Thursday, March 14, 2013

ಕಾರ್ಪೋರೇಟ್ ಕೃಷಿ.


ಕೃಷಿಗೆ ವ್ಯವಸ್ಥಿತ ರೂಪ ಕೊಟ್ಟು, ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿ, ವರ್ಷಾಂತ್ಯದಲ್ಲಿ ಲಾಭ ನಷ್ಟಗಳ ಲೆಕ್ಕಗಳನ್ನು ಪಾಲಿಸಿ, ಮುಂದಿನ ವರ್ಷಗಳ ಪ್ಲ್ಯಾನ್ ತಯಾರಿಸಿ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಕಾರ್ಫೊರೇಟ್ ಕೃಷಿಯ ಮುಖ್ಯ ಲಕ್ಷಣ. ಸಾಮಾನ್ಯವಾಗಿ ಭಾರತದಲ್ಲಿ ಹೀಗೆಲ್ಲಾ ಪಾಲಿಸಿ ಕೃಷಿಯನ್ನು ಉದ್ಯಮವಾಗಿ ತೆಗೆದುಕೊಂಡವರ ಸಂಖ್ಯೆ ಬಹು ಕಡಿಮೆ. ಈ ಕೃಷಿ ಪದ್ದತಿ ಪಾಲನೆಯಿಂದ ವರ್ತಮಾನ ಭವಿಷ್ಯಗಳ ಪಕ್ಕಾ ಮಾಹಿತಿ ರೈತನ ಬಳಿ ಇರುತ್ತದೆ. ಮಾಡಿದ ತಪ್ಪುಗಳು ಎಲ್ಲಿ ಎಂದು ತಿಳಿದು ಸರಿಪಡಿಸಿಕೊಳ್ಳಬಹುದು. ಅಂತಹ ಅಪರೂಪದ ಪದ್ದತಿಯನ್ನು ಪಾಲಿಸಿ ಯಶಸ್ವೀ ಕೃಷಿಕ ಎನ್ನಿಸಿಕೊಂಡಿದ್ದಾರೆ ತಾಳಗುಪ್ಪದ ಸಮೀಪದ ಕೆಳಗಿನ ತಲವಾಟದ ಎಂ ಎಸ್. ನರಹರಿ.
ತಾಳಗುಪ್ಪದಿಂದ ಜೋಗಕ್ಕೆ ಸಾಗುವ ರಾಷ್ತ್ರೀಯ ಹೆದ್ದಾರಿ ೨೦೬ ಮಾರ್ಗದಲ್ಲಿ ಮನಮನೆಯ ನಂತರ ಸಿಗುವ "ಮತ್ತುಗ ಫಾರಂ" ಹೌಸ್ ನರಹರಿಯವರ ಕೃಷಿ ಕ್ಷೇತ್ರ. ಮೂಲತಃ ಕೃಷಿಕುಟುಂಬದವರಾಗಿದ್ದ ನರಹರಿಯವರು ತುಮ್ರಿಯ ಸಮೀಪ ಹುಳಿಸೆ ಕೇರಿ ಊರಿನವರು.ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡು ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದರು. ಅಲ್ಲಿ ಎಷ್ಟೇ ದುಡಿದರೂ ಮನಸ್ಸಿನಲ್ಲಿ ಹುದುಗಿದ್ದ ಕೃಷಿಕ ಕಾಡುತ್ತಲಿದ್ದ, ೧೯೯೭ ರಲ್ಲಿ ೧೦ ಎಕರೆ ಖುಷ್ಕಿ ಜಮೀನು ಖರಿದಿಸಿದ ನರಹರಿ ಬಾಳೆ ಅಡಿಕೆ ಕಾಳು ಮೆಣಸು ಏಲಕ್ಕಿ ಕೃಷಿ ಆರಂಭಿಸಿದರು. ಖುಷ್ಕಿ ಜಮೀನು ಹಾಗೂ ಕಲ್ಲಿನ ಜಾಗವಾದ್ದರಿಂದ ಅಲ್ಲಿ ಕೃಷಿ ಸುಲಭವಾಗಿರಲಿಲ್ಲ, ಲಾರಿಯಲ್ಲಿ ಕಾಡುಮಣ್ಣು ಜಮೀನಿಗೆ ತುಂಬಿಸಿ ಸಾರಯುತ ಮಾಡುವಂತಹ ಪರಿಸ್ಥಿತಿ ಅಂದು ಇತ್ತು. ಬಹಳ ಹಣ ಬೇಡುತ್ತಿದ್ದ ಕೃಷಿಕ್ಷೇತ್ರ ಜನರ ದೃಷ್ಟಿಯಲ್ಲಿ ನರಹರಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಸಾಮಾನ್ಯವಾಗಿತ್ತು. ತೆರೆದಬಾವಿ ಜಮೀನಿಗೆ ನೀರುಣಿಸಲು ವಿಫಲವಾದಾಗ ಕೊಳೆಬಾವಿಯ ಮೊರೆಹೋದರು ನರಹರಿ. ಮೂರು ಕೊಳವೆ ಬಾವಿಗಳು ವಿಫಲವಾದಾಗ ಸ್ವಲ್ಪ ಅಧೀರರಾದರೂ ಹತಾಶರಾಗದೆ ಇನ್ನೊಂದು ಪ್ರಯತ್ನಕ್ಕಿಳಿದರು. ನಾಲ್ಕನೆ ಕೊಳವೆ ಬಾವಿ ಕೈ ಹಿಡಿಯಿತು. ವರ್ಷದಿಂದ ವರ್ಷಕ್ಕೆ ಹತ್ತು ಎಕರೆ ಜಾಗದಲ್ಲಿ ಜಲಮರುಪೂರಣ ಕೈಗೊಂಡ ಕಾರಣ ಬೋರ್ ವೆಲ್ ನೀರು ಸಾಕಷ್ಟು ಹೆಚ್ಚಿ ಹತ್ತು ಎಕರೆ ಹಸಿರಿನಿಂದ ನಳನಳಿಸುವಂತಾಯಿತು.
ಪಾಳೇಕರ್ ಕೃಷಿ: ಅನುಸರಿಸಲು ಹಾಗೂ ಕೃಷಿಕ್ಷೇತ್ರ ಹಸಿರಿನಿಂದ ನಳನಳಿಸಲು ಉತ್ತಮ ಪದ್ದತಿಯೆಂದರೆ "ಪಾಳೇಕರ್ ಕೃಷಿ ವಿಧಾನ" ಎಂಬುದು ನರಹರಿಯವರ ಅನುಭವ ವೇದ್ಯ ಮಾತುಗಳು. ರಾಸಾಯನಿಕಗಳಿಮ್ದ ಗಾವುದ ದೂರವಿರುವ ನರಹರಿ ಹತ್ತು ಎಕರೆಗೂ ಸಾವಯಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಗಿಡಕ್ಕೆ ನೀರಿನ ಮೂಲಕ ದ್ರವರೂಪಿಗೊಬ್ಬರ ವಿತರಣೆ ಮಾಡುತ್ತಾರೆ. ಇದರಿಂದಾಗಿ ಒಂದೇ ಖರ್ಚಿನಲ್ಲಿ ಎರಡು ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಜೀವ ಚೈತನ್ಯ ಕೃಷಿಯನ್ನು ಎರಡು ವರ್ಷ ಸಂಪೂರ್ಣ ಅಳವಡಿಸಿದ್ದರೂ ಅದು ಹೆಚ್ಚಿನ ಶ್ರಮ ಬೇಡುವುದರಿಂದ ಕೆಲವು ಸುಲಭವಾದಂತಹ ಸಿಂಪರಣೆಗಳನ್ನು ಮಾತ್ರಾ ಉಳಿಸಿಕೊಂಡು ಮಿಕ್ಕಂತೆ ಪಾಳೇಕರ್ ಕೃಷಿ ಅಳವಡಿಸಿ ಯಶಸ್ಸು ಸಾಧಿಸಿದ್ದಾರೆ.
ಬಗ್ಗಡ ಸರಬರಾಜು: ಮನೆಯ ಸ್ನಾನದ, ಹಾಗೂ ಲ್ಯಾಟ್ರೀನ್ ಗುಂಡಿಗಳ ನೀರನ್ನು ಶುದ್ಧಿಕರಣ ಘಟಕ ಸ್ಥಾಪಿಸಿ ಗಿಡಗಳಿಗೆ ಪೂರಸುವುದರ ಮೂಲಕ ಉತ್ತಮ ಪ್ರತಿಫಲ ಕಂಡಿದ್ದಾರೆ ನರಹರಿ. ಅಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನೂ ಗೊಬ್ಬರವಾಗಿ ಬಳಸುವುದರಿಂದ ಗೊಬ್ಬರಕ್ಕಾಗಿ ವ್ಯಯಿಸುವ ಖರ್ಚು ಅರ್ದ ಮಿಗಿಸುತ್ತಾರೆ.
ಬಾಳೆ ಕೃಷಿ: ಹತ್ತು ಎಕರೆ ಅಡಿಕೆ ತೋಟದ ಆದಾಯದಷ್ಟೇ ಆದಾಯವನ್ನು ಅಂತರಬೆಳೆಯ ಮೂಲಕ ಗಳಿಸುತ್ತಿದ್ದಾರೆ. ಆರಂಭದಿಂದಲೂ ಬಾಳೆ ಕೃಷಿಗೆ ಒತ್ತು ನೀಡಿದ ನರಹರಿ, ಪಚ್ಚಬಾಳೆ,ಕರಿಬಾಳೆ ಮುಂತಾದವುಗಳ ಕೃಷಿ ನಡೆಯಿಸಿ ಅಂತಿಮವಾಗಿ ಏಲಕ್ಕಿಬಾಳೆಯಿಂದ ಯಶಸ್ಸುಕಂಡುಕೊಂಡಿದ್ದಾರೆ. ೨೫೦೦ ಬಾಳೆಸಸಿ ನಿರಂತರ ಗೊನೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ವಾರ್ಷಿಕ ಒಂದೂವರೆ ಲಕ್ಷ ರೂಪಾಯಿಗಳ ಆದಾಯ ಬಾಳೆಯಿಂದ ಗಳಿಸುತ್ತಿದ್ದಾರೆ. ಹಾಲುವಾಣ ಗಿಡಗಳಿಗೆ ಕಾಳುಮೆಣಸು ಹಬ್ಬಿಸುವುದರ ಮೂಲಕ ಉತ್ತಮ ಕಾಳುಮೆಣಸು ಆದಾಯ ಹೊಂದಿದ್ದಾರೆ. ಅಂತರಬೆಳೆಯಾಗಿ ಸೆಲೆಕ್ಷೆನ್ ೯ ಕಾಪಿ ಬೆಳೆದಿದ್ದು ಉಪ ಆದಾಯವಾಗಿ ವಾರ್ಷಿಕ ೫-೬ ಕ್ವಿಂಟಾಲ್ ಉತ್ತಮ ಕಾಫಿ ಬೀಜ ಬೆಳೆಯುತ್ತಿದ್ದಾರೆ. ಖುಷ್ಕಿ ಜಮೀನಿಗೆ ಏಲಕ್ಕಿ ಮಾತ್ರಾ ನಿರಂತರ ಒಗ್ಗದು ಎನ್ನುವುದು ನರಹರಿ ಕಂಡುಕೊಂಡ ಸತ್ಯ. ಸ್ಥಳಿಯ ಏಲಕ್ಕಿ ನಾಟಿ ಮಾಡಿ ಒಂದು ಕ್ವಿಂಟಾಲ್ ಏಲಕ್ಕಿ ಬೆಳೆದರೂ ಗಿಡಗಳು ಮೂರು ವರ್ಷದ ನಂತರ ನಿಲ್ಲಲಿಲ್ಲ, ಕೆರಳದಿಂದ ನೆಲ್ಯಾಣಿ ಏಲಕ್ಕಿ ತಂದು ಪ್ರಯತ್ನಿಸಿದರೂ ಒಂದೆರಡು ವರ್ಷ ಆದಾಯ ನೀಡುತ್ತದೆ ನಂತರ ಕಟ್ಟೆ ರೋಗ ವ್ಯಾಪಿಸುತ್ತದೆ . ಬಾಳೆ ಮಾತ್ರಾ ಮಲೆನಾಡಿನ ಅಡಿಕೆ ತೋಟಕ್ಕೆ ಉತ್ತಮ ಉಪಬೆಳೆಯಾಗಿದ್ದು ತೋಟವನ್ನೂ ಹಾಗೂ ಮಾಲೀಕನನ್ನೂ ನೆಮ್ಮದಿಯಿಂದ ಇಡುತ್ತದೆ ಎನ್ನುತ್ತಾರೆ.
ಜೇನು ಕೃಷಿ: ಫಸಲು ಜಾಸ್ತಿಯಾಗಬೇಕಾದರೆ ಜೇನು ಸಾಕಾಣಿಕೆಗೆ ಮೊರೆಹೋಗುವುದು ಒಳಿತು ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ನ್ತಾಕಿನ ಉಸ್ತುವಾರಿ ನೊಡಿಕೊಳ್ಳುತ್ತಿರುವ ವಿಗ್ನೇಶನಿಗೆ ಜೇನು ಕೃಷಿಯಲ್ಲಿ ಅಪಾರ ಆಸಕ್ತಿ. ಹಾಗಾಗಿ ತೋಟದ ತುಂಬೆಲ್ಲಾ ತುಡುವೆ ಜೇನಿನ ಪೆಟ್ಟಿಗೆಗಳು ನೋಡುಗರಿಗೆ ಸಿಗುತ್ತವೆ. ಜೇನುತುಪ್ಪ ತೆಗೆಯುವುದರ ಬಗ್ಗೆ ಹೆಚ್ಚು ಆಸಕ್ತಿ ತೋರದೇ ಜೇನಿನ ಅಭಿವೃದ್ಧಿ ಬಗ್ಗೆ ಇಲ್ಲಿ ಹೆಚ್ಚು ಗಮನ. ಇದರ ಆದಾಯ ಫಸಲು ಹೆಚ್ಚಳದಲ್ಲಿ ಬರುತ್ತದೆ, ತುಪ್ಪ ಹುಳುಗಳುಗೆ ಮೀಸಲು, ಕೊಂಚ ಮಾತ್ರಾ ಅಂದರೆ ಮನೆಬಳಕೆಗೆ ತೆಗೆಯಬೇಕು ಅನ್ನುವುದು ಅಭಿಪ್ರಾಯ.
