Wednesday, December 3, 2008

ಹ ಹ ಹ ನಾನು ಯಾರು ಗೊತ್ತಾ... ! (ಮುಂದುವರೆದದ್ದು)

ಹೊರಗಡೆ ವ್ಯಕ್ತಿಯೊಬ್ಬನ ಗಲಾಟೆ ಶುರುವಾಯಿತು. ಶನಿದೇವ ಕಣ್ಣು ಮುಚ್ಚಿ ಹಾ ಹಾ ಹೂ ಹೂ ಅನ್ನುತ್ತಲೇ ಇದ್ದ. ಆತ ಶನಿ ಇಳಿದಮೇಲೆ ಕಣ್ಣುಬಿಡುವುದಂತೆ. ಹೊರಗಡೆಯ ವ್ಯಕ್ತಿಯ ಧ್ವನಿ ಸ್ಪಷ್ಟವಿರಲಿಲ್ಲ. ಅದು ಕುಡಿದ ಮತ್ತಿನ ಧ್ವನಿಯಾಗಿತ್ತು. "ನೀನು ಸನಿ ದೇವನನಾ ಎಲ್ಲಾ ಕಂಡಿದೀನಿ ಬಿಡು ನಾ ಕಾಣದ ಸನಿದೇವ ನೀನಲ್ಲ. ನಂಗೆ ಈ ಮೈಮೇಲೆ ಬರಾದು ಹೋಗಾದು ಎಲ್ಲ ಹ್ಯಾಂಗೆ ಅಂತ ಗೊತ್ತೈತಿ. ಸನಿ ಅಂತೆ ಸನಿ, ತಗದು ನಾಕು ಬಿಟ್ರೆ ಸನಿ ಎಲ್ಲ ಹಾರಿ ಹೊಕ್ತಾನೆ ಎಮ್ಮಿಗೆ ಕಾಯಿ ಮಂತ್ರಿಸಿ ಹಾಲು ಕೊಡ ಹಂಗೆ ಮಾಡವ ನೀನೆಂತ ದೇವ್ರ? ದಂ ಇದ್ರೆ ಕ್ವಾಣ ಹಾಲು ಕೊಡ ಹಂಗೆ ಮಾಡು , ಕಳ್ ಬಡ್ಡಿ ಮಗನೆ" ಕ್ಷಣ ಕ್ಷಣಕ್ಕೂ ಹೊರಗಿನ ವ್ಯಕ್ತಿ ಕೂಗಾಟ ಜೋರಾಯಿತು. ಎಲ್ಲ ಭಕ್ತರ ಚಿತ್ತ ಈಗ ಹೊರಗಿನ ಶನಿಯತ್ತ.(ಟಿವಿ ೯ ವರದಿಗಾರರು ಹೀಗೆ ಹೇಳುತ್ತಿದ್ದರೇನೋ). ಪಕ್ಕದಲ್ಲಿ ಪ್ರಪಂಚವೇ ತಲೆಯಮೇಲೆ ಹೊತ್ತು ನಿಂತ ಮುಖ ಮಾಡಿಕೊಂಡಿದ್ದವನ ಬಳಿ ಹೊರಗಡೆ ಕೂಗುತ್ತಾ ಇರುವವನು ಯಾರು? ಎಮ್ದು ಕೇಳಿದೆ. ಅಯ್ಯೋ ಅದು ದೊಡ್ಡ ಯಡವಟ್ಟು ಸೋಮಿ, ಮುಂಚೆ ಅವನ ಮೈಮೇಲೆ ಶನಿ ದೇವ್ರು ಬರ್ತಿತ್ತು. ಅವನು ಕುಡಿಯದು ಜಾಸ್ತಿ ಮಾಡ್ಬುಟ್ಟಾ ಹಂಗಾಗಿ ಮೇಷ್ಟ್ರು ಅಂವ ಬ್ಯಾಡ ಅಂತ ಇವನ ಮೈಮೇಲೆ ಬರೋ ಹಂಗೆ ಮಾಡಿದಾರೆ. ನನಗೆ ಈಗ ಶನಿ ಮಹಾತ್ಮನ ಗಲಾಟೆಯ ಅರ್ಥವಾಯಿತು. ಅಲ್ಲಿ ಆಗಿದ್ದು ಇಷ್ಟೆ. ಕೆಲ ವರ್ಷಗಳ ಹಿಂದೆ ಭಕ್ತ ಸಮೂಹ ಹೆಚ್ಚಾಗಿ ಇತ್ತ ಕಡೆ ಸುಳಿಯದಿದ್ದ ದಿವಸಗಳಲ್ಲಿ ಹೊರಗಡೆ ನಿಂತು ಕೂಗುತ್ತಿದ್ದವನ ಮೈಮೇಲೆ ಪ್ರತೀ ಶನಿವಾರ ಮೈಮೇಲೆ ಬರುತ್ತಿತ್ತಂತೆ. ಆತ ಪಾಪ ಸಣ್ಣಪುಟ್ಟ ಭಕ್ತರ ಸಮಸ್ಯೆಗಳನ್ನು ಬಗೆ ಹರಿಸಿ ತನಗೆ ವಾರಕ್ಕಾಗುವ ಖರ್ಚು ಸಂಪಾದಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಬುದ್ದಿವಂತರೊಬ್ಬರು ಅಲ್ಲಿಯೇ ಇದ್ದ "ಸನಿ ಮಹಾತ್ಮನ" ಗುಡಿಯ ಜೀರ್ಣೋದ್ಧಾರ ಮಾಡಿದರು. ಅಷ್ಟಾದನಂತರ ಜನಸಮೂಹ ಹೆಚ್ಚು ಹೆಚ್ಚು ಬರತೊಡಗಿತು. ಆದರೆ ಹಳೆಯಪಾತ್ರಿ ಸ್ವಲ್ಪ ಎಣ್ಣೆ ಗಿರಾಕಿಯಾದ್ದರಿಂದ ರಗಳೆಮಾಡುತ್ತಿದ್ದ. ಇದನ್ನು ಮನಗಂಡ ಆಡಳಿತ ಕಮಿಟಿ ಶನಿ ಮೈಮೇಲೆ ಬರಲು ಹೊಸ ವ್ಯಕ್ತಿಯನ್ನು ನಿಯಮಿಸಿತು. ಪಾಪ ಈ ಪ್ರಕ್ರಿಯೆಯಿಂದ ಹಳೇ ಪಾತ್ರಿ ಸಂಪಾದನೆಯಿಲ್ಲದೆ ಅಬ್ಬೇಪಾರಿಯಾಗಿದ್ದ. ಈಗ ಆತ ಹೊರಗಡೆ ಬಂದು ಗಲಾಟೆಶುರುವಿಟ್ಟುಕೊಂಡಿದ್ದ. ಆತನೆದುರು ಪ್ರಸ್ತುತ ಶನಿ ಪಾತ್ರಧಾರಿ ಹೆಚ್ಚು ಮಾತನಾಡುವಂತಿರಲಿಲ್ಲ. ಅವನಿಗೆ ಶನಿ ಮೈಮೇಲೆ ಬರುವ ಮರ್ಮವೆಲ್ಲಾ ಗೊತ್ತಿತ್ತು. ಹಾಗಾಗಿ ಈತ ಒಂಥರಾ ಕಸಿವಿಸಿಗೊಳಗಾಗಿದ್ದ. ಜನರ ಮತ್ತು ಶನಿದೇವರ ನಡುವೆ ಮಾತುಕತೆಗೆ ಸಹಾಯ ಮಾಡಲು ಸೇರುಗಾರನೊಬ್ಬ ಇದ್ದ . ಆತ ಮಹಾ ಚಾಲಾಕಿ. ಆತ ಹೊಸಪಾತ್ರಿಯ ಪಾರ್ಟಿ. ಆತ ಹೇಳಿದ. " ಶನಿ ದೇವಾ ಈತನ ಗಲಾಟೆ ಇಲ್ಲಿ ತೀರ್ಮಾನವಾಗುವುದು ಬೇಡ , ಬೇರೆ ಯಾವುದಾದರೂ ಸ್ಥಳ ಸೂಚಿಸು". ಶನಿ " ಹೌದು ನಾನು ಇನ್ನು ಹೆಚ್ಚು ಹೊತ್ತು ಮೈಮೇಲೆ ಇರುವುದಿಲ್ಲ. ನಾಡಿದ್ದು ಧರ್ಮಸ್ಥಳಕ್ಕೆ ಇಬ್ಬರೂ ಬನ್ನಿ ಅಲ್ಲಿ ತೀರ್ಮಾನ ಹೆಗಡೆಯವರ ಬಾಯಿಂದ ಹೇಳಿಸುತ್ತೇನೆ. ಆದರೆ ಒಂದು ನೆನಪಿರಲಿ, ನಾನು ಯಾವುದೇ ಕಾರಣಕ್ಕೂ ಆತನ ಮೈಮೇಲೆ ಬರುವುದಿಲ್ಲ" ಎಂದು ಹೇಳಿದ. ಸೇರುಗಾರ "ಸರಿ ಹಾಗೆಯೇ ಆಗಲಿ" ಎಂದ . ಆಗ ಅಲ್ಲಿ ಕುಳಿತಿದ್ದವರೊಬ್ಬರು " ನಾಡಿದ್ದು ಬಸ್ ಮುಷ್ಕರ . ಧರ್ಮ ಸ್ಥಳಕ್ಕೆ ಹೋಗಲಾಗುವುದಿಲ್ಲ" ಎಂದರು. ಪಾಫ ಶನಿದೇವನಿಗೆ ಅದು ಗೊತ್ತಿರಲಿಲ್ಲ ಅಂತ ಕಾಣಿಸಿತ್ತು. ಆದರೂ ಶನಿದೇವ ಸೋಲಲಿಲ್ಲ." ನೀನು ನಿನ್ನ ವಾಹನವನ್ನು ಕಳುಹಿಸು ಅದರಲ್ಲಿ ಎಲ್ಲರೂ ಧರ್ಮಸ್ಥಳಕ್ಕೆ ಹೋಗಿಬರಲಿ" ಎಂದು ಭಕ್ತ ಸಮೂಹದತ್ತ ಕೈ ಮಾಡಿ ತೋರಿಸಿದ. ಕಣ್ಣು ಮುಚ್ಚಿದ್ದ ಶನಿದೇವರ ಪಾತ್ರಿ ಕೈ ತೋರಿಸಿದೆಡೆ ಒಬ್ಬ ಹಣ್ಣು ಹಣ್ಣು ಮುದುಕಿ ಕುಳಿತಿದ್ದಳು. ಅಲ್ಲಿ ಸ್ವಲ್ಪ ಯಡವಟ್ಟಾಗಿತ್ತು. ಶನಿ ಮೈಮೇಲೆ ಬರುವುದಕ್ಕೆ ಮೊದಲು ಅಲ್ಲಿ ಒಬ್ಬ ಲಾರಿಮಾಲಿಕರು ಕುಳಿತಿದ್ದರು ಆತ ಅದನ್ನೇ ನೆನಪಿಟ್ಟುಕೊಂಡು ಕೈ ತೋರಿಸಿದ್ದ ಆದರೆ ಅವರು ಅದ್ಯಾವ ಮಾಯಕದಲ್ಲೋ ಎದ್ದು ಹೋಗಿಬಿಟ್ಟಿದ್ದರು. ಆ ಜಾಗದಲ್ಲಿ ಕುಳಿತ ಅಜ್ಜಿಯಬಳಿ ವಾಹನವೆಂದರೆ ಮುರುಕು ಊರುಗೋಲು...?.
ನನಗೆ ಈ ಮಳ್ಳಾಟಗಳನ್ನು ನೋಡಿ ನಗು ಉಕ್ಕಿಬರುತ್ತಿತ್ತು. ಆದರೆ ನಗುವಂತಿಲ್ಲ ನಕ್ಕರೆ ಕೈಕಾಲು ಮುರಿದು ಹೆಡೆಮುರಿಕಟ್ಟಿ ಆಚೆ ಎಸೆಯುತ್ತಿದ್ದರು. ಎಲ್ಲರೂ ಘನಗಂಭೀರ ಮುಖ ಹೊತ್ತು ವೀಕ್ಷಿಸುತ್ತಿದ್ದರು. ಈ ಎಲ್ಲಾ ಘಟನೆ ತೀರಾ ಹದತಪ್ಪುತ್ತಿರುವುದು ಸೇರುಗಾರನ ಗಮನಕ್ಕೆ ಬಂತು. ಆತ : ಶನಿದೇವಾ... ನೀನು ಬಹಳ ಗೊಂದಲದಲ್ಲಿದ್ದೀಯಾ(ನಿಜವಾಗಿಯೂ ಹೌದು ಅಸ್ತಿತ್ವದ ಪ್ರಶ್ನೆ ) ಹಾಗಾಗಿ ಇಂದು ಬೇಡ ಮುಂದೆ ತೀರ್ಮಾನಿಸೋಣ" ಎಂದು ತಿಪ್ಪೆಸಾರಿಸಿದ. ನಂತರ ನಾನು..

3 comments:

Harisha - ಹರೀಶ said...

ಎರಡೂ ಭಾಗಗಳು ಮಜವಾಗಿವೆ.. ನಂತರ ನೀವು??

ಅನಿಲ್ ರಮೇಶ್ said...

ಸಕ್ಕತಾಗಿದೆ...

ಇನ್ನೂ ಇದೆಯಾ?

Unknown said...

harish and ramesh

innu ide
thanks for comment