Friday, February 11, 2011

ರಂ-ಗೋಲಿಯಲ್ಲ ರಂಗೋಲಿ

ರಂಗೋಲಿ ಮನೆಮುಂದಿನ ಲಕ್ಷಣ ಅಂತ ಹಿರಿಯರು ಹೇಳುತ್ತಾರೆ. ಬೂತ ಪ್ರೇತಾದಿಗಳು ರಂಗೋಲಿಯ ದಾಟಿ ಮನೆಯೊಳಗೆ ಬರಲಾರವು ಅಂತ ಕೆಲವರ ನಂಬಿಕೆ, ರಂಗೋಲಿ ಸತ್ ಸಂಪ್ರದಾಯದ ಸದ್ ಗೃಹಿಣಿಯ ಲಕ್ಷಣ ಅಂತಲೂ ಹಳೇ ಜನ ಅಂತಾರೆ. ಇರಲಿ ಯಾವುದಾದರೂ ಕಣ್ಣಿಗೆ ಮುದನೀಡುವ ಮನಸೆಳೆಯುವ ತಾಕತ್ತು ರಂಗೋಲಿಗೆ ಇದೆ ಅನ್ನುವುದಂತೂ ಸತ್ಯ. ಯಾರದ್ದಾದರೂ ಮನೆಗೆ ಹೋದಾಗ ಮನೆಯ ಅಂಗಳದಲ್ಲಿರುವ ರಂಗೋಲಿ ಅರೆಕ್ಷಣ ನಿಮ್ಮ ಮನಸ್ಸನ್ನು ಸೆಳೆಯಿತು ಎಂದಾದರೆ ಆ ಮನೆಯೊಳಗೆ ಹೋದಾಗ ನಿಮ್ಮ ವರ್ತನೆ ಉಲ್ಲಾಸದಾಯಕವಾಗಿರುತ್ತದೆ ಎಂದು ಮೊನ್ನೆ ಹೊಸತಾಗಿ ಮತ್ತೊಬರು ಸೇರ್ಪಡೆಗೊಳಿಸಿ ಹೇಳಿದರು. ಮನೆಯ ಮುಂದಿನ ರಂಗೋಲಿಯನ್ನು ನೋಡಿ ಅಂದು ಆ ಮನೆಯ ಹೆಣ್ಣಿನ ಮನಸ್ಥಿತಿ ಹೇಗಿದೆ ಎಂದು ತಿಳಿಯಬಹುದು ಎಂದು ಮಗದೊಬ್ಬರು ಹೇಳಿದರಪ್ಪ. ಒಟ್ಟಿನಲ್ಲಿ ಎನೇ ಇರಲಿ ಹೆಂಗಳೆಯರ ಶ್ರದ್ಧಾಪೂರ್ವಕ ಕುಸರಿ ಕೆಲಸವಾದ ರಂಗೋಲಿ ತನ್ನಲ್ಲಿ ರಂ ಅಳವಡಿಸಿಕೊಂಡು ಒಂಥರಾ ಕಿಕ್ ಕೊಡುವುದಂತೂ ಸತ್ಯ.

Wednesday, February 9, 2011

ಕಾಂಕ್ರೀಟ್ ಕಾಡುಗಳು

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ ಕತೆ)

