Saturday, July 5, 2008

ಹೃದಯದ ಮಾತು ಮತ್ತು ಓಶೋ ಎಂಬ ಸಂತ ..ಹಾಗೂ ಬಿಟ್ಟಾಕು..... ಬಿಟ್ಟಾಕು ....ಬಿಟ್ಟಾಕು


ಆ ಕಣ್ಣುಗಳಲ್ಲಿ ಅದೆಂತಹಾ ಭಾವ, ಆ ಮುಖದಲ್ಲಿ ಅದೆಂತದೋ ಶಕ್ತಿ ಆ ನೋಟದಲ್ಲಿ ಉನ್ಮಾದ ಎಂಬಂತಹ ಡೈಲಾಗ್ ಗಳನ್ನು ಬದಿಗಿರಿಸಿ ಓಶೋವನ್ನು ನೋಡೋಣ. ಎಲ್ಲ ಸಂತ ಸನ್ಯಾಸಿಗಳೂ ನನ್ನನ್ನು ನಂಬಿ ನಾನು ಹೇಳಿದ್ದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯಿರಿ ಎಂದರೆ ಈ ಮಹಾನುಬಾವ ಉಲ್ಟಾ ಹೇಳಿದ್ದ. "ನಾನು ಹೇಳುತ್ತೇನೆಂದು ನಂಬಬೇಡಿ, ಅದು ನಿಮ್ಮ ಅನುಭವಕ್ಕೆ ಬಂದಾಗ ನಂಬಿ. ನಿಮಗೆ ನೀವೆ ಗುರು ಅಪ್ಪಿತಪ್ಪಿಯೂ ನನ್ನನ್ನು ಗುರು ಎಂದು ನಂಬಬೇಡಿ,ಯಾರು ದೇವರನ್ನು ತೋರಿಸುತ್ತೇನೆ ಎಂದು ಹೇಳುತ್ತಾರೋ ಅವರು ಸುಳ್ಳು ಹೇಳುತ್ತಿದ್ದಾರೆಂದು ಅರ್ಥ, ದೇವರನ್ನು ಅವರವರೇ ಕಾಣಬೇಕು, ಬೇರೆಯವರು ತೋರಿಸಲು ಸಾಧ್ಯವಿಲ್ಲ. ಮಾರ್ಗ ಸಾವಿರಾರುಇದೆ ಆಯ್ಕೆ ಅವರವರದ್ದು. ಸೆಕ್ಸ್ ಎಂಬುದು ಪ್ರಕೃತಿ ಸಹಜ ಅದನ್ನು ತಲೆಯೊಳಗೆ ಇಟ್ಟುಕೊಂಡು ರುಗ್ಣರಾಗಬೇಡಿ ತಲೆಯೊಳಗೆ ಇದ್ದಷ್ಟು ಅದು ವಿಕಾರರೂಪ ತಾಳುತ್ತದೆ," ಎಂಬಂತಹ ವಾಕ್ಯಗಳನ್ನು ಹೇಳಿದ ಗುರುವಲ್ಲದ ಗುರು ಸಂತನಲ್ಲದ ಸಂತ ಒಶೋ ರಜನೀಶ್ ಎಂದು ನಿಮಗೆ ಗೊತ್ತು. ಆತ ಸಾವಿರಾರು ಪುಸ್ತಕಗಳನ್ನು ಓದಿದ ಹಾಗೂ ಬರೆದ ಮತ್ತು ವಿಧವಿಧವಾದ ಜೀವನಾನುಭವವನ್ನು ಪಡೆದ ಮಹಾನುಭಾವಿ. ಹಾಗೆಹೇಳುತ್ತಾ ಹೇಳುತ್ತಾ ಕಾಲವಾದ ಅವರ ತತ್ವ ಸ್ವಲ್ಪ ಅರ್ಥವಾದರೆ ಸುಂದರ ಸುಮಧುರ ಪ್ರಪಂಚದ ಅರಿವಾಗುತ್ತದೆ.
ಎಲ್ಲರಂತೆ ನಾವು ಅಲ್ಲ ಎಂಬ ಭಾವನೆ ಎಲ್ಲರಲ್ಲಿಯೂ ಇರುತ್ತದೆ. ನಾವು ಕೆಲಸ ಮಾಡುತ್ತೇವೆ ಮಾತನಾಡುತ್ತೇವೆ ಬರೆಯುತ್ತೇವೆ, ಓದುತ್ತೇವೆ, ಊಟ ಆಟ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ ಅವೆಲ್ಲಾ ಒಂದೆಡೆ ಇರಲಿ. ಇವುಗಳನ್ನೆಲ್ಲಾ ಮಾಡುವುದಕ್ಕೆ ಕೆಲವರು ಮೆದುಳನ್ನು ಬಳಸುತ್ತಾರೆ ಇನ್ನು ಕೆಲವರು ಹೃದಯವನ್ನು ಬಳಸುತ್ತಾರೆ ಎಂದು ಓಶೋ ಹೇಳುತ್ತಾರೆ . ಇದೇನು ತರ್ಲೆ ಅಂದಿರಾ , ಇರಲಿ ಸ್ವಲ್ಪ ಸಹಿಸಿಕೊಳ್ಳಿ ಮುಂದೆ ನೋಡೋಣ
ಒಂದಾನೊಂದು ಊರಲ್ಲಿ ಒಬ್ಬ ಗ್ರಹಸ್ಥನಿದ್ದ, ಬೆಳ್ಳನೆಯ ಹೆಂಡತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಕೈತುಂಬಾ ಕಾಸು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸುಖೀ ಸಂಸಾರ ಆತನದು. ಆತ ತನ್ನನ್ನು ತನ್ನ ಸಂಸಾರವನ್ನು ಹೊರತುಪಡಿಸಿ ಮಿಕ್ಕ ಯಾರಿಗೂ ಕವಡೆಕಾಸಿನ ಉಪಕಾರವನ್ನು ಮಾಡುತ್ತಿರಲಿಲ್ಲ ಹಾಗಾಗಿ ಆತನನ್ನು ಕೃಪಣ ಜಿಪುಣ ಮುಂತಾಗಿ ಊರವರು ಕರೆಯುತ್ತಿದ್ದರು. ಇದ್ದಕ್ಕಿಂದಂತೆ ಆತನಿಗೆ ಹೃದಯಾಘಾತವಾಯಿತು . ಹಣಕಾಸಿನ ತೊಂದರೆ ಇಲ್ಲದ್ದರಿಂದ ಆತ ವೈದ್ಯರುಗಳ ಶ್ರಮದಿಂದ ಬದುಕುಳಿದ. ಹೃದಯಾಘಾತದ ಆಘಾತ ಮಾಯವಾಗುವ ಮೊದಲೆ ಅದ್ಯಾರೋ ಕೋರ್ಟಿನಲ್ಲಿ ಅವನ ವಿರುದ್ಧ ಕೇಸು ಹಾಕಿದರು. ಹೀಗೆ ಸುಖವಾಗಿದ್ದ ಸಂಸಾರದಲ್ಲಿ ಒಂದರ ಹಿಂದೆ ಒಂದಂತೆ ಆಘಾತಗಳು ಎರಗತೊಡಗಿದವು. ಆವಾಗ ಸಲಹೆಕಾರರು ಆಕಳೊಂದನ್ನು ಸಾಕು ಗೋಪೂಜೆಯಿಂದ ಎಲ್ಲಪರಿಹಾರವಾಗುತ್ತದೆ ಎಂದರು. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಆತನಿಗೆ ಅದು ಸತ್ಯ ಅಂತ ಅನ್ನಿಸತೊಡಗಿತು. ಕಾರಣ ಪಕ್ಕದ ಮನೆಯಲ್ಲಿ ಉತ್ತಮ ಆಕಳು ಕರುಗಳೊಡನೆ ಕೊಟ್ಟಿಗೆ ತುಂಬಿ ತುಳುಕಾಡುತ್ತಿತ್ತು. ಅವರ ಮನೆಯಲ್ಲಿ ಹೃದಯಾಘಾತವೂ ಇರಲಿಲ್ಲ, ಕೋರ್ಟು ಕಛೇರಿಯ ತರ್ಲೆ ತಾಪತ್ರಯವೂ ಇರಲಿಲ್ಲ. ಆದಾಯದ ಐವತ್ತು ಭಾಗವನ್ನು ಅವರು ಗೋಸೇವೆಗೆ ಖರ್ಚು ಮಾಡುತ್ತಿದ್ದರು. ಸರಿ ಮಾರನೇ ದಿನ ಈತನೂ ಒಂದು ಆಕಳನ್ನು ಖರೀದಿಸಿದ. ನಿತ್ಯ ಮೈ ತೊಳೆಯುವುದು, ದಾಣಿ ಇಡುವುದು ಮುಂತಾದ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಅದೇನು ಕಾಕತಾಳೀಯವೋ ಸತ್ಯವೋ ಹೃದಯ ಸರಿಯಾಯಿತು. ಕೋರ್ಟು ಕೇಸು ದಿಡೀರನೆ ಖುಲಾಸ್. ಆಕಳು ತಂದ ಎರಡು ತಿಂಗಳೊಳಗೆ ಎಲ್ಲಾ ಮಾಮೂಲಿಯಂತೆ ನಡೆಯತೊಡಗಿತು( ಇದು ಕತೆ . ಕೋರ್ಟು ಹೃದಯದ ತೊಂದರೆಯಿದ್ದವರೆಲ್ಲಾ ಆಕಳು ಸಾಕಲು ಶುರುಮಾಡಿ ಪರಿಹಾರ ಕಾಣದಿದ್ದರೆ ನಾನು ಜವಾಬ್ದಾರನಲ್ಲ..........!) ಈಗ ಆತನಿಗೆ ಮಿದುಳು ಕೆಲಸಮಾಡಲು ಶುರುಮಾಡಿತು. ಈ ಆಕಳಿಗೆ ಇಷ್ಟೆಲ್ಲಾ ಖರ್ಚು ಮಾಡಿ ಸುಮ್ಮನೆ ಹಣವನ್ನು ವ್ಯರ್ಥ ಮಾಡುತ್ತಿದ್ದೇನಲ್ಲ ಅಂತ ಅನ್ನಿಸತೊಡಗಿತು. ಸರಿ ಆತ ಮಾರನೇದಿನ ಆಕಳುಹಾಗೂ ಕರುವನ್ನು ಮಾರಲು ತೀರ್ಮಾನಿಸಿದ. ಆದರೆ ಕೊಳ್ಳಲು ಸುಲಭವಾಗಿ ಯಾರೂ ಮುಂದೆಬರಲಿಲ್ಲ. ಆವಾಗ ಆತ ತಾನು ಸಮಸ್ಯೆಯಲ್ಲಿ ಸಿಕ್ಕಿದ್ದು ಹಾಗೂ ಆಕಳು ಮನೆಗೆ ಬಂದನಂತರ ಸಮಸ್ಯೆಗಳು ಬಾಳೆಹಣ್ಣು ಸುಲಿದಂತೆ ಮಾಯವಾದದ್ದು ಮುಂತಾದವುಗಳನ್ನು ಎಳೆ ಎಳೆಯಾಗಿ ಜನರ ಬಳಿ ಹೇಳತೊಡಗಿದ. ಕೆಲದಿನದಲ್ಲಿ ಊರಿನ ಮತ್ತೊಬ್ಬರಿಗೆ ಹೃದಯಾಘಾತವಾಯಿತು . ಮಾರನೆ ದಿವಸ ಈತನ ಆಕಳು ದುಪ್ಪಟ್ಟು ದರಕ್ಕೆ ಅವರಿಗೆ ಮಾರಾಟವಾಯಿತು.
ಈಗ ನಿಮಗೆ ಅರ್ಥವಾಗಿರಬೇಕು ಮಿದುಳಿನ ಕೆಲಸವೆಂದರೆ ಯಾವುದು ಅಂತ. ಇದೇ ಕತೆಯಲ್ಲಿ ಹೃದಯ ಕೆಲಸದ ಉದಾಹರಣೆ ಇದೆ, ಆದಾಯದ ಐವತ್ತು ಭಾಗ ಆಕಳು ಕೊಟ್ಟಿಗೆಗೆ ವ್ಯಯಿಸುತ್ತಿದ್ದಾನಲ್ಲ ಆತನದು. ಅವನಿಗೆ ಆಯ ವ್ಯಯ ದ ಬಗ್ಗೆ ಗಮನವಿರುವುದಿಲ್ಲ , ಹೃದಯಪೂರ್ವಕವಾಗಿ ಆಕಳನ್ನು ಸಾಕುತ್ತಿರುತ್ತಾನೆ

ಇಂತಹ ಸಣ್ಣ ಸಣ್ಣ ಕತೆಗಳ ಮೂಲಕ ಓಶೋ ಇಷ್ಟವಾಗುತ್ತಾರೆ .

ಯಾರಾದರೂ ನಿಮ್ಮ ಬಳಿ ನಿಮ್ಮ ಕೆಲಸಕ್ಕೆ "ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ " ಎಂದು ಹೇಳಿದ ನಂತರ ಒಂದು ಕ್ಷಣ ಯೋಚಿಸಿ ಅದು ಖಂಡಿತ ಅವರ ಮಿದುಳಿನ ಕೆಲಸ. ನಿಮ್ಮನ್ನು ಹೀಗೆ ಅಭಿನಂದಿಸುವುದರಿಂದ ತನಗೆ ಲಾಭವಿದೆ ಎಂದು ಅವರ ಮಿದುಳು ಲೆಕ್ಕಾಚಾರ ಹಾಕಿ ಈ ಮಾತನ್ನು ಹೇಳಿಸುತ್ತದೆ. ನಿಜವಾಗಿಯೂ ಅವರ ಹೃದಯ ನಿಮ್ಮ ಕೆಲಸಕ್ಕೆ ತುಂಬಿಬಂದಿದ್ದರೆ ಅವರು ನಿಮ್ಮ ನ್ನು ಭೇಟಿ ಮಾಡಿದ ತಕ್ಷಣ ಅವರ ಮುಖ ಅವರ ಕಣ್ಣುಗಳು ಅಭಿನಂದನೆಗಳನ್ನು ಸಲ್ಲಿಸಿಬಿಟ್ಟಿರುತ್ತದೆ. ಹೃದಯಪೂರ್ವಕ ಅಭಿನಂದನೆಗಳನ್ನು ಬರೆದು ಸಲ್ಲಿಸಬಹುದು , ಭೇಟಿಯಾದಾಗ ಹೇಳುವ ಅವಶ್ಯಕತೆ ಇರುವುದಿಲ್ಲ. ಇದೆ ಅಂತಾದರೆ ಅದು ಪಕ್ಕಾ ಮೆದುಳಿನ ಕೆಲಸ. ಇಂತಹ ನೂರಾರು ಹೊಸ ಹೊಸ ಯೋಚನೆಗಳು ವಿಷಯಗಳು ಒಶೋವಿನ ಬುಟ್ಟಿಯಲ್ಲಿವೆ. ಸ್ವಲ್ಪ ಬಸಿದುಕೊಂಡರೆ ಏಕಾಂಗಿಯಾದಾಗ ಆಸ್ವಾದಿಸಬಹುದು.

ಪ್ರೀತಿ ಪ್ರೇಮ ದೇವರು ಧರ್ಮ ಮುಂತಾದ ಶಭ್ದಗಳು ಹೃದಯಕ್ಕೆ ಸಂಬಂಧಪಟ್ಟಿದ್ದು. ಹಣ, ಲೋಭ ಲಾಭ,ಮೋಹ ಮದ ಮತ್ಸರ ಮುಂತಾದವುಗಳೆಲ್ಲಾ ಮಿದುಳಿಗೆ ಸಂಬಂಧಪಟ್ಟಿದ್ದು. ಹೃದ್ಯಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಸುಖ ಸ್ವಲ್ಪ ಹೆಚ್ಚು ಮೆದುಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸುಖ ಸ್ವಲ್ಪ ಕಷ್ಟ.

ಓಶೋ ಹೇಳಿದ್ದು ಅದನ್ನೆ ಅನುಭವಕ್ಕೆ ಬಂದರೆ ನಂಬು ಇಲ್ಲದಿದ್ದರೆ ಬಿಟ್ಟಾಕು.... ...... ಬಿಟ್ಟಾಕು ....ಬಿಟ್ಟಾಕು

2 comments:

ಜಗದೀಶಶರ್ಮಾ said...

ಒಳ್ಳೆಯ ಬರಹ. ಹಳ್ಳಿಯಲ್ಲಿ ಕುಳಿತೂ ಎಷ್ಟೆಲ್ಲಾ ಒದ್ತೀಯಲ್ಲಾ. ಗುಡ್ ಗುಡ್.

ಯಜ್ಞೇಶ್ (yajnesh) said...

ಲೇಖನ ಚೆನ್ನಾಗಿದ್ದು. ಒಶೋರವರ ಕ್ರಾಂತಿಬೀಜ ಪುಸ್ತಕ ತುಂಬಾ ಚೆನ್ನಾಗಿದ್ದು. ನಿಮ್ಮ ಲೇಖನದಲ್ಲಿ ಬಂದಂತೆ ಸಣ್ಣ ಸಣ್ಣ ಕಥೆಗಳನ್ನು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.