Monday, October 17, 2011

ಕತೆಯೇ ಸರಿ.

ಇಪ್ಪತ್ತು ವರ್ಷದ ಹಿಂದಿರಬಹುದು. ಮುಖದಲ್ಲಿನ ಭಾವ ಮಸುಕು ಆದರೆ ದನಿ ಇನ್ನೂ ನೆನಪಿದೆ" ರಾಗೂ ಅಂವನು ಪ್ರೀತಿಸಿ ಮೋಸಮಾಡಿಬಿಟ್ಟ, ನೀನಾದರೂ ಹೋಗಿ ಹೇಳು, ಅವನದು ನಾಟಕ ಅಂತ ನನಗೆ ಈಗ ಗೊತ್ತಾಗಿದೆ, ಒಂದಿಷ್ಟು ದುಡ್ಡು ಕಳಕೊಂಡೆ." ಎಂದು ಹೇಳಿದಳಾಕೆ. ನನಗೆ ಕರುಳು ಚುರುಕ್ ಎಂದಿತಾದರೂ ಮುಂದುವರೆಯುವ ಧೈರ್ಯ ಇರಲಿಲ್ಲ. ಏನಂತ ಹೇಳಬೇಕು? ಹಗೂರವಾಗಿ ಕೇಳಿದೆ. "ಆವತ್ತು ನಾವಿಬ್ಬರು ಮೋರಿಕಟ್ಟೆಯ ಮೇಲೆ ಮಾತನಾಡಿದನ್ನು ನೀನು ನೋಡಿ, ಯಾರದು ಎಂದೆಯಲ್ಲ, ಅದನ್ನ ಉದಾಹರಿಸಿ ಕೇಳು ಮದುವೆಯಾಗಲು ಹೇಳು" ಎಂದಳು. ಯಾಕೋ ಮನಸ್ಸಾಗಲಿಲ್ಲ, ಕಾರಣ ಇನ್ನೂ ಗೊತ್ತಿಲ್ಲ. "ನೋಡು.. ಆತ ಮೋಸಗಾರ ಎಂದು ನಿನಗೆ ಈಗಲೇ ಗೊತ್ತಾಗಿದ್ದು ತುಂಬಾ ಒಳ್ಳೆಯದಾಯಿತು, ಸಂಸಾರವೇ ಜೀವನವಲ್ಲ, ಮರೆತು ಮುಂದಿನ ಜೀವನ ಬಾಳು ಇಲ್ಲದಿದ್ದರೆ ಇದು ಪ್ಯಾಚ್ ಕಟ್ಟಿದ ಸಂಸಾರ ಹಾಗಾಗಿ ನಿತ್ಯ ಗೋಳು" ಎಂದು ಸಮಾಧಾನಿಸಿದೆ. ನಂತರ ಬಹಳ ದಿವಸಗಳು ಈ ವಿಷಯ ಕಾಡಿದ್ದಿದೆ. ನಾನು ತಪ್ಪಿದೆನೆ?, ಅಸಹಾಯಕ ಹೆಣ್ಣುಮಗಳಿಗೆ ಸಹಾಯ ಮಾಡಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಕಾಲ ಎಲ್ಲವನ್ನೂ ನುಂಗಿ ನೀರು ಕುಡಿಯಿತುಬಿಡಿ.


ಆಕೆಯ ಮದುವೆ ಬೇರೆಯವರ ಜತೆ ನಡೆಯಿತು. ಮೊನ್ನೆ ಸಿಕ್ಕಿದ್ದಳು, ಸುಖೀ ಸಂಸಾರದ ಭಾವ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ಆತನ ಮದುವೆಯೂ ನಡೆದು ಎರಡು ಮಕ್ಕಳು, ಆದರೆ ಇಂದಿಗೂ ಆತ ಸ್ಯಾಡಿಸ್ಟ್ ವರ್ತನೆ ತೋರಿಸುತ್ತಿದ್ದಾನೆ. ಒಮ್ಮೊಮ್ಮೆ ಬುಡಕ್ಕೆ ತಂದಿಟ್ಟು ಚಂದ ನೋಡುತ್ತಾನೆ. ಸಂಸಾರದ ಮುಖದಲ್ಲಿ ಕಳೆ ಇಲ್ಲ. ಕಾರಣ ಆತನ ಆ "ಅದರ" ಹುಡುಕಾಟ ಇನ್ನೂ ಮುಗಿದಿಲ್ಲ.


ಅಂತೂ ಸಮಾಧಾನವಾಯಿತು. ಇಲ್ಲ ಅಂದು ನಾನು ಸುಮ್ಮನುಳಿದಿದ್ದೇ ಒಳ್ಳೆಯದಾಯಿತು. ಹೌದು ಒಮ್ಮೊಮ್ಮೆ ಸುಮ್ಮನುಳಿಯಬೇಕಾಗುತ್ತದೆ, ಮಗದೊಮ್ಮೆ ಬುಸ್ ಎನ್ನಬೇಕಾಗುತ್ತದೆ. ಆದರೆ ಕಚ್ಚಬಾರದು. ಅಕಸ್ಮಾತ್ ಕಚ್ಚಿದರೆ ಉಳಿಯಬಾರದು ಎಂಬ "ಸನ್ಯಾಸಿ ಮತ್ತು ನಾಗರಹಾವಿನ" ಕತೆಯೇ ಸರಿ.

1 comment:

ಸೀತಾರಾಮ. ಕೆ. / SITARAM.K said...

ಸನ್ಯಾಸಿ -ನಾಗರಹಾವು ಕಥೆ