Friday, October 14, 2011

ಗೊತ್ತಾ ನಿಮಗೆ ವಕಾರಾದಿ ಪಂಚಮರು...?

"ವ" ಕಾರದಿಂದ ಆರಂಭವಾಗುವ ಐದು ಜನರ ಕುರಿತು ಸಂಸ್ಕೃತ ಸುಭಾಷಿತ ಏನನ್ನೋ ಹೇಳುತ್ತದೆ. ಇರಲಿ ಅದೇನೋ ಹೇಳಲಿ ನಾವು ಏನು ಹೇಳುತ್ತೇವೋ ನೋಡೋಣ.
ವೈದ್ಯ-ವಕೀಲ-ವಣಿಕ-ವೈದೀಕ-ವೇಶ್ಯೆ ಹೀಗೆ ಸರಿಸುಮಾರು ಅರ್ಥದ ಜನರ ಬಳಿ ಸಿಕ್ಕಿಕೊಂಡರೆ ಲೈಫೆಂಬ ಜೀವನ ಕಷ್ಟವಂತೆ. ಆದರೆ ಸಿಕ್ಕಿಕೊಳ್ಳದೆ ದಾಟುವ ಮನಸಿದ್ದರೆ ಏನೂ ಮಾಡಲಾಗುವುದಿಲ್ಲವಂತೆ. ಆದರೆ ನನಗೆ ಈ ಐದು ಜನ ಸಮರ್ಥರು ಸಿಕ್ಕರೆ ಜೀವನ ಸುಗಮ ಎಂಬ ಆಲೋಚನೆ ಪಳಕ್ಕನೆ ಮಿಂಚುತ್ತಿದೆ.
ಹೌದು, ನಿಮಗೆ ಅನುಭವಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಒಳ್ಳೆಯ ಅನುಭವ. ನಾನು ತಾಳಗುಪ್ಪದ ಡಾಕ್ಟರ್ ಗುರುರಾಜ ದೀಕ್ಷಿತ್ ರನ್ನು ಆಯ್ಕೆಮಾಡಿಕೊಂಡಿದ್ದೇನೆ. ಅಂತಹಾ ಘನಾಂದಾರಿ ಖಾಯಿಲೆ ಜೀವನದಲ್ಲಿ ಬಂದಿರದಿದ್ದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ತಾಳ್ಮೆಯಿಂದ ದೊಡ್ಡ ಖಾಯಿಲೆ ಯಾಗದಂತೆ ಮಾಡದೆ ಗುಣಮಾಡಿದ್ದಾರೆ. ಆದರೆ ಇತ್ತೀಚಿಗೆ ವಯಸ್ಸು ನಲವತ್ತೈದು ಆಗಿರುವ ಪರಿಣಾಮವೋ ಅಥವಾ ಕೆಲಸದ ಒತ್ತಡವೋ ಅಥವಾ ಡ್ಯಾಶ್ ಡ್ಯಾಶ್ ಸಮಸ್ಯೆಯೋ...? ಪಟಕ್ಕನೆ ನಿದ್ರೆ ಬರುತ್ತಿರಲಿಲ್ಲ. ವಾರೊಪ್ಪತ್ತು ನೋಡಿ ದೀಕ್ಷಿತರ ಬಳಿ ಓಡಿದೆ. "ಹೌದಾ.. ಖಾಲಿ ಕೂತಾಗ, ಪ್ರಪಂಚ ಒಳ್ಳೆಯದು ಅಂತಿದ್ದೀರಿ, ಈಗ ಅರ್ಥವಾಯಿತ?, ನಿಮ್ಮ ಶತ್ರುಗಳು ಎಷ್ಟಿದ್ದಾರೆ ಅಂತ?" ಎಂದು ನಕ್ಕರು. "ಅಯ್ಯಾ ಅದಕ್ಕೂ ನನ್ನ ನಿದ್ರೆಗೂ ಎಂಥ ಸಂಬಂಧ ಎಂದೆ. ಸಮಸ್ಯೆಯ ಕುರಿತು ಹೆಚ್ಚು ಯೋಚನೆ ಮಾಡಿದ್ದರ ಪರಿಣಾಮ, ಬ್ಲಾಗ್, ಕುಟ್ಟುತ್ತಾ, ಕಥೆ ಬರೆಯುತ್ತಾ ಲೇಖನ ಗೀಚುತ್ತಾ, ಭ್ರಮಾಪ್ರಪಂಚದಲ್ಲಿ ಬದುಕುವುದು ಸುಲಭ, ವಾಸ್ತವಕ್ಕೆ ಬಂದಾಗ ಅನ್ಯಾಯ ಕಂಡರೂ ಯಾರು ಮಾಡಿದ್ದು ಎನ್ನುವುದರ ಮೇಲೆ ಬಾಯಿ ಬಿಚ್ಚುವುದು ಹಾಗೂ ಬಾಯಿ ಮುಚ್ಚುವುದೂ ಮಾಡಬೇಕು, ಇರಲಿ ಆಗಿದ್ದಾಯಿತಲ್ಲ, ಇವೆರಡು ಮಾತ್ರೆ ನುಂಗಿ ರಾತ್ರಿ ಊಟಕ್ಕೆ ಅರ್ದ ಗಂಟೆ ಮೊದಲು ಎಂದು ನೆಕ್ಸ್ಟ್ ಎಂದರು.
