Thursday, September 2, 2010

ಒಂದು ಜೇನಿನ ಹಿಂದೆ -3


ಪುಸ್ತಕ
ಜೇನುಗೂಡು ಪತ್ತೆಯಾದ ಮೇಲೆ ಜೇನನ್ನು ಹಿಡಿದು ಪೆಟ್ಟಿಗೆಗೆ ಕೂಡುವುದು ಅತ್ಯಂತ ನಾಜೂಕಾದ ಕೆಲಸ. ಮರದ ಪೆಟ್ಟಿಗೆ, (ಕೂಡುಪೆಟ್ಟಿಗೆ) ತಗಡಿನ ಜೇನುಗೇಟು, ಬಾಳೆ ನಾರಿನ ದಾರ, ಅಥವಾ ಅಡಿಕೆಹುಂಬಾಳೆ, ಚಾಕು, ಊದುಬತ್ತಿ, ಬೆಂಕಿಪೊಟ್ಟಣ, ಕತ್ತಿ, ಕೊಡಲಿ, ಸಣ್ಣದಾದ ಮರಕೊಡಲಿ, ನಾಲ್ಕೈದು ಸೆಣಬಿನ ದಾರ, ತುಪ್ಪ ಸಂಗ್ರಹಿಸಲು ಪಾತ್ರೆ, ಒಂದು ಟಾರ್ಚ್, ಇವಿಷ್ಟು ಸಲಕರಣೆಗಳನ್ನು ಇಟ್ಟುಕೊಂಡು ಹೊರಡಬೇಕು.
ಮೊದಲನೆಯದಾಗಿ ಜೇನಿನಗೂಡಿನೆದುರಲ್ಲಿ ಮರದ ಜೇನುಪೆಟ್ಟಿಗೆಯನ್ನು ಇಟ್ಟುಕೊಳ್ಳಲು ಮಟ್ಟವಾದ ಜಾಗವನ್ನು ಮಾಡಿಕೊಳ್ಳಬೇಕು, ಅಕಸ್ಮಾತ್ ಮರದಮೇಲೆ ಗೂಡು ಇದ್ದ ಪಕ್ಷದಲ್ಲಿ ಪೆಟ್ಟಿಗೆ ಭದ್ರವಾಗಿ ಅಲ್ಲಿಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತಹಾ ಸಂದರ್ಭದಲ್ಲಿ ಹಗುರವಾದ ರಟ್ಟಿನಿಂದ ಮಾಡಿರುವ ಕೂಡುಪೆಟ್ಟಿಗೆಯನ್ನು ಬಳಸಬೇಕು. ನೆಲದಲ್ಲಿನ ಹುತ್ತದಲ್ಲಿ ಜೇನು ಇದ್ದಾಗ ಮರದ ಪೆಟ್ಟಿಗೆಯಾದರೂ ತೊಂದರೆಯಿಲ್ಲ. ಆದರೆ ಹುತ್ತದಲ್ಲಿನ ಜೇನುಗೂಡಿನಿಂದ ಪೆಟ್ಟಿಗೆಗೆ ಜೇನು ಕೂಡಿಸಬೇಕಾದ ಸಂದರ್ಭದಲ್ಲಿ ಹುತ್ತವನ್ನು ಸಂಪೂರ್ಣವಾಗಿ ಕೂಲಂಕಶವಾಗಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬಾರದು. ಜೇನು ಹಿಡಿಯಬೇಕಾದ ಸಮಯದಲ್ಲಿ ಹುತ್ತದೊಳಗೆ ಕೈಯನ್ನು ಹಾಕಬೇಕಾಗಿರುವುದರಿಂದ ಅಲ್ಲಿ ಯಾವ ಹಾವು ಅಥವಾ ಚೇಳು ಮತ್ಯಾವ ವಿಷಯುಕ್ತ ಜೀವಿಗಳು ವಾಸವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖವಾದ ಅಂಶವಾಗಿರುತ್ತದೆ. ಇದು ಪ್ರಾಣಕ್ಕೆ ಸಂಚಕಾರ ತರುವ ಸಂಗತಿಯಾದ್ದರಿಂದ ಯಾವಕಾರಣಕ್ಕೂ ಈ ವಿಷಯದಲ್ಲಿ ರಾಜಿಯಾಗುವಂತಿಲ್ಲ.