ಇಪ್ಪತ್ತೊಂದನೆಯ ಮಹಡಿಯ ಹವಾನಿಯಂತ್ರಿತ ಕೋಣೆಯ ಕಿಟಕಿಯಿಂದ ಕೆಳಗೆ ನೋಡಿದರೆ ಆರಡಿಯ ಮನುಷ್ಯರೇನು? ಬೃಹತ್ ಗಾತ್ರದ ಆನೆಗಳೂ ಇರುವೆಯ ಸಾಲಿನಂತೆ ಕಾಣಿಸುತ್ತವೆ. ಹಾಗೆ ಕಂಡಾಕ್ಷಣ ಅದೇ ಸತ್ಯ ಅಂತ ಅಲ್ಲ, ಆಯಾ ವಸ್ತುಗಳಿಗೆ ಅದರದ್ದೇ ಗಾತ್ರ ಅದಕ್ಕೆ ನಿಯಮಿಸಿದ್ದೇ ಕೆಲಸ. ನೋಡುಗರಾದ ನಾವು ಎಲ್ಲಿದ್ದೇವೆ ಹೇಗಿದ್ದೇವೆ ಎನ್ನುವ ವಿಷಯದಮೇಲೆ ಪ್ರಪಂಚ ದರ್ಶನ. ಈಗ ಐದುಮುಕ್ಕಾಲು ಅಡಿ ಎತ್ತರದ ದೇಹ ಹೊಂದಿರುವ ನಾನಾದರೋ ಅಷ್ಟೆ, ಅದೆಲ್ಲಿಂದ ಬಂದೆ? ಅದೆಲ್ಲಿ ನಿಂತೆ? ಅದೆಲ್ಲಿಗೆ ಹೋಗಿ ತಲುಪುತ್ತೇನೆ? ಎಂದೆಲ್ಲಾ ಆಲೋಚಿಸಿ, ಆನಂತರ ಅದಕ್ಕೊಂದು ಉತ್ತರ ಹುಡುಕುವ ಪ್ರಯತ್ನದಲ್ಲಿ ತೊಡಗಿ ನಂತರ ಸೋತೆ ಅಂತ ಅನಿಸಿ, ಇನ್ನಷ್ಟು ಗಾಢವಾಗಿ ಆಲೋಚಿಸಿದಾಗ ಅಂತಹ ಯೋಚನೆಗಳೆಲ್ಲಾ ವ್ಯರ್ಥ ಅಂತ ಅನ್ನಿಸಿದ್ದಿದೆ. ಆದರೂ ಪ್ರಶ್ನೆ ಕೇಳುವ ಬೇತಾಳನ ರೂಪದ ಒಳಮನಸ್ಸು ಆಗ್ರಹಿಸುತ್ತಲೇ ಇರುತ್ತದೆ "ಉತ್ತರ ಹುಡುಕು, ಉತ್ತರ ಹುಡುಕು" ಎಂದು. ಎಲ್ಲಿಂದ ತರಲಿ ಉತ್ತರವನ್ನ? ಯಾರು ನನ್ನ ಹಪಹಪಿಕೆ ತಣಿಸುವವರು? ಎಲ್ಲಿದ್ದಾರೆ ಅವರು?. ವರ್ಷಪೂರ್ತಿ ದುಡಿದು, ಇಪ್ಪತ್ತು ಸಾವಿರ ರೂಪಾಯಿಗಳನ್ನು ಕಂಡರೆ ಕಣ್ಣರಳಿಸುವ ಒಬ್ಬ ಸಾಧಾರಣ ರೈತನ ಮಗನಾಗಿ ಹುಟ್ಟಿ, ಈಗ ವಾರ್ಷಿಕ ಎರಡು ಸಾವಿರ ಕೋಟಿ ರೂಪಾಯಿ ಆದಾಯದ ಕಂಪನಿಯ ಅತ್ಯುನ್ನತ ಹುದ್ದೆಯಲ್ಲಿರುವಷ್ಟು ಸಾಧಿಸಿರುವ ನನ್ನನ್ನು ಹಾಗೂ ನನ್ನ ದಿನಗಳನ್ನು ಒಂದೇ ಒಂದು ಯಕಶ್ಚಿತ್ ಪ್ರಶ್ನೆ ಕರಿವರಲೆ ಮನೆಯ ತೊಲೆಯನ್ನು ತಿಂದಂತೆ ತಿನ್ನುತ್ತಿದೆ. ಜೀವವಿಲ್ಲದ ಪುತುಪುತು ಎದ್ದಿರುವ ಕಟ್ಟಡಗಳು, ಜೀವವಿದ್ದೂ ಜಡವಾಗಿರುವ ಮನುಷ್ಯರು ದಿನದಿಂದ ದಿನಕ್ಕೆ ರೇಜಿಗೆ ಹುಟ್ಟಿಸತೊಡಗಿದೆ.
ಮಳೆನಾಡಿನ ದಟ್ಟ ಕಾನನದ ನಡುವೆ ಕಿಚಿಪಿಚಿ ಕೆಸರಿನಿಂದ ಮೈ ತೊಯಿಸಿಕೊಂಡು ಕುರುಗೊಡು ಪಂಚೆಯಲ್ಲಿದ್ದ ಅಪ್ಪ ನೆನಪಾಗುತ್ತಾರೆ. ಆಷಾಡ ಮಾಸದಲ್ಲಿ ವರ್ಷಪೂರ್ತಿ ಜೀವನಕ್ಕೆ ಆಸರೆಯಾಗಿರುವ ಎರಡು ಎಕರೆ ಅರಲುಗದ್ದೆ ಹೂಟಿ ಮಾಡುವಾಗ ಗಳೆ ಹೊಡೆಯುವವರ ಜತೆಯಾಗುತ್ತಿದ್ದರು ಅಪ್ಪ. ಮನೆಯ ಎತ್ತುಗಳಿಗೆ ಕಟ್ಟುತ್ತಿದ್ದ ನೇಗಿಲಿಗೆ ಅಪ್ಪನೇ ಸಾರಥಿ. "ಹಾಳಿ ಹೊದ್ದ , ಬಾ ಬಾ ಬಾ, ನೋಡ ಅದ್ರನ್ನ...ಆಗೋತು ಆಗೋತು..." ಎಂದು ರಾಮ ಲಕ್ಷಣರೆಂಬ ಎತ್ತುಗಳನ್ನು ಹುರಿದುಂಬಿಸಿ ಮೊಣಕಾಲಿನಾಳದಲ್ಲಿ ಹುಗಿದಿದ್ದ ಹುಣ್ಣನ್ನೂ ಲೆಕ್ಕಿಸದೆ ಮಾಡುತ್ತಿದ್ದ ಕೆಲಸಗಳು ನೆನಪಾಗುತ್ತವೆ. ಅಪ್ಪನಿಗೆ ಈ ಪ್ರಶ್ನೆಗಳು ಕಾಡಲಿಲ್ಲವೆ?, ಕಾಡಿದ್ದರೆ ಉತ್ತರ ಹುಡುಕಿಕೊಂಡ ಬಗೆ ಹೇಗೆಂದು ಈಗ ತಿಳಿಯುತ್ತಿಲ್ಲ. ಆದರೂ ಅಪ್ಪ ಹೇಳುತ್ತಿದ್ದರು " ಪ್ರಕೃತಿಯಿಂದ ದೂರವಾದಂತೆ ಮನುಷ್ಯನಿಗೆ ಕಾಡುವ ಅತಿ ದೊಡ್ಡ ರೋಗವೆಂದರೆ ಅವ್ಯಕ್ತ ಭಯ" ಅವರು ಹಾಗೆ ಹೇಳುತ್ತಿದ್ದ ಸಮಯದಲ್ಲಿ ನನಗೆ ಅದು ಇಷ್ಟೊಂದು ಗಾಢವಾದ ಮಾತು ಅಂತ ಅನ್ನಿಸುತ್ತಿರಲಿಲ್ಲ. ಅಥವಾ ಅಂದು ಅವರು ಹಾಗೆ ಹೇಳಿದ್ದು ನನ್ನನ್ನು ಉದ್ದೇಶಿಸಿ ಆಗಿರಲೂ ಇಲ್ಲ ಹಾಗಾಗಿ ಮತ್ತೆ ಪ್ರಶ್ನೆ ಹುಟ್ಟಿರಲಿಲ್ಲ. ಈಗ ಹುಟ್ಟಿದೆ ಪ್ರಶ್ನೆ ಬೃಹದಾಕಾರವಾಗಿ, ಆದರೆ ಉತ್ತರಿಸಲು ಅವರಿಲ್ಲ. ಅವರು ಹೇಳಿದ ಸಂದರ್ಭ ಮಾತ್ರಾ ಅಚ್ಚಳಿಯದೆ ಉಳಿದಿದೆ.
********
ಅತ್ತಿಂದಿತ್ತ ಕಾಗೆ ಹಾರದಷ್ಟು, ಕುಂಡೆಕುಣಕನ ಹಕ್ಕಿಯ ರಕ್ಕೆಯೂ ತೊಪ್ಪೆಯಾಗುವಷ್ಟು ಘೊರಾಂಡ್ಲ ಮಳೆ ಬಾನಿಂದ ಸುರಿಯುತ್ತಿತ್ತು. ಹಳ್ಳಿಯ ರೈತರೆಲ್ಲಾ ಹೊಟ್ಟೆಯಲ್ಲಾಗುವ ತಳಮಳ ಹೇಳಲಾರದೆ ತಮ್ಮಷ್ಟಕ್ಕೆ ಗೊಣಗುತ್ತಿದ್ದರು, ಅತಿ ಮಳೆಯನ್ನು ಶಪಿಸುತ್ತಿದ್ದರು. ಮಳೆಯಿಂದುಂಟಾದ ನೀರಿನ ಹರಿವು ರಸ್ತೆ ಗದ್ದೆ ಎಂಬ ಬೇಧವಿಲ್ಲದೆ ಮನೆಯ ಬಾಗಿಲವರಗೆ ಬಂದು ಒದ್ದಿತ್ತು. ಜಡಿಮಳೆಯ ಆರಂಭದಲ್ಲಿ ತೋಟಗದ್ದೆಯಲ್ಲಿನ ಫಸಲು ಕಳೆದುಹೋಗುವ ಬಗ್ಗೆ ಚಿಂತಿಸುತ್ತಿದ್ದ ಜನರು ಸೂರಿನವರೆಗೆ ಬಂದ ಕೆನ್ನೀರಿನ ಬಣ್ಣಕ್ಕೆ ಮನೆಯುಳಿದರೆ ಮತ್ತೆ ಫಸಲು ಬೆಳೆದೇವು ಎಂಬ ತೀರ್ಮಾನಕ್ಕೆ ಬಂದಿದ್ದರು. ಅಂತಹ ಸಮಯದಲ್ಲಿ ಗದ್ದೆಗೆ ಹೋದ ಅಪ್ಪ ಜತೆಯಲ್ಲಿ ಇಬ್ಬರನ್ನು ಮನೆಗೆ ಕರೆದುಕೊಂಡು ಬಂದರು.ಅವರನ್ನು ನೋಡಿದ ಎಲ್ಲರೂ ಗಂಡಹೆಂಡತಿ ಎಂಬ ತೀರ್ಮಾನಕ್ಕೆ ಬರಬಹುದಿತ್ತು. ಆದರೆ ವಿಚಿತ್ರವೆಂದರೆ ಅವರು ಗಂಡಹೆಂಡಿರಲ್ಲ ಎಂಬುದು ಅವರುಗಳು ಒದ್ದೆಮುದ್ದೆಯಾದ ಬಟ್ಟೆ ಬದಲಾಯಿಸುವಾಗ ನಮಗೆ ತಿಳಿಯಿತು.
ಅಪ್ಪ ಕೆಂಬಣ್ಣದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಫಸಲನ್ನು ಹತಾಶನಾಗಿ ಗದ್ದೆ ಏರಿಯಮೇಲೆ ನಿಂತು ನೋಡುತ್ತಿದ್ದಾಗ ಇವರು ಬಂದರಂತೆ. ದೂರದೂರಿನಿಂದ ಜಲಪಾತ ನೋಡಲು ಬಂದದ್ದು, ವಾಪಾಸುಹೊರಟಾಗ ಕಾರು ರಸ್ತೆಯಂಚಿನಲ್ಲಿ ಕೈಕೊಟ್ಟದ್ದು, ಇನ್ನೇನು ರಾತ್ರಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಉಳಿಯಲು ಜಾಗವನ್ನರಸುತ್ತಾ ಹಾದಿಹೋಕರ ಕೇಳಿದಾಗ ಅವರು ಅಪ್ಪನತ್ತ ಬೆಟ್ಟುಮಾಡಿ ತೊರಿಸಿದ್ದು ಎಲ್ಲಾ ವಿವರ ಹೇಳಿ ರಾತ್ರಿ ಕಳೆಯಲು ಅವಕಾಶ ಮಾಡಿಕೊಡಿ ಎಂದು ಕೇಳಿದಾಗ ಅಪ್ಪನಿಗೆ ತನ್ನ ಕಷ್ಟಗಳೆಲ್ಲಾ ಅರೆಕ್ಷಣ ಮರೆತು
" ಮುsಸ್ಸಂಜೆಯಲ್ಲಿ ಈ ಹಳ್ಳಿಕೊಂಪೆಯಲ್ಲಿ ಈ ಗಂಡಹೆಂಡತಿ ಇನ್ನೆಲ್ಲಿ ಹೋದಾರು, ಪಾಪ" ಎಂಬ ಕರುಣಾಪೂರಿತ ದನಿಯಿಂದ ಅವರನ್ನು ಮನೆಯತ್ತ ಕರೆದುಕೊಂಡು ಬಂದಿದ್ದರು.
ಒದ್ದೆ ಬಟ್ಟೆಯ ಬದಲಿಸುತ್ತಾ ಗಂಡಸನ್ನು ಆಕೆ ಏಕವಚನದಲ್ಲಿ ಕರೆದಾಗ ತಟ್ಟೆಯಲ್ಲಿ ಬಿಸಿಬಿಸಿ ಕಷಾಯ ತಂದ ಅಮ್ಮ ಮಿಕಿಮಿಕಿ ಅವರನ್ನೇ ನೋಡಿದ್ದಳು. ಅಮ್ಮನ ಆ ನೋಟವನ್ನು ಅರ್ಥೈಸಿಕೊಂಡ ಆಕೆ " ಅಮ್ಮ ನಾವು ಗಂಡ ಹೆಂಡಿರಲ್ಲ, ಹಾಗಂತ ಪಡ್ಡೆಗಳೂ ಅಲ್ಲ, ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ. ಇಬ್ಬರ ಮನಸ್ಥಿತಿಯೂ ಒಂದೆ ಇದೆ, ಮದುವೆಗಿಂತ ಮೊದಲು ಅರ್ಥಮಾಡಿಕೊಂಡರೆ ನಂತರದ ಜೀವನ ಸುಗಮವಾಗುತ್ತದೆಯಲ್ಲವೇ? ಹಾಗಾಗಿ ಸದ್ಯ ಒಟ್ಟಿಗೆ ಇದ್ದೇವೆ" ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿ. ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೂ ಅಪ್ಪನ ಮುಖವನ್ನು ದಿಟ್ಟಿಸಿನೋಡದ ಅವಳಿಗೆ ಇವೆಲ್ಲಾ ಅರ್ಥವಾಗದ ವಿಷಯ. ನನಗೂ ಅನುಭವಕ್ಕೆ ಬಂದಿರದಿದ್ದರೂ ಅಲ್ಲಲ್ಲಿ ಓದಿ ಈ ತರಹದ ಜೀವನ ತಿಳಿದಿದ್ದೆನಾದ್ದರಿಂದ ಅದೊಂದು ಮಾಡ್ರನ್ ಅಂತ ಅನ್ನಿಸಿತಷ್ಟೆ. ಕಷಾಯ ಕುಡಿದ ಜೋಡಿ ನಡುಗುತ್ತಿದ್ದುದನ್ನು ಕಂಡ ಅಪ್ಪ ಅವರನ್ನು ಹಿತ್ತಲಬಾಗಿಲಿನಿಂದ ಹೊಡಚಲಬಳಿ ಕರೆದೊಯ್ದರು.
ಮದ್ಯೆ ನಿಗಿನಿಗಿ ಕೆಂಡದ ಹೊಡಚಲಿನ ಬೆಂಕಿ, ಬೆಂಕಿಯಿಂದ ಮೂರಡಿ ಎತ್ತರದಲ್ಲಿ ಒಣಗಲು ಹಾಕಿದ್ದ ಅಪ್ಪನ ಕಂಬಳಿಯ ತುದಿಯ ರೊಣೆಯಿಂದ ಅಜ್ಜಿಸಿಂಬಳದಂತೆ ತೊಟ್ಟಿಕ್ಕುವ ನೀರ ಹನಿ, ಹೊಡಚಲ ಸುತ್ತ ಅಪ್ಪ, ಹೊಸ ಜೋಡಿ ಹಾಗು ನಾನು. ಒಂದಿಷ್ಟು ಹೊತ್ತು ನಮ್ಮ ನಡುವೆ ಮಾತುಗಳ ವಿನಿಮಯ ಇರಲಿಲ್ಲ. ಕಂಬಳಿಯಿಂದ ಬೆಂಕಿಯಮೇಲೆ ಬಿದ್ದು ಚೊಂಯ್ ಎಂಬ ಸದ್ದಿನೊಂದಿಗೆ ಆಯುಷ್ಯಮುಗಿಸಿಕೊಳ್ಳುವ ಹನಿಯ ಶಬ್ಧಕ್ಕೆ ಹೊರಗಡೆಯ ಜಡಿಮಳೆ ಲಯ ಸೇರಿಸುತ್ತಲಿತ್ತು. ಆಗ ಬೆಂಗಳೂರಿಗ ಮಾತನಾಡಲು ಶುರುಮಾಡಿದ.
"ನೀವು ತುಂಬಾ ಅದೃಷ್ಟವಂತರು, ಸ್ವಚ್ಚ ಗಾಳಿ, ಸುಂದರ ಪರಿಸರ, ಹಸಿರಿನ ನಡುವೆ ಹಕ್ಕಿಗಳಾಗಿ ತೇಲಾಡುತ್ತಿದ್ದಿರಿ. ಇಂತಹ ಬೆಂಕಿಯ ಸುಖ ನನ್ನ ಜೀವನದಲ್ಲಿ ನಾನು ಅನುಭವಿಸುತ್ತಿರುವುದು ಇದೇ ಮೊದಲಬಾರಿ"
ಅದೇಕೋ ಅಪ್ಪ ಪ್ರತಿಕ್ರಿಯಿಸಲಿಲ್ಲ, ಆದರೆ ನನಗೆ ಮನದೊಳಗೆ ಅವರು ಹೇಳುತ್ತಿದ್ದ ಮಾತುಗಳು ನಮ್ಮನ್ನು ಓಲೈಸಲೋ ಅಂತ ಅನ್ನಿಸತೊಡಗಿತ್ತು. ವಾರಕ್ಕೆ ಆರುದಿನ ಇರದ ಕರೆಂಟು, ಇಲ್ಲದ ಟಿ ವಿ, ಕೆಸರಿನಲ್ಲಿ ಮುಳುಗಿದ ರಸ್ತೆ ಹಣವೇ ಇಲ್ಲದ ಅಪ್ಪ, ಹೀಗೆ ಇಂಥಹ ಜೀವನವನ್ನು ಇವರು ಅದೃಷ್ಟ ಅಂತ ಹೇಳಬೇಕಾದರೆ ಅದು ಸುಳ್ಳು, ಮನೆಬಾಗಿಲಿಳಿದರೆ ಟಾರ್, ಓಡಾಡಲು ಸ್ವಂತ ಕಾರ್ ಕೈಕಾಲಿಗೆಲ್ಲ ಆಳುಗಳು ಇದ್ದಾಗ ಮಾತ್ರಾ ಅದೃಷ್ಟ ಎನ್ನಬಹುದು ಈಗಿನ ನಮ್ಮ ಜೀವನ ಅದೆಂತಹಾ ಅದೃಷ್ಟ ಎಂಬ ಆಲೋಚನೆಯ ಬೆನ್ನು ಹತ್ತಿದ್ದ ನನಗೆ ಅವರ ಆಲೋಚನೆಗಳು ಪೇಲವ ಅಂತ ಅನ್ನಿಸಿತ್ತು. ಆತ ಮುಂದುವರೆಸಿದ್ದ
"ನೋಡಿ ನಮ್ಮ ಬದುಕು ಕಾಂಕ್ರೀಟ್ ಕಾಡಿನಲ್ಲಿ ನಲುಗುತ್ತಿವೆ, ನಿತ್ಯ ಬೆಳಿಗ್ಗೆ ಓಡು, ದುಡಿ, ಟ್ಯಾಕ್ಸ್ ಕಟ್ಟು, ಟಾರ್ಗೆಟ್ ರೀಚ್ ಆಗು ಎಂಬಂಥಹ ವಾಕ್ಯಗಳ ಸುತ್ತಲೇ ಸುತ್ತುತ್ತಿರುತ್ತದೆ, ನಮ್ಮ ಉಸಿರಾಟದ ಸದ್ದನ್ನೇ ನಾವು ಕೇಳಲಾರೆವು, ಅಂಥಹ ಹಂತ ತಲುಪಿದ್ದೇವೆ, ಭವಿಷ್ಯದ ಬಗೆಗಿನ ಅವ್ಯಕ್ತ ಭಯ ಕಾಡುತ್ತದೆ, ನಮಗೂ ಸಾಕಾಗಿದೆ ಪೇಟೆಯ ಜನಜಂಗುಳಿ ಮನುಷ್ಯರ ಸಹವಾಸ, ಇಲ್ಲೇ ಎಲ್ಲಿಯಾದರೂ ಹೀಗೆ ಜಮೀನು ಇದ್ದರೆ ಹೇಳಿ, ಕೊಂಡು ಹಾಯಾಗಿರುತ್ತೇವೆ"
ಅವರ ಮಾತುಗಳನ್ನು ಆಲಿಸಿದ ಅಪ್ಪ ಒಮ್ಮೆ ಮುಗುಳ್ನಕ್ಕರು, ಆ ನಗುವಿನಲ್ಲಿ ವ್ಯಂಗ್ಯವನ್ನು ನಾನು ಗುರುತಿಸಿದೆ, ನಂತರ " ಮನುಷ್ಯ ಕೇವಲ ನೋಡುತ್ತಾನೆ ಅದಕ್ಕಾಗಿ ಸಮಸ್ಯೆ ಹೀಗೆಲ್ಲಾ, ಪ್ರಕೃತಿಯಿಂದ ದೂರವಾದಂತೆ ಮನುಷ್ಯನಿಗೆ ಕಾಡುವ ಅತಿ ದೊಡ್ಡ ರೋಗವೆಂದರೆ ಅವ್ಯಕ್ತ ಭಯ" ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.
*********
ಆರು ತಿಂಗಳುಗಳ ಕಾಲ ಜಿಟಿಜಿಟಿ ಮಳೆ, ಮೈ ಕೈಯೆಲ್ಲಾ ಕೆಸರಾಗಿಸಿಕೊಂಡು ದುಡಿದರೂ ವರ್ಷಪೂರ್ತಿ ಸಿಗದ ಅನ್ನ, ಮೈ ಪೂರ್ತಿ ಮುಚ್ಚದ ಬಟ್ಟೆ, ಎಂಬತಹ ದಿವಸಗಳು ಅಪ್ಪನ ಕಾಲದಲ್ಲಿಯೇ ಸಾಕು ಎಂದು ತೀರ್ಮಾನಿಸಿ ನಾನು ಊರು ಬಿಟ್ಟು ಬೆಂಗಳೂರು ಸೇರಿದೆ. ಸರಿಯಾದ ಚಪ್ಪಲಿಯೂ ಇಲ್ಲದ ಕಾಲಿನಲ್ಲಿ ಹಗಲು ದುಡಿಯುತ್ತಾ ಸಂಜೆ ಓದಿದೆ, ಆವಾಗ ಇದ್ದದ್ದು ಇದೇ ತರಹದ ಕಾಂಕ್ರೀಟ್ ಕಟ್ಟಡಗಳೇ, ಆದರೆ ಅವು ಕಾಡುತ್ತಿರಲಿಲ್ಲ, ನಾನು ಇಂಥಹ ಕಟ್ಟಡಗಳನ್ನು ಹರಿದ ಹವಾಯಿ ಚಪ್ಪಲಿಯಲ್ಲಿ ಸುಡುವ ಟಾರ್ ರಸ್ತೆಯಮೇಲೆ ನಿಂತು ನೋಡಿದ್ದರಿಂದ ಕಾಡುತ್ತಿರಲಿಲ್ಲವೇನೋ, ಆದರೆ ಹಠದ ಬೆನ್ನೇರಿದ ನಾನು ಏರುತ್ತಲೇ ಸಾಗಿದೆ, ಇಪ್ಪತ್ತೊಂದನೆಯ ಮಹಡಿಗೆ ದೇಹವನ್ನಷ್ಟೇ ಏರಿಸಲಿಲ್ಲ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಏರಿದೆ. ನನ್ನ ಪ್ರತಿಷ್ಠೆಯನ್ನ ಪ್ರಪಂಚಕ್ಕೆ ಸಾರಿದೆ. ಗುರಿ ಇದ್ದಾಗ ಕಾಡುತ್ತಿರಲಿಲ್ಲ, ಗುರಿತಲುಪಿ ಇಷ್ಟಾದಮೇಲೆ ಈಗ ಕಾಡುತ್ತಿದೆ ಉತ್ತರವಿಲ್ಲದ ಪ್ರಶ್ನೆ. ಅಂದು ಅವರುಹೇಳಿದ್ದ ಕಾಂಕ್ರೀಟ್ ಕಾಡಿನ ಭಾವಾರ್ಥ ನನಗೆ ಆಗಿರಲಿಲ್ಲ. ಆದರೆ ಇಂದು ನನ್ನನ್ನು ಕಾಡುತ್ತಿದೆ. ಅವೆಲ್ಲಾ ಶುರುವಾಗಿದ್ದು ಇತ್ತೀಚೆಗೆ.
"ಸರ್ ಯುವರ್ ಲಂಚ್ ಬಾಕ್ಸ್ ಈಸ್ ರೆಡಿ" ಅಟೆಂಡರ್ ವಿನೀತನಾಗಿ ಮೇಜಿನ ಮೇಲೆ ಮನೆಯಿಂದ ತಂದ ಊಟದ ಡಬ್ಬಿಯನ್ನಿಟ್ಟು ಹೊರಟುಹೋದನಂತರ ಕೆಲಸದ ಧಾವಂತಕ್ಕೊಂದು ಪುಟ್ಟ ವಿರಾಮ. ಮಧ್ಯಾಹ್ನ ಊಟದ ನಂತರ ಮಲೆನಾಡಿನ ಮನೆಗಳಲ್ಲಿ ಒಂದರ್ದ ಘಂಟೆ ವಿಶ್ರಾಂತಿಯ ವಾಡಿಕೆ. ಅದನ್ನು ನಾನೂ ಇಪ್ಪತ್ತು ವರ್ಷದ ಸುದೀರ್ಘ ದುಡಿಮೆಯನಂತರ ಮತ್ತೆ ನನ್ನದೇ ರೆಸ್ಟ್ ರೂಂನಲ್ಲಿ ಚಾಲ್ತಿಗೆ ತಂದೆ. ಅರ್ದಗಂಟೆಯ ಸಣ್ಣ ನಿದ್ರೆಯನಂತರ ಕಣ್ಣುಬಿಟ್ಟಾಗ, ಜಳಜಳ ಎನ್ನುವ ಬಿಸಿಲಿಗೆ ಸರಕ್ಕನೆ ಭಯದ ಭಾವನೆಗಳು ಅಡರತೊಡಗಿದವು. ನಿದ್ರೆಯ ಮುಗಿಸಿ ಕಣ್ಣುಬಿಡುತ್ತಿದ್ದಂತೆ ರಾಚಿದ ಕಿಟಿಕಿಯಾಚಿಗಿನ ಕಾಂಕ್ರಿಟ್ ಕಟ್ಟಡಗಳು, ಸರಪರ ಸರಿದಾಡುವ ಇರುವೆ ಸಾಲಿನ ವಾಹನಗಳು, ಕರುಳಿನ ಮೂಲೆಯಲ್ಲಿ ಭಯವನ್ನು ಬಿತ್ತತೊಡಗಿದವು.
ಇಂತಹ ದೊಡ್ಡ ಹುದ್ದೆಯಲ್ಲಿರುವಾತ, ವಿದೇಶಿ ಕಂಪನಿಗಳ ನೇತಾರರೊಡನೆ ನೇರ ಸಂಪರ್ಕದಲ್ಲಿರುವಾತ ಅರ್ಥವಿಲ್ಲದ ಸಣ್ಣ ಕಾರಣಕ್ಕೆ ನಿರ್ವಿಣ್ಣನಾಗುತ್ತಾನ? ನನ್ನ ಸಮಸ್ಯೆ ಆಲಿಸಿದವರು ಹಾಗಂತ ಅಂದುಕೊಂಡರೆ ನನ್ನ ಪ್ರತಿಷ್ಠೆಗೆ ಧಕ್ಕೆಯಲ್ಲವೆ ಎಂಬ ಕಾರಣ ನನ್ನ ಭಯವನ್ನು ಹೆಂಡತಿಗೂ ಸೇರಿದಂತೆ ಯಾರಲ್ಲಿಯೂ ಹೇಳಿಕೊಳ್ಳಲಿಲ್ಲ. ಸಮಸ್ಯೆ ಇಷ್ಟೇ, ಎಲ್ಲರೂ ನನ್ನಂತೆ ಹಠಕ್ಕೆ ಬಿದ್ದು ಉನ್ನತ ಹುದ್ದೆಗಳತ್ತ ದೃಷ್ಟಿನೆಟ್ಟರೆ?, ಕೆಸರು ತುಳಿದು ಭತ್ತ ಬೆಳೆಯದಿದ್ದರೆ?. ಕಷ್ಟಪಟ್ಟು ಬಟ್ಟೆ ನೆಯ್ಯದಿದ್ದರೆ?, ನಾವು ಊಟ ಮಾಡುವುದು, ಉಡುವುದು ಏನನ್ನು?. ಎಂಬ ಪ್ರಶ್ನೆ ಆಳದಿಂದ ಪ್ರತೀ ಮಧ್ಯಾಹ್ನದ ಊಟದ ನಂತರದ ಕೋಳಿನಿದ್ರೆಯ ಮರುಕ್ಷಣ ಧುತ್ತನೆ ಏಳುತ್ತದೆ. ಹೊಟ್ಟೆಯಲ್ಲಿ ಅದೇನೋ ತಳಮಳ, ಸಹಿಸಲಾರದ ವೇದನೆ. ಹೇಳಲಾರದ ನೋವು ಅನುಭವಕ್ಕೆ ಮಾತ್ರಾ ಸೀಮಿತ. ಇದೊಂದು ಯೋಚನೆಯೆದುರು ನನ್ನ ಅಂತಸ್ತುಗಳೆಲ್ಲ ಕರಗಿ ನೀರಾಗಿಹೋಗುತ್ತದೆ, ಭಯದ ನಂತರದ ಸಮಯ ನಿರ್ವಿಣ್ಣತೆ ಆವರಿಸಿಕೊಂಡುಬಿಡುತ್ತದೆ. ಅದಕ್ಕೊಂದು ಪರಿಹಾರ ಹುಡುಕುವುದು ಅನಿವಾರ್ಯ. ಇದು ಮಧ್ಯಾಹ್ನದ ನಿದ್ರೆಯಿಂದಾದ ಯೋಚನೆಗಳು ಎಂದರು ಯಾರೋ, ನಿದ್ರೆ ಮಾಡುವುದನ್ನು ಬಿಟ್ಟೆ, ಆದರೆ ಕರುಳಿನ ಮೂಲೆಯಲ್ಲಿ ಛಳಕ್ ಎಂದು ಮೂಡುತ್ತಿದ್ದ ಭಯ ನನ್ನನ್ನು ಬಿಡಲಿಲ್ಲ. ಮಾನಸಿಕ ಜನ್ಯ ಖಾಯಿಲೆ ಎಂದಿತು ಗೂಗಲ್, ಮಾನಸಿಕ ವೈದ್ಯರನ್ನು ಕದ್ದುಮುಚ್ಚಿ ಭೇಟಿಯಾದೆ, ಮಾತ್ರೆಗಳು ಖಾಲಿಯಾಯಿತು ಭಯ ಹಾಗೆಯೇ ಉಳಿಯಿತು. ಸಂಗೀತ, ನಾಟ್ಯ, ನಾಟಕಗಳು ಸಾಹಿತ್ಯ, ಸಾಹಿತಿಗಳು, ಬಿಸಿನೆಸ್ ದಿಗ್ಗಜರು ಎಲ್ಲರಗಿಂತ ಕೆಸರುಮೆಟ್ಟಿ ಅನ್ನ ನೀಡುವ, ಅರೆಬಟ್ಟೆ ಯಲ್ಲಿ ನೂಲುವ ಜನರೇ ಮಹಾತ್ಮರು ಅಂತ ಅನಿಸತೊಡಗಿತು.ದಿನದಿಂದ ದಿನಕ್ಕೆ ಪಟ್ಟಣದ ಜನ,ಸ್ನೇಹಿತರು, ಸರಿಕರು ಎಲ್ಲರೂ ಕಟ್ಟಡಗಳಂತೆ ಜಡವಾಗಿ ಕಾಣಿಸತೊಡಗಿದರು. ಯೋಚನೆಗೆ ಆಲೋಚನೆಯ ಸರಣಿಗಳು ಸಾಲಾಗಿ ಬೆನ್ನತ್ತಿ ಕಾಡತೊಡಗಿದವು. ಇದೇರೀತಿ ಎಲ್ಲ ಕಡೆ ಕಟ್ಟಡಗಳು ಏಳುತ್ತಾ ಹೋದರೆ ಅಕ್ಕಿ ಬೆಳೆಯಲು ಜಾಗವೆಲ್ಲಿ?. ಎಲ್ಲರೂ ಐಷರಾಮಿ ಬದುಕ ಆರಿಸಿಕೊಂಡರೆ ಕೆಸರ ತುಳಿಯುವರ್ಯಾರು? ಎಂಬಂತಹ ಯೋಚನೆ ತೀರಾ ಬಾಲಿಶದ್ದು ಅಂತ ಅನ್ನಿಸಿದರೂ ತಡೆಯದಾದೆ, ನಿತ್ಯ ಕಾಡುವ ಸಮಸ್ಯೆ ಯ ತೀವ್ರತೆ ತಾಳಲಾರದೆ ಹೊರಟೆ ಒಂದು ಮುಂಜಾನೆ.