ಹೋಂಸ್ಟೆ: ತಮ್ಮ ವಾಸಕ್ಕೆಂದು ಕಟ್ಟಿಸಿರುವ ಮನೆಯನ್ನು ಹೋಂ ಸ್ಟೆ ಯಾಗಿ ಸರ್ಕಾರದ ಅನುಮತಿ ಪಡೆದು ನಡೆಸುತ್ತಿರುವ ನರಹರಿ ಪಟ್ಟಣದ ಜನರಿಗೆ ಹಳ್ಳಿಯ ಬದುಕನ್ನು ತೋರಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸ್ಟೆ ಎಟ್ ಮತ್ತುಗ" ಎಂಬ ಹೆಸರಿನಲ್ಲಿ ಈಗಾಗಲೇ ಜನಜನಿತವಾಗಿರುವ ಹೋಂ ಸ್ಟೆ ಮಲೆನಾಡಿನ ಕೃಷಿಕರ ಬದುಕು ಹಾಗೂ ಇಲ್ಲಿಯ ಸಂಸ್ಕೃತಿ, ಮತ್ತು ಮಲೆನಾಡಿನ ಊಟವನ್ನು ನಗರದ ಜನರಿಗೆ ಯಶಸ್ವಿಯಾಗಿ ಪರಿಚಯಿಸಿದ್ದಾರೆ. ಎರಡು ಕುಟುಂಬಗಳ ಉದರ ಪೋಷಣೆ ಹಾಗೂ ಹಳ್ಳಿಯ ಹತ್ತು ಜನರಿಗೆ ಉದ್ಯೋಗ ನೀಡುವುದರ ಮೂಲಕ ಸಾಮಾಜಿಕ ಬದ್ಧತೆಗೂ ಕಾರಣೀಕರ್ತರಾಗಿದ್ದಾರೆ. ತಮ್ಮ ಕೃಷಿ ಕ್ಷೇತ್ರಗಳನ್ನು ಜನರಿಗೆ ಪರಿಚಯಿಸುವುದರ ಮೂಲಕ ಕೃಷಿಕ ಹೀಗೂ ಆದಾಯಗಳಿಸಬಹುದು, ಪಟ್ಟಣದಲ್ಲಿದ್ದವರಿಗೆ ಸಿಗದ ಜೀವನ ಪದ್ದತಿಯನ್ನು ಹೀಗೂ ಕೊಡಬಹುದು ಎಂಬುದನ್ನ ತೊರಿಸಿಕೊಟ್ಟು ಕೃಷಿಕೋ ನಾಸ್ತಿ ದುರ್ಬಿಕ್ಷ್ಯ: ಎಂಬ ಮಾತಿಗೆ ಇಂಬು ನೀಡಿದ್ದಾರೆ.
ಮನುಷ್ಯನಿಗೆ ಶ್ರದ್ಧೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನರಹರಿಯವರ ಕೃಷಿ ಕ್ಷೇತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಪತ್ನಿ ಕಾಮಾಕ್ಷಿ ಕೂಡ ಕೃಷಿ ಆಸಕ್ತಿಯಿರುವುದರಿಂದ ಕೆಲಸ ಸುಲಭವಾಗಿದೆ ಎನ್ನುವುದು ನರಹರಿಯವರ ಮಾತುಗಳು. ನೋಡಿ ಕಲಿ ಮಾಡಿ ತಿಳಿ ಎಂದು ಮೇಲ್ನೋಟದ ಮಾತಾದರೂ ಹತ್ತು ಎಕರೆ ತೋಟ ಹೋಂ ಸ್ಟೇ ಸಹಿತ ಎದ್ದು ನಿಲ್ಲುವುದಕ್ಕೆ ತಗುಲಿದ ಶ್ರಮ ನರಹರಿಯವರ ಅನುಭವಕ್ಕೆ ಮಾತ್ರಾ. ಅದು ಎಲ್ಲರಿಗೂ ತಿಳಿಯಬೇಕು ಎಂದಾದರೆ ಅವರ ಸಂಪರ್ಕದಿಂದ ಸಾದ್ಯ. ಹೀಗೆ ಸಾಧಿಸುವವರ ಸಂಖ್ಯೆ ಜಾಸ್ತಿಯಾದಂತೆಲ್ಲಾ :ಭಾರತ ಸುಂದರ ಹಳ್ಳಿಗಳ ದೇಶ" ಎಂಬ ಸಾಲುಗಳು ಪ್ರಪಂಚಾದ್ಯಂತ ಪಸರಿಸಲು ಸಾದ್ಯವಾಗುತ್ತದೆ.
Mo:9880799975



1 comment:

Anonymous said...

evana kyalli duddittu.madida aste.