ವೈದ್ಯೋ ನಾರಾಯಣೋ ಹರಿಃ ಎಂದು ಮನೆ ಸೇರಿ ಮಾತ್ರೆ ನುಂಗಿ ಮಲಗಿದೆ. ನಿದ್ರೆ ಯಾವಾಗ ಬಂತೋ ತಿಳಿಯಲಿಲ್ಲ. ಬೆಳಗ್ಗೆ ಎದ್ದು ಫ್ರೆಶ್ ಆಗಿದ್ದೆ. ಆದರೆ ಮನಸ್ಸಿನಲ್ಲಿ ಕುರಿಕುರಿ, ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಎಷ್ಟು ಸರಿ?. ಮಾರನೇ ದಿನ ಸಂಜೆ ಮತ್ತೆ ದೀಕ್ಷಿತರಲ್ಲಿಗೆ ಓಡಿದೆ. "ಡಾಕ್ತ್ರೇ ಅದ್ಯಾಕೋ ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಒಂಥರಾ ಅವಮಾನ ಅಂತ ಅನ್ನಿಸತೊಡಗಿದೆ". ಎಂದೆ. "ನಿಮಗೆ ನಿದ್ರೆ ಮಾತ್ರೆ ಕೊಟ್ಟವರ್ಯಾರು? ಡಾಕ್ಟರಿಂದ ಮರುಪ್ರಶ್ನೆ. "ಮತ್ತೆ ಅಷ್ಟೊಂದು ಚೆನ್ನಾಗಿ ನಿದ್ರೆ ಬಂತು. ಅದಕ್ಕೆ ಹೇಳಿದ್ದು ದೇಹಕ್ಕೆ ವಯಸ್ಸಾಗಿದೆ ಮನಸ್ಸಿಗಲ್ಲ ಈಗ ಕೇಳಿ "ಆಯುರ್ವೇದ ಅದ್ಬುತ ಶಕ್ತಿಯುಳ್ಳದ್ದು , ನಾನು ನಿಮಗೆ ಕೊಟ್ಟದ್ದು ವಾತ-ಪಿತ್ಥ-ಕಫ ವನ್ನು ಸಮತೋಲನ ಮಾಡುವ ತ್ರಿಫಲ ಚೂರ್ಣ, ಜತೆಗೆ ವಿಟಮಿನ್ ಸಿ. ಹಿಂದಿನ ಕಾಲದಲ್ಲಿ ತ್ರಿಫಲ ಚೂರ್ಣದ ಜತೆ ಮೂಸಂಬಿ ಹಣ್ಣು ಕೊಡುತ್ತಿದ್ದರು, ಕಾರಣ ವಿಟಮಿನ್ ಸಿ ಮಾತ್ರೆ ಇರಲಿಲ್ಲ. ಈಗ ಮೂಸಂಬಿ ಬದಲಿಗಾಗಿ ಮಾತ್ರೆ ಅಷ್ಟೆ. ನಿಮ್ಮ ಮನಸ್ಸಿನ ಆಲೋಚನೆಗಳು ವಾತ-ಪಿತ್ಥ-ಕಫ ಪ್ರಮಾಣವನ್ನು ಏರುಪೇರು ಮಾಡುತ್ತದೆ ಈ ಚೂರ್ಣ ಮತ್ತದನ್ನ ಸಮತೋಲನಕ್ಕೆ ಒಯ್ಯುತ್ತದೆ ಆಗ ನಿದ್ರೆ ತನ್ನಷ್ಟಕ್ಕೆ. ಎಂದರು. ಜತಜತಗೆ ಅವರ ಇಷ್ಟು ಟ್ರೀಟ್ ಮೆಂಟ್ ಗೆ ತಗುಲಿದ ವೆಚ್ಚ ಮಾತ್ರೆ ಸೇರಿ ಮೂವತ್ತು ರೂಪಾಯಿಯಷ್ಟೆ.
ಈಗ ನಿಮಗೆ ವ ಕಾರದ ಆರಂಭದ ಕತೆಯಾಯಿತು. ಎರಡನೇ ಯವರ ಕತೆಯನ್ನು ಇಷ್ಟವಿದ್ದರೆ ನಾಳೆ ಓದುವಿರಂತೆ. ಓಕೆ ಗುಡ್ ನೈಟ್.