ಸಾಮಾನ್ಯವಾಗಿ ಎರಡು ಅಥವಾ ಮೂರಿಂಚಿನ ಅಗಲದ ತೂತಿನ ಮಾರ್ಗದ ಮುಖಾಂತರ ಜೇನುಹುಳುಗಳು ಓಡಾಟ ಮಾಡುತ್ತಿರುತ್ತವೆ. ಮೊದಲು ಜೇನುಗೂಡಿನ ತತ್ತಿ ಕಾಣಿಸುವಂತೆ ಗೂಡಿನ ಬಾಯನ್ನು ಬಿಡಿಸಿಕೊಳ್ಳಬೇಕು. ನಂತರ ಅರ್ಧಅಡಿಯಿಂದ ಒಂದು ಅಡಿಯತನಕ ಉದ್ದ ಮತ್ತು ಅಷ್ಟೇ ಅಗಲದ ತತ್ತಿ ಹೊರಬರುವಷ್ಟು ದಾರಿ ಮಾಡಿಕೊಳ್ಳಬೇಕು. ಮೇಣದ ತತ್ತಿಗಳಾದ್ದರಿಂದ ಅವು ಬಹಳ ಮೆದುವಾಗಿರುತ್ತವೆ ಹಾಗಾಗಿ ತತ್ತಿಯನ್ನು ಹೊರ ತೆಗೆಯುವ ಪೊಟರೆಯ ಬಾಯಿಯನ್ನು ಸಮರ್ಪಕ ರೀತಿಯಲ್ಲಿ ಅಗಲ ಮಾಡಿಕೊಳ್ಳುವುದು ಅತ್ಯಗತ್ಯ. ಜೇನಿನಗೂಡಿಗೆ ಬೇರೆ ಮಾರ್ಗಗಳಿದ್ದಲ್ಲಿ ಅದನ್ನು ಮುಚ್ಚಿಕೊಳ್ಳಬೇಕು. ಈ ಕೆಲಸಗಳನ್ನು ಮಾಡುವಾಗ ಹೆಚ್ಚು ಗದ್ದಲವಾಗದಂತೆ ನೋಡಿಕೊಳ್ಳಬೇಕು. ಸದ್ದು ಜಾಸ್ತಿಯಾದರೆ ಹುಳುಗಳು ಗಾಬರಿಯಾಗಿ ಧಾಳಿ ಮಾಡುವುದೂ ಹೆಚ್ಚು ಜೊತೆಗೆ ಅಕಸ್ಮಾತ್ ಪೊಟರೆಗೆ ಆಳವಾದ ಬೇರೆ ಮಾರ್ಗಗಳಿದ್ದರೆ ಅತ್ತಕಡೆ ಹೋಗಿಬಿಡುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಪೊಟರೆಯ ಬಾಯಿಯನ್ನು ಅಗಲಮಾಡಲು ಶುರುಮಾಡುವಷ್ಟರಲ್ಲಿ ಹತ್ತೆಂಟು ಸೈನಿಕಹುಳುಗಳು ಹೊಡೆಯುತ್ತವೆ. ಮೊದಲು ಜೇನು ಹೊಡೆದಕೂಡಲೇ ಒಮ್ಮೆ ತೀವ್ರವಾಗಿ ಉರಿಯುತ್ತದೆ. ಉರಿಯಾಗುತ್ತದೆ ಎಂಬ ಅರಿವು ಮೊದಲೇ ಇದ್ದರೆ ನಮ್ಮ ಮನಸ್ಸು ತಡೆದುಕೊಳ್ಳಲು ಪೂರ್ವಸಿದ್ದತೆಯನ್ನು ಹೊಂದಿರುತ್ತದೆಯಾದ್ದರಿಂದ ಒಮ್ಮೆಲೇ ಗಾಬರಿ ಬೀಳುವುದಿಲ್ಲ. ಜೇನು ಹೊಡೆದಾಗ ಗಾಬರಿಯಿಂದ ಅತ್ತಿತ್ತ ಓಡಾಡಿದಲ್ಲಿ ಮತ್ತಷ್ಟು ಹುಳಗಳು ಹೊಡೆಯುತ್ತವೆ. ಆ ಕಾರಣದಿಂದ ನಿಧಾನವಾಗಿ ಕೆಲಸ ಮಾಡುವುದು ಜೇನು ಹೊಡೆಯುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗ. ಮುಖಕ್ಕೆ ತೆಳ್ಳನೆಯ ಪರದೆ ಮುಚ್ಚಿಕೊಳ್ಳುವುದರಿಂದ ಮುಖವನ್ನು ಜೇನಿನಧಾಳಿಯಿಂದ ತಪ್ಪಿಸಿಕೊಳ್ಳಬಹುದು. ಜೇನು ಹೊಡೆದ ತಕ್ಷಣ ನಿಧಾನವಾಗಿ ಆ ಜಾಗದಲ್ಲಿ ನಾಟಿರುವ ಸೂಜೆಯ ಮೊನೆಯಷ್ಟು ಚಿಕ್ಕದಾದ ಕಪ್ಪುಬಣ್ಣದ ಅಂಬನ್ನು ಕಿತ್ತು ಹಾಕಬೇಕು.

