Friday, October 21, 2011

ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’

ಈಗ ಆರು ತಿಂಗಳಿಂದೀಚೆಗೆ ನನಗೆ ಹೊಸ ಹೊಸ ಜನರ ಹೊಸ ಹೊಸ ಪ್ರಪಂಚದ ಅನಾವರಣ. ಅದರಲ್ಲೊಂದು ಇದು. ನನಗೆ ರೆವಿನ್ಯೂ ಡಿಪಾರ್ಟ್ ಮೆಂಟಿನಿಂದ ವಂಶವೃಕ್ಷ, ಹಿಡುವಳಿ ಪ್ರಮಾಣಪತ್ರ ಹಾಗೂ ಆದಾಯಪ್ರಮಾಣ ಪತ್ರ ಬೇಕಿತ್ತು. ಸರಿ ಮಾಮೂಲಿಯಂತೆ ಅರ್ಜಿ ಬರೆದು ನೆಮ್ಮದಿಕೇಂದ್ರಕ್ಕೆ ಸಲ್ಲಿಸಿದೆ. ಜನಸಾಮಾನ್ಯರು ಹೇಳುವಂತೆ ಸರ್ಕಾರದ ಇಲಾಖೆಯೆಂದರೆ ಲಂಚ ತಡ ಮುಂತಾದ ಆರೋಪ ನನ್ನ ಮನಸಿನಾಳದಲ್ಲಿಯೂ ಹುಗಿದಿತ್ತು. ನೆಮ್ಮದಿ ಕೇಂದ್ರದಾಕೆ ನನ್ನ ಮೊಬೈಲ್ ನಂಬರ್ ಅರ್ಜಿಯಲ್ಲಿ ಬರೆಯಿಸಿಕೊಂಡು ಎಂಡಾಸ್ ಮೆಂಟ್ ಕೊಟ್ಟಳು. ಸರಿಯಾಗಿ ಎಂಟು ದಿವಸಕ್ಕೆ ಮೊಬೈಲ್ ಗೆ ಎಸ್ ಎಂ ಎಸ್ ಬಂತು ಯುವರ್ ಸರ್ಟಿಫಿಕೇಟ್ ಈಸ್ ರೆಡಿ, ಪ್ಲೀಸ್ ಕಲೆಕ್ಟ್ ಪ್ರಂ ನೆಮ್ಮದಿಕೇಂದ್ರ" ಎಂದು.
ಬೆಳಿಗ್ಗೆ ಹತ್ತೂವರೆಗೆ ತಾಳಗುಪ್ಪದ ನೆಮ್ಮದಿ ಕೇಂದ್ರದ ಬಾಗಿಲಲ್ಲಿ ನಿಂತೆ. ಎಸ್ ಎಂ ಎಸ್ ನಂಬರ್ ಕೇಳಿದ ಆಕೆ ಚಕಚಕನೆ ಪ್ರಿಂಟ್ ಔಟ್ ಕೊಟ್ಟಳು ಪ್ರಮಾಣ ಪತ್ರದ್ದು. ಸರ್ಕಾರಿ ಫೀ ಹತ್ತು ರೂಪಾಯಿಯನ್ನಷ್ಟೇ ಕೇಳಿದ್ದು ಮತ್ತು ನಾನು ಕೊಟ್ಟಿದ್ದು. ಎಂಬಲ್ಲಿಗೆ ಲಂಚದ ಕಿಂಚಿತ್ತೂ ಬೇಡಿಕೆಯಿಲ್ಲದೆ ನನಗೆ ಎಂಟು ದಿವಸದೊಳಗೆ ಸಿಕ್ಕ ಖುಷಿಯಲ್ಲಿ "ಮೇಡಂ ನಿಮ್ಮ ಡಿಪಾರ್ಟ್ ಮೆಂಟ್ ಅಂದ್ರೆ ಲಂಚ ಅಂತಾರಲ್ಲ , ನನಗೆ ಅಂತ ಅನುಭವ ಆಗಲೇ ಇಲ್ಲವಲ್ಲ ಎಂದೆ" . ಏನಪ್ಪ ಎಂದು ಮುಗಳ್ನಕ್ಕಳು ಆಕೆ,
