲ್ಲ, ಅದಕ್ಕೆ ಮಳೆಗಾಲ ಕಳ್ದು ಚಳಿಗಾಲ ಶುರುವಾಗ್ಬೇಕು. ಆ ಟೈಮಲ್ಲಿ ಮಾತ್ರ ಅವು ಪೆಟ್ಗೇಲಿ ನಿಲ್ತಾವೆ. ಹಂಗಾಗಿ ಇನ್ನು ಎರಡು ತಿಂಗ್ಳು ನೀವು ಕಾಯ್ಲೇ ಬೇಕು.
ದಿನಾ ಸಕ್ರೆಪಾಕ ಕೊಟ್ರೆ ಪೆಟ್ಗೇಲಿ ನಿಲ್ತಾವಂತಲ್ಲೋ,
ಅದು ನಂಗೆ ಗೊತ್ತಿಲ್ಲ, ಯಾಕಂದ್ರೆ ನಾನು ಜೇನುಗೂಡಿನ ಬಾಯಿಗೆ ಹೊಗೆ ಹಾಕಿ ಹುಳ ಹಾರ‍್ಸಿ ತತ್ತಿಯಿಂದ ತುಪ್ಪ ಹಿಂಡಿ ತರ‍್ತೀನಿ. ಈ ಟೈಮಲ್ಲಿ ಪೆಟ್ಗೇಲಿ ನಿಲ್ಲಲ್ಲ ಅಂತ ಪ್ರಶಾಂತಣ್ಣಯ್ಯ ಹೇಳಿದ್ದನ್ನ ಕೇಳಿದ್ದೆ, ನೀವೊಂದು ಕೆಲ್ಸ ಮಾಡಿ, ಅವ್ರನ್ನೆ ಕೇಳಿ. ಅವ್ರು ಮಳೆಗಾಲ್ದಲ್ಲಿ ಹೂವಿಗೆ ಬರೋ ಜೇನುಹುಳ ಹಿಡಿದು ಅದರ ಕುಂಡಿಗೆ ಕೆಂಪಿ ದಾರ ಕಟ್ಟಿ ಗೂಡು ಪತ್ತೆ ಮಾಡ್ತಾರೆ
ಅವ್ರನ್ನ ಕೇಳೋದು ಆಮೇಲಾತು. ನಿನಗೆ ನೂರು ರೂಪಾಯಿ ಕೊಡ್ತೀನಿ ಮರದ ಪೊಟರೆಯಲ್ಲಿರೊ ಒಂದು ಜೇನು ಪತ್ತೆ ಮಾಡಿಕೊಡ್ತೀಯಾ? ಎಂದು ಚೆನ್ನನನ್ನು ಕೇಳಿದೆ.
ಅಯ್ಯ.. ದುಡ್ಡಿನ ಮಕಕ್ಕೆ ಅಷ್ಟು ಬೆಂಕಿ ಬಿತ್ತು, ಈಗ ಮಳೆಮಾಡ ತುಂಬ್ಕಂಡೈತಿ, ಹಂಗಾಗಿ ಹುಳದ ದಾರಿ ಪತ್ತೆಮಾಡೊದು ಬಹಳ ಕಷ್ಟ. ಗೂಡು ಪತ್ತೆ ಮಾಡಕೆ ಬಿಸಿಲು ಬೇಕೇಬೇಕು. ನೀವು ಯಾವ್ದಕ್ಕೂ ಮಳೆಗಾಲ ಮುಗಿದ ಮೇಲೆ ಒಂದ್ಸಾರಿ ನೆಪ್ಪ ಮಾಡ್ರಿ ಎನ್ನುತ್ತಾ ಮನೆಕಡೆ ಹೊರಟ. ಅವನಿಗೆ ನನ್ನ ಜೇನಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಆಸಕ್ತಿ ಇರಲಿಲ್ಲ. ಅರ್ಧಕ್ಕೆ ನಿಲ್ಲಿಸಿ ಬಂದಿದ್ದ ಜಗಳದ ಯೋಚನೆಯೇ ಜಾಸ್ತಿಯಾಗಿತ್ತು.
ಕದನವನ್ನು ಚೆನ್ನ ನಿಲ್ಲಿಸಿದ್ದನೇ ಹೊರತು ಆಕೆ ನಿಲ್ಲಿಸಿರಲಿಲ್ಲ. ಆದರೆ ಧ್ವನಿ ಸ್ವಲ್ಪ ಸಣ್ಣದಾಗಿತ್ತು.
ಏ... ಬಸ್ವಿ, ನಿನ್ನ ಅಪ್ಪ ಅಮ್ಮ ನಿಂಗೆ ಸರಿಯಾದ ಹೆಸ್ರು ಇಟ್ಟಿದಾರೆ ನೋಡು, ಊರುಬಸ್ವಿ ಅಂತ ಇಟ್ಟಿದ್ರೆ ಇನ್ನೂ ಲಾಯ್ಕಿತ್ತು. ನಿನ್ಮಿಂಡ ಎಮ್ಮೆ ಹೊಡ್ಕಂಡು ಗದ್ದಿಗೆ ಹೊಂಟ ನೋಡು, ಒಂದ್ ಮೋಟ್‌ಕತ್ತಿ ಹಿಡ್ಕಂಡು ಮನ್ಯಾಗೆ ಬೆಂಕಿ ಒಟ್ಟಾಕೆ ಒಂಚೂರು ಕಟಿಗೆಯಿಲ್ಲಾ ಈಗ್ ತರ್ತೀನಿ ಅಂತ ಗಂಡನತಾವ ಒಂದ್ ಅಗಡಬಾಂಕ್ ಸುಳ್ಳೇಳಿ ನೀನೂ ಆ ಕಡೆ ಹೋಗು ಎಂದ. ಇಷ್ಟು ಹೊತ್ತಿನ ತನಕ ಸಣ್ಣದಾಗಿ ಗೊಣಗುಟ್ಟುತ್ತಿದ್ದ ಬಸವಿಯ ದನಿ ಆ ಕಡೆಯಿಂದ ಮತ್ತೆ ಆರ್ಭಟಿಸತೊಡಗಿತು.
ಬೇವರ್ಸಿ ಸೂಳೆಮಗನೆ, ನಮ್ಮ ಅಪ್ಪ ಅಮ್ಮನ ಸುದ್ದಿ ಎತ್ತಿದ್ರೆ ಬೋಟಿತೆಗಿತೀನಿ ನೋಡು, ನೀನು ಕೊಸಿಯೋದು ಆಚಾರ ಮಾಡೋದೆಲ್ಲಾ ಅನಾಚಾರ ಅಂತಾ ಊರಿಗೆಲ್ಲಾ ಗೊತ್ತು, ನಿನ್ಮನೆ ಆಟಾನೆಲ್ಲಾ ನನ್ನತ್ರ ತೋರಿಸಬ್ಯಾಡ, ನೀನು ವಾಟೆಕಾಯಿ ಕೊಯ್ಯಕೆ ಹೋದಾಗ ಮಾಡೊ ಹಲ್ಕಟ್ ಕೆಲ್ಸ ನಂಗೆ ಏನು ಇಡೀ ಊರಿಗೆ ಗೊತ್ತು. ನಿಂಗೆ ತಾಕತ್ತಿದ್ರೆ ನೀನೂ ಬಾ ನಿನ್ನ ಮಗನ್ನೂ ಕಳುಸು, ಅದ ಬಿಟ್ಟು............ ಮುಂದುವರೆಯುತ್ತಲೇ ಇತ್ತು. ನನಗೆ ಜಗಳ ನೋಡುವ ಆಸೆ ಇತ್ತಾದರೂ ಇನ್ನು ಹೆಚ್ಚು ಹೊತ್ತು ಅಲ್ಲಿ ನಿಂತರೆ ನೋಡಿದವರು ತಪ್ಪು ತಿಳಿದಾರು ಎಂದು ಮನೆಯ ಕಡೆ ಹೊರಟೆ.
ಜೇನಜಾತಿ

ಜೇನು, ಶಿಸ್ತುಬದ್ದ ಜೀವನ ನಡೆಸುವ ಜೀವಿ. ಜೇನಿನ ಪ್ರಬೇಧದಲ್ಲಿ ಸಾವಿರಾರು ಜಾತಿಯ ಜೇನುಗಳಿದ್ದರೂ ಪ್ರಮುಖವಾಗಿ ಹೆಜ್ಜೇನು, ತುಡುವೆ, ನಿಸರಿ, ಹಾಗು ಕೋಲ್ಜೇನು ಎಂಬ ನಾಲ್ಕು ಜಾತಿಯ ತುಪ್ಪವನ್ನು ಮನುಷ್ಯ ಬಳಕೆ ಮಾಡುತ್ತಿದ್ದಾನೆ.
ಹೆಜ್ಜೇನುತುಪ್ಪವನ್ನು ಆಹಾರಕ್ಕಾಗಿ ಹಾಗು ತತ್ತಿಯನ್ನು ಮೇಣಕ್ಕಾಗಿಯೂ ಬಳಕೆ ಮಾಡುತ್ತಾರಾದರೂ ಅದನ್ನು ಪೆಟ್ಟಿಗೆಯಲ್ಲಿಟ್ಟು ಸಾಕಾಣಿಕೆ ಮಾಡಲು ಆಗುವುದಿಲ್ಲ. ಅವು ಬೆಳಕಿನಲ್ಲಿಯೇ ಗೂಡು ಕಟ್ಟುತ್ತವೆ. ದೊಡ್ಡ ಕಟ್ಟಡಗಳಲ್ಲಿ, ಆಕಾಶದೆತ್ತರದ ಮರಗಳಲ್ಲಿ ಒಂದೇ ತತ್ತಿಗೆ ಲಕ್ಷಾಂತರ ಹುಳುಗಳು ಜೋತು ಬಿದ್ದಿರುತ್ತವೆ. ಅವು ಗಾತ್ರದಲ್ಲಿ ದೊಡ್ಡದಿದ್ದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತಂದ ಹಲವಾರು ಘಟನೆಗಳು ಕಾಣಸಿಗುತ್ತವೆ.
ಗಾತ್ರದಲ್ಲಿ ಹೆಜ್ಜೇನನ್ನು ಹೋಲುವ ಆದರೆ ಕತ್ತಲೆಯಲ್ಲಿ ಮಾತ್ರ ಗೂಡುಕಟ್ಟುವ, ಪೆಟ್ಟಿಗೆಯಲ್ಲಿಟ್ಟು ಸಾಕಬಹುದಾದ ಮೆಲ್ಲಿಫಿರಾ, ಎಂಬ ವಿದೇಶಿತಳಿ ಭಾರತಕ್ಕೆ ವಿದೇಶದಿಂದ ಬಂದಿದೆಯಾದರೂ ಅದಕ್ಕೆ ಹೇರಳ ಹೂವುಗಳು ಬೇಕಾಗುವುದರಿಂದ ಮಲೆನಾಡಿನಲ್ಲಿ ಅವುಗಳ ಸಾಕಾಣಿಕೆ ಕಷ್ಟಕರ. ಸಾವಿರಾರು ಎಕರೆ ಜಾಗದಲ್ಲಿ ಸೂರ್ಯಕಾಂತಿ ಬೆಳೆಯುವ ಉತ್ತರಭಾರತದಲ್ಲಿ ಮೆಲ್ಲಿಫಿರಾ ಜೇನನ್ನು ಸಾಕುತ್ತಾರೆ.
ಕೋಲ್ಜೇನು ಗಾತ್ರದಲ್ಲಿ ತುಡುವೆಜೇನಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಅರೆಮರೆಯಲ್ಲಿ ಸಣ್ಣಗಾತ್ರದ ಮರದ ಟೊಂಗೆಗೆ ಕಟ್ಟಿಕೊಳ್ಳುತ್ತದೆ. ಸಾವಿರದೊಳಗಿನ ಹುಳುಗಳ ಸಂಖ್ಯೆಯ ಇವು ಅಲ್ಪಸ್ವಲ್ಪ ತುಪ್ಪವನ್ನು ಮಾತ್ರ ಸಂಗ್ರಹಿಸಿಡುತ್ತದೆ. ಇವನ್ನು ಸಾಕಾಣಿಕೆ ಮಾಡಲಾಗುವುದಿಲ್ಲ.
ನಿಸರಿಹುಳು ಜೇನಿಗಿಂತ ಭಿನ್ನ ಜಾತಿಯ ಹುಳುವಾಗಿದ್ದು ತುಪ್ಪದ ರುಚಿಯಲ್ಲಿ ಹಾಗೂ ಔಷಧೀಯ ಗುಣಗಳಲ್ಲಿ ವಿಶಿಷ್ಠ ಸ್ಥಾನಗಳಿಸಿದೆ. ಇದರ ಏರಿ ಕಟ್ಟುವ ವಿಧಾನ ಹಾಗು ಜೀವನ ಕ್ರಮಗಳು ಜೇನಿನಷ್ಟು ಶಿಸ್ತುಬದ್ದವಾಗಿರುವುದಿಲ್ಲವಾದ್ದರಿಂದ ಅವುಗಳನ್ನು ದೊಡ್ದ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾಗುವುದಿಲ್ಲ.
ತುಡುವೆಜೇನು ಇವೆಲ್ಲಕ್ಕಿಂತ ಸಾಕಾಣಿಕೆಯಲ್ಲಿಯೂ ಆದಾಯದಲ್ಲಿಯೂ ಮನುಷ್ಯರಿಗೆ ಹೊಂದಿಕೊಂಡಿರುವುದರಿಂದ ಹಾಗು ಅತ್ಯಂತ ವ್ಯವಸ್ಥಿತ ಜೀವನಕ್ರಮದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಎರಡು ಜಾತಿ, ಒಂದು ಅರಿಶಿನತುಡುವೆ ಇನ್ನೊಂದು ಕಪ್ಪುತುಡುವೆ. ಇವೆರಡು ಜಾತಿಗಳಲ್ಲಿ ಬಣ್ಣದ ವ್ಯತ್ಯಾಸದ ಹೊರತಾಗಿ ಮತ್ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಕಪ್ಪುತುಡುವೆಜೇನು ಮಲೆನಾಡಿನ ಹವಾಗುಣಕ್ಕೂ, ಅರಿಶಿನ ತುಡುವೆಜೇನು ಬಯಲುಸೀಮೆಯ
ಹವಾಗುಣಕ್ಕೂ ಒಗ್ಗಿಕೊಂಡಿವೆ. ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಜೇನುಹುಳುಗಳು ಇದ್ದು ಅಲ್ಲಿಯ ಹವಾಗುಣಕ್ಕೆ ಸಣ್ಣಪುಟ್ಟ ಬದಲಾವಣೆಯ ದೇಹ ರಚನೆಯನ್ನು ಹೊಂದಿವೆ. ಆದರೆ ತುಪ್ಪ ಸಂಗ್ರಹಿಸುವ ಮೂಲಗುಣ ಮಾತ್ರ ಎಲ್ಲಾ ಕಡೆಗಳಲ್ಲಿಯೂ ಒಂದೇರೀತಿ.
ಜೇನು ಸಾಕಾಣಿಕ ವಿಧಾನದ ಪುಸ್ತಕದ ಮಾಹಿತಿಯನ್ನು ಮೆಲುಕು ಹಾಕುತ್ತಾ ಮನೆಯಕಡೆ ಹೊರಟವನಿಗೆ ಚೆನ್ನ ಮಳೆಗಾಲದಲ್ಲಿ ಜೇನುಗೂಡು ಕಂಡುಹಿಡಿಯುವ ಪ್ರಶಾಂತನ ಹೊಸ ವಿಧಾನದ ಬಗ್ಗೆ ಹೇಳಿದ್ದು ನೆನಪಾಯಿತು. ಹೇಗೂ ಬಂದಿದ್ದಾಗಿದೆ ಸಂಪಳ್ಳಿಯಿಂದ ಪ್ರಶಾಂತನ ಮನೆಯಿರುವ ಕೆರೆಕೈ ಕೂಗಳತೆಯಷ್ಟು ದೂರ ಅವನನ್ನು ವಿಚಾರಿಸಿಕೊಂಡು ಹೋದರಾಯಿತು ಎಂದು ಅತ್ತಕಡೆ ಹೊರಟೆ.
ಪ್ರಶಾಂತ ತುಡುವೆಜೇನು ಹಿಡಿದು ಪೆಟ್ಟಿಗೆಯಲ್ಲಿ ಸಾಕುವುದರಲ್ಲಿ ಎತ್ತಿದ ಕೈ. ಕಡ್ಡಿಯಂತೆ ಸಪೂರವಾಗಿದ್ದ ಅವನಿಗೆ ಮರ ಹತ್ತುವುದು, ಹುತ್ತದೊಳಕ್ಕೆ ತೂರುವುದು ಬಹಳ ಸುಲಭವಾಗಿತ್ತು. ಹಾಗಾಗಿ ಜೇನು ಮರದ ತುದಿಯ ಪೊಟರೆಯಲ್ಲಿದ್ದರೂ ಬಿಡುತ್ತಿರಲಿಲ್ಲ. ನಾಲ್ಕೈದು ವರ್ಷಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿ ಆರಂಭಿಸಿ ನಂತರ ಅಡಿಕೆ ವ್ಯಾಪಾರ ಶುರುಮಾಡಿದ ಕಾರಣದಿಂದ ಜೇನು ಸಾಕಾಣಿಕೆ ಬಗೆಗಿನ ಆಸಕ್ತಿ ಕಡಿಮೆಯಾಗಿ ಒಂದು ಪೆಟ್ಟಿಗೆಯನ್ನು ಮಾತ್ರ ಇಟ್ಟುಕೊಂಡಿದ್ದ. ಜೇನುಹುಳಗಳ ಬಗ್ಗೆ ಪ್ರಶಾಂತ ಹೊಸಹೊಸ ವಿಧಾನಗಳನ್ನು ಅದೆಲ್ಲಿಂದಲೋ ಪತ್ತೆಮಾಡಿಕೊಂಡು ಅನುಷ್ಠಾನಗೊಳಿಸುತ್ತಿದ್ದ. ಅದರಲ್ಲಿ ಮಳೆಗಾಲದ ದಿನಗಳಲ್ಲಿ ಜೇನುಗೂಡು ಪತ್ತೆಮಾಡುವ ವಿಧಾನವೂ ಒಂದು.
ಅಪರೂಪಕ್ಕೆ ಹೂವಿನಮಕರಂದ ಹೀರಲು ಬರುವ ತುಡುವೆಜೇನುಹುಳವನ್ನು ಕೈಯಲ್ಲಿ ನಿಧಾನವಾಗಿ ಹಿಡಿದು ಅದರ ಸೊಂಟಕ್ಕೆ ಸಣ್ಣದಾದ ಬಣ್ಣದ ದಾರವನ್ನು ಕಟ್ಟಿ ಅದು ಹಾರಿಹೋಗುವ ದಾರಿಗುಂಟ ಸಾಗಿದರೆ ಜೇನುಗೂಡು ಸುಲಭವಾಗಿ ಪತ್ತೆಯಾಗಿಬಿಡುತ್ತಿತ್ತು. ಇಲ್ಲಿ ಎರಡು ಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿತ್ತು ಮೊದಲನೆಯದು ದಾರವನ್ನು ಜೇನುಹುಳದ ಸೊಂಟಕ್ಕೆ ಬಿಗಿಯಾಗದಂತೆ ಹಾಗು ದಾರ ಕಳಚಿಹೋಗದಂತೆ ಕಟ್ಟುವುದು. ಎರಡನೆಯದು ದಾರದ ಬಣ್ಣ ಹಾಗು ಉದ್ದ. ಸಾಧ್ಯವಾದಷ್ಟು ದೂರದಿಂದ ಗುರುತಿಸಬಹುದಾದ ದಟ್ಟಬಣ್ಣದ ದಾರವನ್ನು ಬಳಸಬೇಕು ಹಾಗು ಅದು ಜಾಸ್ತಿ ಉದ್ದವಾಗಿರದಂತೆ ನೋಡಿಕೊಳ್ಳಬೇಕು. ದಾರದ ಬಣ್ಣ ಮಾಸಲಾಗಿದ್ದರೆ ಹುಳ ಮೇಲೆ ಹಾರಿದಾಗ ನಮಗೆ ಕಾಣಿಸುವುದೇ ಇಲ್ಲ. ಅದೇರೀತಿ ದಾರದ ಉದ್ದ ತೀರ ಜಾಸ್ತಿಯಾಗಿದ್ದರೆ ಅದು ಗಿಡಗಂಟಿಗಳಿಗೆ ಸಿಕ್ಕಿಹಾಕಿಕೊಂಡು ಹುಳದ ಪ್ರಾಣಕ್ಕೆ ಸಂಚಕಾರ ಬಂದೆರೆಗುವ ಸಾಧ್ಯತೆ ಹೆಚ್ಚು . ಹಾಗಾಗಿ ಇವೆರಡು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಕೆಲಸಮಾಡಿದರೆ ಘೋರಾಕಾರದ ಮಳೆಗಾಲದಲ್ಲಿಯೂ ಜೇನುಹಿಡಿಯುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂಬುದು ಪ್ರಶಾಂತ ಅನುಭವದಿಂದ ಕಂಡುಕೊಂಡ ಸತ್ಯ.
ಯಾವ ಪುಸ್ತಕದಲ್ಲಿಯೂ ಸಿಗದ ಇಂತಹ ಹಲವಾರು ಉಪಾಯಗಳು ಜೇನು ಸಾಕಾಣಿಕಾದಾರರ ಅನುಭವದಲ್ಲಿ ಬಚ್ಚಿಟ್ಟುಕೊಂಡಿರುತ್ತವೆ. ಹಾಗಾಗಿ ಈ ತರಹದ ಹಲವಾರು ಮಾಹಿತಿಗಳನ್ನು ತಿಳಿದಿರುವ ಪ್ರಶಾಂತನನ್ನು ಹುರಿದುಂಬಿಸಿ ನನ್ನ ಜೊತೆಗೂಡಿಸಿಕೊಂಡರೆ ನನಗೆ ಸ್ವಲ್ಪ ಸಹಾಯವಾಗಬಹುದೆಂಬ ಆಲೋಚನೆಯೊಂದಿಗೆ ಅವರ ಮನೆಯೊಳಕ್ಕೆ ಕಾಲಿಟ್ಟೆ. ಆದರೆ ಪ್ರಶಾಂತ ಅಡಿಕೆವ್ಯಾಪಾರಕ್ಕೆಂದು ಕಲಗಾರಿಗೆ ಹೋಗಿದ್ದಾನೆಂದು ಅವನ ಅಮ್ಮ ಹೇಳಿದ್ದರಿಂದ ಇವತ್ತೇಕೋ ಹೊರಟ ಘಳಿಗೆ ಸರಿಯಿಲ್ಲವೆಂದೆನಿಸಿ ಮನೆಯ ಕಡೆ ವಾಪಾಸು ಹೊರಟೆ. ----------------------------

