Friday, June 24, 2011

ಅದರಲ್ಲಿನ ಮಜ ಬಲ್ಲವನೇ ಬಲ್ಲ.



ಅಟ್ಟದ ಕೋಣೆಯ ಕಿಟಕಿಯ ಪಕ್ಕದ ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಕುಟ್ಟುತ್ತಾ ಕುಳಿತರೆ ಕಿವಿಗೆ ನೂರೆಂಟು ಸದ್ದು ಕಿಟಿಕಿಯಾಚೆಯಿಂದ ಕೇಳುತ್ತಿದೆ. ಕಪ್ಪೆಯ ವಟವಟ, ಜೀರುಂಡೆಯ ಜಿರ್ರ್ ಸರ್ ಪರ್ ಅಯ್ಯಯ್ಯೋ ಇಲ್ಲಿ ನಿಮಗೆ ಬರೆದು ತಿಳಿಸಲಾಗದಷ್ಟು ತರಹಾವಾರಿ. ಅವುಗಳ ಅರ್ಥವೇನಾದರೂ ನನಗೆ ತಿಳಿಯುವ ತಾಕತ್ತಿದ್ದರೆ ಹುಚ್ಚು ಹಿಡಿಯುತ್ತಿತ್ತೋ ಅಥವಾ ಹುಚ್ಚು ಹಿಡಿಸಬಹುದಿತ್ತೋ ಎಂಬುದಕ್ಕೆ ಈಗ ಉತ್ತರ ಸಿಗದ ಮಾತು ಬಿಡಿ.

ಆದರೂ ರಾತ್ರಿಯಿಡೀ ಅವೇಕೆ ಹಾಗೆ ಕೂಗುತ್ತವೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಗಂಡ ಹೆಂಡತಿಯ ಜಗಳವೋ..? ಮನೆ ಮಕ್ಕಳ ಸಂವಾದವೋ, ಪ್ರೇಮಿಗಳ ಸಲ್ಲಾಪವೋ... ಶತ್ರುಗಳ ಜತೆ ಕಾದಾಟವೋ ಅಂತ ತಿಳಿಯದು. ನಾನು ಅದೆಷ್ಟು ವರ್ಷದಿಂದ ಈ ರಾತ್ರಿಯ ಸದ್ದುಗಳನ್ನು ಕೇಳುತ್ತಾ ಬಂದಿದ್ದೇನೆ. ಮಳೆಗಾಲದಲ್ಲಿ ತುಸು ಅತಿ ಎನ್ನಿಸುವಷ್ಟು ಜಾಸ್ತಿ, ಆದರೆ ಅದ್ಭುತ ಎಂದರೆ ಹುಲುಮಾನವರು ಕೆಟ್ಟುಹೋಯಿತು ಕಾಲ ಎಂದು ವಟಗುಟ್ಟುತ್ತಿರುವ ಈ ವರ್ತಮಾನದ ಕಾಲದಿಂದ ಹಿಡಿದು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದೆವು ಎಂದು ಹೇಳುವ ಭೂತ ಕಾಲದಲ್ಲಿಯೂ ನನ್ನ ಕಿವಿಗೆ ಕೇಳಿಸುತ್ತಾ ಇದ್ದದ್ದು ಇದೇ ಸದ್ದು. ತೀರಾ ದೂರ ಬೇಡ ವಿಂಡೋಸ್ ೯೫ ಕಾಲದಿಂದ ಅದೆಂತದೋ ವಿಂಡೋಸ್ ೭ ಎಂದೆಲ್ಲಾ ಮನುಷ್ಯ ಅಪ್ ಗ್ರೇಡ್ ಆಗುತ್ತಿರುವಾಗಲೂ ಈ ಜೀರುಂಡೆ ಕಪ್ಪೆ ಕ್ರಿಮಿಕೀಟಗಳು ಅದೇ ಸದ್ದು ಅದೇ ಸಪ್ಪಳ. ಅಂತಾದರೆ ಅವು ಮನುಷ್ಯರಂತೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಅಪ್ ಗ್ರೇಡ್ ಆಗುತ್ತಿಲ್ಲವೇ. ಅಥವಾ ಹುಲು ಮಾನವರಾದ ನಾವೇ ಹಿಂದುಳಿದವರೇ ಅವು ನಮ್ಮ ಸಾಹಸಗಳನ್ನೆಲ್ಲಾ ದಾಟಿ ಎಲ್ಲದರ ಕತೆ ಇಷ್ಟೇ ಅಂತ ತಿಳಿದು ಅಂತಿಮ ಹಂತ ತಲುಪಿ ಒಂದೇ ತರಹದ ಸದ್ದು ಮಾಡುತ್ತಾ ಇರಬಹುದೇ..? ಎಂಬಂತೆಲ್ಲಾ ಕೆಲಸಕ್ಕೆ ಬಾರದ ತರಲೆ ಪ್ರಶ್ನೆಗಳು ದುತ್ತನೆ ಹುಟ್ಟಿ ಹುಳವಾಗಿ ಕಾಡಿ ಉತ್ತರ ಸಿಗದೆ ಮಾಯವಾಗಿಬಿಡುತ್ತವೆ. ಅಲ್ಲ ಯಾತಕ್ಕೆ ಇಷ್ಟೆಲ್ಲಾ ರಗಳೆ ಎಂದರೆ ನಾನು ಎಂಬ ಈ ದೇಹ ಸಣ್ಣಕ್ಕಿದಾಗಲೂ ರಾತ್ರಿ ಇದೇ ವಟವಟ ಜಿರ್ರ್ ಸದ್ದು ಈಗಲೂ ಅದೇ ಅಂದರೆ ಪಕ್ಕಾ ಅದೇ ಸದ್ದು, ತುಸು ವ್ಯತ್ಯಾಸವೂ ಇಲ್ಲದಂತೆ ಅಂತ ಅನ್ನಿಸಿದರೂ ಮಗದೊಮ್ಮೆ ಅಥವಾ ಬದಲಾವಣೆ ಆಗಿರಬಹುದಾ ಸದ್ದುಗಳು ಅಂತಲೂ ಅನ್ನಿಸುತ್ತದೆ. ಆದರೆ ಮಿದುಳಿನ ನೆನಪಿನಕೋಶವನ್ನು ಎಳೆದೆಳೆದು ನೆನಪುಗಳನ್ನು ಹೊರಹಾಕಿದಾಗ ಇಲ್ಲ ಅದೇ ಸದ್ದು ನಿರಂತರ ಅಂತ ಗಟ್ಟಿ ನಿರ್ಧಾರ ಹೊರಬಂದಿದ್ದಿದೆ.

ಈಗ ಮಗದೊಮ್ಮೆ ವಿಷಯಕ್ಕೆ ಬರೋಣ ಮಲೆನಾಡಿನ ಈ ಮಳೆಗಾಲದ ಸದ್ದು ಕೇವಲ ಒಂದೇ ಜೀವಿಯದಲ್ಲ. ನೂರಾರು ಅಲ್ಲಲ್ಲ ಸಾವಿರಾರು ಕೀಟಗಳ ತಾಳಮೇಳ ಅವು. ಅಲ್ಲಿ ಒಂದು ಲಯ-ಗತಿ-ಮಂದ-ತಾರಕ ಎಂಬ ಶಿಸ್ತುಬದ್ದವಾದ ಕ್ರಮವಿದೆ. ಆಸ್ವಾದಿಸುವ ಮನಸ್ಸು ಸಮಯ ಇರಬೇಕಷ್ಟೆ. ನಮ್ಮ ಮನಸ್ಸನ್ನು ಹರಿಯಬಿಟ್ಟರೆ ಅದರಲ್ಲಿನ ಮಜ ಬಲ್ಲವನೇ ಬಲ್ಲ. ಮಳೆಗಾಲದಲ್ಲಿ ಹೆಚ್ಚಿನ ಕೀಟಗಳು ವಂಶಾಭಿವೃದ್ಧಿಯ ಚಟುವಟಿಕೆಯಲ್ಲಿ ತೊಡಗುತ್ತವೆ ಅಂತ ಎಲ್ಲೋ ಓದಿದ ನೆನಪು. ಅದರ ಆಧಾರದಲ್ಲಿ ಹೇಳುವುದಾದರೆ ಇದು ಒಂಥರಾ ಶೄಂಗಾರ ಕಾವ್ಯದ ಪಕ್ಕವಾದ್ಯ ಸಹಿತ ಸಂಗೀತ ಅಂತ ಬೇಕಾದರೆ ಕವಿಮನಸಿನ ಜನರ ಬಾಯಿಂದ ಹೇಳಿಸಬಹುದು. ಅದನ್ನ ನಮ್ಮನಿಮ್ಮಂತ ಜನ ಆಸ್ವಾದಿಸಬಹುದು. ಆದರೆ ನನಗೆ ಕಾಡುತ್ತಿರುವುದು ಅದಲ್ಲ, ಈಗ ಸುಮಾರು ಮೂವತ್ತು ವರ್ಷದ ಹಿಂದೆ ನಾನು ಕೇಳಿದ್ದ ಜಿರ್ರ್ ಜಿರ್ರ್-ವಟರ್ ವಟರ್-ಕಟ್ ಕಟ್-ಚಿರ್ರರ್ರೋ ಎಂಬಂತಹ ಸದ್ದು ಗಳು ಇಂದೂ ಕುಡ ಚಾಚೂ ತಪ್ಪದೆ ಕಿಟಕಿಯಾಚೆ ಹೊರಡುತ್ತಿದೆ. ಅಂದು ಇದೇ ಸದುಗಳನ್ನು ನನಗೆ ಉಣಬಡಿಸಿದ್ದ ಕೀಟದ ಮರಿ ಮರಿ ಮರಿ ಮಗ ಇಂದೂ ಕೂಡ ಹಾಗೆಯೇ ಸದ್ದು ಹೊರಡಿಸುತ್ತಾ ತನ್ನ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬಲ್ಲಿಗೆ ಆ ಕೀಟಗಳ ಪಾಲಿಗೆ ತಲೆಮಾರುಗಳ ಸರಣಿಯೇ ಸಂದುಹೋಗಿದೆ. ಆದರೆ ನನ್ನ ಪಾಲಿಗೆ ಇನ್ನೂ ಅರ್ದ ಆಯುಷ್ಯ ಬಾಕಿಯಿದೆ ಜತೆಗೆ ಆ ಕೀಟಗಳಿಗೆ ನನ್ನ ಇರುವಿಕೆಯೂ ತಿಳಿಯದಂತೆ ನನಗೆ ಅವುಗಳ ಮಾಹಿತಿ ತಿಳಿದಿದೆ.

ಭಗವಂತಾ ನಿನ್ನ ಸೃಷ್ಟಿಯ ರಹಸ್ಯ ಅಪಾರ, ಕೀಟಗಳಿಗೆ ನನ್ನ ಇರುವಿಕೆ ತಿಳಿಯದಂತೆ ನಿನ್ನ ಇರುವಿಕೆಯೂ ನನಗೆ ತಿಳಿಯುತ್ತಿಲ್ಲ. ನೀನೂ ನನ್ನಮೇಲೆ ಇಂತಹುದೇ ಬ್ಲಾಗ್ ಬರೆಯುತ್ತಿರಬಹುದು ಅದರಲ್ಲಿ ಮನುಷ್ಯರು ಮಳೆಯ ಚಳಿಗೆ ವಂಶಾಭಿವೃದ್ಧಿಯಲ್ಲಿ ತೊಡಗುತ್ತಾರೆ ಅಂತಲೂ ಒಂದು ಸಾಲು ಟೈಪಿಸಿರಬಹುದು ಆದ್ಅರೆ ಮಜ ನಿನಗೆ ಗೊತ್ತಿದೆಯೋ ಇಲ್ಲವೋ ಮನುಷ್ಯ ಆ "ಅದನ್ನು" ಈಗ ಕೇವಲ ವಂಶಾಭಿವೃದ್ಧಿಗಾಗಿ ಬಳಸುತ್ತಿಲ್ಲ, ಮಜಕ್ಕಾಗಿಯೇ ಹೆಚ್ಚು ಬಳಸುತ್ತಿದ್ದಾನೆ. ವಂಶಾಭಿವೃಧಿಯ ರಹಸ್ಯ ಗೆದ್ದು ಮಜದ ಹಿಡಿತ ಸಾಧಿಸಿ ಎಂತೆಂತದೋ ಸದ್ದುಗಳನ್ನು ಹೊರಡಿಸುತ್ತಿದ್ದಾನೆ.

ಕೊನೆಯದಾಗಿ ಕಾಡುವ ಕಟ್ಟಕಡೆಯ ಪ್ರಶ್ನೆಯೆಂದರೆ ಕೀಟಗಳು ಅದನ್ನೆಲ್ಲಾ ದಾಟಿ ವಟಗುಟ್ಟುತ್ತಿದೆಯೋ ಅಥವಾ ಆರಂಭವೋ..? ಗೊತ್ತಿಲ್ಲ....!

2 comments:

ಮೃತ್ಯುಂಜಯ ಹೊಸಮನೆ said...

"ಕೀಟಗಳಿಗೆ ನನ್ನ ಇರುವಿಕೆ ತಿಳಿಯದಂತೆ ನಿನ್ನ ಇರುವಿಕೆಯೂ ನನಗೆ ತಿಳಿಯುತ್ತಿಲ್ಲ". ಕಲ್ಪನೆ ಚೆನ್ನಾಗಿದೆ. ದೇವರ ಇರುವಿಕೆ ನಮಗೆ ತಿಳಿದಿಲ್ಲ ಎಂಬುದರ ಬಗ್ಗೆ ಅನುಮಾನವೇ ಇಲ್ಲ. ಕೀಟಗಳಿಗೆ ನಮ್ಮ ಇರುವಿಕೆ ತಿಳಿದಿಲ್ಲ ಅಂತ ಅನುಮಾನಿಸಲು ಅಧಾರಗಳಿಲ್ಲ. ನಮ್ಮನ್ನು ಒಂದು ಕ್ಷುದ್ರ ಜಂತು ಎಂದು ಪರಿಭಾವಿಸಿ ತಮ್ಮ ಪಾಡಿಗೆ ತಾವು ಇದ್ದಿರಬಹುದು!
ನನಗೆ ಲೇಖನ ಇಷ್ಟವಾಯಿತು. ಹೀಗೇ ಬರೆಯುತ್ತಿರು.

ಸೀತಾರಾಮ. ಕೆ. / SITARAM.K said...

tamma tarka sariyaagiye ide..