ಇನ್ನು ವಂಶವೃಕ್ಷದ್ದು ಕತೆ. ಅದನ್ನ ವಿಲೇಜ್ ಅಕೌಂಟೆಟ್ ಹತ್ತಿರ ಖುದ್ದಾಗಿ ಪಡೆದುಕೊಳ್ಳಬೇಕು, ನೆಮ್ಮದಿ ಕೇಂದ್ರದ ಅವಶ್ಯಕತೆ ಅದಕ್ಕಿಲ್ಲ. ಸೀದಾ ವಿ ಎ ಹತ್ತಿರ ಹೋಗಿ ವಂಶವೃಕ್ಷದ ಬೇಡಿಕೆ ಇಟ್ಟೆ. ಕ್ಷಣ ಮಾತ್ರದಲ್ಲಿ ಅವರದೇ ಹಾಳೆ ಅವರದೇ ಪೆನ್ ನಲ್ಲಿ ನನ್ನ ವಂಶವೃಕ್ಷ ಕೈ ಸೇರಿತು. ಓಹ್ ಇದಕ್ಕೆ ನಾನು ಲಂಚ ಕೊಡಬೇಕೇನೋ ಎಂದು ಐವತ್ತರ ಒಂದು ನೋಟು ಅಂಜುತ್ತಾ ಕೊಡಲು ಹೋದೆ. ವಿ ಎ ಮಂಜುಳಾ ಮೇಡಂ "ಹಣ ಯಾಕೆ?’ ಅಂದರು. ನಾನು ಹಾಂ ಅದೂ ಇದೂ ಅಂದೆ. ನೋಡಿ ನಾನು ನನ್ನ ಡ್ಯೂಟಿ ಮಾಡಿದ್ದೇನೆ, ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’ ಅಂತ ಅಂದರು.
ನಾನು ಯಾವ ತೀರ್ಮಾನಕ್ಕೆ ಬರಬೇಕು ಅಂತ ತಿಳಿಯದೇ ಬೆಕ್ಕಸಬೆರಗಾದೆ. ಬಹುಶಃ ನ್ಯಾಯವಾದ ಪ್ರಮಾಣ ಪತ್ರಗಳಿಗೆ ಲಂಚ ದ ಹೆಸರು ಅಗತ್ಯ ಬೀಳುವುದಿಲ್ಲ ಅಂತ ಅಂದುಕೊಂಡೆ.ಇಂತಹ ಪ್ರಾಮಾಣಿಕರು ಹಲವರಿದ್ದಾರೆ, ಆದರೆ ಜನರು ಅವರ ಸುದ್ದಿಯನ್ನು ಮರೆಮಾಚಿ ಎಲ್ಲಿಯೋ ಹತ್ತು ಪರ್ಸೆಂಟ್ ಅಧಿಕಾರಗಳ ಕತೆಯನ್ನು ತೇಲಿಬಿಡುತ್ತಾರೇನೋ ಅಂತಲೂ ಅನ್ನಿಸಿದ್ದು ಸುಳ್ಳಲ್ಲ

3 comments:

nagarathna rajarama said...

anna hajaare prabhava iddikku !!!!!!!!!!!

nagarathna rajarama said...

anna hajaare prabhava iddikku !!!

Anonymous said...

ಎಲ್ಲಾ ಓಕೆ.. ಕೊನೆ ಲೈನಿನ "ಹತ್ತು ಪರ್ಸೆಂಟ್" ಅನ್ನು ತೊಂಬತ್ತೆಂಟು ಅಂತ ತಿದ್ದಿಬಿಡಿ... ನಾನು ಸರಕಾರಿ ಇಲಾಖೆಯಲ್ಲೇ ಕೆಲಸ ಮಾಡಿದವ.....