ದಾರದ ದಾರಿ

ಮನೆಗೆ ಹೋಗುವ ದಾರಿಯಲ್ಲಿ ಹುಳವೊಂದು ಬಿಕ್ಕೆಗಿಡದ ಸುತ್ತಲೂ ರೊಂಯ್ಯನೆ ಸದ್ದು ಮಾಡುತ್ತಾ ಸುತ್ತುತ್ತಿತ್ತು. ಜೇನು ಇರಬಹುದಾ ಎಂದು ಪರಿಶೀಲಿಸಿದೆ. ಅಲ್ಲ ಎನ್ನಲು ನನ್ನ ಬಳಿ ಯಾವ ಕಾರಣವೂ ಇರಲಿಲ್ಲ. ಹುಡುಕಿದ ಬಳ್ಳಿ ಕಾಲಿಗೇ ತೊಡರಿದಂತಾಯಿತಲ್ಲಾ, ಪ್ರಶಾಂತನ ಜೇನುಗೂಡು ಪತ್ತೆಮಾಡುವ ವಿಧಾನವನ್ನು ಅನುಷ್ಠಾನಗೊಳಿಸಲು ಇಷ್ಟು ಬೇಗನೆ ಅವಕಾಶ ಸಿಕ್ಕಿತಲ್ಲ ಎಂದು ಸಂತೊಷದಿಂದ ದಾರಕ್ಕಾಗಿ ಹುಡುಕಾಡಿದೆ. ಅಲ್ಲೆಲ್ಲಿ ದಾರ?, ಮನೆಗೆ ಹೋಗಿ ದಾರ ತರೋಣವೆಂದರೆ ಅಷ್ಟರಲ್ಲಿ ಹುಳ ಹಾರಿ ಹೋದರೆ ಅನ್ನುವ ಭಯ, ಏನು ಮಾಡಲಿ ಎಂದು ಆಲೋಚಿಸುತ್ತಿರುವಾಗ ಮಿಂಚಿನಂತೆ ಉಪಾಯವೊಂದು ಹೊಳೆಯಿತು. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಸುತ್ತಿದ ಗಾದೆ ಮಾತು ನೆನಪಾಯಿತು. ಉಟ್ಟ ಲುಂಗಿಯ ತುದಿಯಿಂದ ದಾರದ ತುಂಡೊಂದನ್ನು ಎಳೆದೆ. ಮೂರ‍್ನಾಲ್ಕು ಪ್ರಯತ್ನಗಳು ವಿಫಲವಾದ ನಂತರ ಗೇಣುದ್ದದ ದಾರ ಕೈಗೆ ಬಂತು. ಆಗ ಜೇನು ಬಿಕ್ಕೆಹೂವಿನ ಮೇಲೆ ಕುಳಿತಿತ್ತು. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದರಿಂದ ರಾಣಿ ಹುಳುವೇ ಇರಬಹುದು ಎಂದು ಅನಿಸಿತಾದರೂ, ರಾಣಿಹುಳು ಮಕರಂದಕ್ಕಾಗಲೀ ಆಹಾರ ಸಂಗ್ರಹಣೆಗಾಗಲೀ ಹೊರಗಡೆ ಹೋಗುವುದಿಲ್ಲ ಎಂಬುದು ನೆನಪಾಯಿತು. ಬಹುಶಃ ಸ್ವಲ್ಪ ದೊಡ್ಡ ಗಾತ್ರದ ಜೇನಿನ ಹುಳವಾಗಿರಬಹುದೆಂದು ನಿಧಾನ ಹಿಡಿಯಲು ಕೈಚಾಚಿದೆ. ಅದು ನನಗಿಂತ ಬಲು ಸೂಕ್ಷ್ಮ. ನನ್ನ ಯೋಜನೆ ಅದಕ್ಕೆ ಹೊಳೆದಿರಬೇಕು, ರೊಂಯ್ಯನೆ ಮತ್ತೊಂದು ಬಿಕ್ಕೆ ಗಿಡದಮೇಲೆ ಹೋಗಿ ಕುಳಿತುಕೊಂಡಿತು. ಹೀಗೆ ನಾಲ್ಕೈದುಬಾರಿ ಪ್ರಯತ್ನಮಾಡಿ ಇದು ನನ್ನ ಕೈಯಲ್ಲಿ ಆಗದ ಕೆಲಸ ಎಂದು ಹೊರಡಲನುವಾದೆ. ಆದರೆ ಕೈಗೆ ಸಿಕ್ಕ ಅವಕಾಶವನ್ನು ದೂರಮಾಡಿ ಹೋಗಲು ಮನಸ್ಸಾಗದೆ ಪ್ರಯತ್ನ ಮುಂದುವರೆಸಿದೆ. ಚಿಟ್ಟೆ ಹಿಡಿಯುವ ಕೈಹಿಡಿಕೆಯುಳ್ಳ ಬಲೆ ಇದ್ದಿದ್ದರೆ ಎಂಬ ಆಲೋಚನೆ ಬಂತು, ಆ ಆಲೋಚನೆ ಬಂದದ್ದೆ, ಅರೆ ಹೌದು ಬಲೆ ಇಲ್ಲದಿದ್ದರೆ ಏನಾಯಿತು ಅದೇ ತರಹದ ಬಟ್ಟೆ ಇದೆಯೆಲ್ಲಾ ಎಂದು ಉಟ್ಟ ಲುಂಗಿ ಬಿಚ್ಚಿ ಜೇನುಹುಳದ ಮೇಲೆ ಎಸೆದೆ. ನನ್ನ ಈ ಹೊಸ ಯೋಜನೆ ಮೊದಲನೆಯ ಬಾರಿಯೇ ಯಶಸ್ಸು ಕಂಡಿತು. ಲುಂಗಿಯೊಳಗೆ ಸಿಕ್ಕಿಕೊಂಡ ಹುಳ ಹಾರಲಾಗದೆ ಅಲ್ಲಿಯೇ ಸದ್ದು ಮಾಡತೊಡಗಿತು. ಬಿಕ್ಕೆಗಿಡದ ಮೇಲಿದ್ದ ಲುಂಗಿಯ ಅಡಿಯಿಂದ ಕೈಯನ್ನು ಹಾಕಿ ಹುಳ ಹಿಡಿದುಕೊಂಡು ಬಹಳ ಎಚ್ಚರಿಕೆಯಿಂದ ದಾರ ಕಟ್ಟಿ ಹಾರಲು ಬಿಟ್ಟೆ. ಒಂದೆರಡು ಬಾರಿ ದಾರದೊಂದಿಗೆ ಹಾರಲು ಅದು ಮಿಸುಕಾಡಿದರೂ ಮೂರನೆ ಬಾರಿಗೆ ದಾರದ ಸಮೇತ ಹಾರಲು ಯಶಸ್ವಿಯಾಯಿತು.
ಪ್ರಶಾಂತನ ಜೇನುಗೂಡು ಪತ್ತೆಮಾಡುವ ನೂತನ ವಿಧಾನ ಇಲ್ಲಿಯವರೆಗೆ ಯಶಸ್ವಿ ಹಾಗು ಸುಲಭವಾಗಿತ್ತು ನಿಜ. ಆದರೆ ಈಗ ದಾರ ಕಟ್ಟಿದ ನಂತರ ಹುಳುವನ್ನು ಬೆನ್ನತ್ತುವುದು ಯಾವ ಜನ್ಮದ ವೈರಿಗಳಿಗೂ ಬೇಡದ ಕೆಲಸವಾಗಿತ್ತು. ಅವುಗಳಿಗಾದರೋ ಗಾಳಿಯಲ್ಲಿ ಅಡ್ಡಿ ಆತಂಕಗಳಿಲ್ಲದ ರಹದಾರಿ, ಅದನ್ನು ಹಿಂಬಾಲಿಸುವ ನಮಗೆ ಕಲ್ಲು ಮುಳ್ಳುಗಳ ದಾರಿ.
ಆದರೆ ಯಾವ ಕಾರಣಕ್ಕೂ ಕೈಬಿಡುವಂತಿರಲಿಲ್ಲ. ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಹುಳುವಿಗೆ ಕಟ್ಟಿದ್ದ ದಾರವನ್ನು ನೊಡುತ್ತಾ, ಕೈಕಾಲುಗಳಲ್ಲಿ ಮುಳ್ಳು ಕೊರೆದು ರಕ್ತ ಸುರಿಯುತ್ತಿದ್ದರೂ ಗಮನಿಸದೆ ಓಡಿದೆ. ಒಮ್ಮೆ ಗುಡ್ಡದ ಕಡೆ ಮತ್ತೊಮ್ಮೆ ಕಾಡಿನಕಡೆ ಮಗದೊಮ್ಮೆ ನಮ್ಮಮನೆಯ ರಸ್ತೆಯಕಡೆ ಹೀಗೆ ಅದು ಹಾರುತ್ತಿತ್ತು. ವಿಚಿತ್ರವೆಂದರೆ ಆ ಹುಳು ನಾನು ಅದರ ಗೂಡನ್ನು ಪತ್ತೆಮಾಡುತ್ತಿದ್ದೇನೋ ಅಥವಾ ಅದು ನನ್ನ ಮನೆ ಪತ್ತೆ ಮಾಡುತ್ತಿದೆಯೋ ಎನ್ನುವಂತೆ ನಮ್ಮ ಮನೆಯ ಕಡೆ ಹೋಗುತ್ತಿತ್ತು. ಏನಾದರಾಗಲಿ ಆಮೇಲೆ ನೋಡೋಣ ಎಂದು ಅದರ ಹಿಂದೆಯೇ ಓಡಿದೆ. ಅದು ಸೀದಾ ನಮ್ಮ ಮನೆಯ ಜಗುಲಿಯನ್ನು ಪ್ರವೇಶಿಸಿತು. ಒಮ್ಮೆ ಸಖೇದಾಶ್ಚರ್ಯವಾಯಿತು. ಅರೆ, ಜೇನು ನನಗೆ ತಿಳಿಯದಂತೆ ನಮ್ಮ ಮನೆಯೊಳಗೆ ಸೇರಿಕೊಂಡಿದೆಯಾ?, ಇದೆಂತಹಾ ವಿಚಿತ್ರ ವಿಷಯವಾಯಿತಲ್ಲ ಎಂದು ಒಮ್ಮೆ ಅನಿಸಿತು. ಆದರೆ ಈ ವಿಷಯ ನಗೆಪಾಟಲಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಜಗುಲಿ ಪ್ರವೇಶಿಸಿದ ಜೇನು ಹುಳುವನ್ನು ಹುಡುಕಾಡಿದೆ. ಮರದ ಪಕಾಸಿಯ ಮೂಲೆಯಲ್ಲಿ ಒಂದು ಸಣ್ಣ ಮಣ್ಣಿನ ಗೂಡಿನ ಬಾಯಿಂದ ನಾನು ಕಟ್ಟಿದ ಲುಂಗಿಯ ದಾರ ನೇತಾಡುತ್ತಿತ್ತು. ಅಷ್ಟರಲ್ಲಿ ಅಮ್ಮ ಒಳಗಡೆಯಿಂದ ಬಂದು ಎನೋ ಅದು? ಅಂದಳು. ಜೇನುಹುಳಕ್ಕೆ ದಾರ ಕಟ್ಟಿ ಫಾಲೋ ಮಾಡಿದ ಕಥೆ ಹೇಳಿದೆ. ಅಯ್ಯೋ ಹುಚ್ಚು ಮುಂಡೆಗಂಡ ಅದು ಜೇನಲ್ಲ ಗುಬ್ಬಿನೊಣ, ಅದು ಮಣ್ಣಿನಗೂಡು ಕಟ್ಟಿ ಮನೆಯನ್ನೆಲ್ಲಾ ರಾಡಿ ಮಾಡುತ್ತದೆ ಎಂದು ಹೇಳಿ ಹಿಡಿಯಿಂದ ಅದನ್ನು ಕಿತ್ತೆಸೆದಳು. ಜೇನು ಹಿಡಿಯುವ ಪ್ರಯತ್ನದಲ್ಲಿ ಪ್ರಥಮ ಚುಂಬನಂ ದಂತಭಗ್ನಂ ಕಥೆ ನನ್ನದಾದರೂ ಈ ಘಟನೆಯಿಂದ ಜೇನಿನ ಹುಚ್ಚು ಇನ್ನಷ್ಟು ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ.
ಆದರೆ ಈ ಘಟನೆ ಮತ್ತೊಂದು ಸಣ್ಣ ನಗೆ ಪ್ರಸಂಗಕ್ಕೆ ಕಾರಣವಾಯಿತು. ನಾನು ಬಿಕ್ಕೆ ಗಿಡದ ಮೇಲೆ ಕುಳಿತ ಜೇನುಹುಳ ಹಿಡಿಯುವ ಗುಂಗಿನಲ್ಲಿ ಉಟ್ಟ ಲುಂಗಿ ಬಿಚ್ಚಿ ಗಿಡದ ಮೇಲೆ ಹಾಕುತ್ತಿದ್ದ ಕೆಲಸ ದೂರದ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರಿಗೆ ವಿಚಿತ್ರವಾಗಿ ತೋರಿ ಅಲ್ಲಿ ಕೆಲ ಸಮಯ ಚರ್ಚಾವಿಷಯವಾಯಿತಂತೆ, ಯಾರು ಅದು? ಯಾಕೆ ಲುಂಗಿ ಬಿಚ್ಚಿ ಕುಣಿಯುತ್ತಿದ್ದಾರೆ ಎಂದು ಅರ್ಥವಾಗದೆ ಹಲವಾರು ಊಹಾಪೋಹಗಳಿಗೆ ಕಾರಣವಾಯಿತೆಂದು ನನಗೆ ಸಂಜೆ ಅಂಗಡಿ ಕಡೆಗೆ ಹೋದಾಗ ತಿಳಿಯಿತು. ಆದರೆ ಹಾಗೆ ಕುಣಿದವನು ನಾನೇ ಎಂದು ಹೇಳದೆ ಸುಮ್ಮನುಳಿದೆ.
* * * * *
ಪಟಾಕಿ......!