***********
ಬೆಂಗಳೂರಿನ ಗಿಜಿಗಿಜಿ ಗೆ ವಿದಾಯ ಹೇಳಿದ ಕಾರು ಹೊನ್ನಾವರದತ್ತ ಶರವೇಗದಿಂದ ಓಡುತ್ತಿತ್ತು. ಎತ್ತರೆತ್ತರ ಕಟ್ಟಡಗಳು, ಕೆಟ್ಟ ಕೆಟ್ಟ ಮುಖಗಳು ಹಿಂದೋಡುತ್ತಿದ್ದವು. ಪಟ್ಟಣ ಹಿಂದೋಡಿದಂತೆ ಖಾಲಿಯಾಗಿರುವ ಡಾಂಬರ್ ರಸ್ತೆಗಳು ನನ್ನ ಕಾರಿನ ಬರುವಿಕೆಗಾಗಿಯೇ ಕಾಯುತ್ತಿದ್ದಂತೆ ಸ್ವಾಗತಿಸತೊಡಗಿದವು. "ನಮ್ಮ ಕಂಪನಿಯ ಪ್ರಾಜೆಕ್ಟ್ ಗೋವಾದಲ್ಲಿ ಶುರುವಾಗುತ್ತಿದೆ, ಹಾಗಾಗಿ ನಾನು ಹೋಗಬೇಕು" ಎಂದು ಹೆಂಡತಿಬಳಿ ಸುಳ್ಳು ಹೇಳಿ ಅದಕ್ಕೊಂದು ವಗ್ಗರಣೆಯಾಗಿ ನಂತರ ಹಾಗೆಯೇ ಊರಕಡೆ ಹೋಗದೆ ವರ್ಷಗಳೇ ಸಂದವು ಒಮ್ಮೆ ಹೋಗಿಬರುತ್ತೇನೆ ಎಂಬ ಮಾತನ್ನೂ ಸೇರಿಸಿದ್ದೆ, ಆದರೆ ನಾನು ಹೊರಟಿದ್ದು ಊರಿಗೂ ಅಲ್ಲ ಗೋವಾಕ್ಕೂ ಅಲ್ಲ , "ನಿಮ್ಮ ಈ ಅವ್ಯಕ್ತಭಯದ ಸಮಸ್ಯೆಗೆ ಯಾವುದೇ ವೈದ್ಯರಿಂದ ಶಮನ ಇಲ್ಲ, ಅದೇನಾದರೂ ನೀವು ಮನಸ್ಸು ಸರಿಪಡಿಸಿಕೊಳ್ಳಬೇಕೆಂದರೆ ಗೇರುಸೊಪ್ಪೆಯ ಆನಂದರಾಮಾಶಾಸ್ತ್ರಿಗಳು ಮಾತ್ರಾ ಸಮರ್ಪಕ ಪರಿಹಾರ ಒದಗಿಸಬಲ್ಲರು" ಎಂದು ಶಶಾಂಕ ಹೇಳುತ್ತಿದ್ದಂತೆ " ಅಯ್ಯೋ ದಯಮಾಡಿ ನನಗೆ ಆ ಪೂಜೆ ಪುನಸ್ಕಾರ ಅಂದ್ರೆ ದೂರ ಮಾರಾಯ" ಅಂದಿದ್ದೆ. ಅದಕ್ಕೆ ಆತ " ಅಯ್ಯೋ ಸಾರ್ ಶಾಸ್ತ್ರಿ ಅನ್ನೋದು ಅವರ ಹೆಸರು ಅನ್ನುವುದನ್ನು ಬಿಟ್ಟರೆ ಲವಲೇಶದ ಶಾಸ್ತ್ರವೂ ಅವರಲ್ಲಿಲ್ಲ, ಇದನ್ನು ನೋಡಿ ನಿಮಗೆ ಅಲ್ಪ ಪರಿಚಯ ಆಗಬಹುದು" ಎಂದು ಇಪ್ಪತ್ತು ಪುಟಗಳ ಮಾಸಲು ಪುಸ್ತಕವೊಂದನ್ನು ನನ್ನ ಕೈಗಿಟ್ಟು ಇದು ದಾರಿ ತೋರಿಸಬಹುದು ಎಂದಿದ್ದ. ಅದನ್ನು ಪುಸ್ತಕ ಎನ್ನುವುದಕ್ಕಿಂತಲೂ ಅಲ್ಲಲ್ಲಿ ಪುಟಗಳು ಕಿತ್ತುಹೋಗಿದ್ದ ಕಿರುಹೊತ್ತಿಗೆ ಅನ್ನಬಹುದಿತ್ತು. "ಬದುಕಿನ ರೀತಿ" ಎಂಬ ತಲೆಬರಹ ಹೊತ್ತ ಅದರಲ್ಲಿ ಹತ್ತೆಂಟು ಘಟನೆಗಳಮೂಲಕ ಬದುಕಿನ ಬಾಲ್ಯ,ಯೌವನ ಹಾಗೂ ಮುಪ್ಪಿನ ಬಗ್ಗೆ ವಿವರಿಸಲಾಗಿತ್ತು. ಅದರ ಲೇಖಕ ಆನಂದರಾಮ ಶಾಸ್ತ್ರಿ ಎಂಬ ಹೆಸರನ್ನು ಬಿಟ್ಟರೆ ಮತ್ಯಾವ ವಿವರಣೆ ಅದರಲ್ಲಿ ಇರಲಿಲ್ಲ. ಪುಟಗಳು ಇಪ್ಪತ್ತೇ ಆದರೂ ಅಕ್ಷರಗಳಲ್ಲಿ ಜೀವವಿತ್ತು ಜತೆಗೆ ಅದರಲ್ಲೊಂದು ಚೈತನ್ಯವಿತ್ತು, ಮತ್ತೆ ಮತ್ತೆ ಓದೋಣ ಅನ್ನಿಸುತ್ತಿತ್ತು, ಅದೇನೋ ಅನಿರ್ವಚನೀಯ ಆನಂದ ಪುಸ್ತಕದ ಓದುಗರಿಗೆ ಸಿಗುತ್ತಿತ್ತು. ಪುಸ್ತಕ ಓದಿ ಕುತೂಹಲಗೊಂಡು ಶಶಾಂಕನ ಮಾತಿಗೆ ಬೆಲೆಕೊಟ್ಟು ಬೆಳಗ್ಗೆ ಬೆಂಗಳೂರು ಬಿಟ್ಟಿದ್ದೆ. ಸಾಗರ ದಾಟಿದ ನಂತರ ಮಾವಿನಗುಂಡಿಯೆಂಬ ಊರು ಸಿಗುತ್ತದೆ ಆನಂತರ ಶರಾವತಿ ನದಿಯ ವ್ಯೂವ್ ಪಾಯಿಂಟ್ ನ ಕೊಂಚ ಮುಂದೆ ರಸ್ತೆಯ ಬಲಬದಿಯಲ್ಲಿ ಒಂದು ಕಮಾನು ಕಾಣಿಸುತ್ತದೆ. ಅಲ್ಲಿ ಕಾರು ನಿಲ್ಲಿಸಿ ಒಂದಿನ್ನೂರು ಹೆಜ್ಜೆ ನಡೆದರೆ ಮಲೆನಾಡಿನ ಶೈಲಿಯಲ್ಲಿ ಕಟ್ಟಲಾದ ಮನೆ ಇದೆ. ಅಲ್ಲಿ ಆನಂದರಾಮಾ ಶಾಸ್ತ್ರಿಗಳು ನಿಮಗೆ ಸಿಗುತ್ತಾರೆ, ಇಲ್ಲಿಂದ ಸರಿಯಾಗಿ ನಾಲ್ಕುನೂರು ಕಿಲೋಮೀಟರ್ ಅಂದರೆ ನಿಮ್ಮ ಕಾರಿನಲ್ಲಿ ಎಂಟು ತಾಸು ಪಯಣ, ರಸ್ತೆ ಹಾಳಾಗಿದ್ದರೆ ಹತ್ತು ತಾಸಾದರೂ ಆದೀತೆ, ಎಂದಿದ್ದ ಶಶಾಂಕ. ಅವನು ನನ್ನ ಕೆಳಗೆ ಕೆಲಸಮಾಡುವ ಹುಡುಗನಾದರೂ ನನಗೂ ಅವನಿಗೂ ಅದೇನೋ ಒಂಥರಾ ವೈಯಕ್ತಿಕ ಅನುಬಂಧ. ಶ್ರೀಮಂತ ಮನೆತನದಲ್ಲಿ ಹುಟ್ಟಿ, ಶ್ರೀಮಂತಿಕೆಯನ್ನು ಅನುಭವಿಸದೆ, ಹಣದ ಹೊಳೆ ಎಂದರೆ ಮಾನವೀಯತೆಯನ್ನು ಮರೆಸುತ್ತದೆ ಎಂಬ ತತ್ವಕ್ಕೆ ಇಳಿದು ಮನೆ ಅಂತಸ್ತು ಎಲ್ಲವನ್ನೂ ತೊರೆದು ಚೆನ್ನಾಗಿ ಬದುಕಲು ಕೊಂಚ ಹಣವೇ ಸಾಕು ಎಂದು ನೌಕರಿಗೆ ಇಳಿದಿದ್ದ ವ್ಯಕ್ತಿ. ನಾನು ಅವನಿಗೆ ಬುದ್ಧ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿದ್ದೆ. ಅವನು ಜೀವನ ಆಯ್ಕೆಮಾಡಿಕೊಂಡ ಬಗೆ ಬದುಕುವ ರೀತಿ ಹಾಗೂ ಅವನ ಆದರ್ಶಗಳೆಲ್ಲಾ ಭಾವನಾತ್ಮಕವಾಗಿ ಬದುಕುವವರ ಹುಚ್ಚು ಅಂತ ಆರಂಭದಲ್ಲಿ ಅನಿಸುತ್ತಿತ್ತು. ಆದರೆ ನನಗೆ ಅವ್ಯಕ್ತಭಯಗಳು ಕಾಡಲಾರಂಬಿಸಿದ ನಂತರ ಸಹಾಯಕ್ಕೆ ಸಿಕ್ಕ ವ್ಯಕ್ತಿಯೇ ಆತನಾಗಿದ್ದ.
ಬಿಸಿಲಿನ ಜಳ ರಸ್ತೆಗೆ ಬಡಿದು ನನ್ನ ಕಣ್ಣಿಗೆ ತಲುಪುತ್ತಿದ್ದ ಓಘಕಡಿಮೆಯಾಗುತ್ತಿದ್ದಂತೆ ಬಯಲುಸೀಮೆಯ ಪರಿಧಿ ದಾಟಿ ಮಲೆನಾಡು ಪ್ರವೇಶಿಸುತ್ತಿದ್ದ ಅನುಭವ ಆಯಿತು. ಕಾರಿನ ಏಸಿ ಆಫ್ ಮಾಡಿ ಕಿಟಕಿಗಾಜುಗಳನ್ನು ಇಳಿಸಿ ಕಾರಿನ ವೇಗ ತಗ್ಗಿಸಿದೆ. ಮರಗಳು ಈಗ ಸ್ವಲ್ಪ ನಿಧಾನಗತಿಯಲ್ಲಿ ಹಿಂದೋಡತೊಡಗಿದವು. ಮಲೆನಾಡಿನ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ ಅಪ್ಪ, ಅಮ್ಮ, ಬೆಳೆದ ಊರು, ನೆನಪಿಗೆ ಬಂದು ಅದೇನೋ ಹಿತವಾದ ಆನಂದವನ್ನು ನೀಡತೊಡಗಿದವು. ಆದರೆ ಈ ಆನಂದ ಕ್ಷಣಿಕ ನಾಳೆಯಿಂದ ಮತ್ತದೇ ಗಿಜಿಗಿಜಿ, ಹಸಿಬೆವರಿನ ವಾಸನೆಯ ಜನ, ಬಿಸಿದಗೆಯ ಗಾಳಿ ಎಂಬುದು ನೆನಪಾಗಿ ಅನುಭವಿಸುತ್ತಿದ್ದ ಸುಖಕ್ಕೊಂದು ಮುಸುಕು ಮುಚ್ಚಿತು. ತಕ್ಷಣ ಆನಂದರಾಮಾ ಶಾಸ್ತ್ರಿಗಳ ಪುಸ್ತಕದಲ್ಲಿಹ ಸಾಲೊಂದು ನೆನಪಾಯಿತು. "ಜೀವನದಲ್ಲಿ ಕಷ್ಟವನ್ನು ಅನುಭವಿಸಬಹುದು ಆದರೆ ಸುಖವನ್ನು ಅನುಭವಿಸುವುದು ಕಷ್ಟ, ಕಾರಣ ಕಷ್ಟಕಾಲದ ವರ್ತಮಾನದಲ್ಲಿ ಕಷ್ಟದಾಚೆಗಿನ ಸುಖದ ಕಲ್ಪನೆಯಲ್ಲಿ ಇರುತ್ತೇವೆ, ಸುಖದಕಾಲದಲ್ಲಿ ಅದರಾಚೆಗೆ ಬರಬಹುದಾದ ಕಷ್ಟಗಳನ್ನು ನೆನೆದುಕೊಂಡು ಕೊರಗುತ್ತೇವೆ. ನಿತ್ಯದ ಬದುಕು ಸುಖದಂತೆ ಜನರಿಗೆ ಅನ್ನಿಸಿದರೂ ನಮ್ಮ ಆಂತರ್ಯ ಸುಖದಾಚೆಗಿನ ಕಷ್ಟವನ್ನು ಕಲ್ಪಿಸಿಕೊಂಡು ವರ್ತಮಾನವನ್ನು ನರಕವನ್ನಾಗಿಸುತ್ತದೆ". ಎಂತಹ ಸತ್ಯದ ಮಾತದು, ತಂಪಿನ ಸುಖ ಅನುಭವಿಸುವುದ ಬಿಟ್ಟು ನಾನು ಬಿಸಿಲಿನ ಕಲ್ಪನೆಗೆ ಹೋಗಿದ್ದೆ. ಎಲ್ಲೆಂದೆಲ್ಲೋ ಯೋಚಿಸುತ್ತಾ ಹೋಗುತ್ತಿದ್ದ ನನಗೆ ದಾರಿಸವೆದದ್ದೇ ತಿಳಿಯದಂತೆ ಒಂಬತ್ತು ತಾಸು ಕಳೆದಿತ್ತು.
ಶಶಾಂಕ ಹೇಳಿದ ಮಾವಿನಗುಂಡಿ ಊರಿನ ಫಲಕ ಗೋಚರಿಸಿತು, ಆನಂದರಾಮಾ ಶಾಸ್ತ್ರಿಗಳ ಕಾಣುವ ತವಕ ತುಸು ಹೆಚ್ಚಿದಂತಾಗಿ ಕಾರಿನ ವೇಗ ಹೆಚ್ಚಿಸಿದೆ, ನೋಡನೋಡುತ್ತಿದ್ದಂತೆ ಶರಾವತಿಯ ಕಣಿವೆಯ ವಿಹಂಗಮ ನೋಟದ ಜಾಗ ಬಂದೇಬಿಟ್ಟಿತು. ಒಮ್ಮೆ ಅಲ್ಲಿ ಸ್ವಲ್ಪ ಹೊತ್ತು ದೃಷ್ಟಿ ಹಾಯಿಸುವ ಮನಸ್ಸಾದರೂ ಅದಕ್ಕಿಂತ ಹೆಚ್ಚಿನ ಆಸಕ್ತಿ ಶಾಸ್ತ್ರಿಗಳ ಭೇಟಿಯಾದ್ದರಿಂದ ಜತೆಗೆ ಸೂರ್ಯ ಮುಳುಗುವ ಹವಣಿಕೆಯಲ್ಲಿ ತೊಡಗಿದ್ದರಿಂದ ಕಾರನ್ನು ಮೊಂದೋಡಿಸಿದೆ. ರಸ್ತೆಯ ಬಲಬಾಗದಲ್ಲಿ ಬೃಹತ್ ಕಮಾನು ಗೋಚರಿಸಿತು. ಕಾರನ್ನು ಪಕ್ಕದಲ್ಲಿ ನಿಲ್ಲಿಸಿ ಕಮಾನಿನಡಿಯಲ್ಲಿ ಹೆಜ್ಜೆಹಾಕತೊಡಗಿದೆ. ಅದು ರಸ್ತೆಯೆನ್ನುವುದಕ್ಕಿಂತ ಕಲ್ಲಿನ ರಾಶಿ ಎನ್ನಬಹುದಿತ್ತು. ಅದರ ನಡುವೆ ದಾರಿಯನ್ನು ಹುಡುಕಿಕೊಳ್ಳುವುದು ಒಂದು ಜಾಣತನದ ಕೆಲಸವಾಗಿತ್ತು. ಆಗಲೆ ಕತ್ತಲಾವರಿಸಲು ಶುರುವಾದ್ದರಿಂದ ಬೇಗನೆ ಹೆಜ್ಜೆಹಾಕಿದೆ. ತುಸು ಮುಂದೆ ಸಾಗುತ್ತಿದ್ದಂತೆ ಮಂಗಳೂರು ಹಂಚಿನ ಮನೆ ಕಾಣಿಸಿತು, ಮನೆಯ ಬೇಲಿಯ ಪಕ್ಕದಲ್ಲಿ ಒಬ್ಬಾತ ಕುಡಗೋಲು ಹಿಡಿದುಕೊಂಡು ಅದೇನೋ ನೆಲದಲ್ಲಿ ಕೆದರುತ್ತಿದ್ದ, ಆತನ ಬಳಿ "ಆನಂದರಾಮ ಶಾಸ್ತ್ರಿಗಳ ಮನೆ ಇದೇಯೇನಪ್ಪಾ?" ಎಂದೆ. ಆತ ಮಾತನಾಡಲಿಲ್ಲ, ಆದರೆ ಹೌದೆಂದು ತಲೆ ಆಡಿಸಿ ಸಂಜ್ಞೆ ಮಾಡಿದ. "ಶಾಸ್ತ್ರಿಗಳು ಇದ್ದಾರ? " ಕೇಳಿದೆ. ಅದಕ್ಕೂ ಆತನ ಉತ್ತರ ಅಷ್ಟೆ.
ಎರಡು ಅಥವಾ ಹೆಚ್ಚೆಂದರೆ ಮೂರು ಜನರು ವಾಸಿಸಬಹುದಾದ ಪುಟ್ಟ ಮನೆ. ಹೊರಗಡೆ ವಿಶಾಲವಾದ ಚಪ್ಪರ ಹಾಕಿ ಬದಿಯಲ್ಲಿ ಮಂಚವೊಂದನ್ನು ಹಾಕಿದ್ದರು. ಮನೆಯ ಬಾಗಿಲು ಹಾಕಿದ್ದರಿಂದ ಮೇಲು ದನಿಯಲ್ಲಿ ಕೂಗಿದೆ. ಒಳಗಡೆಯಿಂದ ಯಾವ ಸದ್ದೂ ಬರಲಿಲ್ಲ. ಬೇಲಿಯಾಚೆ ಇದ್ದವನ ಬಳಿ ಮತ್ತೆ ವಿಚಾರಿಸೋಣ ಎಂದು ಆಚೆ ಬಂದೆ, ಅಲ್ಲಿ ಆತ ಕಾಣಿಸಲಿಲ್ಲ. ಸ್ವಲ್ಪ ಗಟ್ಟಿದನಿಯಲ್ಲಿ ಯಾರಾದರೂ ಇದ್ದೀರಾ ಅಂದೆ, ನನ್ನ ದನಿ ಮತ್ತೆ ನನಗೆ ಕೇಳಿಸಿತಷ್ಟೆ, ಮತ್ತೆ ಮನೆಯತ್ತ ವಾಪಾಸು ಬಂದು ಮಂಚದ ಮೆಲೆ ತುಸು ಹೊತ್ತು ಕುಳಿತು ಕಾಯೋಣ ಎಂದು ನಿರ್ಧರಿಸಿ ವಿರಮಿಸಿದೆ.