ಜೇನಿನ ಅಂಬು ಅಲ್ಲೇ ಉಳಿದಲ್ಲಿ ಕೀವು ಆಗುತ್ತದೆ. ಅಂಬು ಕಿತ್ತ ಜಾಗವನ್ನು ತಕ್ಷಣ ಅಲ್ಲಿ ಹತ್ತಿರದಲ್ಲಿರುವ ಯಾವುದಾದರೂ ಕುರುಚಲು ಗಿಡದ ಸೊಪ್ಪಿನ ಎಲೆಯಿಂದ ಉಜ್ಜಬೇಕು. ಇದು ಎರಡು ಕಾರಣದಿಂದ ಪಾಲಿಸಬೇಕಾದ ನಿಯಮ. ಒಂದನೆಯದಾಗಿ ಸೊಪ್ಪಿನ ರಸಕ್ಕೆ ಔಷಧೀಯ ಗುಣವಿರುವುದರಿಂದ ನಂಜು ಜಾಸ್ತಿ ಆಗುವುದಿಲ್ಲ. ಎರಡನೆಯದು ಹುಳುಹೊಡೆದ ಜಾಗದಲ್ಲಿ ರಾಸಾಯನಿಕವೊಂದನ್ನು ಬಿಟ್ಟಿರುತ್ತದೆ. ಅದರ ವಾಸನೆ ಮತ್ತೊಂದು ಜೇನುಹುಳು ಅದೇ ಜಾಗಕ್ಕೆ ಹೊಡೆಯಲು ಪ್ರೇರೇಪಿಸುವ ಗುಣವನ್ನು ಹೊಂದಿರುತ್ತದೆ. ಸೊಪ್ಪಿನ ಎಲೆಯ ರಸ ಹಚ್ಚುವುದರಿಂದ ವಾಸನೆ ಹೋಗುತ್ತದೆ. ಮತ್ತೊಂದು ಹುಳ ಹೊಡೆಯುವ ಪ್ರಮಾಣವನ್ನು ತಗ್ಗಿಸಬಹುದು. ಒಂದುಸಾರಿ ಅಂಬನ್ನು ನಮಗೆ ಚುಚ್ಚಿದ ಜೇನ್ನೊಣ ಅಲ್ಲಿಯೇ ಸುತ್ತ ಮುತ್ತ ಜೋರಾಗಿ ಹಾರಾಡುತ್ತಾ ಸ್ವಲ್ಪ ಹೊತ್ತಿನಲ್ಲಿ ಅಸುನೀಗುತ್ತದೆ.
ತುಡುವೆಜೇನುಹುಳುಗಳು ಸಾಮಾನ್ಯವಾಗಿ ಮೊದಲು ಒಂದೈದು ನಿಮಿಷ ಧಾಳಿ ಮಾಡಿ ನಂತರ ಸುಮ್ಮನೆ ಹಾರಾಡಲು ತೊಡಗುತ್ತವೆ. ಹೆಜ್ಜೇನಿನ ತರಹ ನೂರಾರು ಹುಳುಗಳು ಒಮ್ಮೆಲೆ ಧಾಳಿ ಮಾಡುವುದಿಲ್ಲ. ಅಕಸ್ಮಾತ್ ಸ್ವಲ್ಪ ಹೆಚ್ಚು ಹುಳುಗಳು ಧಾಳಿಮಾಡಲಾರಂಭಿಸಿದರೆ ಊದುಬತ್ತಿಯ ಹೊಗೆಯನ್ನು ತೋರಿಸಿದಲ್ಲಿ ಸುಮ್ಮನುಳಿಯುತ್ತವೆ. ಪೆಟ್ಟಿಗೆಗೆ ಕೂಡಬೇಕಾದ ಜೇನಿಗೆ ಜಾಸ್ತಿ ಹೊಗೆ ತೋರಿಸಬಾರದು. ಹೊಗೆ ಜಾಸ್ತಿಯಾದಲ್ಲಿ ಬಹಳ ಬೇಗನೆ ಹಾರಿಹೋಗಿಬಿಡುವ ಸಾಧ್ಯತೆ ಹೆಚ್ಚು.
ಇಡೀ ಜೇನಿನ ಕುಟುಂಬ ರಾಣಿಹುಳವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಗೂಡಿನ ಭಾಗದಲ್ಲಿ ಸ್ವಲ್ಪ ಪ್ರಮಾಣದ ಗದ್ದಲವಾದ ತಕ್ಷಣ ರಾಣಿಜೇನು ಗೂಡಿನೊಳಗೆ ಸುರಕ್ಷಿತ ಜಾಗಕ್ಕೆ ಸೇರಿಕೊಂಡುಬಿಡುತ್ತದೆ. ರಾಣಿಜೇನು ಇತರೆ ಜೇನ್ನೊಣಕ್ಕಿಂತ ಮೂರುಪಟ್ಟು ದೊಡ್ಡದಾಗಿರುತ್ತವೆ. ಉದ್ದನೆಯ ಹಿಂಭಾಗ ಹೊಂದಿರುವ ರಾಣಿ, ಅಗಲವಾದ ರೆಕ್ಕೆಯನ್ನು ಹೊಂದಿರುತ್ತವೆ. ಹಾಗಾಗಿ ಗುರುತಿಸುವುದು ಬಹಳ ಸುಲಭ. ನಿಧಾನ ಗೂಡಿನೊಳಗೆ ಕೈಯನ್ನು ಹಾಕಿ ರಾಣಿಜೇನಿನ ರೆಕ್ಕೆಯನ್ನು ಎಚ್ಚರಿಕೆಯಿಂದ ಕೈಯಲ್ಲಿ ಹಿಡಿದು ಪೆಟ್ಟಿಗೆಯೊಳಕ್ಕೆ ಹಾಕಿ ಮುಚ್ಚಳ ಹಾಕಬೇಕು. ರಾಣಿಜೇನುಹುಳು ಪೆಟ್ಟಿಗೆಯಿಂದ ಹೊರಗಡೆ ಬರಲಾಗದಂತಹ ಮತ್ತು ಕೆಲಸಗಾರ ನೊಣ ಓಡಾಡಲು ಅನುಕೂಲವಾಗುವಂತಹ ಅರ್ಧ ಇಂಚು ಅಗಲದ ಮೂರು ಇಂಚು ಉದ್ದದ ಕಬ್ಬಿಣದ ಬಾಗಿಲನ್ನು ಪೆಟ್ಟಿಗೆಗೆ ಹಾಕಿದರೆ ಜೇನುಹಿಡಿಯುವ ಕೆಲಸದ ಪ್ರಮುಖ ಘಟ್ಟ ಯಶಸ್ವಿಯಾಗಿ ಮುಗಿದಂತಾಗುತ್ತದೆ. ರಾಣಿಜೇನ್ನೊಣ ಹೊರಸೂಸುವ ಪ್ಯಾರಾಮೂನ್‌ಗೆ ಒಂದರ ಹಿಂದೆ ಒಂದರಂತೆ ಎಲ್ಲಾ ಜೇನುಹುಳುಗಳು ಸ್ವಲ್ಪಹೊತ್ತಿನಲ್ಲಿ ಪೆಟ್ಟಿಗೆಯೊಳಗೆ ಸೇರಿಕೊಂಡುಬಿಡುತ್ತವೆ. ಹುಳಗಳಿಲ್ಲದ ತತ್ತಿಯನ್ನು ನಿಧಾನ ಚಾಕುವಿನಿಂದ ಬಿಡಿಸಿ ಮರದ ಚೌಕಾಕಾರದ ಕಟ್ಟುಗಳಿಗೆ ಬಾಳೆಪಟ್ಟೆ ದಾರದಿಂದ ಕಟ್ಟಿ, ನಿಧಾನವಾಗಿ ಪೆಟ್ಟಿಗೆಯೊಳಗೆ ಇಡಬೇಕು. ತತ್ತಿಯನ್ನು ಪೆಟ್ಟಿಗೆಯೊಳಗೆ ಇಡಲು ಈಗಾಗಲೇ ರಾಣಿನೊಣ ಮತ್ತು ಹುಳುಗಳು
ಸೇರಿಕೊಂಡಿರುವ ಪೆಟ್ಟಿಗೆಯ ಮೇಲ್ಭಾಗದ ಮುಚ್ಚಳವನ್ನು ಬಹಳ ಎಚ್ಚರಿಕೆಯಿಂದ ತೆಗೆಯಬೇಕು. ಜೋರಾಗಿ ತೆಗೆದರೆ ರಾಣಿಯ ಸಮೇತ ಹುಳುಗಳು ಹಾರಿಹೋಗುವ ಸಂಭವ ಇರುತ್ತದೆ. ಯಾವ ಕಾರಣಕ್ಕೂ ರಾಣಿಯನ್ನು ಹೊರಗಡೆ ಬಿಡಬಾರದು. ಪೆಟ್ಟಿಗೆಗೆ ಕೂಡುವ ಪ್ರಾರಂಭದಲ್ಲಿ ಪೊಟರೆಯೊಳಗಿರುವ ರಾಣಿಹುಳು ಸುಲಭವಾಗಿ ಕೈಗೆ ಸಿಗದಿದ್ದಲ್ಲಿ..............
ಪುಸ್ತಕದ ಎರಡು ಹಾಳೆ ಸರಿಯಾದ ಸಂದರ್ಭದಲ್ಲಿ ಕೈಕೊಟ್ಟಿತ್ತು. ಕನ್ನರ್ಸೆ ನಾರಾಯಣ ಸ್ವಾಮಿಯ ಮನೆಯಿಂದ ಬಂದು ಊಟ ಮುಗಿಸಿ, ಅಕಸ್ಮಾತ್ ಸಿಕ್ಕಿದ ಜೇನನ್ನು ಮತ್ತೆ ಹೋಗಿ ಪೆಟ್ಟಿಗೆ ತುಂಬಬೇಕಾದ್ದರಿಂದ, ಆ ನನ್ನ ಹೊಸ ಅನುಭವಕ್ಕೆ ಸರಿಯಾದ ಮಾಹಿತಿ ಇದ್ದರೆ ಒಳ್ಳೆಯದೆಂದು, ಹಾಗು ಕರೆಂಟು ತೆಗೆಯುವ ತನಕ ಸಮಯವೂ ಇದ್ದುದರಿಂದ ಮತ್ತೊಮ್ಮೆ ಪುಸ್ತಕ ಓದುತ್ತಿದ್ದಾಗ ಪೊಟರೆಯೊಳಗೆ ರಾಣಿಹುಳು ಕೈಗೆ ಸಿಗದಿದ್ದಾಗ ಏನು ಮಾಡಬೇಕು ಹಾಗು ಹೇಗೆ ಪೆಟ್ಟಿಗೆಯೊಳಗೆ ಜೇನು ತುಂಬಬೇಕು ಎಂಬ ಮಾಹಿತಿಯಿದ್ದ ಪುಟ ಕಾಣೆಯಾಗಿತ್ತು. ಮೊದಲ ಬಾರಿ ಪುಸ್ತಕ ಓದುವಾಗ ಅದರಲ್ಲಿ ಕೆಲವು ಪುಟಗಳು ಇಲ್ಲದ್ದು ಗಮನಕ್ಕೆ ಬಂದಿತ್ತಾದರೂ ಹಿಂದಿನ ಹಾಗು ಮುಂದಿನ ಪುಟದ ಆಧಾರದಮೇಲೆ ತೂಗಿಸಿಕೊಂಡು ಓದಿದ್ದೆ. ಆದರೆ ಇಂತಹಾ ಅತ್ಯಮೂಲ್ಯ ಘಟ್ಟದಲ್ಲಿ ಕೈಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ. ಈಗ ಮಾಡುವುದೇನು ಎಂಬ ಪ್ರಶ್ನೆ ಒಂದೆರಡು ಕ್ಷಣ ಕಾಡಿತಾದರೂ, ರಾಣಿ ನೊಣ ಸಿಕ್ಕದಿದ್ದಾಗ ಆ ಪ್ರಶ್ನೆ ಉದ್ಬವಿಸುವುದು ತಾನೆ? ಹಾಗಾಗಿ ರಾಣಿ ಸುಲಭವಾಗಿ ಸಿಗುತ್ತದೆಯೆಂಬ ನಂಬಿಕೆಯಿಂದ, ಅಥವಾ ಚೆನ್ನನನ್ನೋ ಪ್ರಶಾಂತನನ್ನೋ ಕರೆದುಕೊಂಡು ಹೋದರಾಯಿತೆಂಬ ತೀರ್ಮಾನದಿಂದ ಸುಮ್ಮನುಳಿದೆ.
ಸತ್ಯವಾಗಿ ಹೇಳಬೇಕೆಂದರೆ ನನಗೆ ಜೇನನ್ನು ಪೆಟ್ಟಿಗೆಗೆ ಕೂಡಲು ಪ್ರಶಾಂತ ಅಥವಾ ಚೆನ್ನನನ್ನು ಕರೆದುಕೊಂಡು ಹೋಗುವ ಮನಸ್ಸು ಇರಲಿಲ್ಲ. ನಾನೊಬ್ಬನೇ ಯಾರ ಸಹಾಯವೂ ಇಲ್ಲದೇ ಪೆಟ್ಟಿಗೆಗೆ ಜೇನು ಕೂಡಬೇಕೆಂಬ ಮಹದಾಸೆ ಇತ್ತು, ಆದರೆ ಈಗ ಮಾಹಿತಿಯ ಕೊರತೆ ಅವರಲ್ಲೊಬ್ಬರನ್ನು ಅವಲಂಬಿಸುವಂತೆ ಮಾಡಿತ್ತು.
* * * * *
ಕೈಹುಟ್ಟು
ಜೇನು ಪೆಟ್ಟಿಗೆಗೆ ಕೂಡಲು ಬೇಕಾದ ಪರಿಕರಗಳನ್ನು ಚೀಲಕ್ಕೆ ತುಂಬಿಕೊಂಡು ಪ್ರಶಾಂತನ ಮನೆಗೆ ಹೊರಟೆ. ಜೇನು ಹುಳ ಹೊಡೆಯದಂತೆ ಗಾಜಿನ ಮಾಸ್ಕ್ ಹಾಗೂ ಕೋಟ್ ಇದ್ದರೆ ಒಳ್ಳೆಯದಿತ್ತು ಅಂತ ಅನಿಸಿತು. ಆದರೆ ಅದು ದುಬಾರಿ ವೆಚ್ಚದ್ದಾದ್ದರಿಂದ ಸದ್ಯಕ್ಕೆ ಅದನ್ನು ತರಿಸುವುದು ಸಾಧ್ಯವಿರಲಿಲ್ಲ.
ಪ್ರಶಾಂತನ ಮನೆಗೆ ಹೋದಾಗ ಅವನ ತಂದೆ ಮನೆಬಾಗಿಲಿನಲ್ಲಿ ಬೀಡಿ ಸೇದುತ್ತಾ ಕುಳಿತಿದ್ದರು. ನನ್ನನ್ನು ನೋಡಿದಕೂಡಲೆ ಅವರಿಗೆ ನನ್ನ ಉದ್ದೇಶ ಅರ್ಥವಾಗಿ,
ಪ್ರಶಾಂತನಿಗೆ ಸಿಕ್ಕಾಪಟ್ಟೆ ಜ್ವರ, ಮೆತ್ತಿನಮೇಲೆ ರೂಂನಲ್ಲಿ ಮಲಗಿದ್ದಾನೆ, ಅದೇನೋ ಚಿಕನ್‌ಗುನ್ಯಾವಂತೆ, ಹೇಳಿದ್ದು ಕೇಳೋದಿಲ್ಲಾ ಬೈಕು ಮುಕಳಿಗೆ ಹಾಕ್ಕೊಂಡು ತಿರಗ್ತಾನೆ ಕಂಡಿದ್ದೆಲ್ಲಾ ತಿಂತಾನೆ ಎಂದು ಅದ್ಯಾವುದೋ ತಿನ್ನಬಾರದ್ದು ತಿಂದು, ತಿರುಗಬಾರದ ಕಡೆ ಹೋಗಿ ಖಾಯಿಲೆ ಬಂದಿದೆ ಎನ್ನುವಂತೆ ಹೇಳಿದರು.
ಯಾವಾಗಿನಿಂದ ಜ್ವರ ಬಂತು?