ಜೇನಿನಲ್ಲಿ ಅತ್ಯಂತ ಅಪಾಯಕಾರಿ ಹಾಗು ಮನುಷ್ಯರಿಗೆ ಪೆಟ್ಟಿಗೆಯೊಳಗೆ ಸಾಕಲು ಆಗದ ಜೇನೆಂದರೆ ಹೆಜ್ಜೇನು. ಸಾಮಾನ್ಯ ಮನುಷ್ಯನ ಹೆಬ್ಬೆಟ್ಟು ಗಾತ್ರದಷ್ಟಿರುವ ಹೆಜ್ಜೇನುಹುಳುಗಳು ಜೇನಿನಲ್ಲಿಯೇ ಅತ್ಯಂತ ಬಲಿಷ್ಟ ಜಾತಿ. ಮಲೆನಾಡು, ಬಯಲುಸೀಮೆ ಎಂಬ ಭೇದಭಾವವಿಲ್ಲದೆ ವಾಸಿಸುವ ಹೆಜ್ಜೇನು ಕಡಿದು ಪ್ರಾಣ ಕಳೆದುಕೊಂಡವರೂ ಹಲವರಿದ್ದಾರೆ. ಮನುಷ್ಯನನ್ನು ಹೊರತುಪಡಿಸಿದರೆ ಕರಡಿ ಹಾಗು ಗಿಡುಗ ಹೆಜ್ಜೇನಿನ ಶತ್ರುಗಳು. ಕರಡಿ ಹಾಗು ಗಿಡುಗ ಹೆಜ್ಜೇನು ಗೂಡಿಗೆ ಧಾಳಿ ಮಾಡಿದಾಗಲೆಲ್ಲಾ ಅವು ಮನುಷ್ಯನ ಮೇಲೆ ತಮ್ಮ ಸೇಡು ತೀರಿಸಿಕೊಳ್ಳುತ್ತವೆ. ಗಿಡುಗ ಹೆಜ್ಜೇನುಗೂಡನ್ನು ಒದ್ದು ಹಾರಿಹೋದ ಸಮಯದಲ್ಲಿ ಅಲ್ಲಿ ಮನುಷ್ಯರು ಹೋದರೆ ಅಟ್ಟಿಸಿಕೊಂಡು ಬರುತ್ತವೆ. ಎರಡು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಧಾಳಿ ಮಾಡಿದ ದಾಖಲೆಗಳಿವೆ. ಅವುಗಳು ಎಷ್ಟರಮಟ್ಟಿಗೆ ಸಿಟ್ಟಾಗುತ್ತವೆ ಎಂದರೆ ನೀರೊಳಗೆ ಮುಳುಗಿದರೂ ಬಿಡುವುದಿಲ್ಲ. ನೀರಿನಿಂದ ಉಸಿರಾಡಲು ತಲೆ ಹೊರಹಾಕಿದಾಗ ಅಲ್ಲೇ ಸುತ್ತುವರೆಯುತ್ತಲಿರುವ ಜೇನು ಮತ್ತೆ ಹೊಡೆಯುತ್ತವೆ. ಹೆಜ್ಜೇನು ಧಾಳಿಯಿಂದ ಬದುಕುಳಿಯಲು ಇರುವ ಏಕೈಕ ಮಾರ್ಗೋಪಾಯವೆಂದರೆ ಕಂಬಳಿ ಮುಚ್ಚಿ ಕುಳಿತುಕೊಳ್ಳುವುದು. ಕಂಬಳಿ ಮುಚ್ಚಿಕುಳಿತಾಗ ಅವು ಧಾಳಿಯನ್ನೇನೂ ನಿಲ್ಲಿಸುವುದಿಲ್ಲ ಆದರೆ ಕಂಬಳಿಯನ್ನು ಅವು ಮನುಷ್ಯರೆಂದು ತಿಳಿದುಕೊಂಡು ಅಂಬನ್ನು ಕಂಬಳಿಗೆ ಚುಚ್ಚುತ್ತವೆ. ಅಂಬು(ಜೇನು ಹುಳದ ಹಿಂಭಾಗದಲ್ಲಿರುವ ಚಿಕ್ಕದಾಗಿರುವ ವಿಷದ ಬಾಣ) ಕಂಬಳಿಯನ್ನು ದಾಟಿ ಮನುಷ್ಯರಿಗೆ ಚುಚ್ಚುವುದಿಲ್ಲವಾದ್ದರಿಂದ ಬದುಕುಳಿಯಬಹುದು. ಹಾಗಾಗಿ ಅದೊಂದೇ ಪರಿಹಾರ ಮಾರ್ಗ. ಬಹಳ ಜನರಲ್ಲಿ ಜೇನು ಕಡಿಯುತ್ತದೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಜೇನು ಕಚ್ಚುವುದಿಲ್ಲ. ಅದರ ಹಿಂಭಾಗದಲ್ಲಿ ಚಿಕ್ಕದಾದ ಮುಳ್ಳಿರುತ್ತದೆ. ಅದನ್ನು ಜೇನುಹುಳು ನಮ್ಮ ಚರ್ಮಕ್ಕೆ ಚುಚ್ಚುತ್ತದೆ. ಹಾಗಾಗಿ ಜೇನುಹುಳ ದೂರದಿಂದ ಮಾತ್ರ ಗುರಿ ನಿರ್ಧರಿಸಿ ಧಾಳಿಮಾಡಬಲ್ಲದು. ಕೈಯಲ್ಲಿ ಹುಳವನ್ನು ಹಿಡಿದುಕೊಂಡುಬಿಟ್ಟರೆ ಅದಕ್ಕೆ ಗುರಿ ನಿರ್ಧರಿಸಲು ಸಾಧ್ಯವಾಗದಿರುವುದರಿಂದ, ರಭಸದಿಂದ ಚುಚ್ಚಲು ಬರುವುದಿಲ್ಲ. ಹಾಗಾಗಿ ಜೇನುಕಡಿಯಿತು ಅನ್ನುವುದಕ್ಕಿಂತಲೂ ಜೇನು ಹೊಡೆಯಿತು ಎನ್ನುವುದೇ ಸರಿಯಾದ ಅರ್ಥ. ದುರಂತವೆಂದರೆ ಅಂಬನ್ನು ಚರ್ಮಕ್ಕೆ ನಾಟಿಸಿದ ಜೇನು ಸ್ವಲ್ಪ ಹೊತ್ತಿನಲ್ಲಿ ಗಿರಕಿ ಹೊಡೆದು ಸಾವನ್ನಪುತ್ತದೆ.
ಹೆಜ್ಜೇನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೊಡ್ಡ ಮರದ ಗಟ್ಟಿ ಕೊಂಬೆಗೆ ಹಾಗು ಪಟ್ಟಣಗಳಲ್ಲಿ ಬಹುಮಹಡಿ ಕಟ್ಟಡಕ್ಕೆ ಅಥವಾ ದೊಡ್ಡ ನೀರಿನ ಟ್ಯಾಂಕಿಗೆ ತತ್ತಿಯನ್ನು ಕಟ್ಟಿಕೊಳ್ಳುತ್ತವೆ. ಒಂದೇ ತತ್ತಿಗೆ ಜೋತುಬೀಳುವ ಹೆಜ್ಜೇನು ಲಕ್ಷಾಂತರ ಹುಳುಗಳ ತಂಡ ಹೊಂದಿದ್ದರೂ ಏಕನಾಯಕತ್ವದ ನಿಯಮದಡಿಯಲ್ಲಿ ಒಂದೇ ರಾಣಿಯ ಆಜ್ಞೆಯನ್ನು ಪಾಲಿಸುತ್ತವೆ. ಕೆಲವು ಸಾಲು ಮರಗಳಲ್ಲಿ ಇಪ್ಪತ್ತು ಇಪ್ಪತ್ತೈದು ಹೆಜ್ಜೇನುಗೂಡು ಕಟ್ಟಿಕೊಂಡಿರುವುದನ್ನು ಕಾಣಬಹುದು. ಅವಷ್ಟೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವುಗಳಾಗಿರುತ್ತವೆ. ತಮ್ಮ ಗೂಡನ್ನು ಹೊರತುಪಡಿಸಿ ಅಪ್ಪಿತಪ್ಪಿಯೂ ಅಕ್ಕಪಕ್ಕದ ಜೇನುಗೂಡಿಗೆ ಹುಳುಗಳು ಹೋಗುವುದಿಲ್ಲ. ಅಕಸ್ಮಾತ್ ಹೋದರೂ ಆ ಹುಳವನ್ನು ಮತ್ತೊಂದು ಗೂಡಿನ ಹುಳುಗಳು ಕಚ್ಚಿ ಸಾಯಿಸಿಬಿಡುತ್ತವೆ. ಅವು ತಮ್ಮ ಗುಂಪನ್ನು ಗುರುತಿಸಲು ರಾಣಿಹುಳು ಸ್ರವಿಸುವ ಪ್ಯಾರಾಮೂನ್ ಎಂಬ ದ್ರವವನ್ನು ಆಶ್ರಯಿಸುತ್ತವೆ. ಒಂದು ರಾಣಿಯ ಪ್ಯಾರಾಮೂನ್‌ದ್ರವದ ಅಡಿಯಲ್ಲಿ ಬಂದ ಹುಳು ಬೇರೆ ರಾಣಿಯ ಗುಂಪಿಗೆ ಹೋದಾಗ ಗುರುತಿಸುವುದು ಈ ವಾಸನೆಯಿಂದಲೇ. ಈ ಕ್ರಮವನ್ನು ಅವು ಹಿಸ್ಸೆಯಾಗುವವರೆಗೂ ಪಾಲಿಸುತ್ತವೆ. ತುಡುವೆಜೇನು ಹಾಗು ಕೋಲ್ಜೇನು ಇದೇ ಕ್ರಮವನ್ನು ಅನುಸರಿಸುತ್ತವೆ. ನಿಸರಿಜೇನು ಮಾತ್ರ ರಾಣಿಯನ್ನು ಹೊಂದಿರದೆ ಇದಕ್ಕೆ ಹೊರತಾಗಿದೆ. ಹೆಜ್ಜೇನು ಆಹಾರದ ಸಂಗ್ರಹಣೆಗಾಗಿ ೪-೫ ಕಿಲೋಮೀಟರ್ ದೂರದವರೆಗೂ ಹೋಗುವ ಸಾಮರ್ಥ್ಯವನ್ನು ಹೊಂದಿವೆ. ತನ್ನ ಗೂಡಿನ ಹತ್ತಿರದಲ್ಲಿ ನೀರು ಇದ್ದರೂ ಅವು ದೂರದಿಂದಲೇ ನೀರು ಸಂಗ್ರಹಿಸುತ್ತವೆ.
