Tuesday, December 16, 2008

ತರಬೇಕು..ತರಬೇಕು... ಒಂದು ಕಥಾ ಸಂಕಲನ

ಕಟ್ಟು ಕಥೆಯ ಕಟ್ಟು ಅಂತ ಅದರ ಹೆಸರು ಇಡಬೇಕು. ಅದರಲ್ಲಿ ನನ್ನ ಇಲ್ಲಿಯವರೆಗೆ ಪ್ರಕಟವಾದ ಕಥೆಗಳನ್ನು ಮುದ್ರಿಸಬೇಕು ಅಂತ ಒಂದು ಆಸೆ ಚಿಗುರಿದೆ. ಪ್ರಜಾವಣಿ-ಕನ್ನಡಪ್ರಭ-ಉದಯವಾಣಿ-ಕರ್ಮವೀರ-ಸುಧಾ ಸೇರಿದಂತೆ ಒಟ್ಟು ಪ್ರಕಟವಾಗಿದ್ದು ಇಪ್ಪತ್ತೈದು ಕಥೆಗಳು. ಅವುಗಳಲ್ಲಿ ಹದಿನೈದು ಆರಿಸಿ ಮುದ್ರಿಸಬೇಕು. ಅದಕ್ಕಾಗಿ ಹದಿನೈದು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕು ಆಮೇಲೆ ಹೇಗೂ ಇದ್ದೇ ಇದೆ. " ಹೋಯ್ ಆರಾಮ, ಮತ್ತೆ ಸಮಾಚಾರ , ನನ್ನದೊಂದು ಕಥಾ ಸಂಕಲನ ಬಂದಿದೆ? " ಅಂತ ಅಪರೂಪದವರು ಕಂಡಕೂಡಲೆ ಕೇಳಬೇಕು. " ಓ ಹೋ ಹೌದಾ ನೀನು ಕಥೆ ಬರಿತೀಯಾ..?" ಎಂಬ ಪ್ರಶ್ನೆ ಬರುತ್ತದೆ . ತಾಳ್ಮೆಗೆಡಬಾರದು " ಹೌದು" ಅನ್ನಬೇಕು. ( ನಮ್ಮಲ್ಲಿ ಜನಜನಿತವಾದ ಮಾತಿದೆ. ಅದ್ಯಾರದ್ದೋ ಹೆಸರು ಹೇಳಿ " ಅವ ಹಡೆದ್ಲಡ ಗಂಡು ಮಗುವಡಾ.." ಅಂದಕೂಡಲೆ ಎದುರಿದ್ದವನಿಂದ " ಅರೆ ಅವ ಯಂಗೆ ಬಸಿರಾಗಿದ್ದೆ ಗೊತ್ತಿಲ್ಯಲ" ಎನ್ನುವ ಜೋಕ್ ರೂಪದ ವ್ಯಂಗ್ಯ. ಇದೂ ಹಾಗೆಯೆ, ಕಥೆ ಬರೆಯದೆ ಕಥಾ ಸಂಕಲನ.. ಬರಲು ಸಾಧ್ಯವೇ? ಇರಲಿ ) ಆನಂತರ ಬಗಲು ಚೀಲದಿಂದ ಒಂದು ಪುಸ್ತಕ ತೆಗೆದುಕೊಡಬೇಕು . ಆಗ ಅವರು " ಚಲೋ ಇದ್ದು " ಎಂದು "ಬರ್ಲಾ ಬಸ್ ಬಂತು" ಎನ್ನುತ್ತಾ ಹೋಗುವುದನ್ನು ನೋಡಬೇಕು. ಮನೆಗೆ ಬಂದು ಹೆಂಡತಿಯ ಬಳಿ ಇವತ್ತು ಹತ್ತು ಪುಸ್ತಕ ಖರ್ಚಾಯಿತು ಎನ್ನುವ ಸತ್ಯ ಹೇಳಬೇಕು. ಅಡಿಕೆ ಮಾರಿದ ದುಡ್ಡನ್ನು ಪುಸ್ತಕದಿಂದ ಬಂದದ್ದು ಎಂಬ ಹಸಿಹಸಿ ಸುಳ್ಳನ್ನು ಪೋಣೀಸಬೇಕು. ಇವಿಷ್ಟು ಸನ್ ಎರಡುಸಾವಿರದ ಒಂಬತ್ತನೆ ಇಸವಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಆಗಬೇಕಾದ ಕೆಲಸಗಳು. ಒಂದು ಜೇನಿನ ಹಿಂದೆ ಎಂಬ ಪುಸ್ತಕ ೨೦೦೭ ರಲ್ಲಿ ಬರೆದಿದ್ದು ನಾಲ್ಕುನೂರು ಖಾಲಿಯಾಗಿದೆ.ಇನ್ನು ನೂರು ಪುಸ್ತಕ ಖಾಲಿಯಾದರೆ ಅಸಲಾದಂತೆ. ...! . ( ಹೆಂಡತಿಯ ಬಳಿ ಅದರ ಲಾಭದ ದುಡ್ಡಿನಿಂದ ಇನ್ನೊಂದು ಕಥಾ ಸಂಕಲನ ತರುತ್ತಿದ್ದೇನೆಂದು ಸುಳ್ಳು ಹೇಳಿಯಾಗಿದೆ. ಸಧ್ಯ ಆಕೆ ಈ ಬ್ಲಾಗ್ ಓದುವುದಿಲ್ಲ ಬಚಾವ್). ಮೊನ್ನೆ ನಮ್ಮ ವಿನಾಯಕ ತನ್ನ ಬ್ಲಾಗಿನಲ್ಲಿ ಅವನದೊಂದು ಬರಹ ಪ್ರಕಟವಾಗದ ಕುರಿತು ನೋವು ತೋಡಿಕೊಂಡಿದ್ದ. ಪ್ರಕಟವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಹೀಗೆ ನನ್ನಂತೆ ಅವರನ್ನ ಇವರನ್ನ ಹಿಡಿದು ನಮ್ಮದೇ ಒಂದು ಪ್ರಕಾಶನ ಸಂಸ್ಥೆ ಅಂತ ಶುರುವಿಟ್ಟುಕೊಂಡು ಪ್ರಕಟಿಸಿಬಿಡಬೇಕು. ಆನಂತರ ಅಷ್ಟು ಲಾಭ ಬಂತು ಇಷ್ಟು ಲಾಭ ಬಂತು ಅಂತ ಓಳು ಬಿಟ್ಟರೆ ಫಿನಿಷ್. ಪಾಪ ನಮ್ಮಂತಹ ಲೇಖಕರು ಸಾವಿರಾರು, ಅವರೆಲ್ಲರ ಕಥೆಗಳನ್ನು ಸಂಕಲನಗಳನ್ನಾಗಿಸಿದರೆ ಪ್ರಕಾಶಕರು ದಿವಾಳಿಯಾಗುತ್ತಾರೆ. ಹಾಗಾಗಿ ನಾವೇ ನಾವು ತಯಾರಾಗಿಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ ಅನ್ನುವುದು ನನ್ನ ಸ್ವಾನುಭವ. ಬೇಕಾದರೆ ನೀವೂ ಹಾಗೆ ಮಾಡಿ ನೋಡಿ, ರಾಯಲ್ಟಿ ನನಗೇನು ಕೊಡಬೇಕಾಗಿಲ್ಲ. ಇರಲಿ ಅವೆಲ್ಲಾ ಎಲ್ಲಾ ಕಡೆ ಇದ್ದದ್ದೆ. ಫೆಬ್ರವರಿ ತಿಂಗಳಿನಲ್ಲಿ ಕಥಾ ಸಂಕಲನ ಪ್ರಕಟವಾಗುವ ನಿರೀಕ್ಷೆ ಇದೆ. ಅದಕ್ಕೊಂದು ಚಿಕ್ಕ ಸಮಾರಂಭವೂ ಇರುತ್ತದೆ. ಅದಕ್ಕೆ ತಪ್ಪದೇ ನೀವು ಬರಬೇಕು. ಇದು ಮಾತ್ರಾ ಬರೀ ಬಾಯಿಮಾತಿನ ಕರೆಯ ಅಲ್ಲ. ಖಂಡಿತಾ ಬರುವಿರಿ ತಾನೆ?.

11 comments:

Anonymous said...

ಬೇಜಾರು ಮಾಡ್ಕೋಬೇಡ. ನಾನು ಒಂದು ಪ್ರತಿ ತಗೋತೀನಿ. ದುಡ್ಡು ಕೊಡ್ತೀನಿ ಮಾರಾಯ. ಅಷ್ಟಾದ್ರೂ ನಷ್ಟ ಕಡಿಮೆ ಆಗುತ್ತಲ್ಲ!

ತೇಜಸ್ವಿನಿ ಹೆಗಡೆ said...

ನೀವು ಹೇಳಿದ್ದು ನೂರು ಶೇಕಡಾ ಸತ್ಯ. ಯಾರೋ ಬಂದು ನಮ್ಮನ್ನು ಉದ್ಧರಿಸುವರೆಂದು ತಿಳಿಯುವುದು ತಪ್ಪು. ನಿಮ್ಮ ಹಾಗೇ ನಾನೂ ಮಾಡಿರುವೆ. ಇದೇ ವರ್ಷ ಮಾರ್ಚ್ ೮ ರಂದು (ವಿಶ್ವ ಮಹಿಳಾದಿನಾಚರಣೆಯ ದಿನದಂದು:) ) ನನ್ನ ಕಥಾಸಂಕಲನವಾದ "ಕಾಣ್ಕೆ" ಹಾಗೂ ಎರಡನೆಯ ಕವನ ಸಂಕಲನವಾದ "ಪ್ರತಿಬಿಂಬ" ನಮ್ಮದೇ ಪ್ರಕಾಶನವಾದ "ಜಯಶ್ರೀ ಪ್ರಕಾಶನ"ದ ಮೂಲಕ ಬಿಡುಗಡೆಯಾದವು. ನನ್ನ ಮೊದಲ ಕವನ ಸಂಕಲನವಾದ "ಚಿಗುರು" ನಾನು ಹತ್ತನೇ ತರಗತಿಯಲ್ಲಿದ್ದಾಗ ಸ್ವತಃ ನನ್ನ ತಂದೆಯವರೇ ಬಿಡುಗಡೆಮಾಡಿಸಿದ್ದರು. ಆದರೆ ಈ ಸಲ ಮಾತ್ರ ನನ್ನ ಯಜಮಾನರ ಜೇಬು ಖಾಲಿ ಮಾಡಿದೆ ಅಷ್ಟೇ :) ಇವೆಲ್ಲಾ ವಿವರಗಳನ್ನು ನೀವು ನನ್ನ ಸಂಕಲನಗಳನ್ನು ತೆಗೆದುಕೊಳ್ಳಬೇಕೆಂದು ಮಾತ್ರ ಖಂಡಿತ ಹೇಳುತ್ತಿಲ್ಲ. ನನ್ನ ಉದಾಹರಣೆಯನ್ನಷ್ಟೇ ಕೊಟ್ಟಿರುವುದು. ಶುಭಾಶಯಗಳು. ಒಂದು ಪ್ರತಿಯನ್ನು ನನಗಾಗಿಯೂ ಕಾದಿರಿಸಿ.

ಮನಸ್ವಿ said...

ಅಯ್ಯೋ ಪಾಪಿ... ಅಡಿಕೆ ಮಾರಿದ ದುಡ್ಡನ್ನ ಪುಸ್ತಕದಿಂದ ಬಂತು ಅಂತ ಅತ್ತಿಗೆಗೆ ಸುಳ್ಳು ಹೇಳಿದ್ಯ? ಹೋಯ್ ನೀನು ದಿನಾ ಒಂದೊಂದು ಲೇಖನ ಬರ್ಯಕ್ಕೆ ಹತ್ತಿಗಿದ್ಯಲೋ.............. ಸಮಾರಂಭಕ್ಕೆ ಬರನಾ.. ಅದ್ರೆ ಸ್ಪೆಷಲ್ ಊಟ ಇದ್ರೆ ಬತ್ತಿ ನೋಡು.. !!

ಆ ಕವನ ಸಂಕಲ ಪ್ರಿಂಟ್ ಆಗಕ್ಕಿಂತ ಮುಂಚೆ ಹೆಂಗಿದ್ದು ಅಂತ ನೋಡ್ತಿ ಬ್ಲಾಗಲ್ಲಿ ಪಬ್ಲಿಶ್ ಮಾಡು!;) ದುಡ್ಡು ಕೊಟ್ಟು ಓದಕ್ಕಿಂತ ಇಲ್ಲೇ ಓದ್ತಿ, ಏನಂಬೆ?!

ವಿ.ರಾ.ಹೆ. said...

ಓಹ್, ಹೀಗೆ ಸಮಾಚಾರ.

congrats and thanx :)

ಸಮಾರಂಭಕ್ಕೆ ಬಂದಾಗ ಎರಡೂ ಪುಸ್ತಕಗಳೂ ಬೇಕು ಮತ್ತೆ. ಈಗ್ಲೆ ಹೇಳಿಟ್ಟಿದ್ದಿ.

Sushrutha Dodderi said...

ಓಹೋ? ಇದು ಖುಶಿ ಸುದ್ದಿ ನೋಡಿ! ಒಂದು ಅಡ್ವಾನ್ಸ್ ಶುಭಾಶಯ ನನ್ ಕಡೆಯಿಂದ. :-)

ಮತ್ತೆ ನಮ್ಮದೇ ಪ್ರಕಾಶನ ಸಂಸ್ಥೆಯಿಂದ ಪುಸ್ತಕ ತರೋ ವಿಚಾರ ಸರಿ ಇದ್ದು.. ನಂಗನೂ ನಮ್ಮ ಮೊದಲ ಪುಸ್ತಕ ’ಚಿತ್ರಚಾಪ’ವನ್ನ ನಾವೇ ’ಪ್ರಣತಿ’ ಅಂತ ಒಂದು ಸಂಸ್ಥೆ ಮಾಡಿಕೊಂಡು ಪಬ್ಲಿಷ್ ಮಾಡಿದ್ಯ.

ನಾನಂತೂ ಬರ್ತಿ ಬಿಡುಗಡೆ ಸಮಾರಂಭಕ್ಕೆ.. ಮಾತ್ರ, ಒಂದು ಭಾನುವಾರ ಇಟ್ಕಳಿ ಅಷ್ಟೇ.

Unknown said...

ಟು ಎಂ.ಎಂ
ಹ ಹ ಹ ಖಂಡಿತ ಈಗ ಧೈರ್ಯ ಬಂತು ನೊಡು

ಟು ತೇ. ಹೆಗಡೆ
ಹೌದು. ಅದೇ ಸರಿ. ಧನ್ಯವಾದಗಳು.

ಟು ಮನಸ್ವಿ
ಹೊಳೆ ಊಟಕ್ಕೆ ಬಾ ಹೇಳಿ ಕರೆದ್ನಲ ಬಾರಾ

ವಿಕಾಸ್ ಹೆಗಡೆ

ಖಂಡಿತ. ಧನ್ಯವಾದಗಳು

Unknown said...

ಟು ಸುಶ್ರುತ

ಅದೇ ಸರಿ ನೋಡಿ. ಧನ್ಯವಾದಗಳು. ನಮ್ಮ ಬರಹಗಳು ನಮ್ಮ ಖುಶಿ . ಧನ್ಯವಾದಗಳು

ಮೂರ್ತಿ ಹೊಸಬಾಳೆ. said...

"ನನ್ನ ಕವನಗಳು ಹೋಗದಿರೆ ಅಚ್ಚಿಗೆ,
ಒಲೆಗೆ ಹಾಕಿ ನೀರ ಕಾಯಿಸುವೆ ಬೆಚ್ಚಗೆ"
ಆಗುವುದು ಬೇಡ ಮೊದಲ ಮುದ್ರಣ,ಸಮಾರಂಭದ ದಿನವೇ ಖಾಲಿಯಾಗಲಿ ಅಂತ ಹಾರೈಸ್ತಿ.ಉಳಿದರೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಒಂದು ಪ್ರತಿ ತಲುಪಿಸಿ ಬಿಡು ಹಂಗೆ ಅಮ್ಮನ ಹತ್ರ ದುಡ್ಡಿಸ್ಕಂಬ್ದು ಮರ್ಯಡ!!!!!!!!!!!!!!!

ಶಾಂತಲಾ ಭಂಡಿ (ಸನ್ನಿಧಿ) said...

shreeshum ಅವರೆ...
‘ಕಟ್ಟು ಕಥೆಯ ಕಟ್ಟು’ ಬಿಚ್ಚಿಕೊಳ್ಳುತ್ತಿರುವುದಕ್ಕೆ ಅಭಿನಂದನೆ.
ಭಾರತಕ್ಕೆ ಬಂದಾಗ ‘ಕಟ್ಟು ಕಥೆಯ ಕಟ್ಟು’ ಮತ್ತು ‘ಒಂದು ಜೇನಿನ ಹಿಂದೆ’ ಸಂಕಲನಗಳ ಕೊಳ್ಳಲು ಮರೆಯುವುದಿಲ್ಲ.

Unknown said...

ನಾಣು
ಕೊಳ್ಳದಿದ್ದರೆ ಕಚ್ಚುವೆ
ಹೆಚ್ಚುಕೊಟ್ಟರೆ ಮೆಚ್ಚುವೆ...!
ಹೆಂಗೆ?

ಟು
ಶಾಂಅತಲಾ ಭಂಡಿ
ಧನ್ಯೋಸ್ಮಿ.

ಯಜ್ಞೇಶ್ (yajnesh) said...

ರಾಘಣ್ಣ,

ಶುಭಾಶಯಗಳು. ನೀ ಹೇಳಿದ ಹಂಗೆ ನಮ್ಮದೇ ಪ್ರಕಾಶನದಿಂದ ಪುಸ್ತಕ ತರೋದು ಒಳ್ಳೇದು. ಅವರಿವರ ಹತ್ರ ಹೋಗಿ ನಮ್ಮ ಪುಸ್ತಕ ನಿಮ್ಮ ಪ್ರಕಾಶನದಿಂದ ತನ್ನಿ ಅಂತ ಬಗ್ಗಿ ನಮಸ್ಕರಿಸದು ತಪ್ತು.