ನಿನ್ನೆ ರಾತ್ರಿಯಿಂದ ಜೋರಾಗಿದೆ, ಕಾಲು ಮಂಡಿಯೆಲ್ಲಾ ನೋವಂತೆ, ನಡೆಯಲೂ ಆಗುವುದಿಲ್ಲ ಅಂತ ಅವನ ತಾಯಿ ಹತ್ರ ಹೇಳ್ತಿದ್ದ, ನನ್ನತ್ರ ಎಲ್ಲಾ ಹೇಳ್ತಾನಾ ಎಂತು? ಆ ಖಾಯಿಲೆನಾದ್ರೂ ನಮ್ಮನೇನೆ ಹುಡ್ಕೊಂಡು ಬರ‍್ತದೆ, ಇಲ್ಲೇನೂ ಕೋಳೀನೂ ಇಲ್ಲ ತಿನ್ನೋರು ಇಲ್ಲ ಅದು ಹೆಂಗೆ ಬರುತ್ತೋ
ಚಿಕೂನ್‌ಗುನ್ಯಾ ಎನ್ನುವುದನ್ನು ಚಿಕನ್‌ಗುನ್ಯಾ ಎಂದು ತಪ್ಪಾಗಿ ಅರ್ಥಮಾಡಿಕೊಂಡ ಅವರು ಇದು ಕೋಳಿಯಿಂದ ಬಂದಿದೆ ಎಂದು ತಿಳಿದು, ಅಪ್ಪಟ ಬ್ರಾಹ್ಮಣರ ಮನೆಯ ಮಗನಿಗೆ ಈ ಖಾಯಿಲೆ ಬಂದಿರುವ ಹಿಂದಿನ ಗುಟ್ಟೇನು, ಅದರರ್ಥ ತಮ್ಮ ಮಗನೇನಾದರೂ ಕೋಳಿಗೀಳಿ ಶುರುಮಾಡಿಕೊಂಡುಬಿಟ್ಟಿದ್ದಾನಾ! ಎಂಬ ಸಂಶಯ ಉಂಟಾಗಿ ನನ್ನಲ್ಲಿ ಅದರ ಬಗ್ಗೆ ಮಾಹಿತಿ ಸಿಗಬಹುದೆಂದು ಅಂದಾಜು ಮಾಡಿ ಕೇಳಿದರು.
ಅದು ಚಿಕನ್‌ಗುನ್ಯಾ ಅಲ್ಲ ಚಿಕೂನ್‌ಗುನ್ಯಾ. ಚಿಕೂನ್ ಎಂಬ ಹಳ್ಳಿಯಲ್ಲಿ ಆ ತರಹದ ಜ್ವರ ಮೊದಲು ಕಾಣಿಸಿಕೊಂಡಿರುವುದರಿಂದ ಮತ್ತು ಕೈಕಾಲುಗಳ ಸಂದುಗಳೆಲ್ಲಾ ಬಾತುಕೊಂಡು ವಿಪರೀತ ನೋವು ಆಗುವುದರಿಂದ ಚಿಕೂನ್‌ಗುನ್ಯಾ ಎಂದು ಕರೆಯುತ್ತಾರೆ ಅದು ಏಡಿಸ್ ಈಜಿಪ್ತ್ ಅನ್ನೋ ಸೊಳ್ಳೆಯ ಮುಖಾಂತರ ಹರಡುತ್ತೆ. ಕೋಳಿಗೂ ನಾವು ತಿನ್ನುವ ಆಹಾರಕ್ಕೂ, ನಮ್ಮ ತಿರುಗಾಟಕ್ಕೂ, ಚಿಕೂನ್‌ಗುನ್ಯಾ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಸೊಳ್ಳೆಯ ನಾಶಕ್ಕೆ ಮನೆಯ ಸುತ್ತ ಮೊನ್ನೆ ಆಸ್ಪತ್ರೆಯವರು ಫಾಗಿಂಗ್ ಮಷೀನ್ ತಂದು ಬ್ಲೀಚಿಂಗ್ ಪೌಡರ್ ಹೊಡೆದರಲ್ಲ ಯಾವುದೋ ಪುಸ್ತಕ ಓದಿದ್ದರಲ್ಲಿ ನೆನಪಿದ್ದಷ್ಟನ್ನು ಹೇಳಿದೆ.
ಏಡ್ಸ್ ಅನ್ನೋ ಸೊಳ್ಳೆಯಿಂದ ಬರುತ್ತೋ ಮತ್ಯಾವುದರಿಂದ ಬರುತ್ತೋ ಒಟ್ಟಿನಲ್ಲಿ ನಮ್ಮ ಗ್ರಹಚಾರ, ಒಂದು ಹೊತ್ತಾದರೂ ಸಂಧ್ಯಾವಂದನೆ, ಗಾಯಿತ್ರಿ ಜಪ ಮಾಡಿ ಅಂದರೆ ಕೇಳೋದಿಲ್ಲ, ಖಾಯಿಲೆ ಬರದೆ ಇನ್ನೇನಾಗುತ್ತೆ ಎಂದು ಆರಿ ಹೋದ ಬೀಡಿಯನ್ನು ಮತ್ತೆ ಕಡ್ಡಿಗೀರಿ ಹಚ್ಚಿ ಗಂಟಲಾಳದಿಂದ ಕವಕವನೆ ಕೆಮ್ಮುತ್ತಾ ಹೇಳಿದರು.
ಮೂರು ಹೊತ್ತು ಸಂಧ್ಯಾವಂದನೆ ಜಪ ಮಾಡುವ ನೀವೇಕೆ ಆ ತರಹ ಕರುಳು ಕಿತ್ತುಹೋಗುವಂತ ಕೆಮ್ಮನ್ನು ಅನುಭವಿಸುತ್ತಿದ್ದೀರಿ ಅಂತ ಕೇಳೋಣ ಅಂದುಕೊಂಡೆ. ಆದರೆ ಅದು ವಿತಂಡವಾದ ಎಂದಾಗುತ್ತದೆ ಎಂದು ಸುಮ್ಮನುಳಿದೆ. ಅವರಿಗೆ ಮಗನಿಗೆ ದೇವರ ಬಗ್ಗೆ ಕಾಳಜಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಬೇಕಾಗಿತ್ತು, ಮಾತು ಮುಂದುವರೆಸಿ ಪ್ರಯೋಜನವಿಲ್ಲವೆಂದು ಪ್ರಶಾಂತನನ್ನು ನೋಡಲು ಮಹಡಿಯ ಮೆಟ್ಟಿಲು ಹತ್ತಿದೆ.