ಸುಖಕ್ಕೋ, ದು:ಖಕ್ಕೋ ಕೂಗುವ ಹಕ್ಕಿ ಪಕ್ಷಿ, ಕ್ರಿಮಿ ಕೀಟಗಳ ದನಿ, ಸೂರ್ಯನ ಬಿಸಿಯ ಮರೆಸಿದ ಹಾಲ್ಬೆಳದಿಂಗಳು, ಮನುಷ್ಯರ ಸುಳಿದಾಟವೇ ಇಲ್ಲದ ಜಾಗ, ದೂರದಲ್ಲೇಲ್ಲೋ ಊಳಿಡುತ್ತಿದ್ದ ಕಾಡು ಪ್ರಾಣಿ, ಅನತಿ ದೂರದಲ್ಲಿ ಹರಿಯುವ ನೀರಿನ ಜುಳುಜುಳು ನಿನಾದ, ಹೆಣ್ಣಿಗಾಗಿ ಸಿಳ್ಳೆ ಹೊಡೆಯುತ್ತಿರುವ ಗೋಪಿ ಹಕ್ಕಿಯ ರಾಗ, ಇವೆಲ್ಲದರ ನಡುವೆ ನಾನು, ಮೂವತ್ತು ವರ್ಷಗಳ ನಂತರ ರಾತ್ರಿಯ ನಿರವತೆಯ ಸುಖವನ್ನನುಭವಿಸಿದೆ. ಚಂದ್ರನ ಮರೆಮಾಚಲು ಮೋಡ ಯತ್ನಿಸಿದಾಗ ಪಳಕ್ಕನೆ ಮಿಂಚುವ ನಕ್ಷತ್ರ ಎಣಿಸಿದೆ, ಸರ್ರನೆ ಜಾರಿದ ಉಲ್ಕೆಯ ನೋಡಿದೆ, ಜೀರುಂಡೆಯ ಜಿರ್ ಜಿರ್ರ್ರ್, ಕಪ್ಪೆಯ ವಟರ್ರ್ ವಟರ್ರ್, ಗೂಬೆಯ ಗುಮ್, ಬಾವಲಿಯ ರಕ್ಕೆಯ ಪಟಪಟ, ಸದ್ದುಗಳನ್ನು ಹುಡುಕಿ ಗುರುತಿಸಿ ಆಲಿಸಿದೆ, ಚಂದ್ರನ ಸುತ್ತ ಕಟ್ಟಿದ ಮೋಡದ ಕೊಡೆಯ ದೂರ ಲೆಕ್ಕ ಹಾಕಿ ಮಳೆಯ ದಿವಸವನ್ನು ಗುಣಿಸಿ ಬಾಗಿಸಿದೆ. ಸೊಂಯ್ಯೋ ಎಂಬ ಗಾಳಿಯ ಸದ್ದಿಗೆ ಬೆರಗಾದೆ, ನನ್ನದೇ ಉಸಿರಿನ ಏರಿಳಿತದ ಸದ್ದನ್ನು ಆಲಿಸಿದೆ, ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಕೊರೆಯುವ ಗಾಳಿಯಲ್ಲಿ ಉಲ್ಲಾಸದ ಮನಸ್ಥಿತಿಯಲ್ಲಿ ಮಂಚದ ಮೇಲೆ ಮಲಗಿ ತೇಲಾಡಿದೆ.
"ನೀವೇನಾ ಬೆಂಗಳೂರಿನಿಂದ ಬಂದವರು ನನ್ನ ನೋಡಲು" ದೃಢವಾದ ದನಿ ನನ್ನನ್ನು ಪ್ರಕೃತಿಯ ಆಸ್ವಾದನೆಯಿಂದ ಆಚೆ ತಂದಿತು . "ಹೌದು" ನನ್ನ ಬಗೆಗೆ ಅವರಲ್ಲಿದ್ದ ಮಾಹಿತಿಗೆ ಅಚ್ಚರಿಯಿಂದ ಅವರತ್ತ ನೊಡುತ್ತಾ ಹೇಳಿದೆ. ಶುಭ್ರವಾದ ಶ್ವೇತವಸ್ತ್ರ, ಮುಖದಲ್ಲಿ ಅದೇನೋ ವಿಶಿಷ್ಠವಾದ ತೇಜಸ್ಸು, ಆಳವಾದ ಜ್ಞಾನದ ಪ್ರಭೆಯನ್ನು ಹೊರಸೂಸುತ್ತಿರುವ ಕಣ್ಣುಗಳು, ಹಾಗೆಯೇ ಅವರನ್ನು ಎವೆಯಿಕ್ಕದೆ ನೋಡುತ್ತಿದ್ದ ನನ್ನನ್ನು "ಹ್ಞೂ ..ಹೇಳಿ.." ಎಂಬ ಶಾಸ್ರಿಗಳ ಸ್ವರ ವಾಸ್ತವಕ್ಕೆ ತಂದಿತು. ಹಳ್ಳಿಯಲ್ಲಿ ಹುಟ್ಟಿದ್ದು, ಕಷ್ಟಪಟ್ಟು ಓದಿದ್ದು, ಬೆಳೆದು ನಿಂತದ್ದು ಈಗ ಕ್ಷುಲ್ಲಕ ಯೋಚನೆಗಳು ಜೀವನ, ಜೀವ ಎಲ್ಲವನ್ನೂ ಹಿಂಡುತ್ತಿದ್ದದ್ದನ್ನು ವಿವರಿಸಿ ಪರಿಹಾರದ ಉತ್ತರಕ್ಕಾಗಿ ಅವರತ್ತ ದೃಷ್ಟಿ ನೆಟ್ಟೆ.
ನಾನು ಒಂದಿಷ್ಟು ವಾಕ್ಯಗಳನ್ನು ಹೇಳಬಲ್ಲೆ ಅದರಲ್ಲಿ ನಿನ್ನ ಸಮಸ್ಯೆಗೆ ಪರಿಹಾರವಿದೆ, ಹುಡುಕುವ, ಕಂಡುಕೊಳ್ಳುವ ಯತ್ನ ನಿನ್ನಿಂದ ಆದಾಗ ಮಾತ್ರಾ ಪರಿಹಾರ ಸಾದ್ಯ. ನಾನು ದೇವರನ್ನೂ ತೋರಿಸಬಲ್ಲೆ ಆದರೆ ನೊಡುವ ಸಾಮರ್ಥ್ಯ ನಿನ್ನಲ್ಲಿ ಇರಬೇಕು , ಯಾವುದೂ ಶಾಶ್ವತವಲ್ಲ’ ಎಂಬ ಮಾತು ನೋವಿದ್ದಾಗ, ಕಷ್ಟವಿದ್ದಾಗ ಸುಖನೀಡುತ್ತದೆ, ಅದೇ ವಾಕ್ಯ ಸುಖದಲ್ಲಿದ್ದಾಗ ಕಳೆದುಹೋಗುವ ಸುಖವ ನೆನೆದು ಭಯ ತರಿಸುತ್ತದೆ. ಪದಪುಂಜಗಳು ಯಾವತ್ತೂ ತಟಸ್ಥ, ವ್ಯಕ್ತಿ ಅರ್ಥೈಸುವ ಕಾಲ ಅರ್ಥಮಾಡಿಕೊಳ್ಳುವ ವಿಧಾನ ಬೇರೆ. ಹಣ ಆರೋಗ್ಯ ಎರಡೂ ಮನುಷ್ಯನ ಅಭೂತಪೂರ್ವ ಆಸ್ತಿಗಳು, ಅವುಗಳ ಮಹತ್ವದ ಅರಿವು ಅವು ಇಲ್ಲದಿದ್ದಾಗ ಮಾತ್ರಾ. ಗುರಿ ತಲುಪಿದ ಮನುಷ್ಯನಿಗಿಂತ ಗುರಿ ತಲುಪದ ಮನುಷ್ಯನೇ ಸುಖಿ, ಒಂದು ಗುರಿ ತಲುಪಿದ ಮನುಷ್ಯ ಮರುಕ್ಷಣ ಮತ್ತೊಂದು ಗುರಿ ನಿಗದಿಪಡಿಸಿಕೊಳ್ಳದಿದ್ದರೆ ಹತಾಶ ಆವರಿಸಿಕೊಂಡು ಕ್ಷುಲ್ಲಕ ಯೋಚನೆಗಳು ಕಾಡುತ್ತವೆ, ಗುರುವಿನ ಆಯ್ಕೆ ಅಸಮರ್ಪಕವಾಗಿದ್ದಲ್ಲಿ ಭ್ರಮನಿರಸ ಕಟ್ಟಿಟ್ಟ ಬುತ್ತಿ, ಹಾಗಾಗಿ ನಮಗೆ ನಾವೆ ಗುರುವಾಗುವುದೊಳಿತು. ಕಡಿಮೆ ಯೋಚಿಸುವವ ಹೆಚ್ಚು ಸುಖಿ, ಸಾದಾರಣ ಮನುಷ್ಯ ಬೇರೆಯವರ ನೋಡುತ್ತಾ ಬದುಕುತ್ತಾನೆ ಹಾಗಾಗಿ ಕೊರಗು ಹೆಚ್ಚು. ಮನುಷ್ಯನ ಬಾಲ್ಯ ಬಹುಮುಖ್ಯ ಅಲ್ಲಿ ಸಮರ್ಪಕ ವಿಕಸನವಾಗದಿದ್ದರೆ ಜೀವನಪೂರ್ತಿ ಋಣಾತ್ಮಕತೆ ಕಾಡುತ್ತದೆ. ಯೋಚಿಸುವ ಜನರಿಗೆ ಸುಖದಲ್ಲಿ ತೇಲಾಡಲು ಇಷ್ಟು ಸಾಕು. ಇಂದು ನಾನು ಅಸಹಾಯಕನಾಗಿದ್ದೇನೆ, ನಿನಗೆ ಕನಿಷ್ಟ ಊಟವನ್ನೂ ನೀಡುವ ತಾಕತ್ತು ನನ್ನಲ್ಲಿಲ್ಲ, ಇಲ್ಲಿ ಇದೇ ಮಂಚದ ಮೇಲೆ ಮಲಗಿ ನಾಳೆ ಬೆಳಿಗ್ಗೆ ಊರಿಗೆ ಹೋಗು ಸುಖದ ಬದುಕು ನಿನ್ನದಾಗುತ್ತದೆ ಅದು ಅನಿವಾರ್ಯ ಕೂಡ. ಎಂದು ಹೇಳಿ ಒಳನಡೆದರು. ಆನಂದರಾಮಾ ಶಾಸ್ತ್ರಿಗಳ ವಾಕ್ಯಗಳನ್ನು ಇಂಚಿಚೂ ವಿಮರ್ಶೆಗೆ ಒಳಪಡಿಸಿದೆ, ನನ್ನ ಸಮಸ್ಯೆಗೆ ಕ್ಷುಲ್ಲಕ ಯೋಚನೆಗೆ ಸಮರ್ಥ ಪರಿಹಾರ ಸಿಕ್ಕಿತು. ಅಲ್ಲಿಯೇ ಮುಂದಿನ ಸುಖದ ಬದುಕಿಗೆ ಮತ್ತೊಂದು ಗುರಿನಿಗದಿಪಡಿಸಿಕೊಳ್ಳುತ್ತಾ ಮಂದ ಬೆಳಕಿನಲ್ಲಿ ಮಂಚದಮೇಲೆ ಆಳದ ನಿದ್ರೆಗೆ ಜಾರಿದೆ.
ಸಣ್ಣದಾಗಿ ಕೊರೆಯುವ ಚಳಿಯಿಂದ ಎಚ್ಚರವಾಗಿ ಕಣ್ಬಿಟ್ಟೆ, ಪ್ರಕೃತಿ ಉದಯರಾಗ ಹಾಡುತ್ತಿತ್ತು. ಸುತ್ತಲಿನ ಜೀವಿಗಳೆಲ್ಲಾ ತಾಳ,ಧ್ವನಿ,ರಾಗ,ಲಯ,ಗತಿ ಮುಂತಾದವುಗಳನ್ನೆಲ್ಲಾ ಸಮರ್ಪಕವಾಗಿ ಹಂಚಿಕೊಂಡಿದ್ದವು. ಅಯ್ಯೋ ನಾನು ಇಷ್ಟು ಸುಲಭದಲ್ಲಿ ರಾತ್ರಿ ಕಳೆದೆನಾ ಎಂದು ಆಶ್ಚರ್ಯವಾಯಿತು. ಆನಂದರಾಮಾ ಶಾಸ್ತ್ರಿಗಳ ಮಾತು ಮನಸ್ಸಿನಾಳದಲ್ಲಿ ನಾಟಿ ಅದೇನೋ ಉತ್ಸಾಹ ಜೀವದಲ್ಲಿ ತುಂಬಿತ್ತು. ವಾಪಾಸು ಹೊರಡಲನುವಾದೆ ರಾತ್ರಿ ಇಲ್ಲದ ಊಟ ಹೊಟ್ಟೆ ಚುರುಗುಟ್ಟುತ್ತಿತ್ತು. ಶಾಸ್ತ್ರಿಗಳಿಗೆ ವಿದಾಯ ಹೇಳಿ ಹೋಗೋಣ ಎಂದು ಮೇಲು ದನಿಯಲ್ಲಿ ಹಲವಾರು ಬಾರಿ ಕರೆದೆ ಉತ್ತರವಿಲ್ಲ, ಮತ್ತೇಕೆ ತೊಂದರೆ ನೀಡುವುದು ಎಂದು ತೀರ್ಮಾನಿಸಿ ಕಲ್ಲುದಾರಿಯತ್ತ ಹೆಜ್ಜೆ ನಿಧಾನ ಇಡುತ್ತಾ ಟಾರ್ ರಸ್ತೆಗೆ ಇಳಿದೆ.
"ಈ ಬೆಳಗಾ ಮುಂಚೆ ಎಲ್ಲೋಗಿದ್ರಿ ಸೋಮೀ.." ನಾನು ರಸ್ತೆಗೆ ಇಳಿಯುತ್ತಿದ್ದಂತೆ ಕಪ್ಪು ಕಂಬಳಿ ಹೊದ್ದು ನಾಲ್ಕೆಂಟು ದನಗಳನ್ನು ಹೊಡೆದುಕೊಂಡು ಹೊರಟವನೊಬ್ಬ ವಿಚಾರಿಸಿದ
"ಆನಂದರಾಮಾ ಶಾಸ್ತ್ರಿಗಳ ಮನೆಗೆ," ಎಂದು ಹೇಳಿ ಕಾರಿನತ್ತ ಸಾಗಿದೆ.
"ಬಾಳ ಒಳ್ಳೆರಾಗಿದ್ರು...ಪಾಪ..ನೀವು ದೂರದಿಂದ ನೋಡಕೆ ಬಂದಿದ್ರೇನೋ"
ಆತನ ಅನುಕಂಪದ ವಾಕ್ಯಗಳು ನನಗೆ ಸಂಶಯ ಮೂಡಿಸಿ, "ಒಳ್ಳೆರಾಗಿದ್ರು ಅಂದ್ರೆ...?" ಎಂದೆ.
"ಮತ್ತೇನು ಹೇಳದು ಸೋಮಿ, ಅವ್ರು ತೀರಿ ಇವತ್ತಿಗೆ ಒಂದೂವರೆ ತಿಂಗ್ಳು ಆತಲ, ಅವ್ರ ಮಗ ಹೋಗಿ ಹೋಗಿ ಮಾತು ಬರ್ದೀರೋ ಮೂಗನ್ನ ಮನೆ ಕಾಯೋದಕ್ಕೆ ಬಿಟ್ಟು ಪ್ಯಾಟೇ ಸೇರಿದಾರೆ...ಅವನೋ ಆ ಮನೇನ ಹೊತ್ಗೊಂಡು ಹೋದ್ರೋ ಮಾತಾಡಲ್ಲ, ಸಂಜೆವರಿಗೆ ಅಲ್ಲಿ ಇರ್ತಾನೆ ರಾತ್ರಿ........."
ನನಗೆ ಆತನ ಮುಂದಿನ ಮಾತುಗಳು ಸ್ಪಷ್ಟವಾಗಲಿಲ್ಲ, ಒಮ್ಮೆ ಅದೆಂತದೋ ವಿಚಿತ್ರ ಅನುಭವವಾಯಿತು, ರಾತ್ರಿಯ ಘಟನೆಗಳೆಲ್ಲಾ ಪುಂಖಾನುಪುಂಖವಾಗಿ ಕಣ್ಮುಂದೆ ತೇಲಿಬಂತು, ರಾತ್ರಿ ನಾನು ಕಂಡಿದ್ದು ಕನಸಾ..? ಪುಸ್ತಕದಲ್ಲಿ ಓದಿದ ಸಾಲುಗಳು ಅಂತರಾಳದಲ್ಲಿ ಹುದುಗಿ ಮಥನಗೊಂಡು ನನಗೇ ದಾರಿದೀಪವಾಯಿತಾ? ಅರ್ಥವಾಗಲಿಲ್ಲ. ಕೈಕಾಲುಗಳು ಗಡಗಡ ನಡುಗಲಾರಂಬಿಸಿದ್ದು ಕೇವಲ ಹಸಿವಿನ ಕಾರಣದಿಂದ ಮಾತ್ರಾ ಅಲ್ಲ ಎಂಬುದು ಅರಿವಾಗಿ ಕ್ಷಣ ಸಾವಾರಿಸಿಕೊಂಡು ಕಾರನ್ನು ಬೆಂಗಳೂರಿನತ್ತ ಓಡಿಸಲಾರಂಬಿಸಿದೆ. ಬೃಹತ್ ಗಾತ್ರದ ಮರಗಳು, ಆಕಾಶಕ್ಕೆ ಮುಟ್ಟಿದಂತಿರುವ ಗುಡ್ಡಗಳು ಸರಸರನೆ ವೇಗವಾಗಿ ಹಿಂದೆ ಸರಿಯತೊಡಗಿದವು,
************