ಸಾಮಾನ್ಯವಾಗಿ ಸರಿಯಾಗಿ ಅಭಿವೃದ್ದಿಯಾದ ಹೆಜ್ಜೇನನ್ನು ಕಿತ್ತಾಗ ಇಪ್ಪತ್ತು ಕೆ.ಜಿ ತುಪ್ಪ ಸಿಗುತ್ತದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಹಜ ಕಾಡಿನಲ್ಲಿ ಹೆಜ್ಜೇನು ಹೇರಳವಾಗಿದೆ. ಹೆಜ್ಜೇನಿನ ತುಪ್ಪ ಸಂಗ್ರಹಿಸಲು ಸರ್ಕಾರ ಅರಣ್ಯಇಲಾಖೆಯ ಮೂಲಕ ಹರಾಜು ಹಾಕುತ್ತದೆ. ಅಲ್ಲಿಯ ಸಿದ್ದಿಜನಾಂಗ ಹೆಜ್ಜೇನು ಕೀಳುವುದರಲ್ಲಿ ಸಿದ್ದಹಸ್ತರು. ಹೆಜ್ಜೇನು ಗೂಡು ಕಟ್ಟಿರುವ ಮರದ ಕೆಳಗೆ ದಟ್ಟವಾದ ಹೊಗೆ ಹಾಕಿ ಅದು ಕಾರ್ಮೋಡದಂತೆ ಒಮ್ಮೆಲೆ ಜೇನುಗೂಡನ್ನು ಮುಚ್ಚುವಂತೆ ಮಾಡುತ್ತಾರೆ. ಈ ತರಹದ ಅನಿರೀಕ್ಷಿತ ಹೊಗೆಯಿಂದ ಅಷ್ಟೂ ಜೇನುಹುಳುಗಳು ಒಂದು ಸಾರಿ ತತ್ತಿಯನ್ನು ಬಿಟ್ಟು ಮೇಲೆ ಹಾರುತ್ತವೆ. ಹಾರಿದ ಜೇನುಹುಳುಗಳು ಮತ್ತೆ ತತ್ತಿಯ ಸಮೀಪ ವಾಪಾಸು ಬರುವುದರೊಳಗೆ ಮರವನ್ನು ಏರಿ ಅಥವಾ ಮೊದಲೇ ಏರಿ ಕುಳಿತುಕೊಂಡು ತತ್ತಿಯನ್ನು ಕೊಯ್ದು ಹಗ್ಗದ ಮೂಲಕ ಕೆಳಗಿಳಿಸುತ್ತಾರೆ. ಈ ರೀತಿ ಒಂದು ಹೆಜ್ಜೇನು ಕೀಳುವುದರಿಂದ ಕನಿಷ್ಟ ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿ ಆದಾಯ ಗಳಿಸಬಹುದು.
ಪುಸ್ತಕದಲ್ಲಿ ಆದಾಯದ ಹಾಗೂ ಲಾಭದ ವಿಚಾರ ಬಂದಾಗಲೆಲ್ಲಾ ಎಲ್ಲರ ಆಸೆಯೂ ಚಿಗುರುತ್ತದೆ. ಆದರೆ ವಾಸ್ತವದ ಕಥೆ ಅಷ್ಟು ಸುಲಭವಲ್ಲ. ಹೆಜ್ಜೇನಿನ ಗೂಡಿನ ತತ್ತಿಯಿಂದ ಜೇನುತುಪ್ಪ ಸಂಗ್ರಹಿಸುವುದು ಅತ್ಯಂತ ಧೈರ್ಯ, ಸಾಹಸಗಳನ್ನು ಬೇಡುವ ಕೆಲಸ. ಇದಕ್ಕೆ ನುರಿತ ಕೆಲಸಗಾರರೇ ಆಗಿರಬೇಕು. ಮೂರ್ನಾಲ್ಕು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿಯಬೇಕು. ನಿಗದಿತ ಸಮಯದಲ್ಲಿ ಕೆಳಗಡೆಯಿಂದ ಬರುವ ಹೊಗೆ ಕಡಿಮೆಯಾಗಿ ಅಥವಾ ತತ್ತಿ ಕೊಯ್ಯಲಾಗದಿದ್ದರೆ ಮರಹತ್ತಿದವನ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರೂ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಆಗದ ಮಾತು. ಈ ಪ್ರಕ್ರಿಯೆ ಓದಲು ಅಥವಾ ಮತ್ಯಾರ ಬಳಿಯೋ ಕಥೆ ಕೇಳಲು ಸ್ವಾರಸ್ಯಕರವಾಗಿರುತ್ತದೆ. ಆದರೆ ವಾಸ್ತವ ಮಾತ್ರ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ. ಪ್ರತೀಬಾರಿಯೂ ಹೊಸಹೊಸ ಸಮಸ್ಯೆಗಳು ಎದುರಾಗುತ್ತವಾದ್ದರಿಂದ ಹೆಜ್ಜೇನಿನ ವಿಷಯದಲ್ಲಿ ಪರಿಣಿತರ ಸಹಾಯದಿಂದ ಮುನ್ನುಗ್ಗುವುದೊಳಿತು. ಒಮ್ಮೆ ಹಾಗೆಯೇ ಆಯಿತು.
ನಮ್ಮ ಪಕ್ಕದ ಊರಾದ ಇಡುವಾಣಿಯಲ್ಲಿ ಪಟಾಕಿನಾರಾಯಣ ಎಂಬೊಬ್ಬನಿದ್ದ. ಪಟಾಕಿ ಎಂದು ಅವನಿಗೆ ಅಡ್ಡ ಹೆಸರು. ಹಾಗಂತ ಅವನು ಪಟಾಕಿಯನ್ನು ತಯಾರಿಸುವುದಾಗಲಿ, ವ್ಯಾಪಾರಮಾಡುವುದಾಗಲಿ ಮಾಡುತ್ತಾನೆಂದು ತಿಳಿಯುವುದು ತಪ್ಪು. ಪ್ರಪಂಚದ ಯಾವುದೇ ವಿಷಯವಾದರೂ ಅವನು ತನಗೆ ಗೊತ್ತು ಎನ್ನುತ್ತಿದ್ದರಿಂದ ಅವನಿಗೆ ಪಟಾಕಿನಾರಾಯಣ ಎನ್ನುತ್ತಿದರು. ಪಟಾಕಿ ಎಂಬ ಶಬ್ದವನ್ನು ಆತನೂ ಸಂಪೂರ್ಣ ಒಪ್ಪಿಕೊಂಡು ನಾರಾಯಣ ಹೆಸರನ್ನು ಸೇರಿಸದೆ ಕೇವಲ ಪಟಾಕಿ ಎಂದು ಕರೆದರೂ ಓ ಎನ್ನುತ್ತಿದ್ದ.
ಮಾರ್ಚ್ ತಿಂಗಳ ಒಂದು ದಿನ ಬೆಳಿಗ್ಗೆ ನಾವೆಲ್ಲಾ ಕುಮುಟಾಭಟ್ಟರ ಅಂಗಡಿಯಲ್ಲಿ ಮಾತನಾಡುತ್ತಾ ಕುಳಿತಿದ್ದೆವು. ಮನಮನೆಯ ಕಡೆಯಿಂದ ತಲ್ವಾಟದ ರಸ್ತೆಯ ಮೂಲಕ ನಡೆದುಕೊಂಡು ಬಂದ ಕಾಶಿ ರಾಮಕೃಷ್ಣ ತಲ್ವಾಟದ ರಮಾನಂದ ಹೆಗಡೆಯವರ ಮನೆ ಬಳಿ ಹೆಜ್ಜೇನು ಗೂಡಿಗೆ ಗಿಡುಗ ಒದ್ದಿದ್ದು ಹಾಗು ಅದು ರಸ್ತೆಯಲ್ಲಿ ಓಡಾಡುವ ಶಾಲೆ ಮಕ್ಕಳಿಗೆ ಹೊಡೆದ ಸುದ್ದಿಯನ್ನು ಭಯದಿಂದ ಹೇಳಿದ. ಅಲ್ಲಿ ನಮ್ಮ ಪಟಾಕಿ ನಾರಾಯಣನೂ ಇದ್ದ. ಅಲ್ಲಿದ್ದವರೆಲ್ಲ ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ನಾರಾಯಣ,
ಅಯ್ಯೋ ದೇವ್ರೆ ಅದಕ್ಕೆಂತ ಅಷ್ಟು ಹೆದರ‍್ತ್ರಿ, ನಾನು ಇಂಥಾ ಸಾವ್ರ ಜೇನ್ ಕಂಡಿದೆ, ಮೆಣ್ಸಿನ ಗೂಜಿಗೆ ಬೆಂಕಿ ಹಾಕಿ ಬುಡ್ದಲ್ಲಿಟ್ರೆ ಎಲ್ಲಾ ಜೇನು ಪರಾರಿ ಅಗ್ತೋ, ಕಾಣಿನಿ ಬೇಕಾರೆ ಎಂದ.
ಹಾಗಾದ್ರೆ ಅದೊಂದು ಹೊಗೆ ಹಾಕಿ ಉಪಕಾರ ಮಾಡು ಮಾರಾಯ, ಜೇನಿನ ಹತ್ರ ಹೋಗೋದಕ್ಕೆ ಎಲ್ಲಾ ಹೆದ್ರಿ ಸಾಯ್ತಾ ಇದಾರೆ ಕಾಶಿ ರಾಮಕೃಷ್ಣ ಹೇಳಿದ.
ಈಗ ನಾರಾಯಣನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಹೆಜ್ಜೇನಿನ ಹಿಂದೂ ಮುಂದೂ ಗೊತ್ತಿಲ್ಲದೆ ಯಾರೋ ಹೊಗೆ ಹಾಕಿದರೆ ಹಾರಿಹೋಗುತ್ತವೆ ಎಂದಿದ್ದನ್ನು ಕೇಳಿ ಇಲ್ಲಿ ಎಲ್ಲರೆದುರು ಕೊಚ್ಚಿಕೊಂಡಿದ್ದ. ಪರಿಸ್ಥಿತಿ ಅವನ ಕಾಲಬುಡಕ್ಕೆ ತಗುಲುವ ಹಾಗಿತ್ತು.
ನಂಗೆ ಒಂಚೂರು ಮನಮನೆಗೆ ಹೊಯ್ಕು ಇಲ್ದಿದ್ರೆ ನಾನೇ ಓಡಿಸ್ತಿದ್ದೆ, ಅದ್ಯಾವ ಮಹಾ ಕೆಲಸ ಎಂದ ನಾರಾಯಣ. ಅಷ್ಟರಲ್ಲಿ ಚೆನ್ನ ಅದೆಲ್ಲಿದ್ದನೋ ಬಂದು ಅಯ್ಯ ನಾರಾಯಣ ಶೆಟ್ರಿಗೆ ಇದ್ಯಾವ ಮಹಾ, ಅವ್ರು ಖಂಡಿತಾ ಹೆಜ್ಜೇನು ಓಡಿಸ್ತಾರಪ್ಪ, ಮನಮನೆಗೆ ಹೋಗೋ ಕೆಲಸಕ್ಕೆ ಇಲ್ಲೆ ಯವಸ್ಥೆ ಮಾಡಿದ್ರಾತು ಎಂದ ಬಲಗೈ ಮುಷ್ಠಿಕಟ್ಟಿ ಹೆಬ್ಬೆರಳನ್ನು ಮೇಲ್ಮುಖ ಮಾಡಿ ಪಟಾಕಿ ನಾರಾಯಣ ಕಂತ್ರಿ ಸರಾಯಿಕುಡಿಯುವ ಪರಿಯನ್ನು ಅಣಕಿಸಿ ತೋರಿಸುತ್ತಾ. ಅಲ್ಲದೇ, ಮನಮನೆಗೆ ಹೋಗೋದಾದ್ರೂ ಅದೇ ರಸ್ತೆ ಸೈಯಲ, ದಾರೀಲಿ ಹೆಜ್ಜೇನು ಓಡ್ಸಿ ಹೋಕ್ತಾರಪ ಎಂದು ನಾರಾಯಣನಿಗೆ ಗಾಳಿಹಾಕತೊಡಗಿದ. ನಾರಾಯಣನಿಗೆ ಈಗ ಅನಿವಾರ್ಯವಾಯಿತು.
ಕುಮುಟಾ ಭಟ್ಟರ ಅಂಗಡಿಕಟ್ಟೆಯಲ್ಲಿದ್ದ ಎಲ್ಲರೂ ನನ್ನ ವ್ಯಾನ್ ಹತ್ತಿಕೊಂಡು ತಲ್ವಾಟದತ್ತ ಹೊರಟಾಯಿತು. ಪಟಾಕಿನಾರಾಯಣ ಚೆನ್ನನ ಗಾಳಿ ಮಾತಿನಿಂದ ಸಿಕ್ಕಾಪಟ್ಟೆ ಉಬ್ಬಿಹೋಗಿದ್ದ. ನನಗೆ ಹೆಜ್ಜೇನು ಕೀಳುವ ಈ ಸಾಹಸ ಏನಾದರೂ ಭಾನಗಡಿಯಾದೀತೆಂಬ ಭಯದಲ್ಲಿ,
