Thursday, February 28, 2013

ಮಲೆನಾಡಿನಲ್ಲಿ " ಬಯಲುಸೀಮೆಯ ಕೃಷಿ" ಪಂಡಿತ



ಮಲೆನಾಡಿನಲ್ಲಿ ಆರ್ಥಿಕವಾಗಿ ಲಾಭಕರ ಕೃಷಿ ಎಂದರೆ ಅಡಿಕೆ,ರಬ್ಬರ್, ಮೆಣಸು, ಕೋಕೋ, ಮುಂತಾದ ತೋಟಗಾರಿಕಾ ಬೆಳೆಗಳು. ಈ ಬೆಳೆಗಳನ್ನು ನಂಬಿ ಬದುಕು ಸಾಗಿಸುತ್ತಿರುವ ಹಲವು ರೈತರಿದ್ದಾರೆ.ಉಪಬೆಳೆಯನ್ನಾಗಿ ತರಕಾರಿ ಬೆಯುವ ರೈತರ ಸಂಖ್ಯೆ ಇದೆ, ತರಕಾರಿ ಜೋಳ ಮೆಣಸಿನಕಾಯಿ ಕಬ್ಬು ಶೇಂಗಾ ಮುಂತಾದ ಆಹಾರ ಬೆಳೆಗಳನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುವ ರೈತರ ಸಂಖ್ಯೆ ಬಲು ಅಪರೂಪ. ತಾಳಗುಪ್ಪ ಸಮೀಪದ ಶಿರೂರು ಆಲಳ್ಳಿಯ ರೈತರಾದ ಹುಚ್ಚಪ್ಪ ಕಳೆದ ಮೂವತ್ತು ವರ್ಷಗಳಿಂದ ಆಹಾರ ಬೆಳೆಗಳನ್ನೇ ಮುಖ್ಯ ಬೆಳೆಯನ್ನಾಗಿಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಿ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ಸಾಗಿಸುತ್ತಿದ್ದಾರೆ.
ಶಿರೂರು ಆಲಳ್ಳಿ ಸಾಗರ-ಜೋಗ ಹೈವೆ ರಸ್ತೆ ಪಕ್ಕದ ಪುಟ್ಟಹಳ್ಳಿ. ಬಹುಪಾಲು ಭತ್ತ ಕಬ್ಬು ಕೃಷಿಕರ ಈ ಹಳ್ಳಿ ಹುಚ್ಚಪ್ಪವರಂತಹ ಕೃಷಿಯಲ್ಲಿ ತೊಡಗಿಸಿಕೊಂಡವರಿಂದ ಕೂಡಿದೆ. ಹೈವೆ ೨೦೬ ರ ಪಕ್ಕದಲ್ಲಿ ಆರೂವರೆ ಎಕರೆ ಕೃಷಿ ಕ್ಷೇತ್ರ ಹುಚ್ಚಪ್ಪನವರದು. ರಸ್ತೆಯಲ್ಲಿ ಸಾಗುವ ಜನರಿಗೆ ಈ ಕ್ಷೇತ್ರ ಒಮ್ಮೆ ಕಣ್ಣಾಡಿಸುವಂತೆ ಹುಚ್ಚಪ್ಪ ಮಾಡಿದ್ದಾರೆ. ತೊಂಡೆಕಾಯಿಯ ಚಪ್ಪರ, ಅದರಪಕ್ಕದಲ್ಲಿ ಹಸಿರಾಗಿ ಹುಲುಸಾಗಿ ಬೆಳೆದ ಶೇಂಗಾ, ತೆನೆದುಂಬಿ ನಿಂತ ಜೋಳ, ಕೆಂಪು ಬಣ್ಣಕ್ಕೆ ತಿರುಗಿನಿಂತ ಮೆಣಸಿನಕಾಯಿ, ಬಸಳೆ ಸೊಪ್ಪಿನ ಸಾಲು, ಹೀರೆಕಾಯಿ, ಮಗೆಕಾಯಿ, ಕಬ್ಬು, ಬೆಂಡೆ, ಹೀಗೆ ಮುಂದುವರೆಯುತ್ತದೆ ಹುಚ್ಚಪ್ಪನವರ ಕೃಷಿ ಕ್ಷೇತ್ರ. ವರ್ಷಪೂರ್ತಿ ಹವಾಮಾನ ಕಾಲಕ್ಕನುಗುಣವಾಗಿ ತರಕಾರಿ ಬೆಳೆಗಳನ್ನು ಬೆಳೆಯುವ ಹುಚ್ಚಪ್ಪ ರೈತಾಪಿ ಜೀವನದಿಂದ ಆರ್ಥಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿಕಂಡುಕೊಂಡಿದ್ದಾರೆ.
ಕೃಷಿಕ ಯಜಮಾನ: ಸ್ವಂತ ಮಣ್ಣಿನಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ದುಡಿದರೆ ಅದರ ಸುಖ ವರ್ಣಿಸಲು ಆಗದು ಎನ್ನುವುದು ಹುಚ್ಚಪ್ಪನವರ ಸ್ವಯಂ ಅಬುಭವ. ಪತ್ನಿ ಕೂಡ ಇವರ ಕೃಷಿ ಕೈಂಕರ್ಯಗಳಿಗೆ ಜೊತೆಗೂಡುವುದರಿಂದ ಇನ್ನಷ್ಟು ಖುಷಿ ಇವರಿಗೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಕೂಡ ರಜಾದ ಸಮಯದಲ್ಲಿ ಕೃಷಿ ಕೆಲಸಗಳಿಗೆ ತೊಡಗಿಕೊಳ್ಳುತ್ತಾರೆ. ದಿನಗೂಲಿ ಜನರಿಗೆ ಜೀವನ ಭದ್ರತೆ ಕಡಿಮೆ ಸರ್ಕಾರ ಉದ್ಯೋಗಖಾತ್ರಿ ಯಂತಹ ಕಾರ್ಯಕ್ರಮದ ಮೂಲಕ ಜೀವನ ಭದ್ರತೆ ಒದಗಿಸುವ ಯತ್ನ ಮಾಡಿದರೂ ಅದೇಕೋ ಆಡಳಿತಶಾಹಿಯ ಸಮಸ್ಯೆಯಿಂದ ಸಮರ್ಪಕ ಜಾರಿಯಾಗಿಲ್ಲ, ಸ್ವಂತ ಜಮೀನಿನಲ್ಲಿ ನಾವೇ ಯಜಮಾನ ನಾವೆ ಕೂಲಿಯಾಳು ಎಂಬ ಭಾವನೆಯಿಂದ ದುಡಿದರೆ ಮಾನಸಿಕ ಆರ್ಥಿಕ ದೈಹಿಕ ನೆಮ್ಮದಿ ಸಿಗುತ್ತದೆ ಎಂದು ಅನುಭವ ಮಾತುಗಳು ಹುಚ್ಚಪ್ಪನವರದ್ದು.
ತರಕಾರಿ ಬೆಳೆ : ರೈತರಿಗೆ ವರ್ಷಪೂರ್ತಿ ಹಣ ನೀಡುವುದು ತರಕಾರಿ ಬೆಳೆಗಳು ಎಂಬುದು ಹುಚ್ಚಪ್ಪನವರ ಅನುಭವ. ತೊಂಡೆಯಂತಹ ತರಕಾರಿಗಳಿಗೆ ಒಮ್ಮೆ ಗುಂಡಿ ತೋಡಿ ನಾಟಿ ಮಾಡಿ ಗೊಬ್ಬರ ಹಾಕಿದರೆ ಮತ್ತೆ ನೀರು ಮಾತ್ರಾ ಉಣಿಸಿದರೆ ವಾರದ ಅಂತ್ಯದಲ್ಲಿ ಆದಾಯ ನಿಡುತ್ತಾ ಸಾಗುತ್ತದೆ. ಮೂರು ತಿಂಗಳ ನಂತರ ಅದೇ ಜಾಗದಲ್ಲಿ ಹೀರೇಕಾಯಿ ಹಾಕಿದರೆ ಅದು ಮೂರು ತಿಂಗಳ ನಿರಂತರ ಆದಾಯ, ಹೀಗೆ ನಮ್ಮ ಭೂಮಿಗೆ ನಮ್ಮ ವಾತಾವರಣಕ್ಕೆ ಬೆಳೆಗಳನ್ನು ಆಯ್ದುಕೊಂಡರೆ ಸುಲಭ, ಮಾರುಕಟ್ಟೆಯ ಸಮಸ್ಯೆ ತರಕಾರಿ ಬೆಳೆಗಳಿಗೆ ಇಲ್ಲ, ಸ್ಥಳಕ್ಕೆ ಬಂದು ಗ್ರಾಹಕರು ನೇರವಾಗಿಯೂ ಒಯ್ಯುತ್ತಾರೆ, ಅಥವಾ ದಲ್ಲಾಳಿಗಳು ಸ್ಥಳಕ್ಕೆ ಬರುತ್ತಾರೆ, ಹಾಗಾಗಿ ನಾವು ಸಮರ್ಪಕವಾಗಿ ಬೆಳೆದರಷ್ಟೇ ಮುಗಿಯಿತು . ವಾರ್ಷಿಕ ಆದಾಯಕ್ಕೆ ಭತ್ತ ಅಡಿಕೆ ಕಬ್ಬು ಮುಂತಾದ ಬೆಳೆಗಳು ಸಹಾಯ ಮಾಡುತ್ತವೆ, ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಕೃಷಿಕನಿಗಿರಬೇಕು ಎನ್ನುವುದು ಹುಚ್ಚಪ್ಪನವರ ಮಾತು.