Monday, February 7, 2011

ಆ ಕತೆಯನ್ನು ಹೇಳಲು ಚಪ್ಪಲಿ ಉದಾಹರಣೆ ನೀಡಬೇಕಾಯಿತು.


ಈಗ ಖುರ್ಚಿಯಮೇಲೆ ಕುಳಿತು ಈ ನನ್ನ ಕೊರೆತವನ್ನು ಓದುತ್ತಿರುವ ಮಹನೀಯರುಗಳಾದ ನೀವು ಒಂದು ಸಣ್ಣ ಪರೀಕ್ಷೆ ಮಾಡಬೇಕಿದೆ. ಅದೇನೂ ಅಂತಹ ಕಷ್ಟದ್ದಲ್ಲ. ಖುರ್ಚಿಯಿಂದ ಲಕಲಕ ಮಿರುಗುವ ಮೆತ್ತನೆಯ ಹಾಸಿನಮೇಲೆ ಊರಿದ್ದ ನಿಮ್ಮ ಒಂದು ಕಾಲನ್ನು ಎತ್ತಿ ಶೂ ಅಥವಾ ಚಪ್ಪಲಿ ಕಳಚಿ ಸಾಕ್ಸ್ ಬಿಚ್ಚಿ ಅಂಗಾಲನ್ನು ಒಮ್ಮೆ ಮುಟ್ಟಿ ನೋಡಿ. ವಾವ್ ಎಷ್ಟು ಬೆಳ್ಳ ಬೆಳ್ಳಗೆ ಕೆಂಪ ಕೆಂಪಗೆ ಎಷ್ಟೊಂದು ನುಣುಪಾಗಿ ಇದೆ ಅಲ್ವೇ?. ಕ್ಲೀನ್ ಅಂದ್ರೆ ಕ್ಲೀನ್, ಒಂಥರಾ ನಿಮ್ಮ ಕಾಲಿನ ಬಗ್ಗೆ ಅದು ಇರುವ ರೀತಿಯ ಬಗ್ಗೆ ಹೆಮ್ಮೆ ಮೂಡುತ್ತದೆ. "ಅಯ್ಯೋ ನೋಡು ನನ್ನ ಕಾಲು ಎಷ್ಟು ಸ್ಮೂತ್ ಆಗಿ ಇದೆ" ಎಂಬ ಡೈಲಾಗ್ ಬಿಗಿಯಬಹುದು. ಇರಲಿ ಬಿಡಿ ಆದರೆ ವಿಪರ್ಯಾಸವೆಂದರೆ ವಾಸ್ತವದ ಅಂಶವೆಂದರೆ ನುಣ್ಣಗೆ ಮೆತ್ತಗೆ ಸೂಪರ್ ಆಗಿರುವ ಅಂಗಾಲು ಇದೆಯಲ್ಲ ಪ್ರಕೃತಿ ಅದನ್ನು ಹಾಗಿರಲು ಕೊಟ್ಟಿದ್ದಲ್ಲ. ಕಲ್ಲಿರಲಿ ಮುಳ್ಳಿರಲಿ ಅದನ್ನು ಮೆಟ್ಟಿ ನಿಲ್ಲಲು ಅಂಗಾಲೆಂಬ ಆ ರಚನೆಯನ್ನು ಗಟ್ಟಿಯಾಗಿ ಮಾಡಿತ್ತು. ಅದು ಒರಟು ಇದ್ದಷ್ಟೂ ಹೆಮ್ಮೆಯ ಸಂಗತಿಯಾಗಿತ್ತು. ಆದರೆ ಚಪ್ಪಲಿ ಧರಿಸಿ ನಾವು(ಕೊನೆಗೆ ಅಡಿಗೆ ಮನೆಯಲ್ಲಿಯೂ) ಆ ಭಾಗವನ್ನು ರಕ್ಷಿಸ ಹೊರಟು ಪ್ರಕೃತಿ ಕೊಟ್ಟ ಅದ್ಬುತ ಚಪ್ಪಲಿಯನ್ನು ಮೆತ್ತಗೆ ಮಾಡಿ ಕಾಲಗಳೇ ಸಂದು ಹೋಗಿವೆ. ಚಪ್ಪಲಿಯಿಲ್ಲದೆ ಈಗ ನೀವು ರಸ್ತೆಯ ಮೇಲೆ ಹೊರಟರೆ "ಅಯ್ಯೋ ಅಮ್ಮಾ.." ಧ್ವನಿಯೇ ನಡಿಗೆಗಿಂತ ಜಾಸ್ತಿ ಹೊರಡುತ್ತದೆ. ಮುಂದೊಂದು ದಿನ ಮೇಗಾಲಿನಷ್ಟೇ ಮೆತ್ತಗಿನ ರಚನೆಯುಳ್ಳ ಅಂಗಾಲು ಹೊಂದಿರುವ ಪೀಳಿಗೆ ಹುಟ್ಟತೊಡಗಿದರೆ ಆಶ್ಚರ್ಯ ವಿಲ್ಲ. ಕಾರಣ ಬಳಸದ ಭಾಗವನ್ನು ಪ್ರಕೃತಿ ಕಸಿದುಕೊಳ್ಳುತ್ತದೆ. ಅಥವಾ ನಮ್ಮ ಮಿದುಳು ಮರೆತುಬಿಡುತ್ತದೆ. ನಾನು ಹೇಳಹೊರಟಿರುವುದೇ ಒಂದು ಈಗ ಕೊರೆದದ್ದೇ ಮತ್ತೊಂದು ಈಗ ವಿಷಯಕ್ಕೆ ಬರುತ್ತೇನೆ.
ನಮ್ಮ ಹೋಂ ಸ್ಟೇ ಪಕ್ಕದಲ್ಲಿ ಒಂದು ಜೇನುಪೆಟ್ಟಿಗೆ ಇಟ್ಟಿದ್ದೇನೆ. ಅಲ್ಲಿಗೆ ಬರುವವರು ಭಯಮಿಶ್ರಿತ ಕುತೂಹಲದಿಂದ ಅದರತ್ತ ಒಮ್ಮೆ ಸಾಗುತ್ತಾರೆ. ಸ್ವಲ್ಪ ಆಸಕ್ತಿ ಇರುವವರು ಮಾಹಿತಿ ಕೇಳುತ್ತಾರೆ. ಆಗ ನಾನು ನೆಲಬಿಟ್ಟುಬಿಡುತ್ತೇನೆ....!. ಸರಿ ಅದು ಹಾಗೆ ಇದು ಹೀಗೆ ಎಂಬ ಬೈರಿಗೆ ಶುರು, ಕೊನೆಯದಾಗಿ ಜೇನುತುಪ್ಪ ಟೇಸ್ಟ್ ನೋಡ್ತೀರಾ? ಎಂಬ ಪ್ರಶ್ನೆ ನನ್ನಿಂದ ಹೊರಡುತ್ತಿದ್ದಂತೆ ಅವರಿಗೂ ಒಂದು ಖುಷಿ ಮುಖ ಅರಳುತ್ತದೆ. ಮೊನ್ನೆ ಹೀಗೆ ಆಯಿತು. ತತ್ತಿ ತೆಗೆದು ತುಪ್ಪ ಬೇರ್ಪಡಿಸಿ ತಿನ್ನಲು ಕೊಟ್ಟೆ. ಅವರ ಮುಖ ಅದೇಕೋ ಅರಳಲಿಲ್ಲ, ಇದು ಜೇನು ತುಪ್ಪಾನಾ? ಎಂಬ ಪ್ರಶ್ನೆ ಕೇಳಿದರು. ನಾನು ಏನು ಹೇಳಲಿ?. ಆದರೂ ಯಾಕೆ ಚೆನ್ನಾಗಿಲ್ವಾ? ಎಂದು ಕೇಳಿದೆ. "ಇಲ್ಲ ಟೇಸ್ಟ್ ಸೂಪರ್ ಆಗಿದೆ, ಆದರೆ ನಾವು ಡಾಬರ್ ಹನಿ ಯೂಸ್ ಮಾಡ್ತೀವಿ ಅದರ ಟೇಸ್ಟ್ ಬೇರೆಯಪ್ಪಾ." ಎನ್ನುತ್ತಾ ರಾಗ ಎಳೆದರು. ಅಲ್ಲಿಗೆ ನನಗೆ ಮುಂದಿನ ದಿನಗಳಲ್ಲಿ ನಿಜವಾದ ಜೇನುತುಪ್ಪದ ಗತಿ ಅರಿವಾಯಿತು. , ಆ ಕತೆಯನ್ನು ನಿಮಗೆ ಹೇಳಲು ಚಪ್ಪಲಿ ಉದಾಹರಣೆ ನೀಡಬೇಕಾಯಿತು.
ಆಯ್ತಪ್ಪಾ ಆಯ್ತು ನಿನ್ನ ಪ್ರಕಾರ ಮುಂದೊಂದು ದಿನ ಡಾಬರ್ ನವರದ್ದು ಮಾತ್ರಾ ಹನಿ ಮಿಕ್ಕೆಲ್ಲವೂ ಡೂಪ್ಲಿಕೇಟ್ ಅಂತ ಆಗುತ್ತದೆ ಎಂಬುದು ನಿನ್ನ ಭಾವನೆ, ಆದರೆ ಹಾಗೆಲ್ಲಾ ಆಗುವುದಿಲ್ಲ ಅಂತ ನೀವು ಹೇಳಬಹುದು, ಆಗಲಿ ಬಿಡಲಿ ನನಗದು ವಿಷಯವಲ್ಲ ನಾನು ನಿಮಗೆ ನಿಜವಾಗಿಯೂ ಮಾಹಿತಿಕೊಡ ಹೊರಟಿದ್ದು ಇವೆರಡೂ ಅಲ್ಲ, "ಆಯ್ತು ಚೊರೆ ಮಾಡಬೇಡಾ, ಹೇಳು "ಎಂದಿರಾ, ವಾಕೆ ಅದನ್ನ ಕೇಳಿ
ಜೇನುತುಪ್ಪಕ್ಕೆ ಯಾವ ಬಣ್ಣ? ಅಂತ ಕೇಳಿದರೆ ಕೆಂಪು ಮಿಶ್ರಿತ ಹಳದಿ, ಅಲ್ಲಲ್ಲ ಜೇನುತುಪ್ಪದ್ದೇ ಬಣ್ಣ ಅಂತ ಇದೆಯಲ್ಲ ಅಂತಲೂ ಅನ್ನಬಹುದು. ಆದರೆ ಜೇನು ಸಾಕಾಣಿಕಾದಾರರು ಸ್ವಲ್ಪ ಹಠ ತೊಟ್ಟರೆ ಬೇರೆಬೇರೆ ಬಣ್ಣದ ಜೇನುತುಪ್ಪ ತೆಗೆಯಬಹುದು. ಈಗ ಈ ಬಾಟಲಿಯಲ್ಲಿ ನಿಮಗೆ ಕಾಣುತ್ತಿರುವ ಜೇನುತುಪ್ಪ ಪಕ್ಕಾ ಪಕ್ಕಾ ಅರಿಶಿನ ಬಣ್ಣದ್ದು. ಅಂಟವಾಳ ಎಂಬ ಗಿಡ ಹೂ ಬಿಟ್ಟಾಗ ಅದರ ಬಳಿಯಿದ್ದ ಜೇನುಕುಟುಂಬ ಸಂಗ್ರಹಿಸಿದ ತುಪ್ಪ ಇದು. ಭರ್ಜರಿ ದಪ್ಪದ ತುಪ್ಪ ತಿನ್ನಲು ಬಲು ರುಚಿ. ವರ್ಷಕ್ಕೆ ಹೆಚ್ಚೆಂದರೆ ಒಂದೆರಡು ಬಾಟಲಿ ಸಿಗಬಹುದು ದರ ಮಾತ್ರಾ ಸಿಕ್ಕಾಪಟ್ಟೆ ಕೆಜಿಗೆ ಮಿಕ್ಕತುಪ್ಪ ೨೫೦ ಆದರೆ ಇದು ಡಬಲ್. ಹೀಗೆ ಕಾಫಿ ಹೂ ಬಿಟ್ಟಾಗ ಅದರ ರುಚಿ ಬಣ್ಣ , ಸೀಗೆ ಹೂವಿನ ತುಪ್ಪವಾದರೆ ಕಡುಕೆಂಪು ಕಹಿ ರುಚಿ, ಮಾವಿನ ಹೂವು ಹೆರೆತರೆ ಸ್ವಲ್ಪ ಸಿಹಿ ಸ್ವಲ್ಪ ಹುಳಿ, ಹೀಗೆ ಮಕರಂದ ಪರಾಗ ಬದಲಾವಣೆಯಾದಾಗ ತುಪ್ಪದ ಬಣ್ಣ ರುಚಿಯೂ ಬದಲಾಗುತ್ತದೆ. ಡಾಬರ್ ನಂತೆ ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ ಒಂದೋ ಅದು ಕೇವಲ ಜೇನಿನ ತುಪ್ಪ ಅಲ್ಲ ಅಥವಾ ಅದು ಔಷಧೀಯ ಗುಣ ಹೊಂದಿಲ್ಲ ಎಂಬರ್ಥ . ಹಾಗಾಗಿ ಇನ್ನು ಮುಂದೆ ಜೇನು ತುಪ್ಪದ ಬಣ್ಣ ಯಾವುದು ಎಂದು ಯಾರಾದರೂ ಕೇಳಿದರೆ ಕೆಂಪು ಅರಿಶಿನ ಕಾಫಿ ಪುಡಿ ಕಲರ್ ಎಂದು ಪಟಪಟನೆ ಮೂರ್ನಾಲ್ಕು ಹೇಳಿಬಿಡಿ, ಅದೇ ಸರಿಯುತ್ತರ ಅದಕ್ಕೆ.