ಪ್ರಶಾಂತನ ಪರಿಸ್ಥಿತಿ ತುಂಬಾ ಬಿಗಡಾಯಿಸಿತ್ತು. ಆದರೆ ಹತ್ತೆಂಟು ದಿನ ಜ್ವರ ಹಾಗು ಸಂದುನೋವನ್ನು ಅನುಭವಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ನಾನು ಜೇನನ್ನು ಪೆಟ್ಟಿಗೆಗೆ ಕೂಡುವ ವಿಚಾರವನ್ನು ಈ ಸಮಯದಲ್ಲಿ ಕೇಳಿದರೆ ಅದು ತೀರಾ ಸ್ವಾರ್ಥವಾಗುತ್ತದೆಯೇನೋ ಎಂದೆನಿಸಿ, ಸುಮ್ಮನೆ ಕುಶಲ ವಿಚಾರಿಸಿ, ಅವನನ್ನು ಆರೋಗ್ಯದ ಕಡೆ ಕಾಳಜಿ ಕೊಡುವಂತೆ ಹೇಳಿ ಹೊರಡಲನುವಾದೆ.
ಅಷ್ಟರಲ್ಲಿ ಪ್ರಶಾಂತ ಅವನಾಗಿಯೇ ನಾರಾಯಣ ಸ್ವಾಮಿಯ ಮನೆಯ ಸೊಪ್ಪಿನ ಬೆಟ್ಟದಲ್ಲಿ ಜೇನು ಇದೆಯಂತೆ ಎಂದು ಸುಡುತ್ತಿರುವ ಜ್ವರದ ಮಧ್ಯೆಯೂ ಕುತೂಹಲದಿಂದ ಕೇಳಿದ. ಜೇನಿನ ಹುಚ್ಚೇ ಹಾಗೆ, ಜೇನಿನ ಚಟ ಒಮ್ಮೆ ಅಂಟಿಸಿಕೊಂಡರೆ ಮಿಕ್ಕಿದ್ದನ್ನೆಲ್ಲಾ ಮರೆಸುವ ತಾಕತ್ತು ಅದಕ್ಕೆ ಇದೆ. ಅಂತಹ ಸುಡುವ ಜ್ವರದ ನೋವಿನ ನಡುವೆಯೂ ಅವನ ಕುತೂಹಲವನ್ನು ನೋಡಿದ ನನಗೆ ಅದು ಸತ್ಯ ಅಂತ ತೋರಿತು.
ಹೌದು ಪೆಟ್ಟಿಗೆಗೆ ಕೂಡಲು ನಿನ್ನನ್ನು ಕರೆದುಕೊಂಡು ಹೋಗೋಣ ಅಂತ ಬಂದೆ, ಆದರೆ ನಿನ್ನ ಪರಿಸ್ಥಿತಿ ಹೀಗಾಗಿದೆಯಲ್ಲ
ಸ್ವಲ್ಪ ಓಡಾಡುವಷ್ಟು ತಾಕತ್ತು ಇರುತ್ತಿದ್ದರೆ ಖಂಡಿತಾ ಬರುತ್ತಿದ್ದೆ, ಆದರೆ ಈಗ ಮಾತಾಡುವುದೇ ಕಷ್ಟವಾಗಿದೆ ಹಾಗಾಗಿ ಮತ್ಯಾರನ್ನಾದರೂ ಕರೆದುಕೊಂಡು ಹೋಗಿ ಹುಷಾರಿಯಿಂದ ಪೆಟ್ಟಿಗೆಯೊಳಗೆ ಕೂಡು ಎಂದ ಪ್ರಶಾಂತ.
ಜೇನಿನರಾಣಿ ಸುಲಭದಲ್ಲಿ ಕೈಗೆ ಸಿಗದಿದ್ದರೆ ಜೇನು ಕೂಡುವುದು ಹೇಗೆ?. ತೀವ್ರವಾಗಿ ಕಾಡುತ್ತಿದ್ದ ಪ್ರಶ್ನೆ ಕೇಳಿದೆ.