ಪಟಾಕಿ, ನಿಂಗೆ ಸರಿ ಗೊತ್ತಿದ್ರೆ ಕೆಲ್ಸ ಮಾಡು ಇಲ್ದಿದ್ರೆ ಬ್ಯಾಡ ಕೊನೆಗೆ ಒಂದಕ್ಕೆ ಒಂದೂವರೆಯಾದೀತು, ನಮಗೂ ಯಾರಿಗೂ ಹೆಜ್ಜೇನನ್ನು ಓಡ್ಸೋದು ಗೊತ್ತಿಲ್ಲಎಂದೆ. ಆದರೆ, ಪಟಾಕಿನಾರಾಯಣ ನಮ್ಮ ಯಾರ ಮಾತನ್ನೂ ಕೇಳುವ ಹಂತದಲ್ಲಿರಲಿಲ್ಲ. ಚೆನ್ನನ ಬಳಿ ತನ್ನ ಹಳೆ ಸಾಹಸ ಕೊಚ್ಚಿಕೊಳ್ಳುವುದರಲ್ಲಿ ಮುಳುಗಿದ್ದ. ಹೆಜ್ಜೇನು ಧಾಳಿ ಮಾಡುತ್ತಿರುವ ರಮಾನಂದ ಹೆಗಡೆಯವರ ಮನೆಬಳಿ ಎಲ್ಲರೂ ತಲುಪಿದ್ದಾಯಿತು. ಬೆಳಿಗ್ಗೆ ಮುಂಚೆ ಗಿಡುಗ ಒದ್ದಿದ್ದರೂ, ಆಗಲೇ ತುಂಬಾ ಹೊತ್ತಾದ್ದರಿಂದ ನಾವು ಹೋಗುವಷ್ಟರಲ್ಲಿ ಜೇನುಹುಳುಗಳು ಶಾಂತವಾಗಿದ್ದವು. ಅದನ್ನು ತಿಳಿದ ಪಟಾಕಿನಾರಾಯಣನ ವರಸೆ ಇನ್ನಷ್ಟು ಜಾಸ್ತಿಯಾಯಿತು.
ನನ್ನ ವಾಸ್ನೆ ಅಂದ್ರೆ ಹಂಗ್ ಇತ್ತ ಕಾಣ್ ಚೆನ್ನ, ನನ್ ಹೆಸ್ರ ಕೇಣಿರೆ ಜೇನು ಸುಮ್ನಿರ್ಕು. ನಾನೊಂದ್ಸಾರಿ ಯಲ್ಲಾಪುರ‍್ದ ಕಾನಾಗೆ ಮೂರ್ ತಾಸ್ನೊಳಗೆ ಇಪ್ಪತ್ತೇಳು ಹೆಜ್ಜೇನು ಕೊಯ್ದಿದ್ದೆ. ಫಾರೆಸ್ಟ್ ರೇಂಜ್ರು ಶಭಾಷ್ ಬಡ್ಡಿಮಗನೆ ಅಂದ್ರು, ಪ್ರಶಸ್ತಿ ಕೊಡಸ್ತೆ ಅಂದ್ರು, ನಾನೇ ಬ್ಯಾಡ ಅಂದೆ ಹೀಗೆ ಓತಪ್ರೋತವಾಗಿ ಪಟಾಕಿ ಉದುರಿಸುತ್ತಿದ್ದ.
ಚೆನ್ನನಿಗೂ ಅವನ ಕೊರೆತ ಕೇಳಿ ಬೇಸರಬಂದಿರಬೇಕು, ಹೆಜ್ಜೇನು ಹಿಡಿಯದು, ತುಪ್ಪ ತೆಗಿಯದು ಎಲ್ಲಾ ಕೊನಿಗಾತು, ಸದ್ಯ ಈಗ ಈ ಹೆಜ್ಜೇನು ಓಡ್ಸಿ ಅಂದ.
ರಮಾನಂದ ಹೆಗಡೆಯವರ ಮನೆಗಿಂತ ಅನತಿ ದೂರದಲ್ಲಿ ಹೆಜ್ಜೇನು ಅಪರೂಪದ ಜಾಗದಲ್ಲಿ ತತ್ತಿ ಕಟ್ಟಿತ್ತು. ರಸ್ತೆಯ ಪಕ್ಕದಲ್ಲಿ ನಲವತ್ತು ಅಡಿ ಆಳದ ಕಂದಕ. ಕಂದಕದ ಬುಡದ ಅಡಿಕೆತೋಟದಿಂದ ಬೈನೆ ಮರವೊಂದು ಬೆಳೆದು ನಿಂತಿತ್ತು. ತೋಟದಿಂದ ಮರದ ಎತ್ತರ ಸುಮಾರು ಐವತ್ತು ಅಡಿ, ಆ ಮರದ ಬುಡದಲ್ಲಿಯೇ ತೋಟಕ್ಕೆ ಇಳಿದು ಹೋಗುವ ದಾರಿ ಇತ್ತು. ಇಡೀ ಮರ ಐವತ್ತು ಅಡಿ ಎತ್ತರದಲ್ಲಿದ್ದರೂ ಜೇನುಗೂಡು ಕಟ್ಟಿದ್ದ ಬೈನೆ ಮರದ ಕೊಂಬೆ ರಸ್ತೆಯಿಂದ ಕೇವಲ ಹತ್ತು ಅಡಿ ಎತ್ತರದಲ್ಲಿತ್ತು. ಹಾಗಾಗಿಯೇ ಗಿಡುಗ ಒದ್ದಕೂಡಲೆ ಅವು ದಾರಿಹೋಕರಮೆಲೆ ಧಾಳಿಮಾಡಿದ್ದು. ಅಲ್ಲಿಂದ ನೂರುಅಡಿ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ಮೂರ್ನಾಲ್ಕು ಮನೆ. ಇಂತಹಾ ಸುಲಭದಲ್ಲಿ ಜೇನಿನ ಧಾಳಿಗೆ ಜನರು ತುತ್ತಾಗುವ ಸಂದರ್ಭವಿರುವುದರಿಂದ ಹೊಗೆಹಾಕಿ ಓಡಿಸುವುದೂ ಕೂಡ ಸ್ವಲ್ಪ ಅಪಾಯಕಾರಿ ಹಾಗು ಕಷ್ಟಕರವಾಗಿತ್ತು. ಅಕಸ್ಮಾತ್ ಜೇನು ಓಡಿಸುವ ಕೆಲಸದಲ್ಲಿ ವ್ಯತ್ಯಾಸವಾದರೆ ಊರಿಗೆಊರೇ ಜೇನು ಧಾಳಿಗೆ ಗುರಿಯಾಗುವ ಸಂಭವ ಇತ್ತು. ಆದರೆ ಪಟಾಕಿನಾರಾಯಣ ಇದ್ಯಾವುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಹೊಗೆ ಹಾಕುವ ತಯಾರಿಯಲ್ಲಿದ್ದ. ನಮಗೂ ಹೆಜ್ಜೇನನ್ನು ಓಡಿಸುವುದು ಬೇಕಾಗಿತ್ತು. ಆದರೆ ಓಡಿಸುವ ರೀತಿ ನೀತಿಗಳು ತಿಳಿಯದ್ದರಿಂದ ಪಟಾಕಿ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ರಮಾನಂದ ಹೆಗಡೆಯವರ ಮನೆ ಬಾಗಿಲಲ್ಲಿ ವ್ಯಾನ್ ನಿಲ್ಲಿಸಿಕೊಂಡು ನಿಂತೆವು.
ಪಟಾಕಿ ನಾರಾಯಣ ಉದ್ದನೆಯ ಬಿದಿರು ಕೋಲಿನ ತುದಿಯನ್ನು ಎರಡು ಅಡಿಯಷ್ಟು ಸೀಳಿ ಅದರ ಮಧ್ಯೆ ಗಾರೆ ಕೆಲಸಕ್ಕೆ ಬಳಸುವ ಕಬ್ಬಿಣದ ಬಾಂಡ್ಲಿ ಕಟ್ಟಿದ. ಅದರೊಳಗೆ ಒಣಗಿದ ಅಡಿಕೆಸಿಪ್ಪೆ ಹಾಗು ಕಾಳುಮೆಣಸಿನ ಗೂಜು ತುಂಬಿ ಸ್ವಲ್ಪ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ. ನಂತರ ಬಾಯಲ್ಲಿ ಉಫ್ ಎಂದು ಬೆಂಕಿ ಆರಿಸಿದ. ಬೆಂಕಿ ಆರಿದ ಕೂಡಲೇ ಗಾಢವಾದ ಹೊಗೆ ಬಾಂಡ್ಲಿಯಿಂದ ಮೇಲೇಳತೊಡಗಿತು.
ಅಲ್ಲಿಯವರೆಗಿನ ಅವನ ತಯಾರಿ ನೋಡುತ್ತಿದ್ದ ನನಗೆ ಅವನು ಹೇಳಿದ್ದು ತೀರಾ ಸುಳ್ಳಲ್ಲ ಅಂತ ಅನಿಸತೊಡಗಿತು. ಉದ್ದ ಕೋಲಿನ ತುದಿಯನ್ನು ಹಿಡಿದುಕೊಂಡು ಹೆಜ್ಜೇನು ಗೂಡಿರುವ ಜಾಗದತ್ತ ಹೋಗತೊಡಗಿದ ಪಟಾಕಿ ನಾರಾಯಣ ಅರ್ಧದಾರಿಗೆ ಹೋದವನು ನಮ್ಮತ್ತ ತಿರುಗಿ,
ಅಯ್ಯೋ ಶಿವನೇ ನೀವು ಇಷ್ಟು ಹೆದ್ರಿಕೊಂಡ್ರೆ ಜೀವನ ಮಾಡ್ದಂಗೆ, ಅಲ್ಲಿ ರಸ್ತೆ ಪಕ್ದಲ್ಲಿ ಕಾರ್ ನಿಲ್ಸಿ, ಎಂತು ಆತಿಲ್ಲೆ ಮಾರಾಯ್ರೆ, ಈಗ ಒಂದ್ ಕ್ಷಣದಲ್ಲಿ ಅವು ನಾಪತ್ತೆಯಾತೋ ಕಾಣಿ ಎಂದ. ನನಗೂ ಅದನ್ನು ಹತ್ತಿರದಿಂದ ನೋಡುವ ಆಸೆಯಾಯ್ತು. ವ್ಯಾನಿನೊಳಗಡೆ ಗ್ಲಾಸನ್ನೇರಿಸಿ ಕುಳಿತುಕೊಂಡರೆ ಜೇನು ಬರಲಾರದು ಎಂದು ವ್ಯಾನ್ ಸ್ಟಾರ್ಟ್‌ಮಾಡಿ ನಿಧಾನ ಹೋಗಿ ಪಟಾಕಿ ನಾರಾಯಣನಿಗಿಂತ ಹತ್ತಡಿ ದೂರದಲ್ಲಿ ನಿಲ್ಲಿಸಿದೆ. ಚೆನ್ನನೂ ಬಂದು ವ್ಯಾನ್ ಹತ್ತಿ ಕುಳಿತ. ಮಿಕ್ಕವರು ದೂರದಲ್ಲಿ ನಿಂತರು.
ಪಟಾಕಿನಾರಾಯಣ ಹೊಗೆಯ ಬಾಂಡ್ಲಿಯನ್ನು ಹೆಜ್ಜೇನಿನ ತತ್ತಿಗಿಂತ ಸುಮಾರು ಐದಡಿ ಕೆಳಗೆ ಹಿಡಿದ. ಒಮ್ಮೆಲೆ ರೊಂಯ್ಯನೆ ಸದ್ದು ಮಾಡುತ್ತಾ ಲಕ್ಷಾಂತರ ಹುಳು ಮೇಲೇರ ತೊಡಗಿತು. ಆಗ ಪಟಾಕಿ ನಮ್ಮ ಕಡೆ ತಿರುಗಿ,
ಕಂಡೀರ‍್ಯಾ, ನಾನ್ ಹೇಳಿದ್ ಮೇಲೆ ಮುಗಿತು, ಕಾಣಿ ಜೇನೂ ಇಲ್ಲೆ ಎಂತದು ಇಲ್ಲೆ, ಅದೆಂತಾ ಹೆದರ‍್ತ್ರಿ ಕಾರಿಂದ ಇಳೀರಿ ಮರಾಯ್ರೆ ಎಂದ.
ಅವನು ಅಷ್ಟು ಹೇಳಿ ಮುಗಿಸುವಷ್ಟರಲ್ಲಿ ಅವನು ಹಿಡಿದಿದ್ದ ಬಾಂಡ್ಲಿಯಿಂದ ಭಗ್ಗನೆ ಬೆಂಕಿ ಹೊತ್ತಿಕೊಂಡಿತು. ಪಟಾಕಿ ಒಮ್ಮೆಲೆ ಗಾಬರಿಯಾಗಿ ಕೋಲು ಕೈಬಿಟ್ಟ. ಅಲ್ಲಿಯತನಕ ದಟ್ಟವಾಗಿದ್ದ ಹೊಗೆ ಮಾಯವಾಗಿ ಬೆಂಕಿಸಮೇತ ಕಬ್ಬಿಣದ ಬಾಂಡ್ಲಿ ದೊಪ್ಪನೆ ಕೆಳಕ್ಕೆ ಬಿತ್ತು. ಕ್ಷಣಮಾತ್ರದಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಹೋಯಿತು. ನಾನು ಏನಾಯಿತೆಂದು ನೋಡುವಷ್ಟರಲ್ಲಿ ಪಟಾಕಿನಾರಾಯಣ ತಕತಕನೆ ಮೈಕೈ ಉಜ್ಜಿಕೊಳ್ಳುತ್ತಾ ಕುಣಿಯತೊಡಗಿದ. ಚೆನ್ನ ವ್ಯಾನಿನ ಒಳಗಡೆಯಿಂದಲೇ ಏ..ಓಡ...ಓಡ... ಓಡಲೇ ಎನ್ನುತ್ತಾ ಕೂಗುತ್ತಿದ್ದ. ಆದರೆ ಪಟಾಕಿ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ಒಡಿಯಾ ವ್ಯಾನ್ ಅವನತ್ರ ತಗೊಂಡ್ಹೋಗಿ, ಹ್ಯಾಗಾದ್ರೂ ಅವನ್ನ ಒಳಗೆ ಎಳ್ಕತ್ತೀನಿ. ಇಲ್ದಿದ್ರೆ ಅವ್ನು ಸತ್ತೇ ಹೋಗ್ತಾನೆಎಂದು ಚೆನ್ನ ಹೇಳಿದ. ಗಡಿಬಿಡಿಯಿಂದ ವ್ಯಾನ್ ಸ್ಟಾರ್ಟ್ ಮಾಡಿ ಪಟಾಕಿ ಬಳಿ ನಿಲ್ಲಿಸಿದೆ. ಚೆನ್ನ ಲಬಕ್ಕನೆ ಅವನನ್ನು ಒಳಗೆಳೆದುಕೊಂಡ. ವ್ಯಾನ್ ಮುಂದೋಡಿಸಿದೆ. ಆದರೆ ಈಗ ಮತ್ತೊಂದು ಅನಾಹುತವಾಗಿತ್ತು. ಪಟಾಕಿನಾರಾಯಣನ ಜತೆಯಲ್ಲಿದ್ದ ಹತ್ತೆಂಟು ಹುಳುಗಳು ಕಾರಿನೊಳಗೆ ಸೇರಿಕೊಂಡು ನನ್ನನ್ನು ಚೆನ್ನನನ್ನು ಹೊಡೆಯಲಾರಂಭಿಸಿದವು. ಅದು ಹೇಗೋ ಉರಿಯನ್ನು ಸಹಿಸಿಕೊಂಡು ಅರ್ಧ ಕಿಲೋಮೀಟರ್ ದೂರ ಹೋಗಿ ವ್ಯಾನ್ ನಿಲ್ಲಿಸಿ ಹೊರಗೆ ಹಾರಿಕೊಂಡೆವು. ಆದರೆ ಪಟಾಕಿ ವ್ಯಾನಿನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಎರಡು ಜೇನುಹುಳು ಹೊಡೆದಿತ್ತು, ಆ ಉರಿ ಸಹಿಸಲಾರದೆ ತಕತಕನೆ ಕುಣಿಯುವಂತಾಗಿತ್ತು. ಇನ್ನು ಹತ್ತಿಪ್ಪತ್ತು ಹುಳ ಹೊಡೆದ ನಾರಾಯಣನ ಸ್ಥಿತಿ ಹೇಗಾಗಿರಬೇಡ. ತಕ್ಷಣ ಅವನನ್ನು ತಾಳಗುಪ್ಪದ ಹೆಗಡೆಡಾಕ್ಟರ್ ಬಳಿ ಕರೆದುಕೊಂಡು ಹೋಗಿ, ಅಂಬು ತೆಗೆಸಿ, ನಂಜಿನ ಇಂಜೆಕ್ಷನ್ ಕೊಡಿಸಿಕೊಂಡು ಮನೆ ಸೇರುವಷ್ಟರಲ್ಲಿ ನನ್ನ ಮುಖವೂ ಯಾರಿಗೂ ಗುರುತು ಸಿಗದಂತೆ ಆಂಜನೇಯನ ಮುಖದ ತರಹ ಉಬ್ಬಿಹೋಗಿತ್ತು.
ಇಷ್ಟೆಲ್ಲಾ ಅನಾಹುತಕ್ಕೆ ಪಟಾಕಿನಾರಾಯಣ ಅರ್ಧಂಬರ್ಧ ತಿಳಿದುಕೊಂಡಿದ್ದ ಮಾಹಿತಿ ಕಾರಣವಾಗಿತ್ತು. ಹೆಜ್ಜೇನು ಓಡಿಸುವ ಕಾರ್ಯಾಚರಣೆ ಯಾವಾಗಲೂ ಸಂಜೆ ಮಾಡಬೇಕು. ಮತ್ತು ಹೆಜ್ಜೇನು ಓಡಿಸಲು ಮರದಬುಡದಿಂದ ಗಾಢವಾಗಿ ಮೇಲೇಳುವಂತೆ ದಟ್ಟವಾದ ಹೊಗೆ ಹಾಕಬೇಕು. ಜತೆಯಲ್ಲಿ ಬುಗ್ಗನೆ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೊದಲಿಗೆ ಮೇಲೆದ್ದ ದಟ್ಟವಾದ ಹೊಗೆಯಿಂದಾಗಿ ಮೇಲೇರುವ ಜೇನು ಹುಳುಗಳು ಹೊಗೆ ಕಡಿಮೆಯಾಗುತ್ತಿದ್ದಂತೆ ಅದೇ ವೇಗದಲ್ಲಿ ಕೆಳಗಿಳಿದು ಧಾಳಿಮಾಡುತ್ತವೆ.
ಇವಿಷ್ಟು ಮಾಹಿತಿಯನ್ನು ಚೆನ್ನ ನನಗೆ ಮಾರನೆ ದಿನ ಸಿಕ್ಕದವ ಹೇಳಿ ನಂತರ ಸಣ್ಣ ದನಿಯಲ್ಲಿ, ನಿನ್ನೆ ಅದು ಹಿಂಗೇ ಆಗ್ತೈತಿ ಅಂತ ನಂಗೂ ಗೊತ್ತಿತ್ರೀ, ಸಿಕ್ಕಾಪಟ್ಟೆ ಹಾರಾಡ್ತಾನಲ್ಲ ಬುದ್ಧಿ ಬರ್ಲಿ ಅಂತ ಸುಮ್ನಿದ್ದೆಅಂದ.
ಥೂ.. ದರಿದ್ರದವ್ನೆ, ಅವ್ನಿಗೆ ಬುದ್ದಿ ಕಲ್ಸಕ್ಕೋಗಿ ಜೀವಾನೆ ತೆಗಿತಿದ್ಯಲ್ಲೋ, ನಿಂಗೆ ಮಂಡೆ ಹಿಡಿದ್ರೂ ಬೋಳು ಕುಂಡೆ ಹಿಡಿದ್ರೂ ಬೋಳು, ಹೆಚ್ಚುಕಮ್ಮಿ ಆಗಿದ್ರೆ ಕೊನೆಗೆ ಎಲ್ಲಾ ನಮ್ತಲೆ ಮೇಲೆ ಬರ‍್ತಿತ್ತು ಅಂತ ಚೆನ್ನನ ಮೇಲೆ ರೇಗಿದೆ. ಆದರೆ ತೀರಾ ಅನಾಹುತ ಆಗದೆ ಇದ್ದುದ್ದಕ್ಕೆ ಅಂತಹ ಗಡಿಬಿಡಿಯ ಸಮಯದಲ್ಲೂ ಪಟಾಕಿಯನ್ನು ವ್ಯಾನಿನೊಳಕ್ಕೆ ಎಳೆದುಕೊಂಡ ಚೆನ್ನನ ಸಮಯ ಪ್ರಜ್ಞೆಯೇ ಕಾರಣ ಎಂದೆನಿಸಿ ಸುಮ್ಮನುಳಿದೆ.
ಆ ದಿನ ಸಾಯಂಕಾಲದವರೆಗೂ ರಸ್ತೆಯಲ್ಲಿ ಯಾರಿಗೂ ಓಡಾಡಲು ಹೆಜ್ಜೇನು ಬಿಡಲಿಲ್ಲ. ನಾವು ವ್ಯಾನ್ ತೆಗೆದುಕೊಂಡು ಮುಂದೆ ಹೋದಮೇಲೆ ಕೆಲಹುಳುಗಳು ರಮಾನಂದ ಹೆಗಡೆಯವರ ಮನೆಯವರೆಗೂ ಬಂದು ಕೆಲವರಿಗೆ ಹೊಡೆಯಿತಂತೆ. ಶಾಲೆಗೆ ಹೊರಟ ಪೂಜಾ, ಅನುಜಿತ್ ಮುಂತಾದ ಮಕ್ಕಳೆಲ್ಲಾ ಜೇನುಹುಳ ಹೊಡೆಸಿಕೊಂಡು ಮುಖ ಊದಿಸಿಕೊಂಡಿದ್ದರು.
ಮಾರನೆ ದಿನ ಬೆಳಿಗ್ಗೆ ಹೆಜ್ಜೇನು ಅಲ್ಲಿಂದ ಹಾರಿ ಹೋಗಿತ್ತು. ಬಹುಶಃ ಅವುಗಳಿಗೆ ಗಿಡುಗನ ಕಾಟ ಜಾಸ್ತಿಯಾಯಿತೋ ಅಥವಾ ನಾರಾಯಣನ ಹೊಗೆ ಕೆಲಸ ಮಾಡಿತೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಅವುಗಳಿಗೆ ಆ ಜಾಗ ಸುರಕ್ಷಿತ ಅಲ್ಲ ಎಂಬ ಭಾವನೆ ಬಂದಿರಬೇಕು, ಹಾಗಾಗಿ ಜಾಗ ಖಾಲಿ ಮಾಡಿದ್ದವು. ಜೇನುಹುಳಗಳಿಲ್ಲದ ಖಾಲಿ ತತ್ತಿ ಮೂರ್ನಾಲ್ಕು ದಿನ ಅಲ್ಲಿಯೇ ಇತ್ತು. ಕೊನೆಗೆ ಚೆನ್ನ ಅದನ್ನು ಕಿತ್ತು ತಂದು ಒಂದು ಉಂಡೆ ಜೇನುಮೇಣ ಕಾಯಿಸಿ ಮರಗೆಲಸದ ಉದಯಾಚಾರಿಗೆ ಮೂವತ್ತು ರೂಪಾಯಿಗೆ ಮಾರಿದೆ ಎಂದು ಹೇಳಿದ. ಈ ಹೆಜ್ಜೇನು ಓಡಿಸುವ ಪ್ರಕರಣ ನನಗೆ ಸ್ವಲ್ಪ ಹಣವನ್ನು ಕೈಬಿಡಿಸಿ, ಪಟಾಕಿ ನಾರಾಯಣನಿಗೆ ಪಾಠ ಕಲಿಸಿದಂತಾದರೂ ಚೆನ್ನನಿಗೆ ಮಾತ್ರ ಆರ್ಥಿಕ ಲಾಭವನ್ನು ತಂದುಕೊಟ್ಟಿತ್ತು ಮು
(ಮುಂದುವರೆಯುತ್ತದೆ)

