Tuesday, October 18, 2011

ಸೋಲನ್ನು ಮೆಟ್ಟಿಲು ಮಾಡಿಕೊಂಡು ..........

ಜೀವನ ಎಂದಮೇಲೆ ಸೋಲು ಗೆಲುವು,ಹುಟ್ಟು ಸಾವು, ನೋವು ನಲಿವು, ಎಂಬಂತದೆಲ್ಲಾ ಇದ್ದದ್ದೇ. ಅದರಾಚೆ ಎಂದರೆ ಶೂನ್ಯ ಭಾವ ಅಷ್ಟೆ. ಅಲ್ಲಿ ಮಜ ಇಲ್ಲ ಅಥವಾ ಗೊತ್ತಿಲ್ಲ. ಈಗ ಅಂತಹ ಗೊತ್ತಿಲ್ಲದ ವಿಚಾರಗಳನ್ನೆಲ್ಲಾ ಬದಿಗೊತ್ತಿ ಚೂರುಪಾರು ಗೊತ್ತಾಗುತ್ತದೆ, ಗೊತ್ತಾಗುತ್ತಿದೆ ಎನ್ನುವ ವಿಚಾರದತ್ತ ಹೊರಳೋಣ.


"ಗೆಲುವು" ಎಂಬ ಮೂರಕ್ಷರದ ಪದ ಇದೆಯಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳಲು ಸೋಲನ್ನು ಮೆಟ್ಟಿಲು ಮಾಡಿಕೊಳ್ಳಬೇಕು" ಎಂಬ ವಿಚಾರ ಬಹು ವಿಶೇಷವಾಗಿದೆ. ಗೆಲುವು ಸೋಲುಗಳು ವಿಷಯಾಧಾರಿತವಾದದ್ದು. ಅವನು ಯಾವುದನ್ನು ಯಾಕಾಗಿ ಎಷ್ಟು ಪ್ರಮಾಣದಲ್ಲಿ ಗೆಲ್ಲಲು ಹೊರಟಿದ್ದಾನೆ ಎಂಬುದರ ಮೇಲೆ ಫಲಿತಾಂಶ. ಗೆಲುವನ್ನ ಸಾವಿನಲ್ಲೂ ಕಾಣಬಹುದು ಸೋಲನ್ನು ಬದುಕಿದ್ದೂ ಕಾಣಬಹುದು. ಅದಕ್ಕೊಂದು ಮಜವಾದ್ ಕತೆ ಮಾಡಿದ್ದಾರೆ ಯಾರೋ ಬುದ್ಧಿವಂತರು. ಒಮ್ಮೆ ಓದಿ.


ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರಿಬ್ಬರು ಕೆಲ ವರ್ಷ ಅತೀ ಆತ್ಮೀಯತೆಯಿಂದ ಇದ್ದರು. ಆ ಅತಿ ಯ ಪರಿಣಾಮ ಅವರಿಬ್ಬರು ಪರಮ ಶತ್ರುಗಳಾಗಿ ಬದಲಾದರು. ಬೆಳಗಿನಿಂದ ಸಂಜೆಯ ತನಕ ಪುರ್ಸೊತ್ತು ಸಿಕ್ಕಾಗಲೆಲ್ಲ ಜಗಳ ಜಗಳ ಜಗಳ. ಬಾಯಿಮಾತಿನಿಂದ ಶುರುವಾದ ಜಗಳ ಪೋಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲೇರಿತು. ಗಡಿ ವ್ಯಾಜ್ಯ, ಸದ್ದಿನ ವ್ಯಾಜ್ಯ ಸಪ್ಪಳದ ವ್ಯಾಜ್ಯ ಹೀಗೆ ಒಂದರ ಹಿಂದೊಂದು ಕಾರಣಗಳು. ಒಂದರಲ್ಲಿ ಒಬ್ಬನಿಗೆ ಸೋಲಾದರೆ ಮತ್ತೊಂದರಲ್ಲಿ ಮತ್ತೊಬ್ಬನಿಗೆ ಸೋಲು, ಗೆಲುವೂ ಹಾಗೆ ಹೇಗೂ ಉಲ್ಟಾ. ಹೀಗೆ ಗಲಾಟೆ ದೊಂಬಿಯಲ್ಲಿ ನೆರೆಹೊರೆಯವರಿಬ್ಬರೂ ತಮ್ಮ ಆಯುಷ್ಯವನ್ನೇ ಕಳೆಯುತ್ತಾ ಬಂದರು.


ಇಂತಿಪ್ಪ ಸಂದರ್ಭದಲ್ಲಿ ಒಂದು ಮನೆಯವನಿಗೆ ಖಾಯಿಲೆ ದೇಹಕ್ಕೆ ಆವರಿಸಿತು. ದಿನದಿಂದ ದಿನಕ್ಕೆ ಖಾಯಿಲೆ ಉಲ್ಬಣಿಸಿ ಇನ್ನು ಹೆಚ್ಚು ದಿನ ಆತ ಬದುಕಲಾರ ಎಂಬ ಸ್ಥಿತಿಗೆ ಬಂತು. ಮತ್ತೊಬ್ಬನಿಗೆ ಒಳಗೊಳಗೆ ಆನಂದ. "ಉರದಾ ಉರದಾ ಈಗ ನೋಡು ಅನುಭವಿಸುತ್ತಾ ಇದ್ದಾನೆ" ಎಂದು ಒಳಗೊಳಗೆ ಬೀಗತೊಡಗಿದ. ಹೀಗೆ ಒಳಾನಂದವನ್ನು ಅನುಭವಿಸುತ್ತಾ ಇರಬೇಕಾದ ಸಂದರ್ಭದಲ್ಲಿ ಪಕ್ಕದ ಮನೆಯವನಿಂದ ಒಮ್ಮೆ ತನ್ನನ್ನು ಭೇಟಿ ಮಾಡಿ ಹೋಗುವಂತೆ ಆಹ್ವಾನ ಬಂತು. ಈತನಿಗೂ ಜಗಳ ಸಾಕಾಗಿತ್ತು, ಪಾಪ ಇನ್ನು ಸತ್ತು ಹೋಗುತ್ತಾನೆ ,ಇನ್ನೆಂಥಾ ದ್ವೇಷ ಎನ್ನುತ್ತಾ ಸೀದಾ ಮಲಗಿದವನ ಹಾಸಿಗೆಯ ಬಳಿಗೆ ಬಂದ. ಆಗ ಖಾಯಿಲೆಯಾತ " ನೋಡು ನಾನು ಕ್ಷಮಿಸಲಾರದ ತಪ್ಪುಗಳನ್ನು ಮಾಡಿದ್ದೇನೆ, ಅದಕ್ಕಾಗಿ ಭಗವಂತ ನನಗೆ ಈ ಶಿಕ್ಷೆ ಕೊಟ್ಟಿದ್ದಾನೆ" ಎಂದು ಕಣ್ಣೀರ್ಗರೆದ. ಈತನಿಗೂ ಛೆ ಅಂತ ಅನಿಸಿತು. "ಆಯಿತು ಆಗಿದ್ದೆಲ್ಲಾ , ಮರೆತುಬಿಡು, ನನ್ನ ಗ್ರಹಚಾರವೂ ಹಾಗಿತ್ತು, ಎಲ್ಲಾ ಭಗವಂತನ ಆಟ" ಎಂದು ಕಣ್ಣೀರ್ಗರೆದ. ಅಲ್ಲಿಯತನಕ ಪರಮ ಶತ್ರುಗಳಾಗಿದ್ದವರು ಮತ್ತೆ ಪರಮಮಿತ್ರರಾಗಿ ಹರಟಿದರು. ಖಾಯಿಲೆ ಮರೆತು ನಕ್ಕ ಮತ್ತೊಬ್ಬ. ಸ್ವಲ್ಪ ಸಮಯದ ನಂತರ ಖಾಯಿಲೆಯಾತ " ನನ್ನದೊಂದು ಕೊನೆಯ ಆಸೆ ಇದೆ ಈಡೇರಿಸಿಕೊಡುತ್ತೀಯಾ ಮಿತ್ರ" ಎಂದು ಕೈ ಹಿಡಿದು ಕೇಳಿದ. "ಆಯಿತು ಹೇಳು" ಎಂದ ಈತ.


"ನಾನು ಹೇಗೂ ಇನ್ನೊಂದೆರಡು ದಿವಸದಲ್ಲಿ ಸಾಯುತ್ತೇನೆ, ನಾನು ಸತ್ತಮೇಲೆ ನನ್ನ ಗುಧದ್ವಾರದಲ್ಲಿ ನೀನು ಹಾರೆಯೊಂದನ್ನು ತೂರಿಸಬೇಕು, ಇದು ನಾನು ನಿನಗೆ ಕೊಟ್ಟ ತೊಂದರೆಗಾಗಿ ಪ್ರಾಯಶ್ಚಿತ್ತ, ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಬುದ್ಧಿ ನನಗೆ ದೇವರು ಕೊಡಲಿ" ಎಂದ


ಹಳೆ ಶತ್ರು ಪ್ರಸೆಂಟ್ ಮಿತ್ರನ ವಿಚಿತ್ರ ಬಯಕೆಯನ್ನು ಈತ ಅನಿವಾರ್ಯವಾಗಿ ಒಪ್ಪಿಕೊಂಡ. ಎರಡಿ ದಿವಸದನಂತರ ಆತ ಸಾವನ್ನಪ್ಪಿದ. ಈತ ಕೊಟ್ಟ ಮಾತಿನಂತೆ ಸಾವು ಖಚಿತವಾದನಂತರ ಒಂದು ಬರೊಬ್ಬರಿ ಕಬ್ಬಿಣದ ಹಾರೆಯನ್ನು "ಅಲ್ಲಿ" ತೂರಿಸಿದ. ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು, ಎಲ್ಲರೂ ಹಾರೆಯ ವಿಷಯ ಕುತೂಹಲದಿಂದ ಕೇಳತೊಡಗಿದರು. ಈತ ನಡೆದ ಕತೆ ಹೇಳಿ ತಾನೇ ತೂರಿಸಿದ್ದು ಎಂದ. ಆದರೆ ಜನರಿಗೇಕೋ ಅನುಮಾನ, ಗುಸು ಗುಸು ಪಿಸ ಪಿಸ. ಈ ಗುಸುಗುಸು ಪಿಸಪಿಸ ಕ್ಕೆ ದನಿಯಾಗಿ ಕೆಲ ಸಮಯದ ನಂತರ ಪೋಲೀಸರು ಬಂದರು. ಮತ್ತು ಹಾರೆಯನ್ನು "ಅಲ್ಲಿ" ಹಾಕಿ ಶತ್ರುವಾಗಿದ್ದ ಆತನನ್ನು ಕೊಂದ ಆಪಾದನೆಯ ಮೇಲೆ ಆರೆಸ್ಟ್ ಮಾಡಿ ಈತನನ್ನು ಜೈಲಿಗಟ್ಟಿದರು.


ಆತ ಸಾವೆಂಬ ಸೋಲನ್ನು ಮೆಟ್ಟಿಲು ಮಾಡಿಕೊಂಡು ಶತ್ರುವನ್ನು ಸೋಲಿಸಿ ತಾನು ಗೆಲುವು ಕಂಡಿದ್ದ.

3 comments:

ಸೀತಾರಾಮ. ಕೆ. / SITARAM.K said...

bhaaree kathe!

L. Premashekhara said...

Very interesting. How strange the human thinking is!

ಮೌನರಾಗ said...

So nice...n also intersting...