ಒಂದೆರಡು ತತ್ತಿಯನ್ನು ನಿಧಾನ ಹೊರತೆಗೆದು ಫ್ರೇಮಿಗೆ ಅದನ್ನು ಬಾಳೆಪಟ್ಟೆಯಿಂದ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಮುಚ್ಚಳ ಹಾಕು, ನಂತರ ಜೇನುಗೂಡಿನ ಬಾಗಿಲ ಬಳಿ ಪೆಟ್ಟಿಗೆ ಹಿಡಿದುಕೊಂಡು ಪೊಟರೆಯೊಳಗಿನಿಂದ ತೊಪ್ಪೆ ತೊಪ್ಪೆ ಹುಳುಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಿಗೆ ಬಿಡು. ಅವು ಕತ್ತಲೆಯನ್ನು ಅರಸುತ್ತಿರುತ್ತವೆಯಾದ್ದರಿಂದ ಹಾಗು ಒಳಗಿನಿಂದ ಬರುವ ತತ್ತಿಯ ವಾಸನೆ ಅವುಗಳಿಗೆ ತಿಳಿದು ಸರಸರನೆ ಪೆಟ್ಟಿಗೆಯ ಸಣ್ಣ ಬಾಗಿಲ ಮೂಲಕ ಒಳಸೇರುತ್ತವೆ. ಹಾಗೆ ಹುಳಗಳನ್ನು ಹಿಡಿದು ಬಿಡುವಾಗ ಅಕಸ್ಮಾತ್ ರಾಣಿ ಬಂದರೂ ಬಂದೀತು. ಬರದಿದ್ದರೆ ಜಾಸ್ತಿ ಸಂಖ್ಯೆಯ ಹುಳ ಪೆಟ್ಟಿಗೆಯೊಳಗೆ ಸೇರಿದ ನಂತರ ರಾಣಿನೊಣ ತಾನಾಗಿಯೇ ಬಂದು ಪೆಟ್ಟಿಗೆ ಸೇರಿಕೊಳ್ಳುತ್ತದೆ.
ಹುಳಗಳನ್ನು ಕೈಯಿಂದ ಹಿಡಿದಾಗ ಅವು ಹೊಡೆಯುವುದಿಲ್ಲವಾ?
ಮೊದಲು ಒಂದೆರಡು ಹುಳ ಹೊಡೆಯುತ್ತವೆ, ಒಂದು ಹುಳಕ್ಕೂ ಪೆಟ್ಟಾಗದಂತೆ ಅಂಗೈಯನ್ನು ಪೊಟರೆಯೊಳಗೆ ಹಾಕಿ ಬಹಳ ನಿಧಾನವಾಗಿ ಹೊರಗಡೆ ಬಿಟ್ಟರೆ ಹೊಡೆಯುವುದಿಲ್ಲ. ಅಷ್ಟಕ್ಕೂ ನಿನಗೆ ಹೊಸತಾದ್ದರಿಂದ ಹೆದರಿಕೆಯಿದ್ದರೆ ಸ್ಟೀಲ್ ಕೈಹುಟ್ಟನ್ನು ತೆಗೆದುಕೊಂಡು ಹೋಗು ಅದರ ಮೂಲಕ ಎಚ್ಚರಿಕೆಯಿಂದ ಹುಳಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಲ್ಲಿ ಬಿಡು ಎಂದು ಹೇಳಿದ ಪ್ರಶಾಂತ. ಕಾಡುತ್ತಿದ್ದ ತೀವ್ರಜ್ವರದ ನಡುವೆಯೂ ನನ್ನ ಬೃಹದಾಕಾರದ ಸಮಸ್ಯೆಗೆ ಸುಲಭ ಪರಿಹಾರ ನೀಡಿದ ಪ್ರಶಾಂತನಿಗೆ ಹುಷಾರು ಹೇಳಿ, ಜೇನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಅವನ ಹೊಸ ವಿಧಾನವಾದ ಕೈಹುಟ್ಟು ಬಳಸಲು ಅವರ ಮನೆಯಲ್ಲಿಯೇ ಒಂದು ಸ್ಟೀಲ್ ಸೌಟನ್ನು ಇಸಿದುಕೊಂಡು, ಚೆನ್ನನೇನಾದರೂ ಸಿಕ್ಕಿದಲ್ಲಿ ಕರೆದುಕೊಂಡು ಹೋಗಿಬಿಡಬಹುದೆಂದು ಸಂಪಳ್ಳಿಗೆ ಹೋದೆ.
ಚೆನ್ನನ ಮನೆ ಬೀಗ ಹಾಕಿತ್ತು. ಚೆನ್ನ ಬಹುಶಃ ಕಾಡಿಗೆ ಹೋಗಿದ್ದಿರಬೇಕು, ಅವನ ಹೆಂಡತಿ ಮಗ ಕೂಲಿಯನ್ನು ಮುಗಿಸಿ ಇನ್ನೂ ಬಂದಿರಲಿಲ್ಲ. ಇನ್ನು ಹೆಚ್ಚು ಹೊತ್ತು ಕಾದು ಕುಳಿತರೆ ಅತ್ತ ಜೇನು ಪರಾರಿಯಾದರೆ ಅಪರೂಪದ ಅವಕಾಶವನ್ನು ನಾನಾಗಿಯೇ ಕಳೆದುಕೊಂಡಂತಾಗುತ್ತದೆ ಎಂದು ಚೆನ್ನನ ಪಕ್ಕದ ಮನೆಯ ಹೆಂಗಸಿನ ಬಳಿ ಚೆನ್ನ ಬಂದಕೂಡಲೇ ಕನ್ನರ್ಸೆ ನಾರಾಯಣಸ್ವಾಮಿಯ ಮನೆ ಹತ್ತಿರ ಬರಲು ನಾನು ಹೇಳಿದ್ದೇನೆಂದು ಹೇಳಲು ಹೇಳಿ ಹೊರಟೆ.

(ಮುಂದುವರೆಯುತ್ತದೆ)

1 comment:

ಸೀತಾರಾಮ. ಕೆ. / SITARAM.K said...

ತುಂಬಾ ಆಸಕ್ತಿಕರವಾಗಿದೆ....
ಮುಂದುವರೆಯಲಿ...