5 comments:

ಸುಮ said...

ಉತ್ತಮ ಮಾಹಿತಿಗಳಿಂದ ಕೂಡಿರುವ ಒಳ್ಳೆಯ ಬರಹ . ತೇಜಸ್ವಿಯವರ ಕಾಡಿನ ಕಥೆಗಳ ನೆನಪಾಯಿತು.

ದಿನಕರ ಮೊಗೇರ said...

ನಿಮ್ಮ ಮತ್ತು ಜೇನಿನ ಕಣ್ಣಮುಚ್ಚಾಲೆ ಚೆನ್ನಾಗಿ ವಿವರಿಸಿದ್ದೀರಿ ಸರ್..... ವಿವರಣೆ ಚೆನ್ನಾಗಿದೆ....

ಸೀತಾರಾಮ. ಕೆ. / SITARAM.K said...

ಬರಹ ದೊಡ್ದದಿದ್ದದ್ದು ನೋಡಿ ಈಗ ಓದಲೋ ಆಮೇಲೆ ಓದಲೋ ಎಂಬುವ ದ್ವಂದ್ವದಲ್ಲಿ ಸ್ವಲ್ಪ ವಿಷಯ ಏನು ಅಂಥಾ ನೋಡಿ ನಾಳೆ ಓದಿದರಾಯಿತು ಎಂದು ನಿರ್ಧರಿಸಿ ಸುರು ಹಚ್ಚಿದರೆ ಮುಗಿಯುವವರೆಗೆ ಓದಿದ್ದೆ ಗೊತ್ತಾಗಲಿಲ್ಲ! ಅದ್ಭುತ ಅನುಭವ ಲೇಖನ. ಮಲೆನಾಡಿನ ಎಲ್ಲ ಜನರ ಜೀವನ ಚಿತ್ರಣ, ಬದುಕ ಚಿತ್ರಣ, ಮತ್ತು ಉಪಯುಕ್ತ ಜೇನು ಕೃಷಿ ಮಾಹಿತಿ ನೀಡುತ್ತಾ ಹಾಸ್ಯ ಪ್ರಸಂಗಗಳನ್ನು ಸೇರಿಸಿ ಬರೆದ ಕೃತಿ ನನಗೆ ಪೂಚ೦ತೇ ಯವರ ಶೈಲಿಯನ್ನು ಜ್ನಾಪಿಸಿತು.
Great!

ಮನಸಿನ ಮಾತುಗಳು said...

beautipullllllll Raghanna.....continue.. :-)

Unknown said...

Fine