ಸರ್ಕಾರದ ನಿರ್ಲಕ್ಷ್ಯ: ಸರ್ಕಾರದ ರೈತರ ಕುರಿತಾದ ಕಾಳಜಿಯನ್ನ ಸಮರ್ಪಕವಾಗಿ ಪ್ರಕಟಿಸುತ್ತಿಲ್ಲ ಎನ್ನುವುದು ಹುಚ್ಚಪ್ಪನವರ ಕೊರಗು. ಸಾಲಮನ್ನಾ, ಸುವರ್ಣ ಭೂಮಿ ಮುಂತಾದ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ ಎನ್ನುವುದು ಸಮಾಧಾನಕರ ಅಂಶ, ಆರ್ಥಿಕ ಸಹಾಯದ ದೃಷ್ಟಿಯಲ್ಲಿ ಅದು ಸಂತೃಪ್ತಿ ತಂದಿದೆ, ಆದರೆ ರೈತರಿಗಾಗಿಯೇ ಇರುವ ಇಲಾಖೆಯ ಅಧಿಕಾರಿಗಳು ರೈತರಿಗೆ ಜ್ಞಾನ ನೀಡುವುದರ ಜತೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಕೃಷಿಯನ್ನು ಆರ್ಥಿಕ ದೃಷ್ಟಿಯ ಹೊರತಾಗಿ ಜೀವನ ಪದ್ದತಿಯಾಗಿ ನೋಡಿದಾಗ ಆರ್ಥಿಕ ಸಂಕಷ್ಟಕ್ಕೆ ಬೆಲೆ ಬಾರದು ಎಂದು ನುಡಿಯುತ್ತಾರೆ. ಬ್ಯಾಂಕ್ ಗಳಿಗೆ ರೈತರ ಮೇಲೆ ನಂಬಿಕೆಯೆ ಹೊರಟುಹೋಗಿದೆ ಎನ್ನುವ ಹುಚ್ಚಪ್ಪ, ತಾಳಗುಪ್ಪದ ಬ್ಯಾಂಕನಲ್ಲಿ ತಾವು ಬೋರ್ ವೆಲ್ ಹಾಗೂ ಹೈನುಗಾರಿಕೆಗೋಸ್ಕರ ಸಾಲ ಕೇಳಲು ಹೋದಾಗ ನಾಳೆ ಬನ್ನಿ ಮುಂದಿನ ತಿಂಗಳು ಬನ್ನಿ ಎಂದು ಅಲೆದಾಡಿಸಿ ನಂತರ ಈಗ ಆಗದು ಎಬ ಉತ್ತರ ಪಡೆದ ಕಹಿ ಘಟನೆ ಬೇಸರ ತರಿಸುತ್ತದೆ . ಇದು ಕೇವಲ ಬ್ಯಾಂಕ್ ನವರ ತಪ್ಪಲ್ಲ ಅಥವಾ ತಪ್ಪು ಯಾರದು ಎನ್ನುವ ಪ್ರಶ್ನೆ ಇದಲ್ಲ, ಸರ್ಕಾರದ ಕಂದಾಯ ಇಲಾSಯೂ ಸೇರಿದಂತೆ, ಇತರೆ ಅಧಿಕಾರಿಗಳು ಹೀಗೆ ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರದ ಸಮೂ, ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ . ಧರ್ಮಸ್ಥಳ ಸಂಘ ತಮಗೆ ಉತ್ತಮ ಸಹಕಾರ ನೀಡಿದೆ, ಮಾನಸಿಕವಾಗಿ ಆರ್ಥಿಕವಾಗಿ ಬೆಂಬಲಿಸಿದೆ. ಇದೇ ರೀತಿ ಸರ್ಕಾರ ಮತ್ತು ಬ್ಯಾಂಕ್ ಗಳು ರೈತರ ಬೆನ್ನಿಗೆ ನಿಂತರೆ ದೇಶದ ಬೆನ್ನೆಲುಬಾಗಿ ರೈತ ನಿಲ್ಲುತ್ತಾನೆ ಎನ್ನುತ್ತಾರೆ.

೪೪ ವರ್ಷದ ಹುಚ್ಚಪ್ಪನವರ ಕುಂಟುಂಬ ಕೃಷಿಯನ್ನು ನಂಬಿ ಸಂತೃಪ್ತ ಜೀವ ನಡೆಸುತ್ತಿದೆ. ಆರ್ಥಿಕವಾಗಿ ಶ್ರೀಮಂತರು ಅಂತ ಅನ್ನಿಸಿಕೊಳ್ಳದಿದ್ದರೂ ಮಾನಸಿಕವಾಗಿ ದೈಹಿಕವಾಗಿ ಶ್ರೀಮಂತಿಕೆ ಅವರ ಕುಟುಂಬದಲ್ಲಿ ಎದ್ದುಕಾಣಿಸುತ್ತಿದೆ. ಸಮಾಧಾನ ಸಂತೃಪ್ತಿ ಮನೆಮಾಡಿದೆ. ಸಮಾಜಕ್ಕೆ ಆಹಾರ ಪದಾರ್ಥಗಳ ಕೊಡುಗೆಯಾಗಿ ನೀಡಿದ ನೆಮ್ಮದಿ ಆ ಕುಟುಂಬದಲ್ಲಿದೆ ಎನ್ನುವುದು ನಿಸ್ಸಂಶಯ.
ಫೋನ್ ನಂ: ೭೨೫೯೨೭೮೦೫೫ (ವಿಜಯವಾಣಿಯಲ್ಲಿ ಪ್ರಕಟಿತ)

No comments: