ಬಿರು ಬಿಸಿಲಿನ ದಿವಸಗಳಲ್ಲಿ ಹಂಚಿನ ಮನೆಯೊಳಗೆ ತಂಪಾಗಿರಲು ಚಪ್ಪರದ ಅವಶ್ಯಕತೆ ಇರುತ್ತದೆ. ಹಾಗೆಯೇ ತಂಪಾದ ಮನೆಯೊಳಗೆ ಸೊಂಪಾಗಿ ತಿನ್ನಲು ತರಕಾರಿಯ ಅವಶ್ಯಕತೆ ಇದ್ದೇ ಇರುತ್ತದೆ. ಈ ಎರಡೂ ಬೇಡಿಕೆಗಳನ್ನು ಒಟ್ಟಾಗಿ ಈಡೇರಿಸುವ ಏಕೈಕ ಬಳ್ಳಿಯೆಂದರೆ ಚಪ್ಪರದವರೆ.
ಚಪ್ಪರಕ್ಕೆ ಹಬ್ಬಿ ಗೊಂಚಲು ಗೊಂಚಲು ಕಾಯಿಬಿಡುವುದರಿಂದ ಇದಕ್ಕೆ ಅದೇ ಹೆಸರು. ಅಕ್ಟೋಬರ್ ತಿಂಗಳಿನಲ್ಲಿ ಬೀಜಹಾಕಿದರೆ ಡಿಸೆಂಬರ್ ಅಂತ್ಯದೊಳಗೆ ಮನೆಯ ಸುತ್ತೆಲ್ಲಾ ವ್ಯಾಪಿಸಿ ಹಂಚಿಮಾಡನ್ನು ತುಂಬಲು ಆವರಿಸಿ ಜನವರಿಯ ಹೊತ್ತಿಗೆ ಗೊಂಚಲು ಕಾಯಿಬಿಡಲು ಆರಂಬಿಸುತ್ತದೆ ಚಪ್ಪರದವರೆ. ಹೀಗೆ ಮಾರ್ಚ್ ವರೆಗೂ ಯಥೇಚ್ಚವಾಗಿ ಕಾಯಿಬಿಡುವ ಇದು ನಂತರ ನಿಧಾನ ಒಣಗಲಾರಂಬಿಸಿ ಮಳೆಗಾಲ ಆರಂಭವಾಯಿತು ಎನ್ನುವಾಗ ಸತ್ತುಹೋಗುತ್ತದೆ. ಮಲೆನಾಡಿನ ವಿಶೇಷ ರುಚಿಯ ಈ ತರಕಾರಿ ತಿನ್ನಲೂ ಅದ್ಬುತ ರುಚಿ. ದಡ್ಡಿಗೊಬ್ಬರ, ಹಾಗೂ ಗೋಮೂತ್ರ ಹಾಕಿದರೆ ಸಾಕು ಚೀಲಗಟ್ಟಲೆ ಕಾಯಿಕೊಯ್ಯಬಹುದು , ಗೆಲ್ಲುಗಳಿಂದಲೂ ಸಂತಾನಭಿವೃದ್ಧಿ ಸಾದ್ಯವಾದರೂ ಆಯುಷ್ಯ ಕಡಿಮೆ ಹಾಗಾಗಿ ಬೀಜದ ಮೂಲಕ ಸಸಿ ನಾಟಿಯೇ ಉತ್ತಮ ವಿಧಾನ.
1 comment:
ಅವರೆ ಬಗ್ಗೆ ಜನಪದರು ಹೇಳಿದ ಕತೆಯೊಂದು
ಹೀಗಿದೆ. (ಇದು ಅಮ್ಮ ಹೇಳಿದ ಕಥೆ. ಚಪ್ಪರದವರೇ
ಹೌದೋ..ಅಲ್ಲವೋ.. ಗೊತ್ತಿಲ್ಲ. ಪ್ರದೇಶಾವಾರು ಕಥೆ
ಬೇರೆ ರೂಪ ಪಡೆದಿರಲಿಕ್ಕು ಸಾಕು)
ಪಾಂಡವರು ವನವಾಸಕ್ಕೆ ಹೊರಟು ನಿಂತಾಗ
ಪುರಜನರು ಬಹಳ ಶೋಕ ಪಡುತ್ತಾ, ಪಾಂಡವರಿಲ್ಲದೆ
ತಾವು ಹೇಗಿರುವುದೆಂದು ಸಂಕಟಪಡುವರು. ಆಗ ಕುಂತಿ
ಪುರಜನರಿಗೆ ಅವರೆ ಬೀಜವನ್ನು ಹಂಚಿ ಇದನ್ನು ಬಿತ್ತಿ-
ಬೆಳೆಯಿರಿ. ಅವರೆ ಬೀಜ ಇರುವವರೆಗೂ ಪಾಂಡವರು
ನಿಮ್ಮ ಜೊತೆ ಇರುತ್ತಾರೆ. ಹಾಗು ಇಳೆಯಲ್ಲಿ ಪಾಂಡವರ
ನೆನಪು ಇರುತ್ತದೆ, ಎಂದು ಸಮಾಧಾನಿಸುವಳು.
ಅವರೆ...., ಅವ್ರೆ...., ಅಂದ್ರೆ ಗ್ರಾಮ್ಯ ಬಾಷೆಯಲ್ಲಿ
ಇದ್ದಾರೆ ಎಂಬ ಅರ್ಥವೂ ಆಗುತ್ತದೆ. ಕಥೆ ಈಗ ಕಾಡಿಗೆ
ಹೋಗಲಿ. ನಿಮ್ಮ ಅವರೆ ಕಥೆ ನನಗೆ ಮತ್ತೆ ಅಮ್ಮನನ್ನ,
ಪಾಂಡವರನ್ನ ಒಟ್ಟಿಗೆ ನೆನಪಿಸಿತು. ಧನ್ಯವಾದಗಳು.
Post a Comment