Thursday, June 17, 2010

ಸುಧಾರಣೆಯತ್ತ ಮುಖ ಈಗ ಗೋಕರ್ಣದ್ದು.

"ಗೋಕರ್ಣಂತು ಮಾಹಾಕಾಶಿ ವಿಶ್ವನಾಥೋ ಮಹಾಬಲ: ಕೋಟಿ ತೀರ್ಥೇಶು ಗಂಗಾಯಾಂ ಸಮುದ್ರಂ ಅಧಿಕಂ ಬಲಂ" ಎಂಬ ಶ್ಲೋಕದ ಮೂಲಕ ಗೋಕರ್ಣ ಎಂಬ ಕ್ಷೇತ್ರ ಕಾಶಿಗಿಂತ ಒಂದು ತೂಕ ಹೆಚ್ಚು ಎಂಬ ವಿಚಾರವನ್ನು ಹರಡುತ್ತದೆ. ಇರಲಿ ಯಾವುದು ಹೆಚ್ಚೋ ಯಾವುದು ಕಡಿಮೆಯೋ ನಮಗ್ಯಾಕೆ ಅದರ ಗೊಡವೆ. ಕಾಶಿಯ ವಾಸಿ ಶ್ಲೋಕ ರಚಿಸಿದರೆ ಆತ ಕಾಶಿಯೇ ಮೇಲು ಎಂದು ರಚಿಸಿ ಕಾರಣ ಕೊಡುತ್ತಾನೆ. ಆನಂತರ ಅದು ತರ್ಕಕ್ಕೆ ಬೀಳುತ್ತದೆ. ಬಿಟ್ಟಾಕೋಣ ರಗಳೆಯನ್ನ. ವಿಷಯ ನೋಡೋಣ ಅಲ್ಲ ಓದೋಣ.
ಗೋಕರ್ಣ ಕ್ಕೆ ಈಗ ಕೆಲವರ್ಷದ ಹಿಂದೆ ನೀವು ಹೋಗಿದ್ದರೆ ಅಯ್ಯೋ ಇದೆಂತಾ ಗಲೀಜಪ್ಪಾ ಎಂಬ ಉದ್ಘಾರ ತೆಗೆಯುತ್ತಿದ್ದೀರಿ. ಅಲ್ಲಿ ಬೆನ್ನು ಬೀಳುವ ಭಟ್ರಮಂದಿ ಹೂವು ಕೊಳ್ಳೀ ಎನ್ನುವ ಹಾಲಕ್ಕಿ ಮಂದಿಯ ತಪ್ಪಿಸಿ ಕೊಂಡು ಹೋಗಲು ಹೆಣಗಾಡುತ್ತಿದ್ದಿರಿ. ದೇವಸ್ಥಾನದ ಆವರಣದೊಳಗೆ ಬಂದು ಝಾಂಡಾ ಹೊಡೆಯುವ ಗೋ ಮಯ ಮೆಟ್ಟಿ ಇಶಿಶೀ ಎನ್ನುತ್ತಿದೀರಿ. ಈಗ ತೀರಾ ಹಾಗಿಲ್ಲ. ಬಹಳಷ್ಟು ಬದಲಾವಣೆ ಕಂಡಿದೆ ಗೋಕರ್ಣ. ಆದರೂ ಗೋಕರ್ಣವನ್ನು ಸಮರ್ಪಕ ಪುಣ್ಯಕ್ಷೇತ್ರವನ್ನಾಗಿಸಲು ಸಿಕ್ಕಾಪಟ್ಟೆ ಶ್ರಮದ ಅಗತ್ಯ ಇದೆ. ಒಂದಿಷ್ಟು ಬೆಂಕಿಪೊಟ್ಟಣವನ್ನು ಬೇಕಾಬಿಟ್ಟಿ ಎಸೆದಂತಿರುವ ಪಟ್ಟಣ ಗೋಕರ್ಣ. ಅದನ್ನು ಏಕ್ ದಂ ಸ್ವಚ್ಛ ಕಷ್ಟಸಾದ್ಯದ ಕೆಲಸ.
ಆದರೂ ಈಗ ಮಹಾಬಲೇಶ್ವರ ದೇವ ಅಲ್ಲಿ ಇದ್ದಾನೆ ಎಂಬ ನಂಬಿಕೆ ಬರತೊಡಗಿದೆ. ಮಧ್ಯಾಹ್ನ ಸುಗ್ರಾಸ ಭೋಜನ ಭಕ್ತರಿಗೆ ದೊರಕುತ್ತಿದೆ. ಅದೂ ಸಂಪೂರ್ಣ ಉಚಿತ ಮತ್ತು ಬನ್ನಿ ಬನ್ನಿ ಊಟ ಮಾಡಿ ಎಂಬ ವಿಶ್ವಾಸ ಪೂರ್ವಕ ಕರೆಯದೊಂದಿಗೆ. ಆವರಣ ದಲ್ಲಿ ಕಾಮಗಾರಿ ನಡೆಯುತ್ತಿದೆ. ದೇವಸ್ಥಾನ ಪಳಪಳ ಎನ್ನಲು ಆರಂಭಿಸಿದೆ. ಸುಧಾರಣೆಯತ್ತ ಮುಖ ಈಗ ಗೋಕರ್ಣದ್ದು.

No comments: