Thursday, August 14, 2008

ಭೃಂಗದ ಬೆನ್ನೇರಿ

ಆನಂದರಾಮ ಶಾಸ್ತ್ರಿ ಸೂರ್ಯನನ್ನು ಎಬ್ಬಿಸುತ್ತಾನೋ ಸೂರ್ಯ ಆನಂದರಾಮಶಾಸ್ತ್ರಿಯನ್ನೆಬ್ಬಿಸುತ್ತಾನೋ ಎನ್ನುವುದು ಇಲ್ಲಿಯವರೆಗೂ ಯಕ್ಷಪ್ರಶ್ನೆಯೇ. ಚುಮು ಚುಮು ಬೆಳಕು ಭೂಮಿಗೆ ಬೀಳುವುದಕ್ಕೆ ಮೊದಲು ಆನಂದರಾಮ ಶಾಸ್ತ್ರಿ ದೊಡ್ಡಗುಡ್ಡದ ನೆತ್ತಿಯಮೇಲೆ ನಿಂತು ಸೂರ್ಯಪಾನದಲ್ಲಿ ತೊಡಗುವ ಕಾರ್ಯ ಯಾವತ್ತಿಂದ ಪ್ರಾರಂಭವಾಯಿತು ಎಂದು ಸೂರ್ಯನಿಗೆ ಮತ್ತು ಆನಂದರಾಮ ಶಾಸ್ತ್ರಿಗೆ ಹೊರತಾಗಿ ಮತ್ಯಾರಿಗೂ ತಿಳಿದಿರಲಿಲ್ಲ. ಆರಂಭದ ಕೆಲವರ್ಷಗಳಲ್ಲಿ ಗೇರುಸೊಪ್ಪದ ಜನತೆ ಇದು ಮಾಮೂಲು ಅಂತ ಸುಮ್ಮನಿದ್ದರು. ಆದರೆ ಶಾಸ್ತ್ರಿ ಯಾರು ನೋಡಲಿ ಬಿಡಲಿ ತನ್ನಷ್ಟಕ್ಕೆ ತಾನು ಎದ್ದು ಬಿರಬಿರನೆ ನಡೆಯುತ್ತಾ ದೊಡ್ಡಗುಡ್ಡದ ನೆತ್ತಿಯಮೇಲೆ ತಲುಪಿ ಇಪ್ಪತ್ತು ನಿಮಿಷಗಳ ಕಾಲ ನಿಲ್ಲುವುದನ್ನು ನೋಡಿ ಕುತೂಹಲಕ್ಕೆ ಒಳಗಾದರು. ಶಾಸ್ತ್ರಿ ಜೇನು ಸಾಕುವುದು, ಕೊಳೆ ಔಷಧಿ ಹೊಡೆಯದೆ ಅಡಿಕೆ ಬೆಳೆಯುವುದು, ಪ್ರಕೃತಿ ಸಹಜವಾಗಿ ಭತ್ತ ಬೆಳೆಯುವುದು, ಎಪ್ಪತ್ತು ವರ್ಷದ ಕೇದಿಗೆಯನ್ನು ಕೊಳಸಿ ತನ್ನ ಉಡುಪಿಗಾಗುವಷ್ಟು ಚಂದದ ಬಟ್ಟೆ ತೆಗೆಯುವುದು ಮುಂತಾದ ಕೆಲಸಗಳು ಜನಸಾಮಾನ್ಯರಿಗೆ ಅಚ್ಚರಿಯ ವಿಷಯವಾಗಿರಲಿಲ್ಲ. ಆದರೆ ಆತ ದಿನಕ್ಕೆ ಒಂದೇ ಬಾರಿ ಊಟ ಮಾಡುವುದು ಮತ್ತು ಮೈಮುರಿಯುವಷ್ಟು ಕೆಲಸಮಾಡುವುದು ಮತ್ತು ಪುಷ್ಠಿಕರವಾದ ಮೈಮಾಟ ಹೊಂದಿರುವುದು ಬಿಡಿಸಲಾರದ ರಹಸ್ಯವಾಗಿತ್ತು. ಜನರು ಆತನ ಬಳಿ ಆಹಾರದ ರಹಸ್ಯ ಕೇಳಿದರೆ ಆತ ಮುಗಳ್ನಗುತ್ತಿದ್ದ. ಆದರೆ ಸೂರ್ಯಪಾನದ ಬಗ್ಗೆ ಕೇಳಿದರೆ ವಿವರಿಸುತ್ತಿದ್ದ.
ಜನರು ದೇಹದ ಅವಶ್ಯಕತೆಗಿಂತ ಶೇಕಡಾ ಎಂಬತ್ತು ಹೆಚ್ಚಿನ ಆಹಾರ ಸೇವಿಸುತ್ತಾರೆ. ಮತ್ತು ಇಲ್ಲದ ಖಾಯಿಲೆಗೆ ಪರೋಕ್ಷ ಆಹ್ವಾನ ನೀಡುತ್ತಾರೆ. ಶೇಕಡಾ ಇಪ್ಪತ್ತು ದೇಹಕ್ಕೆ ಉಳಿದ ಶೇಕಡಾ ಎಂಬತ್ತು ಆಹಾರ ವೈದ್ಯರಿಗೆ ಎನ್ನುವಂತಾಗುತ್ತದೆ. ಆದರೆ ನಾನು ಇಪ್ಪತ್ತು ಮಾತ್ರಾ ಸೇವಿಸುತ್ತೇನೆ ಮತ್ತು ಸೂರ್ಯಪಾನ ಮಾಡುತ್ತೇನೆ. ನೀವೂ ಮಾಡಬಹುದಾದ ಜಗತ್ತಿನ ಮನುಷ್ಯನ ಹೊರತಾದ ಪ್ರತೀ ಜೀವಿಯೂ ಮಾಡುತ್ತಿರುವ ಕೆಲಸ ಇದು. ಮನುಷ್ಯ ಯೋಚನಾಜೀವಿ ಆದರೆ ಅವನ ಮಿದುಳಿನಿಂದ ಯೋಚಿಸುವ ಪ್ರಕ್ರಿಯೆಯಿಂದ ದೇಹದ ವ್ಯವಸ್ಥೆ ತಲತಲಾಂತರದಿಂದ ಹಾನಿಗೊಳಗಾಗುತ್ತಾ ಬಂತು. ಅದನ್ನು ಸಂಪೂರ್ಣ ಸರಿಪಡಿಸಲು ಒಂದುತಲೆಮಾತಿನಿಂದ ಸಾಧ್ಯವಿಲ್ಲ. ಆದರೆ ವ್ಯಕ್ತಿ ಬದಲಾವಣೆ ಬಯಸಿದಲ್ಲಿ ತನ್ನ ಜೀವಿತಾವಧಿಯಲ್ಲಿ ತನ್ನಮಟ್ಟಿಗೆ ಸುಖವಾಗಿ ಕಳೆಯಬಹುದು. ಯಾರಾದರೂ ನಿಮ್ಮನ್ನು ಊಟ ಮಾಡಿದಿರಾ?,ತಿಂಡಿ ತಿಂದಿರಾ? ಎಂಬ ಪ್ರಶ್ನೆಗಳನ್ನು ಕೇಳಿದರೆ, ನೀವು ಹೋ ಆಯಿತು ಎನ್ನುತ್ತೀರಿ. ಒಮ್ಮೆ ಯೋಚಿಸಿ ನೀವು ಊಟ ಮಾಡಿದ್ದೀರಾ..? ದೈಹಿಕವಾಗಿ ಅದು ಸರಿಯಾದ ಉತ್ತರ. ಆದರೆ ಮಾನಸಿಕವಾಗಿ ಅಲ್ಲ. ನೀವು ಊಟಮಾಡುವಾಗ ನಿಮ್ಮ ಮನಸ್ಸು ಎಲ್ಲಿತ್ತು? ಎಂದು ಯೋಚಿಸಿ.ಆಗ ತಿಳಿಯುತ್ತದೆ ನೀವು ಮಾಡಿದ್ದು ಏನು? ಎಂದು. ಸ್ನಾನ ಮಾಡುವಾಗ ದೇಹ ಬಚ್ಚಲುಮನೆಯಲ್ಲಿತ್ತು ಸರಿ ಆದರೆ ನಿಮ್ಮ ಮನಸ್ಸು ಎಲ್ಲಿತ್ತು?. ಒಂದೋ ಭವಿಷ್ಯದ ಚಿಂತೆಯಲ್ಲಿ ಅಥವಾ ಭೂತಕಾಲದ ನೆನಪಲ್ಲಿ ಓಡಾಡುತ್ತಿತ್ತಲ್ಲವೇ?. ವರ್ತಮಾನದಲ್ಲಿ ನಿಮ್ಮ ಮನಸ್ಸು ಇರಲಿಲ್ಲ. ನೀವು ವರ್ತಮಾನದಲ್ಲಿ ಇರಲಾಗದೆ ಯಾವಕೆಲಸವನ್ನು ಮಾಡುತ್ತೀರೋ ಅದು ವ್ಯರ್ಥ. ಅದರ ಸಾರ್ಥಕತೆ ನಿಮಗೆ ದೊರಕಲಾರದು. ನಿತ್ಯ ವರ್ತಮಾನದಲ್ಲಿ ಇದ್ದು ಭೂತಕಾಲದ ಅನುಭವಗಳನ್ನು ಭವಿಷ್ಯಕ್ಕೆ ಬಳಸಿಕೊಂಡರೆ ಅದೇ ಸ್ವರ್ಗ. ಈ ಪ್ರಕ್ರಿಯೆ ಸುಲಭವಾಗಲು ಬೆಳಗಿನ ಸೂರ್ಯಪಾನ ಕ್ರಿಯೆ ಮಾರ್ಗದರ್ಶಕ.
ಆನಂದರಾಮ ಶಾಸ್ತ್ರಿಯ ಇಂತಹ ವಾಕ್ಯಗಳು ಕೆಲವರಿಗೆ ವೇದಾಂತದ ಕೊರತವಾಗಿಯೂ ಇನ್ನು ಕೆಲವರಿಗೆ ಕಬ್ಬಿಣದ ಕಡಲೆಯಾಗಿಯೂ ಮತ್ತು ಹಲವರಿಗೆ ಪೇಲವವಾಗಿಯೂ ಇನ್ನೂ ಹಲವರಿಗೆ ಹುಚ್ಚುತನವಾಗಿಯೂ ಅನ್ನಿಸುತ್ತಿತ್ತು. ಆದರೆ ನಿಜದ ಅರ್ಥ ತಿಳಿದುಕೊಂಡ ಸಾವಿರಕ್ಕೊಬ್ಬರಿಗೆ ಜೀವನದ ದಾರಿ ಸೋಪಾನವಾಗುತ್ತಿತ್ತು.

No comments: