Monday, August 23, 2010

ಮೇಣ ತೆಗೆಯೋನೆ ಜಾಣ





ಮಳೆಗಾಲ ಶುರುವಾಯಿತು ಎಂದಾಕ್ಷಣ ಹೆಜ್ಜೇನು ಬಯಲುಸೀಮೆಯತ್ತ ವಲಸೆಯನ್ನಾರಂಭಿಸುತ್ತವೆ. ಅವು ಬಿಟ್ಟುಹೋದ ತತ್ತಿಗಳು ಜೇನುಕೃಷಿಕರಿಗೆ ಉಪ ಆದಾಯವನ್ನು ತಂದುಕೊಡುತ್ತವೆ. ಒಂದೊಂದು ಮರದಲ್ಲಿ ಹತ್ತಾರು ಖಾಲಿತತ್ತಿಗಳು ಸಿಗುತ್ತವೆ. ಅವನ್ನು ತಂದು ಜೇನುಮೇಣವನ್ನಾಗಿಸಿ ಮಾರುಕಟ್ಟೆಗೆ ಒಯ್ದರೆ ವಾರಕ್ಕಾಗುವ ಖರ್ಚು ಕಿಸೆಗೆ ಖಂಡಿತ.
ಮನುಷ್ಯ ಪ್ರಕೃತಿಯಿಂದ ತೆಗೆದ ಮೊದಲ ಪ್ಲಾಸ್ಟಿಕ್ ಎಂಬ ಹೆಗ್ಗಳಿಗೆ ಜೇನು ಮೇಣಕ್ಕೆ. ಪಾಶ್ಚಾತ್ಯರು ಜೇನುಮೇಣವನ್ನು ಮೊಂಬತ್ತಿಗಾಗಿ ಉಪಯೋಗಿಸುತ್ತಾರೆ. ಚರ್ಚ್ ಗಳಲ್ಲಿ ಜೇನುಮೇಣದಿಂದ ತಯಾರಾಗಿರುವ ಮೊಂಬತ್ತಿಗೆ ಹೆಚ್ಚಿನ ಗೌರವವಿದೆ. ಮೇಣ ಉಕ್ಕದ, ವಿಷದ ಹೊಗೆ ಬರದ ಪರಿಸರ ಸ್ನೇಹಿ ಮೊಂಬತ್ತಿ ಎಂಬ ಹೆಗ್ಗಳಿಗೆ ಇದಕ್ಕಿದೆ. ಮರಗೆಲಸದವರು ಹೆಚ್ಚಾಗಿ ಜೇನುಮೇಣದ ಗ್ರಾಹಕರು ಅವರು ಮರ ನುಣುಪಾಗಲು ಜೇನುಮೇಣವನ್ನು ಬಳಸುತ್ತಾರೆ.
ಮೇಣತೆಗೆಯುವ ವಿಧಾನ: ಹೆಜ್ಜೇನು ಅಥವಾ ತುಡುಜೇನು ತತ್ತಿಗಳನ್ನು ಸಣ್ಣ ತುಂಡುಗಳನ್ನಾಗಿಸಿ ಪಾತ್ರೆಯೊಳಗೆ ಹಾಕಿ ನೀರು ತುಂಬಿಸಿ ಅರ್ದ ಘಂಟೆಗಳ ಕಾಲ ಕುದಿಸಬೇಕು. ನಂತರ ಬಟ್ಟೆಯಲ್ಲಿ ಕುದಿದ ನೀರನ್ನು ಮತ್ತೊಂದು ಪಾತ್ರೆಗೆ ಸೋಸಬೇಕು. ಜಿಡ್ಡು ಬಟ್ಟೆಯಲ್ಲಿಯೇ ಉಳಿಯುತ್ತದೆ. ನೀರಿನ ಜೊತೆ ಸೇರಿದ ಮೇಣ ಮತ್ತೊಂದು ಪಾತ್ರೆಯಲ್ಲಿ ಶೇಖರಣೆಯಾಗುತ್ತದೆ. ನೀರು ಆರಿದ ನಂತರ ಶುದ್ಧ ಜೇನುಮೇಣ ತೇಲತೊಡಗುತ್ತದೆ. ಕೈಯಿಂದ ಉಂಡೆ ಕಟ್ಟಿದರೆ ಅರಿಶಿನ ಬಣ್ಣದ ಮಿರಿಮಿರಿ ಮಿಂಚುವ ಸುಹಾಸನಾಯುಕ್ತ ಜೇನುಮೇಣ ಬಂದಂತೆ. ಆನಂತರ ಕುದಿಯುವ ನೀರಿನೊಳಗೆ ಪಾತ್ರೆಯೊಂದನ್ನಿಟ್ಟು(ನೇರ ಪಾತ್ರೆಯೊಳಗೆ ಮೇಣದುಂಡೆ ಇಡುವಂತಿಲ್ಲ, ಇಟ್ಟರೆ ಜೇನುಮೇಣದ ಬಣ್ಣ ಕೆಡುತ್ತದೆ) ಅದರೊಳಗೆ ಜೇನುಮೇಣದುಂಡೆಯಿಟ್ಟರೆ ಕರಗಿ ನೀರಾಗುತ್ತದೆ. ಕರಗಿದ ಮೇಣವನ್ನು ಬೇಕಾದ ಆಕಾರದ ಅಚ್ಚಿಗೆ ಸುರುವಿದರೆ ಜೇನುಮೇಣ ಮಾರುಕಟ್ಟೆಗೆ ಸಿದ್ಧ.
ಹೀಗೆ ಜೇನೆಂಬ ಕೀಟ ತನ್ನ ಎಲ್ಲಾ ಉತ್ಪನ್ನಗಳನ್ನೂ ಮನುಷ್ಯನ ಬಳಕೆಗೆ ಕೊಟ್ಟು ನೀನಾರಿಗಾದೆಯೋ ಎಲೆ ಮಾನವ? ಎಂಬ ಪ್ರಶ್ನೆ ಕೇಳುವಂತಾಗಿದೆ. ತುಪ್ಪದ ಮೂಲಕ ರೈತ ಬೆಳೆಯುವ ಬೆಳೆಗಳ ಪರಾಗಸ್ಪರ್ಷದ ಮೂಲಕ ಹಾಗೂ ಅಂತಿಮವಾಗಿ ಜೇನು ಮೇಣದ ಮೂಲಕ ಕೃಷಿಕರ ಬಾಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ ಜೇನು. ಉಳಿಸಿ ಬೆಳಸುವುದಷ್ಟೆ ನಮ್ಮ ಜವಾಬ್ದಾರಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)

4 comments:

ಪ್ರಗತಿ ಹೆಗಡೆ said...

ಮಾಹಿತಿಯುಕ್ತ ಲೇಖನ... ಧನ್ಯವಾದಗಳು...

ಸಾಗರದಾಚೆಯ ಇಂಚರ said...

ತುಂಬಾನೇ ಚಂದವಾಗಿ ಬರೆದಿದ್ದಿರಾ

ಮನಸ್ವಿ said...

ಉತ್ತಮ ಮಾಹಿತಿ ಪೂರ್ಣ ಚಿತ್ರ ಲೇಖನ

ಸೀತಾರಾಮ. ಕೆ. / SITARAM.K said...

ಜೈವಿಕ ಮೇಣ ತಯಾರಿಕೆ ಬಗ್ಗೆ ಗೊತ್ತಿರಲಿಲ್ಲ. ಉಪಯುಕ್ತ ಮಾಹಿತಿಗೆ ಧನ್ಯವಾದಗಳು.