Wednesday, February 2, 2011

ಅವರುಗಳೆಂಬ ಅವರುಗಳು .....!

ಅಸಲಿಗೆ ಅವೆಲ್ಲಾ ಹಾಗೆ ಇದೆಯಾ..? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಬಹುದು, ಬಹುದೇನು?,ಕಾಡುತ್ತದೆ. ನಾಭಿಯಿಂದ ಯೋಚಿಸುವುದು, ಉಸಿರಾಟ ನಿಯಂತ್ರಿಸಿ ಸಾಧಿಸುವುದು, ಆಜ್ಞಾಚಕ್ರಗಳನ್ನು ಹುಡುಕುವುದು, ಬೆಳಗಾಮುಂಚೆ ಎದ್ದು ಗರಗರ ತಿರುಗಿ ಸ್ಪರ್ಶಥೆರಪಿ ಅನುಭವಿಸಿ ಮುಪ್ಪನ್ನು ಮುಂದೂಡುವುದು, ಧ್ಯಾನ ಸ್ಥಿತಿಯಲ್ಲಿ ಕುಳಿತು ಲೌಕಿಕ ಮರೆಯುವುದು, ರುದ್ರ ಹೇಳಿ ರೌದ್ರಾವತಾರ ತಾಳುವುದು, ಲಕ್ಷ್ಮೀ ಪೂಜೆ ಮಾಡಿ ಹಣಗಳಿಸುವುದು, ಅಮೆನ್ ಹೇಳಿ ಪಾಪ ಕಳೆದುಕೊಂಡು ಮತ್ತೆ ಪಾಪ ಮಾಡುವುದು, ಗೋಡೆಯತ್ತ ಕಣ್ಮುಚ್ಚಿಕುಳಿತು ಹೋಯ್ ಭಗವಂತಾ ಅನ್ನುವುದು ಹೀಗೆ ಎನೇನೋ....
ಇರಲಿ, ಅವರೆಂಬ ಅವರುಗಳು ಏನನ್ನಾದರೂ ಹೇಳಿಕೊಳ್ಳಲಿ, ನಾವು ನೀವು ಹೀಗೆ ಯೋಚಿಸೋಣ, ನ್ಯೂಟನ್ ಒಂದಿಷ್ಟು ನಿಯಮಗಳನ್ನು ಮಾಡಿದ, ಅದೇನೋ ಸೇಬುಹಣ್ಣ ಬೀಳುತ್ತಿದ್ದುದನ್ನು ಕಂಡು ಅವನಿಗೆ ನಿಯಮಗಳು ಮೂಡಿದುವಂತೆ, ಅದು ವಿಜ್ಞಾನದ ವಿಷಯ. ಹಾಗಂತ ಅವ ಆ ನಿಯಮ ಮಾಡಿರದಿದ್ದರೆ ಅವೆಲ್ಲಾ ನಡೆಯುತ್ತಿರಲಿಲ್ಲವೇ?. ನಡೆಯುತಿತ್ತು, ಇದ್ದ ವಿಷಯವನ್ನು ನಮಗೆ ಆತ ವಿಷದಪಡಿಸಿದ ತನ್ನದೇ ಆದ ವಿಧಾನಗಳ ಮೂಲಕ. ಇವುಗಳೂ ಹಾಗೆಯೇ. ಏನೇನೋ ಇದೆ ಅವುಗಳನ್ನು ಅವರವರ ವಿಧಾನಗಳಮೂಲಕ ಜನರು ವಿಷದಪಡಿಸುತ್ತಿದ್ದಾರೆ. ಹಾಗೆ ಹೇಳುತ್ತಾ ಹೇಳುತ್ತಾ ಕೇಳುಗರ ಕಿವಿಯಮೇಲೆ ಹೂವನ್ನಿಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ವರ್ತಮಾನದಲ್ಲಿ ಬದುಕುವ ಮನುಷ್ಯರ ಸಂಖ್ಯೆ ಬಹು ಕಡಿಮೆ, ಮದುವೆಯಾದ ಮೂರ್ನಾಲ್ಕು ವರ್ಷದಲ್ಲಿ ಮಕ್ಕಳಾಗದಿದ್ದರೆ ಹೆಣ್ಣೋ ಗಂಡೋ ಒಂದು ಮಗುವಾಗಲಿ ಎಂಬ ಚಿಂತೆ, ಮಗು ಹುಟ್ಟಿದರೆ ಅದು ಆರೋಗ್ಯವಾಗಿರಬೇಕು, ಆರೋಗ್ಯವಾಗಿದ್ದರೆ ಅದು ಎಲ್ಲಾ ಮಕ್ಕಳಿಗಿಂತ ಬುದ್ಧಿವಂತನಾಗಿರಬೇಕು, ಬುದ್ದಿವಂತನಾಗಿದ್ದರೆ ಅದು ಬೆಳೆದು ಲಕ್ಷಗಟ್ಟಲೆ ಸಂಬಳ ತರುವ ಉದ್ಯೋಗಿಯಾಗಬೇಕು, ಹಾಗಾದ ಮರುಕ್ಷಣ ಒಂದು ಸುಂದರ ಅನುರೂಪ ಹುಡುಗಿ(ಗ) ಸಿಗಬೇಕು, ಅದೂ ಆಯಿತು ಎಂದರೆ ಅವರುಗಳು ನಾವು ಹೇಳಿದಂತೆ ಕೇಳಬೇಕು, ಎಂಬ ಚಿಂತೆ ಹಲವರಿದ್ದು, ಇಲ್ಲಿ ಕರಕರ ಎಂದು ಕೊರಗಲು ನೂರಾರು ಐಟಮ್ ಬಾಯಿತೆರೆದುಕೊಂಡು ಕುಂತಿರುವುದರಿಂದ ಜೀವನಪೂರ್ತಿ ನೆಮ್ಮದಿ ಕೆಡಿಸಿಕೊಳ್ಳಲು ಅವಕಾಶ ಹೇರಳ. ಈ ಸಂದರ್ಭವನ್ನು ಅವರುಗಳೆಂಬ ಅವರುಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ,
ಈ ಪ್ರಕ್ರಿಯೆ ಲಾಗಾಯ್ತಿನಿಂದ ನಡೆದುಬಂದಿದೆ, ಮುಂದೂ ಹೀಗೆಯೇ, ಇಲ್ಲಿ ಎಲ್ಲವೂ ಇದೆ ಆದರೆ ಅನುಭವಿಸಲು ಸ್ವಲ್ಪ ಜಾಣ್ಮೆ ಬೇಕು ಅಷ್ಟೆ.
ವಿಸೂ: ಥೋ ಇದು ಏನಪ್ಪಾ ಅರ್ಥವೇ ಆಗುತ್ತಿಲ್ಲ ಎಂದು ಅನಿಸಿದರೆ ಅರ್ಥವಾಗುವವರೆಗೂ ಓದಿ, ಇಲ್ಲದಿದ್ದರೆ ಎಕ್ಸ್ ಮಾರ್ಕ್ ಕ್ಲಿಕ್ ಮಾಡಿ.

Tuesday, February 1, 2011

"ಓಂ" ಕಾರದಲ್ಲಿ ಎಲ್ಲಾ ಇದೆ.!

ಅಯ್ಯೋ ಅದು ಖಡಾಖಂಡಿತಾ ನಿಜ ಅಂತ ನಮಗೆ ಗೊತ್ತು ನೀನೇನು ಹೊಸತಾಗಿ ಹೇಳಬೇಕಾಗಿಲ್ಲ ಅಂತ ಅಂದಿರಾ..? ವಾಕೆ ಮುಂದುವರೆಸೋಣ. ಅವರೆಂಬ ಅವರು ಏನೆಂತಾರೆ ಎಂದರೆ, " ನೀವು ಎಲ್ಲಾ ಯೋಚನೆಗೂ ಮಿದುಳನ್ನು ಆಶ್ರಯಸುತ್ತೀರಿ, ಹಾಗಾಗಿ ಯೋಚನೆಯೆಂಬುದು ಯೆಗ್ಗಿಲ್ಲದೆ ನಿಮ್ಮನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಮಡೆಸ್ನಾನ ಮಾಡುವವರೂ ಹಾಗೂ ಕ್ರಿಕೆಟ್ ಹರಾಜಾಗುವವರು ತಲೆಕೆಡಿಸಿಕೊಳ್ಳದ್ದಕ್ಕೆ ನೀವು ಬರಪ್ಪೂರ್ ಕಿತ್ತಾಡಿ ಸುಸ್ತಾಗುತ್ತೀರಿ, ಸುಮ್ಮನೆ ಯೆಸ್ ಎಂದು ಮುಗುಮ್ಮಾಗಿ ಕುಳಿತುಕೊಂಡು ಮಜ ಅನುಭವಿಸಬಹುದಾಗಿದ್ದ ಸಮಯವನ್ನು ತಲೆಕೂದಲೆಲ್ಲಾ ನಿಮರುವಂತೆ ಮಂಡೆಬಿಸಿಮಾಡಿಕೊಂಡು ವ್ಯಗ್ರರಾಗುತ್ತೀರಿ, ಆದರೆ ಮಜ ಗೊತ್ತ ? ಹೀಗೆ ನಿಮ್ಮ ವರ್ತನೆಯಿಂದ ಪ್ರಪಂಚ ದಲ್ಲಿ ಗುಲಗುಂಜಿ ಬದಲಾವಣೆ ಆಗುವುದಿಲ್ಲ, ಅಕಸ್ಮಾತ್ ಆದರೂ ಅದು ನೀವು ಮಂಡೆಬಿಸಿಮಾಡಿಕೊಂಡಿದಕ್ಕಂತೂ ಆಗಿರುವುದಿಲ್ಲ. ಹೀಗೆಲ್ಲಾ ಆಗುವುದಕ್ಕೆ ನಿಮ್ಮ ಮೆದುಳಿನ ಹೆಚ್ಚು ಬಳಕೆಯೇ ಕಾರಣ," ಬಿಟ್ಟಾಕಿ ಅವೆಲ್ಲಾ, ಪ್ರೀತಿಯನ್ನು ಹೃದಯದಿಂದ, ಪ್ರಪಂಚವನ್ನು ನಾಭಿಯಿಂದ ನೋಡಿ ಕೇಳಿ ಅನುಭವಿಸಿ, ಆಗ ನೋಡಿ ಸ್ವರ್ಗದಲ್ಲಿ ತೇಲಾಡುತ್ತೀರಿ. ಆಗ ನಿಮ್ಮಲ್ಲಿ ಹುಟ್ಟುವ ಯೋಚನೆಗಳು ಮಿದುಳಿನಲ್ಲಿ ರೂಪ ಪಡೆದು ಸದ್ದು ಮೂಡುತ್ತಲ್ಲ ಅಲ್ಲಿ ಬದಲಾವಣೆ ಆಗಬಹುದು, ಇಲ್ಲ ಆಗಲೇ ಇಲ್ಲ ಎನ್ನಿ ಆಗದ ಚಿಂತೆ ನಿಮ್ಮನ್ನು ಕಾಡದು, ಅಷ್ಟಾದರೆ ಸಾಕಲ್ಲ ಇನ್ನೇಕೆ ತಡ. ಪ್ರೀತಿ ಮಾಡುವ ಮನಸ್ಸು ಇಲ್ಲದಿದ್ದರೆ ನಾಭಿಯತ್ತ ನಿಮ್ಮ ಗಮನವನ್ನು ಕೊಡಿ.
ಅದೆಲ್ಲಾ ಸರಿ ನಾಭಿಯತ್ತ ಗಮನ ಅಂದರೆ ಏನು? ಅಂತ ನಿಮ್ಮ ಪ್ರಶ್ನೆ ಅಂತ ತಾನೆ?. ಅದೇ ಓಂಕಾರ, ಸಿಕ್ಕಾಪಟ್ಟೆ ಭಯ ಆದಾಗ ಹೊಟ್ಟೆಯಲ್ಲಿ ಅದೇನೋ ತಳಮಳ ಅಂತೀವಿ ತಾನೆ?, ಅಲ್ಲಿಗೆ ಅಲ್ಲಿ ಏನೋ ಇದೆ ಅಂತಾಯ್ತು, ಹೌದು ಅಲ್ಲಿಂದಲೇ ಎಲ್ಲವಂತೆ, ನಾಭಿ ನಮ್ಮ ಮೂಲಕೇಂದ್ರವಂತೆ, ಅದರ ಬಗ್ಗೆ ದಿನಕ್ಕೊಮ್ಮೆ ಗಮನಹರಿಸಿದರೆ ನಮ್ಮ ಯೋಚನೆಯ ದಿಕ್ಕು ಬದಲಾಗಿ ಸ್ವಲ್ಪ ರಿಲೀಫ್ ಸಿಗುತ್ತಂತೆ, ಅದರತ್ತ ಗಮನ ಹರಿಸಲು ಅತ್ಯಂತ ಸುಲಭ ಈ ಓಂಕಾರವಂತೆ. ಹೀಗೆ ಅಂತೆಕಂತೆಗೆಳ ಸಂತೆಯನ್ನು ತೀರಾ ಒಂತರಾ ಹಳೇಬಾಟಲಿ ಹೊಸ ಮದ್ಯದ ತರಹದ ಆಲೋಚನೆಗೆ ಒಡ್ಡಬೇಡಿ, ನೀವು ಮಂಡೆಬಿಸಿಯಿಂದ ಬಳಲುವ ಜನ ಆಗಿದ್ದರೆ ಸುಮ್ಮನೆ ರವಿಶಂಕರ್ ಯೋಗ, ಮತ್ತೊಂದು ಧ್ಯಾನ ಮಗದೊಂದು ನಗುಥೆರಪಿ ಮಗಮಗದೊಂದು ಹೀಲಿಂಗ್ ಅಂತೆಲ್ಲಾ ಹಣ ಕಳೆದುಕೊಳ್ಳಬೇಡಿ, ಅವೆಲ್ಲಾ ನಿಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ನಿಮಗೆ ಅದೇನೋ ಕಲಿಸಿಕೊಟ್ಟಂತೆ ಅನಿಸಿಬಿಡುತ್ತಾರೆ, ಸುಮ್ಮನೆ ಬೆಳಗ್ಗೆ ಒಂದೈದು ನಿಮಿಷ ಓಂ...... ಎಂದು ದೀರ್ಘವಾಗಿ ಎಳೆದು ಎಳೆದು ಒಂದಿಪ್ಪತ್ತು ಬಾರಿ ಹೇಳಿ, ಮಜ ಬರುತ್ತೆ,ಆಗ ನಿಮ್ಮ ಯೋಚನೆ ನಾಭಿಯತ್ತ ಹೊರಳುತ್ತದೆ. ಹೌದು ಅದು ನಾಭಿಯಿಂದ ಹೊರಡಿಸಬಹುದಾದ ಸದ್ದು ಅದು. ಆನಂತರ ಪುಕ್ಕಟ್ಟೆ ನೆಮ್ಮದಿ ನಿಮ್ಮದಾಗುತ್ತದೆ. ಒಮ್ಮೆ ನಾಭಿಯತ್ತ ಗಮನ ಹರಿದು ಅದು ವಿಕಸನಗೊಂಡಮೇಲೆ ಓಂಕಾರ ತನ್ನಷ್ಟಕ್ಕೆ ಬದುಕು ಕಟ್ಟಿಕೊಡುತ್ತದೆ.
ಅಯ್ಯೋ ಸಾಕು ಬಿಡು ಇವೆಲ್ಲಾ ಚೊರೆ ಎಂದಿರಾ ಸರಿ ಹಾಗಾದರೆ ನಿಮಗೆ ಈಗಾಗಲೇ ಆ ವಿದ್ಯೆಗಳೆಲ್ಲಾ ಒಲಿದಿದೆ, ಅಥವಾ ಏನೂ ಒಲಿದಿಲ್ಲ. ಒಲಿದಿದ್ದರೆ ಸಂತೋಷ, ಒಲಿಯದಿದ್ದರೆ ಅಂತಹ ಅವಶ್ಯಕತೆಯಕಾಲ ಬಂದಾಗ ಇದನ್ನು ನಿಧಾನ ಕುಳಿತು ಓದಿ. ಹ್ಯಾಪಿ "ಓಂ"

Monday, January 31, 2011

ಅವರು ಹೀಗೆ ಮೈಲ್ ಮಾಡಿದ್ದಾರೆ

ಚೈತ್ರರಶ್ಮಿಯ ಸಂಪಾದಕರು ಹೀಗೆ ಮೈಲ್ ಮಾಡಿದ್ದಾರೆ. ಧನ್ಯವಾದಗಳು ಅವರಿಗು ನಿಮಗೂ....

ನಮಸ್ತೆ, ಕುಶಲವೆಂದು ಭಾವಿಸುವೆ. ನಮ್ಮ ಚೈತ್ರರಶ್ಮಿ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಭಾಗವಹಿಸಿದ ನಿಮಗೆ ನಮ್ಮ ವಂದನೆಗಳು. ನಿಮ್ಮ ಕಥೆ ನಮ್ಮ ಸ್ಪರ್ಧೆಯ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ,ಸ್ಪರ್ಧೆಯ ತೃತೀಯ ಬಹುಮಾನಕ್ಕೆ ಪಾತ್ರವಾಗಿ ನಾವು ಹೊರತರುತ್ತಿರುವ "ಕನ್ನಡಿ ಬಿಂಬದ ನೆರಳು" ಎಂಬ ಕಥಾಸಂಕಲನದಲ್ಲಿ ಪ್ರಕಟವಾಗುತ್ತಿದೆ. ಈ ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 13 , ಭಾನುವಾರ , ನಮ್ಮ ಚೈತ್ರರಶ್ಮಿ ಪತ್ರಿಕೆಯ 6 ನೇ ವಾರ್ಷಿಕ ಸಂಭ್ರಮದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಜೆ .ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ಸಂಜೆ 4 ಕ್ಕೆ ನಡೆಯಲಿದೆ. ಈ ಸಮಯ ನೀವು ನಮ್ಮೊಂದಿಗೆ ಉಪಸ್ಥಿತರಿದ್ದು ಕಥಾಸಂಕಲನದ ಬಿಡುಗಡೆಯ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತೀರಿ ಎಂದು ನಂಬುತ್ತೇನೆ.

ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಯ ಭಾವಯಾನಕ್ಕೆಆರರ ಸಂಭ್ರಮ. ಬದುಕಿನ ವಾಸ್ತವದಲ್ಲಿ ಕಳೆದುಹೋದ ಮನಸ್ಸಿನಲ್ಲಿ ಹೊಸ ಹುರುಪು ತುಂಬಿ ಚೈತನ್ಯದಾಯಕ ಬೆಳಕಿನೆಡೆಗೆ ಕರೆದೊಯ್ಯಬಲ್ಲ ಒಂದು 'A Ray of HOPE' 'ನಮ್ಮದಾಗಬೇಕು ಎಂಬುದು ಚೈತ್ರರಶ್ಮಿಯ ಆಶಯ. ಹಳ್ಳಿಮನೆಗಳಲ್ಲಿ ಪ್ರತಿಭೆಯಿದ್ದೂ ಅವಕಾಶಗಳಿಲ್ಲದೆ ಕಳೆದುಹೋದ, ಬರೆಯಲು ಹಿಂಜರಿದು ಬರೆಯೋದು ಮರೆತ, ಬದುಕಿನ ಜಂಜಡದಲ್ಲಿ ಸಾಹಿತ್ಯದ ಸೆಲೆಯಿಂದ ದೂರಾದ ಎಲ್ಲ ಎಲೆಮರೆಯಕಾಯಂತಹ ಕವಿಮನಸ್ಸುಗಳನ್ನು ಸೃಜನಶೀಲತೆಯ ಹುಡುಕಾಟದ ಭಾವಯಾನದಲ್ಲಿ ಕರೆದೊಯ್ಯಬೇಕೆಂಬುದು ಚೈತ್ರರಶ್ಮಿಯ ಕನಸು.ಜೊತೆಗೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು, ನಮ್ಮ ನಡುವಿನ ಆದರ್ಶಗಳನ್ನು, ಸಾಹಿತ್ಯ, ಸಂಸ್ಕೃತಿ ಪರಂಪರೆಗಳ ಉತ್ಕೃಷ್ಟ ವಿಚಾರಗಳನ್ನು, ದೇಶ, ಸಮಾಜದೆಡೆಗಿನ ಕಾಳಜಿಯನ್ನು ಎಲ್ಲರಿಗೂ ತಲುಪಿಸುವ ಪುಟ್ಟ ಪ್ರಯತ್ನವನ್ನೂ ಚೈತ್ರರಶ್ಮಿ ಮಾಡುತ್ತಿದೆ. ಚೈತ್ರರಶ್ಮಿಗೆ ಆರು ತುಂಬಿದ ಈ ಸಂಭ್ರಮದಲ್ಲಿ ಕಥಾಸಂಕಲನ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಥಾಸ್ಪರ್ಧೆಯ ಫಲಿತಾಂಶ, ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಿಗೆ ಅಟ್ಯಾಚ್ಮೆಂಟ್ ನೋಡಿ.
ನಮ್ಮ ಈ ಎಲ್ಲ ಸಂಭ್ರಮದ ಕ್ಷಣಗಳಲ್ಲಿ ನಮ್ಮೊಂದಿಗೆ ನೀವಿರುತ್ತೀರಿ ಎಂದು ನಂಬುತ್ತಾ, ನಿಮ್ಮ ನಿರೀಕ್ಷೆಯಲ್ಲಿ...
-
ರಾಮಚಂದ್ರ ಹೆಗಡೆ ಸಿ.ಎಸ್,
ಸಂಪಾದಕ ,
ಚೈತ್ರರಶ್ಮಿ, ಕನ್ನಡ ಮಾಸಿಕ
ದೂ: ೯೯೮೬೩೭೨೫೦೩

Sunday, January 30, 2011

ಹಸಿ ಹಸಿ ವೆನಿಲಾದ ಒಣ ಒಣ ನೆನಪು


ಕೆಲ ವರ್ಷಗಳ ಹಿಂದೆ "ವೆನಿಲಾ" ಮೂರಕ್ಷರದ ಪದ ಕೃಷಿಕರನ್ನು ರೋಮಾಂಚನ ಗೊಳಿಸುತ್ತಿತ್ತು. ಅಬ್ಬಾ ಅದರ ಒನಪು ವಯ್ಯಾರ ಗತ್ತು ಗಾಂಬೀರ್ಯ, ವರ್ಣಿಸಲಸದಳ. ಕೆಜಿಯೊಂದಕ್ಕೆ ಮೂರುವರೆ ಸಾವಿರ ಬೆಲೆ ಕಂಡಿದ್ದ ಕಾರಣ ಕೃಷಿಕ ಅದಕ್ಕೆ ಸಿಕ್ಕಾಪಟ್ಟೆ ಬೆಲೆ! ಕೊಡುತ್ತಿದ್ದ. ಬೆಳೆದವರ ಗತ್ತೇನು? ಅದು ಹೆಚ್ಚು ಹೂವು ಬಿಡಲು ಮಾಡುವ ಪ್ರಯತ್ನಗಳೇನು ? ಬಿಡಿ ಅದರ ಸುದ್ದಿ ಹೇಳುವುದೇ ಬೇಡ.
ನೋಡನೋಡುತ್ತಾ ಅವೆಲ್ಲಾ ದಂತ ಕತೆಗಳಾಗಿವೆ. ಈಗ ಮನೆಯ ಹತ್ತಿರ ಇರುವ ಬಳ್ಳಿಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಯಾರೂ. ಕಾಲಾಯ ತಸ್ಮೈ ನಮಃ